Sunday, February 7, 2010

ಬದ್ನೇಕಾಯ್... ಬೇಕಾ? ಬಿ ಟಿ ಬದನೇಕಾಯಿ?


ಈಗ್ಯೆ ಒಂದೆರೆಡು ತಿಂಗಳ ಹಿಂದೆ ಮಂಡ್ಯದ ಕೃಷಿ ಉತ್ಪನ್ನ ಪ್ರದರ್ಶನ ಮೇಳಕ್ಕೆ ಹೋಗಿದ್ದೆ, ಮೇಳ ಎಲ್ಲ ಸುತ್ತಾಡಿ ಕಡೆಗೆ ಸಿಕ್ಕೇ ಬಿಡ್ತು ತರಕಾರಿ ಸ್ಟಾಲ್, ಅಲ್ಲಿನ ತಾಜಾ ತರಕಾರಿಗಳ ಮಧ್ಯದಲ್ಲಿ ಕಾಣ ಸಿಕ್ಕಿದ್ದು ದಪ್ಪ ಟೊಮ್ಯಾಟೋ ಗಾತ್ರದ ಫಳ ಫಳಿಸುತ್ತಿದ್ದ ಬದ್ನೇಕಾಯ್. ಇದೇನಪ್ಪ ಇದು ಎಂದು ಕೊಂಡು ಹೋದ್ರೆ ಇದು ಬಿ ಟಿ ತಳಿ ಅಂತ ಬೋರ್ಡು ಹಾಕಿದ್ರು. ಆಗಲೇ ಅಂದುಕೊಂಡೆ ಸರ್ಕಾರದೋರು ಬೀಜ ಕಂಪನೆಗಳ ಜೊತೆ ಸೇರ್ಕೊಂಡು ಏನೋ ಹುನ್ನಾರ ನಡೆಸ್ತಿದ್ದಾರೆ ಅದಕ್ಕೆ ಎಷ್ಟೆಲ್ಲ ಪ್ರಚಾರ ಅಂತ. ಕುಲಾಂತರಿ ತಳಿಗಳು ನಮ್ಮ ನೆಲಕ್ಕೆ ಪರಿಚಯವಾಗಿದ್ದು ನಿನ್ನೆ ಮೊನ್ನೆ ಏನಲ್ಲಾ ಕಳೆದ 3-4 ದಶಕದಿಂದಲೂ ಈ ಬಗ್ಗೆ ತೀವ್ರವಾಗಿ ಸಂಶೋಧನೆಗಳು ನಡೀತಾನೆ ಇದೆ. ಕಮರ್ಷಿಯಲ್ ಬೆಳೆ ಹತ್ತಿಗೆ ಮೊದಲ ಕುಲಾಂತರಿ ಬಂತು, ಈಗ ಮೊದಲ ಬಾರಿಗೆ ನಮ್ಮ ಸಾಂಪ್ರದಾಯಿಕ ತರಕಾರಿ ಆಹಾರದ ಮೇಲೆ ಕುಲಾಂತರಿ ಬೀಜದ ಪ್ರಹಾರವಾಗಿದೆ..! ಅಷ್ಟಕ್ಕೂ ಈ ಬದ್ನೇಕಾಯ್ ಬಗ್ಗೆ ಯಾಕೆ ತಲೆ ಕೆಡಿಸ್ಕೋಬೇಕು? ಪ್ರತಿಭಟನೆ,ರಂಪಾಟ ಯಾಕೆ ಮಾಡಬೇಕು? ಅದು ಬರೋದ್ರಿಂದ ತೊಂದ್ರೆ ಏನು? ಬರದಿದ್ರೆ ಏನು ಅನುಕೂಲ? ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿ ಕಾಡುವಂತಹವು? ಜಗತ್ತಿನಾಧ್ಯಂತ ಈ ಬಿ ಟಿ ತಳಿ ಬಗ್ಗೆ ಚರ್ಚೆ ಗಳು ಚಾಲ್ತಿಯಲ್ಲಿದ್ದರೂ ನಮ್ಮಲ್ಲಿ ಮಾತ್ರ ಸಾಮಾನ್ಯ ಜನರಿಗೆ ಈ ಕುಲಾಂತರಿ ತಳಿಗಳ ಬಗ್ಗೆ, ಅವುಗಳ ಸಾಧಕ-ಭಾಧಕಗಳ ಬಗ್ಗೆ ತಿಳಿ ಹೇಳುವ ಪ್ರಯತ್ನವಾದಂತಿಲ್ಲ ಹಾಗಾಗಿ ಈ ವಿಚಾರದ ತೀವ್ರತೆ ಒಂದು ವರ್ಗದ ಜನರಿಗಷ್ಟೇ ಸೀಮಿತವಾಗಿದೆ ಇದು ದುರಂತವೇ ಸರಿ.
