Saturday, August 29, 2015

ಏನಿದು ಕಳಸಾ-ಬಂಡೂರಿ ನಾಲಾ ವಿವಾದ?


                        ಚಿತ್ರ:ಗೋವಾದಲ್ಲಿ ಹರಿಯುವ ಮಾಂಡೋವಿ ನದಿ(ಮಹದಾಯಿ ನದಿ)
*****ಅರಕಲಗೂಡು ಜಯಕುಮಾರ್/7899606841
ರಾಜ್ಯದ ಜನತೆಯನ್ನು ಪ್ರತೀ ಬಾರಿ ಕಾಡುವ ಸಮಸ್ಯೆಗಳಲ್ಲಿ ಜಲವಿವಾದದ್ದು ಪ್ರಮುಖವಾದುದು. ಇತ್ತ ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಆಗಿಂದಾಗ್ಯೆ ಭುಗಿಲೇಳುತ್ತಿದ್ದ ಕಾವೇರಿ ನೀರಿನ ವಿವಾದ ಆತಂಕ ಸೃಷ್ಟಿಸಿದರೆ, ಅತ್ತ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ನದಿ ಯೋಜನೆಯ ಪಾಲು ಪಡೆಯುವಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಜಲವಿವಾದ ಪ್ರಾಧಿಕಾರ ರಚನೆಯಾದ ಮೇಲೆ ನೀರು ಬಳಕೆಗೆ ಕೇಂದ್ರದ ನ್ಯಾಯಾಧೀಕರಣದ ಒಪ್ಪಿಗೆ ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ ಅಂದಾಜು 500 ಕೋಟಿ ರೂ ವೆಚ್ಚದ ನೀರಾವರಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
          ಇಂತಹ ಸಂದಿಗ್ಧ ಸಂಧರ್ಭದಲ್ಲಿ ಕಳಸಾ-ಬಂಡೂರಿ ನಾಲಾ ವಿವಾದ ಹೊತ್ತಿ ಉರಿಯುತ್ತಿದೆ. ರಾಜ್ಯದ ಯಾವುದೇ ಭಾಗದಲ್ಲಿ ನೀರಿನ ವಿವಾದಗಳು ಉಂಟಾದರೆ ಮತ್ತು ಗಡಿ ವಿವಾದಗಳು ಉಂಟಾದರೆ ಸ್ಥಳೀಯ ಹೋರಾಟಗಳಿಗೆ ಸೀಮಿತವಾಗುತ್ತಿರುವುದರಿಂದ ನಿರೀಕ್ಷಿಸಿದ ನ್ಯಾಯ ಪಡೆಯಲು ಅಡ್ಡಗಾಲಾಗಿದೆ ಎನ್ನಬಹುದು. ಕಳಸಾ-ಬಂಡೂರಿ ನಾಲಾ ವಿವಾದದಲ್ಲೂ ಇದೇ ಮನಸ್ಥಿತಿ ಇಲ್ಲವೇ ಅರಿವಿನ ಕೊರತೆ ಒಗ್ಗಟ್ಟಿನ ಹೋರಾಟಕ್ಕೆ ಅವಕಾಶ ಮಾಡುತ್ತಿಲ್ಲ. ಹಾಗಾಗಿ ಈ ಕುರಿತು ಮಾಹಿತಿಯನ್ನು ಇಲ್ಲಿ ಅವಗಾಹನೆಗೆ ತರಲಾಗುತ್ತಿದೆ. ಹೆಚ್ಚು ಕಡಿಮೆ ನೇತ್ರಾವತಿ ನದಿ ನೀರನ್ನು ತಿರುಗಿಸಿ ಎತ್ತಿನ ಹೊಳೆ ಯೋಜನೆ ಮೂಲಕ ದೊಡ್ಡಬಳ್ಳಾಪುರ, ಕೋಲಾರ ಮತ್ತಿತರೆಡೆಗೆ ನೀರು ಹರಿಸುವ ಯೋಜನೆಯ ವಿವಾದಂತೆಯೇ ಇದೆ ಈ ಕಳಸಾ-ಬಂಡೂರಿ ನಾಲಾ ವಿವಾದ. ಆದರೆ ಇದು ರಾಜ್ಯದೊಳಗಿನ ವಿವಾದ, ಅದು ಅಂತರ ರಾಜ್ಯಗಳ ನಡುವಿನ ವಿವಾದ!
