Friday, December 17, 2010

ನೀರಾವರಿ ತಜ್ಞ ಎಚ್ ಎನ್ ನಂಜೇಗೌಡ:ಒಂದು ನೆನಪು


ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂಧರ್ಭ, ಸಲ್ಲದ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ತಾಂತ್ರಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ರೈತರ  ಹಿತಾಸಕ್ತಿಗೆ ಕುಂದು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿತ್ತು. ನಮ್ಮ ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿಯ ನೀರಿನ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾರದೇ ಅಸಹಾಯಕತೆ ಪ್ರದರ್ಶಿಸಿದ ಸರ್ಕಾರಕ್ಕೆ ನೆರವಿಗೆ ಬಂದದ್ದು ಕರ್ನಾಟಕ ರಾಜ್ಯದ ನೀರಾವರಿ ಭಗೀರಥ ಎಚ್ ಎನ್ ನಂಜೇಗೌಡ. ನದಿ ನೀರು ವಿವಾದ ಕುರಿತಂತೆ ಹೋರಾಟ ನಡೆಸುತ್ತಿದ್ದ ಕನ್ನಡ ಸಂಘಟನೆಗಳ ಹೋರಾಟಕ್ಕೆ ನೈತಿಕ ಬಲ ತುಂಬಿದ್ದು ಎಚ್ ಎನ್ ನಂಜೇಗೌಡ, ನದಿ ನೀರಿನ ವಿವಾದ ಕುರಿತ ಪ್ರತ್ಯೇಕ ಪ್ರಾಧಿಕಾರದ ಮುಂದೆ ವಾದ ಮಂಡಿಸಲು ಹೆಗಲಿಗೆ ಹೆಗಲು ಕೊಟ್ಟು ಮಾಹಿತಿ ನೀಡಿದ್ದು ಅದೇ ಎಚ್ ಎನ್ ನಂಜೇಗೌಡ.! ಹೌದು ತನಗಾಗಿ ಏನನ್ನೂ ಮಾಡಿಕೊಳ್ಳದೇ ಜನರ ಸೇವೆಗಾಗಿ ತನ್ನ ವಿದ್ವತ್ತನ್ನು ಮುಡಿಪಾಗಿಟ್ಟ ಅಪರೂಪದ ರಾಜಕಾರಣಿ ಎಚ್ ಎನ್ ನಂಜೇಗೌಡ. ನೀರಾವರಿ ವಿಚಾರದಲ್ಲಿ ರಾಜ್ಯದ ಜನತೆ ಸದಾ ನೆನಪಿಟ್ಟುಕೊಳ್ಳ ಬೇಕಾದ ಎಚ್ ಎನ್ ನಂಜೇಗೌಡರು ಗತಿಸಿ ಇಂದಿಗೆ 3ವರ್ಷಸಂದಿದೆ. ಈ ಸಂಧರ್ಭ ದಲ್ಲಿ ಅವರ ಬಗೆಗೆ ಮೆಲುಕು ಹಾಕುವುದು ಅವರಿಗೆ ಸಲ್ಲಿಸುವ ಗೌರವವಾಗಬಹುದೇನೋ.
ಮಹಾರಾಜಾ ಕಾಲೇಜು ವಿದ್ಯಾರ್ಥಿ ಇವತ್ತು ರಾಜ್ಯದಲ್ಲಿ ಹಲವು ಮಂದಿ ರಾಜಕಾರಣಿಗಳನ್ನು ನೋಡಿದ್ದೀರಿ, ಹಿಂದಿನ ದಶಕಗಳಲ್ಲಿ ಇದ್ದ ರಾಜಕಾರಣಿಗಳಿಗೂ ಇಂದಿನ ರಾಜಕಾರಣಿಗಳಿಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂತಹ ವ್ಯವಸ್ಥೆಯ ನಡುವೆ ಹಳೆ-ಹೊಸ ತಲೆಮಾರಿನ ರಾಜಕಾರಣಿಗಳ ನಡುವೆ ತಾನು ನಂಬಿದ ಸಿದ್ದಾಂತಗಳಿಗೆ, ನೈತಿಕ ಮೌಲ್ಯಗಳಿಗೆ ನಿಷ್ಟುರ ಬದ್ದತೆಯನ್ನು ಪ್ರದರ್ಶಿಸಿ ಬದುಕಿದ ಛಲಗಾರ ಎಚ್ ಎನ್ ನಂಜೇಗೌಡ. ಅವರ ಕುರಿತು ಮಾತನಾಡುವ ಮುನ್ನ ಚೂರು  ಮಾಹಿತಿ ನಿಮಗಾಗಿ. ಲಭ್ಯ ಮಾಹಿತಿಗಳನ್ನಾಧರಿಸಿ ಹೇಳುವುದಾದರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಂಜೇಗೌಡರ ಎರಡನೇ ಪತ್ನಿ ಕಮಲಮ್ಮನವರ  ಪುತ್ರ ಎಚ್ ಎನ್ ನಂಜೇಗೌಡ. ತಾಯಿಯ ಊರು ಅರಕಲಗೂಡು ತಾಲೂಕಿನ ಗಂಗೂರು ಗ್ರಾಮ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸಗಳನ್ನು ಪೂರೈಸಿದ ನಂಜೇಗೌಡರು ಬಿಎ ಪದವಿಗಾಗಿ ಮೈಸೂರಿಗೆ ತೆರಳಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗೌಡರು ಕಾಲೇಜು ದಿನಗಳಲ್ಲೆ ಉತ್ತಮ ವಾಗ್ಮಿಯೂ ಆಗಿದ್ದರು, ವಿದ್ಯಾರ್ಥಿ ಸಂಘದ ಮುಖಂಡರೂ ಆಗಿ ಹೆಸರು ಗಳಿಸಿದ್ದ ಗೌಡರು ಸದಾ ಚಟುವಟಿಕೆಯ ಚಿಲುಮೆ. 
                ಅಂದಿನ ದಿನಗಳಲ್ಲಿಯೇ ವಿದ್ಯಾರ್ಥಿ ಚಳುವಳಿಗಳಲ್ಲೂ ಮುಂದಾಳಾಗಿರುತ್ತಿದ್ದರು. ಪದವಿಯ ನಂತರ ಕಾನೂನು ಪದವಿ ಕಲಿತ ಗೌಡರು 60ರ ದಶಕದ ಆರಂಭದಲ್ಲಿ ಅರಕಲಗೂಡಿಗೆ ವಾಪಾಸಾದರು. ಆ ವೇಳೆಗಾಗಲೇ ರಾಜಕಾರಣದ ಕಿಚ್ಚು ಹೊತ್ತಿಸಿಕೊಂಡಿದ್ದ ಗೌಡರು ತಾಲೂಕಿನಲ್ಲಿಯೂ ಚಳುವಳಿಗಳ ಮುಂದಾಳತ್ವ ವಹಿಸುತ್ತಿದ್ದರು. ರೈತರ ಬಗೆಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಅವರು ರೈತರಿಗಾಗಿ ಏನನ್ನಾದರೂ ಮಾಡಬೇಕೆಂಬ ತುಡಿತ ಹತ್ತಿಸಿಕೊಂಡಿದ್ದರು. 1960-61ರಲ್ಲಿ ಅರಕಗಲೂಡು ವಿದಾನಸಭಾ ಸದಸ್ಯ ಸ್ಥಾನಕ್ಕೆ  ಪಕ್ಷೇತರರಾಗಿ ಸ್ಪರ್ಧಿಸಿದ್ದ ಪುಟ್ಟೇಗೌಡರಿಗೆ ಸಾಥ್ ನೀಡಿದರು. ಮುಂದೆ 1962ರಲ್ಲಿ ಪ್ರಜಾಸೋಷಲಿಸ್ಟ್ ಪಕ್ಷದಿಂದ ಅಭ್ಯರ್ಥಿಯಾದ ಎಚ್ ಎನ್ ನಂಜೇಗೌಡ ಪ್ರತಿಸ್ಫರ್ಧಿಯಾಗಿದ್ದ ಕಾಂಗ್ರೆಸ್ ನ ಜಿ ಎ ತಿಮ್ಮಪ್ಪಗೌಡರ ವಿರುದ್ದ ಸ್ಪರ್ದಿಸಿ ಸೋಲುಂಡರು. ಮತ್ತೆ ರಾಜ್ಯದಲ್ಲಿ ನಿಜಲಿಂಗಪ್ಪನವರ ಸರ್ಕಾರವಿದ್ದಾಗ 1967ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ದಿಸಿ ಕೆ ಬಿ ಮಲ್ಲಪ್ಪನವರ ವಿರುದ್ದ ಗೆಲುವು ಸಾಧಿಸಿದರು. ಮತ್ತೆ 1972ರಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ ನಂಜೇಗೌಡರು ಎದುರಾಳಿ ಕೆ ಬಿ ಮಲ್ಲಪ್ಪನವರನ್ನು ಎರಡನೇ ಭಾರಿಗೆ ಸೋಲಿಸಿದರು. ಆಗ ಆಡಳಿತಕ್ಕೆ ಬಂದ ಅರಸು ಸರ್ಕಾರದಲ್ಲಿ ಭಾರೀ ನೀರಾವರಿ ಖಾತೆಯ ಸಚಿವರಾದ ಗೌಡರಿಗೆ ತಾವು ಅಂದುಕೊಂಡಿದ್ದನ್ನು ಮಾಡುವ ಅವಕಾಶ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ಹೇಮಾವತಿ ಜಲಾಶಯ ಯೋಜನೆ ಜಾರಿಯಲ್ಲಿತ್ತು, ಸದರಿ ಜಲಾಶಯದ ಹಿನ್ನೀರಿನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಚಾಲನೆ ನೀಡಿದ ಗೌಡರು ಹಾರಂಗಿ ಜಲಾಶಯ ಯೋಜನೆಯ ನೀರನ್ನು ತಾಲೂಕಿನ ರೈತರಿಗೆ ದೊರಕಿಸುವ ಸಾಹಸ ಮಾಡಿದರು. ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆಗಳಾದವು ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಜನರ ಆರ್ಥಿಕಾಭಿವೃದ್ದಿಗೆ ಹೆಗಲು ನೀಡುವ ಬ್ಯಾಂಕಿಂಗ್ ಯೋಜನೆಯನ್ನು ಅನುಷ್ಠಾನಕ್ಕೆ ತಂದರು, ಪರಿಣಾಮ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮೀಣ ಬ್ಯಾಂಕ್ ಸೇವೆಯನ್ನು ಪಡೆಯುವಂತಾಯಿತು.

ದಿಟ್ಟೆದೆಯ ರಾಜಕಾರಣಿ :ಅಧಿಕಾರದಲ್ಲಿದ್ದಾಗ ಯಾವುದಕ್ಕೂ ರಾಜೀ ಮಾಡಿಕೊಳ್ಳದ ಗೌಡರು ತಮ್ಮ ನಿರ್ದಾಕ್ಷ್ಯೀಣ್ಯ ನಡೆಗಳಿಂದಾಗಿ ರಾಜೀ ನೀಡಬೇಕಾಯಿತು. ಅಧಿಕಾರಕ್ಕೆ ಅಂಟಿ ಕೂರದೇ ಅಂದುಕೊಂಡದ್ದನ್ನು ಮಾಡಿ ಮುಗಿಸುವ, ಇದ್ದ್ದದ್ದನ್ನು ಇದ್ದಂತೆ ನೇರವಾಗಿ ಕಠಿಣವಾಗಿ ಹೇಳುವ ಛಾತಿಯಿಂದಾಗಿ ಮತ್ತು ಅಧಿಕಾರಕ್ಕೆ ಅಂಟಿಕೂರದ ನಡವಳಿಕೆ ಎಚ್ ಎನ್ ನಂಜೇಗೌಡರನ್ನು ಎತ್ತರದಲ್ಲಿ ಕೂರುವಂತೆ ಮಾಡಿದೆ. ಮುಂದೆ ಸರ್ಕಾರ ಪತನಗೊಂಡಾಗ 1978ರಲ್ಲಿ ಮತ್ತೆ ಸ್ಪರ್ದಿಸಿದ ನಂಜೇಗೌಡರು ಸೋಲನುಭವಿಸಿದರು. ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಎತ್ತರಕ್ಕೇರಿದ ಅವರು 1980ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಸಂಸತ್ ನಲ್ಲಿ ತಮ್ಮ ಪಕ್ಷದವರೇ ಆದ ಪ್ರಧಾನಿ ರಾಜೀವ್ ಗಾಂಧಿ ವಿರುದ್ದ ಬೋಫೋರ್ಸ್ ಹಗರಣ ಬಹಿರಂಗವಾದಾಗ ಅತ್ಯಂತ ಕಟುವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪಕ್ಷದಿಂದಲೇ ಹೊರಬಿದ್ದರು. ರಾಜ್ಯದಲ್ಲಿ ಜೆಡಿಯು ತೆಕ್ಕೆಗೆ ಹೋಗಿ ಸೋಲನುಭವಿಸಿದರು ನಂತರ ಬಿಜೆಪಿಗೆ ಸೇರಿ ಬಸವನಗುಡಿಯಲ್ಲಿ ಸೋಲು ಕಂಡು 'ಗರ್ಭಗುಡಿಯ ಪಕ್ಷವೆಂದು ಜರಿದು ಪಕ್ಷ ತೊರೆದರು. ಗೌಡರು ಯಾವುದೇ ಪಕ್ಷದಲ್ಲಿದ್ದರು ನೀರಾವರಿ ಕುರಿತು ವಹಿಸಿದ್ದ ಆಸ್ಥೆ ಮತ್ತು ರೈತರ ಪರವಾಗಿದ್ದ ಕಾಳಜಿಯಿಂದಾಗಿ ಕಾಲಕಾಲಕ್ಕೆ ಸರ್ಕಾರಕ್ಕೆ ಮತ್ತು ಹೋರಾಟಗಾರರಿಗೆ ಮಾಹಿತಿ ನೀಡಿದರು. ಯಾವುದೇ ದಾಖಲೆಗಳನ್ನು ಎದುರಿಗಿಟ್ಟುಕೊಳ್ಳದೇ ಬ್ರಹ್ಮಾಂಡದಂತಹ ನೀರಾವರಿ ಅಂಕಿಅಂಶಗಳನ್ನು ಸುಲಲಿತವಾಗಿ ಹೇಳುತ್ತಿದ್ದ ಗೌಡರು ನೀರಾವರಿ ಕುರಿತು ಉಂಟಾದ ಸಂಕಟ ಸಮಯದ ಆಪದ್ಬಾಂದವನಾಗಿರುತ್ತಿದ್ದರು.

ಸ್ಮರಣೆ ಲೇಸು :  ವಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಂದಿಗೂ ಸಮುದಾಯದ ಚಟುವಟಿಕೆಗಳಿಂದ ದೂರವಿದ್ದ ಗೌಡರು ಎಲ್ಲ ಜನಾಂಗದ ಜನರ ಅನುರಾಗಿಯಾಗಿದ್ದರು. ಎಲ್ಲಾ ಪಕ್ಷಗಳ ರಾಜಕಾರಣಿಗಳು ಗೌಡರೊಂದಿಗೆ ಸೌಹಾರ್ಧಯುತ ಸಂಭಂಧವಿರಿಸಿಕೊಂಡಿದ್ದರು. ಗೌಡರ ನೀರಾವರಿ ಬಗೆಗಿನ ಕಾಳಜಿಗೆ ಹೆಚ್ ಕೆ ಪಾಟೀಲ್ ಮತ್ತು ನಿಜಲಿಂಗಪ್ಪನವರ ಸರ್ಕಾರದಲ್ಲಿ ಸಚಿವರಾಗಿದ್ದ ಬಸಪ್ಪನವರ ಮಾರ್ಗದರ್ಶನವೂ ಕಾರಣವಾಗಿತ್ತು. ಒಬ್ಬ ನಿಷ್ಟುರ, ಜನಪರ ಕಾಳಜಿಯ ನಂಬಿದ ಸಿದ್ದಾಂತಗಳನ್ನು ಪ್ರತಿಪಾದಿಸುವ ಸಾಧಕನ ನೆನಪು ನಮಗೆ ಸದಾ ಸ್ಮರಣೀಯ, ನಂಜೇಗೌಡರು ಸಿದ್ದಾಂತ ಮತ್ತು ಚಳುವಳಿಯ ವಿಚಾರದಲ್ಲಿ ಗೋಪಾಲಗೌಡರ ಮಟ್ಟಿಗೆ ಬೆಳೆಯುವ ಸಾಧ್ಯತೆಗಳಿತ್ತಾದರೂ ಒಂದು ಪಕ್ಷದಲ್ಲಿ ನೆಲೆ ನಿಲ್ಲದ ಗೌಡರಿಗೆ ಅದು ಸಾಧ್ಯವಾಗಲಿಲ್ಲ ಆದರೆ ಒಂದು ಶಕ್ತಿಯಾಗಿ, ಸಮೂಹದ ಪ್ರೇರಕ ಶಕ್ತಿಯಾಗಿ ಬದುಕಿದರೆಂಬುದು ಮಾತ್ರ ದಿಟವೇ ಹೌದು. ಇಂದು ಗೌಡರು ಬದುಕಿದ್ದಿದ್ದರೆ 77ವರ್ಷ ತುಂಬುತ್ತಿತ್ತು ಆದರೆ ಇವತ್ತು ಅವರಿಲ್ಲ ಆದರೆ ಅವರ ವಿಚಾರ ನಮ್ಮೊಂದಿಗಿದೆ, ರಾಜಧಾನಿ ಬೆಂಗಳೂರಿನಲ್ಲಿ ಹೆಚ್ ಎನ್ ಸಂಸ್ಮರಣೆ ಕರ್ನಾಟಕ ಸರ್ಕಾರದ ಸಚಿವಾಲಯದ ಟಿ ಚನ್ನಬಸಪ್ಪ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಏರ್ಪಾಟಾಗಿದೆ. ಅರಕಲಗೂಡು ನಾಗರಿಕ ವೇದಿಕೆಯ ಯೋಗಾರಮೇಶ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರ ಸಹವರ್ತಿಗಳು ಎಚ್ ಎನ್ ನಂಜೆಗೌಡರನ್ನು ಸ್ಮರಿಸಿಕೊಳ್ಳಲಿದ್ದಾರೆ.ನೀವೂ ಜೊತೆಯಾಗಿ ನುಡಿನಮನ ಸಲ್ಲಿಸಿ.
ಈ ಲೇಖನವನ್ನು ಸಾಂಧರ್ಭಿಕವಾಗಿ ದಟ್ಸ್ ಕನ್ನಡದಲ್ಲಿ ಸಾದ್ಯಂತವಾಗಿ ಪ್ರಕಟಿಸಿ ಉಪಯುಕ್ತ ಸಲಹೆ ನೀಡಿದ ಸಂಪಾದಕರಾದ ಶ್ಯಾಂಸುಂದರ್ ಅವರಿಗೆ ಧನ್ಯವಾದಗಳು. ದಟ್ಸ್ ಕನ್ನಡದಲ್ಲಿ ಈ ಲೇಖನವನ್ನು ಓದಲು ಈ ಲಿಂಕ್ ಕ್ಲಿಕ್ಕಿಸಿ http://thatskannada.oneindia.in/news/2010/12/18/tribute-to-hn-nange-gowda-irrigation-expert.html 
Thanks to "SAMPADA"  to publish this article with Special Category, Read more click on http://sampada.net/????????-?????-???-???-????????????-???????????? 

ಸ್ವಯಂಕೃಷಿ ನೂತನ ಕನ್ನಡ ಛಾನಲ್

ಸ್ವಯಂಕೃಷಿ ನೂತನ ಕನ್ನಡ ಛಾನಲ್

Sunday, December 5, 2010

ಇಂಥಾ ಅಯ್ಯಪ್ಪ ಭಕ್ತರುಗಳು ಬೇಕಾ ಸ್ವಾಮಿ?

ಮೊನ್ನೆ ಮೊನ್ನೆ ಸಿಎಂ ಯಡ್ಯೂರಪ್ಪನವರ ಸಿಎಂ ಕುರ್ಚಿ ಹೋಗಿಯೇ ಬಿಡ್ತು ಅಂತ ಅಂದುಕೊಂಡಿರುವಾಗಲೇ, ಈವಯ್ಯ  ಪೂಜೆ ಪುನಸ್ಕಾರ, ಯಜ್ಞ-ಯಾಗ ಅಂತೆಲ್ಲ ಮಾಡ್ಕಂಡು ಇದುವರೆಗೂ ರಾಜ್ಯದಲ್ಲಿ ಸಿಎಂ ಕುರ್ಚಿ ಏರಿದ ಮುಖ್ಯಮಂತ್ರಿಗಳ್ಯಾರು ನೋಡದಷ್ಟು ದೇವಾಲಯಗಳನ್ನು ದೇಶದ ಉದ್ದಗಲಕ್ಕೂ ಸಂದರ್ಶಿಸಿ, ಬಿಜೆಪಿ ಹೈ ಕಮಾಂಡ್ ಗೆ ಕ್ಯಾರೆ  ಅನ್ನದೇ ತನ್ನ ಸ್ಥಾನದಲ್ಲೇ ಉಳಿದು ಕೊಂಡದ್ದು ಈಗ ಇತಿಹಾಸ.ಕಾಕತಾಳಿಯವೋ, ಯಡಿಯೂರಪ್ಪನ ಪೂಜಾಫಲವೋ ಗೊತ್ತಿಲ್ಲ  ಅಧಿಕಾರ ಸಧ್ಯಕ್ಕೆ ಉಳಿದುಕೊಂಡಿದೆ, ಮುಂದಕ್ಕೆ ಅವರು ನಂಬಿದ ದೇವರೇ ಕಾಪಾಡಬೇಕು.ಸ್ವಾಮಿಯೇ ಶರಣಂ ಅಯ್ಯಪ್ಪ!
ಇದು ಅಯ್ಯಪ್ಪ ಸ್ವಾಮಿಯ ಭಕ್ತರ ಮಾಸ, ಇನ್ನು ಎರಡು ತಿಂಗಳು ಇವರ ಹಾವಳಿ ತಪ್ಪಿದ್ದಲ್ಲ. ಅಯ್ಯಪ್ಪ ಭಕ್ತರ ಹಾವಳಿ ನಿನ್ನೆ ಮೊನ್ನೆಯದಲ್ಲ  ಇದು ನಿರಂತರವಾಗಿ ದಶಕಗಳಿಂದ ಬಂದತದ್ದು. ಮನುಷ್ಯ ಹೆದರೋದು ಒಂದು ದೆವ್ವ, ಇನ್ನೊಂದು ದೇವರು. ಈ ಎರಡು ಹೆಸರನ್ನು ಬಳಸಿಕೊಂಡು ಜನರನ್ನು ಏನು ಬೇಕಾದರೂ ಮಾಡಿಬಿಡಬಹುದು. ಇದು ಭಾರತದಂತಹ ಸನಾತನ ಸಾಂಸ್ಕೃತಿಕ ಪರಂಪರೆಯ ದೇಶದಲ್ಲಿ ಮಾತ್ರ ಸಾಧ್ಯ. ಇಲ್ಲಿ ನಂಬಿಕೆಗೆ, ಬಾವನೆಗಳಿಗೆ, ಸಂಬಂಧಗಳಿಗೆ ಇನ್ನಿಲ್ಲದಷ್ಟು ಬೆಲೆ ಇದೆ. ಹಾಗಾಗಿಯೆ ಒಂದಷ್ಟು ನೆಮ್ಮದಿಯೂ ಇದೆ ಆದರೆ ಇದರ ನೆರಳಲ್ಲೆ ವಂಚನೆಯೂ ಜಾಗೃತಾವಸ್ಥೆಯಲ್ಲಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಹೌದು ನಂಬಿಕೆಗಳಿಗೆ, ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಾಗ ಎಂತಹ ಪರಿಸ್ಥಿತಿ ಏರ್ಪಡುತ್ತದೆ ? ಇದರಿಂದ ಆಗುವ ಲಾಭ-ನಷ್ಟ ಏನು? ಸಾಮಾಜಿಕವಾಗಿ ಬೀರುವ ಪರಿಣಾಮವೇನು ? ಆಧುನಿಕತೆಗೆ ದಾಪುಗಾಲು ಹಾಕುತ್ತಿರುವ ದಿನಗಳಲ್ಲೂ ಇವೆಲ್ಲಾ ಬೇಕಾ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನಾವರಿಸುವುದು ಸಹಜವೇ. 
          
ಅಯ್ಯಪ್ಪ ಮಹಾತ್ಮೆ:ಇವತ್ತು  ದೇಶಾಧ್ಯಂತ ಅತೀ ಹೆಚ್ಚು ಭಕ್ತರನ್ನು ಹೊಂದಿದ ದೇವರು ತಿರುಪತಿಯ ಏಳು ಕುಂಡಲವಾಡ ಗೋವಿಂದ ಅಲಿಯಾಸ್ ತಿರುಪತಿ ವೆಂಕಟೇಶ್ವರ,ಎರಡನೇ ಸ್ಥಾನದಲ್ಲಿ ಬರುವುದೇ ಅಯ್ಯಪ್ಪ ಭಕ್ತರು, ಉಳಿದಂತೆ ದುರ್ಗಾದೇವಿ,ಸಂತೋಷಿಮಾತಾ,ಹೀಗೇಗೋ ನಾನಾ ಅವತಾರದ ಸಾವಿರಾರು ರೂಪಗಳಲ್ಲಿ ಬರುವ ದೇವರುಗಳು ಉಂಟು. ಅವರವರ ನಂಬಿಕೆ ಮತ್ತು ಶಕ್ತಾನುಸಾರ ಭಕ್ತಾದಿಗಳನ್ನು ಹೊಂದಿರುವ ಪ್ರತೀ ದೇವರುಗಳಿಗೂ ಒಂದೊಂದು ಹಿನ್ನೆಲೆಯಿದೆ. ಇರಲಿ ಅಯ್ಯಪ್ಪನ ಬಗ್ಗೆ ಹೇಳುವುದಾದರೆ ಈತನಿಗೆ ಸರಿಸುಮಾರು 50ಮಿಲಿಯನ್ ಭಕ್ತರು ಪ್ರತೀ ವರ್ಷವೂ ಶಬರಿಮಲೆಗೆ ತೆರಳಿ ಪೂಜೆ ಅರ್ಪಿಸುತ್ತಾರೆ! ತಿನ್ನಲು ಒಂದು ಹೊತ್ತಿನ ಅನ್ನ,ಸೂರು ಮತ್ತು ಒಂದು ನೆಮ್ಮದಿಯ ಬದುಕು ಇಲ್ಲದಿದ್ದರೂ ಭಕ್ತಿ ಭಾವದ ಹೆಸರಿನಲ್ಲಿ ಉಳಿಸಿದ ಹಣವೋ, ಸಾಲ-ಸೋಲವೋ ಮಾಡಿ  ಹಣ ಸಂಗ್ರಹಿಸಿ ಯಾತ್ರೆಗೆ ಹೊರಡುವ ಜನರಿಗೆ ಅಂತಿಮವಾಗಿಯಾದರೂ ನೆಮ್ಮದಿ ದಕ್ಕುತ್ತದಾ ಗೊತ್ತಿಲ್ಲ. ಅಯ್ಯಪ್ಪನ ವಿಷಯದಲ್ಲಿ ಮಾತ್ರ ಇಂತಹವೆಲ್ಲ ತಪ್ಪುವುದಿಲ್ಲ.
          ಸ್ವಾಮಿಯೇ ಶರಣಂ ಅಯ್ಯಪ್ಪ ಎಂದರೆ "ಆಶ್ರಯ ಕೊಡು ಭಗವಂತ"  ಎಂದು ಅರ್ಥೈಸಲಾಗುತ್ತದೆ. ಅಯ್ಯಪ್ಪನ ಕುರಿತು 2-3ರೀತಿಯ ಕತೆಗಳಿವೆ ಅದು ನಿಮಗೂ ತಿಳಿದದ್ದೇ. ಹರಿ-ಹರನ ಸಮಾಗಮದಿಂದ ಅಯ್ಯಪ್ಪ ಜನಿಸಿದ ಎನ್ನಲಾಗುತ್ತದೆ ಇದು ವೈಜ್ಞಾನಿಕವಾಗಿ ನಂಬಲು ಅಸಾಧ್ಯವಾದ ಮಾತು. ಕೇರಳದಲ್ಲಿ ಪ್ರಚಲಿತದಲ್ಲಿರುವಂತೆ ಪಂಡಾಲಂನ ರಾಜ ನಿಗೆ ಕಾಡಿನಲ್ಲಿ ಸಿಕ್ಕ ಮಗುವೇ ಅಯ್ಯಪ್ಪ,ಈತನಿಗೆ ಮಕ್ಕಳಿಲ್ಲದ ಕೊರತೆ. ಇವನೋ ಶಿವ ಭಕ್ತ ಈತನ ರಾಣಿ, ವಿಷ್ಣುವಿನ ಆರಾದಕಿ. ಹಾಗಾಗಿ ಹರಿ-ಹರ ಸಮಾಗಮದಿಂದ ಜನಿಸಿದ ಮಗು ರಾಜನಿಗೆ ವರದ ರೂಪದಲ್ಲಿ ದೊರಕಿತಂತೆ. ದೊರೆತ ಮಗುವಿನ ಕಂಠದಲ್ಲಿ ಹೊಳೆಯುವ ಮುತ್ತಿನ ಹಾರವಿದ್ದುದರಿಂದ ಮಣಿಕಂಠನೆಂಬ ಹೆಸರು ಬಂತೆಂಬ ಪ್ರತೀತಿಯೂ ಇದೆ. ಹೀಗಿರುವಾಗ ರಾಣಿಗೆ ಮಗು ಜನಿಸಿತು. ಆದರೆ ತನಗೆ ಕಾಡಿನಲ್ಲಿ ಸಿಕ್ಕ ಮಣಿಕಂಠನಿಗೆ ಯುವರಾಜನ ಪಟ್ಟವನ್ನು ಕಟ್ಟಲು ಪಂಡಾಲ ರಾಜ ಮುಂದಾಗಿದ್ದರಿಂದ  ಆತನ ಮಂತ್ರಿ ಕುತಂತ್ರ ನಡೆಸಿ ರಾಣಿಯ ತಲೆ ಕೆಡಿಸಿ ಮಣಿಕಂಠನಿಗೆ ಪಟ್ಟವನ್ನು ತಪ್ಪಿಸುವ ಸಲುವಾಗಿ ತಂತ್ರ ಹೂಡಿದ,ಅದರಂತೆ ಕಾಯಿಲೆ ಬಿದ್ದ ರಾಣಿಯ ಆರೋಗ್ಯ ಸುಧಾರಣೆಗೆ ಹುಲಿಯ ಹಾಲನ್ನು ತರುವಂತೆ ಮಣಿಕಂಠನಿಗೆ ಸೂಚಿಸಲಾಯಿತು.
             ಅಮ್ಮನ ಅಣತಿಯನ್ನು ಪಾಲಿಸಲು ಕಾಡಿಗೆ ಹೊರಟ ಮಣಿಕಂಠನಿಗೆ ಕಾಡಿನಲ್ಲಿ ಕಂಠಕ ಪ್ರಾಯಳಾಗಿದ್ದ ಮಹಿಷಿ ಎದುರಾದಳು ಆಕೆಯನ್ನು ಸಂಹಾರ ಮಾಡಿದಾಗ ಮಹಿಷಿಯ ಪೂರ್ವಜನ್ಮದ ಸುಂದರ ಯುವತಿ ರೂಪುತಳೆದಳು.ಋಷಿ ಮುನಿಯೊಬ್ಬರ ಶಾಪದಿಂದ ಆಕೆ ಮಹಿಷಿಯಾಗಿ ಜನ್ಮ ತಾಳಿದ್ದಳು. ಆ ಸುಂದರ ಯುವತಿ ಮಣಿಕಂಠನಿಗೆ ಮಾರುಹೋಗಿ ಮದುವೆಯಾಗುವಂತೆ ಪಟ್ಟುಹಿಡಿದಳು. ಆದರೆ ಅದನ್ನು ನಯವಾಗಿ ನಿರಾಕರಿಸಿದ ಅಯ್ಯಪ್ಪ ತಾನು ನೆಲೆಯಾಗುವ ಶಬರಿಮಲೈಗೆ ಭಕ್ತರು ಬರುವುದನ್ನು ನಿಲ್ಲಿಸಿದಾಗ ಆಕೆಯನ್ನು ವರಿಸುವ ಭಾಷೆಯನ್ನಿತ್ತನಂತೆ. ಹಾಗಾಗಿಯೇ ಆಕೆಯ ದೇಗುಲ ಇವತ್ತಿಗೂ ಅಯ್ಯಪ್ಪನ ದೇಗುಲದ ಪಕ್ಕದಲ್ಲೇ ಇದೆ.ಕಾಡಿಗೆ ಬಂದ ಮಣಿಕಂಠ ಹುಲಿಯನ್ನು ಪಳಗಿಸಿ ಹುಲಿಯ ಹಾಲನ್ನು ತಂದೂ ಬಿಟ್ಟ ಆ ಮೂಲಕ ತನ್ನ ಮಾತೃಭಕ್ತಿಯನ್ನು ಸಾಬೀತು ಪಡಿಸಿದ ಅಯ್ಯಪ್ಪ ಅಂತಾರ್ಧನನಾದ.
            ಅನ್ನಾಹಾರ ಬಿಟ್ಟ ರಾಜನಿಗೆ ಕನಸಿನಲ್ಲಿ ಕಾಣಿಸಿಕೊಂಡು ಶಬರಿಮಲೈನಲ್ಲಿ ನೆಲೆಸುವ ಮಾತು ಕೊಟ್ಟ ಅದರಂತೆ  ಮುಂದೆ  ಶಬರಿಮಲೈನಲ್ಲಿ ನೆಲೆ ನಿಂತ. ಇವತ್ತಿಗೂ ಮಣಕಂಠನನ್ನು ಇಷ್ಟಪಟ್ಟ ಆ ಸುಂದರ ಯುವತಿಯ ದೇಗುಲ, ಅಯ್ಯಪ್ಪನ ದೇಗುಲದ ಸನಿಹದಲ್ಲೇ ಇದೆ. ಆಕೆಯನ್ನು 'ಮಾಲಿಕಾಪುರತಮ್ಮ" ಎಂದೇ ಕರೆಯಲಾಗುತ್ತದೆ. ಶಬರಿಮಲೈ ಅಯ್ಯಪ್ಪನ ದರ್ಶನ ಪಡೆಯಲು 18ಮೆಟ್ಟಿಲುಗಳನ್ನು ಬೆಟ್ಟಕ್ಕೆ ನಿರ್ಮಿಸಲಾಗಿದೆ ಅವಕ್ಕೆ ಚಿನ್ನದ ಲೇಪನವಿದೆ. ಭಕ್ತಿ-ಶ್ರದ್ದೆಯಿಂದ ನಡೆದುಕೊಂಡವರು ಮಾತ್ರ ಅದನ್ನು ಹತ್ತಲು ಸಾಧ್ಯ ಎಂದೇ ನಂಬಿಕೆಯಿದೆ.

