Sunday, April 27, 2014

ಮರ್ಯಾದಾ ಹತ್ಯೆ, ಜಾತೀಯ ವ್ಯವಸ್ಥೆ!

ಅವತ್ತು ನಿಗಿ ನಿಗಿ ಉರಿಯುವ ಬಿಸಿಲು, ಹೊರಗೆ ಕಾಲಿಡುವುದು ಹೇಗಪ್ಪಾ ಎಂದು ಯೋಚಿಸುವ ಹೊತ್ತಲ್ಲಿಯೇ ಒಂದು ಅನಾಮಿಕ ಕರೆ. ಇಂಥಹ ಊರಿನಲ್ಲಿ ಪ್ರೇಮಿಸಿದ ಅನ್ಯ ಜಾತಿಯ ಪ್ರೇಮಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದು ಮರಕ್ಕೆ ಕಟ್ಟಿ ಹಾಕಲಾಗಿದೆ ಬನ್ನಿ. ಸರಿ ತಕ್ಷಣ ಆ ಹಳ್ಳಿಗೆ ಧಾವಿಸಿದೆ, ಹುಡುಗಿ ಪರಿಶಿಷ್ಠ ಜಾತಿ, ಹುಡುಗ ಕುರುಬ ಸಮುದಾಯದವ ಇಬ್ಬರನ್ನು ಹಿಂದಿನ ದಿನದ ಸಂಜೆಯಿಂದ ಮರುದಿನದ ಮದ್ಯಾಹ್ನದ ವರೆಗೂ ಕಟ್ಟಿಹಾಕಲಾಗಿತ್ತು. ಅಷ್ಟಕ್ಕೂ ಕಟ್ಟಿ ಹಾಕಿದ್ದು ಯಾರು ಎಂದರೆ ತಂದೆ ತಾಯಿಗಳಲ್ಲ ಗ್ರಾಮದ ಜನ! ಹುಡುಗ ಹುಡುಗಿ ಬೇರೆ ಜಾತಿಯವರು ಹೇಗೆ ಮದುವೆ ಆಗುತ್ತಾರೆ ಅದೆಲ್ಲಾದರೂ ಸಾಧ್ಯವೇ ಎಂಬ ಪ್ರಶ್ನೆ ಎಸೆದರು, ಅಷ್ಟೊತ್ತಿಗೆ ಪೋಲೀಸ್ ಬಂದು ಹುಡುಗ ಹುಡುಗಿಯನ್ನು ಬಿಡುಗಡೆ ಮಾಡಿ ಪೋಷಕರ ಸಮೇತ ಸ್ಟೇಷನ್ ಗೆ ಕರೆದೊಯ್ದರು. ಅಲ್ಲಿ ಮಾಮೂಲಿ ರಾಜೀ ಪಂಚಾಯ್ತಿ ಕಡೆಗೆ ಹುಡುಗ-ಹುಡುಗಿ ಅವರವರ ಮನೆಗೆ ವಾಪಾಸಾಗಿ ಬಿಟ್ಟರು, ಪೆಚ್ಚಾಗುವ ಸರದಿ ನನ್ನದು. 
        ಮರುದಿನವೇ ಮಂಡ್ಯದ ಹಳ್ಳಿಯೊಂದರಲ್ಲಿ ದಲಿತ ಹುಡುಗ, ಗೌಡರ ಹುಡುಗಿಯನ್ನು ಮದುವೆ ಓಡಿ ಹೋದರು, ತಿಂಗಳಾದ ಮೇಲೆ ಎಲ್ಲ ಮರೆತಿರುತ್ತಾರೆ ಎಂದು ಊರಿಗೆ ಬಂದರೆ ಹುಡುಗಿಯ ಅಪ್ಪನೇ ಉಪಾಯವಾಗಿ ಹುಡುಗಿಯನ್ನು ಕರೆತಂದು ದನಕ್ಕೆ ಬಡಿದ ಹಾಗೆ ಬಡಿದು ಎಲ್ಲರೂ ನೋಡುತ್ತಿದ್ದ ಹಾಗೆಯೇ ನೇಣು ಬಿಗಿದು ಬಿಟ್ಟ. ಅದೇ ರೀತಿ ರಾಮನಗರದಲ್ಲಿ ಉಪ್ಪಾರರ ಹುಡುಗನೊಬ್ಬ ಲಿಂಗಾಯಿತರ ಹುಡುಗಿಯನ್ನು ಮದುವೆಯಾಗಿದ್ದ ನೆಂಬ ಕಾರಣಕ್ಕೆ ಅವನನ್ನು ಅಟ್ಟಾಡಿಸಿ ಬಡಿದು ಹುಡುಗಿಯನ್ನು ನಡು ರಸ್ತೆಯಲ್ಲೇ ಕಗ್ಗೊಲೆ ಮಾಡಲಾಯಿತು. ಕಳೆದ ವರ್ಷ ದಲಿತನೋರ್ವನನ್ನು ಮದುವೆಯಾದ ಲಿಂಗಾಯಿತ ಸಮುದಾಯದ ಉಪನ್ಯಾಸಕಿಯನ್ನು ಅವಳ ಅಣ್ಣನೇ ಕೊಲೆಗೈದು ಬಿಟ್ಟ! ಇದೀಗ ಮತ್ತೆ ಅಂತಹುದೇ ಸುದ್ದಿ ಬಂದಿದೆ. ಅದೇ ಮಂಡ್ಯ ಜಿಲ್ಲೆಯಿಂದ ನಾಯಕರ ಪೈಕಿ ಹುಡುಗಿಯನ್ನು ಎರಡೂ ಕಡೆಯ ಪೋಷಕರ ವಿರೋಧದ ನಡುವೆಯೇ ಮದುವೆಯಾದ ದಲಿತ ಹುಡುಗ ತಿಂಗಳು ಬಾಳಿಸಲಿಲ್ಲ, ಚಿಕ್ಕಪ್ಪ-ಚಿಕ್ಕಮ್ಮ ಎನಿಸಿಕೊಂಡವರೇ  ಬೆಂಕಿ ಹಾಕಿ ಬರ್ಭರವಾಗಿ ಕೊಲೆಗೈದಿದ್ದಾರೆ. 