ಜೀವ ತಳೆದ ಕನಸು:
    ಗೋವಾ ರಾಜ್ಯದ ಜೀವನದಿ ಎಂದು ಕರೆಯಲ್ಪಡುವ ಮಹದಾಯಿ ನದಿಯ ಮೂಲ ಹೆಸರು ಮಾಂಡೋವಿ ನದಿ. ಸರಿ ಸುಮಾರು 77ಕಿಮೀ ಉದ್ದದ ವಿಸ್ತೀರ್ಣ ಹೊಂದಿರುವ ಮಹದಾಯಿ ನದಿ 59ಕಿಮಿ ಗೋವಾ ರಾಜ್ಯದ ವ್ಯಾಪ್ತಿಯಲ್ಲಿದ್ದರೆ, 29ಕಿಮಿ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿದೆ. ಗೋವಾ ರಾಜ್ಯದ ಉತ್ತರ ಭಾಗದಿಂದ ಹರಿದು ಬರುವ ಈ ನದಿ ರಾಜ್ಯದ ಬೆಳಗಾಂ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಭೀಮಘಡ  ಅರಣ್ಯದ ಮೂಲಕ 30ಕವಲುಗಳಾಗಿ ಹರಿಯುತ್ತದೆ ಈ ಪೈಕಿ ಗೋವಾ 1580ಚ.ಕಿ.ಮಿ ಜಲಾನಯನ ಪ್ರದೇಶ, ಕರ್ನಾಟಕ 375ಚ.ಕಿ.ಮಿ ಜಲಾನಯನ ಪ್ರದೇಶ ಮತ್ತು ಮಹರಾಷ್ಟ್ರ 77ಚ.ಕಿ.ಮಿ ಜಲಾನಯನ ಪ್ರದೇಶವನ್ನು ಹೊಂದಿದೆ. ಅದೇ ರೀತಿ ಕರ್ನಾಟಕದ ಮೂಲಕ 52.60ಟಿಎಂಸಿ ಅಡಿ, ಮಹರಾಷ್ಟ್ರ 8.33ಟಿಎಂಸಿ ಅಡಿ ಮತ್ತು ಗೋವಾ ರಾಜ್ಯದ ಮೂಲಕ 159.07 ಟಿಎಂಸಿ ಅಡಿ ನೀರು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ರಾಜ್ಯದ ಮೂಲಕ ಅರೇಬಿಯನ್ ಸಮುದ್ರಕ್ಕೆ ಸೇರಿ ಪೋಲಾಗುವ ನೀರನ್ನು ಸದ್ಭಳಕೆ ಮಾಡಿಕೊಳ್ಳಲು 35ವರ್ಷಗಳ ಹಿಂದೆ ಉತ್ತರ ಕರ್ನಾಟಕ ಜನರ ಆಶಯದಂತೆ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್, ಎಸ್ ಆರ್ ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. ನವಲಗುಂದ ಮತ್ತು ನರಗುಂದ ತಾಲೂಕುಗಳಿಗೆ ಮಲಪ್ರಭಾ ನದಿಯಿಂದ ಕೊರತೆ ಬೀಳುವ ಕುಡಿಯುವ ನೀರನ್ನು ಮಹದಾಯಿ ನದಿಯಿಂದ ಪಡೆದು ಕೊಳ್ಳುವ ಕುರಿತು ವರದಿ ನೀಡುವುದು ಈ ಸಮಿತಿಯ ಆದ್ಯ ಕರ್ತವ್ಯವಾಗಿತ್ತು.

