Sunday, May 15, 2011

ಪಲಿತಾಂಶದಲ್ಲಿ ಸರ್ಕಾರಿ ಶಾಲೆಗಳೇಕೆ ಹಿಂದೆ?

ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗಿಂತ ಫಲಿತಾಂಶದಲ್ಲಿ ಯಾಕೆ ಹಿಂದುಳಿದಿವೆ ? "ಖಾಸಗಿ ಶಾಲೇಲಿ ಬುದ್ದಿವಂತರನ್ನೇ ಆಯ್ದುಕೊಂಡು ಪರೀಕ್ಷೆಗೆ ಕೂರಿಸ್ತಾರೆ, ಸರ್ಕಾರಿ ಶಾಲೆ ಅಂದ್ರೆ ಹಾಗಲ್ಲ ನೋಡಿ ಯಂಕ,ನಾಣಿ,ಸೀನಾ ಎಲ್ಲರಿಗೂ ಸೀಟು ಕೊಡ್ಬೇಕು  ಓದಿಸ್ಬೇಕಲ್ವಾ? ಆಯ್ತು ನಿಮ್ಮ ಮಾತು ಒಪ್ಕೊತೀನಿ ಮಕ್ಕಳ ಮಾತು ಹಂಗಿರ್ಲಿ ಸರ್ಕಾರಿ ಶಾಲೆಗೆ ಶಿಕ್ಷಕರಾಗಿ ಆಯ್ಕೆ ಆಗೋರು ಯಾರು ? ಎಲ್ಲರೂ ಪ್ರತಿಭಾವಂತರು, ಡಿಸ್ಟಿಂಕ್ಷನ್ ತಗೊಂಡಿರೋರು ಅಲ್ವಾ ? ಖಾಸಗಿ ಶಾಲೆ ಅಂದ್ರೆ ಅಲ್ಲಿ ಇರೋರು ಬಹುತೇಕ ಸರ್ಕಾರಿ ಕೆಲಸದ ಅವಕಾಶದಿಂದ ರಿಜೆಕ್ಟ್ ಆದೋರು, ಹೊಸದಾಗಿ ಶಿಕ್ಷಣ ಮುಗಿಸಿದವರು ಇತ್ಯಾದಿಗಳು ಹೀಗಿರುವಾಗ ಎಂಥಾ ಮಕ್ಕಳನ್ನಾದರೂ ಬುದ್ದಿವಂತರನ್ನಾಗಿ ಮಾಡೋ ಅವಕಾಶ ಇರುತ್ತಲ್ವಾ? ಅಂದೆ ಎದುರಿಗೆ ಕೂತ ಬಿಇಓ ಮೆತ್ತಗಾದ್ರು.  ನೋಡಿ ಸಾರ್ ಇದು ಆಫ್ ದಿ ರೆಕಾರ್ಡ್ ಹೇಳ್ತಿದಿನಿ ನಮ್ಮ ಶಿಕ್ಷಕರಿಗೆ ಅರ್ಪಣಾ ಮನೋಭಾವ ಇಲ್ಲ ಅದಕ್ಕೆ ಹೀಗೆ ಎಂದು ಅಸಹಾಯಕತೆ ತೋಡಿಕೊಂಡರು. ಇದು ಒಂದು ತಾಲೂಕಿನ ಪರಿಸ್ಥಿತಿ ಅಲ್ಲ ಇಡೀ ರಾಜ್ಯದ ಸ್ಥಿತಿ ! ಒಂದು ಕ್ಷಣ ನೀವೇ ಯೋಚನೆ ಮಾಡಿ ಇವತ್ತು ಸರ್ಕಾರಿ ಶಾಲೆಗಳು ಹೇಗಿವೆ? ಹಿಂದಿನ ಸರ್ಕಾರಿ ವ್ಯವಸ್ಥೆ ಹೇಗಿತ್ತು? ಸರ್ಕಾರಿ ಶಾಲೆಗಳಿಗೆ ಇರುವ ಸವಲತ್ತುಗಳೇನು? ಶಿಕ್ಷಕರ ಅನುಕೂಲತೆಗಳೇನು? ಖಾಸಗಿ ಶಾಲೆಗಳು ಹೇಗಿವೆ? ಅಲ್ಲಿನ ಗುಣಮಟ್ಟ ಏನು? ಪೋಷಕರ ಮನಸ್ತಿತಿ ಯಾಕೆ ಬದಲಾಗುತ್ತಿದೆ? ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಿರುವ ಅನುಕೂಲತೆಗಳಾವುವು? ಗ್ರಾಮೀಣ ಮತ್ತು ನಗರ ಪರಿಸರದ ವಿದ್ಯಾರ್ಥಿಗಳಿಗೆ ಇರುವ ವ್ಯತ್ಯಾಸವೇನು?ಇವೆಲ್ಲಾ ಒಟ್ಟು ಸೇರಿ SSLC/PUCಯಲ್ಲಿ ಸರ್ಕಾರಿ/ಖಾಸಗಿ  ಶಾಲೆಗಳಲ್ಲಿ  ಫಲಿತಾಂಶಗಳ ಮೇಲೆ ಎಂತಹ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದು ಗಹನವಾಗಿ ಚರ್ಚೆಯಾಗ ಬೇಕಿದೆ.

