Sunday, February 15, 2015

ಭ್ರಮೆಗಳು ಸಾರ್ ಭ್ರಮೆಗಳು!

ಬದುಕು ಸರಾಗವಾದ ಹಾದಿಯಲ್ಲ..! ಅಲ್ಲಿ ಏಳು ಬೀಳುಗಳು ಸಹಜ, ಒಮ್ಮೆ ಉತ್ತುಂಗದಲ್ಲಿದ್ದವರು ಈಗ ಸಾಮಾನ್ಯ ಸ್ಥಿತಿಗೆ ಮರಳಿರ ಬಹುದು.ಸಾಮಾನ್ಯರಾಗಿದ್ದವರು ಎತ್ತರಕ್ಕೆ ತಲುಪಿಕೊಂಡಿರ ಬಹುದು. ಆದರೆ ಎಷ್ಟೋ ಸನ್ನಿವೇಶಗಳಲ್ಲಿ ಪೂರ್ವ ಸ್ಥಿತಿಯನ್ನು ಎಲ್ಲ ಆತಂಕಗಳ ನಡುವೆಯೂ ಕಾಯ್ದುಕೊಂಡು ಹೋಗಲು ಹೆಣಗುವ ವ್ಯಕ್ತಿತ್ವಗಳನ್ನು ನಮ್ಮ ನಡುವೆ ಕಾಣ ಬಹುದು. ಇದು ಕೆಲವೊಮ್ಮೆ ಫನ್ನಿಯಾಗಿ ಮತ್ತೆ ಕೆಲವೊಮ್ಮೆ ವಿಷಾದವಾಗಿ ಕಾಣಬಹುದು. ಅಂತಹ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದೇನೆ ಓದಿಕೊಳ್ಳಿ.
        ಬಹಳಷ್ಟು ಮಂದಿಗೆ ಎಲ್ಲವೂ ಇರುತ್ತದೆ ಆದರೆ ಏನಾದರೊಂದು ಕೊರತೆ ಇದ್ದೆ ಇರುತ್ತೆ ಹಾಗಾಗಿ ಅಂತಹ ವರ್ತುಲದಿಂದ ಆಚೆಗೆ ಅವರು ಬರಲು ಸಾಧ್ಯವಾಗುವುದೇ ಇಲ್ಲ. ನಮ್ಮ ಜಿಲ್ಲೆಯ  ಕಾಫಿ-ಏಲಕ್ಕಿ ಬೆಳೆಗಾರರನ್ನೇ ತೆಗೆದುಕೊಳ್ಳಿ. ದುಡ್ಡಿದ್ದಾಗ ಎಲ್ಲಮ್ಮನ  ಜಾತ್ರೆ, ಕಿಸೆಯಲ್ಲಿ ಕಾಸಿಲ್ಲದಾಗ ಯಾವ ಜಾತ್ರೆಗಳ ಸುಳಿವು ಇಲ್ಲ, ಸಧ್ಯ ನಮ್ಮ ಜೇಬಿನಲ್ಲಿ ಕಾಸಿಲ್ಲವೆಂಬುದು ಜನರಿಗೆ, ಬಂಧುಗಳಿಗೆ ತಿಳಿಯದಿದ್ದರೆ ಸಾಕು ಸಾಲವೋ ಸೋಲವೋ, ಬೇಕಾದರೆ ಸಿಕ್ಕಷ್ಟು ದುಡ್ಡಿಗೆ ಅರೆಬರೆ ತೋಟ ಮಾರುವುದಾಗಲಿ ಜೀವನ ಶೈಲಿಯನ್ನು ಮಾತ್ರ ಬದಲಿಸಿಕೊಳ್ಳಲು ಸಿದ್ದರಿರುವುದಿಲ್ಲ, ಇಂಥಹವರು ನೆಮ್ಮದಿಯಿಲ್ಲದ ಅಂತರ ಪಿಚಾಚಿಗಳಾಗಿ ಮಾನಸಿಕ ಕ್ಷೇಶವನ್ನು ಹಾಳುಮಾಡಿಕೊಂಡು ಅಂತ್ಯ ಕಾಣುತ್ತಾರೆ. ತಂಬಾಕು-ಆಲೂಗಡ್ಡೆ-ಜೋಳದ ಸೀಸನ್ ಗಳು ಹಾಗೆಯೇ ವರ್ಷಪೂರ್ತಿ ಹೊಟ್ಟೆ ಬಟ್ಟೆ ಕಟ್ಟಿ ದುಡಿದದ್ದನ್ನೆಲ್ಲ ದಾಂ ಧೂಂ ಅಂತ ದೇವರು-ದಿಂಡಿರು-ಜಾತ್ರೆ-ಮದುವೆಗಳಿಗೆ ಖರ್ಚು ಮಾಡಿ, ಬೈಕು-ಕಾರು-ಟ್ರಾಕ್ಟರು-ಜೆಸಿಬಿ ಕೊಂಡು ಒಂದಿಷ್ಟು ಸಾಲಗಳನ್ನು ಬೆನ್ನಿಗೆ ತಗಲು ಹಾಕಿಕೊಂಡು ಬಿಡುತ್ತಾರೆ. ಇದರ ಜೊತೆ ಜೊತೆಗೆ ಅವರ ಜೀವನ ಶೈಲಿಯು ಬದಲಾಗಿ ಬಿಡುತ್ತದೆ ತೊಡುವ ಬಟ್ಟೆ, ಕುಡಿಯುವ ಎಣ್ಣೆ,ತಿನ್ನುವ ಊಟ ಎಲ್ಲದರಲ್ಲೂ ಚೇಂಜ್. ಆದರೆ ಕೃಷಿ ಬೆಳೆಗೆ ಮತ್ತು ಮಾರುಕಟ್ಟೆಗೆ ಸ್ಥಿತ್ಯಂತರವಿಲ್ಲ ನೋಡಿ ಆಗ ಉಂಟಾಗುವ ಶಾಕ್ ದೊಡ್ಡ ರೈತರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ.
      ಅವತ್ತು ನನ್ನೆದುರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕರೊಬ್ಬರು ಕುಳಿತಿದ್ದರು. ನೂರಾರು ಎಕರೆ ಜಮೀನು, ಆಳುಕಾಳು, ಆಧುನಿಕ ಯಂತ್ರೋಪಕರಣಗಳು, ಓಡಾಡಲು ಐಷಾರಾಮಿ ಕಾರು. ಇವರದ್ದು ಸಮೃದ್ದ ಜೀವನ, ಇದ್ದರೆ ಹೀಗಿರ ಬೇಕು ಅಂದುಕೊಂಡು ಪ್ರಶ್ನಿಸಿದೆ. ತಕ್ಷಣ ಕಿವಿಯ ಬಳಿ ಬಂದ ಅವರು ಮೆಲ್ಲಗೆ ಉಸುರಿದರು ನೋಡಿ ಸರ್ ನಾನು ಯಶಸ್ಸು ಪಡೆದ ಕೃಷಿಕನೇ ಹೌದು ಆದರೆ ನೆಮ್ಮದಿಯ ಜೀವನ ಇಲ್ಲ, ನನಗಿರುವ ನೂರಾರು ಎಕರೆ ಜಮೀನು ಉತ್ಪನ್ನ ನೋಡಿ ಬ್ಯಾಂಕ್ ನವರು ಮೇಲೆ ಬಿದ್ದು ಕೋಟಿಗಳ ವರೆಗೆ ಸಾಲ ನೀಡಿದ್ದಾರೆ, ನನ್ನನ್ನು ಗಮನಿಸುವ ಜನರ ಎದುರಿಗೆ ಸ್ಟೇಟಸ್ ಮೈಂಟೇನ್ ಮಾಡ್ಲೇ ಬೇಕಲ್ವಾ ಹಾಗಾಗಿ ಜೀವನ ಶೈಲಿಯನ್ನು ಬದಲಿಸಿಕೊಂಡಿದ್ದೇನೆ , ಕುಟುಂಬದವರು ಶ್ರೀಮಂತಿಕೆಯ ಬದುಕಿಗೆ ಒಗ್ಗಿಕೊಂಡಿದ್ದಾರೆ ಕಷ್ಟ-ಸುಖದ ಅರಿವಿಲ್ಲ ಹೈರಾಣಾಗಿದ್ದೇನೆ ಎಂದು ಅಲವತ್ತುಕೊಂಡರು.
