Saturday, December 24, 2011

ರೈತ ದಿನಾಚರಣೆಯ ನೆನಪಲ್ಲಿ......


ಅದು 2009ರ ವರ್ಷ, ಆ ಸುದ್ದಿ ನನಗೆ ಕುತೂಹಲ ಮತ್ತು ದಿಗಿಲು ಹುಟ್ಟಿಸಿತ್ತು, ಆ ಹಳ್ಳಿಯ ಜನ ತಮ್ಮ ಜಮೀನು ಮತ್ತು ಹಳ್ಳಿಯನ್ನೇ ಹರಾಜಿಗಿಟ್ಟಿದ್ದರು. ಅದು ಪಂಜಾಬ್ ನ ಮುಂದುವರಿದ ಹಳ್ಳಿ ಅಂದರೆ ಆಧುನಿಕ ಜಗತ್ತಿನ ಎಲ್ಲಾ ಸೌಕರ್ಯಗಳನ್ನು ಪಡೆದ ಶ್ರೀಮಂತ ಹಳ್ಳಯೆಂದರೂ ತಪ್ಪಾಗಲಾರದೇನೋ. ಆ ಗ್ರಾಮದ ರೈತರು ತಮ್ಮ ಜಮೀನು ಸೇರಿದಂತೆ ಹಳ್ಳಿಯನ್ನೂ ಮಾರಾಟಕ್ಕಿಟ್ಟಿದ್ದರು.  ಬಹುತೇಕ ರೈತಾಪಿ ಕುಟುಂಬಗಳೇ ವಾಸಿಸುವ ಆ ಗ್ರಾಮದಲ್ಲಿ 1994ರ ಜಾಗತೀಕರಣ ನೀತಿಯ ನಂತರ ದಿಕ್ಕು ದೆಸೆಯೇ ಬದಲಾಗಿತ್ತು.  ದೇಸೀ ಪದ್ದತಿಯಲ್ಲಿ ಕೃಷಿ ನಡೆಸುತ್ತಿದ್ದ ಅಲ್ಲಿಯ ರೈತರು ನಂತರ ಹೊಸ ವೈಜ್ಞಾನಿಕ ಪದ್ದತಿಗೆ ಮಾರು ಹೋದರು, ದೀರ್ಘಾವದಿಯ ಬೆಳೆ ಬೆಳೆಯುವ ಬದಲಿಗೆ ಅಲ್ಪಾವಧಿಯ ಬೆಳೆ ಬೆಳೆಯಲು ಮುಂದಾಗಿದ್ದರು, ಹೊಸ ತಳಿಗಳ ಬಳಕೆ ಹೆಚ್ಚಿತು, ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಆಸ್ಪದ ಸಿಗತೊಡಗಿತು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆ ಅಧಿಕವಾಯಿತು, ನೀರಾವರಿಗೆ ಥರಹೇವಾರಿ ಆದುನಿಕ ಉಪಕರಣಗಳು ಬಂದವು, ಕೃಷಿಕಾರ್ಮಿಕರಿಗೆ ಬದಲಾಗಿ ಆಧುನಿಕ ಉಪಕರಣಗಳು ಬಂದವು, ಪ್ರತೀ ಮನೆಗೂ ಟ್ರಾಕ್ಟರ್ ಗಳ ಆಗಮನವಾಯಿತು. ಆಹಾರ ಬೆಳೆಗಳಿಗೆ ಬದಲಾಗಿ ವಾಣಿಜ್ಯ ಬೆಳೆಗಳು, ಹೈಬ್ರಿಡ್ ಬೆಳೆಗಳು ಆವರಿಸಿದವು. ಬ್ಯಾಂಕುಗಳು ಸಾಲದ ಹೊಳೆಯನ್ನೇ ಹರಿಸಿದವು. ಸಾಮಾನ್ಯ ರೈತ ಸಿರಿವಂತನಾದ, ಶ್ರಮದ ಜೀವನ ಮರೆಯಾಯಿತು ಆಧುನಿಕ ಬದುಕಿನ ಶೈಲಿ ತಳವೂರಿತು. ಜೊತೆಯಲ್ಲಿ ನೆಮ್ಮದಿ ಕೆಡಿಸುವ ಪರ್ವಕಾಲವೂ ಆರಂಭವಾಯಿತು. ಹವಾಗುಣ ಮೊದಲಿನಂತಿರಲಿಲ್ಲ, ನಿರೀಕ್ಷಿತ ಮಳೆಗಳು