ಏನಿದು ಮಕರ ಜ್ಯೋತಿ  ಮಕರ ಸಂಕ್ರಾಂತಿಯ ದಿನದಂದು ಮಕರ ಜ್ಯೋತಿಯ ರೂಪದಲ್ಲಿ ಅಯ್ಯಪ್ಪನೇ ಇಂದಿಗೂ ದರ್ಶನ ಕೊಡುತ್ತಾನೆ ಎಂದು ನಂಬಲಾಗುತ್ತಿದೆ. ಈ ಬಗ್ಗೆ ಹಲವಾರು ವಾದ-ವಿವಾದಗಳು ಇವೆ. ಈ ವಿವಾದ ಕೋರ್ಟು ಮೆಟ್ಟಿಲು ಏರಿತ್ತು, ಅಲ್ಲಿ ಧಾರ್ಮಿಕ ವ್ಯವಸ್ಥೆಗಳನ್ನು ನೋಡುತ್ತಿರುವ 80ವಯಸ್ಸಿನ ಹಿರಿಯ ಮುಖಂಡರೊಬ್ಬರು ಹೇಳುವಂತೆ ದೇಗುಲದ ಆಡಳಿತ ಮಂಡಳಿಯೇ ಪ್ರತೀ ವರ್ಷ ಮಕರ ಸಂಕ್ರಮಣದ ದಿನದಂದು ಜ್ಯೋತಿಯ ರೂಪದಲ್ಲಿ ಕರ್ಪೂರ ಉರಿಸಲಾಗುತ್ತದೆ ಅದೇ ಸಮಯಕ್ಕೆ ಆಕಾಶದಲ್ಲಿ ಕಾಣುವ ಹೊಳೆಯುವ ನಕ್ಷತ್ರವೊಂದು ಬೆಟ್ಟದ ಸಾಲಿನಲ್ಲಿ ಉರಿಸುವ ಜ್ಯೋತಿಗೆ ಸಮನಾಗಿ ಕಾಣಿಸುವುದರಿಂದ ಅದು ಇನ್ನು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದಂತೆ ಅದನ್ನು ನೋಡುವ ಭಕ್ತರು ಅಯ್ಯಪ್ಪನೇ ದರ್ಶನ ಕೊಟ್ಟ ನೆಂದು ಪುನೀತರಾಗುತ್ತಾರೆ ಇರಲಿ ಭಕ್ತಿ-ನಂಬಿಕೆ ಅವರವರ ಭಾವಕ್ಕೆ ಸಂಬಂಧಿಸಿದ್ದು.
ಮಾಲೆ ಧರಿಸುವವರು ಯಾರು? ಮುಖ್ಯವಾಗಿ ನಾವಿಲ್ಲಿ ಮಾತನಾಡಬೇಕಾದ್ದು ಅಯ್ಯಪ್ಪನ ಭಕ್ತರ ಬಗೆಗೆ. ಬದುಕಿನಲ್ಲಿ ಒಂದು ಶಿಸ್ತು ಕಂಡುಕೊಳ್ಳದ, ಸಮಾಜ ಕಂಟಕನಾದ, ಸೋಲಿನ ಸುಳಿಗೆ ಸಿಕ್ಕವರಿಗೆ ಅಯ್ಯಪ್ಪ ಮಾಲೆಯನ್ನು ಹಾಕಿಸಲಾಗುತ್ತದೆ. ಈ ಪೈಕಿ ಅತ್ಮವಿಶ್ವಾಸದ ಹುಕಿಗೆ, ಶೋಕಿಗೆ ಬಿದ್ದು ಮಾಲೆ ಹಾಕುವವರು ಉಂಟು. ಅಯ್ಯಪ್ಪ ಮಾಲೆ ಹಾಕಿದ ಮೇಲಾದರೂ ತನ್ನ ಬದುಕಿನಲ್ಲಿ ಭರವಸೆ ಮೂಡಿಸುವ ರೀತಿ ಎಲ್ಲರಿಗೂ ಬೇಕಾದವರಾಗಿ ಬದುಕುತ್ತಾರೆಂಬ ನಿರೀಕ್ಷೆ ಒಂದು 10ಪರ್ಸೆಂಟಿನಷ್ಟು ನಿಜವಾದರೆ ಬಾಕಿ 90ಪರ್ಸೆಂಟಿನಷ್ಟು ಜನ ಹುಟ್ಟುಗುಣ ಸುಟ್ಟರೂ ಹೋಗದೆನ್ನುವಂತೆ ಮಾಮೂಲಿಯಾಗಿ ಬದುಕಿ ಬಿಡುತ್ತಾರೆ. ಮಾಲೆ ಹಾಕಿದಷ್ಟು ದಿನ ಮಾತ್ರ ಅಚ್ಚರಿ ಹುಟ್ಟುವಷ್ಟು ಬದಲಾವಣೆ ಕಾಣುವ ಈ ಮಂದಿ ಉಳಿದಂತೆ ಮಾಮೂಲಿ ವರಸೆಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ. ಹೀಗಿರುವಾಗ ಅಯ್ಯಪ್ಪ ಮಾಲೆ ಬೇಕಾ? ಎಂಬ ಪ್ರಶ್ನೆ ಹುಟ್ಟುತ್ತದೆ.
             ಅಯ್ಯಪ್ಪ ಮಾಲೆ ಧರಿಸಿದವನು 41ದಿನಗಳ ಕಾಲ ಕಠಿಣ ಶಿಸ್ತಿನಲ್ಲಿರಬೇಕಾಗುತ್ತದೆ. ಪ್ರತೀ ನಿತ್ಯ 108ಭಾರಿ ಅಯ್ಯಪ್ಪನ ನಾಮಸ್ಮರಣೆ ಮಾಡಬೇಕಾಗುತ್ತದೆಂಬ ನಿಯಮವಿದೆ, ಆದರೆ ಎಷ್ಟು ಮಂದಿ ಕೋಡಂಗಿಗಳಿಗೆ ಈ ಬಗ್ಗೆ ಅರಿವಿದೆ? ದೇವರ ಮಾಲೆಯ ಹೆಸರಿನಲ್ನಲಿ, ಭಕ್ತಿಯ ಹೆಸರಿನಲ್ಲಿ ನಯಾ ಪೈಸಾದ ಬದಲಾವಣೆಯೂ ಆಗದಿದ್ದರೆ ಅಯ್ಯಪ್ಪ ಮಾಲೆಯಾದರೂ ಏಕೆ ಬೇಕು? ಬಹುತೇಕ ಅಯ್ಯಪ್ಪ ಮಾಲೆ ಧರಿಸುವವರು ಗ್ರಾಮೀಣ ಪ್ರದೇಶದದವರು ಮತ್ತು ಶ್ರಮಿಕರು ಆಗಿರುತ್ತಾರೆ. ಮಾಲೆ ಧರಿಸಿ ಶಬರಿಮಲೈಗೆ ತೆರಳಲು ಸಾವಿರಾರು ರೂಪಾಯಿಗಳ ಚೀಟಿ ಹಾಕಿ ಅಯ್ಯಪ್ಪನ ದರ್ಶನವಾದ ಮೇಲೆ ಬರಗೆಟ್ಟವರಂತೆ ಕುಡಿತ-ಇಸ್ಪೀಟು-ಮಾಂಸಹಾರ-ಮೋಜಿನ ಪ್ರವಾಸ ಗಳಲ್ಲಿ ತೊಡಗುವ ಅನೇಕ ಮಂದಿ ಅಯ್ಯಪ್ಪ ಭಕ್ತಾದಿಗಳು ಸಾಧಿಸುವುದೇನನ್ನು? ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆ ಕೊಡಲೋ ಎಂಬಂತೆ  ಮಾಲೆ ಹಾಕುವ ಈ ಮಂದಿ ತಾವೇ ಹೇಳಿಕೊಂಡರೆ ಸಾಲದೆಂಬಂತೆ ಊರಿನ ನಾಲ್ಕು ದಿಕ್ಕಿಗೂ ಮೈಕು ಹಾಕಿ ರಾತ್ರಿಯಿಡೀ ಭಜನೆ ಮಾಡುವುದು ಪೂಜೆ ಸ್ನಾನದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರವನ್ನು ಹಾಳು ಮಾಡುವುದು ಸರಿಯೇ?
            ಮನೆಯಲ್ಲಿ ತಿನ್ನಲು ಅನ್ನ-ಸೂರಿಗೆ ದಿಕ್ಕಿಲ್ಲದಿದ್ದರೂ ಕೂಡಿಟ್ಟ ಹಣವನ್ನು ಯಾತ್ರೆಗೆಂದು ವೆಚ್ಚಮಾಡಿ ಸಾಧಿಸುವುದೇನು?  ಪ್ರಸಕ್ತ ದಿನಗಳಲ್ಲಿ ದೇವರ ಮೇಲಿನ ನಂಬಿಕೆಗಳು ತಪ್ಪಬೇಕು ಎಂದು ನಾನು ಹೇಳುವುದಿಲ್ಲ ಆದರೆ ಭಕ್ತಿ ಭಾವ ನಮ್ಮನ್ನು ಒಂದು ಅನೂಹ್ಯ ಲೋಕಕ್ಕೆ ಕರೆದೊಯ್ಯುತ್ತದೆ, ಸಮಾಜದಲ್ಲಿನ ಅಶಾಂತಿಗೆ ತಾತ್ಕಾಲಿಕವಾಗಿಯಾದರೂ ತಡೆ ಹಾಕುತ್ತದೆ. ಕ್ರೂರ ಮನಸ್ಸುಗಳನ್ನು ಮಣಿಸುತ್ತದೆ ಆದರೆ ಭಕ್ತಿಭಾವದ ಹೆಸರಿನಲ್ಲಾದರೂ ಜನ ಬದಲಾಗಬೇಕು, ಸಮಾಜದ ಒಳಿತಿಗೆ ಪೂರಕವಾಗುವ ರೀತಿ ನಡವಳಿಕೆಗಳನ್ನಿಟ್ಟುಕೊಂಡಾಗ ಮಾತ್ರ ನಂಬಿದ ಭಕ್ತಿಗೆ ಚ್ಯುತಿ ಬಾರದು ಅಲ್ಲವೇ?

Sunday, November 14, 2010

ಎಡಬಿಡಂಗಿ ಸರ್ಕಾರಕ್ಕೆ ಮಗ್ಗುಲ ಮುಳ್ಳುಗಳು!

ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನು ಮಾಡುತ್ತೆ? ಅಲ್ವಾ ಹಾಗೆ ಇವತ್ತಿನ ರಾಜ್ಯ ಸರ್ಕಾರದ ಸ್ಥಿತಿ ಇದೆ. ದಕ್ಷಿಣ ಭಾರತದಲ್ಲಿ ಪ್ರಥಮ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಅದಕ್ಕೆ ತಕ್ಕುದಾದ ರೀತಿಯಲ್ಲಿ ನಡೆಯುತ್ತಿಲ್ಲ. ವಿರೋಧ ಪಕ್ಷದಲ್ಲಿ  ಹಲವು ದಶಕಗಳ ಕಾಲ ನಾಯಕನಾಗಿ ನುರಿತ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಪೂರಕವಾಗಿ ಸಮಯ ಸಾಧಕತನ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳು ಅಧಿಕಾರದ ವ್ಯಾಮೋಹಕ್ಕೆ ಬಿದ್ದು ಕಾಟ ಕೊಡುತ್ತಿದ್ದಾರೆ. ಎಲ್ಲಾ ಪಕ್ಷಗಳ ಶಾಸಕರುಗಳು ದುಡ್ಡಿಗೆ ತಮ್ಮನ್ನು ಮಾರಿಕೊಳ್ಳುತ್ತಾ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ದೊಡ್ಡಣ್ಣನಂತಿರ ಬೇಕಾಗಿದ್ದ ರಾಜ್ಯಪಾಲ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ನಡೆದು ಕೊಳ್ಳುತ್ತಿದ್ದಾರೆ.  ಈ ನಡುವೆ ಮತದಾರ ದಿಗ್ಮೂಡನಾಗಿ ಇವನ್ನೆಲ್ಲಾ ನೋಡುವಂತಾಗಿದೆ. ಹಗರಣ ತಮಗೆ ಹೊಸದಲ್ಲ ಎನ್ನುವಂತೆ ಕೆಐಎಡಿಬಿ ಹಗರಣದ ಮೂಲಕ ಸ್ವಜನ ಪಕ್ಷಪಾತ ಆರೋಪಕ್ಕೆ ಸಿಎಂ ಯಡಿಯೂರಪ್ಪ ಸಿಲುಕಿದ್ದಾರೆ. ಇಂತಹ ಸಂಧಿಗ್ದ ಸನ್ನಿವೇಶದಲ್ಲಿ ರಾಜ್ಯದ ವಿಧಾನ ಸಭಾ ಚುನಾವಣೆಗಳು ಏಪ್ರಿಲ್-ಮೇ ವೇಳೆಗೆ ನಡೆದರೂ ಅಚ್ಚರಿ ಪಡಬೇಕಿಲ್ಲ.ಆಂತರಿಕ ಶಿಸ್ತಿಗೆ ಹೆಸರಾದ ಪಕ್ಷವಿದ್ದರೂ ಯಾಕೆ ಇಂತಹ ಅಭದ್ರತೆ ಕಾಡುತ್ತಿದೆ? ಬದಲಾದ ಸನ್ನಿವೇಶಗಳೇನು?ರಾಜ್ಯದ ರಾಜಕೀಯ ಎಲ್ಲಿಗೆ ಬಂದು ತಲುಪಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 
       ಮೊನ್ನೆ ನನ್ನ ಯುವ ಮಿತ್ರನೊಬ್ಬ 'ಇನ್ಮುಂದೆ ವೋಟ್ ಮಾಡಬಾರ್ದು ಅಂತ ನಿರ್ಧರಿಸಿ ಬಿಟ್ಟಿದೀನಿ, ಈ ರಾಜಕೀಯದೋರ ಆಟಗಳನ್ನು ನೋಡಿ ಸಾಕಾಗಿದೆ' ಎಂದ. ಇತ್ತೀಚೆಗೆ ಶಾಸಕರ ತಮಿಳುನಾಡು-ಹೈದರಾಬಾದ್-ಗೋವಾ ರೆಸಾರ್ಟ್ ಪ್ಯಾಕೇಜ್ ಪ್ರವಾಸ ಆತನನ್ನ ಕಂಗೆಡಿಸಿತ್ತು. ಪತ್ರಿಕೆ ತೆಗೆದರೂ ಅದೇ ಸುದ್ದಿ, ಟೀವಿ ಚಾನೆಲ್ ತಿರುಗಿಸಿದರೂ ಅದೇ ಸುದ್ದಿ ಬದುಕಿನ ಜಂಜಡದಲ್ಲಿ ತೀರಾ ರೇಜಿಗೆ ಹುಟ್ಟಿಸಿದ ಸದರಿ ಸುದ್ದಿ ಆತನ ಮನಸ್ಥಿತಿಗೆ ಕಾರಣವಾಗಿತ್ತು. ಯಾಕೆ ಹೀಗಾಗುತ್ತೆ? ರಾಜಕೀಯದಲ್ಲಿ ಸ್ಥಿತ್ಯಂತರಗಳು ಹೊಸದೇನಲ್ಲ,ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಉಂಟಾದ ರಗಳೆಗಳಿವೆಯಲ್ಲ ಅಂತಹವು ಈ ಹಿಂದೆ ಘಟಿಸಿರಲಿಲ್ಲ. ಅಲ್ಪ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಪಕ್ಷೇತರರನ್ನು ಒಲಿಸಿಕೊಂಡು ಸರ್ಕಾರ ರಚಿಸಿತು. ಆಮೇಲೆ ಸರ್ಕಾರವನ್ನು ಸುಭದ್ರ ಗೊಳಿಸಲು ಶಾಸಕರ ಬೇಟೆ ಆರಂಭಿಸಿತು. ಒಬ್ಬೊಬ್ಬ ಶಾಸಕನಿಗೂ ನಿಗಮ-ಮಂಡಳಿ ಅಧ್ಯಕ್ಷಗಿರಿ, ಸಚಿವ ಸಂಪುಟದಲ್ಲಿ ಸ್ಥಾನ ಪ್ಲಸ್ ಕೋಟಿ ಕೋಟಿ ದುಡ್ಡು ಕೊಟ್ಟು ಅನಿಷ್ಠ ಸಂಪ್ರದಾಯ ಹುಟ್ಟುಹಾಕಿದ ರೆಡ್ಡಿಗಳು ಮೊದಲಿಗೆ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದರು. ನಂತರ ಬ್ಲಾಕ್ ಮೇಲ್ ಶುರುವಿಟ್ಟುಕೊಂಡು ಸರ್ಕಾರವನ್ನು ಹೈರಾಣ ಮಾಡಿದರು. ಸಚಿವ ಸಂಪುಟದ ಸಚಿವರುಗಳೂ ದಿಕ್ಕು ದೆಸೆಯಿಲ್ಲದಂತೆ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲು ಶುರುವಿಟ್ಟರು. ಅನ್ನದಾತನಿಗೆ ವಂಚಿಸಿ ಆರ್ಥಿಕ ವಲಯದ ನೆಪದಲ್ಲಿ ದುಡ್ಡು ಮಾಡಿಕೊಂಡರು. ನೈತಿಕತೆಗೆ ಧಕ್ಕೆ ಬರುವ ರೀತಿಯಲ್ಲಿ  ಚಾರಿತ್ರ್ಯವನ್ನು ಬಹಿರಂಗವಾಗಿ ಹರಾಜಿಗಿಟ್ಟರು.ಮುಖೇಡಿ ಮುಖ್ಯಮಂತ್ರಿ ಕುರ್ಚಿಯ ಆಸೆಗೆ ಬಿದ್ದು ಭ್ರಷ್ಟಾಚಾರಕ್ಕೆ ಇಂಬು ಕೊಟ್ಟರು, ಹಗೆತನಕ್ಕೆ ಸಾಥ್ ನೀಡಿದರು. ಕನಿಷ್ಠ ತನ್ನ ಸಚಿವ ಸಂಪುಟದ ಸದಸ್ಯರನ್ನು ಹದ್ದುಬಸ್ತಿನಲ್ಲಿಟ್ಟು ಕೊಳ್ಳಲು ಆಗದ  ಮುಖ್ಯಮಂತ್ರಿಯಿಂದ ರಾಜ್ಯದ ಆಡಳಿತವನ್ನು ನಿಯಂತ್ರಿಸಲು ಸಾಧ್ಯವೇ? 
          ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿಯ ವಿರುದ್ಧ ಬಂಡೆದ್ದು ರೆಸಾರ್ಟು ಪ್ರವಾಸಕ್ಕೆ ಹೋದ ಬಿಜೆಪಿಯ ಸಚಿವರುಗಳನ್ನು ಉರಿಯುವ ಮನೆಯ ಗಳ ಹಿರಿದಂತೆ ಸಮಯ ಸಾಧಕತನ ಪ್ರದರ್ಶಿಸಿ ಆಮಿಷವೊಡ್ಡಿ ಸೆಳೆದ ಜಾತ್ಯಾತೀತ ಜನತಾದಳದ ಕುಮಾರಸ್ವಾಮಿ ಸಾಧಿಸಿದ್ದೇನು? ಕಾಂಗ್ರೆಸ್ ನಲ್ಲಿ ಕಾಲೆಳೆಯುವವರ ಮಧ್ಯೆಯೂ ವರ್ಚಸ್ಸು ಪ್ರದರ್ಶಿಸಿ ಬಿಜೆಪಿಯ  ಆಂತರಿಕ ಬಿಕ್ಕಟ್ಟನ್ನು ಲಾಭಕ್ಕೆ ತಿರುಗಿಸಿ ಮುಖ್ಯಮಂತ್ರಿಯಾಗುವ ಕನಸು ಕಂಡ ಸಿದ್ಧರಾಮಯ್ಯಗೆ ಇಂತಹದ್ದೆಲ್ಲ ಬೇಕಿತ್ತಾ? ಹಿಂದೆ ಅಪ್ಪನ ಮಾತು ತಿರಸ್ಕರಿಸಿ  ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ನೀಡಿದ್ದರೆ ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತೇ? ಒಂದಂತೂ ಸತ್ಯ ರಾಜಕೀಯದಲ್ಲಿ ಅಂತರ್ಗತವಾಗಿದ್ದ ಜಾತಿ ರಾಜಕೀಯ ಕುಮಾರಸ್ವಾಮಿಯ ತಪ್ಪು ಹೆಜ್ಜೆಯಿಂದಾಗಿ ಎದ್ದು ನಿಂತಿತು. ಪರಿಣಾಮ ಇವತ್ತು ಪಕ್ಷ ರಾಜಕೀಯಕ್ಕಿಂತ ಜಾತಿ ರಾಜಕೀಯ ಪ್ರಧಾನವಾಗಿದೆ. ಜಾತಿ ರಾಜಕೀಯದ ಪರಿಣಾಮ ಸರ್ಕಾರದ ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಇವತ್ತು ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಜಾತೀಯತೆಗೆ ಮನ್ನಣೆ ನೀಡಲಾಗಿದೆ, ಅನ್ಯ ಪಕ್ಷಗಳ ಶಾಸಕರುಗಳ ಕ್ಷೇತ್ರಕ್ಕೆ ಅಭಿವೃದ್ದಿಯ ಸೋಂಕು ಇಲ್ಲ. ದಿಕ್ಕು ದೆಸೆಯಿಲ್ಲದಂತೆ ಪದೇ ಪದೇ ನಡೆಯುತ್ತಿರುವ ಐಎಎಸ್-ಐಪಿಎಸ್-ಕೆಎಎಸ್ ಅಧಿಕಾರಿಗಳ ವರ್ಗಾವರ್ಗಿ, ಉಸ್ತುವಾರಿ ಸಚಿವರುಗಳ ಬದಲಾವಣೆ ಅನಿಶ್ಚಿತ ರಾಜಕೀಯ ನಡೆಗಳು ರಾಜ್ಯದ ಆಡಳಿತಕ್ಕೆ ಅಡ್ಡಗಾಲಾಗಿವೆ. ಈ ನಡುವೆ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿರುವ ರಾಜ್ಯಪಾಲ ಬಿಜೆಪಿ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿ ಕಾಂಗ್ರೆಸ್ ಧೋರಣೆಯ ನಿಲುವುಗಳನ್ನು ಪ್ರದರ್ಶಿಸುತ್ತಾ ಆ ಸ್ಥಾನದ ಘನತೆಯನ್ನು ಕಳೆದಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಅನುಕೂಲ ಸಿಂಧುವಿನಂತೆ ವರ್ತಿಸುತ್ತಿರುವ ರಾಜ್ಯಪಾಲರು ಪಕ್ಷಾತೀತವಾಗಿ ನಡೆಯದೇ ಇರುವುದು ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುತ್ತಿದೆ.
ಈಗ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕಿದೆ, ಈ ಸಂಧರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ಮುಕ್ತವಾಗಿ  ಮೀಸಲಾತಿ ನಿಯಮಗಳನ್ನು ಪ್ರಕಟಿಸಿ ಚುನಾವಣೆಗೆ ಮುಂದಾಗಬೇಕಾಗಿದೆ. ಆದರೆ ಅನಧಿಕೃತವಾಗಿ ಲಭ್ಯ ಮಾಹಿತಿಯ ಪ್ರಕಾರ  ಚುನಾವಣಾ ಆಯೋಗ ಮೀಸಲಾತಿ ನಿಗದಿ ಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಅದನ್ನು ತನಗೆ ಬೇಕಾದಂತೆ ಬದಲಾವಣೆ ಮಾಡಿ ಪಂಚಾಯತ್ ರಾಜ್ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಸಹಿದೆ. ಸುಗ್ರಿವಾಜ್ಞೆಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆಯೆಂದು ಪ್ರತಿಪಕ್ಷಗಳ ಬೆದರಿಕೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮೀಸಲು ಬದಲಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ.ರಾಜ್ಯಪಾಲರು ಕಾನೂನು ಸೂಕ್ಷ್ಮ ತಿಳಿಸಿ ತಿರಸ್ಕರಿಸಿದ್ದಾರೆ. ವಾಸ್ತವವಾಗಿ ಆಯಕಟ್ಟಿನ ಕೆಲವು ಸ್ಥಳಗಳಲ್ಲಿ ಈಗಲೂ ಸಹಾ ಕಾಂಗ್ರೆಸ್ ಮತ್ತು ಜೆಡಿಎಸ್ ಒಲವಿನ ಕೆಲವು ಅಧಿಕಾರಿಗಳಿದ್ದು ಅವರುಗಳು ಬೇಕೆಂತಲೇ ಸೃಷ್ಟಿಸುತ್ತಿರುವ ಎಡವಟ್ಟುಗಳಿಂದ ಸಿಎಂ ಮುಖಭಂಗಕ್ಕೆ ಒಳಗಾಗುತ್ತಿದ್ದಾರೆ ಎಂಬ ಸುದ್ದಿಯಿದೆ. ಇನ್ನು ಸಚಿವ ಸಂಪುಟದ ಕಥೆ, ತನ್ನ ಒಟ್ಟು ಸದಸ್ಯ ಸ್ಥಾನಕ್ಕೆ ಅನುಗುಣವಾಗಿ ಅತೀ ಹೆಚ್ಚಿನ ಸಂಖ್ಯೆಯ ಸಚಿವರುಗಳನ್ನು ನೇಮಿಸಿಕೊಂಡಿರುವ ಯಡಿಯೂರಪ್ಪ ಮತ್ತಿಬ್ಬರು ಸಚಿವ ಸ್ಥಾನಗಳನ್ನು ತುಂಬಲು ರೆಡಿಯಾಗಿದ್ದಾರೆ, ಅಲ್ಲಿಗೆ ಸಚಿವ ಸ್ಥಾನಗಳ ಕೋಟಾ ತುಂಬುತ್ತದೆ ಆದರೂ ಇನ್ನೂ ಹತ್ತು ಹದಿನೈದು ಶಾಸಕರುಗಳು ಸಚಿವ ಪದವಿಯ ಕ್ಯೂ ನಲ್ಲಿ ಇರುವುದರಿಂದ ಯಡಿಯೂರಪ್ಪ ನವರಿಗೆ ಕಷ್ಟ ಕೈ ಹಿಡಿಯುವುದು ಖಚಿತ, ಇರುವವರನ್ನು ಕಿತ್ತು ಸಚಿವ ಸಂಪುಟಕ್ಕೆ ಹೊಸಬರನ್ನು ತೆಗೆದುಕೊಂಡರೆ ಅದು ಉರಿಯುವ ಭಿನ್ನಮತೀಯರ ಗುಂಪಿಗೆ ತುಪ್ಪ ಸುರಿದಂತಾಗುತ್ತದೆ.ಒಂದು ವೇಳೆ ನಾಯಕತ್ವ ಬದಲಾವಣೆ ಆಗಬೇಕು ಎಂಬುದಾದರೆ ಯಡಿಯೂರಪ್ಪ ಅದಕ್ಕೆ ಸಿದ್ದರಿಲ್ಲ, ಪರಿಸ್ಥಿತಿ ಕೈ ಮೀರಿದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲು ಸಿದ್ದರಿದ್ದಾರೆಂದು  ಮೂಲಗಳು ಹೇಳುತ್ತವೆ.ರಾಜ್ಯದ ರಾಜಕೀಯದಲ್ಲಿ ಇನ್ನು ಏನೇನು ನೋಡಬೇಕು.

Saturday, October 16, 2010

ಸರ್ವಧರ್ಮೀಯರ ಅರಕಲಗೂಡು ನವರಾತ್ರಿ




ಅರೆಮಲೆನಾಡು ಅರಕಲಗೂಡು ಸುಮಾರು 800 ವರ್ಷಗಳಷ್ಟು ಹಳೆಯ ಐತಿಹ್ಯವನ್ನು ಹೊಂದಿದ ಸ್ಥಳ. ತ್ರೇತಾಯುಗದಲ್ಲಿ ಗೌತಮ ಮಹಾಋಷಿಗಳು ಇಲ್ಲಿ ತಪಸ್ಸು ಮಾಡಿದರೆಂದು ಪ್ರತೀತಿ. ಅದೇ ಸಂದರ್ಭದಲ್ಲಿ ಗೌತಮ ಋಷಿ ಅರ್ಕೇಶ್ವರನನ್ನು ಇಲ್ಲಿ ಪ್ರತಿಷ್ಠಾಪಿಸಿದ್ದರಿಂದ ಅರ್ಕಪುರಿ ಎಂದು ಕರೆಸಿಕೊಳ್ಳುತ್ತಿದ್ದ ಊರು ಕಾಲಾಂತರದಲ್ಲಿ ಅರಕಲಗೂಡು ಎಂದಾಗಿದೆ.

ಶತಮಾನಗಳ ಹಿಂದೆ ಕೆರೋಡಿಯನ್ನು ಕೇಂದ್ರಸ್ಥಾನವಾಗಿ ಹೊಂದಿದ ಪಾಳೇಗಾರ ಶಿವಪ್ಪನಾಯಕನ ಆಳ್ವಿಕೆಗೆ ಒಳಪಟ್ಟಿದ್ದ ಅರಕಲಗೂಡು ಅಭಿವೃದ್ದಿಯೇ ಕಾಣದ ಒಂದು ಸಣ್ಣ ಪುರ. ಆಗೆಲ್ಲ ಅರಕಲಗೂಡು ತಾಲೂಕು ಮೈಸೂರು [^] ಅರಸರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಸಾಂಕೇತಿಕವಾಗಿ ಬನ್ನಿ ವೃಕ್ಷ ಕಡಿಯುವ ಮೂಲಕ ದಸರೆಯನ್ನು ಆಚರಿಸಲಾಗುತ್ತಿತ್ತು. ಅದರ ಕುರುಹಾಗಿ ಈಗಲೂ ಪಟ್ಟಣದ ಪೂರ್ವಕ್ಕೆ ಇರುವ ವಿಜಯದಶಮಿ [^]ಮಂಟಪ ಸಾಕ್ಷಿಭೂತವಾಗಿದೆ.

ಆದರೆ ಉತ್ಸವದ ರೀತಿ ಆಚರಿಸಿದ ಮಾಹಿತಿ ಸಧ್ಯ ಲಭ್ಯವಿಲ್ಲ. ನಂತರದ ದಿನಗಳಲ್ಲೂ ಸಣ್ಣ ಪ್ರಮಾಣದಲ್ಲಿ ದಸರೆ ನಡೆಯುತ್ತಿತ್ತಾದರೂ ಬರಬರುತ್ತಾ ದಸರೆ ಸಂಚಾಲನ ಸಮಿತಿಯೊಳಗಿನ ವೈಮನಸ್ಯ ಕಿತ್ತಾಟಗಳು ದಸರೆ ಉತ್ಸವಕ್ಕೆ ಅಡ್ಡಿಯಾಗಿದ್ದವು. 90 ರ ದಶಕದ ಮದ್ಯದಲ್ಲಿ ಪಟ್ಟಣದ ಪ್ರತಿಷ್ಠಿತರೆನಿಸಿದ ನಾಗೇಂದ್ರ ಶ್ರೇಷ್ಠಿ ಹಾಗೂ ಶಶಿಕುಮಾರ್, ವರದಸೇವಾ ಪ್ರತಿಷ್ಠಾನದ ಶ್ರೀನಿವಾಸ್ ಮತ್ತಿತರ ಮುಖಂಡರುಗಳು ಸೇರಿ ದಸರೆ ಉತ್ಸವಕ್ಕೆ ಮರುಚಾಲನೆ ನೀಡಲು ನಿರ್ಧರಿಸಿದರು.

ಈ ಬಗ್ಗೆ ಚರ್ಚಿಸಿ ಪಟ್ಟಣದಲ್ಲಿರುವ ಪಂಚ ಮಠಾಧಿಪತಿಗಳು ಮತ್ತು ವಿವಿಧ ಧರ್ಮದ ಮುಖಂಡರು ಒಂದಾಗಿ ದಸರ ಉತ್ಸವ ರೂಪುಗೊಳ್ಳಲು ಶ್ರಮಿಸಿದ್ದರ ಫಲವೇ ಇಂದಿನ ದಸರೆ. ಒಂದು ಸಾಂಸ್ಕೃತಿಕ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಗೊಂಡ ಅರಕಲಗೂಡು ದಸರ ವಿಶೇಷವೆಂದರೆ ಸರ್ವಧರ್ಮದವರು ಅಂದರೆ 18 ಕೋಮಿನ ಜನರನ್ನು ಸಂಘಟಿಸುವುದೇ ಆಗಿದೆ.

ದಸರಾ ಸಂಸ್ಕೃತಿಗೆ ಹೊಸ ಅರ್ಥ : ಈ ಕೈಕಂರ್ಯದಲ್ಲಿ ಎಲ್ಲರನ್ನೂ ಒಂದೇ ವೇದಿಕೆಗೆ ತರುವ ಪ್ರಯತ್ನದಲ್ಲಿ ಮಠಾಧೀಶರುಗಳು ಮತ್ತು ಧರ್ಮ ಗುರುಗಳು ತಾಲೂಕಿನಾಧ್ಯಂತ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸಿದ್ದರು. ಅದೇ ಸಂಪ್ರದಾಯ ಇವತ್ತಿಗೂ ಮುಂದುವರೆದಿದೆ. ಆದರೆ ಈಗ ಪಾದಯಾತ್ರೆಗೆ ಬದಲಾಗಿ ನವರಾತ್ರಿ [^]ಗೆ ಮುನ್ನ ಪ್ರತೀ ಹೋಬಳಿ ಕೇಂದ್ರಗಳಿಗೂ ತೆರಳಿ ಧಾರ್ಮಿಕ ಪ್ರವಚನ ನೀಡಿ ವಿಜಯದಶಮಿಯಂದು ಕೇಂದ್ರ ಸ್ಥಾನದಲ್ಲಿ ಸೇರುವಂತೆ ಮನವಿ ಮಾಡುತ್ತಾರೆ. ಆ ಮೂಲಕ ದಸರಾ ಉತ್ಸವಕ್ಕೆ ಸಾಮಾಜಿಕ ರೂಪವೂ ಸಿಗುತ್ತದೆ. ಹೀಗೆ ಅರಕಲಗೂಡು ದಸರಾ ಸಂಸ್ಕೃತಿಗೆ ಹೊಸ ಅರ್ಥವೇ ಸಿಕ್ಕಿದೆ. 