    12ನೇ ಶತಮಾನದ ಕ್ರಾಂತಿ ಪುರುಷ ಬಸವೇಶ್ವರರ ಜಯಂತಿ ಮುನ್ನಾ ದಿನಗಳಲ್ಲೇ ಇಂತಹ ಕೃತ್ಯ ವರದಿಯಾಗಿರುವುದು ಆಧುನಿಕ ಸಮಾಜದಲ್ಲಿ ಕ್ರೌರ್ಯ ಮತ್ತು ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿರುವುದು ಅತ್ಯಂತ ನೋವಿನ ಸಂಗತಿ. ಮರ್ಯಾದಾ ಹತ್ಯೆ ಎನ್ನುವುದು ಆಧುನಿಕ ಸಮಾಜದ ಕೊಡುಗೆ ಮತ್ತು ಅರಗಿಸಿಕೊಳ್ಳಲಾಗದ ಅಮಾನವೀಯ ಕೃತ್ಯ. ಇದುವರೆವಿಗೂ ಮರ್ಯಾದಾ ಹತ್ಯೆಗಳು ಅನಕ್ಷರತೆ, ಮೌಡ್ಯ, ಜಾತೀಯತೆ ಹೆಚ್ಚಿರುವ ಉತ್ತರದ ಭಾರತದ ವಿವಿಧ ರಾಜ್ಯಗಳಿಂದ ಮಾತ್ರ ವರದಿಯಾಗುತ್ತಿತ್ತು. ಈಗ ನಮ್ಮ ಕಣ್ಣ ಮುಂದೆಯೇ ನಮ್ಮ ರಾಜ್ಯದಲ್ಲಿಯೇ ಅದು ಅಸ್ತಿತ್ವ ಕಂಡು ಕೊಂಡಿರುವುದು ಎಷ್ಟೊಂದು ಅಸಹನೀಯ ಅಲ್ಲವೇ?
        ಜಾತೀಯ ವ್ಯವಸ್ಥೆಯನ್ನು ತೊಡೆಯಲು ಮುಕ್ತ ವ್ಯವಸ್ಥೆಯಲ್ಲಿ ಅಂತರ್ಜಾತೀಯ ವಿವಾಹಗಳಾಗಬೇಕು ಎಂದು 70 ಮತ್ತು 80ರ ದಶಕದಲ್ಲಿ ಬುದ್ದಿ ಜೀವಿ ವಲಯ ಆಲೋಚಿಸಿದ್ದಲ್ಲದೇ ಅದನ್ನು ಕಾರ್ಯಗತ ಗೊಳಿಸಿ ಬಿಟ್ಟಿದ್ದರು. ಸಾಹಿತಿ ಯು ಆರ್ ಅನಂತಮೂರ್ತಿ, ಪ್ರೊ. ರಾಮದಾಸ್, ದೇವನೂರ ಮಹಾದೇವ, ಪೂರ್ಣಚಂದ್ರ ತೇಜಸ್ವಿ, ಅರವಿಂದ ಮಾಲಗತ್ತಿ ಹೀಗೆ ಅನೇಕ ಮಂದಿ ಅಂತರ್ಜಾತೀಯ ವಿವಾಹ ಬಂಧನಕ್ಕೊಳಗಾದವರು. ಅಲ್ಲಿ ಜಾತಿಗಿಂತ ಪ್ರೀತಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿತ್ತು. ಜಗತ್ತಿನಲ್ಲಿ ಮೊದಲು ಹುಟ್ಟಿದ್ದೇ ಪ್ರೀತಿ, ಅದು ಹುಟ್ಟುವಾಗ ಜಾತಿ ಯಾವುದು ಎಂದು ನೋಡಿ ಹುಟ್ಟುವಂತಹದ್ದಲ್ಲ, ಹೀಗಿರುವಾಗ ಅದು ಗಟ್ಟಿಗೊಳ್ಳಲು ಜಾತಿ ಅಗತ್ಯವಿರಲಿಲ್ಲ ಅವತ್ತು. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ, ಜಾತೀಯ ಕಂದಕಗಳು ಮೊದಲಿಗಿಂತ ಹೆಚ್ಚು ತೆರೆದುಕೊಂಡಿವೆ, ಪ್ರೀತಿ ಹುಟ್ಟುವ ಮೊದಲು ಜಾತಿ ನೋಡಿ ಪ್ರೀತಿಸುವ ಪರಿಪಾಠ ಬೆಳೆಯುತ್ತಿರುವುದು ಇಲ್ಲವೇ ಜಾತಿ ನೋಡದೇ ಪ್ರೀತಿಸಿದ ಯುವ ಮನಸ್ಸುಗಳನ್ನು ಕೊಲ್ಲುವ ಮನಸ್ಥಿತಿ ಸೃಷ್ಟಿಯಾಗುತ್ತಿದೆ.      
         ಪ್ರಬುದ್ದತೆಯ ಕೊರತೆಯ ಜೊತೆಗೆ ಸಂಕುಚಿತ ಜಾತಿ ಮನಸ್ಸು ಪ್ರತೀ ಹಂತದಲ್ಲೂ ಜಾಗೃತವಾಗುವಂತಹ ಕ್ರಿಯೆಗಳು ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವುದು ಮತ್ತು ಜಾತಿ ಮೀರುವ ಕ್ರಿಯೆಗೆ ಪೂರಕವಾದ ವಾತಾವರಣ ಇಲ್ಲದಿರುವುದು ಮರ್ಯಾದಾ ಹತ್ಯೆಯಂತಹ ಕೃತ್ಯಗಳಿಗೆ ಅವಕಾಶ ಮಾಡುತ್ತಿದೆ. ಮಹಾಪುರುಷರು ಶತಮಾನಗಳ ಆದಿಯಿಂದಲೇ ಜಾತಿ ಮೀರುವ ಕ್ರಿಯೆಗೆ ಚಾಲನೆ ನೀಡಿದ್ದಾರೆ, ಅನೇಕ ಪರಿವರ್ತನೆಗಳಿಗೆ ನಾಂದನೆ ಹಾಡಿದ್ದಾರೆ, ದೀಕ್ಷೆ ನೀಡಿದ್ದಾರೆ ಆದರೆ ವರ್ತಮಾನದಲ್ಲಿ ಅವೆಲ್ಲ ಜಾತೀಯ ವಿಷಬೀಜಗಳಾಗಿ ಬದಲಾಗಿವೆ. ಸಮಾಜದ ಎಲ್ಲ ಸ್ಥರದಲ್ಲೂ ಜಾತೀಯತೆ ಮೇರೆ ಮೀರಿದೆ. ಇದಕ್ಕೆ ಸಾಮಾಜಿಕ ಕಾರಣಗಳು ಮಾತ್ರವಲ್ಲ ರಾಜಕೀಯ ಪಕ್ಷಗಳ ಮನಸ್ಥಿತಿ, ಸರ್ಕಾರಗಳ ದುರ್ಬಲ ನೀತಿಗಳು ಕಾರಣವಾಗಿರ ಬಹುದು. ತಮ್ಮ ಮತ ಬ್ಯಾಂಕ್ ಗಾಗಿ ತರುವ ಯೋಜನೆಗಳು ಜಾತಿಯ ನಡುವೆ ಕಂದಕ ಸೃಷ್ಟಿಸಿದರೆ, ಸಾಮಾಜಿಕ ನ್ಯಾಯದ ನೆಪದಲ್ಲಿ ಎಲ್ಲ ಜಾತಿಗಳನ್ನು ಮೀಸಲು ಅಡಿಯಲ್ಲಿ ತರುವ ಕ್ರಿಯೆಯೂ ಸಹಾ ಕಂದಕಕ್ಕೆ ಅವಕಾಶ ಕಲ್ಪಿಸಿದೆ. ಸಂವಿಧಾನಾತ್ಮಕವಾಗಿ ಸಮಾಜದ ಅತ್ಯಂತ ಕೆಳಸ್ಥರದ ವರ್ಗಕ್ಕೆ ಮೀಸಲಾತಿಯನ್ನು ಆದ್ಯತೆ ಮೇಲೆ ಕೊಟ್ಟರೂ ಸಹಾ ಮತಬ್ಯಾಂಕ್ ನ ಉದ್ದೇಶದಿಂದ ಸ್ಪೃಶ್ಯ ಸಮುದಾಯಗಳನ್ನು ಸಹಾ ಮೀಸಲು ಅಡಿಗೆ ತರಲಾಗಿದೆ. 