ಯೋಜನೆಯ ರೂಪುರೇಷೆ:
          ಮುಂದೆ 1989ರಲ್ಲಿ ಇದೇ ಎಸ್ ಆರ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದರು. ತಾವೇ ತಯಾರಿಸಿದ್ದ ಮಹದಾಯಿ ನದಿ ನೀರಿನ ಯೋಜನೆಗೆ ಜೀವ ತುಂಬಲು ಸಿದ್ದರಾದರು. ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರನ್ನು ಭೇಟಿ ಮಾಡಿ ಚರ್ಚಿಸಿದರು, ಸಹಮತದೊಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವಷ್ಟರಲ್ಲಿ ಬೊಮ್ಮಾಯಿ ಸರ್ಕಾರ ಬಿದ್ದು ಹೋಯಿತು. 2000ನೇ ಇಸ್ವಿಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾದ ಎಸ್ ಎಂ ಕೃಷ್ಣ ಯೋಜನೆಯನ್ನು ಪುನರ್ ಪರಿಶೀಲಿಸಿ ಕಳಸಾ-ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದರು. ಈ ಯೋಜನೆಯ ಪ್ರಕಾರ ಗೋವಾ-ಕರ್ನಾಟಕ-ಮಹರಾಷ್ಟ್ರದ ಗಡಿ ಪ್ರದೇಶವಾದ ಭೀಮಘಡದಲ್ಲಿ ಕವಲಾಗಿ ಹರಿಯುವ ಮಹದಾಯಿ ನದಿಯ 7.56ಟಿಎಂಸಿ ನೀರನ್ನು ರಾಜ್ಯದ ಮಲಪ್ರಭಾ ನದಿಗೆ ಜೋಡಿಸುವ ಮೂಲಕ ರೇಣುಕಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿ ಗದಗ, ದಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ , ನಗರಗಳ ಮತ್ತು 200ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ದಾಹ ಇಂಗಿಸಲು ನಿರ್ಧರಿಸಲಾಯಿತು. ಯೋಜನೆಯ ಅನುಷ್ಠಾನಕ್ಕಾಗಿ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಯನ್ನು ರೂಪಿಸಲಾಯಿತು.

ತಡಯಾಜ್ಞೆ:
          2001ರಲ್ಲಿ ಮುಖ್ಯಮಂತ್ರಿ ಕೃಷ್ಣ ನೇತೃತ್ವದ ಸರ್ಕಾರ  ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿತು, ಕೇಂದ್ರ ಸರ್ಕಾರ ಕಳಸಾ-ಬಂಡೂರಿ ನಾಲಾ ಯೋಜನೆಗೆ ಪ್ರಾಥಮಿಕ ಅನುಮತಿಯನ್ನು ನೀಡಿ ಗೋವಾ ರಾಜ್ಯದ ನಿಲುವಿಗಾಗಿ ಅವಕಾಶ ನೀಡಿತು. ಹೀಗೆ ನೆನೆಗುದಿಗೆ ಬಿದ್ದ ಯೋಜನೆಯ ಅನುಮತಿಗೆ ರಾಜ್ಯ ಸರ್ಕಾರ ಒತ್ತಾಯಿಸುತ್ತಲೇ ಇತ್ತು. 2002ರಲ್ಲಿ ಗೋವಾ ಸರ್ಕಾರ, ರಾಜ್ಯದ ಕಳಸಾ-ಬಂಡೂರಿ ನಾಲಾ ಯೋಜನೆಗೆ ಸುಪ್ರೀಂಕೋರ್ಟಿನಿಂದ ತಡೆಯಾಜ್ಞೆ ತಂದಿತು. ಅಂದು ಗೋವಾದ ಮುಖ್ಯಮಂತ್ರಿಯಾಗಿದ್ದವರು ಇವತ್ತು ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ಮನೋಹರ್ ಪರಿಕ್ಕರ್ ಎಂಬುದು ಗಮನಾರ್ಹ ಸಂಗತಿ.