          ಇವತ್ತು ಶಿಕ್ಷಣದ ವ್ಯಾಪಾರೀಕರಣವಾಗುತ್ತಿದೆ, ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಶಾಲೆಗಳೆಂಬ ವ್ಯಾಪಾರದ ಅಡ್ಡೆಗಳು ಹೆಜ್ಜೆಗೊಂದರಂತೆ ತಲೆಯೆತ್ತುತ್ತಿವೆ. ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ಮೀಸಲಿಡುವ ಜೊತೆಗೆ ವಿಶ್ವ ಬ್ಯಾಂಕ್ ಯೋಜನೆಯಿಂದಲೂ ಶಿಕ್ಷಣದ ಸುಧಾರಣೆಗೆ ಮುಂದಾಗಿದೆ. 
ರಾಜ್ಯ ಸರ್ಕಾರದೊಡನೆ ಸೇರಿ 30-40 ಯೋಜನೆಗಳನ್ನು ಅನುಷ್ಟಾನ ಗೊಳಿಸುತ್ತಿದೆ. ಬಹುಶ: ಇವತ್ತಿನ ಸರ್ಕಾರಿ  ಶಿಕ್ಷಣ ಸಕಲ ವ್ಯವಸ್ಥೆಗಳು ಅತ್ಯಾಧುನಿಕವಾಗಿವೆ ಮತ್ತು ಹೆಚ್ಚು ಸೌಲಭ್ಯಗಳಿಂದ ಕೂಡಿದುದಾಗಿದೆ. ಆದರೆ ನಿರೀಕ್ಷಿತ ರೀತಿಯ ಗುಣಾತ್ಮಕ ಫಲಿತಾಂಶವನ್ನು ಕಾಣಲು ಸಾದ್ಯವಾಗದಿರುವುದು ಅತ್ಯಂತ ವಿಷಾಧನೀಯ ಸಂಗತಿ. ಅದು 70-80ರ ದಶಕದ ಸಂಧರ್ಭ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಾತ್ಮಕವಾಗಿ ಮತ್ತು ಶಾಲೆ/ಶಿಕ್ಷಣ/ಗುರುಗಳ ಬಗೆಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳುವಂತಹ  ಪರಿಸ್ತಿತಿ ಇತ್ತು ಆದರೆ ಇವತ್ತೇನಾಗಿದೆ? ಶಾಲೆಗಳು ಅತ್ಯಂತ ಪರಿಪೂರ್ಣವಾದ ಸೌಲಭ್ಯಗಳನ್ನ ಪಡೆದಿವೆ, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ವ್ಯಾಪಕ ಯೋಜನೆಗಳಿವೆ, ಶಿಕ್ಷಕರಿಗೆ ತರಬೇತಿ ಯೋಜನೆಗಳಿವೆ ಆದಾಗ್ಯೂ ಕಲಿಸುವ ಪ್ರಕ್ರಿಯೆ ತೃಪ್ತಿಕರವಾಗಿಲ್ಲ, ಪರಿಣಾಮ ಸರ್ಕಾರಿ ಶಾಲೆಗಳ ಫಲಿತಾಂಶದ ಮೇಲೆ ಆಗುತ್ತಿದೆ. 

