Sunday, March 30, 2014

ಯುವಜನರ ಮತ ದೇಶಕ್ಕೆ ಹಿತ!

ಆರೋಗ್ಯಕರ ಭಾರತಕ್ಕೆ ಯುವ ಜನತೆ ಎಂಬ ಸಂಗತಿ ಸದ್ಯದ ಸ್ಥಿತಿಯಲ್ಲಿ ಬಹು ಮುಖ್ಯವಾದುದು. ವಿದ್ಯಾವಂತ ಯುವಜನರಲ್ಲಿ ಪ್ರಜ್ಞಾವಂತಿಕೆಯ ಕೊರತೆಯಿಂದ ದೇಶದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಪೂರಕವಾದ ಸಂಗತಿಗಳು ಜರುಗುತ್ತಿಲ್ಲ. ಯುವಜನರ ಹತಾಶ ಮನೋಸ್ತಿತಿ ದೇಶದ ಭದ್ರತೆಗೆ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗಿದೆ ಎಂಬುದು ಸಧ್ಯದ ವಿಷಾಧನೀಯ ಸಂಗತಿ. ಶಿಕ್ಷಣ ಮಾತ್ರ ನಮ್ಮ ಬದುಕಿನ ಭಾಗವಲ್ಲ ಬದಲಿಗೆ ಪರಿಸರದ ಸಂಗತಿಗಳು, ನೈತಿಕತೆಯ ಅಂಶಗಳು ಮತ್ತು ಬದ್ದತೆ ಇಂದು ಯುವಜನರಿಗೆ ತೀರಾ ಅತ್ಯಗತ್ಯವಾಗಿ ಬೇಕಾಗಿದೆ.
           ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಎಷ್ಟು ಜನರಿಗಿದೆ? ಸುಮಾರು 130ದೇಶಗಳಿಗೆ ಮಾದರಿಯಾದ ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಜಗತ್ತಿಗೆ ಮಾದರಿ. ಇಲ್ಲಿ ವಿವಿಧ ಸಮುದಾಯಗಳ ವಿವಿಧ ಧಾರ್ಮಿಕ ಪಂಥಗಳ ಜನರಿದ್ದಾರೆ ಆದಾಗ್ಯೂ ಇದನ್ನೆಲ್ಲ ಸರಿದೂಗಿಸಿಕೊಂಡು ಹೋಗಬೇಕಾದರೆ ಉತ್ತಮ ಪ್ರಜಾಪ್ರತಿನಿಧಿಗಳು ನಮಗೆ ಬೇಕು ಮತ್ತು ಅವರು ಪ್ರಾಮಾಣಿಕವಾಗಿ ಜನಸೇವೆ ಮಾಡುವವರಾಗಿರಬೇಕು ಎಂದರೆ ಅದಕ್ಕೆ ಚುನಾವಣೆಯಲ್ಲಿ ಮತಹಾಕುವುದು ಮುಖ್ಯವಾಗುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಉದ್ಯೋಗ-ಆರ್ಥಿಕತೆಯ ಕಡೆಗೆ ಗಮನ ಕೊಟ್ಟಷ್ಟು ಪ್ರಜಾತಂತ್ರ ವ್ಯವಸ್ಥೆಯನ್ನು ರೂಪಿಸುವ ಚುನಾವಣೆಗೆ ಮಹತ್ವ ಕೊಟ್ಟದ್ದು ಕಡಿಮೆಯೇ. ಚುನಾವಣಾ ರಜೆ ಬಂದರೆ ಪಿಕ್ನಿಕ್, ಟ್ರಿಪ್, ಆಟ, ನೋಟ, ಮೋಜು ಇತ್ಯಾದಿಗಳಲ್ಲಿ ತೊಡಗಿ ಮತಹಾಕುವುದನ್ನು ಮರೆಯುವವರೆ ಹೆಚ್ಚು. 
        ಅಷ್ಠೆ ಏಕೆ ಎಷ್ಟೋ ಮಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ವಿವಿಧ ಹಂತಗಳು ಮತ್ತು ಅಧಿಕಾರಸ್ಥರ ಜವಾಬ್ದಾರಿಗಳು ಏನೆಂದು ಅರಿವು ಇರೊಲ್ಲ, ಸ್ಥಳೀಯ ಸರ್ಕಾರ ಎಂದರೆ ಏನು? ಅಲ್ಲಿರುವವರ ಜವಾಬ್ದಾರಿಗಳೇನು? ಎಂಎಲ್ ಎ ವ್ಯಾಪ್ತಿ ಏನು, ಎಂಪಿ ಏನು ಕೆಲಸ ಮಾಡುತ್ತಾನೆ, ಪ್ರಧಾನಿಯನ್ನು ಆರಿಸುವವರು ಯಾರು ಇತ್ಯಾದಿ ಸಾಮಾನ್ಯ ಸಂಗತಿಗಳು ತಿಳಿಯದ ವ್ಯಕ್ತಿ ಮತದಾನ ಮಾಡಲು ಯೋಗ್ಯನಾಗಿರುವುದಿಲ್ಲ, ಆಗ ಅಧಿಕಾರ ಹಿಡಿಯ ಬಯಸುವ ರಾಜಕಾರಣಿಗಳು ತಮಗೆ ಬೇಕಾದವರನ್ನು ಓಲೈಸುತ್ತಾ ಆಮಿಷಗಳನ್ನು ಒಡ್ಡುತ್ತಾ, ಜಾತೀ ರಾಜಕಾರಣ, ಕೋಮುರಾಜಕಾರಣ ಮತ್ತು ತೋಳ್ಬಲದ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದು ಬಿಡುತ್ತಾರೆ. ಮೈಮರೆತು ಕುಳಿತ ಜನರನ್ನು ತಮಗೆ ಬೇಕಾದಂತೆ ಆಳುತ್ತಾರೆ, ಭ್ರಷ್ಟಾಚಾರ ತಾಂಡವವಾಡುತ್ತದೆ, ಸಾಮಾನ್ಯ ಜನ ಅಸಹಾಯಕತೆಯ ಬದುಕನ್ನು ಸವೆಸುತ್ತಾರೆ, ಸಮಸ್ಯೆಗೆ ಪರಿಹಾರವಿಲ್ಲ ಎಂದು ಕುಳಿತು ಬಿಡುತ್ತಾರೆ. ಇಂತಹ ಪರಿಸ್ಥಿತಿ ಬೇಕಾ? 

       ನೋಡಿ ಭಾರತದ ಚುನಾವಣೆ ವಿಶ್ವದಲ್ಲೆ ಅತೀ ದೊಡ್ಡ ಪ್ರಮಾಣದ್ದು! ಸಂಖ್ಯೆ ವಿಸ್ತಾರ ಮತ್ತು ಪ್ರಮಾಣ ಗಮನಿಸಿದಾಗ ಇದೊಂದು ವಿಸ್ಮಯ ಎನಿಸಿ ಬಿಡುತ್ತದೆ. ಯೂರೋಪ್, ಅಮೇರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಚುನಾವಣೆಯನ್ನು ಒಟ್ಟಾಗಿ ಸೇರಿಸಿದರೂ ಭಾರತದ ಒಂದು ಚುನಾವಣೆಯನ್ನು ಮೀರುವುದು ಅಸಾಧ್ಯ. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯ ಅಂಕಿ ಅಂಶಗಳನ್ನು ಗಮನಿಸಿದಾಗ ಅದರ ಬೃಹದಾಕಾರ ತಿಳಿಯುತ್ತದೆ. ದೇಶದಾಧ್ಯಂತ ಸುಮಾರು 829000 ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಮತಪಟ್ಟಿಯಲ್ಲಿ 714ದಶಲಕ್ಷ ಮತದಾರರ ಹೆಸರು ದಾಖಲಾಗಿತ್ತು ಮತ್ತು ಅಂದಿನ ಚುನಾವಣೆಗೆ ಮೀಸಲಿಟ್ಟ ಹಣ ರೂ.1120ಕೋಟಿ. ಈ ಮೊತ್ತವನ್ನು ದೇಶದ ಪ್ರತಿಯೊಬ್ಬ ಪ್ರಜೆ ತಾವು ಪಾವತಿಸುವ ತೆರಿಗೆ ಹಣದಿಂದ ಭರಿಸುತ್ತಾರೆ ಎಂಬುದು ಇಲ್ಲಿ ಗಮನಾರ್ಹ. 

       ಭಾರತ ಸಂವಿಧಾನದ 15ನೇ ಭಾಗದಲ್ಲಿರುವ 324 ರಿಂದ 320ರ ವರೆಗಿನ ವಿಧಿಗಳು ಚುನಾವಣಾ ಆಯೋಗದ ಸಂರಚನೆ, ಅಧಿಕಾರ, ಕರ್ತವ್ಯ ಇತ್ಯಾದಿ ವಿಷಯಗಳನ್ನು ಒಳಗೊಂಡಿವೆ. ಜನವರಿ 25, 1950ರಂದು ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಇನ್ನು ಮತದಾನ ವಿಚಾರ, ಪ್ರಜಾಪ್ರಭುತ್ವ, ಚುನಾವಣೆ ಮತ್ತು ಮತದಾನ ನಿಕಟವಾದ ಸಂಪರ್ಕ ಹೊಂದಿರುವ ತ್ರಿಕೋನ ವ್ಯವಸ್ಥೆ. ಒಂದಿಲ್ಲದೇ ಮತ್ತೊಂದು ಇರಲು ಸಾಧ್ಯವಿಲ್ಲ. ಮತದಾನ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ, ಹಾಗೆ ಆಯ್ಕೆಯಾದ ಪ್ರಜಾಪ್ರತಿನಿಧಿಗಳು ಈ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತಾರೆ. ಆದ್ದರಿಂದ ಮತದಾನ ಮಾಡುವುದು ಕಡ್ಡಾಯ ಎಂಬುದನ್ನು ಅರಿಯಬೇಕು. ಆದರೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯವಲ್ಲ. ಒಂದು ವೇಳೆ ನಾಗರಿಕರು ತಮ್ಮ ಮತ ಚಲಾಯಿಸದಿದ್ದರೂ ಅವರಿಗೆ ಯಾವುದೇ ಶಿಕ್ಷೆ ಇಲ್ಲ, ಈ ಸಲ ಮತವನ್ನು ಯಾವುದೇ ಅಭ್ಯರ್ಥಿಗೆ ಚಲಾಯಿಸದೇ ತಿರಸ್ಕರಿಸುವ ಅವಕಾಶವನ್ನು ನೀಡಲಾಗುತ್ತಿದೆ. ಆದರೆ ಪ್ರಜಾತಂತ್ರ ಮಾದರಿ ಆಡಳಿತವನ್ನು ಆಯ್ಕೆ ಮಾಡಿಕೊಂಡಿರುವ ನಾವು ಖಂಡಿತವಾಗಿಯೂ ಮತದಾನದಲ್ಲಿ ಭಾಗವಹಿಸಬೇಕು. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಹಕ್ಕುಗಳಲ್ಲಿ ಮತದಾನವೂ ಒಂದು ಆ ಹಕ್ಕನ್ನು ಚಲಾಯಿಸಿದಾಗ ಮಾತ್ರ ಪ್ರಜಾತಂತ್ರಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಇರುತ್ತದಲ್ಲವೇ?

           ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಲು ಯುವ ಜನರು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಯೋಗ್ಯತೆ, ಕೆಲಸ ಮಾಡುವ ಸಾಮರ್ಥ್ಯ ಹಾಗೂ ಪ್ರಾಮಾಣಿಕತನಗಳು ಆಯ್ಕೆಗೆ ಮಾನದಂಡ ವಾಗಬಹುದು. ಅಭ್ಯರ್ಥಿಗಳ ಆಮಿಷಗಳಿಗೆ ಬಲಿಯಾಗಿ ಕುರಿಗಳಾಗದೇ ಅರಿವಿನ ಪ್ರಜ್ಞೆ ಬೆಳೆಸಿಕೊಳ್ಳಿ, ಚುನಾವಣೆಗಳೆಡೆಗೆ ಇರುವ ಅಸಡ್ಡೆಯನ್ನು ಬಿಟ್ಟು ಜಾಗೃತರಾಗಿ. ನಿಮ್ಮ ಹಿರಿಯರು ಯಾವುದೋ ಆಸೆ ಆಮಿಷಕ್ಕೆ ಬಲಿಯಾಗಿ, ಕಟ್ಟುಬಿದ್ದು ಅನುಸರಿಸುವ ಮಾರ್ಗಗಳ ಕುರಿತು ಅವರನ್ನು ಜಾಗೃತರನ್ನಾಗಿ ಮಾಡಿ ಯುವ ಜನರ ಮತ ದೇಶಕ್ಕೆ ಹಿತ ಎಂಬುದನ್ನು ಮರೆಯದಿರಿ.

Sunday, March 23, 2014

ಮೌಡ್ಯ ಮತ್ತು ವಾಸ್ತವ!


ಲೇಶಿಯಾದ ನಾಗರಿಕ ಸೇವಾ ವಿಮಾನ ಎಂ ಹೆಚ್ 307 ಕಣ್ಮರೆಯಾಗಿ 16ದಿನಗಳಾಗುತ್ತಿವೆ. ಆಧುನಿಕತೆ ತಂತ್ರಜ್ಞಾನ ಮುಂದುವರೆದಿದ್ದರೂ ಸಹಾ ವಿಮಾನದ ಸುಳಿವನ್ನು ಪತ್ತೆ ಹಚ್ಚುವಲ್ಲಿ ತಂತ್ರಜ್ಞರು ವಿಫಲರಾಗಿದ್ದಾರೆ. ಬರೀ ಊಹಾಪೋಹಗಳ ಕಂತೆಯಲ್ಲೆ ದಿನಗಳನ್ನು ತಳ್ಳಲಾಗುತ್ತಿದೆ. ಸಂಬಂಧಿಕರನ್ನು ಕಳೆದುಕೊಂಡ ಬಂಧುಗಳು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ. ಐವರು ಭಾರತೀಯರು ಸಹಾ ಸದರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ದುಖಕರ ಸಂಗತಿ. ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳು ಸಹಾ ವಿಮಾನ ಪತ್ತೆಗೆ ಸಹಾಯ ಹಸ್ತ ಚಾಚಿವೆ, ಕೋಟ್ಯಾಂತರ ರೂಪಾಯಿಗಳ ವೆಚ್ಚವಾಗುತ್ತಿದೆ ಆದರೆ ಇನ್ನು ಸುಳಿವು ಸಿಗದಿರುವುದು ಮತ್ತು ವಿಮಾನ ನಾಪತ್ತೆ ಪ್ರಕರಣ ನಿಗೂಢವಾಗುತ್ತಿರುವುದು ವಿಷಾಧನೀಯ ಸಂಗತಿ. 

        ವಿಮಾನ ನಾಪತ್ತೆ ಕುರಿತಂತೆ ಸ್ವತ: ಮಲೇಶಿಯಾ ಸರ್ಕಾರವೇ ಸ್ಪಷ್ಟ ನಿಲುವುಗಳನ್ನು ಹೊಂದದೆ ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿರುವುದು ಆ ದೇಶದ ಹೊಣೆಗೇಡಿತನವನ್ನ ಪ್ರದರ್ಶನಕ್ಕಿಟ್ಟಂತಿದೆ. ಇಷ್ಟೆಲ್ಲಾ ತಂತ್ರಜ್ಞಾನ ಅಭಿವೃದ್ದಿ ಹೊಂದಿದ್ದರೂ ಸಹಾ ವಿಮಾನವೊಂದನ್ನು ಪತ್ತೆ ಹಚ್ಚಲಾಗಿಲ್ಲ ಎಂಬುದು ವಿಪರ್ಯಾಸವೇ ಸರಿ. ಮಲೇಶಿಯಾದಲ್ಲೂ ಮೌಢ್ಯವೇ ಹೆಚ್ಚಿರುವುದರಿಂದ ಅಲ್ಲಿ ಗಂಭೀರ ಕ್ರಮವನ್ನು ವಾಸ್ತವ ನೆಲೆಗಟ್ಟಿನಲ್ಲಿ ಕೈಗೊಳ್ಳದೇ ನಂಬಿಕೆಗಳ ಆಚರಣೆಗೆ ಮೊರೆ ಹೋಗಿದ್ದಾರೆ ಎಂಬ ಸಂಗತಿ ಕೇಳಿದ್ದೇನೆ. ಇದು ಅತ್ಯಂತ ದೊಡ್ಡ ಮೂರ್ಖತನವೇ ಸರಿ. 

       ಇರಲಿ ಭಾರತದಲ್ಲಿ , ಮಲೇಶಿಯಾ ನಾಗರಿಕ ವಿಮಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂತಹ ಕ್ರಮವಾಗುತ್ತಿದೆ ಎಂದು ನೋಡುವುದಾದರೆ, ಭಾರತ ಸರ್ಕಾರವೂ ಸಹಾ ಮಲೇಶಿಯಾದ ನೆರವಿಗೆ ನಿಂತಿದೆ ತನ್ನ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುತ್ತಿದೆ ಹಾಗೂ ತನ್ನ ಸೆಟಿಲೈಟ್ ನೆರವನ್ನು ನೀಡಿದೆ. ಇವೆಲ್ಲ ಸರಿ ಬಿಡಿ ಆದರೆ ರಾಜ್ಯದ ಅಷ್ಟೂ ಟಿವಿಗಳಲ್ಲಿ ಅಟಕಾಯಿಸಿಕೊಂಡಿರುವ ಜ್ಯೋತಿಷಿಗಳು, ಬಾಬಾಗಳು, ಸ್ವಾಮೀಜಿಗಳು ಈಗ ವಿಮಾನ ನಾಪತ್ತೆ ಕುರಿತಂತೆ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿ ಜನರಿಗೆ ಮನರಂಜನೆ ನೀಡುತ್ತಿರುವುದು ಮತ್ತು ದೃಶ್ಯ ಮಾಧ್ಯಮಗಳು ಅಂತಹ ಸುದ್ದಿಗೆ ಮಾನ್ಯತೆ ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಮಾತ್ರ ಖಂಡನಾರ್ಹ!

         ವಿಮಾನ ನಾಪತ್ತೆಯಾದ ನಾಲ್ಕೈದು ದಿನಗಳಿಗೆ ಅದ್ಯಾರೋ ಕಣ್ಕಟ್ಟು ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಮಚಂದ್ರ ಗುರೂಜಿ ಎಂಬಾತ ಚಾನಲ್ ಒಂದರಲ್ಲಿ ಒಂದಿಬ್ಬರು ಪ್ರಾಯೋಜಿತ ಗಿರಾಕಿಗಳನ್ನ ಕರೆತಂದು ಲೈವ್ ಆಗಿ ಅವರನ್ನು ಮಾತನಾಡಿಸಿ ವಿಮಾನದಲ್ಲಿದ್ದ ಆತ್ಮವನ್ನ ಅವಾಹನೆ ಮಾಡಿಬಿಟ್ಟ! ವಿಮಾನ ಸುರಕ್ಷಿತವಾಗಿದೆ ವಾರದಲ್ಲೇ ಪತ್ತೆಯಾಗಲಿದೆ ಎಂದು ಘೋಷಿಸಿ ಬಿಟ್ಟ! ಅಷ್ಠೇ ಅಲ್ಲ ವಿಮಾನದಲ್ಲಿರುವ ಪ್ರಯಾಣಿಕರ ಮೊಬೈಲ್ ಗಳು ರಿಂಗಣಿಸುತ್ತಿವೆ ಇತ್ಯಾದಿ ಪ್ರವರವನ್ನು    ತೇಲಿಬಿಟ್ಟ, ಅದನ್ನೇ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡಿದ ವೀಕ್ಷಕರು ಮಂಗಗಳಾಗಿ ಹೋದರು. ಸುವರ್ಣ ಸುದ್ದಿ ವಾಹಿನಿ ತನ್ನ ವಾಹಿನಿಯ ಟಿ ಆರ್ ಪಿ ಗಾಗಿ ಇಂತಹ ಕೀಳು ದರ್ಜೆಯ ಲೈವ್ ಕಾರ್ಯಕ್ರಮವನ್ನು ಮಾಡಿ  ಸಾಮಾಜಿಕ ಹೊಣೆಗೇಡಿತನವನ್ನ ಪ್ರದರ್ಶಿಸಿತು. ಹೋಗಲಿ ಇಷ್ಟೆಲ್ಲ ಆದ ಮೇಲೆ ಆತ ಹೇಳಿದಂತೆ ಏನಾದರೂ ನಡೆಯಿತೆ ಎಂದರೆ ಅದು ಶೂನ್ಯ!

