Wednesday, June 19, 2013

ಅಹಿಂಸೆ ಪ್ರತಿಪಾದನೆಯ ಅವಿವೇಕಗಳು!!

ಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ಸಮಾಜದಲ್ಲಿ ಜನರ ಆಧ್ಯತೆಗಳು ಬದಲಾವಣೆ ಆಗುತ್ತಿರುವಂತೆ ಸಾಮಾಜಿಕ ವ್ಯವಸ್ಥೆಗಳಲ್ಲಿ ಹಾಗೂ ಧಾರ್ಮಿಕ ವ್ಯವಸ್ಥೆಯಲ್ಲಿಯೂ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ, ಸಾಮಾಜಿಕ ಬದಲಾವಣೆಗಳು ಮೇಲ್ನೋಟಕ್ಕೆ ಬದಲಾದಂತೆ ಕಂಡರೂ ಒಳಗೆ ಬೆಂಕಿ ಉರಿಯುತ್ತಲೇ ಇದೆ ಅವಕಾಶವಾದಾಗಲೆಲ್ಲ ಅದು ತನ್ನ ನಾಲಗೆಯನ್ನು ಚಾಚುತ್ತ ಸಮಾಜದಲ್ಲಿ ಅಸಹನೆಯನ್ನು ಸೃಷ್ಟಿಸುತ್ತಿದೆ. ಅದೇ ರೀತಿ ಧಾರ್ಮಿಕ ಬದಲಾವಣೆಯನ್ನು ಬದಲಾದ ಸಮಾಜಕ್ಕೆ ನಾವು ಹೋಲಿಕೆ ಮಾಡಿ ನೋಡುವಂತಿಲ್ಲ ಏಕೆಂದರೆ ಅದು ಧರ್ಮ ಅಷ್ಟೇ! ಧರ್ಮದ ಆಚರಣೆಗಳು ಸಿದ್ದಾಂತಗಳು ಯಾವ ಕಾಲಕ್ಕೂ ಬದಲಾಗಲಾರದೇನೋ ಅನ್ನುವಷ್ಟು ಜಿಡ್ಡುಗಟ್ಟಿದೆ. ಮೂಲಭೂತವಾದಿ ಮನಸ್ಸುಗಳಿಗೂ ಅದರ ಬದಲಾವಣೆ ಬೇಕಿಲ್ಲ ಅದಕ್ಕೆಂದೇ ಸ್ಥಾಪಿತ ಹಿತಾಸಕ್ತಿಗಳ ಮೂಲಕ ಸದಾ ಕಾಲಕ್ಕೂ ಅದನ್ನು ಜೀವಂತವಾಗಿಡಲು ಯತ್ನಿಸುತ್ತಲೇ ಇದೆಯಾದ್ದರಿಂದ ಬದಲಾವಣೆ ನಿಯಮ ಅದಕ್ಕೆ ಅನ್ವಯಿಸದು ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಇಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಹೇಳುವುದಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಆರೋಗ್ಯಕರವಾದ ಚಿಂತನೆ ಮತ್ತು ಚರ್ಚೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅನಿವಾರ್ಯವೆನಿಸಿದ ಚರ್ಚೆಯೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ.
         ಸನಾತನ ಪರಂಪರೆಯನ್ನು ಹೊಂದಿದೆ ಭಾರತ ದೇಶದಲ್ಲಿ ಅನೇಕ ಧಾರ್ಮಿಕ ಪಂಥಗಳಿವೆ ಮತ್ತು ಅದಕ್ಕನುಸಾರವಾಗಿ ಜನರು ಅವರಿಗಿಷ್ಟವಾದ ಧರ್ಮವನ್ನು ಅವರದ್ದೇ ಆದ ಚೌಕಟ್ಟಿನಲ್ಲಿ ಅನುಸರಿಸಿಕೊಂಡು ಬರುತ್ತಿದ್ದಾರೆ ಅದಕ್ಕೆ ಯಾವ ಅಭ್ಯಂತರವೂ ಇಲ್ಲ, ದೇಶದ ಸಂವಿಧಾನದಲ್ಲೂ ಅದಕ್ಕೆ ಮುಕ್ತ ಅವಕಾಶವನ್ನ ಕಲ್ಪಿಸಲಾಗಿದೆ. ಆದರೆ ಸಮಸ್ಯೆ ಇರುವುದು ಅದಲ್ಲ ಸಂವಿಧಾನದ ಆಶಯಗಳಿಗೆ ತದ್ವಿರುದ್ದವಾದ ಕ್ರಿಯೆಗಳು ಸಾರ್ವತ್ರಿಕವಾಗಿ ವ್ಯಕ್ತವಾಗುವ ಮೂಲಕ ಹೇರಿಕೆಯಂತಹ ಕೃತ್ಯಗಳು ನಡೆದಾಗ ಪ್ರಶ್ನಿಸುವುದು ಅನಿವಾರ್ಯವೂ ಹೌದು. 