ಕುಲಾಂತರಿ ತಳಿಗಳನ್ನು ಒಪ್ಪಿಕೊಳ್ಳುವುದು ಎಂದರೆ ನಮ್ಮ ಸ್ವಾಭಿಮಾನವನ್ನು ಬೇರೆಯವರಿಗೆ ಅಡವಿಟ್ಟಂತೆ ಆಗುತ್ತೆ.ನಮ್ಮ ದೇಶದ ಪ್ರಮುಖ ಆರ್ಥಿಕ ಶಕ್ತಿ ಎಂದರೆ ಕೃಷಿ. ರೈತರ ದುಡಿಮೆ ದೇಶವನ್ನು ಸುಸ್ಥಿತಿಯಲ್ಲಿರಿಸಿದೆ, ನಿಮಗೆ ತಿಳೀದಿರಲಾರದು ಈಗ್ಯೆ ಕೆಲ ತಿಂಗಳುಗಳ ಹಿಂದೆ ಜಾಗತಿಕ ಆರ್ಥಿಕ ಕುಸಿತದಿಂದ ಜಗತ್ತಿನ ಅನೇಕ ಪ್ರಮುಖ ರಾಷ್ಟ್ವಗಳು ತತ್ತರಿಸಿ ಚೇತರಿಸಿಕೊಳ್ಳಲು ಪರದಾಡಿ ಹೋದವು. ಆದರೆ ಭಾರತ ದಂತಹ ಕೃಷಿ ಪ್ರದಾನ ದೇಶದಲ್ಲಿ ಮಾತ್ರ ಜಾಗತಿಕ ಕುಸಿತ ಯಾವ ಪರಿಣಾಮವನ್ನು ಬೀರಲಿಲ್ಲ, ಅದಕ್ಕೆ ಕಾರಣ ಕೃಷಿ. ಇಂತಹ ಕೃಷಿ ಕ್ಷೇತ್ರಕ್ಕೆ ಸರ್ಕಾರ ಪ್ರೋತ್ಸಾಹ ನೀಡುವ ಬದಲಿಗೆ ಜಾಗತಿಕ ಆರ್ಥಿಕ ಉದಾರೀಕರಣದ ನೆಪದಲ್ಲಿ ಕೃಷಿ ಭೂಮಿಯನ್ನು ವಿಶೇಷ ಆರ್ಥಿಕ ವಲಯಗಳಿಗೆ ಉದಾರವಾಗಿ ನೀಡುವ ಮೂಲಕ ರೈತನ ಕತ್ತನ್ನು ಹಿಸುಕಿ ಹಾಕಿದೆ, ಇನ್ನೂ ಕೂಡ ರೈತರನ್ನು ಬಲಿಕೊಡುವ ಪ್ರಕ್ರಿಯೆಗಳು ಜಾರಿಯಲ್ಲಿವೆ. ಅಂತಹ ಕ್ರಿಯೆಗಳಲ್ಲಿ ಈ ಬಿ ಟಿ ಬದನೆಯೂ ಒಂದು. ಇವತ್ತು ಏನಿಲ್ಲವೆಂದರೂ ಒಂದು ಕೇಜಿ ಬದ್ನೇಕಾಯಿಗೆ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಎಂದರೆ ರೂ. 5 ಜಾಸ್ತಿ ಅಂದರೆ ರೂ.10ರವರೆಗೆ ಬೆಲೆ ಇದೆ.