       ಸರ್ಕಾರದ ಯೋಜನೆಗಳನ್ನು ಒಂದು ವರ್ಗ ಪಡೆಯುತ್ತಿದೆ ಅಥವಾ ಮೀಸಲು ಅನುಕೂಲವನ್ನು ಪಡೆಯುತ್ತಿದೆ ಎಂದರೆ ಅದರಲ್ಲಿ ಶೇ.10ರಷ್ಟು ಮಂದಿ ವಾಸ್ತವ ನೆಲೆಗಟ್ಟಿನಲ್ಲಿ ಅರ್ಹತೆ ಗಿಟ್ಟಿಸಿದ್ದರೆ ಅದರೊಳಗೆ ಸೇರಿರುವ ಸ್ಪೃಶ್ಯ ಸಮುದಾಯ ಕೊಡ ಫಲಾನುಭವಿಯಾಗಿ ಇತರರ ಕಣ್ಣು ಕೆಂಪಗಾಗಲು ಕಾರಣವಾಗಿಬಿಡ ಬಹುದು. ಎದೆಗೆ ಬಿದ್ದ ಅಕ್ಷರದಲ್ಲಿ ದೇವನೂರ ಮಹಾದೇವ ಹೀಗೆ ಬರೆಯುತ್ತಾರೆ, ನಂಜನಗೂಡಿನ ಹಾಸ್ಟೆಲ್ ಒಂದರಲ್ಲಿ ಒಬ್ಬ ಗಿರಿಜನ ಯುವಕನಿಗೆ ಮೇಲಿನಿಂದ ಎತ್ತಿ ನೀರನ್ನು ಕೊಡಲಾಗುತ್ತಿತ್ತು ಕುಡಿಯಲೋಸುಗ, ಅದೇ ರೀತಿ ಒಕ್ಕಲಿಗನ ಮನೆಯ ಆಹಾರವನ್ನು ಮೇಲ್ಜಾತಿಯ ಮಗುವೊಂದು ಪಡೆದುದನ್ನು ಅವರಮ್ಮ ಆಕ್ಷೇಪಿಸುತ್ತಿದ್ದಳು ಎಂಬುದು. ಕಳೆದ ವರ್ಷ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿಯನ್ನು ಓದಿದ್ದೆ ಗುಂಡ್ಲುಪೇಟೆ, ಚಾಮರಾಜನಗರ ಭಾಗದಲ್ಲಿ ನಾಗರೀಕತೆಯನ್ನೇ ಕಾಣದ ಗಿರಿಜನರು ತಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಪರಿಶಿಷ್ಠ ಜಾತಿಯ ಮಹಿಳೆ ಅಡುಗೆ ಮಾಡುವುದನ್ನು ಮತ್ತು ತಮ್ಮ ಮಕ್ಕಳು ಅದನ್ನು ತಿನ್ನುವುದನ್ನು ಸಹಿಸಲಾಗದೇ ಶಾಲೆಗೆ ಮಕ್ಕಳನ್ನೇ ಕಳುಹಿಸಲಿಲ್ಲ. ಈ ಘಟನೆಗಳು ಏನನ್ನು ಸಾಕ್ಷೀಕರಿಸುತ್ತವೆ ಮತ್ತು ಜಾತೀಯ ತೀವ್ರತೆಯನ್ನು ಹೇಗೆ ಪ್ರತಿನಿಧಿಸುತ್ತವೆ ಎಂದರೆ ಸರಪಳಿ ಮಾದರಿಯ ಜಾತೀಯ ವ್ಯವಸ್ಥೆಯಿಂದ  ವರ್ತಮಾನದಲ್ಲೂ ಬಿಡುಗಡೆಯಿಲ್ಲ ಎನ್ನುವುದು. ಜನರ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಕೂಡ ಜಾತೀಯ ವ್ಯವಸ್ಥೆಯನ್ನು ಹಿಂದೆಂದಿಗಿಂತ ಹೆಚ್ಚು ಪೋಷಿಸಲು ಅವಕಾಶ ಮಾಡಿದೆ. ಪರಿಣಾಮ ತಮ್ಮ ಮಗ ಅಥವಾ ಮಗಳು ಬೇರೆ ಜಾತಿಯವರನ್ನು ಇಷ್ಟ ಪಡಬಹುದು ಎಂಬ ಕಾರಣಕ್ಕೆ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ ಈ ಆಧುನಿಕ ದಿನಮಾನದಲ್ಲಿಯೂ. ಬಾಲ್ಯದಿಂದಲೇ ಜಾತೀಯ ಪಾಠಗಳನ್ನು ಪೋಷಕರು ಹೇಳಿಕೊಡುತ್ತಿದ್ದಾರೆ ಕಂದಕಗಳು ಹೆಚ್ಚಾಗಲು ಕಾರಣರಾಗುತ್ತಿದ್ದಾರೆ, ನಮ್ಮ ರಾಜಕೀಯ ನಾಯಕರು ಕೂಡಾ ಜಾತಿಗೊಬ್ಬ ಸ್ವಾಮೀಜಿಗಳನ್ನು ಹುಟ್ಟು ಹಾಕುತ್ತಾ ಮಠ ಮಾನ್ಯಗಳನ್ನು ಬೆಳೆಸುತ್ತಾ ಜಾತಿಯ ಭಾವನೆ ಇನ್ನಷ್ಟು ಕೆರಳುವಂತೆ ಮಾಡಿದ್ದಾರೆ, ನಾವೆಲ್ಲ ಪ್ರೀತಿಸುವ ಕವಿರತ್ನ ಕಾಳಿದಾಸ, ಕನಕದಾಸ, ಸಂಗೊಳ್ಳಿ ರಾಯಣ್ಣ, ಭಗೀರಥ, ವಿಶ್ವಕರ್ಮ, ಬಸವಣ್ಣ, ವಾಲ್ಮೀಕ , ಟಿಪ್ಪುಸುಲ್ತಾನ್ ಇವರಿಗೆಲ್ಲ ಒಂದೊಂದು ಜನ್ಮ ಜಯಂತಿಯನ್ನು ಘೋಷಣೆ ಮಾಡಿ ಜಾತಿಗಳನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ, ಇವು ಸಮಾಜವನ್ನು ಕಟ್ಟುವ ಕ್ರಿಯೆಗಳಲ್ಲ ಬದಲಿಗೆ ಸಮಾಜದ ಕಂದಕವನ್ನು ಹೆಚ್ಚಿಸುವ ಕ್ರಿಯೆಗಳು. ಮತ್ತು ಮರ್ಯಾದ ಹತ್ಯೆಯಂತ ಕ್ರಿಯೆಗಳಿಗೆ ಇಂತಹ ಕ್ರಿಯೆಗಳ ಕೊಡುಗೆಯೇ ಹೆಚ್ಚು ಅಲ್ಲವೇ?

Sunday, April 20, 2014

ವಿದ್ಯಾರ್ಥಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು!


ಎಷ್ಟೋ ಸಲ ಬದುಕು ಎಲ್ಲಿಂದೆಲ್ಲಿಗೋ ನಮ್ಮನ್ನು ತಂದು ನಿಲ್ಲಿಸಿ ಬಿಡುತ್ತವೆ. ಹಾಗೆ ಎಲ್ಲಿಂದೆಲ್ಲಿಗೋ ತಂದು ನಿಲ್ಲಿಸುವ ಮುನ್ನ ನಾವೇನಾಗಿದ್ದೇವು ? ಏನಾಯಿತು?ಎಂಬ ಸಿಂಹಾವಲೋಕನ ಭವಿಷ್ಯದ ದಿನಗಳಲ್ಲಿ ಒಂದು ಫ್ರೇಮಿನೊಳಗೆ ನಮ್ಮನ್ನು ತಂದು ಬಿಡಬಹುದು ಇಲ್ಲವೇ ಮುಂದಿನ ಪೀಳಿಗೆಗೆ ಹೀಗೆಯೇ ನಡೆಯ ಬೇಕು ಎಂಬ ಕಟ್ಟಲೆಯನ್ನು ಹೇರ ಬಹುದು. ಇವೆಲ್ಲವೂ ವಾಸ್ತವ ಜಗತ್ತಿನ ವೈರುದ್ಯಗಳು.

        ವಿದ್ಯಾರ್ಥಿ ಜೀವನದಲ್ಲಿ ಇದು ಬಹು ಮುಖ್ಯವಾದ ಅಂಶ, ಬದುಕಿನ ಟರ್ನಿಂಗ್ ಪಾಯಿಂಟ್ ಶುರುವಾಗುವುದೇ ಪ್ರೌಢಶಾಲ ಹಂತ ದಾಟಿದ ಮೇಲೆ ಮತ್ತು ಪಿಯು ಹಂತವನ್ನು ಮುಗಿಸಿದ ಮೇಲೆ. ಮೊದಲೆಲ್ಲ ಹಾಗಿರಲಿಲ್ಲ ಬಿಡಿ ನಾವಂದುಕೊಂಡದ್ದೇ ಹಾದಿ, ಸಾಗಿದ್ದೇ ದಿಕ್ಕು. ಆದರೆ ಬದಲಾದ ಪರಿಸ್ಥಿತಿಯಲ್ಲಿ  ಎಲ್ಲವೂ ನಿರೀಕ್ಷಿತ, ಕುತೂಹಲಕ್ಕೆ ಇಲ್ಲಿ ಜಾಗವಿಲ್ಲ. ಆಗೆಲ್ಲಾ ಎಷ್ಟು ಕಷ್ಟ ವಿತ್ತು, ಸರ್ಕಾರಿ ಶಾಲೆಯಾದರೂ ಉಸಿರು ಗಟ್ಟಿಸುವ ವಾತಾವರಣ ತರಗತಿಯಲ್ಲಿ, ಆಟೋಟಗಳಲ್ಲಿ ಅಷ್ಟೆ ಉತ್ಸಾಹ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಡಿದ್ದೇ ಆಟ-ನೋಟ, ಓದಲಿಕ್ಕೆ ಕಪಾಟಿನಿಂದ ಪುಸ್ತಕಗಳು ದಂಡಿಯಾಗಿ ಬರುತ್ತಿದ್ದವು, ಪಠ್ಯೇತರ ಚಟುವಟಿಕೆಗಳಲ್ಲೂ ಉತ್ಸಾಹ, ಪೋಷಕರಿಂದ ಕಾಳಜಿ ವಹಿಸುವ ಸಂಗತಿಗಳು ಅಷ್ಟಕ್ಕಷ್ಟೆ. ನಮ್ಮ ನೋಟ್ಸ್ ನಾವೇ ಮಾಡ್ಕೋತಿದ್ವಿ, ಹೋಂ ವರ್ಕ್ ಬರೆಯೋದು, ಪಾಠ ಓದೋದು, ನಿರ್ವಂಚನೆಯಿಂದ ಮತ್ತು ವ್ಯಾಪಾರದ ಸೋಂಕಿಲ್ಲದೇ ಉಚಿತ ಮನೆ ಪಾಠ ಹೇಳುತ್ತಿದ್ದ ಶಿಕ್ಷಕರು! ಇಂತಹ ಪರಿಸರ ಸೃಜನಶೀಲತೆಗೂ ಒತ್ತು ಕೊಡುತ್ತಿತ್ತು, ಆದರೆ ಈಗೆಲ್ಲಿದೆ ಅಂತಹ ಪರಿಸರ? ಸರ್ಕಾರಿ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರು ಎಷ್ಟರ ಮಟ್ಟಿಗೆ (ಕ್ಷಮಿಸಿ ಎಲ್ಲ ಶಿಕ್ಷಕರನ್ನು ಉದ್ದೇಶಿಸಿಲ್ಲ) ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸುತ್ತಿದ್ದಾರೆ? ತಮ್ಮ ಮಕ್ಕಳನ್ನೇ ಸರ್ಕಾರಿ ಶಾಲೆಗಳಲ್ಲಿ ಕಳುಹಿಸದ ಶಿಕ್ಷಕರು, ಸರ್ಕಾರಿ ನೌಕರರು, ಸರ್ಕಾರ ಸಂಬಳ ಸವಲತ್ತು ಮಾತ್ರ ಅಪೇಕ್ಷಿಸುತ್ತಾರೆ. ಇಂತಹ ನಿಲುವುಗಳೇ ಶಿಕ್ಷಣ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆಯಲ್ಲವೇ? ಸರ್ಕಾರ ನಿಯಮಗಳನ್ನ ಉಲ್ಳಂಘಿಸಿ ಶಿಕ್ಷಣದ ಹೈಟೆಕ್ ಅಂಗಡಿಗಳಿಗೆ ಅವಕಾಶ ಕಲ್ಪಿಸುತ್ತಿದೆ ಮತ್ತು ಸುಂದರ ಪರಿಸರದ ಕನ್ನಡ ಶಾಲೆಗಳನ್ನು ತಾನೇ ಮುಂದಾಗಿ ನಿಂತು ಕಗ್ಗೊಲೆ ಮಾಡುತ್ತಿದೆ. 
             