       ರಾಜ್ಯದಲ್ಲಿ ಎಗ್ಗಿಲ್ಲದೇ ನ್ಯೂಸ್ ಚಾನಲ್ ಗಳು ಹುಟ್ಟಿಕೊಂಡ ಮೇಲೆ ಜನಸಾಮಾನ್ಯರ ಹಿತಾಸಕ್ತಿಗಳಿಗಿಂತ ಮುಖ್ಯವಾಗಿ ವ್ಯಾಪಾರಿಕರಣದ ಪ್ರತಿನಿಧಿಗಳಾಗಿ, ಖಾಸಗಿ ವ್ಯಕ್ತಿಗಳ ದರ್ದಿಗೆ  ಕಾರ್ಯಕ್ರಮಗಳನ್ನ ಕಿರುತೆರೆ ವಾಹಿನಿಗಳು ಪ್ರಸ್ತುತ ಪಡಿಸುತ್ತಿವೆ. ಜಾಗತೀಕರಣದ ಪ್ರಭಾವದಿಂದಾಗಿ ದುಡ್ಡು ಮಾಡುವ ಉಮ್ಮೇದಿಗೆ ಹುಟ್ಟಿಕೊಂಡ ಚಾನಲ್ ಗಳನ್ನು ದೊಡ್ಡ ದೊಡ್ಡ ಉದ್ಯಮದ ಪ್ರಚಾರದ ಭಾಗವಾಗಿ ಸಾರ್ವಜನಿಕರ ಮುಂದೆ ತರಲಾಗುತ್ತಿದೆ. ಆಂದ್ರ, ತಮಿಳು ನಾಡು ಮತ್ತು ಕೇರಳ ರಾಜ್ಯದಲ್ಲಿ ವ್ಯಕ್ತಿಗಳು ಮತ್ತು ಪಕ್ಷಗಳ ಹಿತಾಸಕ್ತಿಗಾಗಿ ಮುದ್ರಣ ಮಾಧ್ಯಮಗಳು ಮತ್ತು ದೃಶ್ಯ ವಾಹಿನಿಗಳು ಕೆಲಸ ಮಾಡುತ್ತಿವೆ ಹಾಗೂ ಸಾರ್ವತ್ರಿಕವಾಗಿ ಮಾನ್ಯತೆಯನ್ನು ಕಳೆದುಕೊಂಡಿವೆ. ರಾಜ್ಯದಲ್ಲೂ ಅಂತಹ ಸ್ಥಿತಿ ಇದೆ ಆದರೆ ಸ್ವಲ್ಪ ಭಿನ್ನವಾಗಿದೆ, 80ರ ದಶಕದಲ್ಲಿ ಲಂಕೇಶ್ ಪತ್ರಿಕೆ ಯಂತಹ ಟ್ಯಾಬ್ಲಾಯ್ಡ್ ಪತ್ರಿಕೆ ಬಂದಾಗ ರಾಜ್ಯ ರಾಜಕಾರಣದಲ್ಲಿ ಮತ್ತು ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಮಹತ್ತರವಾದ ಬದಲಾವಣೆಗೆ ಮತ್ತು ಹೊಸ ತುಡಿತಗಳಿಗೆ ನಾಂದಿ ಹಾಡುವ ಕ್ರಿಯೆ ನಡೆದಿತ್ತು. ಜನರ ಭಾವನೆಗೆ ಪೂರಕವಾಗಿ ಮಾಧ್ಯಮಗಳು ಕಾರ್ಯನಿರ್ವಹಿಸದ್ದನ್ನ ಪಿ ಲಂಕೇಶ್ ಸಾಕ್ಷೀಕರಿಸಿದ್ದರು. ಆದರೆ ಇವತ್ತು ಪರಿಸ್ಥಿತಿ ಬೇರೆಯೇ ಆಗಿದೆ. 

      ಪ್ರಜಾಪ್ರಭುತ್ವದಲ್ಲಿ ಅತ್ಯಂತ ವಿಶ್ವಾಸಾರ್ಹವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿಬೇಕಿದ್ದ ಮಾಧ್ಯಮ ಅದರಲ್ಲೂ ದೃಶ್ಯ ಮಾಧ್ಯಮಗಳು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿವೆ. ಜನಸಾಮಾನ್ಯರ ಭಾವನೆಗಳ ಮೇಲೆ ಹೇರಿಕೆಯಾಗುವ ಕಾರ್ಯಕ್ರಮಗಳನ್ನು, ಮೌಡ್ಯವನ್ನು ಜತನದಿಂದ ಬಿತ್ತುವ ಕೆಲಸವನ್ನ ಮಾಡುತ್ತಿವೆ. ಅಪರಾಧ ಮತ್ತು ಅನೈತಿಕತೆಗೆ ನೀಡುವ ಮಾನ್ಯತೆಯನ್ನ ವೈಚಾರಿಕ ಮತ್ತು ಅಭಿವೃದ್ದಿ ಸಂಬಂಧಿತ ಕಾರ್ಯಕ್ರಮಗಳಿಗೆ ನೀಡುತ್ತಿಲ್ಲ! ದಿನಬೆಳಗೆದ್ದರೆ ಟಿವಿ ಯಲ್ಲಿ ವಕ್ಕರಿಸಿಕೊಳ್ಳುವ ಜ್ಯೋತಿಷಿಗಳು ಮತ್ತು ಬಾಬಾಗಳು ವಿವಿಧ ರೀತಿಯಲ್ಲಿ ಜಾತಕಗಳನ್ನು ಫಲಗಳನ್ನ ಮತ್ತು ಪರಿಹಾರಗಳನ್ನು ತಮಗೆ ತೋಚಿದಂತೆ ಹೇಳುತ್ತಾರೆ. ಭಾರತ ಹೇಳಿ ಕೇಳಿ ವೈವಿದ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಬಲವಾಗಿ ಪ್ರತಿಪಾದಿಸುವ ಮನಸ್ಸುಗಳನ್ನು ಹೊಂದಿದ ದೇಶ, ಹೀಗಿರುವಾಗ ನಂಬಿಕೆಗಳನ್ನ ವಾಸ್ತವದ ನೆಲೆಗಟ್ಟಿನಿಂದ ಹೊರತು ಪಡಿಸಿದಂತೆ ಮತ್ತು ಹಣ ಮಾಡುವ ಹಪಾಹಪಿಯಿಂದ ದುರ್ಬಲ ನಂಬಿಕೆಗಳನ್ನ ಬಂಡವಾಳ ಮಾಡಿಕೊಂಡು ಜನಸಾಮಾನ್ಯರ ಸ್ವಾಸ್ಥ್ಯಕ್ಕೆ ಭಂಗ ತರಲಾಗುತ್ತಿದೆ. 

       ಒಂದೆರೆಡು ದಶಕಗಳ ಹಿಂದೆ ಅದ್ಯಾರೋ ಜೈನ್ ಎಂಬಾತ ಉದಯ ಟೀವಿಯಲ್ಲಿ ಜಾತಕ ಹೇಳುತ್ತಿದ್ದರು, ಒಮ್ಮೆ ತುಮಕೂರಿನಲ್ಲಿ ಮನೆಯ ಮುಂದೆ ಆಡುತ್ತಿದ್ದ ಮಗು ನಾಪತ್ತೆಯಾಯಿತು. ಪೋಷಕರು ಪ್ರಸಿದ್ದ ಜ್ಯೋತಿಷಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಜೈನ್ ನನ್ನ ಭೇಟಿ ಯಾದರು. ಆತ ಮಗು ಬದುಕಿದೆ ಇಂತಹ ದಿಕ್ಕಿನಲ್ಲಿ ಹುಡುಕಿ ಎಂದ, ನಾಲ್ಕೈದು ದಿನ ಹುಡುಕಿ ಸುಸ್ತಾದ ಪೋಷಕರು ಮನೆಯ ಮುಂದೆ ಕಾರು ನಿಲ್ಲಿಸಿ ಒಳಹೋಗುವಾಗ ಡಿಕ್ಕಿಯಲ್ಲಿ ಅದೆಂತಹುದೋ ಕೆಟ್ಟ ವಾಸನೆ ತೆರೆದು ನೋಡಿದರೆ ಆ ಪುಟ್ಟ ಕಂದ ಕಾರಿನ ಡಿಕ್ಕಿಯಲ್ಲಿ ಸಾವನ್ನಪ್ಪಿದ್ದ, ಅಕಸ್ಮಿಕವಾಗಿ ತೆರೆಯಲ್ಪಟ್ಟಿದ ಡಿಕ್ಕಿ ಒಳಗೆ ಹೋಗಿ ಕುಳಿತ ಮಗುವಿಗೆ ಹೊರಬರಲಾಗಿರಲಿಲ್ಲ ಪೋಷಕರು ನೋಡಿರಲಿಲ್ಲ. ಅದೇ ರೀತಿ ಹಾಸನ ಬಳಿಯ ರಾಜಘಟ್ಟದ ಬಳಿ ದಶಕಗಳ ಹಿಮದೆ ಓರ್ವ ಮಹಿಳೆ ಸತ್ತು ಹೋದ ಬಾಲಕಯೊಬ್ಬಳನ್ನು ಬದುಕಿಸುತ್ತೇನೆ ಎಂದು ಅಮಾಯಕ ರೈತ ದಂಪತಿಗಳ ಬಳಿ ಹಣ ಪಡೆದು ಹೋಮ ಹವನ ಪೂಜೆ ಮಾಡಿದ್ದಳು, ಮದ್ಯರಾತ್ರಿಯ ಪೂಜೆಯ ನಂತರ ಬಾಲಕಿ ಎದ್ದು ಬರುತ್ತಾಳೆಂದು ತಿಳಿಸಲಾಗಿತ್ತು, ಸರಿ ಈ ಸಂಗತಿ ಬಾಯಿಂದ ಬಾಯಿಗೆ ಹರಡಿ ಸಾವಿರಾರು ಜನ ಪವಾಡ ನೋಡಲು ಅವತ್ತು ನೆರೆದು ಬಿಟ್ಟಿದ್ದರು! ಮದ್ಯರಾತ್ರಿ ಕಳೆದರೂ ಬಾಲಕಿ ಬದುಕಿ ಬರದಿದ್ದಾಗ ಜನ ಆಕೆಯಿದ್ದ ಮನೆಗೆ ಬೆಂಕಿ ಹಚ್ಚಿ ಅಟ್ಟಾಡಿಸಿ ಹೊಡೆದಿದ್ದರು. ಹೀಗೆ ಅನೇಕ ಸಂಗತಿಗಳು ನಮ್ಮ ನಡುವೆಯೇ ನಡೆಯುತ್ತಿದ್ದರೂ ಸಹಾ ದುರ್ಬಲ ಮನಸ್ಸಿನ ಮಂದಿ ನಂಬಿಕೆಗಳಿಗೆ ಜೋತು ಬಿದ್ದಿದ್ದಾರೆ. ಇಂತಹವರ ನಂಬಿಕೆಗಳನ್ನು ಪ್ರೋತ್ಸಾಹಿಸಲು ಚಾನಲ್ ಗಳು ಕಾರ್ಯಕ್ರಮವನ್ನ ಪ್ರಸಾರ ಮಾಡುತ್ತಿವೆ. 
  
