Thursday, July 25, 2019

‘ಪತ್ರಕರ್ತ’ ಆತ್ಮ ವಿಮರ್ಶೆಗೆ ಸಕಾಲ!


‘ಪತ್ರಕರ್ತ’ ಎಂದರೆ ಯಾರು? ವರ್ತಮಾನದ ಸೂಕ್ಷ್ಮಗ್ರಾಹಿ?, ಸಂವೇದನಾಶೀಲ, ವಿಚಾರವಂತ?, ಉತ್ತಮ ಅಭಿವ್ಯಕ್ತಿಕಾರ?, ಪಕ್ಷಾತೀತ ಧೋರಣೆಯವನು?, ಸಾಮಾಜಿಕ ಕಳಕಳಿಯುಳ್ಳವನು?, ಜಾತೀಯ ಧೋರಣೆ ಇಲ್ಲದವನು?, ಅಸಹಾಯಕರ ಖಡಕ್ ಪ್ರತಿನಿಧಿ?, ಸಮಾಜದ ಮಾದರಿ ವ್ಯಕ್ತಿ? ಊಹುಂ ಸುತಾರಾಂ ಇದ್ಯಾವುದು ಅಲ್ಲವೇ ಅಲ್ಲ ಎಂಬ ಧುರಿತ ಕಾಲಘಟ್ಟದಲ್ಲಿದ್ದೇವೆ.

ಒಟ್ಟು ವ್ಯವಸ್ಥೆಯಲ್ಲಿ ಪತ್ರಕರ್ತ ಅಭಿವ್ಯಕ್ತಿಗೆ ಸ್ವಯಂ ಕಡಿವಾಣ ಹಾಕಿಕೊಳ್ಳದೇ ಕೊಂಚ ಎಡವಿದರೂ ‘ಸಿಟಿಜನ್ ಜರ್ನಲಿಸಂ’ನ ಈ ಹೊತ್ತಿನಲ್ಲಿ ಪ್ರಶ್ನಾತೀತರಾಗಿ ಉಳಿಯುವುದು ಸಾಧ್ಯವೇ ಇಲ್ಲ. ಪ್ರತಿ ಸುದ್ದಿಯ ಆಚೀಚೆಗಳನ್ನು ಭೂತಗನ್ನಡಿ ಹಿಡಿದು ಹರಾಜು ಹಾಕಲು ಸಾಮಾಜಿಕ ಜಾಲತಾಣದ ಸೇನಾನಿಗಳು ಸಜ್ಜಾಗಿರುತ್ತಾರೆ. ಹಾಗಾಗಿ ಪತ್ರಕರ್ತನ ಪ್ರತೀ ಹೆಜ್ಜೆಯಲ್ಲೂ ಮುಳ್ಳಿನ ಹಾದಿಯದ್ದೇ ಸವಾಲು!.


ಆಧುನೀಕತೆಗೆ ಮುಂಚೆ ಸಾರ್ವತ್ರಿಕ ಸಂವಹನಕ್ಕಿದ್ದ ಮುಕ್ತ ಆಯ್ಕೆ ಮುದ್ರಣ ಮಾಧ್ಯಮ ಒಂದೇ. ಅವತ್ತಿಗೆ ಸಾಮಾಜಿಕ ಸಂಘಟನೆಗೆ, ಜಾಗೃತಿಗೆ ಸ್ವಾತಂತ್ರ್ಯದ ಕಿಚ್ಚಿಗೆ ಗಾಂಧಿ, ಅಂಬೇಡ್ಕರ್, ಬಾಲ ಗಂಗಾಧರ ತಿಲಕ್  ಆಯ್ಕೆ ಮಾಡಿಕೊಂಡಿದ್ದು ಮಾಧ್ಯಮಗಳನ್ನೆ. ಅತ್ಯಂತ ಯಶಸ್ವಿಯಾಗಿ ಪತ್ರಕರ್ತರಾಗಿದ್ದ ಅವರು ಸಾರ್ವಜನಿಕ ವ್ಯವಸ್ಥೆಯಲ್ಲಿ ದೊಡ್ಡ ಆಂಧೋಲನಗಳನ್ನೆ ಮಾಡಿದರು. ಜನರಿಗೆ ಹೇಳ ಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳಿದರು, ಜನರನ್ನು ಚಿಂತಿಸುವಂತೆ ಮಾಡಿದರು. ಪತ್ರಕರ್ತರೆಂದರೆ ‘ಬುದ್ದಿಜೀವಿ’ ಗಳು, ದಮನಿತರ ಧ್ವನಿ ಎಂಬ ಭರವಸೆ ತುಂಬಿದರು. ಈ ಹೊತ್ತಿಗೂ ಭಾರತ ದೇಶ ಕಂಡ ಗ್ರೇಟ್ ಜರ್ನಲಿಸ್ಟ್ಸ್ ಎಂದರೆ ಅದು ಮಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ಮಾತ್ರ.