            ಜಾಗತೀಕರಣದ ಗಾಳಿಯೇ ಹಾಗೆ ನಮ್ಮ ಮನಸ್ಸನ್ನು ಅದು ಬದಲಿಸುತ್ತದೆ, ಕ್ಷಣಿಕ ಆಮಿಷಗಳಿಗೆ ಬಲಿಬೀಳುವ ಮನಸ್ಸು ವಾಸ್ತವವನ್ನ ಅರಿಯದೇ ಮೂಲಕ್ಕೆ ಧಕ್ಕೆ ಯಾಗುವ ಸಂಗತಿಗಳೆಡೆಗೆ ನಮ್ಮನ್ನು ಸೆಳೆದು ಬಿಡುತ್ತದೆ. ಕನ್ನಡ ಶಾಲೆಗಳ ವಿಷಯವೂ ಹಾಗೆಯೇ, ತಮ್ಮ ಮಗುವಿಗೆ ಇಷ್ಟವಿರಲಿ ಬಿಡಲಿ ಹೈಟೆಕ್ ಕಲ್ಚರ್ ನ ಶಾಲೆಗಳಲ್ಲಿ ಅವು ಕಲಿಯಬೇಕು ಎಂಬ ಇರಾದೆಗೆ ಬಿದ್ದು ಒತ್ತಡದಿಂದ ಕಲಿಕೆಗೆ ಹಚ್ಚಲಾಗುತ್ತದೆ. ಇದನ್ನೆ ಅನುಸರಿಸುವ ಆಜುಬಾಜಿನ ಮಂದಿ ತಮಗೆ ಸಾಮರ್ಥ್ಯವಿರಲಿ ಬಿಡಲಿ ತಾವು ಪಕ್ಕದವರನ್ನು ಅನುಸರಿಸುವ ಉಮೇದಿಗೆ ಬಿದ್ದು ಬಿಡುತ್ತಾರೆ. ಹಾಗಾಗಿ ಶಿಕ್ಷಣ ವ್ಯಾಪಾರದ ಅಡ್ಡೆಗಳಿಗೆ ಮಕ್ಕಳು ಸೇರುವ ಮತ್ತು ಕಲಿಯುವ ಅನಿವಾರ್ಯತೆ ಸೃಷ್ಟಿಸುತ್ತಾರೆ. ಆಗ ಮಗುವಿನ ಪ್ರತೀ ಹಂತದಲ್ಲೂ ಪೋಷಕರ ಹಸ್ತಕ್ಷೇಪವೇ ಜಾಸ್ತಿ, ಮಕ್ಕಳ ನೋಟ್ಸ್ ತಾವೇ ಬರೆಯಬೇಕು, ಸ್ನಾನ ಮಾಡಿಸಬೇಕು, ಬಟ್ಟೆ ಹಾಕಬೇಕು, ಶಾಲೆಗೆ ಕರೆದೊಯ್ಯಬೇಕು, ಹೊತ್ತು ಹೊತ್ತಿಗೆ ಬಾಕ್ಸ್ ತೆಗೆದುಕೊಂಡು ಹೋಗಿ ಊಟ ಮಾಡಿಸಬೇಕು, ಪರೀಕ್ಷೆ ಬಂದಾಗ ಇಂಥದ್ದೇ Rank ಬರಬೇಕು, ಕಾರ್ಯಕ್ರಮಗಳಲ್ಲಿ ಇಂಥದ್ದೇ ಸಿನಿಮಾ ಸಾಂಗಿಗೆ ಕುಣಿಯಬೇಕು ಹೀಗೆ ಇತ್ಯಾದಿ ಒತ್ತಡಕ್ಕೆ ಮಕ್ಕಳ ಮೇಲೆ ಒತ್ತಡ ಸೃಷ್ಠಿಯಾಗುತ್ತದೆ. 10ನೇ ತರಗತಿ ಮತ್ತು ಪಿಯು ಮುಗಿಸುವಾಗ ಇನ್ನಿಲ್ಲದ ಒತ್ತಡ ಹೇರಿ ಪರೀಕ್ಷೆ ಬರೆಸುತ್ತಾರೆ ನಂತರ ಅವನು/ಳು ಇಂಜಿನಿಯರ್ರೇ ಆಗಬೇಕು, ಡಾಕ್ಟರ್ ಆಗಬೇಕು ಎಂಬ ಹಪಾಹಪಿಗೆ ಬಿದ್ದು ವೃತ್ತಿ ಶಿಕ್ಷಣಕ್ಕೆ ಸೇರಿಸುತ್ತಾರೆ. ಹೀಗೆ ಒತ್ತಡದಲ್ಲೇ ಸೃಷ್ಟಿಯಾಗುವ ಆತ/ಅವಳು ಬದುಕಿನಲ್ಲಿ ದುಡ್ಡು ಮಾಡುವುದನ್ನು ಕಲಿಯಬಹುದಷ್ಟೇ ಆದರೆ ಸಾಮಾಜಿಕ ಜೀವನದಲ್ಲಿ ಸಂಪೂರ್ಣವಾಗಿ ವಿಫಲವಾಗುವ ಸಂಧರ್ಭಗಳೇ ಅಧಿಕ. 

           ಹೀಗೆ ದುಡ್ಡು ಮಾಡುವುದನ್ನು ಕಲಿಸುವ ಪೋಷಕರು ಅದೇ ಮಕ್ಕಳಿಗೆ ನೈತಿಕ ಪಾಠವನ್ನ, ಸಾಮಾಜಿಕ ಬಾಂಧವ್ಯದ ಪಾಠವನ್ನ ಹೇಳಿ ಕೊಡುವುದಿಲ್ಲ, ಅವರಿಗೆ ಅದೆಲ್ಲ ಗಮನಿಸುವ ಪುರುಸೊತ್ತು ಕಡಿಮೆಯೇ. ಹೀಗಿರುವಲ್ಲಿ ಆತ/ಅವಳು ವೃದ್ದಾಪ್ಯದಲ್ಲಿ ಒಂಟಿ ಮಾಡಿ ದೂರ ಸರಿದಾಗ ಅನುಭವಿಸುವ ಯಾತನೆಯೇ ಅದಕ್ಕೆ ಉತ್ತರವಾಗ ಬಹುದು. ಕಲಿಯುವ ಮಗುವಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು, ಒಳ್ಳೆಯದ್ದು ಮತ್ತು ಕೆಟ್ಟದ್ದನ್ನು ನಿರ್ಧರಿಸುವ ಗುಣ ಬೆಳೆಸುವ ಜೊತೆಗೆ ಪರಿಸರದಲ್ಲಿ ಅನೇಕ ಸಂಗತಿಗಳನ್ನ ಗ್ರಹಿಕೆ ತಂದು ಕೊಳ್ಳುವ ಅವಕಾಶಗಳನ್ನ ಮುಕ್ತವಾಗಿ ನೀಡಬೇಕು. ಮಕ್ಕಳ ಪ್ರೌಢಾವಸ್ಥೆ ಮಕ್ಕಳಿಗೆ ಮಾತ್ರ ಟರ್ನಿಂಗ್ ಪಾಯಿಂಟ್ ಅಲ್ಲ ಪೋಷಕರಿಗೂ ಇದು ಟರ್ನಿಂಗ್ ಪಾಯಿಂಟ್ ಎಂಬುದನ್ನು ತಿಳಿದುಕೊಂಡಾಗ ಮಾತ್ರ ವ್ಯವಸ್ಥೆಯ ಸುಧಾರಣೆ ನಿರೀಕ್ಷಿಸ ಬಹುದು ಅಲ್ಲವೇ? 