      ಅದ್ಯಾರೋ ಒಬ್ಬ ಬಿಕನಾಸಿ ಸಂಖ್ಯಾಶಾಸ್ತ್ರಜ್ಞ ಲೈವ್ ನಲ್ಲಿ ಮಹಿಳೆಯೋರ್ವರ ಕರೆ ಸ್ವೀಕರಿಸುತ್ತಾನೆ, ಅತ್ತಲಿಂದ ಆ ಮಹಿಳೆ ತಮ್ಮ ಸಂಸಾರ ಗುಟ್ಟುಗಳ  ಕುರಿತು ಹೇಳಿಕೊಳ್ಳುತ್ತಾಳೆ, ಇವನು ಲೈವ್ ನಲ್ಲಿಯೇ ಅವಳ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಬೇಟಿ ಯಾಗುವಂತೆ ತಿಳಿಸುತ್ತಾನೆ! ಮುಂದೆ ಏನಾಯ್ತು ಗೊತ್ತಿಲ್ಲ. ಇನ್ನು ಕೆಲವು ಬೃಹಸ್ಪತಿಗಳಿದ್ದಾರೆ, ವಿಳ್ಯದೆಲೆ ಜೋಡಿಸಿ ನೋಡುವುದು, ಕವಡೆ ಬಿಟ್ಟು ಹೇಳುವುದು, ಇನ್ನೊಬ್ಬ ಕರ್ಣ ಪಿಚಾಚಿ ಇದ್ದಾನೆ ಅದೇನೋ ಕಿವಿಯ ಬಳಿ ಕೇಳಿಸಿಕೊಂಡಂತೆ ನಟಿಸುತ್ತಾನೆ ಮತ್ತೊಬ್ಬ ತನ್ನ ಮುಂದಿರುವ ತಟ್ಟೆಯ ನೀರನ್ನು ನೋಡಿ ಮತ್ತೇನೋ ಬೊಗಳುತ್ತಾನೆ. ಅಷ್ಠೇ ಆದರೆ ಪವಾಗಿಲ್ಲ ತಾವು ಹೇಳಿದ್ದು ವೇದ ವಾಕ್ಯವೆಂಬಂತೆ ಮತ್ತು ಪಾಲಿಸಲೇ ಬೇಕೆಂಬ ಆಜ್ಞೆಯನ್ನು ಮಾಡಿ ಬಿಡುತ್ತಾರೆ. ಚಾನಲ್ ನಲ್ಲಿ ಬಂದ ಕೆಲ ದಿನಗಳ ನಂತರ ಊರೂರು ಸುತ್ತಿ ತಾಯತ ಮತ್ತಿತರ ಪದಾರ್ಥಗಳನ್ನ ನೀಡಿ ಜನರನ್ನ ವಂಚಿಸುವ ಈ ವಂಚಕರು ಖಾಸಗಿಯಾಗಿ ಅದೆಷ್ಟರ ಮಟ್ಟಿಗೆ ಬೆಳೆದಿರುತ್ತಾರೆಂದರೆ ಅದು ಊಹೆಗೂ ನಿಲುಕದ್ದು. 
  
       ಕೆಲ ದಿನಗಳ ಹಿಂದೆ ಕುತೂಹಲದಿಂದ ಛಾನಲ್ ನಲ್ಲಿ ಬರುವ ಗುರೂಜಿ ಯೊಬ್ಬನನ್ನು ನೋಡಲು ಅಚಾನಕ್ಕಾಗಿ ಹೋಗ ಬೇಕಾಯ್ತು. ಬೆಂಗಳೂರು ಹೊರವಲಯದಲ್ಲಿ ಆತನ ಮಠ, ಮುಖ್ಯ ನಗರದಿಂದ 10-15ಕಿಮಿ ಒಳ ರಸ್ತೆಯಲ್ಲಿ ಹೋದರೆ ಸುಮಾರು ನೂರಾರು ಎಕರೆಯಲ್ಲಿ ವಿಶಾಲವಾಗಿ ಸ್ಥಾಪಿಸಲ್ಪಟ್ಟ ಮಠ! ಅದಕ್ಕೆ ಭದ್ರ ಬೇಲಿ, ಸೆಕ್ಯುರಿಟಿ ಗುರೂಜಿಯ ಅಪ್ಪಣೆಯಿಲ್ಲದೇ ಒಳಗೆ ಪ್ರವೇಶವಿಲ್ಲ. ಇನ್ನು ಅವನ ಹಿನ್ನೆಲೆ ಕೇಳಿ ದಂಗಾಗುವ ಸರದಿ ನನ್ನದು, ಆತ ಒಬ್ಬ ಉಂಡಾಡಿ ಗುಂಡ, ಸರಿಯಾಗಿ ಓದದೇ ಬೆಂಗಳೂರಿನ ಗಲ್ಲಿಯಲ್ಲಿ ಕಾಲ ಕಳೆಯುತ್ತಾ ಕೀಟಲೆ ಮಾಡಿಕೊಂಡಿದ್ದವನು, ಕೇವಲ ನಾಲ್ಕೈದು ವರ್ಷಗಳಲ್ಲಿ ಹೀಗಾಗಿ ಬಿಟ್ಟಿದ್ದ, ಅವನ ವೇಷಭೂಷಣವೂ ಬದಲಾಗಿದೆ, ಓಡಾಟಕ್ಕೆ ಐಷಾರಾಮಿ ಕಾರು ಬಂದಿದೆ, ಟಿವಿ ಯಲ್ಲಿ ನೋಡಿ ಬರುವವರಿಗೆ ಸಾವಿರ ಗಟ್ಟಲೇ ಫೀಸು ಸುಲಿಯುತ್ತಾನೆ. ಇದು ಇವನೊಬ್ಬನ ಕಥೆಯಲ್ಲ ಟೀವಿಯಲ್ಲಿ ಬರುವ ಬಹುತೇಕ ಎಲ್ಲಾ ಅಸಾಮಿಗಳ ಕಥೆ. ಇನ್ನೂ ಕೆಲವರಿದ್ದಾರೆ ವಾಸ್ತು ತಜ್ಞರೆಂಬ ಕೋಡು ಬೇರೆ ಇವರಿಗೆ, ಹೊಟ್ಟೆ ಹೊರೆಯಲು ಪ್ರಾಮಾಣಿಕವಾದ ಹಲವು ದಾರಿಗಳಿದ್ದರೂ ಸಹಾ ನಂಬಿಕೆಗಳನ್ನ ಬಂಡವಾಳವಾಗಿ ಮಾಡಿಕೊಂಡು ಜನರನ್ನು ಹೆದರಿಸುತ್ತಾ ದುಡ್ಡು ಮಾಡಲು ನಿಂತು ಬಿಟ್ಟಿದ್ದಾರೆ. ದೃಶ್ಯ ಮಾಧ್ಯಮಗಳು ಇಂಥಹವರಿಗೆ ಸಾಥ್ ನೀಡುತ್ತಾ ಬೇಜವಾಬ್ದಾರಿತನ ಪ್ರದರ್ಶಿಸುತ್ತಿವೆ. 
  
      ರಾಜ್ಯ ಸರ್ಕಾರ ಮೌಡ್ಯಗಳ ನಿರ್ಬಂಧ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ, ಸಧ್ಯ ಲೋಕಸಭಾ ಚುನಾವಣೆ ಮುಗಿದ ಮೇಲಾದರೂ ಈ ಕುರಿತು ನಿಷ್ಟುರವಾದ ನಿಲುವನ್ನು ಪ್ರದರ್ಶಿಸಿ ಮೌಡ್ಯದ ಪರಿಮಿತಿಯನ್ನು ಗುರುತಿಸಿ ಜ್ಯೋತಿಷಿಗಳಿಗೆ, ಬಾಬಾಗಳಿಗೆ, ವಾಸ್ತುತಜ್ಞರಿಗೆ, ಮೌಢ್ಯ ಪ್ರಸಾರ ಮಾಡುವವರಿಗೆ ನಿರ್ಬಧ ಹಾಕುವುದು ಒಳಿತು. ಜನರಿಗೆ ಸೌಲಭ್ಯಗಳು ಹೆಚ್ಚಾದಂತೆ ದುಡ್ಡು ಹೆಚ್ಚಾದಂತೆ ನಂಬಿಕೆಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ, ಮೌಡ್ಯ-ಕಂದಾಚಾರಗಳಿಗೆ ಬಲಿಯಾಗುತ್ತಿದ್ದಾರೆ ಅದು ವರ್ತಮಾನದ ದುರಂತಗಳಲ್ಲೊಂದು, ನಂಬಿಕೆಗಳನ್ನು ಸಹಾ ವೈಚಾರಿಕವಾಗಿ ವಿಶ್ಲೇಷಿಸುವ ಮತ್ತು ಚೌಕಟ್ಟಿನಲ ಎಲ್ಲೆಯೊಳಗೆ ಸರಿ ಕಂಡಿದ್ದನ್ನು ಒಪ್ಪಿಕೊಳ್ಳುವ ಜಾಗೃತ ಸ್ಥಿತಿಯನ್ನ ಪ್ರದರ್ಶಿಸಬೇಕಿದೆ. 
      

Sunday, March 16, 2014

ಭ್ರಮೆ ಮತ್ತು ಬದುಕು!