          ಕಳಸಾ-ಬಂಡೂರಿ ನಾಲಾ ಯೋಜನೆಯಿಂದ ಕರ್ನಾಟಕ-ಗೋವಾ ಗಡಿ ಪ್ರಾಂತ್ಯದ ಭೀಮಘಡ ಅರಣ್ಯ ದಲ್ಲಿರುವ ತನ್ನ ಭಾಗದಲ್ಲಿಅಮೂಲ್ಯ ಜೀವ ಸಂಕುಲಕ್ಕೆ ಹಾನಿಯಾಗುತ್ತದೆ ಎಂಬ ಕಾರಣ ನೀಡಿ ಗೋವಾ ಸರ್ಕಾರ, ರಾಜ್ಯದ ಯೋಜನೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿತ್ತು. ಮನವಿಯನ್ನು ಪುರಸ್ಕರಿಸಿದ ಕೋರ್ಟು ಪೂರ್ಣ ಪ್ರಮಾಣದ ಯೋಜನೆಗೆ ತಡೆ ನೀಡಲು ನಿರಾಕರಿಸಿ ಭೀಮಘಡ ಅರಣ್ಯ ಪ್ರದೇಶದಲ್ಲಿ ಮಾತ್ರ ಯೋಜನೆ ಮುಂದುವರೆಸದಂತೆ ತಡೆ ನೀಡಿತು.
ನೆನೆಗುದಿಗೆ:
          ಮತ್ತೆ ಈ ಯೋಜನೆಗೆ ಜೀವ ಬಂದಿದ್ದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ. ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಶತಾಯ ಗತಾಯ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ತರುವ ಸಲುವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 100ಕೋಟಿ ರೂ ವೆಚ್ಚದ ಯೋಜನೆಗೆ ಅಡಿಗಲ್ಲು ಹಾಕಿದರು. ಹೀಗೆ 2006ರಲ್ಲಿ ಜೀವತಳೆದ ಯೋಜನೆಯಲ್ಲಿ ಕಳಸಾ ದಿಂದ ಮಲಪ್ರಭಾ ನದಿಯ ವರೆಗಿನ ಕಾಲುವೆ ಉದ್ದ 5.15 ಕಿಮಿ ಯಲ್ಲಿ 3.56ಟಿಎಂಸಿ ಅಡಿ ನೀರು ಹರಿಸುವ ಯತ್ನವಾದರೆ ಭೀಮಘಡ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಬಂಡೂರಿ ನಾಲೆಯಲ್ಲಿ 4ಟಿಎಂಸಿ ಅಡಿ ನೀರು ಹರಿಸುವ ಯತ್ನವಿತ್ತು. ಈಗಾಗಲೆ ಕಳಸಾ ಕಾಲುವೆ ಶೇ.98ರಷ್ಟು ಪೂರ್ಣಗೊಂಡಿದೆ, 120ಮೀ ಮಾತ್ರ ಕಳಸಾ ಕಾಲುವೆ ನಿರ್ಮಾಣ ಬಾಕಿ ಇದೆ. ಆದರೆ ಭೀಮಘಡ ರಕ್ಷಿತಾರಣ್ಯದಲ್ಲಿ ಕಾಮಗಾರಿ ಮುಂದುವರೆಸಲು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದೆ.
          ಮಹದಾಯಿ ನದಿ ನೀರು ಬಳಕೆ ಯೋಜನೆಯ ಸಲುವಾಗಿ ನ್ಯಾಯಾಧೀಶರಾದ ಜೆ ಎಂ ಪಾಂಚಾಲ್ ನೇತೃತ್ವದಲ್ಲಿ 2010ರಲ್ಲಿ ರಚಿಸಲಾಗಿರುವ ಕೇಂದ್ರ ನ್ಯಾಯಾಧಿಕರಣ ಪ್ರಾದಿಕಾರ ಈ ವರೆಗೆ ಆಗಿರುವ ಕಾಮಗಾರಿಯ ಮುಂದಿನ ಆದೇಶದ ವರೆಗೆ ನದಿಗಳ ನೀರು ಬಳಕೆ ಯೋಜನೆ ಅನುಷ್ಠಾನಕ್ಕೆ ತರದಂತೆ ಆದೇಶಿಸಿದೆ, ಆದ್ದರಿಂದ ಬಂಡೂರಿ ಯೋಜನೆ ನೆನೆಗುದಿಗೆ ಬಿದ್ದಿದೆ. ಸದರಿ ಯೋಜನೆ ಅನುಷ್ಠಾನದಲ್ಲಿ ಮಹರಾಷ್ಟ್ರದ ಪಾತ್ರವಿಲ್ಲ ಆದರೆ ಕಳಸಾ-ಬಂಡೂರಿ ನಾಲೆ ಸೇರ್ಪಡೆಯಾಗುವ ಮಹದಾಯಿ ನದಿ ಸ್ವಲ್ಪ ಮಟ್ಟಿಗೆ ಮಹರಾಷ್ಟ್ರ ಗಡಿಯನ್ನು ಬಳಸಿಕೊಂಡು ಹೋಗುತ್ತದೆ ಎಂಬುದನ್ನು ಬಿಟ್ಟರೆ ಮಹರಾಷ್ಟ್ರಕ್ಕೆ ಯಾವುದೇ ಲಾಭವಿಲ್ಲ ಆದಾಗ್ಯೂ ಮಹರಾಷ್ಟ್ರ ಸರ್ಕಾರವನ್ನು ಗಣನೆಗೆ ತೆಗೆದುಕೊಂಡು ವಿವಾದ ಬಗೆ ಹರಿಸಲು ಉತ್ತರ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿದೆ.