Sunday, April 13, 2014

ಸಂವಿಧಾನದ ಸದಾಶಯ ಮತ್ತು ಅಂಬೇಡ್ಕರ್

ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಯಾಕೆ ಬೇಕು? ಸಮಾಜವಾದ, ಕಮ್ಯುನಿಸಂ ವ್ಯವಸ್ಥೆ ಆಗುವುದಿಲ್ಲವೇ ಅಲ್ಲಿಯೂ ಸಮಾನತೆಯನ್ನು ಪ್ರತಿಪಾದಿಸಲಾಗುತ್ತದಲ್ಲವೇ? ಭಾತರ ದೇಶದ ಪ್ರಜಾಪ್ರಬುತ್ವಕ್ಕೆ ಮಾದರಿ ಯಾವುದು? ಪ್ರೆಂಚ್ ಕ್ರಾಂತಿಯಿಂದ ಪ್ರೇರೇಪಿತರಾಗಿದ್ದೀರ? ಎಂಬ ಪ್ರಶ್ನೆಗಳನ್ನು ಅವತ್ತು ಭಾರತ ದೇಶದ ಮೊದಲ ಕಾನೂನು ಮಂತ್ರಿಯ ಮುಂದೆ ಪತ್ರಕರ್ತರು ಕೇಳಿದ್ದರು. ಅವೆಲ್ಲಾ ಪ್ರಶ್ನೆಗಳಿಗೂ ಸಾವಧಾನದಿಂದ ಮತ್ತು ದೃಢವಾಗಿ ಉತ್ತರಿಸಿದ ಮಂತ್ರಿಗಳು ಭಾರತ ಬಹುದೊಡ್ಡ ಸಾಂಸ್ಕೃತಿಕ ರಾಷ್ಟ್ರ. ಇಲ್ಲಿ ಜಗತ್ತಿನ ಬೇರೆ ಯಾವ ಭಾಗದಲ್ಲೂ ಇಲ್ಲದ ವಿವಿಧ ಮತ-ಧರ್ಮಗಳ ಜನರು ಇದ್ದಾರೆ ಅವರೆಲ್ಲರಿಗೂ ಸಮಾನ ಅವಕಾಶಗಳನ್ನ ಸಮಾಜವಾದ ಇಲ್ಲವೇ ಕಮ್ಯುನಿಸಂ ನಿಂದ ಪರಿಪೂರ್ಣವಾಗಿ ಕಟ್ಟಿಕೊಡಲು ಸಾಧ್ಯವಿಲ್ಲ, ಏಕೆಂದರೆ ದೇಶದಲ್ಲಿ ಈಗಾಗಲೇ ಅಸಮಾನತೆ ಇದೆ ಸಂಪನ್ಮೂಲ ಒಂದೆಡೆ ಕೇಂದ್ರೀಕೃತವಾಗಿದೆ ಇತರೆ ರಾಷ್ಟ್ರಗಳಂತೆ ಇಲ್ಲಿ ಕೆಲವು ಜನಾಂಗಗಳು, ಧರ್ಮಿಯರು ಇಲ್ಲ ಹಾಗಾಗಿ ಪ್ರಜಾಪ್ರಭುತ್ವ ಬಂದರೆ ಸಮಾಜದ ಅತ್ಯಂತ ಕೆಳಸ್ಥರದ ಪ್ರಜೆಗೂ ಎಲ್ಲ ಅವಕಾಶಗಳು ಆಧ್ಯತೆಯ ಮೇಲೆ ದಕ್ಕುತ್ತವೆ, ವ್ಯವಸ್ಥೆಯಲ್ಲಿ ಪಾಲ್ಗೊಳುವಿಕೆಗೆ ಅವಕಾಶ ದೊರೆಯುತ್ತದೆ ಆದ್ದರಿಂದ ಪ್ರಜಾಪ್ರಭುತ್ವ ದಿಂದ ಮಾತ್ರ ಭಾರತ ದೇಶ ಸದೃಢತೆಯನ್ನು ಹೊಂದಲು ಸಾದ್ಯ, ಪ್ರಜಾತಾಂತ್ರಿಕ ವ್ಯವಸ್ಥೆ ಉಸಿರು ಕಟ್ಟಿದ ವಾತಾವರಣದಿಂದ ಮುಕ್ತತೆಯೆಡೆಗೆ ಎಲ್ಲ ಜನರನ್ನು ಕರೆದೊಯ್ಯುತ್ತದೆ ಎಂದು ನುಡಿದ ಅವರು ದೇಶದ ಪ್ರಜಾಪ್ರಬುತ್ವ ವ್ಯವಸ್ಥೆಯನ್ನು ಪ್ರೆಂಚ್ ನಿಂದಲೋ ಮತ್ತೆಲ್ಲಿಂದಲೋ ಎರವಲು ಪಡೆದಿಲ್ಲ ನಮ್ಮ ಜನತಂತ್ರ ವ್ಯವಸ್ಥೆಯನ್ನು ಸ್ಥಳೀಯ ನಾಡಿಮಿಡಿತವನ್ನು ಅರಿತು ರೂಪಿಸಲಾಗಿದೆ. ಪ್ರೆಂಚ್ ಕ್ರಾಂತಿಯ ನಂತರ ಅಲ್ಲಿ ಪ್ರಜಾಪ್ರಭುತ್ವ ಹುಟ್ಟಿರ ಬಹುದು ಆದರೆ ಭಾರತದಲ್ಲಿ ಬುದ್ದನ ಕಾಲದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಂಡಿದೆ. ಭಗವಾನ್ ಬುದ್ದ ಸಮ ಪಾಲು: ಸಮ ಬಾಳು ಎಂಬುದನ್ನು ಪ್ರತಿಪಾದಿಸಿದ್ದರು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲೂ ಅದನ್ನೇ ಆಶಯವಾಗಿ ಇಟ್ಟುಕೊಳ್ಳಲಾಗಿದೆ ಎಂದು ಸಮರ್ಥವಾಗಿ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ್ದ ಆ ಕಾನೂನು ಮಂತ್ರಿಯೇ  ಡಾ. ಬಿ ಆರ್ ಅಂಬೇಡ್ಕರ್ !

            ಹೌದು ಅಂಬೇಡ್ಕರ್ ವಿಚಾರಗಳೇ ಹಾಗೆ ಭಾರತ ದೇಶದ ಬಹುದೊಡ್ಡ ವಿದ್ವಾಂಸರಾಗಿದ್ದ ಅವರು ರಾಜಕೀಯ, ಆರ್ಥಿಕ, ಸಾಮಾಜಿಕ ಹೀಗೆ ಅನೇಕ ಸಂಗತಿಗಳಿಗೆ ಸಂಬಂಧಿಸಿದಂತೆ ದೂರ ದೃಷ್ಟಿ ಹೊಂದಿದ್ದರು. ಆದರೆ ದೇಶದ ಜಾತೀಯ ಶಕ್ತಿಗಳು ಅವರನ್ನು ದಲಿತ ಲೀಡರ್ ಎಂದು ಬಿಂಬಿಸಿದ್ದು ಮತ್ತು ಅವರ ವಿರುದ್ದ ಸದಾ ಮಸಲತ್ತು ಮಾಡುತ್ತ ಅವರ ವಿಚಾರಧಾರೆಗಳ ಕುರಿತು ಅರಿಯುವ ಕ್ರಿಯೆಗೆ ಅಡ್ಡಗಾಲು ಹಾಕುತ್ತಲೇ ಬಂದವು . ಸಮಾನತೆಗಾಗಿ ಅಂಬೇಡ್ಕರ್ ಕೇಳಿದ್ದು ಪ್ರತ್ಯೇಕ ಮತದಾನ ಪದ್ದತಿ ಆದರೆ ಗಾಂಧೀಜಿ ಅಣತಿಯಂತೆ ದೊರೆತ್ತದ್ದು ಮೀಸಲು ರಾಜಕೀಯ ವ್ಯವಸ್ಥೆ. ಇದು ಅಂಬೇಡ್ಕರ್ ರನ್ನು ಹತಾಶಗೊಳಿಸಿತ್ತು. ದಲಿತ ಮೀಸಲು ಕ್ಷೇತ್ರಗಳಿಂದ ಗೆಲ್ಲುವ ದಲಿತರ ದಲಿತ ಹಿತಾಸಕ್ತಿಗಳನ್ನು ಪಾಲಿಸದೇ ಮೇಲ್ವರ್ಗದ ಗುಲಾಮರಂತೆ ನಡೆದುಕೊಂಡು ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಮಾತ್ರ ಸಾಧಿಸಿಕೊಳ್ಳುತ್ತಾರೆ ಆದ್ದರಿಂದ ಈ ವ್ಯವಸ್ಥೆಯನ್ನು ರದ್ದು ಮಾಡಿ ಎಂದು 1952ರ ಸುಮಾರಿಗೆ ಅಂಬೇಡ್ಕರ್ ಪಟ್ಟು ಹಿಡಿದಿದ್ದರು. ಆದರೆ ಅದಾಗಲೇ 121ಕ್ಷೇತ್ರಗಳಲ್ಲಿ ಗೆದ್ದು ಬಂದಿದ್ದ ಮೀಸಲು ದಲಿತ ಕ್ಷೇತ್ರಗಳ ಪ್ರತಿನಿಧಿಗಳು ಅಂಬೇಡ್ಕರ್ ನಿಲುವನ್ನು ಖಂಡಿಸಿದ್ದರು, ಅವತ್ತು ಅಂಬೇಡ್ಕರ್ ವಿಚಾರಕ್ಕೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಇವತ್ತಿಗೂ ಅವೇ ಸ್ಥಾನಗಳು ಹಾಗೆಯೇ ಮುಂದುವರೆದುಕೊಂಡು ಬಂದಿವೆ ದಲಿತ ಮೀಸಲು ಕ್ಷೇತ್ರಗಳು ದಲಿತರಿಗೆ ನೀಡಿದ ರಾಜಕೀಯ ಬಿಕ್ಷೆಯಂತೆ ಭಾಸವಾಗುತ್ತ ಪ್ರಜಾಪ್ರಭುತ್ವವನ್ನು ಇಂದಿಗೂ  ಅಣಕಿಸುತ್ತಲೇ ಇದೆ. 