ಕೈಕೊಟ್ಟವು, ಕ್ರಿಮಿನಾಶಕ ಹಾಕಿದರೂ ಅದನ್ನೇ ತಿಂದು ಬದುಕುವ ಕೀಟಗಳು ಮತ್ತು ಕಾಯಿಲೆಗಳು ಬೆಳೆಗಳನ್ನು ಹಾಳು ಮಾಡಿದವು, ವಿರಾಮವಿಲ್ಲದೇ ಬೆಳೆ ಬೆಳೆಯುತ್ತಿದ್ದುದರಿಂದ ಹಾಗೂ ಹೆಚ್ಚಿನ ರಾಸಾಯನಿಕ ಪದಾರ್ಥಗಳ ಬಳಕೆ ಹೆಚ್ಚಿದ್ದರಿಂದ ಮಣ್ಣಿನ ಪಿಎಚ್ ಮೌಲ್ಯ ಹಾಳಾಯ್ತು ಭೂಮಿ ಬರಡಾಯಿತು. ಅಲ್ಲಿ ಏನೂ ಬೆಳೆಯದಂತಾಯಿತು. ಆಹಾರ ಬೆಳೆಗಳಿಗೆ ನಿರ್ಲಕ್ಷಿಸಿದ್ದರಿಂದ ರೈತರು ಪೇಟೆಗೆ ಹೋಗಿ ಭತ್ತ,ಗೋದಿಯಂತಹ ಆಹಾರ ಬೆಳೆ  ಖರಿದೀಸುವ ದುಸ್ತಿತಿ ಎದುರಾಯಿತು. ಕೈತುಂಬಾ ದುಡ್ಡು, ಐಷಾರಾಮಿ ಸೌಕರ್ಯ, ವಾಹನಗಳನ್ನು ಹೊಂದಿದ್ದರೂ ಬೂಮಿ ಬರಡಾಗಿದ್ದರಿಂದ ರೈತರ ಬದುಕು ಅಸಹನೀಯವಾಯಿತು. ಸಾಲಕೊಟ್ಟ ಬ್ಯಾಂಕುಗಳು  ಎದೆಮೇಲೆ ನಿಂತು ವಸೂಲಿಗೆ ಮುಂದಾದವು, ಬೇರೆ ದಾರಿಯಿಲ್ಲದ ರೈತಾಪಿ ಮಂದಿ ಜಮೀನುನೊಂದಿಗೆ ಗ್ರಾಮವನ್ನೇ ಹರಾಜಿಗೆ ಇಟ್ಟುಬಿಟ್ಟರು! ಇದು ಪಂಜಾಬ್ ನ ಹಳ್ಳಿಯೊಂದರ ನೈಜ ಕಥೆ.
ಪ್ರಸಕ್ತ ಸಂಧರ್ಭದಲ್ಲಿ   ಸ್ವತಂತ್ರ ಭಾರತದ ಪ್ರತೀ ಹಳ್ಳಿಗಳ ರೈತರ ಕಥೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇವತ್ತು ಡಿ.23, "ರೈತ ದಿನಾಚರಣೆ" ಈ ಸರ್ಕಾರಕ್ಕೆ ನಮ್ಮ ಜನರಿಗೆ ಈ ಕುರಿತು ಎಷ್ಟು ಅರಿವಿದೆಯೋ ತಿಳಿಯದು. ಭಾರತದ ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತದೆ, ಕೃಷಿಯೇ ದೇಶದ ಆರ್ಥಿಕತೆಯೂ ಮೂಲವಾಗಿತ್ತು ಎಂಬುದು ಯಾರಿಗೂ ತಿಳಿಯದ ಸಂಗತಿಯೇನಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ, ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ, ಕೃಷಿ ಜೀವನದ ಉಸಿರು ಯಾಕೆ ಎಂಬ ಪ್ರಶ್ನೆ ಕಾಡಬೇಕು ಮತ್ತು ಮಂಥನವಾಗಬೇಕು, ಈ ದಿನ ಇಂತಹದ್ದೊಂದು ಚರ್ಚೆಗೆ ವೇದಿಕೆಯಾಗಬಹುದು.