ಭ್ರಮೆ ಮತ್ತು ಬದುಕು ಹಲವು ಸಲ ತಳುಕು ಹಾಕಿಕೊಂಡಿರುತ್ತವೆ. ಬದಲಾಗುವ ಕಾಲಘಟ್ಟದಲ್ಲಿ ಸಿದ್ದಾಂತಗಳು ಬ್ರಷ್ ಅಪ್ ಆಗಬೇಕು, ನಿಲುವುಗಳು ಬದಲಾಗ ಬೇಕು, ಸಾರ್ವಜನಿಕವಾಗಿ ಹೇಗೆ ತೆರೆದುಕೊಳ್ಳಬೇಕು ಎಂಬುದು ಸಹಾ ಮುಖ್ಯವಾಗುತ್ತದೆ. ಇದು ಕೆಲವೊಮ್ಮೆ ನಗೆಪಾಟಲಿಗೂ ಈಡು ಮಾಡುತ್ತದೆ. ಭ್ರಮೆಯ ಬದುಕಿನಿಂದ ಅನೇಕ ಅವಕಾಶಗಳು ಕಳೆದು ಹೋಗಬಹುದು, ಹತ್ತಿರದಲ್ಲಿದ್ದವರು ದೂರ ಸರಿದು ಹೋಗಬಹುದು. ಇದು ಬದುಕುಗಳನ್ನು ಎಲ್ಲಿಂದೆಲ್ಲಿಗೋ ತಂದು ನಿಲ್ಲಿಸಿ ಬಿಡಬಹುದು. 
      ಅವರೊಬ್ಬ ಕನ್ನಡದ ಹೆಸರಾಂತ ಕವಿ, ಗ್ರಾಮೀಣ ಸೊಗಡಿನಲ್ಲಿ ಬರೆಯುತ್ತಿದ್ದ ಅವರು ಸಾಹಿತ್ಯ ವಲಯದಲ್ಲಷ್ಟೇ ಅಲ್ಲ ಶೈಕ್ಷಣಿಕ ವಲಯದಲ್ಲೂ ಛಾಪು ಮೂಡಿಸಿದವರು.  ಮುಂದೆ ಅವರು ದೊಡ್ಡ ಪ್ರಶಸ್ತಿಯ ಹಿರಿಮೆಗೂ ಪಾತ್ರರಾದರೆನ್ನಿ, ಸರಿ ಅವರನ್ನು ಓಲೈಸುವ, ಸಭೆಗಳಿಗೆ ಕರೆಯುವ ಉಮ್ಮೇದಿಯೂ ಇರುತ್ತದಲ್ಲಾ, ಇದನ್ನೇ ಒಂದು ಛಾನ್ಸ್ ಆಗಿ ತೆಗೆದುಕೊಂಡ ಮಹಾಶಯರು ಒಂದು ಕಾರ್ಯಕ್ರಮಕ್ಕೆ ಇಂತಿಷ್ಟು ಹಣ, ಐಷಾರಾಮಿ ವಾಹನ, 5ಸ್ಟಾರ್ ದರ್ಜೆಯ ಹೋಟೆಲ್, ರಾತ್ರಿಗೆ ನಾಲ್ಕಂಕಿ ಬೆಲೆ ಬಾಳುವ ಪಾನೀಯ ಹೀಗೆ ಪಟ್ಟಿ ಇದರ ಜೊತೆಗೆ ಅವರೇ ಹೇಳುವ ದಿನಾಂಕಕ್ಕೆ ಕಾರ್ಯಕ್ರಮ! ಯಾವುದೇ ಷೆಡ್ಯೂಲ್ ಇಲ್ಲದಿದ್ದರೂ ಸಂಘಟಕರು ಹೇಳುವ ದಿನಾಂಕಕ್ಕೆ ಇವರು ಬ್ಯುಸಿ ಎಂಬುದನ್ನು ಹೇಳಲು ಮರೆಯುತ್ತಿರಲಿಲ್ಲ. ಕಾರ್ಯಕ್ರಮ ಸಂಘಟಕರು ಮತ್ತು ಸಾಹಿತ್ಯ ಚಟುವಟಿಕೆ ನಡೆಸುವ ಸಂಸ್ಥೆಗಳೂ ಸಹಾ ಈ ಡಿಮ್ಯಾಂಡ್ ನೋಡಿ ಕರೆಯುವುದನ್ನೇ ಬಿಟ್ಟು ಬಿಟ್ಟರು. 

      ಅವನು ಹಳ್ಳಿ ಹೈದ ತುಂಬಾ ಕಷ್ಟ ಪಟ್ಟು ಆಟೋಟ ಗಳಲ್ಲಿ ಪಾಲ್ಗೊಳ್ಳುತ್ತಿದ್ದ, ನಿರಾಸೆಯಾದರೂ ಅಂದು ಕೊಂಡಿದ್ದನ್ನು ದಕ್ಕಿಸಿಕೊಳ್ಳುವಲ್ಲಿ ನಿಸ್ಸೀಮ! ಪದವಿ ನಂತರ ಮಹಾನಗರಿ ಬೆಂಗಳೂರು ತಲುಪಿಕೊಂಡ, ಅವಕಾಶವಾದಾಗಲೆಲ್ಲ ರಾಷ್ಟ್ರ-ಅಂತರ ರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಪದಕಗಳನ್ನು ತರುತ್ತಿದ್ದ, ಆಗೆಲ್ಲ ಖರ್ಚಿಗೆ ದುಡ್ಡು ಬೇಕಿತ್ತಲ್ಲ ಹಾಗಾಗಿ ನನ್ನದೊಂದು ಫೋಟೋ ಸುದ್ದಿ ಹಾಕಿ ಎಂದು ಪತ್ರಿಕಾಲಯಗಳಿಗೆ ಎಡತಾಕುತ್ತಿದ್ದ, ಅಧಿಕಾರಸ್ಥರ ಮನೆಗಳಿಗೆ ವೆಚ್ಚ ಬರಿಸಲು ಕೋರಿ ಎಡತಾಕುತ್ತಿದ್ದ! ಅಂತಹ ಹೈದ ಅದೊಂದು ದಿನ ಅಂತರ ರಾಷ್ಟ್ರೀಯ ಮಟ್ಟದ ಪದಕವನ್ನ ಗಿಟ್ಟಿಸಿಯೇ ಬಿಟ್ಟಿದ್ದ. ಸರಿ ಆತನಿಗೆ ದಕ್ಕಿದ ದಿಡೀರ್ ಹೆಸರನ್ನು ಜನಪ್ರಿಯತೆಯನ್ನ ನಿಭಾಯಿಸುವುದು ಹೇಗೆ ಎಂಬುದನ್ನು ವಿವೇಚಿಸದೇ ಏಕಾಏಕಿ ಪ್ರತಿಷ್ಠಾ ಮನೋಭಾವಕ್ಕೆ ಒಳಗಾಗಿ ಬಿಟ್ಟ(superiority complex). ಜನ ಪ್ರೀತಿಯಿಂದ ಕರೆದರೆ ಮಾತನಾಡಿಸಿದರೆ ಇವನದ್ದು ಪ್ರತಿಷ್ಠೆಯ ಮಾತು, ಕಾರ್ಯಕ್ರಮಗಳಿಗೆ ಕರೆದರೆ ಇಂತಿಷ್ಟು ದುಡ್ಡು ಎಂದು ನಿಗದಿ ಮಾಡಿಬಿಟ್ಟ! ಜನ ಕರೆಯುವುದನ್ನೇ ನಿಲ್ಲಿಸಿ ಬಿಟ್ಟರು, ಥೂ ಇವನಾ ನಾವು ಇಷ್ಟಪಟ್ಟ ಸಾಧಕ ಎಂಬ ಮಾತುಗಳು ಕೇಳಿ ಬಂದವು!

     ಅದು ಸಾಹಿತ್ಯ ಸಂಸ್ಥೆಯೊಂದರ ಕಾರ್ಯಕ್ರಮ ಸಂಘಟಕರು ಸಾಹಿತಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಇಂಥ ಕಾರ್ಯಕ್ರಮ ನೀವು ಬರಬೇಕು ಎಂದು ಮನವಿ ಮಾಡಿದರು, ಆ ಸಾಹಿತಿ ಶೈಕ್ಷಣಿಕ ವಲಯದಲ್ಲಿ ಉದ್ಯೊಗದಲ್ಲಿರುವಾತ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ 6ಅಂಕಿ ಸಂಬಳ ಪಡಯುವಾತ, ನೋಡಿ ಇವ್ರೆ ನಾನು ಆ ಕಾರ್ಯಕ್ರಮಕ್ಕೆ ಬರೋಲ್ಲ, ಉದ್ಘಾಟನೆಗೆ ಬಂದು ಬಿಡ್ತೀನಿ ಎನ್ನಬೇಕೆ, ಸಂಘಟಕರಿಗೆ ಕಸಿವಿಸಿ ಬೇಡ ಉದ್ಘಾಟನೆಗೆ ಬೇರೆಯವರು ಇದ್ದಾರೆ ಎಂದು ಹೇಳುವ ಅವಕಾಶವೇ ಸಿಗಲಿಲ್ಲ, ಸರಿ ಕಾರ್ಯಕ್ರಮದ ದಿನ ಸಾಹಿತಿ ಮಹಾಶಯರು ಬಂದರು ಇನ್ನೂ ವೇದಿಕೆ ಏರಿ ನಾಡಗೀತೆ ಹೇಳಬೇಕು ತಕ್ಷಣವೆ ವೇದಿಕೆಯ ಹಿಂದೆ ನಿಂತಿದ್ದ ಸಂಘಟಕರೆಡೆಗೆ ತಿರುಗಿ ನೋಡ್ರೀ ನಾನು ಕಾರ್ ಮಾಡ್ಕೊಂಡು ಬಂದಿದೀನಿ, ನನಗೆ ಇಷ್ಟು ಕಾರ್ಯಕ್ರಮ ಮುಗಿದ ತಕ್ಷಣ ಹೊರಡ್ತೀನಿ ಬೇಗ ವ್ಯವಸ್ಥೆ ಮಾಡಿ ಎಂದು ಬಡಬಡಿಸಿದರು. ಸಂಘಟಕರು ಸುಸ್ತೋ ಸುಸ್ತು!