ಹೀಗಿರುವಾಗ ಬದನೇಕಾಯಿಯನ್ನೆ ಯಾಕೆ ಮೊದಲ ಕುಲಾಂತರಿಗೆ ಆಯ್ಕೆ ಮಾಡಿಕೊಂಡರು ಎಂಬುದನ್ನು ಅರ್ಥ ಮಾಡಿಕೊಂಡರೆ ನಿಮಗೆ ಬಿಸಿ ಗೊತ್ತಾಗಬಹುದು. ಇವತ್ತು ನಮ್ಮ ರಾಜ್ಯದ 15ಸಾವಿರ ಹೆಕ್ಟೇರುಗಳಲ್ಲಿ 6.5ಕೋಟಿ ಟನ್ ಬದನೆ ಬೆಳೆಯಲಾಗುತ್ತಿದೆ. ಅತೀ ಹೆಚ್ಚು ಮಂದಿ ದಿನ ನಿತ್ಯದ ಊಟದಲ್ಲಿ ಬದನೆ ಬಳಸುತ್ತಾರೆ. ನಮ್ಮಲ್ಲಿ ಏನಿಲ್ಲವೆಂದರೂ 40 ರಿಂದ 50 ವಿವಿಧ ಮಾದರಿಯ ಬದನೆ ಬೆಳೆಯಲಾಗುತ್ತಿದೆ. ಜಗತ್ತಿನಾಧ್ಯಂತ 200ಕ್ಕೂ ಹೆಚ್ಚು ಮಾದರಿಯ ದೇಸಿ ತಳಿ ಬದನೆಗಳಿವೆ ಹೀಗಿರುವಾಗ ಬದನೆಕಾಯಿಯನ್ನು ಕುಲಾಂತರಿ ಮಾಡುವ ಅಗತ್ಯವಿತ್ತೇ ? ಒಂದು ವೇಳೆ ಕುಲಾಂತರಿ ಮಾಡುವುದಿದ್ದರೆ ಆಲೂಗಡ್ಡೆ, ಈರುಳ್ಳಿ, ಶೇಂಗಾ ಇಂತಹ ವಾಣಿಜ್ಯ ಬೆಳೆಗಳನ್ನು ಯಾಕೆ ಮೊದಲು ಕುಲಾಂತರಿ ಮಾಡಲಿಲ್ಲ? ಎಂಬ ಪ್ರಶ್ನೆಗೆ ಉತ್ತರ ಒಂದೇ ಅವು ಸೀಮಿತ ಪ್ರದೇಶದ ಬೆಳೆಗಳಾಗಿದ್ದರೆ ಬದನೆ ಹಾಗೂ ಇದೇ ರೀತಿಯ ತರಕಾರಿಗಳು ಮತ್ತು ಅಕ್ಕಿ ಮುಕ್ತವಾಗಿ ಎಲ್ಲೆಡೆಯೂ ಬೆಳೆಯುವಂತಹದ್ದು. ಅವುಗಳಿಗೆ ಸದಾ ಕಾಲ ಎಲ್ಲಡೆಯೂ ಮಾರುಕಟ್ಟೆ ಇದ್ದೇ ಇರುತ್ತದೆ. ಹಾಗಾಗಿ ಆಹಾರ ಬೆಳೆಗಳಲ್ಲಿ ಸುಲಭವಾಗಿ ಬೆಳೆಯುವ ಮತ್ತು ಸುಲಭವಾಗಿ ಸಿಗುವ ಬದನೆಕಾಯಿಯನ್ನೇ ಆರಿಸಿಕೊಳ್ಳಲಾಗಿದೆ. ಬಿ ಟಿ ಅಂದರೆ ಬ್ಯಾಸಿಲಸ್ ಥುರನ್ಜೆಸಿಸ್ ಎಂಬ ಬ್ಯಾಕ್ಟೀರಿಯಾ. ಇದು ಬೆಳೆಗೆ ತಗುಲುವ ಹಾಗೂ ಕಾಂಡ ಕೊರಕ ಕೀಟಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗೆ ವಿಷವನ್ನು ಉತ್ಪಾದಿಸುವ ಬ್ಯಾಕ್ಟೀರಿಯಾವನ್ನು ಹೊಂದಿದ ಬಿ ಟಿ ಬದನೇಕಾಯಿ ತಳಿ ಮಾನವನ ದೇಹದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಬಿ ಟಿ ಬದನೇ ಕಾಯಿ ತಳಿ ಬಗ್ಗೆ ಶೇ.50ರಷ್ಟು ಪ್ರಯೋಗವನ್ನು ಸಣ್ಣಪುಟ್ಟ ಜೀವಿಗಳ ಮೇಲೆ ಮಾಡಲಾಗಿದೆಯಾದರೂ ಮಾನವನ ದೈಹಿಕ ರಚನೆಗೆ ಪೂರಕವಾಗಿ ವರ್ತಿಸುವ ಯಾವ ಸಂಶೋಧನೆಗಳು ನಡೆದಿಲ್ಲ. ಅಂದರೆ ಪ್ರಾಯೋಗಿಕವಾಗಿ ಕುಲಾಂತರಿ ಬದನೆಯನ್ನು ಮಾನವರ ಮೇಲೆ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅವರ ಮೇಲೇ ಆಗುವ ವ್ಯತಿರಿಕ್ತ ಅಂಶಗಳನ್ನು ಪತ್ತೆ ಹಚ್ಚುವ ವೇಳೆಗೆ ಇವು ಬಿ ಟಿ ಬದನೆ ಎಲ್ಲೆಡೆ ವ್ಯಾಪಿಸಿದ್ದರೆ ಅದರ ಪ್ರತಿಕೂಲ ಪರಿಣಾಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೀಗಿರುವಾಗ ಬಿಟಿ ಬದನೆ ಬೇಕೆ?
ಇಲ್ಲಿ ಕುಲಾಂತರಿ ಬದನೇಕಾಯಿಯದೊಂದೆ ಪ್ರಶ್ನೆಯಲ್ಲ, ಅದರ ಬೆನ್ನಲ್ಲೇ 20ಕ್ಕೂ ಹೆಚ್ಚು ಕುಲಾಂತರಿ ತಳಿಗಳು ಬರಲು ಸಜ್ಜಾಗಿ ಕುಳಿತಿವೆ.