        ಆತನೊಬ್ಬ ಸಿನಿಮಾ ನಿರ್ದೇಶಕ, ಈಗ್ಯೇ 7-8 ವರ್ಷಗಳಿಂದ ಆತನ ಕೈಯಲ್ಲಿ ಕೆಲಸವಿಲ್ಲ ಆದರೂ ಸಾರ್ವತ್ರಿಕವಾಗಿ ತಾನು ತುಂಬಾ ಬ್ಯುಸಿ ಕೆಲಸದಲ್ಲಿದ್ದೇನೆ, ಅಲ್ಲೇಲ್ಲೋ ಸ್ಟಾರ್ ಒಬ್ಬನ ಚಿತ್ರ ನಿರ್ದೇಶಿಸುತ್ತಿದ್ದೇನೆ ಎನ್ನುತ್ತಾನೆ. ಮಾತಿಗೆ ಕುಳಿತರೆ ದೊಡ್ಡ ದೊಡ್ಡವರ ಹೆಸರು ಹೇಳುತ್ತಾನೆ. ಇನ್ನೊಬ್ಬ ಕಮೆಡಿಯನ್ ಮತ್ತು ಸಹ ನಿರ್ದೇಶಕನಾಗಿದ್ದವನು ದಶಕಗಳ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಮಾಡಿದ್ದಾನೆ ಆದರೆ ಈಗ ಕೈಯಲ್ಲಿ ಕೆಲಸವಿಲ್ಲ, ಖಾಲಿ ಖಾಲಿ ಆದರೆ ಸಾರ್ವತ್ರಿಕವಾಗಿ ಆತ ಹಾಗೆ ಹೇಳಿಕೊಳ್ಳಲು ತಯಾರಿಲ್ಲ, ತನ್ನ ಕೆರಿಯರ್, ವರ್ಚಸ್ಸು ಇನ್ನೂ ಚಾಲ್ತಿಯಲ್ಲಿದೆ ಎಂಬ ಭ್ರಮೆಯಲ್ಲೇ ಮಾತಾಡುತ್ತಾನೆ. 
          ದೊಡ್ಡ ನಟರೊಬ್ಬರ ಅನಧಿಕೃತ ಮಗ ಎಂದು ಸಾರ್ವತ್ರಿಕವಾಗಿ ಗುರುತಿಸಲ್ಪಡುವ ನಟನೊಬ್ಬನ ಸಿನಿಮಾ 2ವರ್ಷಗಳ ಹಿಂದೆ ಬಿಡುಗಡೆಗೆ ಸಿದ್ದವಾಗಿತ್ತು. ಸರಿ ಒಂದು ಖಾಸಗಿ ಛಾನಲ್ ನವರು ಪ್ರಸಾರದ ಹಕ್ಕುಗಳನ್ನು ಖರೀದಿಸಲು ಆತನೊಂದಿಗೆ ಮಾತುಕತೆಗೆ ಕುಳಿತರು. ಸರಿ ಸುಮಾರು ಲಾಭದ ಲೆಕ್ಕಾಚಾರದಲ್ಲೇ ಸಂಭಾವನೆ ಕೊಡಲು ಛಾನಲ್ ನವರು ಸಿದ್ದರಾದರು ಆದರೆ ಆತ ಪಟ್ಟು ಬಿಡಲಿಲ್ಲ ತನ್ನ ವರ್ಚಸ್ಸು ಹಾಗೇ ಹೀಗೆ ಅಂತೆಲ್ಲ ಮಾತನಾಡಿ ಹಕ್ಕುಗಳನ್ನು ನಿರಾಕರಿಸಿ ಎದ್ದು ಹೋದ. ಮರುವಾರ ಸಿನಿಮಾ ಬಿಡುಗಡೆಯಾಯಿತು, ನಾಲ್ಕು ದಿನ ಓಡುವುದಿರಲಿ ಹಾಕಿದ ದುಡ್ಡು ಬಾರಲಿಲ್ಲ, ಆತ ಮತ್ತೆ ಸಿನಿಮಾ ಕಡೆಗೆ ತಲೆ ಹಾಕಿಲ್ಲ!