ಇನ್ನು ವಿಜಯದಶಮಿಯಂದು ಮದ್ಯಾಹ್ನ ೪ಗಂಟೆ ಸುಮಾರಿಗೆ ಗ್ರಾಮದೇವತೆ ದೊಡ್ಡಮ್ಮ ದೇವತೆಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಮುಗಿಯುವ ವೇಳೆಗೆ ವಿವಿಧ ಕೋಮಿನ ಜನರು ಆರಾಧಿಸುವ ದೇವಾನು ದೇವತೆಗಳನ್ನು ಸಿಂಗರಿಸಿ ಪ್ರತ್ಯೇಕ ವಾಹನಗಳಲ್ಲಿ ತಂದು ಸಾಲಾಗಿ ನಿಲ್ಲಿಸಲಾಗುತ್ತದೆ. ಕೋಟೆ ನರಸಿಂಹ ಸ್ವಾಮಿ ದೇಗುಲದಿಂದ ಆರಂಭವಾಗುವ ಮೆರವಣಿಗೆಗೆ ಸಂಘ ಸಂಸ್ಥೆಗಳು ತಾವು ಉತ್ಸವಕ್ಕಾಗಿಯೇ ಸಿದ್ದಪಡಿಸಿದ ಸ್ಥಬ್ದಚಿತ್ರಗಳನ್ನು ತರುತ್ತಾರೆ. ಉತ್ಸವದ ಅಂಗವಾಗಿ ನಾಡಿನ ವಿವಿಧ ಬಾಗಗಳಿಂದ ಆಗಮಿಸುವ ಕಲಾತಂಡಗಳಾ ಸೋಮನ ಕುಣಿತ, ಚಿಟ್ಟಿಮೇಳ, ಜಾನಪದ ಮೇಳ, ಕೀಲು ಕುದುರೆ, ಗೊಂಬೆ ಮೇಳ ಹಾಗೂ ಸಂಚಾರಿ ರಸಮಂಜರಿ ತಂಡ ಹೀಗೆ ಇನ್ನೂ ಹಲವು ಆಕರ್ಷಣೆಗಳು ದಸರಾ ಮೆರವಣಿಗೆಗೆ ಕಳೆ ನೀಡುತ್ತವೆ. 

ಕತ್ತಲಾಗುವ ವೇಳೆಗೆ ರಂಗಾಗುವ ಉತ್ಸವದ ಮೆರವಣಿಗೆಯ ಮುಂಭಾಗ ವಾದ್ಯ ಗೋಷ್ಠಿ ಇರುತ್ತದೆ. ಇವೆಲ್ಲಾ ಬಂದು ಸೇರುವ ಹೊತ್ತಿಗೆ ಸಾವಿರಾರು ಸಂಖ್ಯೆಯ ಜನರು ಸೇರಿರುತ್ತಾರೆ. ಹೂವು ಹಾಗೂ ವಿದ್ಯುದ್ದೀಪಗಳಿಂದ, ತಳಿರು-ತೋರಣಗಳಿಂದ ಊರಿನ ಪ್ರಮುಖ ಬೀದಿಗಳು ಕಂಗೊಳಿಸುತ್ತವೆ. ಈ ಸಂಧರ್ಭದಲ್ಲಿ ಮಡಿಕೇರಿ [^] ದಸರಾಗೆ ತೆರಳುವ ಪ್ರಯಾಣಿಕರು ಸಹಾ ಮಾರ್ಗ ಮದ್ಯೆ ನಿಂತು ಅರಕಲಗೂಡು ದಸರಾ ಉತ್ಸವದ ಆಕರ್ಷಣೆಯನ್ನು ಸವಿಯುತ್ತಾರೆ. ರಾತ್ರಿ 9 ಗಂಟೆ ಸುಮಾರಿಗೆ ಉತ್ಸವ ಪಟ್ಟಣದ ಪೂರ್ವದಿಕ್ಕಿನಲ್ಲಿರುವ ವಿಜಯದಶಮಿ ಮಂಟಪದ ಬಳಿ ಬಂದು ಸೇರುತ್ತದೆ. ಅಲ್ಲಿ ಬನ್ನಿ ವೃಕ್ಷಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಪೂಜಿಸಲ್ಪಟ್ಟ ಬಾಳೆ ಗಿಡವನ್ನು ತಾಲೂಕಿನ ದಂಡಾಧಿಕಾರಿಗಳು ಸಾಂಕೇತಿಕವಾಗಿ ಕತ್ತರಿಸುತ್ತಾರೆ.

ಕದಳಿ ವೃಕ್ಷ ಛೇಧನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯೊಂದಿಗೆ ಉತ್ಸವಕ್ಕೆ ತೆರೆ ಬೀಳುತ್ತದೆ. ಸರ್ಕಾರದ ಕೃಪಾಶೀರ್ವಾದವಿಲ್ಲದೇ ನಡೆಯುವ ಅರಕಲಗೂಡು ನವರಾತ್ರಿ ಸ್ವಾವಲಂಬನೆ ಮತ್ತು ಸಹಬಾಳ್ವೆಗೆ ಮಾದರಿಯಾಗಿದೆ.

ಲೇಖನವನ್ನು ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟಿಸಿದ ಸಂಪಾದಕರಾದ ಶ್ಯಾಮ್ ಸುಂದರ್ ಸರ್ ಗೆ ಕೃತಜ್ಞತೆಗಳು. http://thatskannada.oneindia.in/news/2010/10/15/arakalagudu-hasana-navaratri-all-religion-fest.html

Thursday, September 30, 2010

ಅಯೋಧ್ಯಾ ವಿವಾದ: ಮುಗಿಯದ ಕಗ್ಗಂಟು....!



ಅಯೋಧ್ಯಾ ಪ್ರಕರಣ ಕುರಿತು ಅಲಹಾಬಾದ್ ಮಹತ್ವದ ತೀರ್ಪನ್ನು ತನ್ನ ಪರಿಧಿಯಲ್ಲಿ ಪ್ರಕಟಿಸಿದೆ, ಆದರೆ ಸದರಿ ತೀರ್ಪಿನಿಂದ ಸಮಸ್ಯೆ ಇನ್ನೂ ಜಟಿಲವಾಗುವ ಅಪಾಯ ಎದುರಾಗಿದೆ. ಸದರಿ ವಿವಾದಿತ ಜಾಗವನ್ನು ರಾಮನ ದೇಗುಲಕ್ಕೆ, ನಿರ್ಮೋಹಿ ಅಖಾಡಕ್ಕೆ ಹಾಗೂ ಬಾಬರಿ ಮಸೀದಿ ಕ್ರಿಯಾ ಸಮಿತಿಗೆ ಹಂಚಿ ಸಾಮಾಜಿಕ ನ್ಯಾಯ ದೊರಕಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಆ ಮೂಲಕ ಸರಳವಾಗಿದ್ದ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಬಹುಶ: ವಾದಿ-ಪ್ರತಿವಾದಿಗಳ ವಾದ, ಸಾಕ್ಷ್ಯಗಳನ್ನು ಮಾತ್ರವೇ ಪರಿಗಣಿಸಿ ತನ್ನ ಚೌಕಟ್ಟಿನೊಳಗೆ ಲಖನೌ ಪೀಠ ತೀರ್ಪು ನೀಡಿದಂತಾಗಿದೆ. ಇಲ್ಲಿ ವಿವಾದಿತ ಸ್ಥಳ ಯಾರಿಗೆ ಸೇರಬೇಕು ಎನ್ನುವುದಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಪ್ರಸಕ್ತ ಸಂಧರ್ಭಕ್ಕೆ ಪೂರಕವಾಗಿ ದೇಶದ ಸಾಂಸ್ಕೃತಿಕ ಒಗ್ಗಟ್ಟನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಕುವ ಪ್ರಯತ್ನ ಬಹು ಮುಖ್ಯವಾದುದು ಎಂದು ಅನಿಸುತ್ತದೆ.
ನಮ್ಮ ದೇಶ ಸಾವಿರಾರು ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ದೌರ್ಜನ್ಯಕ್ಕೆ ಸಿಲುಕಿ ನಲುಗಿದೆ. ಆದರೆ ಭರತ ಖಂಡವನ್ನು ಸುಮಾರು 300ವರ್ಷಗಳ ಕಾಲ ಆಳಿದ ಮುಸಲ್ಮಾನರು ಹಿಂದೂಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಮತ್ತು ಭಾವನೆಗಳ ಮೇಲೆ ಎಸಗಿದ ಆಕ್ರಮಣ, ದೌರ್ಜನ್ಯ ಎಂದಿಗೂ ಮರೆಯಲಾಗದಂತಹುದು. ಇವತ್ತು ಭರತ ಖಂಡವೇನಾದರೂ ಛಿದ್ರವಾಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಇತಿಹಾಸದ ಪುಟಗಳಲ್ಲಿ ಸೇರಿ ಹೋದ ಮುಸಲ್ಮಾನರು!ಹರಿದು ಹಂಚಿ ಹೋದ ರಾಷ್ಟ್ರಗಳಾದ ಭಾಂಗ್ಲಾ, ಪಾಕೀಸ್ತಾನ, ಕಾಬೂಲ್, ಬರ್ಮಾ, ಜಾವಾ, ಸುಮಾತ್ರ, ಕಾಂಬೋಡಿಯಾ ಇತ್ಯಾದಿಗಳಲ್ಲಿ ಇವತ್ತಿಗೂ ಹಿಂದೂಗಳ ಮೇಲೆ ನಿರಂತರವಾದ ಹಲ್ಲೆ ಜಾಗೃತ ಸ್ಥಿತಿಯಲ್ಲಿದೆ,ಧರ್ಮ ಬದಲಿಸುವ ಕ್ರಿಯೆಗೆ ಒಪ್ಪದ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ, ಇದಕ್ಕೆ ಸಾಕ್ಷ್ಯಧಾರಗಳು ಸಹಾ ಜಾಗತಿಕ ಮಟ್ಟದಲ್ಲಿ ಲಭ್ಯವಿದೆ . ಹಿಂದೂಗಳ ಭಾವನೆಯ ಸಂಕೇತವಾದ ಸಾಂಸ್ಕೃತಿಕ ಸ್ಮಾರಕಗಳು, ದೇಗುಲಗಳನ್ನು ನಾಶಪಡಿಸುವ ಕ್ರಿಯೆ ಜಾರಿಯಲ್ಲಿದೆ. ಹೀಗಿದ್ದಾಗ್ಯೂ ಭಾರತದಲ್ಲಿ ಮತೀಯವಾದವನ್ನು ತೊಡೆದು ಹಾಕುವ ರೀತಿಯಲ್ಲಿ ಸಾಂಸ್ಕೃತಿಕ-ಸಾಮಾಜಿಕ ಒಗ್ಗಟ್ಟು ಇರುವುದನ್ನು ಕಾಣಬಹುದು. ಭಾವೈಕ್ಯತೆಯ ಮಂದಿರಗಳು, ಗುಮ್ಮಟಗಳು ಧಾರ್ಮಿಕ ಕೇಂದ್ರಗಳನ್ನು ಸಹಜೀವನದ ಬದುಕುಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ವಿಶಾಲವಾಗಿ ಆಲೋಚಿಸುವವರನ್ನ, ಹೃದಯ ವೈಶಾಲ್ಯವನ್ನ ಹೊಂದಿದ, ಪರಸ್ಪರರ ಭಾವನೆಗಳನ್ನು ಗೌರವಿಸುವ ಜನರಿರುವುದು ಬಾರತದಲ್ಲೇ ಅಂದರೆ ತಪ್ಪಾಗಲಾರದೇನೋ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಆಗುತ್ತಿರುವುದೇನು? ಸದ್ದಿಲ್ಲದೇ ಗರಿಗೆದರುತ್ತಿರುವ ಕೋಮು ಶಕ್ತಿಗಳು ಮತ್ತು ಆ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುವ ರಾಜಕೀಯ ಪಕ್ಷಗಳು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆತಂಕದಲ್ಲಿ ಸಿಲುಕುವಂತೆ ಮಾಡಿವೆ. ಪರಿಣಾಮ ಚದುರಿಹೋದ ದುಷ್ಟರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ನಿರಂತರವಾಗಿ ಅಪಾಯವನ್ನು ತಂದೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯಾ ವಿವಾದವನ್ನು ಪರಿಗಣಿಸುವುದಾದರೆ ಕೆಲವು ವಿಚಾರಗಳ ಮಂಥನ ಅಗತ್ಯವಾದೀತೇನೋ. ಹಿಂದೂ ಪರಂಪರೆಯನ್ನು ಸಾರುವ ರಾಮಾಯಣ-ಮಹಾಭಾರತ ಐತಿಹಾಸಿಕವಾದ ಸಂಗತಿ. ಇದರ ವಾಸ್ತವತೆಗೆ ಅಖಂಡ ಭಾರತದ ವಿವಿದೆಡೆ ಇಂದಿಗೂ ಕಂಡು ಬರುವ ಐತಿಹಾಸಿಕ ಕುರುಹುಗಳು ಸಾಕ್ಷಿಯಾಗಿ ನಿಂತಿವೆ. ಅವು ಒಂದು ದೇಶದ ಜನರ ಭಾವನೆಗಳಿಗೆ, ಬದುಕಿಗೆ ಸಂಬಂಧಿಸಿದ ಅತಿ ಮುಖ್ಯ ವಿಚಾರಗಳು ಹೌದು. ಆದರೆ ಅಖಂಡ ಭಾರತದ ಮೇಲೆ ಧಾಳಿ ಮಾಡಿದ ಮತ್ತು ಆಳ್ವಿಕೆ ನಡೆಸಿದ ಘಜನಿ ಮಹಮ್ಮದ್, ಮಹ್ಮದ್ ಘೋರಿ,ಬಾಬರ್, ಅಲೆಕ್ಸಾಂಡರ್, ಔರಂಗಜೇಬ ಮತ್ತು ತೊಘಲಕ್ ಅರಸರು ಗಳು ಶತಮಾನಗಳ ಹಿಂದೆ ನಮ್ಮ ಸಾಂಸ್ಕೃತಿಕ ಐತಿಹ್ಯಗಳ ಮೇಲೆ ನಡೆಸಿದ ಧಾಳಿಯ ಪರಿಣಾಮ ಇವತ್ತಿಗೂ ಹಿಂದೂಗಳು ಚೇತರಿಸಿಕೊಳ್ಳಲಾಗದಂತಹ ಸ್ಥಿತಿಯನ್ನು ನಿರ್ಮಿಸಿದೆ. ಹಿಂದೂಗಳ ಅನೇಕ ಭಾವನಾತ್ಮಕ ಐತಿಹ್ಯಗಳ ಮೇಲೆ ಅಳಿದು ಹೋದ ಮುಸ್ಲಿಂ ಅರಸರು ದಬ್ಬಾಳಿಕೆಯ ಸಂಕೇತವಾಗಿ ಮಸೀದಿ-ದರ್ಗಾ ಮತ್ತಿತರ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಇದು ಅಂದಿನವರ ಪೈಶಾಚಿಕ ಕೃತ್ಯವೇ ಸರಿ, ಆದರೆ ಈಗೇನಾಗಿದೆ ? ಇದು ನಾಗರೀಕ ಜಗತ್ತು, ಮತೀಯವಾದ, ಸಂಘರ್ಷಕ್ಕೆ ಎಡೆಮಾಡುವಂತ ವಿಚಾರಗಳು ಅನಪೇಕ್ಷಿತವಾದವುಗಳಾಗಿವೆ. ಬಾಬರಿ ಮಸೀದಿ ಜಾಗ ಶ್ರೀ ರಾಮನ ಜನ್ಮಭೂಮಿಯೇ ಇದ್ದಿರಬಹುದು ಹಾಗೆಯೇ ಅಲ್ಲಿ ರಾಮದೇಗುಲವನ್ನು ಧ್ವಂಸಗೊಳಿಸಿ ಬಾಬರನು ಮಸೀದಿಯನ್ನು ನಿರ್ಮಿಸಿರಬಹುದು ಈ ಕುರಿತು ವಿಚಾರ ಇತ್ಯರ್ಥ ಕಾಣುವ ಮುಂಚೆಯೇ ಬಿಜೆಪಿ ಮತ್ತು ಸಂಘ ಪರಿವಾರದವರು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ತಪ್ಪು ಆ ಮೂಲಕ ಮಹ್ಮದೀಯ ದೊರೆಗಳಿಗಿಂತ ತಾವೇನೂ ಭಿನ್ನವಲ್ಲ ಎಂದು ತೋರಿದಂತಾಗಿದೆ. ಇಲ್ಲಿ ಮಸೀದಿ ಉರುಳಿಸಿದ್ದು ಹಿಂದೂಗಳಿಗೆ ದೊರೆತ ಜಯವೆಂದೇ ಅವರು ಭಾವಿಸಬಹುದೇನೋ ಆದರೆ ಅದರ ನಂತರದ ಪರಿಣಾಮ ಬಾಂಗ್ಲಾ,ಪಾಕೀಸ್ತಾನ್, ಕಾಬೂಲ್ ಮತ್ತಿತರೆಡೆಗಳಲ್ಲಿರುವ ಹಿಂದೂಗಳ ಮೇಲೆ ತೀವ್ರತರವಾದ ಪರಿಣಾಮವನ್ನೆ ಬೀರಿದೆ ಮತ್ತು ಈಗಲೂ ಬೀರುತ್ತಿದೆ. 1528ರಲ್ಲಿ ನಿರ್ಮಾಣವಾಗಿದೆಯೆನ್ನಲಾದ ಮಸೀದಿಯಲ್ಲಿ 1949ರ ಸುಮಾರಿಗೆ ಪ್ರಾರ್ಥನೆ ನಿಂತಿದೆ, ನಂತರ ಹಿಂದೂಗಳು ಅಲ್ಲಿ ರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ ಅಲ್ಲಿಂದ ಶುರುವಾದ ವಿವಾದ ಅಲಹಾಬಾದ್ ಕೋರ್ಟಿನಲ್ಲಿ ತಾರ್ಕಿಕ ಅಂತ್ಯವನ್ನು ಸಾಕ್ಷ್ಯಗಳ ಆಧಾರದಲ್ಲಿ ಕೋರ್ಟಿನ ಇತಿಮಿತಿಯಲ್ಲಿ ಪ್ರಕಟವಾಗಿದೆ. ನಾನು ಈ ಮೊದಲೇ ಹೇಳಿದಂತೆ ಇದು ಸಾಕ್ಷ್ಯ ಮತ್ತು ಆಧಾರಗಳ ಮೇಲೆ ಮಾತ್ರ ತೀರ್ಮಾನಿಸ ಬಹುದಾದ ವಿಚಾರವಲ್ಲ. ಪ್ರಸಕ್ತ ಸಂಧರ್ಭದ ಸ್ಥಿತಿ, ದೇಶದ ಭಾವೈಕ್ಯತೆ ಹಿನ್ನೆಲೆಯಲ್ಲಿ ತೀರ್ಪು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಈಗ ದೊರೆತ ತೀರ್ಪಿನಿಂದ ಬಾಬರಿ ಕ್ರಿಯಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರಿಗಳಿಗೆ ಅತೃಪ್ತಿ ಉಂಟಾಗಿದೆ. ಹಂಚುವ ಪ್ರಕ್ರಿಯೆ ಮತ್ತುಷ್ಟು ಕಗ್ಗಂಟನ್ನು ಹೆಚ್ಚಿಸಿದೆ , ಸದರಿ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ಮಾತನ್ನು ಎರಡೂ ಕಡೆಯವರು ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ವಿವಾದ ಮುಂದುವರೆಯುವ ಬಗ್ಗೆ ಸರ್ವರಲ್ಲೂ ಆತಂಕವನ್ನುಂಟು ಮಾಡಿದೆ. ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ಭಾರತದಂತಹ ದೇಶದಲ್ಲಿ ಇತಿಹಾಸದಲ್ಲಿ ಗತಿಸಿ ಹೋದ ವಿಚಾರಗಳನ್ನು ಕೆದಕುವ ಬದಲಿಗೆ ವಾಸ್ತವ ಜಗತ್ತಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಿಲುವುಗಳು ವ್ಯಕ್ತವಾದರೆ ದೇಶದ ಜನ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಬಹುದೇನೋ. ಆದರೆ ಇದು ಸಾಧ್ಯವೇ?

Sunday, September 19, 2010

ಇಂಥ ಗಣೇಶೋತ್ಸವಗಳು ಬೇಕಾ??


ದು ಗಣೇಶೋತ್ಸವ ಆಚರಣೆಯ ಸಂಧರ್ಭ, ನಗರಗಳಲ್ಲಿ,ಪಟ್ಟಣಗಳಲ್ಲಿ,ಗಲ್ಲಿಗಳಲ್ಲಿ, ಹಳ್ಳಿಗಳಲ್ಲಿ, ಕೇರಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಪ್ರತಿಷ್ಟಾಪನೆಯಾಗಿಬಿಡುವ ಗಣೇಶ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರೀಕರಣದ, ಕಂಡವರ ಸ್ವ-ಹಿತಾಸಕ್ತಿಯ ಉತ್ಸವ ಮೂರ್ತಿಯಾಗಿರುವದು ಅತ್ಯಂತ ವಿಷಾಧದ ಸಂಗತಿ. ಇವತ್ತು ಜಾಗತಿಕವಾಗಿ ವರಸಿದ್ದಿ ವಿನಾಯಕನ ಜನಪ್ರಿಯತೆ ಪಸರಿಸಿದೆ. ಭಾರತದಲ್ಲಿ ಪ್ರಧಾನ ಪೂಜೆ ಹಾಗೂ ವೈಭವದ ಉತ್ಸವ ನಡೆಯುವುದು ಮಾತ್ರ ಗಣೇಶನಿಗೆ ಆಗಿದೆ. ಎರಡನೇ ಸ್ಥಾನದಲ್ಲಿ ದುರ್ಗಿ, ಕಾಳೀ ಉತ್ಸವಗಳು ಜರುಗುತ್ತವೆ. ಐತಿಹಾಸಿಕ ಹಿನ್ನೆಲಯ ಗಣೇಶನ ಪ್ರಾಮುಖ್ಯತೆ ಮತ್ತು ಆತನ ಉತ್ಸವಗಳು ಇಂದಿನ ದಿನಗಳಲ್ಲಿ ಸಾಗಿರುವ ದಿಕ್ಕು ಹೇಗಿದೆ? ಗಣೇಶ ಎಂದರೆ ಯಾರು? ಇತರೆ ದೇವರುಗಳಿಗಿಂತ ಈತನ ಹೆಚ್ಚುಗಾರಿಕೆ ಏನು? ಗಣೇಶ ಪೂಜೆ ಆರಂಭವಾಗಿದ್ದು ಯಾವಾಗ? ವಿದೇಶಗಳಿಗೆ ಗಣೇಶ ಕಾಲಿಟ್ಟಿದ್ದು ಹೇಗೆ? ಸಾರ್ವಜನಿಕ ಗಣೇಶ ಉತ್ಸವಗಳು ಯಾಕೆ ಬೇಕು ? ಅದು ಶುರುವಾಗಿದ್ದು ಹೇಗೆ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು ಆವರಿಸುವುದು ಸಹಜವೇ.
ಗಣೇಶ ಎಂದರೆ ಯಾರು ಎಂಬ ಪ್ರಶ್ನೆಗೆ ಎಂತಹ ಚಿಕ್ಕಮಕ್ಕಳು ಸಹಾ ಥಟ್ಟಂತ ಉತ್ತರಿಸಿ ಬಿಡುತ್ತವೆ ಆದರೆ ಗಣೇಶನ ಕುರಿತು ಸಾಮಾನ್ಯವಾಗಿರುವ ಕಥೆಗಳನ್ನು ಹೊರತು ಪಡಿಸಿ ವಿಭಿನ್ನ ರೀತಿಯ ಕಥೆಗಳು ಸಹಾ ಇವೆ. ಇರಲಿ ಅದನ್ನು ತಿಳಿಯುವ ಮುನ್ನ ಒಂದಷ್ಟು ವಿಚಾರಗಳನ್ನು ತಿಳಿಯೋಣ. ಗಣೇಶ ಎಂಬ ಪದ ಸಂಸ್ಕೃತದ ಗಣೇಸ ಎಂಬ ಪದದಿಂದ ಎರವಲಾಗಿ ಪಡೆದುದಾಗಿದೆ. ಗಣ ಗಳ ಅಧಿಪತಿ ಗಣೇಶ ಹಾಗಾಗಿ ಗಣೇಶ ಎಂದಾಗಿದೆ, ಅಷ್ಟೇ ಅಲ್ಲ ಆತ ಗಜ ಮುಖವನ್ನು ಹೊಂದಿರುವುದರಿಂದ ಗಜಮುಖ ಹೀಗೆ ಸಾಗುವ ಗಣೇಶನ ಹೆಸರಿನ ಪುರಾಣಕ್ಕೆ ಅಂತ್ಯವಿಲ್ಲ. ನಿಮಗೆ ಗೊತ್ತೆ ಗಣೇಶ ನಿಗೆ ಸಾವಿರಕ್ಕೂ ಮಿಕ್ಕಿದ ಹೆಸರುಗಳು ಇವೆ. ಗಣೇಶನಿಗೆ ಪೂಜಿಸಲು ಗಣೇಶ ಸಹಸ್ರನಾಮವೇ ಇದೆ! ಗಣೇಶ, ಶಿವ-ಪಾರ್ವತಿಯ ಮಗ, ಆತ ಹುಟ್ಟಿದ್ದು, ಗಜಮುಖ ಬಂದಿದ್ದಕ್ಕೆ ಇರುವ ಸಾಧಾರಣ ಕಥೆಗಿಂತ ವಿಭಿನ್ನ ಕಥೆಯೊಂದಿದೆ. ಗಣೇಶ ಹುಟ್ಟಿದಾಗ ಅಶ್ವಿನಿ ದೇವತೆಗಳು ಬಾಲಗಣಪನ್ನ ನೊಡಲು ಬರುತ್ತಾರೆ, ಹೀಗೆ ಬಂದವರಲ್ಲಿ ಛಾಯಾದೇವಿಯ ಮಗ ಶನಿಯು ಸಹಾ ಇರುತ್ತಾನೆ. ಆತನ ಮರೆಯಲ್ಲಿ ನಿಂತು ಬಾಲಗಣಪನ್ನು ನೋಡುವಾಗ ಪಾರ್ವತಿಗಮನಿಸಿ ಗಣಪನ್ನನು ತೊಡೆಯ ಮೇಲೆ ಹಾಕಿಕೊಳ್ಳುತ್ತಾಳಂತೆ, ಆಗ ಮನಸ್ಸು ಬೇಡವೆಂದರೂ ಕುತೂಹಲ ತಡೆಯದ ಶನಿಯು ಗಣೇಶನನ್ನು ನೇರ ನೋಟದಿಂದ ನೋಡಿದ ಪರಿಣಾಮ ಗಣೇಶನ ಮುಖ ಸುಟ್ಟು ಬೂದಿಯಾಗುತ್ತದೆ.. ಆಗ ಪಾರ್ವತಿಯು ಶನಿಗೆ ಹೆಳವನಾಗುವಂತೆ ಶಾಪಕೊಟ್ಟು ತೆವಳಿಕೊಂಡು ಹೋಗುವಂತೆ ಮಾಡುತ್ತಾಳಂತೆ, ಇದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ಶನಿಯ ತಾಯಿ ಛಾಯಾದೇವಿ ಗಣೇಶನಿಗೆ ಡೊಳ್ಳುಹೊಟ್ಟೆ ಬಂದು ಆತನು ನಿಧಾನವಾಗಿ ಸಂಚರಿಸುವಂತೆ ಶಪಿಸುತ್ತಾಳೆ. ನಂತರ ಶಿವನು ಗಜಮುಖವನ್ನು ತರಿಸಿ ಬಾಲಗಣೇಶನಿಗೆ ಜೀವ ತರಿಸುತ್ತಾನಂತೆ ಗಜಮುಖವನ್ನೇ ಏಕೆ ಆಯ್ಕೆ ಮಾಡಿದೆ ಎಂದರೆ ರಾಕ್ಷಸ ಗಣಗಳನ್ನು ಹೆದರಿಸಲು ಆ ಮುಖ ಎನ್ನುತ್ತಾನೆ. ಈ ಕಥೆ ಕೇಳಲು ವಿನೋದವಾಗಿದೆ. ಅತ್ಯಂತ ಬುದ್ದಿವಂತನಾದ ಗಣಪ ತಂದೆ-ತಾಯಿಯರ ಮನವನ್ನು ಗೆಲ್ಲುತ್ತಾನೆ ಆ ಮೂಲಕ ಶಿವನಿಂದ ಸಮಸ್ತರ ವರಸಿದ್ದಿಸುವ ಶಕ್ತಿಯನ್ನು ಪಡೆದು ವರಸಿದ್ದಿ ವಿನಾಯಕನಾಗುತ್ತಾನೆ ಎಂಬ ಮಾತಿದೆ. ಇಂದಿಗೂ ವಿವಾದಾತ್ಮಕವಾಗಿ ಚರ್ಚಿಸುವ ವಿಚಾರವೆಂದರೆ ಗಣೇಶ ಬ್ರಹ್ಮಚಾರಿ ಇಲ್ಲವೇ ಇಬ್ಬರು ಹೆಂಡಿರ ಗಂಡ ಎಂಬ ಮಾತಿದೆ. ಅದಕ್ಕೆ ಪೂರಕವಾಗಿರುವ ಕಥೆಯೊಂದರ ಪ್ರಕಾರ ಗಣೇಶನಿಗೆ ಸಿದ್ದಿ ಮತ್ತು ಬುದ್ದಿ,ರಿದ್ದಿ ಎಂಬ ಪತ್ನಿಯರಿದ್ದು ಶುಭ-ಲಾಭ ಹಾಗೂ ಜೈ ಸಂತೋಷಿಮಾ ಎಂಬ ಮಕ್ಕಳು ಇದ್ದರು ಎನ್ನಲಾಗುತ್ತದೆ. ಕೆಲವು ಉಲ್ಲೇಖಗಳಲ್ಲಿ ಗಣೇಶ ಆನೆ ಮುಖದೊಂದಿಗೆ ಹುಟ್ಟಿದ ಆದ್ದರಿಂದಲೇ 'ಗಜಮುಖ'ನೆಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಗೆ ಗಣೇಶನ ಕುರಿತ ಲಭ್ಯವಿರುವ ಮುದ್ಗಲ್ ಪುರಾಣ ಮತ್ತು ಗಣೇಸ ಪುರಾಣ, ಶಿವಪುರಾಣ ಗಳಲ್ಲಿ ಮಾಹಿತಿ ಇದೆ.'ಬ್ರಹ್ಮಾನಂದ ಪುರಾಣದಲ್ಲಿ 'ಭೂತ-ವರ್ತಮಾನ-ಭವಿಷ್ಯತ್' ಮಾನದ ಸಂಕೇತವೇ ಗಣೇಶ ಹಾಗಾಗಿ ಆತನಿಗೆ 'ಲಂಬೋದರ'/ಮಹೊದರ ಎನ್ನಲಾಗುವುದಂತೆ. ಇನ್ನೊಂದು ವಿಶೇಷವೆಂದರೆ ಗಣೇಶನನ್ನು 32ಮಾದರಿಗಳಲ್ಲಿ ಕಾಣಬಹುದು!
ಗಣೇಶನ ಪೂಜೆ ಮೊದಲಿಗೆ ಆರಂಭವಾದ ಬಗ್ಗೆ ಮಾಹಿತಿ ಲಭ್ಯವಾಗುವುದು ಗುಪ್ತರ ಕಾಲದಲ್ಲಿ, ಅದಕ್ಕು ಮುಂಚೆ 4 ಮತ್ತು 5ನೇ ಶತಮಾನದಲ್ಲಿ ಗಣೇಶನ ಆರಾಧನೆಯ ಬಗ್ಗೆ ಸುಳುಹು ಲಭ್ಯವಾಗುತ್ತದೆ. ಗುಪ್ತರ ಆಡಳಿತಾವದಿಯಲ್ಲಿ ಬರ್ಮಾ ದಲ್ಲಿ ಸ್ಥಾಪಿತವಾದ ಶಿವ ದೇಗುಲದ ಆವರಣದಲ್ಲಿ ಸಿಗುವ ಗಣೇಶ ನೇ ಮೊದಲ ಅಸ್ತಿತ್ವದ ಕುರುಹು. ಪುರಾತನ ಕಾಲದ ಪಳೆಯುಳಿಕೆಗಳಾದ ಎಲ್ಲೋರ ಗುಹೆಗಳಲ್ಲು ಗಣೇಶನ ಚಿತ್ರಗಳು ಕಾಣ ಸಿಗುತ್ತವೆ. ಇದಕ್ಕೂ ಮುನ್ನ ಬುಡಕಟ್ಟು ಜನಾಂಗದ ಮಂದಿ ಆನೆಮುಖದ ಗಣೇಶನನ್ನು ಪೂಜಿಸುತ್ತಿದ್ದ ಬಗ್ಗೆಯೂ ಸುಳುಹು ಲಭಿಸುತ್ತವೆಯಾದರೂ ನಿಖರವಾಗಿ ಯಾವಾಗ ಎಂಬುದು ಮಾತ್ರ ಇಂದಿಗೂ ನಿಗೂಢವೇ!ಪ್ರಸಕ್ತ ಸಂಧರ್ಬದಲ್ಲಿ ಗಣೇಶ ಜಾತಿ-ಮತ-ಪಂಥವನ್ನು ಮೀರಿ ಬೆಳೆದಿದ್ದಾನೆ. ದೇಶದಲ್ಲಷ್ಟೇ ಅಲ್ಲ ದಕ್ಷಿಣ ಆಪ್ರಿಕಾ, ಜಾವಾ, ಸುಮಾತ್ರ, ಕಾಂಬೋಡಿಯಾ, ಪ್ರಾನ್ಸ್, ಶ್ರೀಲಂಕಾ, ಜಪಾನ್, ಮಲೇಷಿಯಾ ಹೀಗೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಿಂದೂಗಳಲ್ಲದ ಭಕ್ತರನ್ನು ಸಂಪಾದಿಸಿದ್ದಾನೆ. ಗಣೇಶ ಮೊದಲಿಗೆ ದ್ರಾವಿಡರ ದೇವರೆಂದು ಪರಿಗಣಿತವಾದರೂ ನಂತರದ ದಿನಗಳಲ್ಲಿ ಆತ ಆರ್ಯರ ದೇವರೆಂದೇ ಬಿಂಬಿತನಾಗಿದ್ದಾನೆ. ಬ್ರಾಹ್ಮಣ ಸಮುದಾಯದವರು ಮಾತ್ರ ಮನೆಯಲ್ಲಿರಿಸಿ ಪೂಜಿಸುತ್ತಿದ್ದ ವಿಘ್ನೇಶ್ವರನನ್ನು 1893ರಲ್ಲಿ ದೇಶಭಕ್ತ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯದ ಜಾಗೃತಿಗಾಗಿ ಬ್ರಾಹ್ಮಣರು/ ಅಬ್ರಾಹ್ನಣರನ್ನು ಬ್ರಿಟೀಷರ ವಿರುದ್ದ ಒಂದುಗೂಡಿಸುವ ಸಲುವಾಗಿ ಗಣೇಶನನ್ನು ಸೀಮಿತವಲಯದಿಂದ ಮುಕ್ತಗೊಳಿಸಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದರು. ಪರಿಣಾಮವಾಗಿ ಇವತ್ತು ದೇಶದ ಉದ್ದಗಲಕ್ಕೂ ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅಂದು ತಿಲಕರು ಅಂದುಕೊಂಡ ಉದ್ದೇಶ ಗಣೇಶನ ಮೂಲಕ ಸಾಧ್ಯವಾಯಿತು. ಆದರೆ ಇವತ್ತೇನಾಗಿದೆ? ಗಣೇಶ ಸ್ವಾರ್ಥದ ಹಿತಾಸಕ್ತಿಗಳ ಕೈಗೊಂಬೆಯಾಗಿದ್ದಾನೆ ಎಂದು ಹೇಳಲು ವಿಷಾಧವಾಗುತ್ತದೆ. ಇವತ್ತು ಪ್ರತಿ ಊರುಗಳಲ್ಲಿ ಅಲ್ಲಿನ ಗಲ್ಲಿಗಳಲ್ಲಿ ಸ್ಥಾಪಿತವಾಗುವುದು ಜಾತಿ ಗಣೇಶ, ರಾಜಕೀಯದ ಗಣೇಶ, ಸಂಘದ ಪ್ರತಿಷ್ಠೆಯ ಗಣೇಶ, ಹಣ ಉಳ್ಳವರ ಪ್ರದರ್ಶನದ ಗಣೇಶ, ಹಪ್ತಾ ವಸೂಲಿಯ ಗಣೇಶ, ಪೋರ್ಕಿಗಳ ಗಣೇಶ ಹೀಗೆ ಒಂದೇ ಎರಡೇ. ನಾನು ಈಗಾಗಲೇ ಹೇಳಿದಂತೆ ಗಣೇಶನ ಮಹಿಮೆಗಳನ್ನು ಸಾರುವ ಹಿನ್ನೆಲೆಯಲ್ಲಿ 32ಮಾದರಿಯ ಗಣೇಶ ಇದ್ದರೆ ಇವತ್ತು ವೀರಪ್ಪನ್ ಗಣೇಶ, ಬಿನ್ ಲಾಡೆನ್ ಗಣೇಶ ನಕ್ಸಲೈಟ್ ಗಣೇಶ, ಭಯೋತ್ಪಾದಕ ಗಣೇಶ, ವಿದೇಶಗಳಲ್ಲಿ ಬಫೂನ್ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿದರೆ ವಿದೇಶೀಯರು ಚಪ್ಪಲಿಯ ಮೇಲೆ, ಬೆತ್ತಲೆ ಬೆನ್ನು, ಹೊಟ್ಟೆ, ತೊಡೆ ಇತ್ಯಾದಿಗಳ ಮೇಲೆಲ್ಲ ಗಣೇಶನ ಚಿತ್ತಾರವನ್ನು ಹಾಕಿಕೊಳ್ಳುವುದು ಅತ್ಯಂತ ಬೇಸರದ ಸಂಗತಿ. ಗಣಪತಿ ಭಾವೈಕ್ಯತೆಯ ಶಕ್ತಿಯ ಸಂಕೇತ ಅದು ನಂಬಿದ ಜನರ ಭಾವನಾ ಸಂಕೇತವೂ ಹೌದು ಹೀಗಿರುವಾಗ ಇದನ್ನೆಲ್ಲ ಸಹಿಸಲಾದೀತೆ? ಗಣಪತಿಯ ಹೆಸರು ಹೇಳಿ ಬೋಗಸ್ ಲಾಟರಿ ಮಾಡುವುದು, ಬಲವಂತದ ಚಂದಾ ವಸೂಲು ಮಾಡುವುದು, ಬೇಕಿಲ್ಲದ ಅದ್ದೂರಿತನ ಪ್ರದರ್ಶಿಸಿ ಹಣ ಪೋಲು ಮಾಡುವುದು ಬೇಕಾ ಹೇಳಿ? ಅತ್ತ ವೇದಿಕೆಯಲ್ಲಿ ಗಣೇಶನನ್ನು ಕೂರಿಸಿ ಆತನ ಎದುರು ಭಾಗದ ವೇದಿಕೆಯಲ್ಲಿ ಮೈಮಾಟ ಪ್ರದರ್ಶಿಸುವ ನಂಗಾನಾಚ್ ನೃತ್ಯ ವೈಭವ, ಪೋಲಿ ಹಾಡುಗಳ ಸುಗಮ ಸಂಗೀತ ಇವೆಲ್ಲಾ ಬೇಕೇನ್ರಿ? ಯಾವುದೋ ಜಾಗ ಕಬಳಿಸುವ ಸಲುವಾಗಿ ಗಣೇಶ ಸಮಿತಿ ಮಾಡಿ ಎಡವಟ್ಟು ಜಾಗದಲ್ಲಿ ಗಣೇಶನ್ನು ಪ್ರತಿಷ್ಠಾಪಿಸುವುದು, ಹಾದಿ-ಬಿದಿ ಬದಿ ಗಣೇಶನನ್ನು ಕೂರಿಸುವುದು, ಚರಂಡಿ ದುರ್ವಾಸನೆ ಬಳಿ ಗಣೇಶನನ್ನು ಪ್ರತಿಷ್ಠಾಪಿಸುವುದು ಎಷ್ಟು ಸರಿ ಸ್ವಾಮಿ? ಇನ್ನು ಕೆಲವೆಡೆಗಳಲ್ಲಿ ಗಣೇಶನನ್ನು ಕೂರಿಸಲು ಚೀಟಿ ಹಾಕಿ 'ಚೀಟಿ ಗಣೇಶ'ನನ್ನು ಸಹಾ ಕೂರಿಸುವ ಪ್ರವೃತ್ತಿ ಉಂಟು. ಒಟ್ಟಾರೆ ಹೇಳುವುದಾದರೆ ಗಣೇಶನ ಹೆಸರಿನಲ್ಲಿ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿಗಳು ವ್ಯಯ ಮತ್ತು ಪರಿಸರ ಮಾಲಿನ್ಯ ಆಗುತ್ತಿದೆ. ಭಕ್ತಿ-ಭಾವದ ವರಸಿದ್ದಿ ವಿನಾಯಕನಿಗೆ ಇಂತದ್ದೆಲ್ಲಾ ಅವಾಂತರ ಬೇಕೇನ್ರಿ? ನೀವೇನಂತೀರಿ???