ಅವುಗಳ ಪೈಕಿ ಗೋಲ್ಡನ್ ರೈಸ್, ಬೂಸ್ಟು ಹಿಡಿಯದ ಅಕ್ಕಿ, ತೊಗರಿ, ಹೂಕೋಸು, ಕ್ಯಾರೆಟ್, ಪರಂಗಿ, ಟೋಮೇಟೋ, ಮೆಕ್ಕೇಜೋಳ, ಮೂಲಂಗಿ, ಎಲೆಕೋಸು, ಮೆಣಸಿನಕಾಯಿ, ನೆಲಗಡಲೆ, ಈರುಳ್ಳಿ, ಕಾಫಿ, ನಿಂಬೆ ಅರಿಶಿಣ, ಯೀಸ್ಟ್ ಇತ್ಯಾದಿಗಳು ಪ್ರಮುಖವಾಗಿವೆ. ಒಮ್ಮೆ ನಮ್ಮ ಆಹಾರದ ವಿಚಾರದಲ್ಲಿ ಈ ಕುಲಾಂತರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟವೆಂದರೆ ನಮ್ಮ ಸಾವಿನ ಮನೆಗೆ ನಾವೆ ರಹದಾರಿ ಒದಗಿಸಿದಂತಾಗುತ್ತದೆ. ಕುಲಾಂತರಿ ತಳಿಗಳ ಪರವಾಗಿ ಮಾತನಾಡುತ್ತಿರುವ ಕೆಲವು ಮೂರ್ಖರು ಮಂಡಿಸುತ್ತಿರುವ ವಾದ ಪ್ರಕಾರ ಈಗಾಗಲೇ ನಾವು ಬೆಳೆಯುತ್ತಿರುವ ವಾಣಿಜ್ಯ ಬೆಳೆಗಳಿಗೆ ಬೇಕಾಬಿಟ್ಟಿಯಾಗಿ ಕ್ರಿಮಿನಾಶಕ ಬಳಸುತ್ತಿಲ್ಲವೆ? ಉತ್ತಮ ಇಳುವರಿ ಬರುತ್ತದೆಂದರೆ ಯಾಕೆ ಕುಲಾಂತರಿ ತಳಿ ಒಪ್ಪಿಕೊಳ್ಳಬಾರದು? ಹಿಂದೆ ಮೊಬೈಲು, ಇತ್ಯಾದಿ ತಂತ್ರಜ್ಞಾನ ಬಂದಾಗಲೂ ವಿರೋಧಿಸಿದ್ದವರೆಲ್ಲಾ ಈಗೇಕೆ ಅವನ್ನೆ ಬಳಸುತ್ತಿದ್ದಾರೆ? ಎನ್ನುತ್ತಾರೆ. ಆ ಮೂರ್ಖರು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು,ವಿರೋಧಿಗಳು ಆಧುನೀಕರಣವನ್ನು ವಿರೋಧಿಸುವುದಿಲ್ಲ, ಆದರೆ ಆಧುನೀಕರಣದ ಬಿರುಗಾಳಿಯಲ್ಲಿ ಸಿಲುಕಿ ತಮ್ಮತನವನ್ನು ಕಳೆದು ಕೊಳ್ಳುವುದನ್ನು, ಬದುಕಿಗೆ ಅಪಾಯವನ್ನು ಅಹ್ವಾನಿಸಿಕೊಳ್ಳುವುದನ್ನು ಮಾತ್ರ ವಿರೋಧಿಸುತ್ತಾರೆ. ತರ್ಕ ಹೀನ ಶಕ್ತಿ ಕಳೆದು ಕೊಂಡವರು ಎಂದರೆ ಸ್ವಂತಿಕೆಯ ನಾಶ, ಸ್ವಾವಲಂಬನೆಯ ಬಲಿಕೊಟ್ಟವರು ಎಂದೇ ಅರ್ಥೈಸಬೇಕಾಗುತ್ತದೆ. ಇವತ್ತು ಜಗತ್ತಿನ 80ಕ್ಕೂ ಹೆಚ್ಚುರಾಷ್ಟ್ರಗಳು ಕುಲಾಂತರಿ ಆಹಾರ ತಳಿಗಳನ್ನು ವಿರೊಧಿಸಿವೆ, ದೇಶದ 10ಕ್ಕೂ ಹೆಚ್ಚು ರಾಜ್ಯಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರವು ತನ್ನ ನಿಲುವನ್ನು ಕುಲಾಂತರಿ ವಿರುದ್ದವಾಗಿ ವ್ಯಕ್ತಪಡಿಸಿದೆ.ಬಿ ಟಿ ತಳಿ ಹತ್ತಿ ಬಂದಾಗ ಬಂಪರ್ ಇಳುವರಿ ಏನೋ ಬಂತು ಆದರೆ ಮಣ್ಣಿನ ಗುಣಮಟ್ಟ ಹಾಳಾಯ್ತು, ಹತ್ತಿ ಬಿಡಿಸುವವರು ಸುಧಾರಿಸಲಾಗದ ಕಾಯಿಲೆಗಳಿಂದ ಬಳಲುವ ಪರಿಸ್ಥಿತಿ ಎದುರಾಗಿದೆ. ಹೀಗಾದಾಗಲಾದರೂ ನಮ್ಮ ಜನರಿಗೆ ಬುದ್ದಿ ಬರಬೇಡವೇ?