          ಹೌದು ಇದನ್ನಿಲ್ಲಿ ಪ್ರಸ್ತಾಪಿಸುವ ಕಾರಣವಿಷ್ಟೇ ಕೆಲ ದಿನಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾದ ಅಭಯಚಂದ್ರ ಜೈನ್ ಮೀನುಗಾರಿಕೆ ಖಾತೆಯನ್ನು ವಹಿಸಿಕೊಂಡರು ಮತ್ತು ಅದನ್ನು ನಿರ್ವಹಿಸಿಕೊಂಡು ಬಂದರು, ಈ ನಡುವೆ ಅದೇ ಸಚಿವರು ಸಾರ್ವಜನಿಕ ಸಭೆಯೊಂದರಲ್ಲಿ ನಾನು ಜೈನ ಸಮುದಾಯಕ್ಕೆ ಸೇರಿದವನಾದ್ದರಿಂದ ಅಹಿಂಸಾ ಧರ್ಮ ಮತ್ತು ನಂಬಿಕೆಗೆ ವಿರುದ್ದವಾಗಿ ಮೀನುಗಾರಿಕೆ ಇಲಾಖೆ ಸಚಿವನಾಗಿ ಕೆಲಸ ಮಾಡಲು ಕಷ್ಟ. ಇದನ್ನು ಬದಲಾಯಿಸಬೇಕು ಎಂದು ಸಾರ್ವಜನಿಕ ಸಭೆಯಲ್ಲಿ ಇಲಾಖೆ ಬದಲಾವಣೆಗೆ ಒತ್ತಾಯ ಮಾಡುವ ಮೂಲಕ ಮುಖ್ಯಮಂತ್ರಿಗಳ ಪರಮಾಧಿಕಾರವನ್ನು ಪ್ರಶ್ನಿಸಿ ಅಪಮಾನ ಮಾಡಿಬಿಟ್ಟರು! ಸಚಿವರ ಈ ನಿಲುವಿಗೆ ಅವರ ಸಮುದಾಯದ ಒತ್ತಾಯವೂ ಇತ್ತು. ಇಲ್ಲಿ ಎದುರಾಗುವ ಮೂಲಭೂತ ಪ್ರಶ್ನೆಯೆಂದರೆ ಸಚಿವ ಅಭಯಚಂದ್ರ ಜೈನ್ ಅವರು ವಿಧಾನ ಸಭಾ ಚುನಾವಣೆಯಲ್ಲಿ ಮೀನು ಹಿಡಿಯುವವರು, ಮೀನು ಕೃಷಿ ಮಾಡುವವರು ಮತ್ತು ಮೀನು ತಿನ್ನುವವರ ಮತವನ್ನು ಪಡೆದು ಗೆದ್ದಿರುವುದರಿಂದ ಅವರ ಧರ್ಮ ಅಪವಿತ್ರವಾಯಿತೇ? ಆಗ ಜೈನ ಮುನಿಗಳ ಮಾತು ಕೇಳದ ಸಚಿವರು ಈಗ ಏಕೆ ಕೇಳುತ್ತಿದ್ದಾರೆ? ಸಚಿವರಾಗಿ ಅವರು ಕೆಲಸ ಮಾಡಬೇಕಾಗಿರುವುದು ಭಾರತ ಸಂವಿಧಾನದಲ್ಲಿ ಈಗಾಗಲೇ ರೂಪಿತವಾಗಿರುವ ಕಾನೂನು ಅಡಿಯಲ್ಲಿ ಮತ್ತು ಸರ್ವ ಜಾತಿ-ಧರ್ಮೀಯರ ಜನಸೇವಕನಾಗಿ. ಜೈನ ಧರ್ಮದ ನಂಬಿಕೆಯ ನೆಲೆಯಲ್ಲಿ ಅಲ್ಲ ಎಂಬುದು ಸಚಿವರಿಗೆ ಯಾವಾಗಲೂ ನೆನಪಿರ ಬೇಕಾದ್ದು ಅವಶ್ಯ.ಸಚಿವರ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಸಗಟಾಗಿ ತಿರಸ್ಕರಿಸಿದ ಮೇಲೆ ಸದರಿ ಖಾತೆಯಲ್ಲಿಯೇ ಮುಂದುವರೆಯುವ ಮಾತನ್ನು ಅಭಯಚಂದ್ರ ಜೈನ್ ಆಡಿರುವುದು ಮತ್ತು ಮುಂದುವರೆದಿರುವುದು ಪ್ರಜಾಪ್ರಬುತ್ವದ ಸದಾಶಯಗಳನ್ನು ಗೌರವಿಸಿದಂತೆ ಆಗಿದೆ. ಆದರೆ ಈ ಕುರಿತು ಸ್ಥಾಪಿತ ಹಿತಾಸಕ್ತಿಗಳು ಧ್ವಂಧ್ವ ನಿಲುವುಗಳನ್ನು