Sunday, September 12, 2010

ಬೇಕಾಗಿದೆ ಮೌಲ್ಯಾಧಾರಿತ ರಾಜಕಾರಣ..!

ಬಿಜೆಪಿ ಸರ್ಕಾರ ಮತ್ತೊಮ್ಮೆ ಮುಜುಗುರಕ್ಕೆ ಸಿಲುಕಿದೆ, ಮತ್ತು ಇದು ಹೊಸತೇನೂ ಅಲ್ಲ ಬಿಡಿ. ಪರಮ ಭ್ರಷ್ಟಾಚಾರ ಬಯಲಾಗುತ್ತಿದ್ದಂತೆ ಅನಿವಾರ್ಯವಾಗಿ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ರಾಜೀನಾಮೆ ನೀಡಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಇದು ಮೂರನೆಯ ರಾಜೀನಾಮೆ. ಮೊದಲನೆಯವರು ಮುಜುರಾಯಿ ಖಾತೆ ಸಚಿವ ಕೃಷ್ಣಶೆಟ್ಟಿ, ಎರಡನೆಯವರು ಸಮಾಜ ಕಲ್ಯಾಣ ಇಲಾಖೆ ಸಚಿವ ಡಿ ಸುಧಾಕರ್ ಮೂರನೆಯವರು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪದೇ ಪದೇ ಇಂತಹ ಅವಸ್ಥೆಗೆ ಗುರಿಯಾದ ಸರ್ಕಾರವೆಂದರೆ ಸಧ್ಯದ ಬಿಜೆಪಿ ಸರ್ಕಾರ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 3ವರ್ಷಗಳಷ್ಟೇ ಕಳೆದಿದೆ ಈ ಅವಧಿಯಲ್ಲಿ ಇಷ್ಟೆಲ್ಲ ಅಸಹ್ಯಗಳು ಬೇಕಿತ್ತಾ?
ಒಂದರೆಕ್ಷಣ ನೆನಪಿಸಿಕೊಳ್ಳಿ ಪಕ್ಷ ಅಧಿಕಾರಕ್ಕೆ ಬಂದ ಆರಂಭದಲ್ಲೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನರ್ಸು ಜಯಲಕ್ಷ್ಮಿ ಜೊತೆ ಚಕ್ಕಂದ ಆಡಿದ ವಿವರಗಳು ಬಹಿರಂಗಕ್ಕೆ ಬಂದಿದ್ದು, ದಾವಣಗೆರೆಯಲ್ಲಿ ಪುಂಡಾಟಿಕೆ ತೋರಿಸಲು ಹೋಗಿ ಎಸ್ಪಿ ಸೋನಿಯಾ ನಾರಂಗ್ ರಿಂದ ಅಂಡಿನ ಮೇಲೆ ರೇಣುಕಾಚಾರ್ಯ ಒದೆ ತಿಂದದ್ದು, ರೆಡ್ಡಿಗಳನ್ನು ನಿರ್ಲಕ್ಷಿಸಿದರೆಂಬ ಆರೋಪ ಹೊತ್ತ ಸಿಎಂ ಯಡಿಯೂರಪ್ಪ ಅಧಿಕಾರ ಹೋಯಿತು ಎನ್ನುವಷ್ಟರಲ್ಲಿ ಸ್ವಾಭಿಮಾನವನ್ನು ಗಾಳಿಗೆ ತೂರಿ ಸಿಎಂ ಗದ್ದುಗೆ ಉಳಿಸಿಕೊಂಡದ್ದು, ಕೆಜಿಎಫ್ ನ ಶಾಸಕ ಸಂಪಂಗಿಯ ಭ್ರಷ್ಟಾಚಾರದಿಂದ ಲೋಕಾಯುಕ್ತ ಬಲೆಗೆ ಸಿಲುಕಿದ್ದು, ಮುಜುರಾಯಿ ಖಾತೆಯ ಸಚಿವರಾಗಿದ್ದ ಕೃಷ್ಣಶೆಟ್ಟಿ ಸರ್ಕಾರ ಸ್ವಾಧಿನಕ್ಕೆ ತೆಗೆದುಕೊಂಡ ನೂರಾರು ಎಕರೆ ಕೃಷಿ ಭೂಮಿಗೆ ಸರ್ಕಾರದಲ್ಲಿ ಅಧಿಕ ವೆಚ್ಚ ತೋರಿಸಿ ರೈತರಿಗೆ ಕಡಿಮೆ ಬೆಲೆ ನೀಡಿ ವಂಚಿಸಿದ್ದು, ಪ್ರತಿಫಲವಾಗಿ ರಾಜೀನಾಮೆ,ಶಾಸಕ ಹರತಾಳು ಹಾಲಪ್ಪ ಅತ್ಯಾಚಾರ ಕಾಂಡದಲ್ಲಿ ಸಿಲುಕಿದ್ದು,ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ನಿಗಮದ ಅಧ್ಯಕ್ಷೆ ಚಿತ್ರ ನಟಿ ಶೃತಿಯ ಖಾಸಗಿ ಬದುಕಿನ ರಂಪಾಟ ಬಹಿರಂಗವಾಗಿದ್ದು, ನರ್ಸು ಜಯಲಕ್ಷ್ಮಿ ಸರ್ಕಾರದಲ್ಲಿ ಸಚಿವನಾಗಿರುವ ರೇಣುಕಾಚಾರ್ಯನ ಖಾಸಗಿ ಬದುಕನ್ನು ಹಾದಿರಂಪ ಬೀದಿರಂಪ ಮಾಡಿ ಕೋರ್ಟು ಮೆಟ್ಟಿಲು ಹತ್ತಿಸಿದ್ದು, ವಿಧಾನ ಸಭೆಯಲ್ಲಿ ರೆಡ್ಡಿ ಸಹೋದರರ ವಾಗ್ದಾಳಿಯಿಂದ ಪ್ರತಿಪಕ್ಷಗಳು ಧರಣಿ ನಡೆಸಿ ಪಾದಯಾತ್ರೆ ಮಾಡಿದ್ದು, ಬೇಲೇಕೇರಿ ಬಂದರಿನ ಅದಿರು ನಾಪತ್ತೆಯಾಗಿದ್ದು, ಲೋಕಾಯುಕ್ತರು ಹೆಚ್ಚಿನ ಅಧಿಕಾರಕ್ಕೆ ಆಗ್ರಹಿಸಿ ರಾಜೀನಾಮೆ ನೀಡಿದ್ದು, ಮೈಸೂರು ವಿವಿ ಭ್ರಷ್ಟಾಚಾರ ಕುರಿತು ಸರ್ಕಾರದ ಎಡಬಿಡಂಗಿ ದೋರಣೆ, ರಾಜ್ಯಪಾಲರ ಅಸಹಾಯಕ ಹೇಳಿಕೆ, ಪ್ರತಿ ಪಕ್ಷದವರ ಮಾತಿನ ವಿರುದ್ದ ಆಡಳಿತ ಪಕ್ಷದವರ ಕ್ರಿಮಿನಲ್ ಹೇಳಿಕೆಗಳು, ಬಿಕ್ಷುಕರ ಪುನರ್ವಸತಿ ಕೇಂದ್ರದ ಅಕ್ರಮ-ಅವ್ಯವಸ್ಥೆ, ಹೊಣೆಹೊತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಸುಧಾಕರ್ ರಾಜೀನಾಮೆ, ಹಾಸನ-ಮೈಸೂರು ವೈದ್ಯಕೀಯ ಮಹಾವಿದ್ಯಾಲಯಗಳ ಸಿಬ್ಬಂದಿ ನೇಮಕಾತಿಯ ಅಕ್ರಮ-ಭ್ರಷ್ಟಾಚಾರ, ನೇಮಕಾತಿ ರದ್ದು, ಹೈಕೋರ್ಟಿನಿಂದ ಸಚಿವರಿಗೆ ಛೀಮಾರಿ, ಅಂತಿಮವಾಗಿ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಮಚಂದ್ರಗೌಡ ರಾಜೀನಾಮೆ ಹೀಗೆ ಹೇಳುತ್ತಾ ಹೋದರೆ ಒಂದೇ ಎರಡೇ?
ಯಾವುದೇ ಸರ್ಕಾರಕ್ಕೆ ಒಂದು ಅಭಿವೃದ್ದಿಯ ಬದ್ದತೆ ಬೇಕು , ಬದ್ದತೆ ಜೊತೆಗೆ ನೈತಿಕ ಮೌಲ್ಯಗಳು ಬೇಕು. ಚುನಾವಣೆಯಲ್ಲಿ ಗೆಲ್ಲುವವರೆಗೆ ಮಾತ್ರ ಪಕ್ಷ ರಾಜಕಾರಣ ಬೇಕು. ಗೆದ್ದ ಮೇಲೆ ಎಲ್ಲರನ್ನು ಸಲಹುವ ಆಡಳಿತ ಪಕ್ಷ ಆಗಬೇಕು, ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವನ್ನು ಜಾಗೃತಾವಸ್ಥೆಯಲ್ಲಿರಿಸುವ ವಿರೋಧ ಪಕ್ಷವಾಗಬೇಕು. ಆದರೆ ಈಗ ಆಗುತ್ತಿರುವುದೆಲ್ಲವೂ ತದ್ವಿರುದ್ದ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಷ್ಟೂ ಪಕ್ಷಗಳಿಗೂ ವೈಯುಕ್ತಿಕ ಹಿತಾಸಕ್ತಿಗಳು ಮುಖ್ಯವಾಗಿದೆ, ಕಾಂಗ್ರೆಸ್ ಗೆ ರೆಡ್ಡಿಗಳನ್ನು ತೆಗೆಯುವ ಹುನ್ನಾರ ಬಿಟ್ಟರೆ ಬೇರೆ ವಿಚಾರಗಳಿಲ್ಲ, ಅದಕ್ಕಾಗಿ ವಿಧಾನಸಭೆ/ಪರಿಷತ್ ಅಧಿವೇಶನಗಳನ್ನು ಬಲಿಗೊಟ್ಟು ಧರಣಿ-ಪಾದಯಾತ್ರೆ ಮಾಡಿ ಮುಗುಮ್ಮಾಗಿ ಕುಳಿತಿದ್ದಾರೆ. ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ 70ಕೋಟಿ ದುಡ್ಡು ತಿಂದು ಅರಗಿಸಿಕೊಳ್ಳುತ್ತಿದ್ದಾರೆ, ಸಧ್ಯಕ್ಕೆ ಆ ಪ್ರಕರಣ ಮುಚ್ಚಿ ಹೋಗಿದೆ. ಜೆಡಿಎಸ್ ಪಾಳೆಯದಲ್ಲಿ ದೇವೇಗೌಡ 'ನೈಸ್' ವಿವಾದ ಕುರಿತು ತಲೆ ಕೆಡಿಸಿಕೊಂಡಿದ್ದರೆ, ಮಗ ಕುಮಾರಸ್ವಾಮಿ ರೆಡ್ಡಿಗಳನ್ನು ಹಣಿಯುವ ಕುರಿತು ಆಸಕ್ತಿ ತೋರುತ್ತಿದ್ದಾರೆ. ಈ ಪ್ರತಿ ಪಕ್ಷಗಳಿಗೆ ರಾಜ್ಯದ ಜನತೆಯ ಕಷ್ಟ ಸುಖಗಳು ಬೇಕಿಲ್ಲ, ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿ ಕೊಳ್ಳುವಲ್ಲಿ ನಿರತವಾಗಿವೆ ಮತ್ತು ಆ ಮೂಲಕ ರಾಜ್ಯದ ಜನರನ್ನ ವಂಚಿಸಿವೆ. ರಾಜ್ಯದಲ್ಲಿ ಆಡಳಿತ ಹದಗೆಟ್ಟಿದೆ, ಭ್ರಷ್ಟಾಚಾರ ಮೇರೆ ಮೀರಿದೆ. ಮೈಸೂರು ವಿವಿ ಮಾಜಿ ಕುಲಪತಿ ವಿರುದ್ದ ವ್ಯಾಪಕವಾದ ಭ್ರಷ್ಟಾಚಾರ ಆರೋಪ ಕೇಳಿ ಬಂದರೂ ಕ್ರಮತೆಗೆದು ಕೊಳ್ಳದೇ ಹೇಡಿತನ ಮೆರೆದಿದೆ ಸರ್ಕಾರ! ಆದರೆ ವೈದ್ಯಕೀಯ ಮಹಾವಿದ್ಯಾಲಯಗಳ ಭೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ ಕುರಿತು ಸಿಎಂ ಯಡಿಯೂರಪ್ಪ ದಿಟ್ಟತನ ಪ್ರದರ್ಶಿಸಿದ್ದಾರೆ. ಅತ್ತೂ ಕರೆದು ಸಂಪುಟ ದರ್ಜೆಯ ಭ್ರಷ್ಟ ಸಚಿವ ರಾಮಚಂದ್ರಗೌಡರಿಂದ ರಾಜೀನಾಮೆ ಕೊಡಿಸಲಾಗಿದೆ. ಹಾಸನ-ಮೈಸೂರು ವೈದ್ಯಕೀಯ ಕಾಲೇಜಿನ ಭೋಧಕೇತರ ಸಮಿತಿಯನ್ನು ಮಾತ್ರ ರದ್ದು ಪಡಿಸಿರುವ ಸರ್ಕಾರ ನೇಮಕಾತಿ ಸಮಿತಿಯ ವಿರುದ್ದವೂ ಕಠಿಣ ನಿಲುವು ಪ್ರಕಟಿಸ ಬೇಕಾಗಿದೆ. ಈ ವಿದ್ಯಾಲಯಗಳ ಭೋಧಕೇತರ ಸಿಬ್ಬಂದಿ ಮಾತ್ರವಲ್ಲ ಭೋಧಕ ಸಿಬ್ಬಂದಿ, ಪರಿಕರಗಳ ಖರೀದಿಯಲ್ಲೂ ಅಕ್ರಮ ನಡೆದಿರುವ ಸಾಧ್ಯತೆಗಳಿವೆ,ಅವು ಕೂಡ ಸಮಗ್ರ ತನಿಖೆಯಿಂದ ಬಯಲಿಗೆ ಬರಬೇಕಿದೆ. ಲೆಕ್ಕಪತ್ರವಿಲ್ಲದಂತೆ ಕಾನೂನುಗಳನ್ನು ಗಾಳಿಗೆ ತೂರಿ ಹಲವು ಇಂಜಿನಿಯರಿಂಗ್ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಔದ್ಯೋಗೀಕರಣದ ನೆಪದಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಉದ್ಯಮಿಗಳಿಗೆ ನೀಡಲಾಗಿದೆ, ಅಭಿವೃದ್ದಿಯ ವಿಚಾರದಲ್ಲಿ ವಿವಿಧ ಜಿಲ್ಲೆಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕಳ್ಳರು, ಸುಳ್ಳರು, ವಂಚಕರು, ಅತ್ಯಾಚಾರಿಗಳು, ವ್ಯಭಿಚಾರಿಗಳಿಗೆ ಆಢಳಿತ-ವಿಪಕ್ಷದಲ್ಲಿ ಆದ್ಯತೆ ನೀಡಲಾಗಿದೆ. ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡುತ್ತೇನೆಂದು ಹೇಳಿ 1 1/2 ವರ್ಷವಾಗಿದೆ, ಅವರಿಗೆ ತಲೆಯ ಮೇಲೊಂದು ಸೂರು ಕಲ್ಪಿಸಲಾಗಿಲ್ಲ! ಐಎಎಸ್-ಐಪಿಎಸ್-ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಕಡಿವಾಣ ಬಿದ್ದಿಲ್ಲ, ಹೇಳಿ ಇದನ್ನೆಲ್ಲಾ ನಿಬಾಯಿಸಲು ಸಾಧ್ಯವಿಲ್ಲದ ಆಡಳಿತ ಪಕ್ಷಗಳು-ವಿಪಕ್ಷಗಳು ಬೇಕಾ? ರಾಜಕಾರಣದಲ್ಲಿ ಮೌಲ್ಯವಿಲ್ಲದಿದ್ದರೆ ಆಗೋದೆ ಹೀಗೆ ಸ್ವಾಮಿ. ಕಳೆದ 5-6 ದಶಕಗಳಲ್ಲಿ ಅದೆಷ್ಟೋ ರಾಜಕೀಯ ಪಕ್ಷಗಳು ಸರ್ಕಾರ ನಡೆಸಿವೆ, ವಿರೋಧ ಪಕ್ಷಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿವೆ ಆದರೆ ಈ ಮೂರು ವರ್ಷದಲ್ಲಿ ರಾಜಕೀಯ ಪಕ್ಷಗಳ ಆದ್ಯತೆ-ಬದ್ದತೆ ಮಾತ್ರ ಸಂಪೂರ್ಣವಾಗಿ ಜನವಿರೋಧಿ ಧೋರಣೆಯವೇ ಆಗಿವೆ. ಸ್ವಾರ್ಥ ರಾಜಕಾರಣ ಪ್ರಧಾನ ಪಾತ್ರ ವಹಿಸಿದೆ, ಮೌಲ್ಯಾಧಾರಿತ ರಾಜಕಾರಣ ಕಳೆದು ಹೋಗಿದೆ ಪ್ರಜಾ ತಾಂತ್ರಿಕ ವ್ಯವಸ್ಥೆಯ ಸುಲಲಿತ ಮುನ್ನಡೆಗೆ ನೈತಿಕತೆಯ ರಾಜಕಾರಣವಿಲ್ಲದಿದ್ದರೆ ಅದು ವ್ಯವಸ್ಥೆಯ ಅಧ:ಪತನಕ್ಕೆ ಕಾರಣವಾಗುತ್ತದೆ. ಅರಾಜಕತೆ ಜನರ ಶಾಂತಿ ನೆಮ್ಮದಿಯನ್ನು ಹಾಳು ಮಾಡುತ್ತದೆ ಆದ್ದರಿಂದ ನಮ್ಮ ರಾಜಕಾರಣಿಗಳು ಎಚ್ಚೆತ್ತು ಕೊಳ್ಳದಿದ್ದರೆ ಜನ ಪಾಠ ಕಲಿಸುತ್ತಾರೆ.

Sunday, September 5, 2010

ಹೇಗಿದೆ ನಮ್ಮ ಆಧುನಿಕ ಗುರು ಪರಂಪರೆ?