ವಿಚಾರದ ಮಂಥನಕ್ಕೆ ಮುನ್ನಾ ರೈತ ದಿನಾಚರಣೆಯ ಕುರಿತು ಒಂದು ಸಂಗತಿಯನ್ನು ಹೇಳಲೇಬೇಕು, ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಅತೀ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧುರಿ ಚರಣ್ ಸಿಂಗ್ ರ ಜನ್ಮ ದಿನವನ್ನು ಭಾರತ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಧಿಕೃತವಾಗಿ ಈ ಕುರಿತು ಸರ್ಕಾರಿ ಘೋಷಣೆಯಿಲ್ಲದಿದ್ದರೂ 80ರ ದಶಕದಲ್ಲಿ ಬಂದ ರೈತ ಚಳುವಳಿಯ ಸಂಧರ್ಭದಲ್ಲಿ ರೈತರು ಡಿ.23ರಂದು ರೈತದಿನಾಚರಣೆ ಆಚರಿಸುತ್ತಾರೆ.ಸಮಾಜವಾದಿ  ರಾಮಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ರ ಒಡನಾಡಿಯಾಗಿ ಗುರುತಿಸಿಕೊಂಡ ಚೌಧುರಿ ಚರಣ್ ಸಿಂಗ್ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ನೂರ್ ಪುರ್ ಎಂಬ ಸಣ್ಣ ಹಳ್ಳಿಯವರು. ಡಿ.23, 1902ರಂದು ಜನಿಸಿದ ಚರಣ್ ಸಿಂಗ್ ಪ್ರತಿಭಾವಂತ ಯುವಕ. ಎಕಾನಮಿಕ್ಸ್ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್ ಸಿಂಗ್ ತನ್ನ 34ನೇ ವಯಸ್ಸಿಗೆ ಮೊದಲ ಭಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾಗಿ ಆಯ್ಕೆಯಾದರು.ಕೃಷಿ ಬದುಕನ್ನು ಪ್ರೀತಿಸುತ್ತಿದ್ದ ಚರಣ್ ಸಿಂಗ್ ರೈತರ ಬದುಕು ಸುಧಾರಣೆಗೆ ತುಡಿತವನ್ನಿಟ್ಟುಕೊಂಡಿದ್ದರು.ಆದ್ದರಿಂದಲೇ  1938ರಲ್ಲಿ  ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು, ಆ ಮೂಲಕ ರೈತ ಪರವಾದ ಧೋರಣೆ ಪ್ರದರ್ಶಿಸಿದರು. ಮದ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆಯನ್ನು ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲಾ  ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು, ಪಂಜಾಬ್ ರಾಜ್ಯ ಇದನ್ನು ಅನುಷ್ಟಾನಕ್ಕೆ ತಂದ ಮೊದಲ ರಾಜ್ಯವಾಯಿತು. 1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿಯನ್ನು ನಿಷೇದಿಸುವ ಮತ್ತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮಹತ್ವದ ನಿರ್ಧಾರ ಕೈಗೊಂಡರು. ಮುಂದೆ ಇದು ಇಡೀ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು. ಅದೇ ರೀತಿ ದೇಶದ ಹಿತದೃಷ್ಟಿಯಿಂದ ಅನೇಕ ಮಹತ್ವದ ದೂರದೃಷ್ಟಿ ನಿಲುವುಗಳನ್ನು ಹೊಂದಿದ್ದ ಚರಣ್ ಸಿಂಗ್ ಭಾರತೀಯ ಕಾರ್ಮಿಕ ಕಾಯ್ದೆಗೆ ಹೊಸ ರೂಪುರೇಷೆ ನೀಡಿದರು. ರೈತ ಪರವಾದ ಚಿಂತನೆಗಳು ದೇಶದ ರೈತ ಸಮುದಾಯದಲ್ಲಿ ಚರಣ್ ಸಿಂಗ್ ರ ಹೆಸರನ್ನು ಹಸಿರಾಗಿಸಿದವು. ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚಿರಸ್ಥಾಯಿಯಾದ ಚರಣ್ ಸಿಂಗ್ ರೈತ ಸಮುದಾಯದಲ್ಲಿ ಸ್ಥಿರವಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತದಿನಾಚರಣೆ ಆಚರಣೆಗೆ ಬಂದಿದೆ.

ಭಾರತದ ದೇಶದ ಕೃಷಿಗೆ  9000ಕ್ರಿ ಪೂ. ದ ಇತಿಹಾಸ ಇರುವುದು  ಕಾಣಬರುತ್ತದೆ. ಅಲ್ಲಿಂದ ಅನೇಕ ಕಾಲಘಟ್ಟಗಳು ಸವೆದು ಹೋಗಿದ್ದರೂ ಆಧುನಿಕ ಪರಿಸರದ ನಿಲುವುಗಳು ಕೃಷಿ ಬದುಕನ್ನು ವರ್ತಮಾನದಲ್ಲಿ ತಲ್ಲಣಗೊಳಿಸುವಂತೆ ಮಾಡಿವೆ. ಉಸಿರಾಗಬೇಕಿದ್ದ ರೈತರ ಹಸಿರು ಭೂಮಿ ಕಾರ್ಪೋರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕುತ್ತಿರುವುದರಿಂದ ರೈತನ ಬದುಕು ಅಸಹನೀಯವಾಗಿದೆ, ಕೃಷಿ ಜಗತ್ತಿನ ಹೊಸ ಅವಿಷ್ಕಾರ ಮತ್ತು ಪದ್ದತಿಗಳು ರೈತನನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡಿವೆ, ಕೃಷಿ ಕುರಿತ ಸರ್ಕಾರಿ ಪಾಲಸಿಗಳೂ ಜಾಗತಿಕ ವ್ಯಾಪಾರದ ಅನುಸಾರವಾಗಿ ನಡೆಯುತ್ತಿರುವುದರಿಂದ ಭವಿಷ್ಯದ ದಿನಗಳು ಮತ್ತಷ್ಟು ಅಯೋಮಯವಾಗುವ ಸ್ಪಷ್ಟ ಸೂಚನೆಯಿದೆ. ರೈತ ಜಾಗೃತನಾಗಬೇಕು ಜನಸಾಮಾನ್ಯ ಎಚ್ಚೆತ್ತುಕೊಳ್ಳಬೇಕು ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...