ಅತೀ ಹೆಚ್ಚು ಪ್ರಮಾಣದಲ್ಲಿ ಕುಲಾಂತರಿ ತಳಿಗಳನ್ನು ಬಳಸುವ (ಶೇ.65) ಅರ್ಜೈಂಟಿನಾ ಮತ್ತು ಪೆರುಗ್ವೆ ರಾಷ್ಟ್ರಗಳಲ್ಲಿ ಆಹಾರ ಉತ್ಪಾದನೆ ತೀವ್ರಗತಿಯಲ್ಲಿ ಇಳಿಮುಖವಾಗಿರುವುದನ್ನು ಗಮನಿಸಬಹುದು. ಯಾವುದೇ ರಾಷ್ರ್ರ ಆಹಾರದ ಅಭದ್ರತೆ ಎದುರಿಸಿದಲ್ಲಿ ಆ ದೇಶದ ಕಥೆ ಮುಗಿಯಿತು ಎಂತಲೇ ಅರ್ಥ. ನಾವು ಕುಲಾಂತರಿ ಬದನೇ ಒಪ್ಪಿಕೊಳ್ಳುವಲ್ಲಿಯೂ ನಮ್ಮ ಆಹಾರ ಭದ್ರತೆಯನ್ನು, ಬೀಜ ಸ್ವಾವಲಂಬನೆಯನ್ನು ಬಲಿಕೊಡುತ್ತಿದ್ದೇವೆ ಎಂಬುದನ್ನು ತಿಳಿಯಬೇಕು. ಜಾಗತೀಕರಣದ ಕಬಂಧ ಬಾಹು ಕ್ಯಾನ್ಸರ್ ನಂತೆ ವ್ಯಾಪಕವಾಗಿ ನಮ್ಮನ್ನು ಅತಿಕ್ರಮಿಸುವುದು ಆಹಾರದ ತಳಿಗಳನ್ನು ಕುಲಾಂತರಿ ಮಾಡುವ ಮೂಲಕ ಎಂಬುದು ಅರಿವಾಗಬೇಕು. ಕುಲಾಂತರಿ ತಳಿ ವಿರೋಧ ಕೇವಲ ರೈತರಿಗೆ ಮಾತ್ರ ಸಂಭಂದಿಸುದುದಲ್ಲ,ಪ್ರತಿಯೊಬ್ಬ ಪ್ರಜೆಯೂ ಕುಲಾಂತರಿ ತಳಿಯನ್ನು ವಿರೋಧಿಸಿದಾಗಲೇ ಅದಕ್ಕೊಂದು ಗಟ್ಟಿತನ ಸಿಕ್ಕೀತು. ಈ ಸಂಧರ್ಭ ಒಂದು ವರ್ಷಗಳ ಹಿಂದೆ ಹಿರಿಯ ವಿಜ್ಞಾನಿ, ಪತ್ರಕರ್ತ ನಾಗೇಶ್ ಹೆಗಡೆ ಪ್ರಜಾವಾಣಿ ಪತ್ರಿಕೆಗೆ ಬರೆದ ಲೇಖನವೊಂದರ ಸಾರವನ್ನು ಇಲ್ಲಿ ಹೇಳಲೇ ಬೇಕು. ದಶಕಗಳ ಹಿಂದೆ ಜಾಗತೀಕರಣ ದೇಶಕ್ಕೆ ಕಾಲಿರಿಸಿದಾಗ ಪಂಜಾಬ್ ನ ಹಳ್ಳಿಯೊಂದರಲ್ಲಿ ಆಧುನೀಕರಣದ ಗಾಳಿ ಬೀಸಲಾರಂಭಿಸಿತಂತೆ. ರೈತರು ಬೆಳೆಗಳ ಉತ್ತಮ ,ಇಳುವರಿಗಾಗಿ ಸಾಂಪ್ರಾದಾಯಿಕ ಕ್ರಮಗಳನ್ನು ಮರೆತು ರಾಸಾಯನಿಕಗಳನ್ನು ಮತ್ತು