           ಹೌದು ಇವತ್ತು ಸರ್ಕಾರಿ ಶಾಲೆಗೆ ಕುಡಿಯುವ ನೀರು ಬಂದಿದೆ, ಸುಸಜ್ಜಿತ ಕಟ್ಟಡ ಬಂದಿದೆ, ಬಿಸಿಊಟ, ಸಮವಸ್ತ್ರ, ಉಚಿತ ಪಠ್ಯ ಪುಸ್ತಕ, ಉಚಿತ ಶೈಕ್ಷಣಿಕ ಪ್ರವಾಸ, ಪಾಠೋಪಕರಣ, ಪೀಠೋಪಕರಣ, ಕ್ರೀಡೋಪಕರಣ, ವಿಜ್ಞಾನದ ಪ್ರಯೋಗಕ್ಕೆ ಪ್ರೋತ್ಸಾಹಧನ, ಸೈಕಲ್ಲು, ಸೆಮಿಸ್ಟರ್ ಪದ್ದತಿಯ ಪರೀಕ್ಷೆಗಳು, ಬಯೋಮೆಟ್ರಿಕ್ ಪದ್ದತಿ ಇತ್ಯಾದಿ ಇತ್ಯಾದಿ ಜೊತೆಗೆ ಬುದ್ದಿವಂತ ಶಿಕ್ಷಕರುಗಳು, ಕೊರತೆಯಾಗದಂತೆ ಕಾಯ್ದಿರಿಸಿದ ನಿಧಿ. ಅದೇ ಖಾಸಗಿ ಶಾಲೆಗಳಲ್ಲಿ ಉತ್ತಮ ದರ್ಜೆಯ (ಉತ್ತಮ ಅಂಕ ಪಡೆದವರು) ವಿದ್ಯಾರ್ಥಿಗಳು! ಕಡಿಮೆ ಅಂಕ ಪಡೆದ/ಹೊಸದಾಗಿ ಶಿಕ್ಷಣ ಪೂರೈಸಿದ/ಅರ್ಹ ಶಿಕ್ಷಣ ಪಡೆಯದ ಅಂದರೆ ಸಾಧಾರಣ ಪದವಿ ಪಡೆದ ಶಿಕ್ಷಕರು; ದುಬಾರಿ ಡೊನೇಷನ್, ಫೀಸು, ಪುಸ್ತಕ,ಸಮವಸ್ತ್ರ ಇವೆ. ಇಲ್ಲಿ ಶಿಕ್ಷಕರನ್ನ ಕತ್ತೆಗಳಂತೆ ದುಡಿಸಿಕೊಳ್ಳಲಾಗುತ್ತದೆ, ನಿಗದಿತ ಅವಧಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗುತ್ತದೆ, ಮ್ಯಾನೇಜ್ ಮೆಂಟ್ ಆಶೋತ್ತರಗಳಿಗೆ ಪೂರಕವಾಗಿ ನಡೆಯುವ ಅನಿವಾರ್ಯತೆ  ಇರುತ್ತದೆ. ಮಕ್ಕಳ ಮೇಲೆ ಮತ್ತು ಪಾಲಕರ ಮೇಲೆ ಒತ್ತಡ ಹಾಕಲಾಗುತ್ತದೆ.ಹೀಗಾಗಿ ಖಾಸಗಿ ಶಾಲೆಗಳು ನಿರಾತಂಕವಾಗಿ ಫಲಿತಾಂಶದಲ್ಲಿ ಮುನ್ನೆಡೆ ಪಡೆಯುತ್ತವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲ, ನಿಯಮಗಳು, ಹಣಕಾಸು, ಸೌಕರ್ಯಗಳು ಇದ್ದಾಗ್ಯೂ ಅವುಗಳನ್ನು ನಿರ್ವಹಿಸುವ ಮತ್ತು ನಿಬಾಯಿಸುವವರ ಹೊಣೆಗೇಡಿತನದಿಂದಾಗಿ ಪಲಿತಾಂಶದಲ್ಲಿ ಹಿಂದೆ ಬೀಳುವಂತಾಗಿದೆ. 

       ಇನ್ನು ಪೋಷಕರು, ತಮ್ಮ ಮಕ್ಕಳನ್ನು ಶತಾಯ ಗತಾಯ ಇಂಜಿನಿಯರುಗಳು , ಡಾಕ್ಟರುಗಳನ್ನಾಗಿ ಮಾಡಬೇಕು ಎಂಬ ಹಪಾಹಪಿಗೆ ಬಿದ್ದು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಸೆಂಟ್ರಲ್ ಸಿಲಬಸ್ ಮತ್ತು ಇಂಗ್ಲೀಷ್ ವ್ಯಾಮೋಹ ಅವರನ್ನ ಹಗಲು ಕನಸು ಕಾಣುವಂತೆ ಮಾಡಿದೆ. ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನ ಲೆಕ್ಕಿಸದೇ ಒತ್ತಡದ ಶಿಕ್ಷಣ ನೀಡಲು ರೆಡಿಯಾಗಿ ಬಿಡುತ್ತಾರೆ. ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆ/ಕಾಲೇಜು ಗಳಿಗೆ ಸೇರಿಸುತ್ತಾರೆ.ಸದರಿ ಶಾಲೆ/ಕಾಲೇಜುಗಳಿಗೆ ಸೇರಿಸುವಾಗಲೇ ಮನೆ ಪಾಠಕ್ಕೆ ಅಂತ ಸಾವಿರಾರು ರೂಪಾಯಿ ಶುಲ್ಕವನ್ನು ಪಡೆಯಲಾಗುತ್ತದೆ. ಒಂದಕ್ಕೆ ಹತ್ತು ಪಟ್ಟು ಖರ್ಚಾದರೂ ಪರವಾಗಿಲ್ಲ ಎಂದು ಭಾವಿಸುವ ಪೋಷಕರು ಒಡವೆ-ಅಸ್ತಿ ಮಾರಿ, ತಾವು ಗಳಿಸಿಟ್ಟದ್ದನ್ನು ತಂದು ಖಾಸಗಿ ಶಿಕ್ಷಣಕ್ಕೆ ಸುರಿಯುತ್ತಾರೆ.ಇತರೆ ಪೋಷಕರಿರಲಿ ಶಿಕ್ಷಣ ಇಲಾಖೆಯ ಶಿಕ್ಷಕರುಗಳು/ಉಪನ್ಯಾಸಕರುಗಳು/ಅಧಿಕಾರಿಗಳು ಸಹಾ ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿಸಲು ಮುಗಿ ಬೀಳುತ್ತಾರೆ. ಪರಿಣಾಮ ಇವತ್ತು ಕಳೆದ ಒಂದು ದಶಕದಿಂದ ಸಾವಿರಾರು   ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. 