ಬೇಕಿದೆ ಒಗ್ಗಟ್ಟು:

         ಹೀಗೆ ನಡೆಯುತ್ತಿರುವ ಈ ಹೋರಾಟಕ್ಕೆ ಇವತ್ತಿಗೆ 45 ಅಮೋಘ ದಿನಗಳು. ಕುಡಿಯುವ ನೀರಿನ ಸಂಕಷ್ಠಕ್ಕೆ ಸಿಲುಕಿರುವ ಅಲ್ಲಿನ ಜನರ ನೋವು ಮತ್ತು ಕಳಕಳಿ ರಾಜ್ಯದ ಎಲ್ಲೆಡೆ ಪಸರಿಸ ಬೇಕಿದೆ, ಕಾವೇರಿ ವಿವಾದ ಹಳೇ ಮೈಸೂರು ಜನರಿಗೆ ಮಾತ್ರ, ಗಡಿ ವಿವಾದ ಬೆಳಗಾವಿಗೆ ಮಾತ್ರ, ಕೃಷ್ಣಾ ನದಿ ನೀರಿನ ವಿವಾದ ಗುಲ್ಪರ್ಗಾ-ವಿಜಯಪುರ ಜನರಿಗೆ ಮಾತ್ರ, ಕೋಮು ಸಂಘರ್ಷದ ಸಮಸ್ಯೆ ದಕ್ಷಿಣ ಕನ್ನಡದ ಜನರದ್ದು ಮಾತ್ರ,  ಕಳಸಾ-ಬಂಡೂರಿ ವಿವಾದ ಉತ್ತರ ಕರ್ನಾಟಕದ ಸಮಸ್ಯೆ ಎಂದು ಕೂರುವುದಕ್ಕಿಂತ ಮಾನವೀಯ ನೆಲೆಗಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳ ಜನರು ಸಕ್ರಿಯವಾಗಿ ಉತ್ತರ ಕರ್ನಾಟಕದ ಜನರ ನೋವಿಗೆ ಸ್ಪಂದಿಸ ಬೇಕಾಗಿದೆಯಲ್ಲವೇ? 
ಈ ಲೇಖನದ ಪೂರ್ಣ ಪಾಠವನ್ನು ಅವಧಿಮ್ಯಾಗ್.ಕಾಮ್ ಪ್ರಕಟಿಸಿದೆ, ಅವದಿ ಸಂಪಾದಕೀಯ ಮಂಡಳಿಗೆ ಧನ್ಯವಾದಗಳು

http://avadhimag.com/2015/09/01/%E0%B2%8F%E0%B2%A8%E0%B2%BF%E0%B2%A6%E0%B3%81-%E0%B2%95%E0%B2%B3%E0%B2%B8%E0%B2%BE-%E0%B2%AC%E0%B2%82%E0%B2%A1%E0%B3%82%E0%B2%B0%E0%B2%BF-%E0%B2%A8%E0%B2%BE%E0%B2%B2%E0%B2%BE-%E0%B2%B5%E0%B2%BF/

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...