ಸಾರ್ವಜನಿಕವಾಗಿ ಹರಿಯ ಬಿಡುತ್ತಿರುವುದು ವಿನಾಕಾರಣ ಅಸಹನೀಯ ವಾತಾವರಣ ಸೃಷ್ಟಿಸಿದೆ. ಕೆಲ ದಿನಗಳ ಹಿಂದೆ ಹಾಸನದ ಸಾಹಿತಿ-ಕವಯಿತ್ರಿ ರೂಪಹಾಸನ ಮಾಂಸಹಾರ ಮಾರಾಟ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಸಿಲುಕಿತ್ತಲ್ಲದೇ ವ್ಯತಿರಿಕ್ತವಾದ ಪರಿಣಾಮವನ್ನು ಉಂಟುಮಾಡುವ ಮೂಲಕ ರಾಜ್ಯಾಧ್ಯಂತ ಸಂಚಲನ ಸೃಷ್ಟಿಸಿತ್ತು. 
        ಇಂಥಹ ವಿವಾದಗಳ ನಡುವೆ ಸಮುದಾಯದ ಜನರಿಗೆ ಚೌಕಟ್ಟಿನಲ್ಲಿ  ಧಾರ್ಮಿಕ ಕಟ್ಟಳೆಗಳನ್ನು ಹೇರುವ ಪ್ರಯತ್ನ ಮತ್ತೊಮ್ಮೆ ಕಾಣಬರುತ್ತಿದೆ. ನಿನ್ನೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜೈನ ಮುನಿ ಗುಣಧರನಂದಿ ಮಹಾರಾಜರು 'ಜೈನ ಸಮಾಜದವರು ಅಹಿಂಸಾವಾದಿಗಳು, ಹೀಗಿರುವಾಗ ಅಭಯಚಂದ್ರಜೈನ್ ಅವರಿಗೆ ಮೀನುಗಾರಿಕೆ ಖಾತೆಯನ್ನು ನೀಡಿದರೆ ಅವರ ಆ ಖಾತೆಯನ್ನು ನಿಭಾಯಿಸುವುದು ಅಸಾಧ್ಯ. ಆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರಲ್ಲದೇ ಕಳೆದ ಮೇ 26ರಂದು ಕುಂತುಗಿರಿಯಲ್ಲಿ ಸಭೆ ಸೇರಿದ್ದ 150ಕ್ಕೂ ಹೆಚ್ಚು ಜೈನ ಮುನಿಗಳು ಅಭಯಚಂದ್ರ ಜೈನ್ ಅವರಿಗೆ ಮೀನುಗಾರಿಕೆ ಖಾತೆಯನ್ನು ನೀಡಿರುವ ಬಗ್ಗೆ ಸಾರ್ವತ್ರಿಕವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರಲ್ಲದೇ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಭಯಚಂದ್ರ ಜೈನ್ ಅವರಿಗೆ ನೀಡಿರುವ ಮೀನು ಖಾತೆ ಬದಲಾಯಿಸ ಬೇಕೆಂದು ಮನವಿ ಮಾಡಲಾಗಿತ್ತು ಆದರೆ ಸಿಎಂ ಯಾವುದೇ ನಿರ್ಧಾರ ಪ್ರಕಟಿಸದಿರುವ ಹಿನ್ನೆಲೆಯಲ್ಲಿ ಜೂನ್ 30ರಂದು ಪುನಹ ಜೈನ ಮುನಿಗಳು ಹಾಗು ಸಮಾಜದ ಮುಖಂಡರು ಸಭೆ ಸೇರಿ ಮುಖ್ಯ ಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯುವ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ. ಈ ರೀತಿಯ ಪ್ರಯತ್ನಗಳು ಪ್ರಜಾಪ್ರಭುತ್ವದಲ್ಲಿ ಪುನಹ ಪುನಹ ಜರುಗುವುದು ಒಳ್ಳೆಯ ಲಕ್ಷಣವಲ್ಲ. ಅಭಯಚಂದ್ರ ಜೈನ್ ಆ ಖಾತೆಯನ್ನು ನಿರ್ವಹಿಸುವುದು ಬೇಡ ಎನ್ನುವುದಾದರೆ ಅವರಿಂದ ರಾಜೀನಾಮೆ ಕೊಡಿಸಿ ಧಾರ್ಮಿಕ ಚೌಕಟ್ಟಿನಲ್ಲಿ ಕಟ್ಟಿಹಾಕಲಿ ಅಲ್ಲವೇ? ಅಷ್ಟಕ್ಕೂ ಅಹಿಂಸೆ ಪ್ರತಿಪಾದಿಸುವ ಜನರು ತಿನ್ನುವ ಅಕ್ಕಿ, ರಾಗಿ, ಬೇಳೆ ಇತ್ಯಾದಿ ಆಹಾರ ಪದಾರ್ಥಗಳನ್ನು ಬೆಳೆಯುವವರಲ್ಲಿ ಮಾಂಸಹಾರಿಗಳು ಇರುತ್ತಾರಲ್ಲವೇ ? ಅವರ ದೈನಂದಿನ ಚಟುವಟಿಕೆಗಳಲ್ಲಿ ಸಹಾಯಕ್ಕೆ ಬರುವವರು ಮಾಂಸಹಾರಿಗಳಿರುತ್ತಾರಲ್ಲವೇ ? ಅವರಿಂದ ಸಹಾಯ ಪಡೆಯುವುದು ಇಲ್ಲವೇ ಅವರು ಬೆಳೆದ ಮತ್ತು ಮುಟ್ಟಿದ ಪದಾರ್ಥಗಳನ್ನು ಉಪಯೋಗಿಸುವುದು ಧಾರ್ಮಿಕ ನೆಲೆಗಟ್ಟಿನಲ್ಲಿ ತಪ್ಪಲ್ಲವೇ? ಸಮುದಾಯದಲ್ಲಿ ಒಪ್ಪುವ ಆದರೆ ಸಾರ್ವಜನಿಕವಾಗಿ ಸಹ್ಯವೆನಿಸದ ನಡವಳಿಕೆಗಳನ್ನು ಕೂಡ 'ಧರ್ಮ' ಕಾರಣಕ್ಕೆ ಎಲ್ಲರೂ ಗೌರವಿಸುತ್ತಿದ್ದಾರಲ್ಲವೇ ? ಹೀಗಿರುವಾಗ ಪ್ರಜಾಪ್ರಬುತ್ವದ ಆಶಯದಂತೆ ಆಯ್ಕೆಯಾದ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ನಡೆಯುವ ಪ್ರಕ್ರಿಯೆಗಳಿಗೆ ತದ್ವಿರುದ್ದದ ನಿಲುವು ಹೊಂದುವುದು ಆರೊಗ್ಯಕರ ಎಂದೆನಿಸುತ್ತದೆಯೆ?
       ಇದೇ ಸಂಧರ್ಭದಲ್ಲಿ ಪೇಜಾವರ ಶ್ರಿಗಳು ಉಡುಪಿಯಲ್ಲಿ ಜಾರಿಯಲ್ಲಿರುವ ಬ್ರಾಹ್ಮಣರ ಪ್ರತ್ಯೇಕ ಪಂಕ್ತಿ ಬೋಜನವನ್ನು ವಿಲಕ್ಷಣವಾಗಿ ಸಮರ್ಥಿಸಿಕೊಳ್ಳುವುದಲ್ಲದೇ ಧರ್ಮಸ್ಥಳದಲ್ಲೂ ಅಂತಹ ಪದ್ದತಿ ಜಾರಿಯಲ್ಲಿದೆ ಎಂಬ ಹೇಳಿಕೆಗಳನ್ನು ನೀಡುತ್ತಾ ಸೆಕ್ಯುಲರ್ ರಾಷ್ಟ್ರದ ಧಾರ್ಮಿಕ ಮೂಲಭೂತವಾದದ ಜೀವಂತಿಕೆಯ ಪ್ರತಿನಿಧಿಯಾಗಿ ಕಾಣಿಸುತ್ತಾರೆ. ಇವೆಲ್ಲಾ ಸಾರ್ವಜನಿಕ ವಲಯದಲ್ಲಿ ಅರಗಿಸಿಕೊಳ್ಳಲಾಗದ ಮತ್ತು ಕಂದಕ ಸೃಷ್ಟಿಸುವ ಕ್ರಿಯೆಗಳಲ್ಲವೇ? ಇದೆಲ್ಲಾ ಬೇಕಾ ನೀವೇ ಹೇಳಿ? ಇನ್ನು ಗೋಹತ್ಯೆ ನಿಷೇಧ ರದ್ದು ಕುರಿತು ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಹಾಗೆ ಮಾತನಾಡುತ್ತಿರುವವರು ಎಷ್ಟು ಮಂದಿ ಗೋವುಗಳ ಸ್ಥಿತಿಗತಿಯ ಬಗ್ಗೆ ಅರಿತಿದ್ದಾರೆ? ಅವರು