"ಟೀಚರ್ ಗಳು ಸರಿ ಇಲ್ಲ ! ಮೊದಲು ನೀವು ಸರಿಯಾಗಿ. ಇವತ್ತು ಸಮಾಜದಲ್ಲಿ ಭ್ರಷ್ಟಾಚಾರ ಇದೆ,ವ್ಯವಸ್ಥೆ ಹಾಳಾಗಿದೆ, ಭ್ರಷ್ಟ ಅಧಿಕಾರಿಗಳು/ರಾಜಕಾರಣಿಗಳು ಇದ್ದಾರೆಂದರೆ ಅದಕ್ಕೆ ನೀವೆ ನೇರ ಹೊಣೆ, ಫೀಸು ಕಟ್ಟಿ ಶಾಲೆಗೆ ಬರುವ ಮುಗ್ದ ಬಾಲಕ ಶಾಲೆ ಬಿಡುವ ವೇಳೆಗೆ ಕೆಟ್ಟು ಹೋಗುತ್ತಾನೆ ಎಂದರೆ ಸಮಸ್ಯೆಯ ತೀವ್ರತೆ ಗೊತ್ತಾಗುತ್ತದಲ್ವಾ? ಬರೀ ಪಾಠ ಪ್ರವಚನ ಮಾಡೋದ್ರಿಂದ ಪ್ರಯೋಜನವಿಲ್ಲ ಬದುಕುವುದನ್ನು ಕಲಿಸಿ, ನೈತಿಕ ಶಿಕ್ಷಣ ನೀಡಿ, ದಕ್ಷತೆಯಿಂದ ಕೆಲಸ ಮಾಡಿ, ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ತಿದ್ದಿಕೊಳ್ಳಲು ಆಗದಿದ್ದರೆ ಕೆಲಸ ಬಿಟ್ಟು ಹೋಗಿ" ಎಂದು ಖಡಕ್ಕಾಗಿ ನೇರಾ ನೇರಾ ಮಾತುಗಳಲ್ಲಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡದ್ದು ಖ್ಯಾತ ನಟ, ರಂಗಕರ್ಮಿ ಮತ್ತು ನಿವೃತ್ತ ಇಂಗ್ಲೀಷ್ ಪ್ರೊಫೆಸರ್ ಟಿ ಎಸ್ ಲೋಹಿತಾಶ್ವ. ಅವರಿಗೀಗ 68ರ ಪ್ರಾಯ ಆದರೂ ಪ್ರಬುಧ್ದ ಮನಸ್ಥಿತಿಯ ಕ್ರಿಯಾಶೀಲ ಮೇಷ್ಟ್ರು ಅವರು!
ಅಸಲು ವಿಚಾರಕ್ಕೆ ಬರುವ ಮುನ್ನ ಪ್ರೊಫೆಸರ್ ಬಗ್ಗೆ ಒಂದು ಪುಟ್ಟ ಪರಿಚಯ. ತುಮಕೂರು ಜಿಲ್ಲೆಯ ತೊಂಡೆಕೆರೆ ಗ್ರಾಮ ದಿಂದ ಬಂದ ಲೋಹಿತಾಶ್ವ ಎಡಪಂಥೀಯ ಧೋರಣೆ ಹೊಂದಿದ ಪ್ರಗತಿಶೀಲ ವ್ಯಕ್ತಿತ್ವದವರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲೀಷ್ ಸ್ನಾತಕಪಧವೀಧರರು. ನೇರ ಹಾಗೂ ದಿಟ್ಟ ನಡವಳಿಕೆಯ ಲೋಹಿತಾಶ್ವ ಅನಿಸಿದ್ದನ್ನು ಯಾರ ಮುಲಾಜಿಗೂ ಕಾಯದೇ ಹೇಳುವ ಗುಣದವರು. ಇದುವರೆಗೂ 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅವರು ಸಾಹಿತ್ಯ ವಲಯದಲ್ಲೂ ಕೃಷಿ ಮಾಡಿದ್ದಾರೆ. ನಾಟಕ ರಚನೆ, ಗದ್ಯ-ಪದ್ಯ ರಚನೆ, ಕವನ ಸಂಕಲನ, ಅನುವಾದ ಹೀಗೆ ವಿಭಿನ್ನ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಗತಿ ಪರ ಧೋರಣೆ ಬಿಂಬಿಸುವ ಹಲವು ಸಮಾಜ ಮುಖಿ ನಾಟಕಗಳಲ್ಲಿ ಲೋಹಿತಾಶ್ವ ನಟಿಸಿದ್ದಾರೆ.ಚಲನಚಿತ್ರಗಳಲ್ಲಿ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯ-ಸಂಸ್ಕೃತಿ ಸೇವೆಗಾಗಿ ರಾಜ್ಯ ನಾಟಕ ಅಕಾಡೆಮಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಅವರ ಪುತ್ರ ಶರತ್ ಲೋಹಿತಾಶ್ವ ಕೂಡಾ ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ.
ಇಂತಹ ಲೋಹಿತಾಶ್ವ ಶಿಕ್ಷಕರ ದಿನಾಚರಣೆಗಾಗಿ ಆಗಮಿಸಿದ್ದ ವೇಳೆ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಸಿದ ಪರಿ ನಿಜಕ್ಕೂ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರ ಆದ್ಯತೆ, ಗುರಿ ಮತ್ತು ಪರಿಣಾಮದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ನೆನ್ನೆ ರಾಷ್ಟ್ರದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗಿದೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅತಿಥಿ ಗಣ್ಯರೆನಿಸಿಕೊಂಡವರು ದಾವಂತಕ್ಕೆ ಬಿದ್ದವರಂತೆ ಶಿಕ್ಷಕರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ ಬಿಟ್ಟಿರುತ್ತಾರೆ. ಆದರೆ ಅದರ ಜೊತೆಗೆ ಶಿಕ್ಷಕರನ್ನ ಮೌಲ್ಯಮಾಪನ ಮಾಡುವಂತಹ ಮಾತುಗಳು ಬರುವುದು ಕಡಿಮೆಯೇ ಯಾಕೆ ಹೀಗೆ? ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಗುರುಗಳ ಪಾತ್ರವೇನು? ಸಮಾಜಕ್ಕೆ ಅವರ ಕೊಡುಗೆ ಏನು? ಎಂತಹ ಸಂದೇಶ ಅವರಿಂದ ಹೋಗುತ್ತಿದೆ? ಬದಲಾವಣೆಯ ಕಾಲಘಟ್ಟದಲ್ಲಿ ಅವರ ಹೊಣೆಗಾರಿಕೆ ಏನು?ಎಂತಹವರು 'ಗುರು' ಪಟ್ಟವನ್ನು ಅಲಂಕರಿಸುತ್ತಿದ್ದಾರೆ? ಅವರ ನಡವಳಿಕೆ ಹೇಗಿದೆ? ಅವರ ಸಂಸ್ಕೃತಿ ಹೇಗಿದೆ? ಅವರ ಬುದ್ದಿಮಟ್ಟ ಹೇಗಿದೆ? ಎಂತಹ ವ್ಯಕ್ತಿತ್ವವನ್ನು ಅವರು ರೂಪಿಸುತ್ತಿದ್ದಾರೆ ? ಸಮಾಜಕ್ಕೆ ಅವರ ಪ್ರಸ್ತುತತೆ ಏನು? ಇತ್ಯಾದಿಗಳನ್ನು ಅಗತ್ಯವಾಗಿ ವಿಚಾರ ಮಾಡಬೇಕಾದ ಸಂಧರ್ಭವಿದು.
ಹಿಂದಿನ ದಶಕಗಳಲ್ಲಿ ಶಿಕ್ಷಣದ ಬೋಧನೆಯ ಪರಿಪೂರ್ಣತೆ ಉಚ್ಚ್ರಾಯ ಸ್ಥಿತಿಯಲ್ಲಿದ್ದಂತೆ ಇವತ್ತು ಇಲ್ಲ. ಭಾವ ತೀವ್ರತೆಯಾಗಲೀ ಸ್ವಾಭಿಮಾನದ ಶಿಸ್ತಿನ ಬದುಕು ಕಲಿಸುವ ಮನೋಸ್ಥಿತಿಯಲ್ಲಿ ಶಿಕ್ಷಕರಿಲ್ಲ ಯಾಕೆ ಹೀಗೆ? ಶಿಕ್ಷಣಕ್ಕೆ ಸರಿಯಾದ ಚೌಕಟ್ಟಿಲ್ಲದ ದಿನಗಳಲ್ಲಿ, ಸವಲತ್ತುಗಳಿಲ್ಲದ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚಿನ ಅಪರಾಧಗಳು ಘಟಿಸುತ್ತಿರಲಿಲ್ಲ ಆದರೆ ಇವತ್ತೇನಾಗಿದೆ? ಸಕಲ ಸವಲತ್ತುಗಳ ನಡುವೆ ನೀಡುತ್ತಿರುವ ಶಿಕ್ಷಣವಿದ್ದರೂ ಅಪರಾಧ ಹೆಚ್ಚಿನ ರೀತಿಯಲ್ಲಾಗುತ್ತಿದೆ. ಭ್ರಷ್ಟಾಚಾರ ಮೇರೆ ಮೀರಿದೆ, ಸಾಮಾಜಿಕ ಬದುಕುಗಳಲ್ಲಿ ಅಪಸವ್ಯ ಮೂಡಿದೆ ಒಟ್ಟಾರೆ ಜಾಗೃತ ಸ್ಥಿತಿಯಲ್ಲಿ ಏರುಪೇರಾಗಿದೆ. ನೆನಪಿರಲಿ ಸಮಾಜದ ಎಲ್ಲಾ ಸ್ಥಿತಿಗತಿಗೂ ಶಿಕ್ಷಣವೇ ಮೂಲ ಕಾರಣ! ಅಂದ ಮೇಲೆ ಅದನ್ನು ಕಲಿಸುವವರು (ಕ್ಷಮಿಸಿ ಎಲ್ಲರೂ ಅಲ್ಲ) ದಿಕ್ಕುತಪ್ಪಿದ್ದಾರೆ, ತಮ್ಮ ಹೊಣೆ ಮರೆತಿದ್ದಾರೆ ಎಂದೇ ಅರ್ಥವಲ್ಲವೇ? ಇವತ್ತು ಗುಣಮಟ್ಟದ ಶಿಕ್ಷಣ-ನೈತಿಕತೆಯ ಶಿಕ್ಷಣ ನೀಡುತ್ತಿದ್ದರೂ ಅನುಷ್ಠಾನ ಹಂತದ ಲೋಪಗಳು ಪ್ರಸಕ್ತ ಸ್ಥಿತಿಗತಿಗೆ ಕಾರಣವಲ್ಲವೇ?
ಕಳೆದ 2-ದಶಕಗಳ ಹಿಂದೆ ಗುರು ಪರಂಪರೆ ಹೇಗಿತ್ತು? ಕಲಿಸುವವರ ಅಧ್ಯಯನಶೀಲತೆ, ಭಾವ ತೀವ್ರತೆ, ಕಾಳಜಿ, ಪರಿಶೀಲನಾ ಗುಣ ಈಗ ಯಾಕಿಲ್ಲ? ಕಾರಣ ಮುಖ್ಯವಾಗಿ ಪ್ರಾಥಮಿಕ ಹಂತದ ಶಿಕ್ಷಣ ದಿಕ್ಕು ತಪ್ಪಿದೆ. ಶಿಕ್ಷಕರಿಗೆ ಸವಲತ್ತುಗಳು ಜಾಸ್ತಿಯಾಗಿವೆ ಆದರೆ ಅದರ ಬೆನ್ನಲ್ಲೆ ಒತ್ತಡದ ಸಮಸ್ಯೆಗಳು ಹೆಗಲಿಗೇರಿವೆ. ಸಾಂಪ್ರದಾಯಿಕ ಕಲಿಕೆ ಬಿಟ್ಟು ಕೆಲಸಕ್ಕೆ ಬಾರದ ನಲಿಕಲಿ ಹಾಳುಮೂಳು ಹತ್ತೊಂಬತ್ತು ಎಂದು ವರ್ಷವಿಡೀ ಶಿಕ್ಷಕರಿಗೆ ತರಬೇತಿ, ಮಾಹಿತಿ ಎಂದು ಸಾಯಿಸಲಾಗುತ್ತಿದೆ. ಶಿಕ್ಷಕರನ್ನು ಕಾಯಲು ಸಿಆರ್ ಪಿ-ಬಿಆರ್ ಪಿ, ಸಿಎಇಓ ಇತ್ಯಾದಿ ಮಾಡಲಾಗಿದೆ, ಅದು ಸಾಲದೆಂಬಂತೆ ಸರ್ಕಾರದ ರಾಷ್ಟ್ರೀಯ ಕಾರ್ಯಕ್ರಮಗಳು ಅಂದರೆ ಜನಗಣತಿ, ದನಗಣತಿ, ಜಾತಿಗಣತಿ ಚುನಾವಣೆ, ಕಟ್ಟಡ ನಿರ್ಮಾಣ, ಬಿಸಿಯೂಟ ಹೀಗೆ ಜವಾಬ್ದಾರಿಗಳ ಪಟ್ಟಿಯೂ ಹೆಗಲೇರಿದೆ. ಸಿಆರ್ ಪಿ-ಬಿಆರ್ ಪಿ ಗಳಾದವರು ತಾವು ಶಿಕ್ಷಕರೆಂಬುದನ್ನು ಮರೆತು ಇತರೆ ಶಿಕ್ಷಕರನ್ನು ಗೋಳು ಹುಯ್ದು ಕೊಳ್ಳುವ, ಶೋಷಿಸುವ ಪೀಡೆಗಳಾಗಿ ಬಿಟ್ಟಿದ್ದಾರೆ! ಹೀಗಾಗಿ 7ನೇ ತರಗತಿ ಮುಗಿಸಿ ಬರುವ ವಿದ್ಯಾರ್ಥಿಗೆ ಪ್ರೌಢಶಾಲಾ ಹಂತದಲ್ಲಿ ಹೊಸದಾಗಿ ಅ, ಆ, ಇ ಈ ಇಂದ ಪಾಠ ಹೇಳಿಕೊಡುವ ಪರಿಸ್ಥಿತಿಯಿದೆ. ಅಂದ ಮಾತ್ರಕ್ಕೆ ಶಿಕ್ಷಕರಿಗೆ ಸಮಸ್ಯೆಗಳು ಮಾತ್ರ ಅಡ್ಡಿಯಾಗಿವೆ ಅಂತಲ್ಲ ಅವರ ಸ್ವಯಂಕೃತಾಪರಾಧಗಳು ಸಹಾ ವಿದ್ಯಾರ್ಥಿ/ಶಿಕ್ಷಣದ ಮೇಲೆ ಆಘಾತಕಾರಿ ಪರಿಣಾಮ ಉಂಟುಮಾಡುತ್ತಿದೆ. ಇದಕ್ಕೂ ಮೂಲ ಕಾರಣ ಶಿಕ್ಷಣದ ಜೊತೆಗೆ ರಾಜಕಾರಣ ಬೆರೆತಿರುವುದು, ಆಯ್ಕೆಯಾಗುವಾಗಲೇ ಅನೇಕ ಅಡ್ಡನಾಡಿಗಳು ಪ್ರಭಾವದ ಮೂಲಕ ಶಿಕ್ಷಕರಾಗಿ ಆಯ್ಕೆಯಾಗುತ್ತಿದ್ದಾರೆ. ಇಂತಹವರ ಸೋಂಬೇರಿತನ, ಬೇಜವಾಬ್ದಾರಿ, ಕಳ್ಳಾಟ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇವತ್ತು ಶಿಕ್ಷಕರಾಗಿ ಆಯ್ಕೆಯಾಗುವವರು ಸಾಧಾರಣವಾಗಿ ಮೆರಿಟ್ ಪಾಸಾದವರಾಗಿರುತ್ತಾರೆ. ಆದರೂ ಅವರಿಂದ ಗುಣ ಮಟ್ಟದ ಶಿಕ್ಷಣ ಸಿಗುತ್ತಿಲ್ಲವೆಂದರೆ ಅದರ ಮೂಲಕ್ಕೆ ಹೋಗಬೇಕು. ಇವತ್ತು ಲಕ್ಷ ಸಂಖ್ಯೆಯಲ್ಲಿ ಶಿಕ್ಷಕರನ್ನು ತಯಾರು ಮಾಡುತ್ತಿರುವ ಸಂಸ್ಥೆಗಳು ದೊಡ್ಡ ಅನೈತಿಕತೆಯ ಕೇಂದ್ರ ಸ್ಥಾನಗಳಾಗಿವೆ!ಶಿಕ್ಷಣಾರ್ಥಿಗಳಾಗಿ ಬರುವವರನ್ನು ಅಂಕಗಳ ಹೊಂದಾಣಿಕೆಗೆ ಲೈಂಗಿಕವಾಗಿ ಶೋಷಿಸುವ,ದುಡ್ಡು ಪಡೆಯುವ ಪೀಡಕ ಪ್ರವೃತ್ತಿಯಿಂದಾಗಿ ಶಿಕ್ಷಕರಾಗುವವರ ಪಾವಿತ್ರ್ಯ ಕೆಡುತ್ತಿದೆ. ಶಿಕ್ಷಕ ಶಿಕ್ಷಣಾರ್ಥಿಯಾಗಿ ಬರುವವರು ವಾಸ್ತವದಲ್ಲಿ ಹೇಗೆ ನಡೆದು ಕೊಳ್ಳುತ್ತಿದ್ದಾರೆ ಎಂಬುದು ತಿಳಿಯದ ವಿಷಯವೇನಲ್ಲ. ತಮ್ಮನ್ನು ಯಾರು ಗಮನಿಸುತ್ತಿದ್ದಾರೆ? ತಮ್ಮ ನಡವಳಿಕೆ ಹೇಗಿದೆ? ಎಂಬ ಸೂಕ್ಷ್ಮವೇ ಅವರಿಗಿರುವುದಿಲ್ಲ ಹೀಗಿರುವಾಗ ಅಂತಹವರು ಶಿಕ್ಷಕರಾಗಿ ಬಂದು ಕಟ್ಟೆ ಹಾಕುವುದೇನು? ಇದು ಪ್ರಾಥಮಿಕ/ಪ್ರೌಡಶಾಲ ಶಿಕ್ಷಕರನ್ನು ಮಾತ್ರ ಕುರಿತು ಹೇಳುವ ಮಾತಲ್ಲ ಕಾಲೇಜು/ವಿವಿಗಳ ಉಪನ್ಯಾಸಕರು/ಅದ್ಯಾಪಕರು/ಪ್ರಾದ್ಯಾಪಕರುಗಳು ಸಹಾ ಇಲ್ಲಿ ಉಲ್ಲೇಖನೀಯ. ಶಿಕ್ಷಕರು ರೂಡಿಸಿಕೊಂಡ ಸಂಸ್ಕೃತಿ, ಉಡುವ ಬಟ್ಟೆ, ಮಾತು, ಹಾವ-ಭಾವ ಎಲ್ಲವೂ ಸಮಾಜದಲ್ಲಿ ಗಮನಿಸಲ್ಪಡುತ್ತದೆ. ಹೀಗಿರುವಾಗ ಅವರು ಹೇಗಿರಬೇಕು ಅಲ್ಲವೇ? ಪ್ರೌಡಶಾಲೆ/ಕಾಲೇಜು ಮಟ್ಟದಲ್ಲಿ ತಮ್ಮ ಬೇಳೆ ಬೇಯಿಸಿ ಕೊಳ್ಳಲು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟುವುದು,ಗುಂಪುಗಾರಿಕೆ ಪ್ರಚೋದಿಸುವುದು, ಸಲ್ಲದ ಚಟುವಟಿಕೆಗಳಿಗೆ ಪುಸಲಾಯಿಸುವುದು ಶೈಕ್ಷಣಿಕ ವ್ಯವಸ್ಥೆಗೆ ಕೊಡಲಿ ಪೆಟ್ಟಲ್ಲವೇ? ಇವತ್ತಿಗೂ ಎಷ್ಟೋ ಮಂದಿ ಶಿಕ್ಷಕರುಗಳಿಗೆ/ಉಪನ್ಯಾಸಕರುಗಳಿಗೆ
ನೆಟ್ಟಗೆ ಒಂದು ವ್ಯಾಕರಣ ಬದ್ದ ಬರವಣಿಗೆ ಬರುವುದಿಲ್ಲ, ವಾಸ್ತವ ಜಗತ್ತಿನ ವಿದ್ಯಮಾನಗಳ ಅರಿವಿಲ್ಲ ಎನ್ನುವುದಾದರೆ ಅಂತಹ ಪುಂಗಿದಾಸರು ಬೇಕಾ ಹೇಳಿ? ಶಿಕ್ಷಕರಾಗಿ ಬರುವವರು ಶಿಕ್ಷಣ ಕಲಿಸುವ ಬದಲಿಗೆ ಅನ್ಯ ವಿಚಾರ-ವಿದ್ಯಮಾಗಳತ್ತಲೇ ಒಲವು ತೋರುವುದು ವಿದ್ಯಾರ್ಥಿಗಳಿಗೆ ಮಾಡುವ ಘೋರ ಅನ್ಯಾಯವಲ್ಲವೇ? ಇಂತಹವರಿಂದ ಆರೋಗ್ಯವಂತ ಸಮಾಜ ಕಟ್ಟುವುದು ಸಾಧ್ಯವೇ? ಎಲ್ಲೋ ಕೆಲವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರಾದರೂ ಅಂತಹವರು ಬಹುಸಂಖ್ಯಾತ ಕೆಟ್ಟು ಹೋಗಿರುವ ಶಿಕ್ಷಕರಿಂದ ಅಪಮಾನ ಎದುರಿಸುತ್ತಿರುವ ಸನ್ನಿವೇಶವೂ ಇದೆ. ನೆನಪಿರಲಿ ಒಬ್ಬ ಶಿಕ್ಷಕ ಕೆಟ್ಟರೇ ಸಮಾಜವೂ ಕೆಡುತ್ತದೆ ಅದಕ್ಕೆ ಅವನೇ ಹೊಣೆಗಾರನೂ ಆಗಿರುತ್ತಾನೆ ನೀವೇನಂತೀರಿ??

Sunday, August 8, 2010

ಕನ್ನಡ ಚಿತ್ರರಂಗದಲ್ಲಿ 'ಮತ್ತೆ ಮುಂಗಾರು'!

ಕನ್ನಡ ಚಿತ್ರರಂಗದ ಸ್ಥಿತಿ ಇವತ್ತು ಹೇಗಿದೆ? ಸಿದ್ದ ಮಾದರಿಯ ಕಥೆ, ಮಚ್ಚು-ಕತ್ತಿ-ಲಾಂಗು, ಅದೇ ಡೈಲಾಗು, ಅದೇ ಹಾಡು, ಅದೇ ಹಾಸ್ಯ, ರಿಮೇಕ್ ಚಿತ್ರಾನ್ನ, 4ಹಾಡು1ಫೈಟು1ಮಸಾಲೆ ಹಾಕಿ ಯಾವ್ದಾದ್ರೂ ಒಂದು ಥೇಟರಲ್ಲಿ ಬಿಡುಗಡೆ ಮಾಡಿದ್ರೆ ಸಾಕು ಒಂದಿಷ್ಟು ಹಕ್ಕುಗಳನ್ನ ಟಿವಿ ಯವರಿಗೆ ಮಾರಿಕೊಂಡ್ರೆ ಮುಗೀತು.ಪ್ರೇಕ್ಷಕರನ್ನ ಕುರಿತು ಈ ನನ್ನ ಮಕ್ಳು ಥೇಟರಿಗೆ ಬಂದು ಚಿತ್ರ ನೋಡಲ್ಲ ನಾವು ಉದ್ದಾರ ಆಗಲ್ಲ ಅಂತ ಡೈಲಾಗು ಬಿಸಾಕೋರು ಒಂದು ಕಡೆ ಆದ್ರೆ ನಾನೇ ಸುಪ್ರೀಂ ಎಂದು ಬೀಗುವ ನಿರ್ದೇಶಕರ ಸಂಘ, ಕಲಾವಿದರ ಸಂಘ,ಚಲನ ಚಿತ್ರ ವಾಣಿಜ್ಯ ಮಂಡಳಿ ದಿನಕ್ಕೊಂದು ರಾಧ್ದಾಂತ ಎಬ್ಬಿಸಿಕೊಂಡು ಪರಸ್ಪರರ ಮೇಲೆ ಕೆಸರೆರಚಾಡಿಕೊಂಡು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿವೆ. ನಾಯಕ ನಟರುಗಳೂ ಒಂದೇ ಮಾದರಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬದಲಾವಣೆಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳದೇ ಜಿಡ್ಡುಗಟ್ಟಿದ ಪರಿಸ್ಥಿತಿಯಲ್ಲಿದ್ದಾರೆ. ಹೊಸ ಅಲೆಯ ಕಥೆಗಳು, ಮನಕಲಕುವ ವಿಚಾರಗಳ ಸಂಕೀರ್ಣತೆ ಅದನ್ನು ತೆರೆಯ ಮೇಲೆ ಮೂಡಿಸುವ ಪ್ರಬುದ್ದತೆ ಕೊರತೆ ಇವತ್ತು ಕನ್ನಡ ಚಿತ್ರರಂಗದಲ್ಲಿದೆ. ಒಬ್ಬ ಪುಟ್ಟಣ್ಣ, ಒಬ್ಬ ಶಂಕರ್ ನಾಗ್,ಒಬ್ಬ ಗಿರೀಶ್ ಕಾಸರವಳ್ಳಿ, ಏಕಮೇವಾದ್ವಿತಿಯರೆನಿಸಿದ ರಾಜ್, ವಿಷ್ಣು, ಅಶ್ವಥ್ ಹೀಗೆ ಕನ್ನಡ ಚಿತ್ರರಂಗದಲ್ಲಿ ಛಾಪು ಉಳಿಸಿದ ಹಳಬರನ್ನು ಬಿಟ್ಟರೆ ಹೊಸಬರಲ್ಲಿ ಅಂತಹ ಗಟ್ಟಿತನ ಕೊರತೆ ಇವತ್ತಿಗೂ ಇದ್ದೇ ಇದೆ.
ಇದನ್ನೆಲ್ಲಾ ಇವತ್ತು ನಿಮ್ಮ ಮುಂದೆ ಹೇಳಲು ಕಾರಣವೂ ಇದೆ. ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ವಂತಿಕೆ ಇದೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ ಕನ್ನಡ ಚಿತ್ರರಂಗದಲ್ಲಿ ಕಳೆದ 2ದಶಕಗಳಿಂದ ಗುಣಮಟ್ಟದ ಚಿತ್ರಗಳ ಕೊರತೆ ಇದೆ. ಇಲ್ಲಿ ಪ್ರಯೋಗಶೀಲತೆಗೆ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವವರಿಲ್ಲ, ಸಂತೆಗೆ ಮೂರು ಮೊಳ ನೇಯುವವರದ್ದೇ ಕಾರುಬಾರು, ಸಂಘ-ಸಂಸ್ಥೆ ಹಾಗೂ ಮಂಡಳಿಗಳಲ್ಲೂ ಅವರದ್ದೇ ಆಟಾಟೋಪ. ಮೊನ್ನೆ ಮೊನ್ನೆ 92.7 ಬಿಗ್ ಎಫ್ ಎಂ ಮನರಂಜನಾ ರೇಡಿಯೋ ಪ್ರಸಾರದಲ್ಲಿ ಕನ್ನಡ ಚಿತ್ರರಂಗದ ಛತ್ರಿ ಯಾರು? ಎಂಬ ತರ್ಲೆ ಪ್ರಶ್ನೆಯನ್ನು ಇಟ್ಟು ಕನ್ನಡದ ಹಾಸ್ಯ ನಟರ ಪಟ್ಟಿ ನೀಡಿ ಆರಿಸುವಂತೆ ಕೋರಿತ್ತು. ಇದರಿಂದ ಸಿಟ್ಟಿಗೆದ್ದ ಚಲನ ಚಿತ್ರ ಮಂಡಳಿ ಸದರಿ ರೇಡಿಯೋ ವಿರುದ್ದ ಪ್ರತಿಭಟನಾರ್ಥವಾಗಿ ಚಲನಚಿತ್ರ ಚಟುವಟಿಕೆಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿತ್ತು. ಆಗ ಸಂಧಾನಕ್ಕೆ ಬಂದ ಖಾಸಗಿ ರೇಡಿಯೋದ ಮುಖ್ಯಸ್ಥರು ಕ್ಷಮೆಯಾಚಿಸಿದರು. ಅದಕ್ಕೆ ಮಂಡಳಿ ವಿಧಿಸಿದ ಶಿಕ್ಷೆ ಒಂದು ದಿನ ರೇಡಿಯೋ ಬಂದ್ ಮಾಡಬೇಕು, ಪ್ರತೀ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸಬೇಕು ಇತ್ಯಾದಿ. ಇದ್ಯಾವ ಸೀಮೆಯ ಶಿಕ್ಷೆ ಸ್ವಾಮಿ.? ಇದು ಶಿಕ್ಷೆಯ ಹುಟ್ಟಾ? ಅದ್ಯಾವುದೋ ಒಂದು ರೇಡಿಯೋ ನಟರನ್ನ ಅಪಮಾನಿಸಿದೆ ಎಂದಾದರೆ ಅದಕ್ಕೆ ಕಾನೂನಿನಡಿ ಶಿಕ್ಷೆ ಕೊಡಿಸುವ ಅವಕಾಶವಿದೆ ಹೀಗಿರುವಾಗ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸುವುದು ಅಂದರೆ ಅದೆಂಥದ್ದು. ಇದೇ ಮಂಡಳಿ ತಿಂಗಳ ಹಿಂದೆ 'ರಾವಣ್' ಹಿಂದಿ ಚಿತ್ರ ರಾಜ್ಯದಲ್ಲಿ ಬಿಡುಗಡೆ ಯಾದಾಗ ಬಾಲ ಮುದುರಿಕೊಂಡು ತನ್ನ ನಿಯಮಗಳನ್ನು ಸಡಿಲಿಸಿತು. ಕನ್ನಡ ಚಿತ್ರ ರಂಗದ 75ರ ಸಂಭ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ಸಮರ್ಪಕವಾಗಿ ಆಚರಿಸಲು ಸಾಮರ್ತ್ಯವಿಲ್ಲದ ಚಿತ್ರರಂಗದ ಮಂದಿಗೆ ತನ್ನದೇ ನಟರು,ನಟಿಯರು,ನಿರ್ದೇಶಕರು ಕೆಸರೆರಚಾಡಿಕೊಂಡಾಗ ಸರಿಯಾದ್ದೊಂದು ಖಾಜಿ ನ್ಯಾಯ ಮಾಡಲು ಆಗಲಿಲ್ಲ, ಅನೇಕ ದಶಕಗಳಿಂದ ಕನ್ನಡದಲ್ಲಿ ಪೈರಸಿ ತಡೆಗೆ ಕಟ್ಟುನಿಟ್ಟಾದ ಒಂದು ನಿಯಮ ಹೊರಡಿಸಲು ಆಗಲಿಲ್ಲ, ಹೊಡಿ-ಬಡಿ-ಕೊಚ್ಚು-ಕೊಲ್ಲು-ಸುಂದರ ಹೊರಾಂಗಣ,ಮಧುರ ಹಾಡುಗಳು, ಕೆಟ್ಟುಕೆರ ಹಿಡಿದ ಕಥೆ, ಸವಕಲು ನಿರೂಪಣೆ ಇಂಥಹದ್ದನ್ನು ವಿಮರ್ಶಿಸಿದರೆ ಪತ್ರಕರ್ತರ ವಿರುದ್ದ ಹರಿಹಾಯುವ ಸ್ಥಿತಿ ಇದೆ. ಇಂಥಹ ವೈರುದ್ಯ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬದಲಾವಣೆ ಗಾಳಿ ಬೀಸುವುದೇ? ಹೌದು ಖಂಡಿತವಾಗಿಯೂ ಒಂದು ಹಂತದಲ್ಲಿ ಇಂತಹದ್ದನ್ನ ನಿರೀಕ್ಷಿಸಲು ಸಾಧ್ಯವಿದೆ. ಹಳೆ ದಿನಗಳ ಮಾಧುರ್ಯವನ್ನ ತುಂಬಲು ಜಯಂತ್ ಕಾಯ್ಕಿಣಿ, ಯೋಗರಾಜ ಭಟ್ ರಂತಹವರ ಸಾಹಿತ್ಯ ಶ್ರೀಮಂತಿಕೆ, ಹರಿಕೃಷ್ಣ,ಮನೋಮೂರ್ತಿ, ಅನೂಪ್ ಸಿಳೀನ್, ರಿಕಿಕೇಜ್, ರಘು ದೀಕ್ಷಿತ್ ರಂತಹ ಹೊಸ ಅಲೆಯ ಸಂಗೀತ ನಿರ್ದೇಶಕರು, ಜೇಕಬ್ ವರ್ಗೀಸ್,ಸೈನೈಡ್ ನ ರಮೇಶ್, ಯೋಗರಾಜಭಟ್, ಸೂರಿ, ರಾಘವ(ದ್ವಾರ್ಕಿ), ಶಶಾಂಕ್, ಚಂದ್ರು, ಗುರುಪ್ರಸಾದ್ ರಂತಹ ಹೊಸ ತುಡಿತದ ನಿರ್ದೇಶಕರು ಮನಸ್ಸು ಮಾಡಿದರೇ ಮತ್ತೆ ಹಳೇ ದಿನಗಳ ವೈಭವ ಕನ್ನಡಕ್ಕೆ ಮರಳಬಹುದು. ಇಂತಹದ್ದೊಂದು ಬೆಳಕು ಕಾಣಿಸಿದ್ದು ಕಳೆದೆರೆಡು ವಾರಗಳಿಂದ ಬಿಡುಗಡೆಯಾದ ಕೆಲವು ಚಿತ್ರಗಳ ವಿಭಿನ್ನತೆಯಿಂದಾಗಿ. ಶಶಾಂಕ್ ರ ಕೃಷ್ಣನ್ ಲವ್ ಸ್ಟೋರಿ, ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಮತ್ತೆ ಮುಂಗಾರು ಅಂತಹ ಭರವಸೆಯನ್ನು ದಕ್ಕಿಸಿಕೊಟ್ಟಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಮತ್ತೆ ಮುಂಗಾರು ಕಥಾವಸ್ತುವಿನಿಂದಾಗಿ ಕನ್ನಡದ ಮಟ್ಟಿಗೆ ಒಂದು ವಿಶಿಷ್ಠ ಚಿತ್ರ.
'ಮತ್ತೆ ಮುಂಗಾರು' ಈ . ಕೃಷ್ಣಪ್ಪ ನಿರ್ಮಾಣದ ಹೊಸ ಚಿತ್ರ. ಮುಂಗಾರು ಮಳೆಯಂತಹ ಉತ್ತಮ ಮನರಂಜನಾ ಚಿತ್ರ ಮೊಗ್ಗಿನ ಮನಸ್ಸು ವಿನಂತಹ ಪ್ರಬುದ್ದ ಚಿತ್ರಗಳು ಇವರ ನಿರ್ಮಾಣದಲ್ಲೇ ಬಂದಿತ್ತು. ಈಗ ಮತ್ತೆ ಮುಂಗಾರು ಬಂದಿದೆ, ಇದು ಮೇಲ್ನೋಟಕ್ಕೆ ಪ್ರೇಮ ಕಥಾವಸ್ತುವಿನಂತಹ ಚಿತ್ರದಂತೆ ಬಿಂಬಿತವಾದರೂ ಆಂತರ್ಯದಲ್ಲಿ ಬೇರೆಯದೇ ಆದ ಕಥೆಯನ್ನು ಹೊಂದಿದೆ. ನಿರ್ದೇಶಕರು, ದೃಶ್ಯನಿರೂಪಣೆ ಹಾಗೂ ಸಂಭಾಷಣೆಯಲ್ಲಿ ಸ್ವಲ್ಪ ಪ್ರಬುದ್ದತೆ ತೋರಿದ್ದರೆ ಇದು ಅಂತರಾಷ್ಟ್ರೀಯ ಗುಣಮಟ್ಟದ ಚಿತ್ರ ವಾಗಿ ರೂಪುಗೊಳ್ಳುವುದು ನಿಸ್ಸಂದೇಹ.ಅಂತಹ ಲೋಪಗಳ ನಡುವೆಯೂ ಮಾತೃ ಪ್ರೇಮೆ, ದೇಶಭಕ್ತಿ, ಪ್ರೇಮ, ಬದುಕಿನ ಅನಿವಾರ್ಯ ಸಂಕಟ ಹಾಗೂ ತಲ್ಲಣವನ್ನು ಮತ್ತೆ ಮುಂಗಾರು ಪ್ರೇಕ್ಷಕರಿಗೆ ಹಿಡಿ ಹಿಡಿಯಾಗಿ ಕಟ್ಟಿಕೊಡುತ್ತದೆ. ಮುಂಬೈ ಕಡಲತೀರದಲ್ಲಿ ಬದುಕುವ ವಲಸಿಗ ಮೀನುಗಾರರ ಬವಣೆ, ಅಲ್ಲಿ ನಾಯಕ-ನಾಯಕಿಯ ನಡುವೆ ನಡೆಯುವ ಪ್ರೇಮ, ತೆಗೆದುಕೊಳ್ಳುವ ಅನಿರೀಕ್ಷಿತ ತಿರುವು, ಕಡಲಿನಲ್ಲಿ ಉಂಟಾಗುವ ಚಂಡಮಾರುತದ ಸುಳಿಗೆ ಸಿಕ್ಕ ಭಾರತೀಯ ಮೀನುಗಾರರು ತಮಗೆ ತಿಳಿಯದಂತೆ ಪಾಕಿಸ್ತಾನದ ಸರಹದ್ದು ಮೀರಿದಾಗ ಅನುಭವಿಸುವ ಕಷ್ಟ, ಕತ್ತಲ ಕಾರಾಗೃಹದಲ್ಲಿ ಅನುಭವಿಸುವ ಪಡಿಪಾಟಲು, ಇಂದಿರಾಗಾಂದಿ-ರಾಜೀವ್ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಕಾರ್ಗಿಲ್ ಯುದ್ದ ತದನಂತರ ವಾಜಪೇಯಿ ಸರ್ಕಾರದಲ್ಲಿ ಎರಡೂ ದೇಶಗಳ ನಡುವೆ ನಡೆಯುವ ಒಪ್ಪಂದದಿಂದ 21ವರ್ಷಗಳ ನಂತರ ಬಿಡುಗಡೆಯಾಗುವ ಮೀನುಗಾರರು ನಂತರದ ಕಥೆ ಪ್ರೇಕ್ಷಕರ ಕಣ್ಣಾಲಿಗಳು ನೀರು ತುಂಬುವಂತೆ ಮಾಡಿಬಿಡುತ್ತವೆ. ಅಷ್ಟರ ಮಟ್ಟಿಗೆ ನಿರ್ದೇಶಕ ರಾಘವ (ದ್ವಾರ್ಕಿ) ತನ್ನ ಶ್ರಮವನ್ನ ವಿಭಿನ್ನ ಕಥಾವಸ್ತುವಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ನಾಯಕ ಶ್ರೀನಗರ ಕಿಟ್ಟಿ ಸೇರಿದಂತೆ ಚಿತ್ರದ ಪ್ರತಿಯೊಂದು ಪಾತ್ರವೂ ಸಹಜತೆಗೆ ಒತ್ತುಕೊಡುವ ರೀತಿಯಲ್ಲಿ ಮೂಡಿಬಂದಿವೆ. ಎಷ್ಟೋ ದಿನಗಳ ನಂತರ ಕಾಡುವ ಚಿತ್ರವನ್ನು ರಾಘವ ಕೊಟ್ಟಿದ್ದಾರೆ. ಚಿತ್ರ ಹಲವು ಪ್ರಶ್ನೆಗಳನ್ನು ಮೂಡಿಸಿ ತಾರ್ಕಿಕ ವಾದ ುತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಕನ್ನಡದಲ್ಲಿ ಇಂತಹ ಕಥೆ ಬಂದು ಎಷ್ಟೋ ವರ್ಷಗಳಾಗಿತ್ತು. ಇರಲಿ ಕನ್ನಡ ಚಿತ್ರ ರಂಗದ ಸಧ್ಯದ ಪರಿಸ್ಥಿತಿ ಸುಧಾರಿಸಬೇಕಿದೆ, ಚಿತ್ರರಂಗದ ಮಂದಿ ವೈಯುಕ್ತಿಕ ತಗಾದೆ-ಸಂಘರ್ಷಕ್ಕೆ ಮಹತ್ವ ನೀಡದೇ ಗಂಭೀರವಾಗಿ ಸದಭಿರುಚಿಯ, ವಿಚಾರದ ತುಡಿತ, ಹದವರಿತ ಮನರಂಜನೆಗೆ ಆದ್ಯತೆ ನೀಡುವ ಚಿತ್ರಗಳ ನಿರ್ಮಾಣದಲ್ಲಿ ತೊಡಗುವ ಮೂಲಕ ಕನ್ನಡ ಚಿತ್ರರಂಗಕ್ಕೆ 'ಮತ್ತೆ ಮುಂಗಾರು' ಬರುವುದೇ ಕಾದು ನೋಡಬೇಕು.

Saturday, July 31, 2010

ಬಚಾವೋ ಯಾತ್ರೆ ಅಂತೆ ಏನ್ರಿ ಇದೆಲ್ಲಾ?

ಬಚಾವೋ ಯಾತ್ರೆ ಅಂತೆ ಯಾರನ್ನ ಯಾರು ಬಚಾವ್ ಮಾಡ್ಬೇಕ್ರಿ? ಬಳ್ಳಾರಿ ಬಚಾವ್ ಮಾಡ್ಬೇಕೋ? ಬೆಂಗಳೂರು ಬಚಾವ್ ಮಾಡ್ಬೇಕೋ, ರೆಡ್ಡಿಗಳನ್ನು ರಾಜ್ಯ ರಾಜಕೀಯದಿಂದ ಬಚಾವ್ ಮಾಡ್ಬೇಕೋ, ರೆಡ್ಡಿಗಳಿಂದ ಬಿಜೆಪಿ ಸರ್ಕಾರ ಬಚಾವ್ ಮಾಡ್ಬೇಕೋ,ಅಥ್ವ ಬಿಜೆಪಿ ಸರ್ಕಾರದಿಂದ ರೆಡ್ಡಿಗಳನ್ನು ಬಚಾವ್ ಮಾಡ್ಬೇಕೋ? ರೆಡ್ಡಿಗಳಿಂದ ಸಿದ್ದರಾಮಯ್ಯನವರನ್ನ ಬಚಾವ್ ಮಾಡ್ಬೇಕೋ, ಇಲ್ಲ ವಿಧಾನ ಸೌಧನಾ ರಾಜಕೀಯ ಪುಡಾರಿಗಳಿಂದ ಗೂಂಡಾಗಳಿಂದ ಬಚಾವ್ ಮಾಡಬೇಕೋ ,ಕಾಂಗ್ರೆಸ್-ಜೆಡಿಎಸ್ ನವರಿಂದ ಸರ್ಕಾರಾನ ಬಚಾವ್ ಮಾಡಬೇಕೋ? ಯಡಿಯೂರಪ್ಪನವರನ್ನ ರೆಡ್ಡಿಗಳಿಂದ ಬಚಾವ್ ಮಾಡಬೇಕೋ, ಅಂತಿಮವಾಗಿ ರಾಜ್ಯದ ಜನತೆಯನ್ನು ಈ ರಾಜಕಾರಣಿಗಳಿಂದ ಬಚಾವ್ ಮಾಡಬೇಕೋ? ಒಂದೂ ತಿಳಿತಿಲ್ಲ.ಅಧಿಕಾರದ ಹವಣಿಕೆಗೆ ಬಿದ್ದ ಪುಡಾರಿಗಳು ವಿಧಾನಸೌಧದಲ್ಲಿ ಕಿಸಿದಿದ್ದು ಸಾಕಲ್ಲ ಅಂತ ಬೀದಿಗಿಳಿದಿದ್ದಾರೆ ಆ ಮೂಲಕ ಪರಸ್ಪರರನ್ನ ಬೆತ್ತಲು ಮಾಡುತ್ತಿದ್ದಾರೆ. ಈ ನಡುವೆ ಮುಗುಮ್ಮಾಗಿ ಕುಳಿತವರು ಪರಸ್ಪರರನ್ನು ಹಣಿಯುವ, ವೈಯುಕ್ತಿಕ ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ ಅಕ್ರಮ ರಾಜಕೀಯ ಸಂಭಂಧಗಳಿಗೆ ಮುಂದಾಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ನೈತಿಕವಾಗಿ ಮತ್ತು ಸೈದ್ದಾಂತಿಕವಾಗಿ ಬಡಿದಾಡಲು ರಾಜಕಾರಣಿಗಳಿಗೆ ಹಲವು ವಿಚಾರಗಳಿವೆ, ವಿಧಾನ ಸಭೆಯಲ್ಲಿ, ವಿಧಾನ ಪರಿಷತ್ ನಲ್ಲಿ ಜನರ ಹಿತಾಸಕ್ತಿಗೆ ಧ್ವನಿಯೆತ್ತಲು ಸಮಸ್ಯೆಗಳು ಹಾಸು ಬಿದ್ದಿವೆ ಹೀಗಿರುವಾಗ ರೆಡ್ಡಿಗಳನ್ನು ಕಿತ್ತೆಸೆಯುವ ಜೊತೆಗೆ ಅಧಿಕಾರ ಹಿಡಿಯುವ ಏಕೈಕ ಅಜೆಂಡಾದೊಂದಿಗೆ ಕಾಂಗ್ರೆಸ್ ಬೀದಿಗೆ ಬಂದಿದ್ದರೆ ಹತಾಶರಾದ ರೆಡ್ಡಿಗಳು ಶ್ರೀರಾಮುಲು ತಲೆಬೋಳಿಸಿ ಸ್ವಾಭಿಮಾನ ಯಾತ್ರೆ ಕೈಗೊಂಡಿದ್ದಾರೆ ಆ ಮೂಲಕ ರಾಜ್ಯದಲ್ಲಿ ರಾಜಕೀಯ ಸಂಘರ್ಷದ ವೇದಿಕೆ ಸಿದ್ದಗೊಂಡಿದೆ.
ರಾಜ್ಯದಲ್ಲಿ ಈ ಹೊತ್ತಿಗೆ ತುಂಬಿ ತುಳುಕಬೇಕಾಗಿದ್ದ ಜಲಾಶಯಗಳು ಬರಿದಾಗಿವೆ, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ, ಗ್ರಾಮೀಣ ರೈತರಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್ಫಾರ್ಮರ್ ಗಳ ವಿತರಣೆಗೆ ಬಜೆಟ್ ಕೊರತೆ ಇದೆ, ಜಲಾಶಯದ ನೀರು ಅವಲಂಬಿಸಿರುವ ಹಲವು ನಗರಗಳಿಗೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ರೈತರಿಗೆ ಇದು ಕೃಷಿ ಆರಂಭದ ಸಮಯ, ನಕಲಿ ಬಿತ್ತನೆ ಬೀಜ ಮಾರುಕಟ್ಟೆಗೆ ಬಂದಿದೆ, ರಸಗೊಬ್ಬರ ಕೊರತೆ ಅಲ್ಲಲ್ಲಿ ಇದೆ, ತಂಬಾಕು ಬೆಳೆಗಾರರಿಗೆ ಸಾವಿರಾರು ಟನ್ ನಕಲಿ ಗೊಬ್ಬರ ವಿತರಣೆಯಾಗಿದೆ, ವಾಣಿಜ್ಯ ಬೆಳೆಗಳಿಗೆ ರೋಗ ತಗುಲಿದೆ, ಈಗ ಆರಂಭವಾಗಿರುವ ಮಳೆಯ ಬಿರುಸಿಗೆ ದಕ್ಷಿಣದಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಉತ್ತರದಲ್ಲಿ ಕಳೆದ ವರ್ಷ ನೆರೆಗೆ ತುತ್ತಾಗಿದ್ದ ಮಂದಿ ಆಸರೆಯಿಲ್ಲದೇ ನರಳುವ ಪರಿಸ್ಥಿತಿ ಇದೆ, ಈ ಗ ಮತ್ತೆ ಅಲ್ಲಿ ಪ್ರವಾಹ ಭೀತಿ ಇದೆ, ರಾಜ್ಯದ ಕೆಲವೇ ಪ್ರದೇಶಗಳಲ್ಲಿ ಮೊಡಬಿತ್ತನೆ ಆಗಬೇಕಿದೆ, ಹಲವು ಮೂಲಭೂತ ಸೌಕರ್ಯ ಅಭಿವೃದ್ದಿ ಕೆಲಸಗಳಿಗೆ ಅನುದಾನ/ಯೋಜನೆ ಮಂಜೂರಾಗಬೇಕಿದೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಉದ್ಯೋಗ ಖಾತ್ರಿ ಹಳ್ಳ ಹಿಡಿದಿದೆ, ಹತ್ತು ಹಲವು ಆಶ್ರಯ ಯೋಜನೆಗಳಿದ್ದರೂ ಎಷ್ಟೋ ಮಂದಿಗೆ ಸೂರು ಸಿಕ್ಕಿಲ್ಲ ಬೆಳಕೂ ದಕ್ಕಿಲ್ಲ, ಶಾಲೆಗೆ ಸೇರಿದ ಮಕ್ಕಳಿಗೆ ಪುಸ್ತಕ-ಸೈಕಲ್ ಸಿಕ್ಕಿಲ್ಲ, ಅರೆಕಾಲಿಕ ಉದ್ಯೋಗಿಗಳಿಗೆ ಬದುಕಿನ ಭರವಸೆ ಸಿಕ್ಕಿಲ್ಲ, ನಿರುದ್ಯೋಗಿಗಳಿಗೆ ಬದುಕಿನ ಆಶಾಕಿರಣ ಕಾಣುತ್ತಿಲ್ಲ, ಕಾಡಾನೆಗಳ ಹಾವಳಿ ಹೆಚ್ಚಿದೆ, ಕಾಡಿನ ಆನೆಗಳು ನಾಡಿಗೆ ಬಂದಿವೆ, ಕಾಡಿನ ನಾಶವಾಗುತ್ತಿದೆ, ಅಭಿವೃದ್ದಿಯ ಹೆಸರಿನಲ್ಲಿ ಕೃಷಿ ಜಮೀನು ಕಡಿಮೆಯಾಗುತ್ತಿದೆ, ಔದ್ಯೋಗಿಕರಣಕ್ಕೆ ಮಣೆಹಾಕಲಾಗುತ್ತಿದೆ, ಜಮೀನು ಕಳೆದು ಕೊಂಡ ರೈತ ಸ್ವಾವಲಂಬಿ ಬದುಕು ಕಳೆದುಕೊಂಡು ಕೂಲಿಗೆ ನಗರ ಪ್ರದೆಶಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ, ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ ಇಂತಹ ಹೊತ್ತಿನಲ್ಲಿ ಪಾದಯಾತ್ರೆ/ ಪ್ರತಿಭಟನೆಯ ನಾಟಕ ಬೇಕಿತ್ತಾ??
ನೀವೆ ಯೋಚಿಸಿ ಮುಂಗಾರು ಅಧಿವೇಶನ ರಾಜ್ಯದ ಜನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಅಧಿವೇಶನ, ಜನತೆಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಗಳು, ಆಡಳಿತಾತ್ಮಕವಾದ ವಿಚಾರಗಳ ಆಗುಹೋಗುಗಳ ಚರ್ಚೆ ಅತೀ ಗಹನವಾದುದು ಆದರೆ 5-6 ದಿನಗಳು ನಡೆದ ಮುಂಗಾರು ಅಧಿವೇಶನದಲ್ಲಿ ನಡೆದದ್ದೇನು? ಅಧಿವೇಶನದ ಆರಂಭದಲ್ಲಿ ಲೋಕಾಯುಕ್ತರಿಗೆ ನೀಡಬೇಕಾದ ಅಧಿಕಾರದ ಬಗ್ಗೆ ಗದ್ದಲ, ಸಿಎಂ ಯಡಿಯೂರಪ್ಪ ಗಟ್ಟಿ ನಿರ್ಧಾರದೊಂದಿಗೆ ಅಧಿಕಾರ ನೀಡುವ ಚರ್ಚೆಗೆ ಮುಂದಾದಾಗ ರಾಜಕಾರಣಿಗಳ ವಿರುದ್ದ ತನಿಖೆ ಮಾಡುವ ಅಧಿಕಾರ ಒಂದನ್ನು ಬಿಟ್ಟು ಉಳಿದ ವಿಚಾರಗಳ ಬಗ್ಗೆ ಮಾತ್ರ ಆಸ್ಥೆ ವಹಿಸುವ ಮೂಲಕ ರಾಜಕಾರಣಿಗಳೆಲ್ಲ ಒಂದೇ ಎಂಬುದನ್ನು ಸಾಬೀತು ಪಡಿಸಿಬಿಟ್ಟರು. ನಂತರದಲ್ಲಿ ಸಿಎಂ ಯಡಿಯೂರಪ್ಪ ಸಿದ್ದು ಕೇಳಿದ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು ನಡೆದುಕೊಂಡ ರೀತಿ ಆಡಳಿತ ಪಕ್ಷದವರನ್ನು ಪ್ರಚೋದಿಸಿಬಿಟ್ಟಿತು, ದಿನೇಶ್ ಗುಂಡೂರಾವ್ ಆಡಿದ ಮಾತಿಗೆ ಸಿಟ್ಟಿಗೆದ್ದ ರೆಡ್ಡಿಗಳು ಗೂಂಡಾಗಳಂತೆ ನಡೆದುಕೊಂಡಿದ್ದು ಈಗ ಇತಿಹಾಸ. ಅದೇ ದಿನ CNN IBN ಚಾನೆಲ್ ನಲ್ಲಿ ಪ್ರತಿಪಕ್ಷದವರ ಧರಣಿ ಪ್ರತಿಭಟನೆ 'ಕರ್ನಾಟಕದಲ್ಲಿ ನಾಟಕ' ಎಂಬ ಶೀರ್ಷಿಕೆಯಲ್ಲಿ ಪ್ರಸಾರವಾಗುತ್ತಿತ್ತು. ಪ್ರತಿಭಟನಾ ನಿರತ ಶಾಸಕರುಗಳು ಹಾಡು-ಹಸೆ ಹೇಳಿಕೊಂಡು ಜೋಕು ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇದೇ ಸಂಧರ್ಭಕ್ಕೆ ಸರಿಯಾಗಿ ಆಸರೆ ಕಳೆದುಕೊಳ್ಳುವ ಭೀತಿಯಲ್ಲಿ ಹಾವೇರಿಯ ಭಂಗಿ ಸಮುದಾಯದ ಜನರು ಸರ್ಕಾರದ ವಿರುದ್ದ ಪ್ರತಿಭಟಿಸಿ ಮೈಮೇಲೆ ಮಲ ಸುರಿದುಕೊಂಡ ಅತ್ಯಂತ ಭೀಬತ್ಸ ಘಟನೆ ಜರುಗಿತ್ತು. ಮನುಕುಲದ ಅತ್ಯಂತ ಹೇಯವಾದ ಘಟನೆ ನಡೆದ ಸಂಧರ್ಭ ವಿಧಾನ ಸಭೆ/ಪರಿಷತ್ ನಲ್ಲಿ ರಾಜಕೀಯ ಲಾಭಕ್ಕಾಗಿ ಹಣಾಹಣಿ ನಡೆಯುತ್ತಿತ್ತು ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೇ ಮತ್ತೇನು? ಅಧಿವೇಶನ ಶುರುವಿಗೆ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಬಿತ್ತನೆ ಬೀಜ ಬೆಲೆ ನಿಗದಿಯ ಭಾರೀ ಅವ್ಯವಹಾರವನ್ನು ಬಯಲಿಗೆ ತಂದಿದ್ದರು, ನಂತರ ಮಾಜಿ ಸ್ಪೀಕರ್ ಕೃಷ್ಣ, ಮತ್ತು ಸಚಿವ ಕಾಂತಾ ಜೊತೆಗೆ ಸೇರಿ ಉದ್ಯೋಗ ಖಾತ್ರಿ ಅಕ್ರಮದ ವಿರುದ್ದ ಧ್ವನಿಯೆತ್ತಿದರು ಇವಿಷ್ಟು ಅಧಿವೇಶನ ಹೊರಗೆ ನಡೆಯುತ್ತಿದ್ದರೆ ಒಳಗಡೆ ನಡೆಯುತ್ತಿದ್ದ ನಾಟಕವೇ ಬೇರೆ. ಪುಡಾರಿಗಳ ವೈಯುಕ್ತಿಕ ತೆವಲಿಗೆ ಮಹತ್ವದ ಅಧಿವೇಶನ ಬಲಿಗೊಟ್ಟರಲ್ಲ ಜನತೆಯ ಶಾಪ ಇವರಿಗೆ ತಟ್ಟದಿರದೇ?
ಇವತ್ತು ರೆಡ್ಡಿಗಳ ವಿರುದ್ದ ಕಾಂಗ್ರೆಸ್-ಜೆಡಿಎಸ್ ಸಮಾನವಾಗಿ ವಿರೋಧ ವ್ಯಕ್ತಪಡಿಸುತ್ತಿವೆ, ಮೊದಲೇ ಹದಗೆಟ್ಟಿದ್ದ ರಾಜ್ಯ ರಾಜಕೀಯದ ಅಳಿದುಳಿದ ಮೌಲ್ಯಗಳನ್ನು ಹೊಸಕಿ ಹಾಕಿದ್ದು.ರಾಜಕೀಯದಲ್ಲಿ ಅಸಾಧಾರಣವಾದುದನ್ನು ಗಣಿ ಹಣದ ಮೂಲಕ ಸಾಧಾರಣ ವಿಚಾರವನ್ನಾಗಿ ಮಾಡಿದ್ದು ಸರ್ಕಾರವನ್ನೇ ಹೈಜಾಕ್ ಮಾಡಿದ್ದು ಗಣಿಧಣಿಗಳ ಹೆಗ್ಗಳಿಕೆ ಹಾಗೂ ರಾಜಕೀಯ ಪರಂಪರೆಯಲ್ಲಿ ಕರ್ನಾಟಕದ ಮಟ್ಟಿಗೆ ಕೆಟ್ಟ ಸ್ವಪ್ನವೇ ಸರಿ. ಸಿನಿಮಾ ಥಿಯೇಟರಿನಲ್ಲಿ ಬ್ಲಾಕ್ ಟಿಕೇಟ್ ಮಾರುತ್ತಿದ್ದ ಭೂಪನೋರ್ವ ಕೇವಲ 10ವರ್ಷಗಳಲ್ಲಿ 50ಸಾವಿರ ಕೋಟಿಗೂ ಮೀರಿದ ಧನಿಕನಾಗುತ್ತಾನೆಂದರೆ ಅದು ಸುಮ್ಮನೇ ಆಗಿ ಬರುವ ಮಾತಲ್ಲ,ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಗಡಿಯನ್ನು ಆಂಧ್ರಕ್ಕೆ ಸೇರುವ ಸ್ಥಿತಿ ತಂದಿದ್ದು ಇದೇ ರೆಡ್ಡಿಗಳು, ನೆರೆ ಸಂತ್ರಸ್ಥರಿಗೆ ಗಣಿ ದುಡ್ಡಿನಲ್ಲಿ ಆಸರೆ ಒದಗಿಸುತ್ತೇವೆಂದು ಬಂಬಡಾ ಬಜಾಯಿಸಿದ ರೆಡ್ಡಿಗಳು ಈಗ ಯಾವ ಆಸರೆ ಎಂದದ್ದು ಅವರ ಬದ್ದತೆಯನ್ನು ಪ್ರಶ್ನಿಸುತ್ತದೆ. ಇಂತಹ ದುಷ್ಟ ಶಕ್ತಿಗಳ ವಿರುದ್ದ ಒಂದು ಬೃಹತ್ ಹೋರಾಟ ಅಗತ್ಯವಾಗಿ ಬೇಕಿತ್ತು ಆದರೆ ಅಧಿವೇಶನವನ್ನು ಬಲಿಗೊಟ್ಟು ಪ್ರತಿಭಟನೆಗಿಳಿಯ ಬೇಕಿರಲಿಲ್ಲ. ಕೇಂದ್ರದಲ್ಲಿ ಅತಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಅವರ ಪಕ್ಷದಲ್ಲೆ ಶಾಸಕರಾಗಿ,ಸಂಸದರಾಗಿ, ಸಚಿವರಾದ ಎಷ್ಟೋ ಮಂದಿ ಹಲವು ದಶಕಗಳಿಂದ ಗಣಿಯನ್ನು ಲೂಟಿ ಮಾಡಿಕೊಂಡೇ ಬಂದಿದ್ದಾರೆ, ಆ ಸಂಧರ್ಭದಲ್ಲಿ ಇವರಿಗೆ ಬಳ್ಳಾರಿ ಬಚಾವು ಮಾಡುವ ಐಡಿಯಾ ಬರಲಿಲ್ಲ, ಇವತ್ತು ಒಂದು ಟನ್ ಅದಿರಿಗೆ 20ರೂ ತೆರಿಗೆ ಇದೆ ಆದರೆ ಮಾರುಕಟ್ಟೆಯಲ್ಲಿ ಟನ್ ಗೆ 2000 ದಿಂದ 6000ದವರೆಗೆ ಮಾರಿಕೊಳ್ಳಲಾಗುತ್ತಿದೆ, ಬಳ್ಲಾರಿಯಾಧ್ಯಂತ ಗಣಿಗಾರಿಕೆ ವ್ಯಾಪಕವಾಗಿದೆ ಅಲ್ಲಿನ ಪರಿಸರ ಹದಗೆಟ್ಟಿದೆ, ಕಳೆದ 50ವರ್ಷಗಳಿಂದ ಗಣಿನೀತಿ ಬದಲಾಗಿಲ್ಲ. ಈ ಕುರಿತು ಕೇಂದ್ರ ಸರ್ಕಾರ ನಿಯಂತ್ರಣ ಹೇರಲು ಸರ್ವಾಧಿಕಾರವನ್ನು ಪಡೆದಿದೆ ಗಣಿಧಣಿಗಳನ್ನು ಮಟ್ಟ ಹಾಕುವ ಸಾಮರ್ತ್ಯ ಹೊಂದಿದೆ ಆದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಒತ್ತಡ ಹೇರದೇ ಬಿದಿಗಿಳಿದಿದೆ ಎಂದರೆ ಅದರ ಹಿಂದಿನ ಉದ್ದೇಶ ಸ್ಪಷ್ಟವಲ್ಲವೇ? ಹೇಳಿ ಇವರಿಗೆ ರಾಜ್ಯದ ಜನತೆಯ ಹಿತಾಸಕ್ತಿ ಬೇಕಾ? ಇನ್ನೂ ಯಡಿಯೂರಪ್ಪ ಪಂಚರಂಗಿ ಆಟ ಪ್ರದರ್ಶಿಸುತ್ತಾ ಮುಗುಮ್ಮಾಗಿ ರಾಜಕೀಯ ಲೆಕ್ಕಾಚಾರ ಹಾಕುತ್ತಾ ಸುರಕ್ಷಿತವಾಗುವುದು ಹೇಗೆಂದು ಚಿಂತಿಸುತ್ತಿದ್ದರೆ ಜೆಡಿಎಸ್ ಅಪವಿತ್ರ ಮೈತ್ರಿಗೆ ಮತ್ತೆ ಸಜ್ಜಾಗುತ್ತಿದೆ. ಅತ್ತ ಬಳ್ಳಾರಿಯಲ್ಲಿ ಬೇಸತ್ತ ರೆಡ್ಡಿಗಳು ರಾಮುಲು ತಲೆಬೋಳಿಸಿ ಸ್ವಾಭಿಮಾನಿ ಯಾತ್ರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ, ಸರ್ಕಾರಿ ಆಸ್ಪತ್ರೆಗಳು ರೋಗಗ್ರಸ್ತವಾಗಿವೆ ಆದರೆ ರಾಮುಲು ಮಾತ್ರ ತಲೆಬೋಳಿಸಿಕೊಂಡು ರೆಡ್ಡಿಗಳ ರಕ್ಷಣೆಗೆ ನಿಂತುಬಿಟ್ಟಿದ್ದಾರೆ. ಈಗಲಾದ್ರೂ ಹೇಳ್ರಿ ರಾಜ್ಯದ ಜನತೆಯನ್ನ ಯಾರು ರಕ್ಷಿಸಬೇಕು? ಯಾರಿಂದ ರಕ್ಷಿಸಬೇಕು ? ಯಾಕೆ ರಕ್ಷಿಸಬೇಕು ಅಂತ

Sunday, July 11, 2010

ಸರ್ಕಾರದ ರಿಮೋಟ್ ಕಂಟ್ರೋಲ್ ಎಲ್ಲಿದೆ???


ಸರ್ಕಾರದ ರಿಮೋಟ್ ಕಂಟ್ರೋಲ್ ಎಲ್ಲಿದೆ?? ಇಂತಹದ್ದೊಂದು ಪ್ರಶ್ನೆ ಕಳೆದ ಎರಡು ವರ್ಷಗಳಿಂದ ಅದೆಷ್ಟೋ ಬಾರಿ ಕೇಳಿಕೊಂಡಿದ್ದೇನೆ. ಬಹುಶಹ ನಿಮಗೂ ಅಂತಹ ಅನುಮಾನಗಳು ಎದ್ದಿರಲಿಕ್ಕೆ ಸಾಕು.ಬಿಜೆಪಿಯ ರಿಮೋಟ್ ಕಂಟ್ರೋಲ್ ಸಂಘಪರಿವಾರದ ಬಳಿ ಇದೆಯೇ? ದೆಹಲಿಯ ಹೈಕಮಾಂಡ್ ಬಳಿ ಇದೆಯೇ? ಇಲ್ಲಬಿಜೆಪಿ ಮಹಿಳಾ ಅಧಿನಾಯಕಿ ಸುಷ್ಮಾ ಸ್ವರಾಜ್ ಬಳಿ ಇದೆಯೇ? ಅಡ್ವಾಣಿ ಬಳಿ ಇದೆಯೇ? ಬಳ್ಳಾರಿ ಗಣಿಧಣಿಯ ಬಳಿ ಇದೆಯೇ? ಸಚಿವ ಸಂಪುಟದ ನರ್ಸ್ ಖ್ಯಾತಿಯ ರೇಣುಕಾಚಾರ್ಯನ ಬಳಿ ಇದೆಯೇ? ಇಲ್ಲ ಅಂತಿಮವಾಗಿ ಕರ್ನಾಟಕ ರಾಜ್ಯಪಾಲರ ಬಳಿ ಇದೆಯೇ? ಎಲ್ಲವೂ ಅಯೋಮಯ ಅಲ್ವಾ? ಹೌದು ಇಂತಹದ್ದೊಂದು ಹೀನ ಪರಿಸ್ಥಿತಿಯ ಸರ್ಕಾರವನ್ನ ನಾವು ನೀವು ನೋಡುತ್ತಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2ವರ್ಷಗಳು ಸಂದಿವೆ. ಸರ್ಕಾರ ಸಾಧನಾ ಸಮಾವೇಶದ ಜೊತೆಗೆ ಹತ್ತು ಹಲವು ಜಾತಿ ಸಮಾವೇಶಗಳನ್ನು ಮಾಡುತ್ತಿದೆ, ಯಡಿಯೂರಪ್ಪ ಆ ಮೂಲಕ ಜಾತಿಗಳನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವತ್ತು ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಬಿವೃದ್ದಿಯ ನಿಟ್ಟಿನಲ್ಲಿ ಹಲವು ಉತ್ತಮ ಕೆಲಸಗಳನ್ನು ಮಾಡಿದೆ. ಈ ಸಂಧರ್ಭ ಈ ಮೇಲಿನಂತೆ ಪ್ರಶ್ನೆ ಕೇಳಿಕೊಳ್ಳಬೇಕಾದ ಸಂಧರ್ಭ ಮತ್ತೆ ಒದಗಿದೆ ಈಗ ನಡೆಯುತ್ತಿರುವ ವಿಧಾನ ಸಭೆ ಅಧಿವೇಶನ, ಅಲ್ಲಿ ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ರೀತಿ ಇದಕ್ಕೆ ಕಾರಣ.
ಹೌದು ಯಾಕೆ ಹೀಗೆ ಸಂಘ ಪರಿವಾರ ಕಂಡ ಕನಸು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಈಡೇರಿದೆಯಾದರೂ ಸಂಘದ ಆಶೋತ್ತರಗಳನ್ನು ಸರ್ವ ಸಮ್ಮತವಾಗಿ ಈಡೇರಿಸುವ ರೀತಿಯಲ್ಲಿ ಸರ್ಕಾರ ನಡೆಯುತ್ತಿಲ್ಲ? ಮುಖ್ಯಮಂತ್ರಿ ಯಡಿಯೂರಪ್ಪ ಪದೇ ಪದೇ ಮುಖೇಡಿಯಂತೆ ಕಣ್ಣೀರು ಹಾಕುತ್ತ ಅಸಹಾಯಕನ ರೀತಿ ನಡೆದುಕೊಳ್ಳುತ್ತಿರುವುದು, ಸಾರ್ವಜನಿಕವಾಗಿ ಸಿಟ್ಟನ್ನು ಪ್ರದರ್ಶಿಸುವುದು, ಬಳ್ಳಾರಿಯ ಗಣಿಧಣಿಗಳನ್ನು ಓಲೈಸುವುದು, ಪರಮ ಭ್ರಷ್ಟರನ್ನೂ ಕೂಡ ಸಚಿವ ಸಂಪುಟದೊಳಕ್ಕೆ ಬಿಟ್ಟು ಕೊಂಡು ಅಸಹ್ಯ ಸೃಷ್ಟಿಸಿಕೊಳ್ಳುತ್ತಿರುವುದು ಎಷ್ಟು ಸರಿ? ಅಧಿಕಾರ ಸ್ವೀಕರಿಸುವಾಗ ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನಂತರ ಹೇಗೆ ನಡೆದುಕೊಳ್ಳುತ್ತಿದ್ದಾರೆ? ಈ ಸರ್ಕಾರದಲ್ಲಿ ರೈತನ ಸ್ಥಿತಿ ಹೇಗಿದೆ ಎಂಬುದನ್ನು ಬೇರೆ ವಿವರಿಸಿ ಹೇಳಬೇಕಿಲ್ಲ.
ಈಗ ವಿಚಾರಕ್ಕೆ ಬರೋಣ, ಜೆಡಿಎಸ್ ಸಮ್ಮಿಶ್ರ ಸರ್ಕಾರದ ತಪ್ಪು ನಿರ್ಧಾರದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆರಂಭದಿಂದಲೇ ತನ್ನ ತಪ್ಪು ಹೆಜ್ಜೆಗಳನ್ನು ಇಟ್ಟದ್ದು ರೆಡ್ಡಿಗಳನ್ನು ಓಲೈಸುವ ಮೂಲಕ. ಬಳ್ಳಾರಿಯ ಗಣಿಧಣಿಗಳ ಆಶಯದಂತೆ ರಚನೆಯಾದ ಮಂತ್ರಿ ಮಂಡಲದಿಂದ ಹಿಡಿದು ಪ್ರತಿ ಹೆಜ್ಜೆಯಲ್ಲೂ ಅವರನ್ನು ಬೆನ್ನಿಗಿಟ್ಟುಕೊಂಡ ಫಲವಾಗಿ ಮೊನ್ನೆಯ ಸದನ ಕಲಹದ ಮೂಲಕ ಅಸಹ್ಯ ಬೀದಿಗೆ ಬಿದ್ದಿದೆ. ಮೊನ್ನೆ ವಿರೋಧ ಪಕ್ಷದ ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯ ಸದನದಲ್ಲಿ ಹೇಳಿದ ಸತ್ಯವನ್ನು ಅರಗಿಸಿಕೊಳ್ಳಲಾಗದ ಮುಖ್ಯ ಮಂತ್ರಿ ಯಡಿಯೂರಪ್ಪ ತಾಳ್ಮೆ ಕಳೆದು ಏರಿ ಹೋದದ್ದು ತನ್ನ ಸಹ ಸಚಿವರನ್ನು, ಶಾಸಕರುಗಳನ್ನು ತನ್ನೊಂದಿಗೆ ಕೈ ಜೋಡಿಸುವಂತಹ ಅನಾಹುತಕಾರಿ ಸಂಧರ್ಭ ಸೃಷ್ಟಿಸಿಕೊಂಡು ಬಿಟ್ಟರು. ಗಣಿಧಣಿಗಳ ಎಂಜಲು ತಿಂದು ಪಕ್ಷ ಸೇರುವ ಕಾಂಗೈ-ದಳ ಪಕ್ಷಗಳ ಪಕ್ಷಾಂತರಿಗಳನ್ನು ಇಟ್ಟುಕೊಂಡು, ಅವರ ಅವಶ್ಯಕತೆಗಳನ್ನು ಪೂರೈಸುತ್ತಾ ಒಂದು ಸರ್ಕಾರ ಎಷ್ಟು ಸುಭದ್ರವಾಗಿ ಮತ್ತು ಎಷ್ಟು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಾಧ್ಯ? ಜನಮೆಚ್ಚುವಂತೆ ಸರ್ಕಾರ ಅಭಿವೃದ್ದಿ ಕೆಲಸಗಳನ್ನೆನೋ ಮಾಡುತ್ತಿದೆ ಆದರೆ ಅದಕ್ಕಿಂತ ಹೆಚ್ಚಾಗಿ ಸರ್ಕಾರದ ನೈತಿಕತೆ ಪ್ರಾಧಾನ್ಯತೆ ಪಡೆಯುವುದಿಲ್ಲವೇ? ಮೌಲ್ಯಾಧಾರಿತವಾಗಿ ಕಾರ್ಯ ನಿರ್ವಹಿಸದ ಸರ್ಕಾರ ಯಾವತ್ತಿಗೂ ಸ್ಥಿರವಾಗಿರಲಾರದು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಮೇಲೆ ಅತೀ ಹೆಚ್ಚು ಲಾಠೀಚಾರ್ಚುಗಳಾಗಿವೆ, ದೂರು ದಾಖಲಾಗಿವೆ, ಅದೇ ರೀತಿ ಕನ್ನಡ ಪರ ಹೋರಾಟ ಮಾಡುವ ಸಂಘಟನೆಗಳನ್ನು ಬಗ್ಗುಬಡಿದು ಕೇಸು ಜಡಿದು ಕನ್ನಡದ ಸೊಲ್ಲಡಗಿಸಿದೆ. ವರ್ಗಾವಣೆ ಮಾರ್ಗದರ್ಶಿ ಸೂತ್ರಗಳನ್ನು ಬದಿಗಿಟ್ಟು ಬೇಕಾಬಿಟ್ಟಿ ವರ್ಗಾವಣೆಯಾಗುತ್ತಿವೆ.ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರೇ ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ನುಂಗಿ ನೀರು ಕುಡಿದ ಉದಾಹರಣೆ ಕಣ್ಣೆದುರಿಗಿದೆ. ರಾಜ್ಯ ಪಾಲ ಹಂಸರಾಜ ಭಾರದ್ವಜ್ ಹಲವಾರು ಭಾರಿ ಸರ್ಕಾರದ ನಡವಳಿಕೆಗಳ ವಿರುದ್ದ, ಸಚಿವ ಸಂಪುಟದ ಮಂತ್ರಿಗಳ ವಿರುದ್ದ ಗುಡುಗಿದ್ದಾರೆ, ಆದರೂ ಪ್ರಯೋಜನವಾಗಿಲ್ಲ.ಬಳ್ಳಾರಿ ಗಣಿಧಣಿಗಳು ಸಿಡಿದೆದ್ದಾಗ ಸುಷ್ಮಾಸ್ವರಾಜ್ , ಸಂತೋಷ್ ಹೆಗಡೆ ರಾಜೀನಾಮೆ ನೀಡಿದಾಗ ಇಕ್ಕಟ್ಟು ತಪ್ಪಿಸಲು ದೆಹಲಿಯ ಹೈಕಮಾಂಡ್ ನಿತಿನ್ ಗಡ್ಕರಿ, ಅಡ್ವಾಣಿ ಪ್ರಭಾವ ಬೇಕು, ಹಾಲಪ್ಪ-ಸರ್ಸು ರೇಣುಕಾಚಾರ್ಯ,ಸಂಪಗಿ ಭ್ರಷ್ಟತನ, ರೆಡ್ಡಿಗಳ ವರ್ತನೆ ಇತ್ಯಾದಿ ಸಾರ್ವಜನಿಕವಾಗಿ ಬೀದಿಗೆ ಬಿದ್ದಾಗ ಸಂಘ ಪರಿವಾರದ ಗದರಿಕೆ ಬೇಕು. ಸದನದ ಗದ್ದಲ ಶುರುವಾಗಿದೆ ಈಗ ಪರಿಹಾರಕ್ಕೆ ಯಾರು ಬರುತ್ತಾರೋ ನೋಡಬೇಕು. ಇಂತಹ ಪರಿಸ್ಥಿತಿ ಸರ್ಕಾರಕ್ಕಿದ್ದರೆ ಆಡಳಿತ ನಿರ್ವಹಣೆ ಮಾಡುವವರಾದರೂ ಯಾರು? ಎಂಬಲ್ಲಿಗೆ ಪ್ರಶ್ನೆ ಬಂದು ನಿಲ್ಲುತ್ತದೆ.
ಸಾರ್ವಜನಿಕರ ನಡುವೆ ಚಾಲ್ತಿಯಲ್ಲಿರುವ ಮಾತಿನಂತೆ ಇವತ್ತು ಕಾಂಗೈ-ದಳ ಇತ್ಯಾದಿ ಯಾವುದೇ ಪಕ್ಷದಲ್ಲಿರುವ ಮುಖಂಡರುಗಳು, ಶಾಸಕರು, ಮರಿ ಪುಡಾರಿಗಳು ಜಾತಿಯ ಆಧಾರದಲ್ಲಿ ಸಾಮೂಹಿಕವಾಗಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಲ್ಲುತ್ತಾರೆ, ಇಂತಹ ಸಾರ್ವಜನಿಕ 'ಒಲವು'ಗಳೇ ಇತ್ತಿಚೆಗೆ ಬಿಜೆಪಿ ಎದುರಿಸಿದ ಅಷ್ಟು ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಕಾರಣ ಎನ್ನಲಾಗುತ್ತದೆ. ಆದರೆ ಇಂತಹ ಒಗ್ಗಟ್ಟು ಜಾತಿಯ ಆಧಾರದಲ್ಲಿ ಒಬ್ಬ ರಾಮಕೃಷ್ಣ ಹೆಗಡೆ, ದೇವೇಗೌಡ, ಕುಮಾರಸ್ವಾಮಿ, ಎಸ್ ಎಂ ಕೃಷ್ಣ, ದೇವರಾಜ ಅರಸು, ವೀರೇಂದ್ರಪಾಟೀಲ್ ಇದ್ದಾಗ ಕಂಡು ಬರಲಿಲ್ಲ. ಇದು ಯಡಿಯೂರಪ್ಪನವರ ಮಟ್ಟಿಗೆ ವೈಯುಕ್ತಿಕವಾಗಿ ಪ್ಲಸ್ ಪಾಯಿಂಟು ಆದರೂ ಸಾರ್ವಜನಿಕವಾಗಿ ಮಾತ್ರ ಅತ್ಯಂತ ಅಪಾಯಕಾರಿಯಾದುದು. ಅಂತಿಮವಾಗಿ ಒಂದು ಮಾತು ಈಗ ನಡೆಯುತ್ತಿರುವ ಸದನ ಜನಪರವಾದ ವಿಚಾರಗಳನ್ನು ಚರ್ಚೆಗೆ ತರುತ್ತದೆ ಎಂದು ರಾಜ್ಯದ ಕೋಟ್ಯಾಂತರ ಜನತೆ ಕಾಯುತ್ತಿದ್ದರೆ ಈ ಶಾಸಕರುಗಳು-ಮಂತ್ರಿಗಳು ಕಿಸಿಯುತ್ತಿರುವುದು ಏನು? ಮೊದಲ ಎರಡು ದಿನ ಸಂತೋಷ್ ಹೆಗಡೆ ವಿಚಾರವಾಗಿ ಗದ್ದಲ ಎಬ್ಬಿಸಿದರು, ಅಧಿಕಾರ ಕೊಡುವ ವಿಚಾರ ಬಂದಾಗ ಮಾತ್ರ ತಮ್ಮ ಮಾಮೂಲು ಖಯಾಲಿ ಪ್ರದರ್ಶಿಸಿದರು, ರೇವಣ್ಣ-ಕುಮಾರಸ್ವಾಮಿ-ಸಿದ್ದರಾಮಯ್ಯ ಮಾತೆತ್ತಿದರೆ ಗಣಿವಿಚಾರ ಬಿಟ್ಟರೆ ನೈಸ್ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ಒಬ್ಬನೇ ಒಬ್ಬಶಾಸಕ, ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ, ಬಿತ್ತನೆ ಬೀಜ ಸಮಸ್ಯೆ, ಬೆಂಬಲ ಬೆಲೆ, ಸಹಾಯಧನ ಇತ್ಯಾದಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಹೀಗಾದರೆ ಕೋಟ್ಯಾಂತರ ರೂ ವೆಚ್ಚ ಮಾಡಿ ನಡೆಸುವ ಸದನ ಕಲಾಪಗಳು ಯಾಕೆ ಬೇಕು??
ಈ ಅಂಕಣ ಬರಹವನ್ನು ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟಿಸಿದ ಸಂಪಾದಕರಾದ ಶ್ಯಾಮಸುಂದರ್ ಅವರಿಗೆ ಧನ್ಯವಾದಗಳು.
Click on the following to read same article in ದಟ್ಸ್ ಕನ್ನಡ ಡಾಟ್ ಕಾಂ http://thatskannada.oneindia.in/news/2010/07/12/bjp-sangh-pariwar-karnataka-politics.html

Sunday, July 4, 2010

ಯುವ ಮನಸ್ಸು ಹೇಗಿದೆ ಗೊತ್ತಾ???