      ಅದು ಮದ್ಯಮ ವರ್ಗದ ಕುಟುಂಬ, ಜಿಲ್ಲೆಯವರೇ ಆದರೂ ರಾಜಧಾನಿಯಲ್ಲಿ ನೆಲೆಸಿದ್ದಾರೆ. ಆ ಕುಟುಂಬದ ಪೈಕಿ ಒಬ್ಬಾಕೆ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ! ಅದು ಮಾತಾಡುವ ಗೊಂಬೆಯ ಒಡತಿ! ಸರಿ ನಮ್ ಜಿಲ್ಲೆಯವರಲ್ವಾ ಒಮ್ಮೆ ಕರೆದು ಸಾರ್ವಜನಿಕ ಸನ್ಮಾನ ಮಾಡೋಣ ಎಂದು ಕೊಂಡ ಆಕೆಯ ತಾಲೂಕಿನ ತಹಸೀಲ್ದಾರರು ಫೋನಾಯಿಸಿದರು. ಸದರಿ ಯುವತಿಯ ತಂದೆ ಫೋನ್ ಎತ್ತಿಕೊಂಡರು. ರೀ ಸನ್ಮಾನ ಅತ್ಲಾಗಿರ್ಲಿ ಮೊದ್ಲು ನಮ್ ನಂಬರ್ ನಿಮಗೆ ಕೊಟ್ಟಿದ್ದು ಯಾರು? ಅವರು ಇಲ್ಲ ಬಾಂಬೆ ಲಿ ಕಾರ್ಯಕ್ರಮ ಇದೆ, ಸುಖಾ ಸುಮ್ಮನೆ ನಮ್ ಹೆಸರು ಹೇಳಿಕೊಂಡು ಕಾರ್ಯಕ್ರಮ ಆಯೋಜಿಸ ಬೇಡಿ, ನಮ್ದು ಏನಿದ್ರು 5ಅಂಕಿ ಸಂಭಾವನೆ ಕೊಡೋ ಹಾಗಿದ್ರೆ ಹೇಳಿ ಆಮೇಲೆ ನಾವೇ ಡೇಟ್ ಕೊಡ್ತೀವಿ ಅಂತ ಹೇಳಿ ಫೋನ್ ಕುಕ್ಕಿಬಿಡಬೇಕೆ. ತಹಸೀಲ್ದಾರ್ ಸುಸ್ತೋ ಸುಸ್ತು. ಸರಿ ಒಮ್ಮೆ ರಾಜಧಾನಿಗೆ ಹೋದಾಗ ಅವರ ಮನೆಗೆ ಹೋಗುವ ಅವಕಾಶ ಬಂತು. ಏನಾಶ್ಚರ್ಯ ಮನೆ ಬಾಗಿಲಿಗೆ ಬಂದು ನಮ್ಮೂರು ಕಡೇವ್ರಾ ಬನ್ನಿ ಅಂತ ಸ್ವಾಗತಿಸಿ ಕರೆದರು. ನಮ್ಮೂರಿಗೆ ಬಂದು ಕಾರ್ಯಕ್ರಮ ಮಾಡಬೇಕು ಹೊರಗಡೆ ಏನ್ ಹೆಸರು ಮಾಡಿದ್ರೆ ಏನು ನಮ್ಮೂರಲ್ಲಿ ಗುರುತಿಸಿದ ಹಾಗೆ ಆಗಲ್ಲ ನೋಡಿ ದುಡ್ಡು ನಾವು ಗಣನೆಗೆ ತಗೊಳ್ಳಲ್ಲ ಅನ್ನಬೇಕೆ ಸುಸ್ತಾಗುವ ಸರದಿ ನಮ್ಮದು. 

        ಅವರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ವಿದ್ವಾಂಸರು ಖ್ಯಾತ ಗಾಯಕರು, ತಾವು ಪ್ರೀತಿಸುವ ಗಾಯನದ ಬೆನ್ನು ಬಿದ್ದ ಅವರು ಬ್ಯಾಂಕ್ ನೌಕರಿಗೆ ರಾಜೀನಾಮೆ ನೀಡಿ ಹುಟ್ಟಿದ ಹಳ್ಳಿಗೆ ಮರಳಿ ಬಂದು ಬಿಟ್ಟರು. ಒಂದು ಕಾಲದಲ್ಲಿ ದೊಡ್ಡ ಸಂಗೀತಗಾರರನ್ನು ಹೊಂದಿ ಹೆಸರು ಮಾಡಿದ್ದ ಊರಿನ ಪರಂಪರೆಯನ್ನು ಮರಳಿಸುವ ಧೃಢ ಸಂಕಲ್ಪ ಮಾಡಿದರು ಮತ್ತು ಅದನ್ನು ಸಾಕಾರ ಮಾಡಿಸಿಕೊಳ್ಳುವ ದಿಸೆಯಲ್ಲಿ ಇಂದಿಗೂ ಪ್ರಯತ್ನ ಮಾಡುತ್ತಲೇ ಇದ್ದಾರೆ, ತಮ್ಮ ಉದ್ದೇಶದಲ್ಲಿ ಸಾಫಲ್ಯತೆಯನ್ನು ಪಡೆದುಕೊಂಡಿದ್ದಾರೆ. ಇಂತಹವರನ್ನು ನಮ್ಮೂರಲ್ಲೂ ಕರೆಸಬೇಕು ಹಾಡಿಸಬೇಕು ಆದರೆ ಹೊರಗೆ ಇವರ ಕಾರ್ಯಕ್ರಮಕ್ಕೆ 50ಸಾವಿರದವರೆಗೆ 1-2ಗಂಟೆಗೆ ಗಾಯನಕ್ಕೆ ದುಡ್ಡು ಕೊಡುವವರಿದ್ದಾರೆ ನಮಗೆ ಇದು ಸಾಧ್ಯವೇ ಎಂದು ಯೋಚಿಸುವ ಹೊತ್ತಿಗೆ ಒಮ್ಮೆ ಭೇಟಿಯಾದ ಅವರು ನೋಡಿ ಇದು ನನ್ನೂರು, ನನ್ನ ಜಿಲ್ಲೆ ನಯಾ ಪೈಸೆಯೂ ಬೇಕಿಲ್ಲ ನಾನೇ ಬಂದು ಹಾಡುತ್ತೇನೆ ನೀವು ಕರೆದಲ್ಲಿಗೆ ಬಂದು ಪಾಲ್ಗೋಳ್ಳುತ್ತೇನೆ ಎನ್ನುವ ಮೂಲಕ ಇಂಥಹವರು ಇದ್ದಾರ ಎಂದು ಅನಿಸುವಂತೆ ನಡೆದುಕೊಂಡರು.

        ಅದು ಮಹಿಳಾ ದಿನಾಚರಣೆಯ ಕಾರ್ಯಕ್ರಮ, ಸರಿ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿ ಒಬ್ಬ ಸೆಲೆಬ್ರಿಟಿಯನ್ನು ಕರೆಯೋಣ ಅವರಿಗೆ ವಾಹನ, ಸ್ವಲ್ಪಮಟ್ಟಿನ ಸಂಭಾವನೆ ಕೊಡೋಣ ಎಂದು ಕೊಂಡು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿದ್ದ ಸೆಲೆಬ್ರಿಟಿ ನಟಿಯೊಬ್ಬರನ್ನು ಕರೆದೆವು ಅವರು ತಕ್ಷಣ ಒಪ್ಪಿಕೊಂಡರು. ಅವರದ್ದೇ ವಾಹನದಲ್ಲಿ ಬರುತ್ತೇನೆ ಯಾವ ವಸತಿ ವ್ಯವಸ್ಥೆ, ಸಂಭಾವನೆ ಏನೂ ಬೇಡ 200ಕಿಮಿ ಯಾದರೂ ಪರವಾಗಿಲ್ಲ ಖುಷಿ ಬರೋಕೆ ಅಂದರು. ಆದರೆ ಕಾರ್ಯಕ್ರಮದ ದಿನ ಯಾವುದೋ ಪ್ರಮುಖ ಷೆಡ್ಯೂಲ್ ಬೆಂಗಳೂರಿನಲ್ಲೇ ಇದ್ದುದರಿಂದ ಬರಲಾಗುತ್ತಿಲ್ಲ ಎಂದು ವಿಷಾದಿಸಿದರು. ಆಯ್ತು ಎಂದು ಗೊತ್ತಿರುವ ಇತರೆ ಮಹಿಳಾ ಸೆಲೆಬ್ರಿಟಿಗಳನ್ನು ಕರೆದರೆ ಅವರ ಬೇಡಿಕೆಗಳ ಪಟ್ಟಿ ದೊಡ್ಡದಿತ್ತು, ಅದು ಸಂಘಟಕರ ಮಟ್ಟಕ್ಕೆ ನಿಲುಕುವುದಿರಲಿ ಅವರನ್ನ ಕರೆಯದೇ ಹಾಗೆ ಕಾರ್ಯಕ್ರಮ ಮಾಡಿದರು. 

       ಜನಪ್ರಿಯತೆ ಎನ್ನುವುದು ಸಾರ್ವತ್ರಿಕವಾಗಿ ದೊರೆತಾಗ ಅದು ದೀರ್ಘಕಾಲಕ್ಕೆ ಉಳಿಯಲಾರದು, ಆಕ್ಷಣಕ್ಕೆ ಮತ್ತು ಸ್ವಲ್ಪ ದಿನಕ್ಕೆ ಮಾತ್ರ ಅದು ಜೀವಂತವಾಗಿರುತ್ತೆ. ಅದನ್ನ ಹೇಗೆ ಬಳಸಿಕೊಳ್ಳಬೇಕು ಜನರಿಗೆ ಹತ್ತಿರವಾಗಿ ಹೇಗೆ ಉಳಿಯಬೇಕು ಎಂಬ ಕಾಮನ್ ಸೆನ್ಸ್ ಇಷ್ಟೋ ಜನರಿಗೆ ಇರುವುದಿಲ್ಲ ಹಾಗಾಗಿ ಅವರು ಎಂತಹ ದೊಡ್ಡ ಸಾಧಕರೇ ಆಗಿದ್ದರೂ ಅವೆಲ್ಲವೂ ಅವರ ನಡವಳಿಕೆಗಳಿಂದ ಸಾರ್ವತ್ರಿಕವಾಗಿ ಶೂನ್ಯವಾಗಿ ಬಿಡುತ್ತವೆ. ಹಾಗೆಯೇ ತಾವು ನಂಬಿಕೊಂಡದ್ದು ಮತ್ತು ಅಂದು ಕೊಂಡದ್ದೇ ಅಲ್ಟಿಮೇಟ್ ಎಂಬ ಮನಸ್ಥಿತಿಯೂ ಸಹಾ ಸಮಾಜದಲ್ಲಿ ಒಪ್ಪಿತವಾಗದು. ಪ್ರತೀ ಕಾಲಘಟ್ಟಕ್ಕು ಅಪ್ ಡೇಟ್ ಅನ್ನು ವ್ಯವಸ್ಥೆ ಬಯಸುತ್ತದೆ ಹಾಗೆಯೇ ಫ್ಲೆಕ್ಸಿಬಿಲಿಟಿಯನ್ನೂ ಸಹಾ ಇವನ್ನು ನಿಭಾಯಿಸುವುದನ್ನು ಕಲಿಯಬೇಕಾದರೆ ಮುಖ್ಯವಾಗಿ ಇಗೋ ಬಿಡಬೇಕು. ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಥಿತಿಯು ಇರಬೇಕಲ್ಲವೇ?