         ಮೊನ್ನೆ ಮೊನ್ನೆ ಮುಗಿದ ನುಡಿಹಬ್ಬದ ಅಧ್ಯಕ್ಷರಾಗಿದ್ದ ಕವಿ ಡಾ ಸಿದ್ದಲಿಂಗಯ್ಯ 70-80ರ ದಶಕಗಳಲ್ಲಿ ಕ್ರಾಂತಿಯ ಕಿಡಿ ಹಚ್ಚಿದ ಮೇರು ವ್ಯಕ್ತಿತ್ವದವರು. ಕಾಲ ಕಳೆದಂತೆ ಅವರೊಳಗಿನ ಸಾರ್ವತ್ರಿಕ ಹೋರಾಟದ ಕಾವು ಕುಂದಿದಂತೆ, ವ್ಯವಸ್ಥೆಯ ಜೊತೆ ರಾಜೀ ಮಾಡಿಕೊಂಡಂತೆ ಭಾಸವಾಗುತ್ತದೆ.  ಸಿದ್ದಲಿಂಗಯ್ಯನವರ ಕುರಿತು ಸಾಮಾನ್ಯ ಜನತೆ ಸಾರ್ವತ್ರಿಕವಾಗಿ ಇಟ್ಟುಕೊಂಡ ನಿರೀಕ್ಷೆಗಳು ದಶಕಗಳ ಹಿಂದಿನ ಕಾವನ್ನೇ ಬೇಡುತ್ತವೆ , ಆದರೆ ಸಿದ್ದಲಿಂಗಯ್ಯನವರ ನಿಲುವುಗಳ ಬದಲಾವಣೆಯನ್ನು ಜನ ಏಕೆ ಒಪ್ಪುವುದಿಲ್ಲ. ಸಮಾಜ ಮುಖಿಯಾದ ಚಿಂತನೆ, ಹೋರಾಟ ಒಬ್ಬರಿಗೆ ಮಾತ್ರ ಸೀಮಿತವೇ ? ಅವರವರ ವೈಯುಕ್ತಿಕ ಬದುಕಿನ ಜಂಜಾಟದಲ್ಲಿ ನಿಲುವುಗಳು ಪಲ್ಲಟವಾಗ ಬಹುದು, ವರ್ತಮಾನದಲ್ಲಿ ಚಲಾವಣೆ ಯಾಗುವ ಸಂಗತಿಗಳಿಗೆ ಆದ್ಯತೆ ಸಿಗಬಹುದೇನೋ ಆದರೆ ಜನ ಅದನ್ನು ಸ್ವೀಕರಿಸಲು ಸಿದ್ದರಿಲ್ಲ. 
       ಎಂದರೆ ಈ ಮೇಲಿನ ಉದಾಹರಣೆಗಳು ವೈಯುಕ್ತಿಕ ನೆಲೆಗಟ್ಟಿನಲ್ಲಿ ಬದಲಾವಣೆ ಬಯಸದೇ  ಮುಂದುವರೆಯುವ ಒಂದು ಗುಂಪು, ಬದಲಾಗುವ ವ್ಯಕ್ತಿತ್ವವನ್ನು ವಾಸ್ತವ ನೆಲೆಗಟ್ಟಿನಲ್ಲಿ ಗ್ರಹಿಸದ ಮತ್ತೊಂದು ಗುಂಪು. ಬದುಕಿಗೆ ಕನಸುಗಳು ಬೇಕು ಭ್ರಮೆಗಳು ಇರಬಾರದಲ್ಲವೇ? 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...