"ಎಲ್ಲಿಯೂ ಸಲ್ಲದ ಕಟ್ಟಕಡೆಯ ವಿದ್ಯಾರ್ಥಿ ಅಂತಿಮವಾಗಿ ಐಟಿಐ ಗೆ ಬರುತ್ತಾನೆ, ಅವನಿ/ಳಿಗೆ ಪರಿಶ್ರಮದ ಮೂಲಕ ಬದುಕಿನ ಹಾದಿ ತೋರಿಸೋಕೆ ಭಾರೀ ಪ್ರಯತ್ನವನ್ನೇ ಮಾಡ್ಬೇಕು ಸಾರ್" ಅಂದ್ರು ಮಿತ್ರ ಗುರುರಾಜ್. ಸಾರ್ ನಂದು ಬಿಇ ನಲ್ಲಿ ಇಲೆಕ್ಟ್ರಿಕಲ್ ಹೈ ಫಸ್ಟ್ ಕ್ಲಾಸ್ ಪಾಸಾಗಿದ್ದೀನಿ, ಈ ಬೆಂಗಳೂರಿಗೆ ಬಂದು ಪಿಜಿ ಲಿ ಉಳ್ಕೊಂಡು 6ತಿಂಗಳಿಂದ ಕೆಲ್ಸ ಹುಡುಕ್ತಿದೀನಿ , ಯಾವ ಕಂಪನಿಗೆ ಅರ್ಜಿ ಹಾಕಿದ್ರೂ ಎಕ್ಸ್ ಪೀರಿಯನ್ಸ್ ಕೇಳ್ತಾರೆ ಇಲ್ಲಾಂದ್ರೆ ಬಾಂಡ್ ಕೇಳ್ತಾರೆ ಓವರ್ ಟೈಮ್ ಡ್ಯೂಟಿ ಮಾಡ್ಬೇಕಂತೆ ಏನ್ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂದದ್ದು ಪರಿಚಿತರ ಹುಡುಗಿ ಲಾವಣ್ಯ. ಇನ್ನೊಬ್ಬ ಚಿಗುರು ಮೀಸೆಯ ಹುಡುಗ ಮಂಜುನಾಥ ತಲೆಕೆಡಿಸಿಕೊಂಡು ಕುಂತಿದ್ದ, ಆತ ಈಗಷ್ಟೇ ವಾಣಿಜ್ಯ ಪದವಿಗೆ ಸೇರಿದ್ದ ಬುದ್ದಿವಂತ ಹುಡುಗ, ಅವನ ರಿಲೇಟೀವ್ಸ್ ಯಾರೋ ಸಿಎ ಮಾಡಿದ್ದಾರಂತೆ ಈಗ ಇವ್ನು ಸಿಎ ಮಾಡ್ತಾನಂತೆ ಹಾಗಾಗಿ ಆ ಕಡೆ ಕಾನ್ಸೆಂಟ್ರೇಶನ್ ಮಾಡ್ಬೇಕೋ ಪದವಿ ಕಡೆಗೆ ಗಮನ ನೀಡಬೇಕೋ ಅಂತ ತಿಳೀಯದೇ ತಲೆಕೆಡಿಸಿಕೊಂಡಿದ್ದ. ಈಗ್ಯೆ ತಿಂಗಳ ಹಿಂದೆ ಪದವಿ ಅರ್ಧಂಬರ್ದ ಮುಗಿಸಿ ಸಿಎ ಮಾಡ್ತೀನಿ ಅಂತ ಹೋಗಿ ನಾಲ್ಕಂಕಿ ಸಂಬಳ ಕೈಗೆ ಬರುತ್ತಿದ್ದಂತೆ ಪದವಿಗೆ ಗುಡ್ ಬೈ ಹೇಳಿ ಅತ್ತ ಸಿಎ ಅನ್ನು ಮುಗಿಸದೇ ಅಲ್ಲಿ ಇಲ್ಲಿ ಲೆಕ್ಕ ಬರೆಯವ ಚಾಕರಿ ಮಾಡುತ್ತಿರುವ ಯುವತಿಯನ್ನ ಆಕೆಯ ತಾಯಿ ಕರೆತಂದು ಬೇಸರಿಸಿಕೊಂಡಿದ್ದರು. ಮಗ ಡಾಕ್ಟರ್ ಆಗಬೇಕು, ಇಂಜಿನಿಯರೇ ಆಗಬೇಕು ಅಂತ ಕನಸು ಕಂಡ ತಂದೆ/ತಾಯಿ ಗಳಿಸಿದ ಅಷ್ಟೂ ಸಂಪತ್ತನ್ನು ದುಡ್ಡಾಗಿ ಪರಿವರ್ತಿಸಿಕೊಂಡು ಮಕ್ಕಳ ಮೇಲೆ ಹೂಡಿ ಅವನು/ಅವಳು ಕೇಳಿದ್ದನ್ನ ಕೊಡಿಸಿ ಅವನ ಆಸಕ್ತಿ ಏನೆಂಬುದನ್ನು ಅರಿಯದೇ ಕಡೆಗೆ ಪರಿತಾಪ ಪಡುವ ಮಂದಿಯೂ ಇವತ್ತು ಕಾಣ ಸಿಗುತ್ತಾರೆ. ಇವತ್ತು ಬಹುತೇಕ ಮಂದಿ ಪೋಷಕರಿಗೆ/ವಿದ್ಯಾರ್ಥಿಗಳಿಗೆ ತಾವು ಸಾಗಬೇಕಾದ ಗುರಿಯ ನಿಖರತೆಯಾಗಲೀ ಅಂದಾಜಾಗಲಿ ಇರುವುದೇ ಇಲ್ಲ. ಹಾಗಾಗಿ ಗೋಂದಲದ ಸ್ತಿತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಲುಕುವುದನ್ನು ಕಾಣಬಹುದು. ಅಷ್ಟಕ್ಕೂ ವಿದ್ಯಾರ್ಥಿಗಳಿಗೆ/ಪೋಷಕರಿಗೆ/ಶಿಕ್ಷಕರಿಗೆ ಇರಬೇಕಾದ ಗುರಿಗಳೇನು? ಬದ್ದತೆ ಹೇಗಿರಬೇಕು? ಗುರಿಯ ನಿರ್ದಿಷ್ಟತೆ, ಅದನ್ನು ತಲುಪುವ ಬಗೆ, ಅದಕ್ಕಾಗಿ ಅನುಸರಿಸುವ ರೀತಿ-ರಿವಾಜುಗಳು ಏನು ಎಂಬುದನ್ನು ಅರಿಯಬೇಕಾದ ಅಗತ್ಯವಿದೆ.
ಪ್ರಸಕ್ತ ಸಮಾಜದಲ್ಲಿ ನಮಗೆ ಬದುಕಿನ ಶಿಕ್ಷಣ ಅತ್ಯಂತ ಅಗತ್ಯವಾಗಿ ದಕ್ಕಬೇಕಿದೆ. ಆದರೆ ಹಾಲಿ ನಮ್ಮ ಶಿಕ್ಷಣ ಕ್ರಮದಲ್ಲಿ ಬದುಕು ರೂಪಿಸುವ ಶಿಕ್ಷಣಕ್ಕಿಂತ ಬೇರೆಯದೇ ಧಾಟಿಯ ಶಿಕ್ಷಣವಿದೆ. ಇಂತಹ ಶಿಕ್ಷಣ ವ್ಯವಸ್ಥೆಯೇ ನಿರುದ್ಯೋಗ, ಬಡತನ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಿದೆ.

Sunday, June 27, 2010

ಲೋಕಾಯುಕ್ತರ ಪರಮಾಧಿಕಾರ ಜಿಜ್ಞಾಸೆ ಏಕೆ?

"ಎಲ್ಲಿದೆ ರೀ ಭ್ರಷ್ಟಾಚಾರ? ಹಿಂದಿನ ಸರ್ಕಾರಗಳು ಲೋಕಾಯುಕ್ತರ ಪರಮಾಧಿಕಾರಕ್ಕೆ ತಡೆಗೋಡೆ ಹಾಕಿಕೊಂಡು ಬಂದಿವೆ ವಿನಹ, ನಮ್ಮ ಸರ್ಕಾರದಿಂದ ತೊಂದರೆ ಆಗಿಲ್ಲ " ಎಂದು ಪ್ರತಿಕ್ರಿಯೆ ನೀಡಿದ್ದು ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯ ರಾಮಚಂದ್ರಗೌಡ..! ಆ ಮೂಲಕ ತನ್ನ ಸರ್ಕಾರ ದ ನೈತಿಕ ಅಧ:ಪತನವನ್ನು ಈ ಮಂತ್ರಿ ವ್ಯಕ್ತಪಡಿಸಿದ್ದಾರೆ. ಇವತ್ತು ಭ್ರಷ್ಟಾಚಾರ ಎಷ್ಟು ಬೃಹತ್ತಾಗಿ ಬೆಳೆದಿದೆ ಎಂದರೆ ಅದನ್ನು ಮಟ್ಟ ಹಾಕಲು ಅಸಾಧ್ಯವೇನೋ ಎಂಬಷ್ಟರ ಮಟ್ಟಿಗೆ ಇದೆ.ಭ್ರಷ್ಟಾಚಾರ ಈ ದೇಶದ ಆಢಳಿತ ವ್ಯವಸ್ಥೆಯೊಟ್ಟಿಗೆ ಕರ್ಣನ ಕವಚ ಕುಂಡಲದಂತೆ ಬೆಳೆದು ಬಂದಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ-ಕಾರ್ಯಾಂಗ-ಶಾಸಕಾಂಗ ಗಳು ಜನರ ಸೇವೆಗಾಗಿಯೇ ಇವೆ. ಇವುಗಳ ಕಾವಲು ನಾಯಿಯಾಗಿ ಪತ್ರಿಕಾ ರಂಗ ಇದ್ದರೂ ಸರ್ಕಾರಿ ವ್ಯವಸ್ಥೆಯ ಕಾವಲು ನಾಯಿಯಾಗಿ ಲೋಕಾಯುಕ್ತ ವ್ಯವಸ್ಥೆ ಇದೆ. ಇದು ಸರ್ಕಾರಿ ವ್ಯವಸ್ಥೆಯ ಅಧೀನದಲ್ಲಿರುವುದರಿಂದ ಹಲ್ಲಿಲ್ಲದ ನಾಯಿಯ ಸ್ಥಿತಿಯಲ್ಲಿರುವುದು ದುರದೃಷ್ಟಕರ ಸಂಗತಿಯಾಗಿದೆ. ಲೋಕಾಯುಕ್ತರಿಗೆ ಪರಮಾಧಿಕಾರ ಏಕೆ? ಕೊಟ್ಟರೆ ಏನಾಗುತ್ತೆ? ಕೊಡದಿದ್ದರೆ ಏನಾಗಬಹುದು? ಇದರ ಹಿಂದಿನ ಶಕ್ತಿಗಳು ಯಾವುವು? ಅವುಗಳ ಹಿತಾಸಕ್ತಿ ಏನು? ಅಷ್ಟಕ್ಕು ಪರಮಾಧಿಕಾರ ಇಲ್ಲದ ಲೋಕಾಯುಕ್ತ ನಮಗೆ ಬೇಕೆ/ಬೇಡವೇ ? ಇಂದಿನ ಗೋಂದಲಕ್ಕೆ ಬಿಜೆಪಿ ಸರ್ಕಾರ ಮಾತ್ರ ಕಾರಣವೇ? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳು ವ ಮೊದಲು ಕೆಲವು ಸಂಗತಿಗಳನ್ನು ಗಮನಿಸೋಣ.
ಲೋಕಾಯುಕ್ತ ಎಂದರೆ ಸರ್ಕಾರ ವ್ಯವಸ್ಥೆಯ ಭ್ರಷ್ಟಾಚಾರವನ್ನು ನಿಯಂತ್ರಿಸುವ ಅಧಿಕಾರವುಳ್ಳವನು ಎಂದರ್ಥ. ಸ್ಕಾಂಡಿನೇವಿಯಾ ದೇಶದಲ್ಲಿ ಈ ವ್ಯವಸ್ಥೆಗೆ Ombudsmen ಎನ್ನಲಾಗುತ್ತೆ, ಅದೇ ರೀತಿ ನ್ಯೂಜಿಲ್ಯಾಂಡಿನಲ್ಲಿ Parlimentary Commissioner ಎಂದು ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಈವ್ಯವಸ್ಥೆ ಜಾರಿಗೆ ಬರುವ ಮುನ್ನ ಭ್ರಷ್ಟಾಚಾ ರ ಕುರಿತ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ಒಂದು ಸರ್ಕಾರಿ ವ್ಯವಸ್ಥೆಯ ಸೃಷ್ಟಿಗಾಗಿ ಚಿಂತನೆ ನಡೆದಿತ್ತು. ಇದಕ್ಕೆ ಪೂರಕವಾಗಿ ವರದಿಯೊಂದನ್ನು ನೀಡಲು ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಆಡಳಿತ ಸುಧಾರಣಾ ಆಯೋಗವನ್ನು ರಚಿಸಲಾಯಿತು. ಆಗ ಮೊರಾರ್ಜಿ ದೇಸಾಯಿಯವರು ನ್ಯೂಜಿಲ್ಯಾಂಡ್-ಸ್ಕಾಂಡಿನೇವಿಯ ದೇಶಗಳ ಮಾದರಿಯಲ್ಲಿಯೇ ಭಾರತದಲ್ಲೂ 'ಲೋಕಪಾಲ' ಮತ್ತು 'ಲೋಕಾಯುಕ್ತ' ವ್ಯವಸ್ಥೆ ಮತ್ತು ಹುದ್ದೆ ಯಸೃಷ್ಟಿಗೆ ಮಧ್ಯಂತರ ವರದಿ ನೀಡಿ ಶಿಫಾರಸ್ಸು ಮಾಡಿತು. ಅದರ ಫಲವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬಂತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಹಿನ್ನೆಲೆಯುಳ್ಳ ನಿವೃತ್ತ ನ್ಯಾಯಾಧೀಶರು ಸದರಿ ಲೋಕಾಯುಕ್ತ ಹುದ್ದೆಗೆ ಆಯ್ಕೆಯಾಗುತ್ತಾರೆ ಹಾಗಾಗಿ ಆ ವ್ಯವಸ್ಥೆಯ ಬಗೆಗೆ ಜನರಿಗೆ ಇನ್ನೂ ವಿಶ್ವಾಸ ಉಳಿದಿದೆ. ಸದರಿ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗ ಳ ಆಸ್ತಿ-ಪಾಸ್ತಿಯ ಮೇಲೆ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಬಹುದು, ಆದರೆ ಅದು ಅನಿರೀಕ್ಷಿತ ಧಾಳಿಯಾಗಿರಬೇಕು ಆದರೆ ಹಾಗೆ ಧಾಳಿಗೊಳಗಾ ದಭ್ರಷ್ಟರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಬಹುದೇ ವಿನಹ ಶಿಕ್ಷಿಸುವ ಅಧಿಕಾರವಿಲ್ಲ. ಅದೇ ರೀತಿ ಲಂಚಕೋರ ಅಧಿಕಾರಿ/ನೌಕರರ ವಿರುದ್ದವು ಕ್ರಮಕ್ಕೆ ಶಿಫಾರಸ್ಸು ಮಾಡಬಹುದು ಆದರೆ ನೇರವಾಗಿ ಶಿಕ್ಷೆ ವಿಧಿಸಿ ಆದೇಶ ನೀಡಲು ಅವಕಾಶವಿಲ್ಲ. ಮೊರಾರ್ಜಿ ದೇಸಾಯಿಯವರು ಸಲ್ಲಿಸಿದ ವರದಿಯಲ್ಲಿ ಈ ಬಗ್ಗೆ ಏನು ಹೇಳಲಾಗಿತ್ತು ಎಂಬ ವಿವರ ಸಧ್ಯಕ್ಕೆ ಲಭ್ಯವಿಲ್ಲ. ಈ ವ್ಯವಸ್ಥೆ ಜಾರಿಗೆ ಬಂದು 5ದಶಕಗಳೇ ಸಂದಿವೆ ಆದರೆ ವಾಸ್ತವ ಜಗತ್ತಿಗೆ ಇದರ ಪರಿಚಯವಾಗುತ್ತಿರುವುದು ಒಂದೂವರೆ ದಶಕಗಳಿಂದೀಚೆಗೆ.ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿಯೇ ಲೋಕಾಯುಕ್ತ ವ್ಯವಸ್ಥೆಗೆ ಒಂದು ರೂಪು ಸಿಕ್ಕಿತಾದರೂ ಅವರ ವೈಯುಕ್ತಿಕ ರಾಜಕೀಯ ಹಿತಾಸಕ್ತಿಯಿಂದ ಸರ್ಕಾರದ ಉನ್ನತ ಸ್ಥಾನಗಳಾದ ಮುಖ್ಯ ಕಾರ್ಯದರ್ಶಿ/ಮುಖ್ಯಮಂತ್ರಿ ಮತ್ತು ಇತರೆ ಹುದ್ದೆಗಳ ಮೇಲೆ ಲೋಕಾಯುಕ್ತದ ಅಧಿಕಾರ ಹೊರತಾಗಿರುವಂತೆ ನೋಡಿಕೊಳ್ಳಲಾಯಿತು. ನಂತರದ ವರ್ಷಗಳಲ್ಲಿ ಲೋಕಾಯುಕ್ತದ ಅಸ್ತಿತ್ವದ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ ನೀಡಿದ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಲೋಕಾಯುಕ್ತಕ್ಕೆ ಮರುಜೀವ ಬಂತು. ಸುಪ್ರಿಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ವೆಂಕಟಾಚಲ ರಾಜ್ಯ ಲೋಕಾಯುಕ್ತ ಹುದ್ದೆ ಅಲಂಕರಿಸಿದರು. ತಮ್ಮ ಇತಿಮಿತಿಗಳನ್ನು ಮೀರಿಯೂ ಅವರದೇ ಆದ ಕಾರ್ಯ ಶೈಲಿಯ ಮೂಲಕ ಭ್ರಷ್ಟರಿಗೆ ಸಿಂಹ ಸ್ವಪ್ನರಾದರು ಜನರಿಗೆ ನ್ಯಾಯದ ಆಶಾಕಿರಣ ಸಿಗುವಂತೆ ಮಾಡಿದರು. ಅವರ ನಂತರ ಬಂದ ನಿಟ್ಟೆ ಸಂತೋಷ್ ಹೆಗ್ಡೆ ತಮ್ಮದೇ ಕಾರ್ಯಶೈಲಿಯ ಮೂಲಕ ಕಾನೂನು ಮಿತಿಯರಿತು ಭ್ರಷ್ಟಾಚಾರದ ಬುಡಕ್ಕೆ ಕೈ ಹಾಕಿದರು, ಪರಿಣಾಮ ತಾವೇ ರಾಜೀನಾಮೆ ನೀಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಜನಬೆಂಬಲಕ್ಕಾಗಿ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲಾಗುತ್ತದೆ ಎಂದು ಬಿಜೆಪಿ ತುತ್ತೂರಿ ಊದಿತ್ತು.. ಆದರೆ ಈಗ ಆಗಿದ್ದೇನು? ಬಹುಶ: ರಾಜ್ಯದ ಇತಿಹಾಸದಲ್ಲಿ ಹಿಂದಿನ ಅರಸು ಸರ್ಕಾರದ ಭ್ರಷ್ಟಾಚಾರವನ್ನು ಮೀರಿಸುವಂತೆ ಇವತ್ತು ಸರ್ಕಾರದ ಆಡಳಿತ ಇದೆ. ಗಣಿ ಮಾಫಿಯಾ, ವರ್ಗಾವಣೆ ದಂಧೆ, ಭೂಸ್ವಾಧೀನ ಅಕ್ರಮ, ನೆರೆ ಸಂತ್ರಸ್ತ ಪರಿಹಾರ ದಲ್ಲಿ ಅಕ್ರಮ, ಸುಧಾರಿಸದ ಆಡಳಿತ ಬಿಜೆಪಿ ಸರ್ಕಾರವನ್ನು ಹಿಂಡಿ ಹಿಪ್ಪೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ನೈತಿಕತೆ ಇಲ್ಲದ ಸರ್ಕಾರಕ್ಕೆ ಲೋಕಾಯುಕ್ತರಿಗೆ ಪರಮಾಧಿಕಾರ ಕೊಡುವ ಯೋಗ್ಯತೆ ಇದೆಯೇ? ಲೋಕಾಯುಕ್ತರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ಮುಖವಿಲ್ಲದ ಒಬ್ಬ ಮುಖ್ಯಮಂತ್ರಿಯನ್ನ, ಪರಿಸ್ಥಿತಿ ಗಂಬೀರತೆ ಅರಿಯದೆ ಮನಸ್ಸಿಗೆ ಬಂದಂತೆ ಮಾತನಾಡುವ ಮೂರ್ಖ ಸಚಿವರುಗಳನ್ನು ಹೊಂದಿದ ಸರ್ಕಾರದಿಂದ ಲೋಕಾಯುಕ್ತ ಪರಮಾಧಿಕಾರ ನಿರೀಕ್ಷಿಸಲು ಸಾಧ್ಯವೇ?
ಭ್ರಷ್ಟ ವ್ಯವಸ್ಥೆಯಿಂದ ನೊಂ ದಜನರಿಗೆ ಹುಲ್ಲು ಕಡ್ಡಿ ಯ ಆಸರೆಯಂತಿರುವ ಲೋಕಾಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ತಮ್ಮ ಅಧಿಕಾರದ ಮಿತಿಯಲ್ಲೆ ಭ್ರಷ್ಟ ವ್ಯವಸ್ಥೆಯ ಬುಡವನ್ನು ಅಲುಗಿಸಬಲ್ಲರು ಎಂಬುದು ಸಾಬೀತಾಗಿದೆ. ಹಾಗಾಗಿ ಶಾಶಕಾಂಗ-ಕಾರ್ಯಾಂಗದ ಲ್ಲಿರುವ ಭ್ರಷ್ಟ ಜನರಿಗೆ ಲೋಕಾಯುಕ್ತ ವ್ಯವಸ್ಥೆ ಪರಮಾಧಿಕಾರ ದೊರಕದಂತೆ ತೆರೆಯ ಹಿಂದೆ ಸಂಚು ನಡೆಸಿವೆ.ಲೋಕಾಯುಕ್ತರ ನಿರ್ಭಿತ ಕಾರ್ಯದಿಂದ ನಡುಗಿರುವ ರಾಜಕಾರಣಿಗಳು-ಅಧಿಕಾರಿಗಳು ಲೋಕಾಯುಕ್ತರಿಗೆ ನೀಡುವ ಪರಮಾಧಿಕಾರದಿಂದ ತಮಗೆ ಅಂತ್ಯ ಎಂಬುದು ನಿಚ್ಚಳವಾಗಿ ಗೋಚರಿಸಿದೆ ಇದು ಇವತ್ತು ಲೋಕಾಯುಕ್ತರು ರಾಜೀನಾಮೆ ನೀಡುವಂತೆ ಮಾಡುವಲ್ಲಿ ಸಫಲವಾಗಿದೆ. ಒಂದಂತೂ ಸತ್ಯ ಒಳ್ಳೆಯ ಕೆಲಸಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಜನ ವಿಶ್ವಾಸ ಇರಿಸಿಕೊಂಡಿರುವ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವಂತೆ ಜನತೆ ಬೀದಿಗಿಳಿಯಬೇಕಾಗಿದೆ, ಸಾರ್ವಜನಿಕವಾಗಿ ನಡೆಯುವ ಚಳುವಳಿಗಳಿಂದ ಕ್ರಾಂತಿ ಖಂಡಿತ ಸಾಧ್ಯ ಜನ ಮನಸ್ಸು ಮಾಡ ಬೇಕಷ್ಟೆ. ಒಂದು ಒಳ್ಳೆಯ ವ್ಯವಸ್ಥೆ ಮಾತ್ರ ಆರೋಗ್ಯವಂತ ಸಮಾಜವನ್ನು ನೀಡಬಲ್ಲದು. ಈ ಸಂಧರ್ಭ ಒಂದು ಮಾತು ನೆನಪಿಗೆ ಬರುತ್ತಿದೆ. ದುಷ್ಟ ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಅತ್ಯಂತ ಅಪಾಯಕಾರಿ ಹೌದೋ ಅಲ್ವೋ?

Wednesday, June 23, 2010

ಬಿಂದಾಸ್ ತಾರೆ ಸಂಜನಾ ಜೊತೆ ಕೆಲ ಹೊತ್ತು!