Sunday, March 9, 2014

ಆಮ್ ಆದ್ಮಿಯ ಗುಂಗು ಮತ್ತು ಕೇಜ್ರಿವಾಲ್!



ಸಮಾಜ ಜೀವನದಲ್ಲಿ ಅನೇಕ ಕಾರಣಗಳಿಗೆ ಅನೇಕರು ಪ್ರಸಿದ್ದಿಗೆ ಬಂದು ಬಿಡಬಹುದು, ರಾಜಕಾರಣಿ, ಕಳ್ಳ, ಭಯೋತ್ಪಾದಕ, ಆಟಗಾರ, ಹಾಡುಗಾರ, ಕಲಾವಿದ, ಶಿಕ್ಷಣ ತಜ್ಞ ಹೀಗೆ ವಿವಿಧ ಆಯಾಮಗಳಲ್ಲಿ ಸಾದನೆ! ಗೈದಿದ್ದಕ್ಕಾಗಿ ಅಥವ ಅವರ ಕನಸುಗಳನ್ನು ನನಸು ಮಾಡಿಕೊಂಡಿದ್ದಕ್ಕಾಗಿ! ದಿಡೀರ್ ಪ್ರಸಿದ್ದಿಗೆ ಬಂದು ಬಿಡಬಹುದು. ಅನೇಕ ವೇಳೆ ಹಾಗೆ ಹೆಸರು ಮಾಡುವ ಮುನ್ಸೂಚನೆ ಇಲ್ಲದೇ ಇದ್ದಕ್ಕಿದ್ದ ಹಾಗೆ ಅದು ದಕ್ಕಿ ಬಿಡಬಹುದು ಒಳ್ಳೆಯ ಕಾರಣಕ್ಕೊ ಕೆಟ್ಟ ಕಾರಣಕ್ಕೋ ಏನೂ ಆಗಬಹುದು. ಅದು ಒಂದು ಕಡೆಯಾದರೆ ಇನ್ನು ಅಂತಹದ್ದೊಂದು ಜನಪ್ರಿಯತೆ! ದಕ್ಕಿದ ಮೇಲೆ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸಹಾ ಮತ್ತೊಂದು ಅಧ್ಯಾಯವನ್ನ ತೆರೆದಿಡುತ್ತದೆ. ಹಾಗಾದರೆ ಜನಪ್ರಿಯತೆಯ ಮಾನದಂಡ ಏನು? ಜನಪ್ರಿಯ ಎಂದರೆ ಅದು ಹೇಗಿರಬೇಕು? ಜನಪ್ರಿಯರೆನಿಸಿಕೊಂಡವರು ಅದನ್ನು ಹೇಗೆ ಬಳಸುತ್ತಾರೆ ಎಂಬುದನ್ನು ತೆರೆದಿಡುವ ಪುಟ್ಟ ಪ್ರಯತ್ನವಷ್ಟೇ ಇದು. 


          ಬಹುಶ: ನಿಮಗೂ ಇಂತಹ ಅನುಭವಗಳು ಆಗಿರುತ್ತವೆ ಎಂದು ಕೊಳ್ಳುತ್ತಾ. ನನ್ನ ವೈಯುಕ್ತಿಕ ಅನುಭವದಿಂದಲೇ ನಿಮ್ಮ ಮುಂದೆ ತೆರೆದುಕೊಳ್ಳುತ್ತೇನೆ. ಅವನು ಕನಸುಗಾರ! ಒಂದೇ ಮುಟಿಗೆ ವ್ಯವಸ್ಥೆಯನ್ನು ಸುಧಾರಿಸುತ್ತೇನೆ ಭ್ರಷ್ಟಾಚಾರವನ್ನು ಸದೆಬಡಿಯುತ್ತೇನೆ ಮತ್ತು ಅದಕ್ಕೆ ಮೂಲ ಕಾರಣರಾದವರನ್ನ ಬೆದರಿಸುತ್ತೇನೆ ಆ ಮೂಲಕ ಜಾಗೃತಿಯ ಸಂಚಲನವನ್ನ ಉಂಟು ಮಾಡುತ್ತೇನೆ ಎಂದು ಕೊಂಡಿದ್ದು ಆ ಸಬ್ ಇನ್ಸ್ ಪೆಕ್ಟರ್! ಆತ ಕಟ್ಟಾ ಸಿದ್ದಾಂತದ ಪಾಲಕ ಮತ್ತು ನೈತಿಕತೆ ಪ್ರಾಮಾಣಿಕತೆ ಇತ್ಯಾದಿಗಳನ್ನ ಇಟ್ಟುಕೊಂಡಿದ್ದವರು, ಆದರ್ಶದ ಬೆನ್ನು ಹತ್ತಿ ಉನ್ನತ ವ್ಯಾಸಂಗ ಮಾಡಿದ್ದರೂ ಸಹಾ ಆಯ್ದು ಕೊಂಡದ್ದು ಮಾತ್ರ ಸಬ್ ಇನ್ಸ್ ಪೆಕ್ಟರ್ ಹುದ್ದೆ, ವೃತ್ತಿಯನ್ನು ಹಾಗೆ ನಿಭಾಯಿಸುತ್ತಿದ್ದರೆನ್ನಿ! ಯಾವ ರಾಜಕಾರಣಿಯ ಶಿಫಾರಸ್ಸುಗಳಿಗೂ ಬೆಲೆ ಕೊಡುತ್ತಿರಲಿಲ್ಲ, ನ್ಯಾಯಯುತವಾದುದಕ್ಕೆ ಮಾತ್ರ ಮನ್ನಣೆ, ಶಾಲಾ ಕಾಲೇಜು ಗಳಿಗೆ ತೆರಳಿ ಅಧ್ಯಾಪಕರಿಲ್ಲದ ವಿಷಯಗಳ ಕ್ಲಾಸುಗಳಿಗೆ ಲೆಕ್ಚರ್ ಕೊಡುತ್ತಿದ್ದ, ಹುಡುಗರ ದಂಡು ಕಟ್ಟಿಕೊಂಡು ಆಟೋಟ ಪಂದ್ಯಗಳನ್ನು ಏರ್ಪಡಿಸುತ್ತಿದ್ದ ಒಟ್ಟಾರೆ ಆತ ಕಾರ್ಯ ನಿರ್ವಹಿಸುತ್ತಿದ್ದ ಕಡೆಗಳಲೆಲ್ಲ ಜನರ ಕಣ್ಮಣಿಯಾಗಿದ್ದ. ಸಖತ್ ಉತ್ಸಾಹಿಯಾಗಿದ್ದ ಆ ಎಸ್ ಐ ಇಲಾಖೆಯ ಕ್ರೀಡೆಗಳಲ್ಲೂ ಮುಂದು ಮುಖ್ಯವಾಗಿ ರೈಫಲ್ ಶೂಟಿಂಗ್ ನಲ್ಲಿ ರಾಜ್ಯಕ್ಕೆ ನಂ.1. ಸದಾ ರೈಫಲ್ ಅನ್ನು ಬಗಲಲ್ಲೇ ಇಟ್ಟುಕೊಂಡು ಸಮಾಜ ಬದಲಾವಣೆಯ ಕನಸು ಕಾಣುತ್ತಾ ಮಲಗುತ್ತಿದ್ದ ಆತ ಸಹಪಾಠಿಗಳೊಂದಿಗೆ ಬೆರೆತದ್ದು ಕಮ್ಮಿ ಹೀಗಿದ್ದ ಮನುಷ್ಯ ಒಮ್ಮೆ ಇಲಾಖೆಯ ರಾಷ್ಟ್ರೀಯ ಮಟ್ಟದ ಕ್ರೀಡೆಗೆ ಆಯ್ಕೆಯಾಗಿದ್ದ ಬೆಂಗಳೂರಿನಲ್ಲಿ ಅಭ್ಯಾಸಕ್ಕೆ ಬಂದವನು ಮರುದಿನ ಬೆಂಗಳೂರು ಬಿಡಬೇಕಿತ್ತು ಆದರೆ ಆಗಿದ್ದೇ ಬೇರೆ, ಅವತ್ತು ಶಾಸಕರ ಭವನಕ್ಕೆ ಹುಸಿ ಬಾಂಬ್ ಇಟ್ಟು ಬಿಟ್ಟಿದ್ದ! ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಶಕ್ತಿಕೇಂದ್ರದ ವಾರಸುದಾರ ಭವನ ಅದು, ಈ ನಡುವೆ ತಾನೇ ಮಾಡಿಕೊಂಡ ಎಡವಟ್ಟಿನಿಂದ ಪೋಲೀಸರಿಗೆ ಸಿಕ್ಕುಬಿದ್ದ ಮತ್ತು ಪರಪ್ಪನ ಅಗ್ರಹಾರ ಜೈಲು ಪಾಲಾಗಿಬಿಟ್ಟ! ಅಷ್ಟೇ ಸಾಕಿತ್ತು ಆತನ ಜನಪ್ರಿಯತೆಗೆ, ಆದರ್ಶ ಸರಿ ಆದರೆ ಅದನ್ನು ನಿಭಾಯಿಸುವಲ್ಲಿ ಎಡವಿ ಹುಂಬತನ ಪ್ರದರ್ಶಿಸಿದ್ದ ಆ ಎಸ್ ಐ ಇದೇ ಕಾರಣಕ್ಕೆ ತನ್ನ ಪ್ರೀತಿಯ ಖಾಕಿಯನ್ನು ಕಳಚ ಬೇಕಾಯ್ತು! ಜೈಲು ಸೇರಿದ ಆತ 15ದಿನಕ್ಕೆ ಬಿಡುಗಡೆಯಾದಾಗ ಆತನನ್ನು ಎದುರುಗೊಳ್ಳಲು ದೊಡ್ಡ ಗುಂಪು ಕಾದಿತ್ತು. ಹೆಸರು ಮಾಡಿದ ಅನೇಕ ಬುದ್ದಿಜೀವಿಗಳು ಆತನ ಬೆನ್ನಿಗೆ ನಿಂತಿದ್ದರು, ಜನಪ್ರೀತಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡ ಆತ ಆ ಹೊತ್ತಿಗೆ ತಣ್ಣಗೆ ಬಿಚ್ಚಿಕೊಳ್ಳುತ್ತಿದ್ದ ಮಾಹಿತಿ ಹಕ್ಕಿನ ಹೋರಾಟದ ಕಾವು ಹರಡಲು ರಾಜ್ಯದಾಧ್ಯಂತ ಸುತ್ತಿದ,ಜನಪ್ರಿಯತೆಯಿಂದಾಗಿ ಕಿರುತೆರೆಯ ದಾರವಾಹಿ ಗಳಲ್ಲಿ ಸಿನಿಮಾಗಳಲ್ಲಿ ಅವಕಾಶವೂ ಬಂತು, ತಾನೇ ಬೆರಳೇಣಿಕೆಯ ಚಿತ್ರಗಳಲ್ಲಿ ನಾಯಕನೂ ಆದ ಬರಕತ್ತಾಗಲಿಲ್ಲ. ಮುಂದೆ ಬಿಜೆಪಿ ಸರ್ಕಾರ ಆತನ ಜನಪ್ರಿಯತೆಯನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ನಿಗಮವೊಂದಕ್ಕೆ ಅಧ್ಯಕ್ಷನನ್ನಾಗಿ ಮಾಡಿತು. ಕ್ಯಾಬಿನೇಟ್ ದರ್ಜೆಯ ಸ್ಥಾನಮಾನ ನೀಡಿತು, ಅದೇ ಗುಂಗಲ್ಲಿ ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಕಳೆದ ಸಲ ವಿಧಾನ ಸಭೆಯ ಚುನಾವಣೆಗೂ ನಿಂತ ಸಬ್ ಇನ್ಸ್ ಪೆಕ್ಟರ್ ಹೀನಾಯ ಸೋಲು ಅನುಭವಿಸಿದರು! ಈಗ ಅವರ ಹೆಸರು ಯಾವ ಗಲ್ಲಿಯಲ್ಲೂ ಕೇಳಿ ಬರುತ್ತಿಲ್ಲ!ಎಲ್ಲ ಗಪ್ ಚುಪ್!