       ಗ್ರಾಮೀಣ ಪರಿಸರದ ಮಕ್ಕಳಿಗೆ ಇವತ್ತಿಗೂ ನಗರ ಪ್ರದೇಶದ ಮಕ್ಕಳಂತೆ ಸಮಾನವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೊದಲ ಕಾರಣ ಶಿಕ್ಷಕರು ಮತ್ತು ಅಧಿಕಾರಿಗಳೇ ಆಗಿದ್ದಾರೆ. ರಾಜ್ಯದ ಪ್ರಾಥಮಿಕ/ಮಾಧ್ಯಮಿಕ ಶಿಕ್ಷಣದಲ್ಲಿ, ನಲಿಕಲಿ ಎಂಬ ಪ್ಲಾಪ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳ ಹಿಡಿಯುವಂತೆ ಮಾಡಲಾಗಿದೆ. ಪ್ರೌಢಶಾಲೆ/ಕಾಲೇಜುಗಳಲ್ಲಿ ಶಿಕ್ಷಕ/ಉಪನ್ಯಾಸಕರ ಇಚ್ಚಾಶಕ್ತಿ ಕೊರತೆಯಿಂದಾಗಿ ನಿರೀಕ್ಷಿತ ಪಲಿತಾಂಶ ದಕ್ಕುತ್ತಿಲ್ಲ. ಪ್ರತೀ ವಿದ್ಯಾರ್ಥಿಗೂ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ. ಹಳ್ಳಿಯ ಮಕ್ಕಳು ಮನೆಕೆಲಸದ ಜೊತೆಗೆ ಹಾದಿ ಸವೆಸಿ ಓದುತ್ತಿದ್ದಾರಾದರು ಗುಣಾತ್ಮಕ ಪಲಿತಾಂಶವಿಲ್ಲ. ಈಗ ರಾಜ್ಯಕ್ಕೆ ಪ್ರಥಮ, ದ್ವಿತಿಯ, ತೃತೀಯ ಸ್ಥಾನ ಬರುತ್ತಿರುವವರಾದರೂ ಯಾರು ನಗರ ಪ್ರದೇಶದ ನೌಕರರು/ಅಧಿಕಾರಿಗಳ ಮಕ್ಕಳು, ಇವರಿಗೆ ಎಲ್ಲಾ ಸೌಕರ್ಯಗಳು ಇರುತ್ತವೆ ನಮ್ಮ ಗ್ರಾಮೀಣ ಪರಿಸರದ ಮಕ್ಕಳಿಗೆ ಅಂತಹ ಸವಲತ್ತಿಲ್ಲ ಹಾಗಾಗಿ ಅವರ ಸಾಧನೆಗಳು ಗ್ರಾಮೀಣ ಮಕ್ಕಳ ಸಾಧನೆಯ ಮುಂದೆ ನಗಣ್ಯ ಹೌದಲ್ಲವೇ? ಸರ್ಕಾರ ಸಂಪನ್ಮೂಲ/ನಿರ್ವಹಣೆ ಯನ್ನು ಸರಿಯಾಗಿ ನಿರ್ವಹಿದ್ದೇ ಆದಲ್ಲಿ ಸರ್ಕಾರಿ ಶಾಲೆಗಳು ಮುಂದೆ ಬರುವಲ್ಲಿ ಯಾವುದೇ ಸಂಶಯವಿಲ್ಲ, ಮೊದಲೇ ಹೇಳಿದಂತೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮುಖ್ಯವಾಗಿ ಅರ್ಪಣಾ ಮನೋಭಾವ ಬರಬೇಕು ಅಲ್ಲವೇ??

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...