       ಮೀಸಲಾತಿ ವ್ಯವಸ್ಥೆಯ ಆಶಯಗಳು ಸಮಾಜದ ಅತ್ಯಂತ ಕೆಳಸ್ಥರದಲ್ಲಿರುವ ದಲಿತರಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಕಲ್ಪಿಸುವುದೇ ಆಗಿದೆ. ಒಬ್ಬ ದಲಿತ ವಿದ್ಯಾವಂತನಾಗುವುದು,ಆರ್ಥಿಕವಾಗಿ ಮುಂದೆ ಬರುವುದು ಅಬಿವೃದ್ದಿಯೆಡೆಗೆ ಹೆಜ್ಜೆ ಇಡುವುದನ್ನು ಸರಳವಾಗಿ ಕಲ್ಪಿಸಿಕೊಳ್ಳುವುದು ಭಾರತೀಯ ಸಮಾಜ ವ್ವವಸ್ಥೆಯಲ್ಲಿ ಬಹು ದೊಡ್ಡ ತೊಡಕು. ಏಕೆಂದರೆ ಇಲ್ಲಿ ಜಾತೀಯ ಸ್ವಾರ್ಥ ಹಿತಾಸಕ್ತಿಗಳು ಸದಾ ಜಾಗೃತವಾಗಿದ್ದು ತಮ್ಮವರ ಹಿತ ಕಾಯಲು ಬದ್ದವಾಗಿರುತ್ತವೆ ಮತ್ತು ಅದಕ್ಕಾಗಿ ಏನೂ ಮಾಡಲು ಸಿದ್ದವಾಗಿರುತ್ತವೆ. ಇವೆಲ್ಲ ಸುಲಭ ಸಾಧ್ಯವಾಗಿ ನಿವಾರಣೆಯಾಗುವಂತಹದ್ದಲ್ಲ. ಜಾತೀಯ ವ್ಯವಸ್ಥೆಯಿಂದ ಹೊರತಾಗಿ ನಿಂತು ಕೆಳಸ್ಥರದವರ ಬಗೆಗೆ ಮಾತನಾಡುವಷ್ಟು ಸುಲಭವಾಗಿ, ಕೆಳ ಸ್ಥರದಲ್ಲಿ ನಿಂತು ಜಾತೀಯ ವ್ಯವಸ್ಥೆಯನ್ನು ಮೀರುವ ಮಾತನಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅನುಭವವೇ ಬೇರೆ ಗ್ರಹಿಕೆಯೇ ಬೇರೆ. ಮೇಲ್ನೋಟದ ಗ್ರಹಿಕೆಯಷ್ಟು ತೆಳು ವಾಗಿ ಸಮಾನತೆಯ ಅಂಶಗಳು ದಕ್ಕಲಾರವು ಹಾಗಾಗಿ ಸಂವಿಧಾನ ಬದ್ದವಾಗಿ ಮೀಸಲು ನೀತಿಯನ್ನು ನೀಡಲಾಗಿದೆ. ಆದರೆ ಸಾರ್ವತ್ರಿಕವಾಗಿ ಮೀಸಲು ನೀತಿಯ ಕುರಿತು ಕುಹಕದ ಚರ್ಚೆಗಳು ನಡೆಯುತ್ತಿರುವುದು ಆ ಬಗೆಗಿನ ತಿಳುವಳಿಕೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಇದು ಸಂವಿಧಾನ ಆಶಯದ ವಿರುದ್ದದ ಸಂಗತಿಯೂ ಆಗಿದೆ. ಮೀಸಲಾತಿ ನೀತಿಯ ಕುರಿತ ವಿಸ್ತೃತ ಚರ್ಚೆಗಳು ಮಾತ್ರ ಆ ಕುರಿತ ಅನುಕಂಪದ, ಕೀಳು ನೋಟವನ್ನು ತಡೆಯಲು ಸಾಧ್ಯವಾಗ ಬಹುದು. 

         ಇನ್ನು ಚುನಾವಣೆಗಳ ಸಂಗತಿ, ಭಾರತ ದೇಶದಲ್ಲಿ ಚುನಾವಣೆ ಎಂದಾಕ್ಷಣ ಅಲ್ಲಿ ಕೋಮುವಾದ ಹಾಗೂ ಜಾತೀಯತೆಯೇ ಪ್ರದಾನ ಅಂಶಗಳಾಗುವುದನ್ನು ಕಾಣಬಹುದು. ಸ್ವಾತಂತ್ರ್ಯ  ಪೂರ್ವದಿಂದಲೂ ಇಂತಹದ್ದೊಂದು ಸಮಸ್ಯೆ ನಮ್ಮನ್ನು ಬಾಧಿಸುತ್ತಲೇ ಬಂದಿದೆ. ಜಗತ್ತಿನ ಬಹುದೊಡ್ಡ ಸಂವಿಧಾನವನ್ನು ನಾವು ಹೊಂದಿದ ಮೇಲೂ ಈ ವೈರುದ್ಯ ನಮ್ಮನ್ನು ಬಿಡದೇ ಕಾಡಲಾರಂಬಿಸಿದೆ.  ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಪ್ರಜಾಪ್ರಬುತ್ವವನ್ನು ದುರ್ಬಲಗೊಳಿಸುವ ಕ್ರಿಯೆಗಳು ಜಾರಿಯಲ್ಲಿವೆ. ಬೇರೆ ರಾಷ್ಟ್ರಗಳಲ್ಲಿ ನಮ್ಮ ದೇಶದಂತೆ ಬಹು ಸಂಸ್ಕೃತಿಯ ಧರ್ಮೀಯರು ಕಡಿಮೆಯೇ ಹಾಗಾಗಿ ಅಲ್ಲಿ ಕಡಿಮೆ ರಾಜಕೀಯ ಪಕ್ಷಗಳಿವೆ, ಆದರೆ ನಮ್ಮಲ್ಲಿ ಮುಕ್ತ ವಾಗಿ ರಾಜಕೀಯ ಪಕ್ಷಗಳ ಸ್ಥಾಪನೆಗೆ ಪ್ರಜಾಪ್ರಭುತ್ವ ಅವಕಾಶ ಮಾಡಿಕೊಟ್ಟಿದೆ. ಅಂದರೆ ಸಮಾಜದ ಎಲ್ಲ ಸ್ಥರದ ಜನರು ತಮಗೆ ಒಪ್ಪಿತವಾದ ಯಾವುದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿಕೊಳ್ಳಬಹುದು ಮತ್ತು ಆ ಮೂಲಕ ಭಾರತೀಯ ಚುನಾವಣಾ ವ್ವವಸ್ಥೆಯಲ್ಲಿ ತೊಡಗಿಕೊಳ್ಳಬಹುದು. ಹೀಗಿದ್ದಾಗ್ಯೂ ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ರಾಜಕೀಯ ಪಕ್ಷದ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಬೆರಳೇಣಿಕಯ ಪಕ್ಷಗಳು ದೊಡ್ಡ ಮಟ್ಟದ ಅಡಿಪಾಯ ಹಾಕಿಕೊಂಡಿವೆ. ಇವುಗಳ ಪೈಕಿ ಒಂದು ಜಾತೀಯ ರಾಜಕೀಯವನ್ನು ಪೋಷಿಸುವ ರಾಷ್ಟ್ರೀಯ ನೀತಿಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದರೆ ಮತ್ತೊಂದು ಪಕ್ಷ ಕೋಮುವಾದಿ ನಿಲುವನ್ನು ಪ್ರತಿಪಾತಿಸುತ್ತಾ ಪ್ರಜಾತಾಂತ್ರಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತಿವೆ. ಇತರೆ ಪಕ್ಷಗಳು ಸಹಾ ಇಂಥಹವುಗಳಿಂದ ಹೊರತಾಗಿಲ್ಲ ಅವು ನೇರವಾಗಿಯೇ ಜಾತೀಯತೆಯ ಬಿರುಕನ್ನು ಚುನಾವಣೆಗಳಲ್ಲಿ ಬಿತ್ತುತ್ತಿವೆ ಇವು ಪ್ರಜಾತಾಂತ್ರಿಕ  ವ್ಯವಸ್ಥೆಗೆ ಮಾರಕವಾಗಿದೆ. 