         ಇವತ್ತು ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್, ನರೇಂದ್ರ ಮೋದಿ ಮತ್ತು ಅಣ್ಣಾ ಹಜಾರೆಯ ವಿಷಯದಲ್ಲೂ ಅಷ್ಟೇ ಆಗುತ್ತಿದೆ. ಆಡಳಿತ ಸೇವೆಯ ಅಧಿಕಾರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವತ್ತು ಅಣ್ಣಾ ಹಜಾರೆಯ ಬೆನ್ನೆಲುಬಾಗಿ ನಿಂತು ಲೋಕಪಾಲ್ ಬಿಲ್ ಅನುಷ್ಠಾನಕ್ಕೆ ನಡೆಸಿದ ಹೋರಾಟ ಇಡೀ ದೇಶವನ್ನೇ ಸೆಳೆದು ಬಿಟ್ಟಿತ್ತು. ಒಂದು ಬೃಹತ್ ಸಮೂಹ ಸನ್ನಿಯನ್ನು ಸರಿಯಾದ ರೀತಿಯಲ್ಲಿ ಕಾಯ್ದುಕೊಳ್ಳದೇ ಅಣ್ನಾಹಜಾರೆ ತೆರೆಮರೆಗೆ ಸರಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಎನ್ ಕ್ಯಾಶ್ ಮಾಡಿಕೊಂಡಿದ್ದು ಇದೇ ಅರವಿಂದ ಕೇಜ್ರಿವಾಲ್ ! ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ದೆಹಲಿ ವಿಧಾನ ಸಭೆ ಚುನಾವಣೆಗಳಲ್ಲಿ ಯಶ ಕಂಡ ಆಮ್ ಆದ್ಮಿ ಕಾಂಗೈ ಬೆಂಬಲ ಪಡೆದು ಅಧಿಕಾರಕ್ಕೆರಿದ್ದು ಎಂಥಹವರು ತಲೆತೂಗುವಂತೆ ಮಾಡಿತ್ತು, ಆದರೆ ಅಧಿಕಾರಕ್ಕೆ ಬಂದ ಮೇಲೆ ಆಡಳಿತಗಾರ ಎಂಬುದನ್ನೆ ಮರೆತು ಬೀದಿ ಹೋರಾಟಕ್ಕಿಳಿದ ಕೇಜ್ರಿ ಎಲ್ಲ ವಿಷಯಗಳಲ್ಲೂ ದುಡುಕಿನ ನಿರ್ಧಾರ ತೆಗೆದುಕೊಂಡರು ಎನಿಸುತ್ತದೆ, ಆದರೆ ಅಧಿಕಾರಕ್ಕೆ ಅಂಟಿ ಕೂರದೇ ಆಡಿದ ಮಾತಿನಂತೆ 48ದಿನಗಳಿಗೆ ಖುರ್ಚಿ ಬಿಟ್ಟು ಇಳಿದು ಹೋಗಿದ್ದು ದೇಶದ ರಾಜಕಾರಣಿಗಳಿಗೆ ಮಾದರಿಯೇ ಸರಿ! ಆದರೆ ಇಂತಹ ಕೇಜ್ರಿವಾಲ್ ಲೋಕಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಅಧಿಕಾರ ಕಳೆದುಕೊಂಡಿದ್ದು ಮಾತ್ರ ಮೂರ್ಖತನವೇ ಸರಿ! ಇವತ್ತು ಆಮ್ ಆದ್ಮಿ ಪಾರ್ಟಿಯಿಂದ ಇಡೀ ದೇಶದಾಧ್ಯಂತ 45000ಕ್ಕೂ ಅದಿಕ ಮಂದಿ ಸಂಸತ್ ಚುನಾವಣೆಗೆ ಅಭ್ಯರ್ಥಿಗಳಾಗಲು ಅರ್ಜಿ ಸಲ್ಲಿಸಿದ್ದಾರೆ ಈ ಪೈಕಿ 3500ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಎಂಬುದು ದಿಟ. ದೆಹಲಿಯಲ್ಲಿ ಅಧಿಕಾರ ಹಿಡಿಯುವ ಮುನ್ನ ಕೇಜ್ರಿಯ ಪಾರದರ್ಶಕ ನಡೆ, ಅಧಿಕಾರಕ್ಕೇರಿದ ನಂತರ ಪ್ರದರ್ಶಿಸಿದ ನಿಲುವುಗಳು ವಿಭಿನ್ನ ನೆಲೆಗಟ್ಟಿನಲ್ಲಿ ಒಪ್ಪಿತವಾಗಬಹುದು ಇಲ್ಲ ನಿರಾಕರಣೆಗೆ ಒಳಗಾಗಬಹುದು ಆದರೆ ಆತನಿಗೆ ಮತ್ತು ಪಕ್ಷಕ್ಕೆ ದಕ್ಕಿದ ಜನಪ್ರಿಯತೆ ಅದೇ ಮೈಲೇಜನ್ನು ಕಾಯ್ದು ಕೊಂಡಿದೆಯೆ ಎಂಬ ಪ್ರಶ್ನೆಗೆ ಮಾತ್ರ ಸಿಗುವ ಉತ್ತರ ನಿರಾಸೆಯನ್ನು ಹುಟ್ಟಿಸುತ್ತದೆ. ಭರವಸೆಯ ಕ್ರಿಯೆಗಳು ಜನಪ್ರಿಯತೆಯ ಅಮಲಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಎಲ್ಲ ಕಾಲಕ್ಕೂ ತುಡಿತವನ್ನು ಕಾಯ್ದಿಟ್ಟುಕೊಳ್ಳಲಾರದೇನೋ. ಕೆಲವೊಮ್ಮೆ ಅಂತಹ ನಿರ್ಧಾರಗಳು ಆತ್ಮ ವಂಚನೆಯ ನಿಲುವುಗಳಾಗಿ ನೈತಿಕ ಅಧ:ಪತನಕ್ಕೆ ದೂಡುತ್ತವೆ. ಸಧ್ಯ ಕೇಜ್ರಿವಾಲ್ ಹಾಗಾಗದಿರಲಿ, ಪಕ್ಷದ ಸಂಘಟನೆ ಮತ್ತು ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿರುವ ಕೇಜ್ರಿವಾಲ್ ಆಯ್ದ ಜನರನ್ನು ಉದ್ದೆಶಿಸಿ ಮಾತುಕತೆ ನಡೆಸಲಿದ್ದಾರೆ. ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವುದು ಈ ಮಾತುಕತೆಯ ಗುರಿಯಂತೆ. ಬೆಂಗಳೂರಿನ ಟೆಕ್ಕಿಯೊಬ್ಬರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಈ ಕೂಟದಲ್ಲಿ ಪಾಲ್ಗೊಳ್ಳುವವರು ತಲಾ 20ಸಾವಿರ ದೇಣಿಗೆಯನ್ನು ಪಕ್ಷಕ್ಕೆ ನೀಡಬೇಕಂತೆ. ಈಗಾಗಲೇ ಆಮ್ ಆದ್ಮಿ ಪಕ್ಷ ಬುದ್ದಿಜೀವಿಗಳೆನಿಸಿಕೊಂಡವರನ್ನ ಸಮಾಜವಾದಿಗಳನ್ನ ತೆಕ್ಕೆಗೆ ತಂದುಕೊಂಡಿದೆ, ಬದಲಾವಣೆಯ ಭ್ರಮೆ ಹೊತ್ತವರನ್ನು ಸಹಾ, ಈ ನಡುವೆ ಕಳ್ಳ ಕಾಕರೂ ಸಹಾ ನುಸುಳುವ ಪ್ರಯತ್ನ ಮಾಡಿದ್ದಾರೆ. ಅಂದಹಾಗೆ AAP ಕಡಿದಾಳು ಶಾಮಣ್ಣ, ಹಾಜಬ್ಬ, ಕೋದಂಡರಾಮಯ್ಯ,  ರವಿಕೃಷ್ಣಾರೆಡ್ಡಿ, ಅರಕೇಶ್, ಶಶಿಧರ್ ಭಟ್ ರಂಥ ಕಳಂಕರಹಿತರನ್ನು ಕಣಕ್ಕೆ ಇಳಿಸಲು ಪ್ರಯತ್ನಿಸುತ್ತಿದೆಯಂತೆ.AAP ಬೇರೆ ರಾಜ್ಯಗಳಿಂದ ಎರವಲು ತಂದ ನಾಯಕರು-ಕಾರ್ಪಟೇಟ್ ಕುಳಗಳನ್ನು ಕಣಕ್ಕೆ ಇಳಿಸುತ್ತಿಲ್ಲವೆನಿಸುತ್ತದೆ. ಇದು ಒಳ್ಳೆಯ ಸುದ್ದಿ.

          

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...