ಗೊಬ್ಬರಗಳನ್ನು ವ್ಯಾಪಕವಾಗಿ ಬಳಸಲಾರಂಭಿಸದರು. ಉಳುಮೆಗೆ ಟ್ರ್ಯಾಕ್ಟರುಗಳನ್ನು, ಆದುನಿಕ ತಂತ್ರಜ್ಞಾನದ ಉಪಕರಣಗಳನ್ನು ಉಪಯೋಗಿಸಿದರು, ಲಕ್ಷ ಲಕ್ಷ ಹಣ ನೋಡಿದರು, ಹಳೇ ಕಾಲದ ಮನೆಗಳು ಹೋಗಿ ಕಾಂಕ್ರೀಟು ಮನೆಗಳು ಬಂದವು. ಆದರೆ ಕೇವಲ 10ವರ್ಷಗಳಲ್ಲಿ ಆ ಗ್ರಾಮದ ಕೃಷಿ ಬೂಮಿ ಯಾತಕ್ಕೂ ಉಪಯೋಗವಿಲ್ಲದಂತಾಗಿ ಹೋಯ್ತು, ಸಂಪೂರ್ಣ ಬರಡಾಗಿ ಹೋಗಿತ್ತು ಅಂದರೆ ಎಷ್ಟರ ಮಟ್ಟಿಗೆ ಅವರು ಕ್ರಿಮಿನಾಶಕಗಳನ್ನು ಬಳಸಿದ್ದರು ಎಂದು ಊಹಿಸಬಹುದು. ಕಡೆಗೆ ಬರಡು ಭೂಮಿಯನ್ನು ಹರಾಜಿಗಿಟ್ಟು ಹೊಟ್ಟೆಗಿಲ್ಲದೇ ವಲಸೆ ಹೋಗಲು ನಿಂತರಂತೆ. ಇದು ಪಂಜಾಬ್ ನ ಗ್ರಾಮ ಒಂದರ ಕಥೆಯಲ್ಲ. ಕುಲಾಂತರಿ ಒಪ್ಪಿಕೊಳ್ಳುವ ಹುನ್ನಾರದ ಹಿಂದೆ ದೇಶದ ಪ್ರತೀ ಹಳ್ಳಿಯೂ ನಾಶವೂ ಜನರ ಬದುಕಿನ ಅಂತ್ಯವೂ ಇದೆ ಎಂಬುದನ್ನು ಅರಿಯಬೇಕು. ಇವತ್ತು ಕುಲಾಂತರಿ ತಳಿ ಉತ್ಪಾದಿಸುವ 10ಕ್ಕೂ ಹೆಚ್ಚು ಕಂಪನಿಗಳು ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿದೆ, ಇವು ನಮ್ಮ ರೈತರ ಬೀಜ ಸ್ವಾಲಂಬನೆಯನ್ನು ಕಸಿದುಕೊಂಡವೆಂದರೆ ಅದಕ್ಕಿಂತ ದೊಡ್ಡ ಹೊಡೆತ ಮತ್ತೇ ಯಾವುದೂ ಇರಲಾರದು. ಆದ್ದರಿಂದ ಶತಾಯಗತಾಯ ಬಿ ಟಿ ಬದನೆಕಾಯಿಯನ್ನು ವಿರೋಧಿಸುವವರಲ್ಲಿ ನೀವೂ ಒಬ್ಬರಾಗಿ ಅಪಾಯವನ್ನು ತಡೆಯಿರಿ ಎಂಬುದೇ ಅರಿಕೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...