ಈಗ ಕಾಲ ಬದಲಾಗಿದೆ, ಆಧುನಿಕತೆ ಬಂದಿದೆ. ಮುದ್ರಣ ಮಾಧ್ಯಮವನ್ನು ಮೀರಿಸುವಂತೆ ಟಿವಿ ವಾಹಿನಿಗಳಿವೆ, ಅಂತರ್ಜಾಲ ತಾಣಗಳಿವೆ, ಎಲ್ಲವನ್ನು ಮೀರಿಸುವಂತೆ ನವ ಮಾಧ್ಯಮ ‘ಡಿಜಿಟಲ್ ಮೀಡಿಯಾ’ ಇದೆ. ಮುದ್ರಣ, ದೃಶ್ಯ, ಧ್ವನಿ ಮಾಧ್ಯಮಗಳ ಉಳಿವಿಗೂ ಡಿಜಿಟಲ್ ಮೀಡಿಯಾ ಮೊರೆ ಹೋಗಲಾಗುತ್ತಿದೆ. ಸಧ್ಯದ ಟ್ರೆಂಡ್ ಅದೇ ಆಗಿದೆ ಡಿಜಿಟಲ್ ಮೀಡಿಯಾ.


ವರ್ತಮಾನದ ವೈರುಧ್ಯ ಸಂದರ್ಭದಲ್ಲಿ ಮಾಧ್ಯಮಗಳೆಲ್ಲ ಬಂಡವಾಳಶಾಹಿಗಳ ಪಾಲಾಗಿರುವುದರಿಂದ ಬಯಾಸ್ಡ್ ಆಗಿಯೇ ಇವೆ. ಇಂತಹ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಕೂಡ ಶುದ್ಧತೆಯನ್ನು ಕಾಣುವುದು ಸಾಧ್ಯವಿಲ್ಲ. ಆದರೂ ಲಭ್ಯವಾಗುವ ಅಷ್ಟಿಷ್ಟು ಸ್ಪೇಸ್ ನಲ್ಲಿಯೇ ನೈತಿಕತೆಯನ್ನು ಉಳಿಸಿಕೊಂಡಿರುವುದನ್ನು ತಳ್ಳಿಹಾಕುವಂತಿಲ್ಲ. ಪರ್ಯಾಯ ಸಾಧ್ಯಗಳನ್ನು ಕಂಡು ಕೊಳ್ಳಬೇಕಾದ ಪತ್ರಕರ್ತ ಪಾಚಿಗಟ್ಟಿದ ಹಳೆ ವ್ಯವಸ್ಥೆಯಲ್ಲಿ ಉಳಿದು ಬದುಕಿಗಾಗಿ ಬಂಡವಾಳಶಾಹಿಗಳ, ರಾಜಕಾರಣಿಗಳ ಗುಲಾಮನಾಗಿ ಉಳಿಯುತ್ತಿರುವುದು ವಿಷಾಧನೀಯ ಸಂಗತಿ.