      ಚುನಾವಣೆಗಳು ಎದುರಾಗುತ್ತಿದ್ದಂತೆ ಓಲೈಕೆಯ ರಾಜಕಾರಣ ಶುರುವಾಗುತ್ತದೆ, ಜನರದ್ದೇ ದುಡ್ಡು ಬಳಸಿಕೊಂಡು ಲಾಭದಾಯಕ ಮತಬ್ಯಾಂಕ್ ಯೋಜನೆಗಳನ್ನು ರೂಪಿಸುವು ರಾಜಕೀಯ ಪಕ್ಷಗಳು ಒಡೆದು ಆಳುವ ನೀತಿಯನ್ನು ನಡೆಸಿಕೊಂಡು ಬಂದಿವೆ. ಚುನಾವಣೆಗಳಲ್ಲಿ ಗ್ರಾಮೀಣ ಭಾಗದ ಮತದಾರರನ್ನು ವಿವೇಚನೆ ಮಾಡಲು ಬಿಡದೇ ಅಗ್ಗದ ಆಮಿಷಗಳನ್ನು ಒಡ್ಡುವ ಪಕ್ಷಗಳು ಭಾವನಾತ್ಮಕವಾಗಿ ಮತ್ತು ಧಾರ್ಮಿಕವಾಗಿಯೂ ಪ್ರತ್ಯೇಕಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತವೆ. ನಗರ ಪ್ರದೇಶದ ಮತದಾರ ರಾಜಕೀಯ ಶಾಸ್ತ್ರದ ಅರಿವಿನ ಕೊರತೆಯಿಂದ ಚುನಾವಣೆಗಳನ್ನು ಗಂಬೀರವಾಗಿ ಪರಿಗಣಿಸಿದೇ ಹಿಂದುಳಿಯುತ್ತಿದ್ದಾರೆ ಮತ್ತು ಗ್ರಾಮೀಣ ಪ್ರದೇಶದ ಮತದಾರರಿಗಿಂತ ಹೆಚ್ಚು ಚುನಾವಣಾ ಅನೈತಿಕ ಅಂಶಗಳಿಗೆ ಬಲಿಯಾಗುತ್ತಿದ್ದಾರೆ. ಪರಿಣಾಮ ಮತದಾನದ ಪ್ರಾಮುಖ್ಯತೆ ಕಡಿಮೆಯಾಗಿ ಪ್ರಜಾತಾಂತ್ರಿಕ ವ್ಯವಸ್ಥೆಗೆ ದೂರ್ತರೇ ಆಯ್ಕೆಯಾಗುತ್ತಿದ್ದಾರೆ. 

       ಜನಸಾಮಾನ್ಯರು, ಯುವ ಜನರು ರಾಜಕೀಯ ಪಕ್ಷಗಳ ರಾಷ್ಟ್ರೀಯ ನೀತಿಯನ್ನು ಅರಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ಭರವಸೆಗಳನ್ನು ನೀತಿಗಳನ್ನ ಅರಿಯುವುದು ಅಗತ್ಯ ಹಾಗೆಯೇ ಚುನಾವಣೆಗಳಲ್ಲಿ ಸ್ಪರ್ದಿಸುವ ಅಭ್ಯರ್ಥಿಗಳ ಹಿನ್ನೆಲೆ ನಿಲುವುಗಳನ್ನು ಅರಿತು ಮತ ಚಲಾಯಿಸುವ ಅಗತ್ಯವಿದೆ. ಈ ಮೂಲಕ ಭಾರತ ದೇಶದ ಪ್ರಜಾತಾಂತ್ರವನ್ನು ಬಲಪಡಿಸುವ ಪ್ರಯತ್ನ ಆಗಬೇಕಿದೆ. ಮತದಾನದ ದಿನ ಹಿಂದುಳಿಯದೇ ಏ.17 ರಂದು ಮತ ಚಲಾಯಿಸಿ ನಿಮ್ಮ ಹಕ್ಕನ್ನು ಧೃಢಪಡಿಸಿಕೊಳ್ಳಿ .

Sunday, April 6, 2014

ಕೀಳು ಅಭಿರುಚಿ ಮತ್ತು ಚುನಾವಣಾ ರಾಜಕೀಯ!

ಲೋಕಸಭಾ ಚುನಾವಣೆ ರಂಗೇರುತ್ತಿರುವ ದಿನಗಳಲ್ಲೇ ಕೆಲವು ಅನುಚಿತ ಸಂಗತಿಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಅದು ನೈತಿಕತೆಗೆ ಧಕ್ಕೆ ತರುವಂತಹ ಸಂಗತಿಗಳು. ಸಾರ್ವತ್ರಿಕವಾಗಿ ಜರುಗುತ್ತಿರುವ ಈ ಘಟನೆಗಳಿಗೆ ಮೂಲ ಪ್ರೇರಣೆ ಏನಿರುತ್ತದೆಯೋ ಗೊತ್ತಿಲ್ಲ ಆದರೆ ಪರಿಣಾಮ ಮಾತ್ರ ವ್ಯತಿರಿಕ್ತವೇ ಸರಿ.