ಸಂಜನಾ ಅಲಿಯಾಸ್ ಸಂಜನಾ ಗಾಂಧಿ ಅಲಿಯಾಸ್ ಅರ್ಚನಾ ಗಲ್ ರಾಣಿ... ! ಅಬ್ಬಬ್ಬಾ ಇದೇನಿದು ಹೆಸರು ಇಷ್ಟುದ್ದ ಇದೆ ಅಂತ ಹುಬ್ಬೇರಿಸದಿರಿ. ಅದೇ ರೀ ನಮ್ಮ ಕನ್ನಡ ಚಿತ್ರರಂಗದ ಸೆಕ್ಸಿ ಇಮೇಜಿನ ನಾಯಕಿ ಸಂಜನಾ ಹೆಸರು. ಸಂಜನಾ ಮೂಲ ಹೆಸರು ಅರ್ಚನಾ ಗಲ್ ರಾಣಿ, ಕನ್ನಡ ಸಿನಿಮಾಕ್ಕೆ ಬಂದಾಗ ಆಗಲೆ ಮುಂಗಾರು ಮಳೆಯ ನಾಯಕಿ ಪೂಜಾಗಾಂದಿ ಇದ್ದರು ಆಕೆಯ ಮೂಲ ಹೆಸರು ಸಂಜನಾ ಗಾಂಧಿ, ಹಾಗಾಗಿ ಗಂಡ-ಹೆಂಡತಿ ಸಿನಿಮಾದ ಸಂಜನಾ ಗಾಂಧಿ , ಸಂಜನಾ ಆಗಿ ತಮ್ಮ ಹೆಸರನ್ನು ಬದಲಾಯಿಸಬೇಕು. ಈಗಲೂ ಬಹುತೇಕರಿಗೆ ಸಂಜನಾ ಎಂದರೆ ಅರ್ಥವಾಗುವುದಿಲ್ಲ. ಅದೇ ಗಂಡ-ಹೆಂಡತಿ ಚಿತ್ರದ ಸಂಜನಾ ಅಂದರೆ ಮಾತ್ರ ಬೇಗ ಪ್ಲಾಶ್ ಆಗಿ ಬಿಡುತ್ತೆ. ಸಂಜನಾ ಹುಟ್ಟಿದ್ದು ಬೆಂಗಳೂರಿನಲ್ಲಿ ಅಕ್ಟೋಬರ್ 9ನೇ 1989ರಂದು. ತಂದೆ ಬ್ಯುಸಿನೆಸ್ ಮನ್, ತಾಯಿ ಚನ್ನೈ ಮೂಲದವರು. ತಂದೆ ಮಾತ್ರ ಉತ್ತರ ಭಾರತದ ಸಿಂಧಿ ಮನೆತನದವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದರೂ ಈಕೆಯ ಮೂಲ ಮಾತ್ರ ಮುಂಬೈ. ಹೈ-ಫೈ ಸೊಸೈಟಿಯಲ್ಲೇ ಬೆಳೆದ ಹುಡುಗಿ ಸಂಜನಾ, ಪಿಯುಸಿ ಓದುವ ವೇಳೆಗಾಗಲೇ ಮಾಡೆಲಿಂಗ್ ಸಂಜನಾರನ್ನು ಕೈ ಬೀಸಿ ಕರೆಯಿತು. ಈ ನಡುವೆ 2006ರಲ್ಲಿ ತಮಿಳಿನ "ಒರು ಕಾದಲ್ ಸೇವಿಯರ್" ಮೂಲಕ ಚಿತ್ರ ಜಗತ್ತಿಗೆ ಅಡಿಯಿರಿಸಿದ ಸಂಜನಾ ಗಮನ ಸೆಳೆದಳು. ಆ ಹೊತ್ತಿಗೆ ಬಾಲಿವುಡ್ ನ "ಮರ್ಡರ್" ಚಿತ್ರದಲ್ಲಿ ತನ್ನ ಮಾದಕ ಮೈ ಮಾಟ ಪ್ರದರ್ಶಿಸಿ ಚಿತ್ರ ರಸಿಕರನ್ನು ಬೆಚ್ಚಿ ಬೀಳಿಸಿದ್ದ ಮಲ್ಲಿಕಾಶೆರಾವತ್ ಸುದ್ದಿಯಲ್ಲಿರುವಾಗಲೇ ಕನ್ನಡದಲ್ಲಿ ಸದರಿ ಚಿತ್ರದ ರೀಮೇಕ್ ಮಾಡಲು ನಿರ್ದೇಶಕ ರವಿ ಶ್ರೀವತ್ಸ ಸಿದ್ದತೆ ನಡೆಸಿದ್ದ. ಹಿಂದಿಯ ಮರ್ಡರ್ ಕನ್ನಡದಲ್ಲಿ "ಗಂಡ-ಹೆಂಡತಿ" ಯಾಗಿ ಹಸಿಬಿಸಿ ಚಿತ್ರವಾಯಿತು. ಆ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ನಾಯಕಿಯಾಗಿ ನಟಿಸಿದ್ದರು. 18ಹರೆಯದ ಬಾಲೆ ಸಂಜನಾಎಂತಹವರು ಹುಬ್ಬೇರಿಸುವಂತೆ ಸದರಿ ಚಿತ್ರದಲ್ಲಿ ಮಾದಕ ಮೈಮಾಟ ಪ್ರದರ್ಶಿಸಿ ಪಡ್ಡೆಗಳ ಕನಸಿನ ಕಣ್ಮಣಿಯಾದರು. 2008ರಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಕಣ್ಣಿಗೆ ಬಿದ್ದ ಈ ಬಾಲೆ ತೆಲುಗು ಚಿತ್ರ "ಬುಜ್ಜಿಗಾಡು" ಚಿತ್ರದ ನಾಯಕಿಯಾಗಿ ಆಯ್ಕೆಯಾದಳು. ತೆಲುಗಿನಲ್ಲಿ ನಟಿಸಿದ ಮೊದಲ ಚಿತ್ರದಲ್ಲೇ ಯುವ ಹೃದಯಗಳನ್ನು ಸೂರೆ ಮಾಡಿದ ಈ ಬೆಡಗಿ ನಂತರ ಕನ್ನಡದ ಆಟೊಗ್ರಾಫ್ ಪ್ಲೀಸ್, 2007-08ರಲ್ಲಿ ರಕ್ಷಕ, ದರ್ಶನ್ ಜೊತೆ ಅರ್ಜುನ್,ತೆಲುಗಿನಲ್ಲಿ ಸತ್ಯಮೇವ ಜಯತೇ, ಸಮರ್ಥುಡು, ಪೋಲೀಸ್ ಪೋಲೀಸ್ ನಲ್ಲಿ ನಟಿಸಿದ್ದಾರೆ. ಆದರೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಸಿಗದಿದ್ದರು 2010ರಲ್ಲಿ ಸಾಲು ಸಾಲಾಗಿ 4ಚಿತ್ರಗಳಲ್ಲಿ ಸಂಜನಾ ಅವಕಾಶ ಪಡೆದಿದ್ದಾಳೆ. ಸುದೀಪ್ ಸಂಬಂಧಿಕ ನಾಯಕನಾಗಿರುವ "ಈ ಸಂಜೆ", "ಶ್ಲೋಕ", ಶಿವರಾಜ್ ಕುಮಾರ್ ಜೊತೆ ಮೈಲಾರಿ ಮತ್ತು ಹೆಸರಿಡದ ಚಿತ್ರವೊಂದರಲ್ಲಿ ನೆನಪಿರಲಿ ಪ್ರೇಮ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲೆಯಾಳಂ ನಲ್ಲೂ ಅವಕಾಶಗಳು ಅರಸಿ ಬಂದಿದ್ದು "ಕ್ಯಾಸನೋವ" ಎಂಬ ಚಿತ್ರದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.ಕನ್ನಡ ಸೇರಿದಂತೆ ಸುಮಾರು 7ಭಾಷೆಗಳಲ್ಲಿ ಮಾತನಾಡುವ ಸಂಜನಾ ರ ಮೂಲ ಮಾತೃಭಾಷೆ ಸಿಂಧಿ-ಮಾರವಾಡಿ. ಸಧ್ಯ ದೂರ ಶಿಕ್ಷಣ ಪದ್ದತಿಯಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಸಂಜನಾ ಬ್ಯೂಟಿಪುಲ್ ಅಂಡ್ ಬೋಲ್ಡ್ ನಡವಳಿಕೆಯವರು. ಆದರೆ ಪತ್ರಕರ್ತರೊಂದಿಗೆ ಮಾತಿಗೆ ಸಿಲುಕುವುದು ಕಡಿಮೆ. "ಗಂಡ ಹೆಂಡತಿ" ಸಿನಿಮಾದ ಬಿಂದಾಸ್ ನಟನೆಯ ನಂತರ ಪತ್ರಕರ್ತರಿಂದ ಎದುರಾಗುತ್ತಿದ್ದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಾಧ್ಯಮಗಳಿಂದ ದೂರವಿದ್ದುದೇ ಹೆಚ್ಚು . ಮಾಡೆಲಿಂಗ್ ಜೊತೆಗೆ ಫಿಲ್ಮಿ ಡ್ಯಾನ್ಸ್ ನಲ್ಲೂ ಸೈ ಎನಿಸಿರುವ ಸಂಜನಾ ವಿದೇಶದಲ್ಲಿ ಅತಿ ಹೆಚ್ಚು ಶೋಗಳನ್ನು ನೀಡಿದ್ದಾರಂತೆ ಹಾಗಾಗಿಯೇ ಕನ್ನಡದ ಜನಪ್ರಿಯ ಕಿರುತೆರೆ ಝೀ ಕನ್ನಡದಲ್ಲಿ ಎರಡನೇ ಬಾರಿಗೆ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ " ರಿಯಾಲಿಟಿ ಶೋ ನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ
ಕಿರುತೆರೆಯಲ್ಲಿ ಗುಣಾತ್ಮಕವಾದ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಚಾನೆಲ್ ಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಬರುವುದು ಝೀ ಕನ್ನಡ. ಹೊಸತನ ಮತ್ತು ಅದ್ದೂರಿತನ ಝೀ ಕನ್ನಡದ ಮಟ್ಟಿಗೆ ಇತರೆ ಚಾನಲ್ ಗಳಿಗಿಂತ ಹೆಚ್ಚಾಗಿಯೇ ಇದೆ. ಅದರಲ್ಲೂ ರಿಯಾಲಿಟಿ ಶೋಗಳ ಬಗ್ಗೆ ಹೇಳುವುದಾದರೆ ಹಿಂದಿಯಲ್ಲಿ ಝೀ ಟಿವಿ ಹುಟ್ಟುಹಾಕಿರುವ ಡ್ಯಾನ್ಸ್-ಹಾಡುಗಳ ಹೊಸ ಕಾರ್ಯಕ್ರಮಗಳ ಅಲೆಯನ್ನೇ ಕನ್ನಡದಲ್ಲೂ ತಂದಿದೆ. ಅದರ ಫಲವೇ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಇಂತಹ ಸನ್ನಿವೇಶದಲ್ಲಿ ಸಂಜನಾ ರನ್ನು ಮಾತನಾಡಿಸುವ ಅವಕಾಶ ಒದಗಿದ್ದು ಹೀಗೆ.
ಸಂಜನಾ ಅವರನ್ನು ಮಾತಾಡಿಸ್ತೀರಾ? ಅತ್ತಲಿಂದ ಮಿತ್ರ ಮಧುಸೂಧನ್ ಕೇಳಿದರು.. ಹೌದಾ ಎಲ್ಲಿದಾರೆ? ಯಾವಾಗ ಮಾತಾಡಿಸ್ ಬಹುದು?ಅಂದೆ ಈಗ್ಲೇ ಭೇಟಿಯಾಗಿ ಮಾತಾಡಿಸಬಹುದು, ಫೋನ್ ಮಾಡಿ ಅಂತ ನಂಬರ್ ಕೊಟ್ಟು ಡಿಸ್ ಕನೆಕ್ಟ್ ಮಾಡಿದರು. ಸಂಜನಾ ಗಂಡ-ಹೆಂಡತಿಯಲ್ಲಿ ಬಿಂದಾಸ್ ಆಗಿ ನಟಿಸಿ ಹೆಸರು ಮಾಡಿದ್ದು ಮತ್ತು ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಜಡ್ಜ್ ಆಗಿರೋದು ಗೊತ್ತಿತ್ತೆ ವಿನಹ ಅವರನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಹಿತಿ ಕಲೆಹಾಕಿ ಮಾತನಾಡಿಸೋದು ಹೇಗಪ್ಪ ಅಂತ ಯೋಚಿಸುತ್ತಲೇ ಹೇಗಾದ್ರೂ ಇರ್ಲಿ ಅಂತ ಸಂಜನಾ ಗೆ ಮೊಬೈಲು ಮೆಸೇಜ್ ಕಳುಹಿಸಿದೆ, ಕೆಲ ಹೊತ್ತಿನ ನಂತರ ಓಕೆ ಕಾಲ್ ಮಾಡಿ ಅಂತ ರಿಪ್ಲೈ..ಬಂತು. ನಾನು ಮಾತಿಗೆ ಅಣಿಯಾದೆ.
*ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಹೇಗನ್ನಿಸುತ್ತೆ?
-ನೀವ್ ನೋಡಿದಿರಾ ? Ok Ok It's a great Experience, Kannada Industryಲಿ ಈಂತಹ ಶೋ ನಡಿಬೇಕಿತ್ತು, ಇಲ್ಲಿವರೆಗೂ ನಡೆದಿರಲಿಲ್ಲ. ಡ್ಯಾನ್ಸ್ ನಲ್ಲಿ different different style ಇದೆ. ಇಲ್ಲಿ plotform ಗೆ ಇಂಥ ಶೋ ಅವಶ್ಯಕತೆ ಇತ್ತು ಇಮ್ರಾನ್ ಜೊತೆ ತೀರ್ಪುಗಾರಳಾಗಿ ಕಾರ್ಯ ನಿರ್ವಹಿಸುತ್ತಿದ್ದೀನಿ. here enjoyment level is very high. ಎಷ್ಟು hectic ಆಗಿರುತ್ತೆ ಅಂದ್ರೆ ಬೆಳಗ್ಗೆ 9ಗಂಟೆಯಿಂದ ರಾತ್ರಿಕಳೆದು ಮತ್ತೆ ಬೆಳಗ್ಗೆ 3ಗಂಟೆವರೆಗೂ ಶೋಟಿಂಗ್ ಇರುತ್ತೆ. ಅದರಲ್ಲು pressure ನಮಗೆ ಗೊತ್ತೇ ಆಗಲ್ಲ.
**ಚಿಕ್ಕಮಕ್ಕಳ ರಿಯಾಲಿಟಿ ಶೋ ಮಾಡ್ತಿದ್ರಿ ಇಲ್ಲಿ ದೊಡ್ಡವರು ಹೇಗನ್ನಿಸುತ್ತೆ?
_ ಇಲ್ಲಿ ಚಿಕ್ಕ ಮಕ್ಕಳು ಯಾರೂ ಇಲ್ಲ, ಎಲ್ಲಾ ದೊಡ್ಡವರೆ. ಅದ್ರಲ್ಲೂ ನನಗಿಂತ ತುಂಬಾ ದೊಡ್ಡವರಿದ್ದಾರೆ. ಎಲ್ಲರೂ ಡೆಡಿಕೇಶನ್ ನಿಂದ ಮಾಡ್ತಿದಾರೆ. ಹಿಂದಿನ ಶೋ ನಲ್ಲಿ ಚಿಕ್ಕ ಚಿಕ್ಕ ಮಕ್ಕಳು ಮಾಡ್ತಿದ್ದರು. ಅದಕ್ಕೆ ಹೋಲಿಕೆ ಮಾಡಿದ್ರೆ ಇದು 5ಟೈಮ್ಸ್ bigger show. Killer performance ಇರುತ್ತೆ ಇಲ್ಲಿ. ನಾನು ಅಮೇರಿಕಾ, ಇಂಗ್ಲೆಂಡ್ ಹೀಗೆ ಬೇರೆ ದೇಶಗಳಿಗೆಲ್ಲಾ ತೆಲುಗು Industry ಮೂಲಕ ಹೋಗಿ I have done a lot of stage performances ಮತ್ತು ನೋಡಿದೀನಿ ಹಾಗಾಗಿ ನನಗೆ ಇಲ್ಲಿ ಜಡ್ಜ್ ಮಾಡೋದು ಏನು ಅನಿಸ್ತಿಲ್ಲ.Stage ಮೇಲೆ ಹೇಗೆ perform ಮಾಡಬೇಕು ಒಬ್ಬ ಒಳ್ಳೆ ಡ್ಯಾನ್ಸ್ perform er ನಲ್ಲಿ ಎಂಥ qualities ಇರ್ಬೇಕು ಅನ್ನೋದು ನನಗೆ ಗೊತ್ತಿದೆ. I love dancing, because when we are performing live dancing ಏನು ತಪ್ಪಾದರೂ ತಕ್ಷಣ ಗೊತ್ತಾಗುತ್ತೆ. ಹಾಗಾಗಿ ನನಗೆ stage ಬಗ್ಗೆ ಒಂದು ಟೋಟಲ್ ಐಡಿಯಾ ಇದೆ. ಇಲ್ಲಿ ದೊಡ್ಡವರು ಚಿಕ್ಕವರು ಅಂತ ತೀರ್ಪು ಕೊಡೋಕಾಗಲ್ಲ mainly ಬಂದು ನಾನು ಆಕ್ಟರ್ ಇರೋದ್ರಿಂದ ಡ್ಯಾನ್ಸ್ ಮಾಡೋವರ facial expression and body language ಹೇಗಿರುತ್ತೆ ಅಂತ ನೋಡ್ತೀನಿ. ಬಾಕಿ ದನ್ನು ಕೋರಿಯಾಗ್ರಾಫರ್ ಇಮ್ರಾನ್ ಸಾರ್ ನೋಡ್ತಾರೆ. I am there to watch especially body language.
ಮತ್ತೆ ಇನ್ನೊಂದು ಅಂದ್ರೆ ಮಕ್ಕಳ ಶೋ ನಲ್ಲಿ very small competition ಇರುತ್ತೆ ಅಲ್ಲಿ ಹೊಸತನವನ್ನು ನಿರೀಕ್ಷೆ ಮಾಡೋಕೆ ಸಾಧ್ಯವಾಗಲ್ಲ, ಮಕ್ಕಳು ರಜಾ ಇರೋವಾಗ ಮುದ್ದು ಮುದ್ದಾಗಿ ಡ್ಯಾನ್ಸ್ ಮಾಡಿ ಸ್ವಲ್ಪ popular ಆಗಿ ಹೋಗೋಣ ಅಂತ ಬಂದಿರ್ತಾರೆ ಆದ್ರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ programme ನಲ್ಲಿ ಹಾಗಾಗೋಲ್ಲ because ಇಲ್ಲಿ ತುಂಬಾ ಎಕ್ಸ್ಪೆರಿಮೆಂಟ್ ಮಾಡಿರ್ತಾರೆ, guys are very sereous ಒಬ್ರಿಗಿಂತ ಒಬ್ರು ಜೋರಾಗಿರ್ತಾರೆ, ಕಿಲ್ಲರ್ ಪರ್ಫರ್ಪಾಮೆನ್ಸ್ ಬರುತ್ತೆ Really It's a bigger show. ವೀಕ್ಷಕರಿಗೆ ಒಳ್ಳೆ entertainment ಕೊಡುತ್ತೆ.
***ಝೀ ಕನ್ನಡದ ಪ್ಲಾಟ್ ಫಾರ್ಮ ನೃತ್ಯ ಪಟುಗಳಿಗೆ ಎಂತಹ ಅವಕಾಶ ತಂದು ಕೊಡಬಹುದು?
-ಹಾಗೇನಿಲ್ಲ, ತುಂಬಾ ಪ್ರೊಫೆಷನಲ್ ಆಗಿ ತಗೊಂಡು ಚೆನ್ನಾಗಿ ಮಾಡೋವ್ರಿಗೆ ಖಂಡಿತ ಸಿನಿಮಾದಲ್ಲಿ ಅವಕಾಶ ಸಿಗಬಹುದು. ಆದ್ರೆ ನೆರವಾಗಿ ಇಲ್ಲಿಂದ ಸಿನಿಮಾಗೆ ಹೋಗೋಕಾಗಲ್ಲ. ಅದು ಅವರವರ ಪ್ರತಿಭೆಯನ್ನ ಆದರಿಸಿರುತ್ತೆ, ಅಂತಹ ಪ್ರತಿಭೆಯನ್ನು ಬೆಳಕಿಗೆ ತರೋ ಕೆಲಸವನ್ನು ಝೀ ಕನ್ನಡ ಮಾಡ್ತಿದೆ. ಖಂಡಿತವಾಗಿ ಆ ಮೂಲಕ ಸಿನಿಮಾದವರನ್ನು ಈ ಪ್ರತಿಭೆಗಳು ಸೆಳೆಯೋಕೆ ಝೀ ಕನ್ನಡ ಪ್ಲಾಟ್ ಫಾರ್ಮ ಸಹಾಯ ಮಾಡ್ತಿದೆ.
****ಸಿನಿಮಾಗೆ ಪ್ರವೇಶ ಆಗಿದ್ದು ಹೇಗೆ?ಅವಕಾಶಗಳು ಹೇಗಿವೆ?
-Actually ನಾನು ತಮಾಷೆಗೆ ಅಂತ ಮಾಡೆಲಿಂಗ್ ನಲ್ಲಿ ಮಾಡ್ತಿದ್ದೆ, ಆದ್ರೆ ಒಂದ್ಸಲ ಅಕಸ್ಮಿಕವಾಗಿ ಸಿನಿಮಾದಲ್ಲಿ ಮಾಡುವ ಅವಕಾಶ ಅರಸಿ ಬಂತು. ಮೊದಲಿಗೆ ತಮಿಳು ಸಿನಿಮಾದಲ್ಲಿ ಮಾಡಿದೆ ಆಮೇಲೆ ಕನ್ನಡ-ತೆಲುಗು ಆಯ್ತು. ನಾವು ಬಂದು ಉತ್ತರ ಭಾರತದ ಸಿಂಧಿ ಫ್ಯಾಮಿಲಿಯವರು. ನಮ್ ತಂದೆ ಬ್ಯುಸಿನೆಸ್ ಮನ್. ಮನೇಲಿ ಸಿನಿಮಾ ರಂಗಕ್ಕೆ ಬರೋದು ಇಷ್ಟ ಇರ್ಲಿಲ್ಲ ಮೊದಲಿಗೆ. ಆದ್ರೆ ಈಗ ಹಾಗೇನಿಲ್ಲ ಮನೇಲಿ parents support ಮಾಡ್ತಾರೆ. ಈಗಾಗಲೆ ಕನ್ನಡದಲ್ಲಿ ನಾಲ್ಕು ಸಿನಿಮಾ ಮಾಡ್ತಿದ್ದೀನಿ, ಶಿವಣ್ಣ ಜೊತೆ ಮೈಲಾರಿ ಮಾಡ್ತಿದಿನಿ, ಅದರ ಹಾಡು ಶೂಟಿಂಗ್ ಆಯ್ತು. ಈ ಸಂಜೆ ಅಂತ ಸಿನಿಮಾ ಮುಗಿದಿದೆ, ನೆನಪಿರಲಿ ಪ್ರೇಮ್ ಜೊತೆ ಹೊಸ ಸಿನಿಮಾದಲ್ಲಿ ಮಾಡೋಕೆ ಸೈನ್ ಮಾಡಿದೀನಿ. ಹೊಸ ನಾಯಕನ ಜೊತೆ "ಶ್ಲೋಕ" ಮಾಡಿದೀನಿ ಸುಮಾರು 70ಪರ್ಸೆಂಟ್ ಶೂಟಿಂಗ್ ಮುಗಿದಿದೆ.ಮಲೆಯಾಳಂ ನಲ್ಲೂ ಅವಕಾಶ ಇದೆ. ಮತ್ತೆ ಸಿಗ್ತೀನಿ ಶೂಟಿಂಗ್ ಇದೆ ಎಂದು ಒಂದೇ ಉಸುರಿಗೆ ಮಾತು ಮುಗಿಸಿದರು ಸಂಜನಾ.
ಈ ಸಂದರ್ಶನ ಲೇಖನವನ್ನು ಯಥಾವತ್ತಾಗಿ ಪ್ರಕಟಿಸಿದ thatskannada.com ನ ಸಂಪಾದಕರಾದ ಶ್ಯಾಮಸುಂದರ್ ರಿಗೆ ಕೃತಜ್ಞತೆಗಳು ನೀವೂ ಆ ಲೇಖನವನ್ನು ಈ ಲಿಂಕಿನಲ್ಲಿ ಕ್ಲಿಕ್ಕಿಸಿ ಓದಬಹುದು http://thatskannada.oneindia.in/movies/interview/2010/06/24-ganda-hendathi-sanjana-interview.html

Sunday, June 20, 2010

ವಿಶ್ವವಿದ್ಯಾಲಯಗಳ ಕರ್ಮಕಾಂಡ ಎಲ್ಲಿಗೆ ಬಂತು?

ಸೇವಾ ವಲಯದಲ್ಲಿರುವ ಶಿಕ್ಷಣ ಕ್ಷೇತ್ರ ಸುಧಾರಿಸಲಾಗದಷ್ಟು ಹದಗೆಟ್ಟಿದೆ, ಶಿಕ್ಷಣ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು ಒಬ್ಬ ಸೂಕ್ಷ್ಮ ಮನಸ್ಥಿತಿಯ ಮಾಜಿ ಶಾಸಕರು. ಹೌದು ಅವರ ಮಾತಿನಲ್ಲಿ ಸತ್ಯವಿದೆ ಅನಿಸಿತು. ಇವತ್ತು ನಮ್ಮ ಆಶಯಗಳನ್ನು ಸಾಕಾರ ಮಾಡುವ ನಿಟ್ಟಿನಲ್ಲಿ, ನಾಗರೀಕತೆಯ ಹೆಜ್ಜೆ ಗುರುತು ಮೂಡಿಸುವ ದಿಸೆಯಲ್ಲಿ ಅತ್ಯಂತ ಮಹತ್ವದ ಹೊಣೆಗಾರಿಕೆ ಹೊತ್ತಿರುವುದು ಶಿಕ್ಷಣ ಕ್ಷೇತ್ರವೇ ಆಗಿದೆ. ಇವೇ ಕೆಟ್ಟು ಕೆರ ಹಿಡಿದರೆ ಏನು ಮಾಡಬೇಕು? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ನಂಬಿಕೆ ಕಳೆದು ಕೊಂಡರೆ ಆತ್ಮ ವಿಶ್ವಾಸವನ್ನು ಹುಡುಕುವುದೆಲ್ಲಿ? ಬದುಕಿನ ಹಾದಿಯನ್ನು ನಿರೂಪಿಸುವ ಸಂಸ್ಥೆಗಳೇ ಅಡ್ಡಹಾದಿ ಹಿಡಿದರೆ ಹೇಗೆ? ಅದರ ನಿರ್ವಾಹಕರು ದಿಕ್ಕು ತಪ್ಪಿದರೆ ಎಚ್ಚರಿಸುವವರಾರು? ಇಂತಹದ್ದೊಂದು ಸ್ಥಿತಿಗೆ ಕಾರಣಗಳೇನು? ಪರಿಸ್ಥಿತಿ ಸುಧಾರಣೆ ಹೇಗೆ ಸಾಧ್ಯವಾಗಬಹುದು? ಎಂಬೆಲ್ಲಾ ಪ್ರಶ್ನೆಗಳು ಹುಟ್ಟುವುದು ಸಹಜ.
ಮೊನ್ನೆ ಮೊನ್ನೆ ಮೈಸೂರು ವಿವಿ ಯ ಮಾಜಿ ಕುಲಪತಿ ಜೆ ಶಶಿಧರ ಪ್ರಸಾದ್ ವಿರುದ್ದ ಭ್ರಷ್ಟಾಚಾರ-ಸ್ವಜನ ಪಕ್ಷಪಾತ, ಅಕ್ರಮ ನೇಮಕಾತಿ ಕುರಿತು ಕೇಸು ದಾಖಲಾಗಿದೆ. ಈಗ್ಯೆ 10ವರ್ಷಗಳಿಂದ ವಿವಿ ಹಗರಣಗಳು ಒಂದಿಲ್ಲೊಂದು ರೀತಿಯಲ್ಲಿ ಬಯಲಿಗೆ ಬರುತ್ತಿದ್ದವಾದರೂ ಕ್ರಿಮಿನಲ್ ಕೇಸು ದಾಖಲಾಗುವ ಮಟ್ಟಿಗೆ ಹೋಗಿರಲಿಲ್ಲ. ಈ ವಿಚಾರದಲ್ಲಿ ರಾಜ್ಯಪಾಲರ ದಿಟ್ಟಕ್ರಮ ಮೆಚ್ಚುವಂತಹುದು. ಸರಕಾರಗಳ ಅಂಕೆಗೆ ಸಿಲುಕದೇ ಅಟಾನಮಸ್ ಬಾಡಿ ಎಂಬ ಹಣೆಪಟ್ಟಿಯೊಂದಿಗೆ ಕಾರ್ಯ ನಿರ್ವಹಿಸುವ ವಿವಿಗಳು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ ಬಿಡಿ. ನೋಡಿ ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣನೀಡುವ ದಿಸೆಯಲ್ಲಿ ಸುಮಾರು 21 ಅಧಿಕೃತ ವಿವಿಗಳು ಕಾರ್ಯನಿರ್ವಹಿಸುತ್ತವೆ. 8ಕ್ಕೂ ಹೆಚ್ಚು ಖಾಸಗಿ ವಾರ್ಸಿಟಿಗಳಿವೆ. ಈ ಪೈಕಿ ವಿಜಾಪುರದಲ್ಲಿ ಸ್ಥಾಪನೆಗೊಂಡ ಮಹಿಳಾ ವಿವಿ ಯಲ್ಲಿ ಅರ್ಹತೆಯಿಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ, ಹಲವು ಬಾಬ್ತುಗಳಿಗೆ ಸಿಕಾಪಟ್ಟೆ ಖರ್ಚು ತೋರಿಸಲಾಗಿದೆ ಎಂಬ ಆರೋಪವಿದೆ. ದಾವಣಗೆರೆ ವಿವಿಯಲ್ಲಿ ಅರ್ಹತೆಯಿಲ್ಲದವರನ್ನು ಕುಲಪತಿಗಳನ್ನಾಗಿ ಮಾಡಲಾಗಿದೆ,ಅಕ್ರಮ ನೇಮಕಾತಿ ಹಗರಣ, ಮೈಸೂರು ವಿವಿಯಲ್ಲಿ ಸ್ವಜನ ಪಕ್ಷಪಾತ, ಅಕ್ರಮ ನೇಮಕಾತಿ, ದುಂದುವೆಚ್ಚ, 400ಕ್ಕೂ ಅಧಿಕ ನಕಲಿ ಪದವಿ ಸರ್ಟಿಫಿಕೇಟ್ ಪತ್ತೆ, ಶಿವಮೊಗ್ಗ ವಿವಿಯಲ್ಲಿ ಪರೀಕ್ಷಾ ಅಕ್ರಮ , ನಕಲಿ ಅಂಕಪಟ್ಟಿ ಹಂಪೆ ಕನ್ನಡ ವಿವಿಯಲ್ಲಿ ಕೋಟಿ ಅನುದಾನ ಕೊಟ್ಟರು ಪ್ರಯೋಜನವಿಲ್ಲದ ಕಾರ್ಯ, ತುಮಕೂರು ವಿವಿ ಯಲ್ಲಿ ಪದವಿ ಪ್ರವೇಶ ಕುರಿತ ಗೋಂದಲ, ಬೆಂಗಳೂರು ವಿವಿಯಲ್ಲಿ ಜಾತಿ ರಾಜಕೀಯ, ಸ್ವಜನ ಪಕ್ಷಪಾತ, ಪರೀಕ್ಷಾ ಅಕ್ರಮ, ನೇಮಕಾತಿ ಹಗರಣ, ಸೆಕ್ಸು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದರದ್ದೇ ಒಂದು ಚರಿತ್ರೆಯಾದೀತು.
ರಾಜ್ಯದ 21ವಿವಿಗಳ ಪೈಕಿ 15ಕ್ಕೂ ಹೆಚ್ಚು ಮಂದಿ ಲಿಂಗಾಯಿತ ವರ್ಗದ ಜನರ ಉಪಕುಲಪತಿಗಳಾಗಿದ್ದರೆ, 2ರಲ್ಲಿ ಪ.ಜಾ, 1ರಲ್ಲಿ ಒಕ್ಕಲಿಗ ಮತ್ತಿತರ ಜಾತಿಗಳವರು ಸ್ಥಾನ ಪಡೆದಿದ್ದಾರೆ ಅಂದರೆ ಉಪ ಕುಲಪತಿಯ ಸ್ಥಾನಕ್ಕೂ ಜಾತಿ ಲಾಬಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿಯಬಹುದು. ಪ್ರಸಕ್ತ ದಿನಗಳಲ್ಲಿ ಸರ್ಕಾರಿ ವಿವಿಗಳಲ್ಲಿ ಇರುವ ವಿಷಯವಾರು ಕೇಂದ್ರಗಳಿಗೆ ವರ್ಷಕ್ಕೊಬ್ಬರು ಜಾತಿಯಾಧರಿಸಿ ಮುಖ್ಯಸ್ಥರ ಸ್ಥಾನವನ್ನು ಅಲಂಕರಿಸುತ್ತಾರೆ. ಇದೇ ಮಾನದಂಡವನ್ನು ವಿದ್ಯಾರ್ಥಿಗಳಿಗೂ ಅನ್ವಯಿಸಿ ಜಾತಿವಾರು ಅಂಕ, Rank , ಚಿನ್ನದ ಪದಕಗಳನ್ನು ನೀಡಲಾಗುತ್ತದೆ, ಇಲ್ಲಿ ಪ್ರತಿಭೆಗೆ ಮನ್ನಣೆಯಿಲ್ಲ! ಪ್ರೊಫೆಸರನಿಗೆ, ಅದ್ಯಾಪಕನಿಗೆ ಓಲೈಸುವ ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರಾಶಸ್ತ್ಯ. ಎಂಫಿಲ್, ಪಿಎಚ್ ಡಿ ಮಾಡಲು ಬರುವ ವಿದ್ಯಾರ್ಥಿಗಳ ಗೋಳಂತೂ ಹೇಳ ತೀರದು, ಸದರಿ ಪದವಿಗಳನ್ನು ಪಡೆಯುವ ವೇಳೆಗೆ ಹೆಣ ಹೋಗುತ್ತದೆ. ವಿದ್ಯಾರ್ಥಿನಿಯಾಗಿದ್ದರಂತೂ ತನು-ಮನ-ಧನ ಎಲ್ಲವನ್ನು ಅರ್ಪಿಸ ಬೇಕಾದ ಸನ್ನಿವೇಶಗಳೂ ಹಲವರಿಗೆ ಎದುರಾಗಿವೆ. ಇಷ್ಟೆಲ್ಲ ಹೈರಾಣಗಳಿಗೆ ಸಿಲುಕಿ ಸುಧಾರಿಸಿ ಕೊಳ್ಳಲಾಗದವರು ಪದವಿಯನ್ನೇ ಮರೆತ ಸಂಧರ್ಭಗಳೂ ಇವೆ. ಎಸ್ ಸಿ /ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿ ವಿವಿಗಳು ಕಡ್ಡಾಯವಾಗಿ ವರ್ಷದಲ್ಲಿ ಒಬ್ಬರಿಗೆ ಪಿಎಚ್ಡಿ ಮಾರ್ಗದರ್ಶನ ನೀಡುವ ಆದೇಶವಿದೆ ಹಾಗಾಗಿ ಅದೊಂದು ಅವಕಾಶ ಬಿಟ್ಟರೆ ಸದರಿ ಜಾತಿಯವರಿಗೆ ಪಿ ಎಚ್ ಡಿ ಪದವಿಗೆ ಅವಕಾಶ ಲಭಿಸುವುದು ಕಡಿಮೆ. ಇತ್ತೀಚೆಗೆ ಬೆಂಗಳೂರು ವಿವಿಗೆ ಸರ್ಕಾರ ಇಬ್ಬರು ಪ.ಜಾತಿಯ ರಿಜಿಸ್ಟ್ರಾರ್ ಗಳನ್ನು ನೇಮಿಸಿತು ಆದರೆ ವಿವಿಯ ಆಡಳಿತ ಅವರಿಗೆ ಅವಕಾಶವನ್ನೇ ನೀಡಲಿಲ್ಲ. ಮುಂದೆ ಇದು ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಸದರಿ ಹುದ್ದೆಗಳನ್ನೇ ವಿವಿ ರದ್ದು ಮಾಡಿತು. ಇನ್ನೂ ರಾಜ್ಯದಲ್ಲಿರು ವ 8ಕ್ಕೂ ಹೆಚ್ಚಿನ ಖಾಸಗಿ ವಿವಿಗಳು ಬಹುತೇಕ ರಾಜ್ಯದ ಪ್ರಬಲ ರಾಜಕಾರಣಿಗಳ ಅಂಕೆಯಲ್ಲಿವೆ. ಅಲ್ಲಿ ಶಿಕ್ಷಣವನ್ನು ವ್ಯವಸ್ಥಿತವಾಗಿ ಮಾರಾಟಕ್ಕಿಡಲಾಗಿದೆ, ಮಂಗಳೂರಿನ ಯಾನೆ ಪೋಯಿ ಎಂಬ ವಿವಿ ಕಳೆದ ಎರಡು ವರ್ಷಗಳಿಂದ ಸರ್ಕಾರ ಪ್ರವೇಶ ಪರೀಕ್ಷೆಯ ಮೂಲಕ ಪ್ರತಿಭಾವಂತರನ್ನು ವೃತ್ತಿ ಶಿಕ್ಷಣ ಪ್ರವೇಶಕ್ಕೆ ಆಯ್ಕೆ ಮಾಡಿದ್ದರೂ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಖಾಸಗಿ ವಿವಿಗಳು ಭಾರೀ ಮೊತ್ತದ ಹ ಣ ಪಡೆದು ಎಂಫಿಲ್, ಹಾಗೂ ಪಿಎಚ್ ಡಿ ಪದವಿ ಪ್ರಧಾನ ಮಾಡುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ವೃತ್ತಿ ಶಿಕ್ಷಣ ಪ್ರವೇಶದ ಸಂಧರ್ಭದಲ್ಲ ಸರ್ಕಾರವನ್ನೇ ಹೇಳಿದಂತೆ ಕೇಳಿಸುವ ಮಟ್ಟಿಗೆ ಖಾಸಗಿ ವಿವಿಗಳ ಲಾಬಿ ಬೆಳೆದು ನಿಂತಿದೆ. ಆದರೆ ಕೇಳುವವರು ಯಾರು? ನ್ಯಾಯವನ್ನು ಹುಡುಕುವುದೆಲ್ಲಿ?
ಜ್ಞಾನ ಆಯೋಗದ ಶಿಫಾರಸ್ಸಿನಂತೆ ಉನ್ನತ ಶಿಕ್ಷಣ ದಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹಣದ ಹೊಳೆಯನ್ನೆ ಹರಿಸುತ್ತಿದೆ. 2020ರ ವೇಳೆಗೆ ಭಾರತವನ್ನು ಸೂಪರ್ ಪವರ್ ಮಾಡು ವನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ವಿವಿಗಳಿಗೆ ನೀಡಲಾಗುತ್ತಿದ. ಐ ಎ ಎಸ್ ಅಧಿಕಾರಿಗ ಳರೇಂಜಿಗೆ ಪದವಿ ಕಾಲೇಜುಗಳ ಅದ್ಯಾಪಕರ ವೇತನವನ್ನ ಏರಿಸಲಾಗಿದೆ. ಸುಸಜ್ಜಿತ ಕಟ್ಟಡಗಳಿಗೆ ಅನುದಾ ನನೀಡಲಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಹಿತ ಕಾಯುವ ದೃಷ್ಟಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿ ವಿಕಸನದ ಮಾದರಿಯಲ್ಲ ವಿವಿ ಧರೀತಿಯ ಶಿಕ್ಷಣ ನೀಡಲು ಯುಜಿಸಿ ಅನುದಾನ ನೀಡಲಾಗುತ್ತಿದೆ. ಇವತ್ತು ಎಷ್ಟು ಕಾಲೇಜುಗಳಲ್ಲಿ ಇವುಗಳ ಬಳಕೆಯಾಗುತ್ತಿದೆ ಕೇಳುವವರಾರು?ಈ ಬಗ್ಗೆ ಎಷ್ಟು ಜನರಿಗೆ, ವಿದ್ಯಾರ್ಥಿಗಳಿಗೆ ತಿಳುವಳಿಕೆ ಇದೆ? ಈ ರೀತಿ ಶಿಕ್ಷಣ ವ್ಯವಸ್ಥೆಯೇ ಹದಗೆಟ್ಟರೆ ಭವಿಷ್ಯದ ಭಾರತ ದಕಲ್ಪನೆ ಏನು? ನೀವೇ ಹೇಳಿ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...