ಕುಡಿಯುವ ಹಾಲು ಮಾಂಸಜನ್ಯವಲ್ಲವೇ? ಇದಕ್ಕೆ ತಾರ್ಕಿಕ ನೆಲೆಗಟ್ಟಿನಲ್ಲಿ ಚರ್ಚಿಸದೆ ಕಂತೆ ಪುರಾಣಗಳ ನಿದರ್ಶನಗಳ ಮೂಲಕ ಸಮರ್ಥನೆಗೆ ಮುಂದಾಗುತ್ತಾರೆ, ಅವುಗಳಿಗೆ ತಾತ್ವಿಕವಾದ ನೆಲೆಗಟ್ಟಿಲ್ಲ. ಗೋವುಗಳ ಅಮಾನುಷ ಹತ್ಯೆ ಕುರಿತು ಚರ್ಚೆಯಾಗಲಿ, ಅವುಗಳ ಸಂರಕ್ಷಣೆಗೆ ಅಗತ್ಯ ಪರಿಸರ ಇದೆಯೇ ಎಂದು ಅವಲೋಕಿಸಲಿ. ಈ ನಿಟ್ಟಿನಲ್ಲಿ ವಿತಂಡವಾದ, ತಾತ್ವಿಕ ನೆಲಗಟ್ಟಿಲ್ಲದ ಚರ್ಚೆಗಳು ಬೇಕಾ?  
      ಸಚಿವ ಅಭಯಚಂದ್ರ ಜೈನ್ ಪ್ರಕರಣವನ್ನು  ಸಮಾಜವಾದಿ ನೆಲೆಯ ಸೂಕ್ಷ್ಮದೃಷ್ಠಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಧ್ಯಕ್ಕೆ  ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಂವಿಧಾನದ ಪ್ರಿಯಾಂಬಲ್ ನಲ್ಲಿ ಸಾರ್ವಭೌಮ, ಸಾಮಾಜಿಕ, ಜಾತ್ಯಾತೀತ ಪ್ರಜಾತಂತ್ರ ಗಣರಾಜ್ಯದಲ್ಲಿ ಎಲ್ಲ ನಾಗರೀಕರಿಗೂ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಮತ್ತು ಸೋದರತ್ವವನ್ನು ಹೊಂದುವಂತೆ ಮಾಡುವುದೇ ಅಭಿವೃದ್ದಿ ಎಂದು ಹೇಳಲಾಗಿದೆ. ಇವೆಲ್ಲ ಸಾಧ್ಯವಾಗಬೇಕಾದರೆ ತೋಟಿ ತಳವಾರ, ಕುಂಬಾರ, ಮೀನುಗಾರ, ಕಸಾಯಿ ಖಾನೆಯಲ್ಲಿ ಕೆಲಸ ಮಾಡುವವರ, ಮಾಂಸ ತಿನ್ನದವರ ಹೀಗೆ ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿ ಪ್ರಕ್ರಿಯೆಗೆ ವೇಗ ನೀಡಲು ಸಾಧ್ಯ. ಇದನ್ನೇ ಕರ್ನಾಟಕದ ಜನತೆ ಬಯಸುವುದು ಆಗಿದೆ. ಇದು ಧರ್ಮ ಮತ್ತು ಜಾತಿಯ ಆಶಯದ ನೆಲೆಯಲ್ಲಿ ಮುಳುಗದಂತೆ ಆಢಳಿತಗಾರರು ಎಚ್ಚರ ವಹಿಸಬೇಕಾಗಿದೆ. ಈ ನಡುವೆ ಧಾರ್ಮಿಕ ಮುಖಂಡರು ಸಮಾಜದಲ್ಲಿ ಕಂದಕ ಸೃಷ್ಟಿಸುವ ಪ್ರಯತ್ನಗಳನ್ನು ಕೈ ಬಿಟ್ಟು ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಧಾರ್ಮಿಕ ಕಟ್ಟಳೆಗಳನ್ನು ಹೇರುವ ಪ್ರಯತ್ನವನ್ನು ಮಾಡದೇ ವಿವೇಕಯುತವಾದ ನಿಲುವುಗಳನ್ನು ಹೊಂದಲಿ ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...