     ಕೇವಲ ಹತ್ತು ತಿಂಗಳ ಅವಧಿಯಲ್ಲಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಐತಿಹಾಸಿಕ ರಾಜಕೀಯ ಪುಟಗಳನ್ನು ತೆರೆದದ್ದು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಎಂಬುದು ನಿಸ್ಸಂಶಯವಾದುದ್ದು. ಭಾರತದ ಕೈಗಾರಿಕಾ ವಸಾಹತು ರಾಜ್ಯವಾದ ಗುಜರಾತ್ ನಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯನಾಗಿದ್ದ ನರೆಂದ್ರ ಮೋದಿ ನಂತರ ರಾಷ್ಟ್ರೀಯ ಪಕ್ಷವೊಂದರ ಮಂಚೂಣಿ ಪ್ರಧಾನಿ ಅಭ್ಯರ್ಥಿಯಾಗಿದ್ದು ಸಾಮಾನ್ಯ ಸಂಗತಿಯೇನಲ್ಲ. ಸಿವಿಲ್ ಕಂಟ್ರಾಕ್ಟರ್ ಮತ್ತು ರೈತಾಪಿಯೂ ಆಗಿದ್ದ  ಹಳ್ಳಿಗಾಡಿನ ರೈತನ ಮಗ ಹೆಚ್ ಡಿ ದೇವೇಗೌಡ ಪ್ರಾದೇಶಿಕ ಪಕ್ಷವೊಂದರ ಸಂಸದನಾಗಿ ಭಾರತ ದೇಶದ ಪ್ರಧಾನಿ ಪಟ್ಟ ಅಲಂಕರಿಸಿದ್ದು ಹೆಮ್ಮೆಯ ಸಂಗತಿ. ಹಾಗೆಯೇ ಚಿತ್ರರಂಗದಲ್ಲಿ ಬಿಂದಾಸ್ ತಾರೆಯಾಗಿ ಹೆಸರು ಮಾಡಿದ್ದ ನಗ್ಮಾ ಸಂಸದೆಯಾಗಿದ್ದು, ರಾಜಕೀಯವನ್ನು ನಿರಾಕರಿಸುತ್ತಲೇ ಮುಂಗೋಪ, ಹುಡುಗಾಟ ಪ್ರದರ್ಶಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಾಯಕಿ ನಟಿ ರಮ್ಯಾ ಅಭಿಮಾನದ ಬಲದಿಂದಲೇ ಸಂಸತ್ ಭವನಕ್ಕೆ ಅತೀ ಚಿಕ್ಕ ವಯೋಮಾನದಲ್ಲೇ ಪ್ರವೇಶ ಪಡೆದಿದ್ದು ದಾಖಲೆಯೇ ಸರಿ. 
       ಇದು ಒಂದೆಡೆ ಇರಲಿ ಈ ಸಂಗತಿಗಳನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆ ಎಂದರೆ ಸಾರ್ವತ್ರಿಕವಾಗಿ ಹೀಗೆ ಐಕಾನ್ ಗಳಾಗಿರುವವರ ವಿರುದ್ದ ಕೀಳು ಅಭಿರುಚಿಯನ್ನು ಪ್ರದರ್ಶಿಸುವುದಿದೆಯಲ್ಲ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷದ ಹೀರೋ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಚುನಾವಣಾ ಪ್ರಚಾರದ ಸಂಧರ್ಭ ನಡೆಯುತ್ತಿರುವ ಹಲ್ಲೆಗಳು, ಮಸಿ ಎರಚುವಿಕೆ, ತಡೆಯೊಡ್ಡುವುದು ಸರಿಯೇ? ಹೋಗಲಿ ಲೋಕಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಬಿಂಬಿತವಾಗುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅರವಿಂದ ಕೇಜ್ರಿವಾಲ್ ಅಷ್ಟೊಂದು ತೊಡಕಾಗಿ ಪರಿಣಮಿಸಿದ್ದಾರೆಯೇ ? ಗೂಂಡಾ ಪ್ರವೃತ್ತಿ ಹಲ್ಲೆ ಖಂಡನೀಯ. ನರೇಂದ್ರ ಮೋದಿ ಹವಾ ಇಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತವಾದರೂ ಭಾರತದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಹವಾ ಇದೆಯೋ ಇಲ್ಲವೋ ನಮೋ ಹವಾ ಅಂತು ಇದ್ದೇ ಇದೆ ಎಂಬುದು ನಿರ್ವಿವಾದ, ಆದರೆ ಇದನ್ನು ಸಹಿಸದ ಕಾಂಗೈ ಸಂಸತ ಅಭ್ಯರ್ಥಿಯೊಬ್ಬ ನರೇಂದ್ರ ಮೋದಿಯನ್ನು ಕತ್ತರಿಸುತ್ತೇನೆ ಎಂದು ಮಾತನಾಡುತ್ತಾನೆ, ಇದೆಲ್ಲ ಎಂತಹ ನಡವಳಿಕೆಯನ್ನು ಪ್ರದರ್ಶಿಸಿದಂತಾಗುತ್ತದೆ ಅಲ್ಲವೇ? ಇಂಥಹವರು ಗೆದ್ದ ಮೇಲೆ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾರೆಯೇ ? ವ್ಯಕ್ತಿಗತವಾಗಿ ಆತ ಮಾತನಾಡಿದ್ದು ಒಂದು ಪಕ್ಷಕ್ಕೆ, ಒಂದು ಸಮುದಾಯಕ್ಕೆ ಕೆಟ್ಟ ಹೆಸರು ತಂದಂತಲ್ಲವೇ ಇವುಗಳ ಒಟ್ಟು ಪರಿಣಾಮ ವ್ಯತಿರಿಕ್ತವಾಗ ಬಹುದಲ್ಲವೇ?
         ದೃಶ್ಯ ಮಾಧ್ಯಮಗಳಿಗೆ ಕಡಿವಾಣ ಇಲ್ಲದಿರುವುದರಿಂದ ಅನೇಕ ಪ್ರಚೋದನಾತ್ಮಕ ಚಟುವಟಿಕೆಗಳು ಕಾರ್ಯಕ್ರಮವಾಗಿ ಪ್ರಸಾರ ಕಾಣುತ್ತಿವೆ. ಇಂತಹದ್ದೊಂದು ಚುನಾವಣ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷ ಪರಮೇಶ್ವರ್, ಮಾಜಿ ಪ್ರಧಾನಿ ದೇವೇಗೌಡ ವಿರುದ್ದ ಆಡಬಾರದ ಮಾತನ್ನು ಉತ್ಸಾಹದಲ್ಲಿ ಆಡಿದ್ದಾರೆ. ಉತ್ತಮ ಶೈಕ್ಷಣಿಕ ಹಿನ್ನೆಲೆಯಿರುವ ಪರಮೇಶ್ವರ್ ಮುತ್ಸದ್ದಿ ತನವನ್ನು ಪ್ರದರ್ಶಿಸಿ ಸಮತೂಕದ ಮಾತನ್ನು ಆಡಬಹುದಿತ್ತು, ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉತ್ಸಾಹದಲ್ಲಿ ನಾಲಗೆಯನ್ನು ಹರಿಯಬಿಟ್ಟಿದ್ದಾರೆ, ಬಿಜೆಪಿಯ ಈಶ್ವರಪ್ಪ, ಪ್ರತಾಪ್ ಸಿಂಹ, ಕಾಂಗೈನ ಜನಾರ್ಧನ ಪೂಜಾರಿ ಕೂಡಾ ಎಗ್ಗು ತಗ್ಗಿಲ್ಲದೇ ಮಾತನಾಡಿ ತಮ್ಮ ಘನತೆ ಗೌರವಕ್ಕೆ ಕುಂದು ತಂದುಕೊಂಡಿದ್ದಾರೆ. ಹಿಂದೊಮ್ಮೆ ಇದೇ ದೇವೇಗೌಡ ಕೂಡ ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ವಿರುದ್ದ ಕೀಳು ಅಭಿರುಚಿಯ ಮಾತನ್ನು ಆಡಿದ್ದರು. ಅದು ಒಂದು ರೀತಿಯಲ್ಲಿ ಯಡಿಯೂರಪ್ಪ ಗೆ ಒಳ್ಳೆಯದೇ ಆಗಿತ್ತೆನ್ನಿ. ಈಗ ಅದೇ ಲಾಭ ದೇವೇಗೌಡರಿಗೂ ಪರೋಕ್ಷವಾಗಿ ಆಗುವ ಸಾಧ್ಯತೆಗಳೇ ಹೆಚ್ಚು!
         ನಗ್ಮಾ ಸಂಸತ್ ಅಭ್ಯರ್ತಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಹಿರಿಯ ರಾಜಕಾರಣಿಯೊಬ್ಬ ಕಿವಿಯಲ್ಲಿ ಏನೋ ಹೇಳುವವನಂತೆ ನಟಿಸುತ್ತಾ ಆಕೆಯನ್ನು ಸಾರ್ವತ್ರಿಕವಾಗಿ ಅಪ್ಪಿ ಮುತ್ತಿಟ್ಟಿದ್ದು ಅವನ ನೈತಿಕತೆಯ ಪರಮಾವಧಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ರಮ್ಯಾ ಲೋಕಸಭಾ ಚುನಾವಣೆಗೆ ನಿಂತಾಗ ಆಕೆಯ ಹುಟ್ಟಿನ ಕುರಿತು ಅನೈತಿಕ ಹೇಳಿಕೆ ನೀಡಿದ್ದು ರಮ್ಯಾಗೆ ಮತಗಳಾಗಿ ಪರಿವರ್ತನೆಯಾಗಿದ್ದು ಸುಳ್ಳೇನಲ್ಲ. ಈ ಸಲ ರಮ್ಯಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಅಭಿಮಾನಿಗಳು ಮುಜುಗುರವಾಗುವಂತೆ ಸಾರ್ವತ್ರಿಕವಾಗಿ ಆಕೆಯನ್ನು ಅಪ್ಪಿ ಮುದ್ದಾಡಿದ ಘಟನೆಯೂ ವರದಿಯಾಗಿದೆ. 
      ಇದೆಲ್ಲಾ ಎಂಥದ್ದು ಮಾರಾಯ್ತೇ? ಪ್ರಜಾತಾಂತ್ರಿಕ ವ್ಯವಸ್ಥೆಗೆ ಗಂಭೀರ ನೆಲೆಗಟ್ಟಿನಲ್ಲಿ ಸಾಗಬೇಕಾದ ಚುನಾವಣೆಗಳಲ್ಲಿ ಇಂಥಹ ಕೀಳು ಅಭಿರುಚಿಗಳು ಕೊನೆಯಾಗಬೇಕು. ಸಾರ್ವತ್ರಿಕವಾದ ದುರ್ವರ್ತನೆಗಳು,ಕೀಳು ಅಭಿರುಚಿಯ ಭಾಷಣಗಳು, ಪ್ರಚೋದನಾಕಾರಿಯಾದ ಮಾತುಗಳು ವ್ಯಕ್ತಿತ್ವವನ್ನು ಹಾಳು ಮಾಡುವ ಜೊತೆಗೆ ಪರಿಸರಕ್ಕೂ ಕೆಟ್ಟ ಪಾಠವನ್ನೇ ಕಲಿಸುತ್ತವೆ. ಆರೋಗ್ಯಕರವಾದ ವಾತಾವರಣಕ್ಕೆ ಅಡ್ಡಿಯಾಗುವಂತಹ ಇಂತಹ ಸಂಗತಿಗಳನ್ನೇ ರಾಜಕೀಯ ಪಕ್ಷಗಳ ಓಟಿನ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣೆ ಎದುರಿಸುವುದು ಇನ್ನೂ ಅಸಹ್ಯಕರ ಸಂಗತಿಯಲ್ಲವೇ. ಭಾರತ ದೇಶದ ಒಟ್ಟು ಚುನಾವಣಾ ಪ್ರಕ್ರಿಯೆಗಳನ್ನು ಬಹಳ ವೇಗವಾಗಿ ಮತದಾರ ಗ್ರಹಿಸುತ್ತಿರುತ್ತಾನೆ ಮತ್ತು ಸರಿಯಾದ ಸಂಧರ್ಭದಲ್ಲಿ ತಕ್ಕ ಪಾಠವನ್ನು ಕಲಿಸುತ್ತಾನೆ ಎಂಬುದನ್ನು ಅರಿಯಬೇಕಾದ ತುರ್ತು ಇದೆ. 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...