ಮಾಧ್ಯಮ ಲೋಕಕ್ಕೆ ವಿಚಾರವಂತರು, ಸಾಮಾಜಿಕ ಕಳಕಳಿಯುಳ್ಳವರು ಬರುತ್ತಾರೆ ಎಂಬ ನಿರೀಕ್ಷೆಗಳೆಲ್ಲ ಈಗ ಹುಸಿಯಾಗಿದೆ. ತಲೆ ಹಿಡುಕರು, ದಗಾಕೋರು, ವಂಚಕರು, ಅತ್ಯಾಚಾರಿಗಳು, ಜಾತಿವಾದಿಗಳು, ಬಡ್ಡಿ ಕ್ರಿಮಿಗಳು, ರಾಜಕೀಯ ಪುಡಾರಿಗಳು ಹೀಗೆ ಅನೇಕರು ಮೀಡಿಯಾದ ಮಾಲೀಕರುಗಳಾಗಿ, ಪತ್ರಕರ್ತರೆಂಬ ಹಣೆಪಟ್ಟಿಯಲ್ಲಿ ಪ್ರತಿಷ್ಠಾಪನೆಯಾಗಿದ್ದಾರೆ. ಹೀಗಾಗಿ ಮೀಡಿಯಾ ಎಂದರೆ ‘ಭಯೋತ್ಪಾದನಾ ಕೇಂದ್ರ’, ಪತ್ರಕರ್ತರೆಂದರೆ ಭಯೋತ್ಪಾದಕರು ಎಂಬುದು ಜನಜನಿತವಾಗಿದೆ. ಇಂತಹ ಸಂದರ್ಭದಲ್ಲಿ ಮೀಡಿಯಾ ಹೌಸ್ ಗಳಲ್ಲಿ ಸ್ವಯಂ ನಿಯಂತ್ರಣ ನಿರೀಕ್ಷಿಸುವುದು ಸಾಧ್ಯವೇ? ‘ಪತ್ರಕರ್ತ’ ವೃತ್ತಿಯ ಅಧ:ಪತನ ಆಗಿದೆ. ಕೊಳ್ಳುವ ಸರಕಾಗಿ ಪತ್ರಕರ್ತ ಮತ್ತು ಆತನ ಸುದ್ದಿಗಳು ಬದಲಾಗಿವೆ. ಅಂದರೆ ಪತ್ರಕರ್ತ ಆಗಿ ಸೇರುವವನಿಗೆ ಶಿಕ್ಷಣದ ಅರ್ಹತೆಗಿಂತ ಸಾರ್ವತ್ರಿಕ ಮಾಧ್ಯಮ ನೀತಿ ಸಂಹಿತೆಯ ಮಾರ್ಗಸೂಚಿ ಬೇಕಿದೆ. ಅದನ್ನು ರೂಪಿಸುವವರಾರು? ರಾಜ್ಯಾಂಗ?, ಕಾರ್ಯಾಂಗ?, ನ್ಯಾಯಾಂಗ? . ದೇಶದ ಮುಖ್ಯ ನ್ಯಾಯಾಧೀಶರನ್ನು ಆಯ್ಕೆ ಮಾಡುವಲ್ಲಿ ಅನುಸರಿಸುವ ಕ್ರಮಗಳನ್ನೇ ಮಾಧ್ಯಮಗಳಿಗೆ, ಪತ್ರಕರ್ತರಿಗೆ ರೂಪಿಸ ಬೇಕಾದ ಅಗತ್ಯತೆ ಇದೆ. ಮಾಧ್ಯಮದ ಕೊಳೆ, ಕೂಳೆಗಳನ್ನು ಒರೆಸಿ ಹಾಕಬೇಕಾದ ತುರ್ತು ಇದೆ. ಪತ್ರಕರ್ತ ವೃತ್ತಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳ ಬೇಕಾಗಿದೆ. ಅಂತಹ ಸುದಿನವನ್ನು ಎದುರು ನೋಡುತ್ತಾ, ಎಲ್ಲಾ ಪತ್ರಕರ್ತರು ಆತ್ಮ ವಿಮರ್ಶೆ ಮಾಡಿಕೊಂಡು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಿ, ಮನುಷ್ಯರಾಗಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...