Thursday, April 8, 2010

ಕನಸುಗಳು ಬೇಕು, ನಿರೀಕ್ಷೆಗಳು ಬೇಡ:ಛಾಯಾಸಿಂಗ್



ಒಂದು ಸಿನಿಮಾ ಪಾತ್ರ ಆಪ್ತವಾಗಬೇಕು ಅನಿಸಬೇಕಾದರೆ, ಸದರಿ ಪಾತ್ರಗಳು ನಮ್ಮ ಮಧ್ಯೆ ಇರಬೇಕು ಮತ್ತು ಆ ಪಾತ್ರಕ್ಕೆ ಜೀವಂತಿಕೆ ತುಂಬುವ ಅಭಿನಯ ಬೇಕೇ ಬೇಕು. ಈ ನಿಟ್ಟಿನಲ್ಲಿ ನನ್ನನ್ನು ಸೂಜಿಗಲ್ಲಿನಂತೆ ಸೆಳೆದದ್ದು ಪಂಚಭಾಷಾ ತಾರೆ ಛಾಯಾಸಿಂಗ್. ಕನ್ನಡ,ತಮಿಳು, ತೆಲುಗು, ಮಲೆಯಾಳಂ ಮತ್ತು ಬೋಜ್ ಪುರಿ ಭಾಷೆಯ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಛಾಯಾಸಿಂಗ್ ಇದುವರೆಗೂ ಸರಾಸರಿ 50ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಹೊಸ ತಮಿಳು ಚಿತ್ರವೊಂದು ಮುಂದಿನವಾರ ತೆರೆಗೆ ಬರುತ್ತಿದೆ. ಕನ್ನಡದಲ್ಲೂ ಅವಕಾಶಗಳು ಬರುತ್ತಿವೆ. ಸಧ್ಯ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಕುಣಿಯೋಣು ಭಾರಾ ಕಾರ್ಯಕ್ರಮದ ತೀರ್ಪುಗಾರರಾಗಿ ಜನಪ್ರಿಯರಾಗಿದ್ದಾರೆ. ಮೊನ್ನೆ ಅವರೊಂದಿಗೆ ಮಾತನಾಡಿದೆ. ಅವರ ಬಗೆಗೆ ಒಂದಿಷ್ಟು ಮಾಹಿತಿ ಹಾಗೂ ಮಾತು ಇಲ್ಲಿದೆ ಒಪ್ಪಿಸಿ ಕೊಳ್ಳಿ.

ಅದು ಸಂಪ್ರದಾಯಸ್ಥ ಕುಟುಂಬ ಹೆಣ್ಣು ಮಕ್ಕಳನ್ನು ನಾಟಕ-ಸಿನಿಮಾಗಳಿಂದ ದೂರವಿಡುವ ಜೊತೆಗೆ ನಿರ್ದಿಷ್ಠ ಚ್ಔಕಟ್ಟಿನಲ್ಲೇ ಸಾಗಬೇಕು ಎಂಬ ನಿಯಮ ಅಲ್ಲಿತ್ತು. ಹೀಗಿರುವಾಗ ಒಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ರಸ್ನಾ ಜಾಹೀರಾತು ಆ ಮನೆ ಮಂದಿಯವರಿಗೆಲ್ಲಾ ಇಷ್ಟವಾಗಿತ್ತು. ಅಮ್ಮನಿಗೆ ಆ ಜಾಹೀರಾತು ನೋಡಿದಾಗಲೆಲ್ಲ ತನ್ನ ಮಗಳು ಸಹಾ ಇಂತಹದ್ದೊಂದು ಜಾಹೀರಾತಿನಲ್ಲಿ ಬರಬೇಕಿತ್ತು ಅಂತ ಅನಿಸ್ತಿತ್ತು. ಮಗಳು ಆಗಿನ್ನೂ ಬೆಂಗಳೂರಿನ ಸೇಂಟ್ ಲೂರ್ಡ್ ಶಾಲೆಯಲ್ಲಿ ಕಲಿಯುತ್ತಿದ್ದಳು. ಅಕೆಗೆ ನೃತ್ಯವೆಂದರೆ ಪಂಚಪ್ರಾಣ. ಶಾಲೆಯಲ್ಲಿ ನಡೆಯುವ ಪ್ರತೀ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಆಕೆಗೆ ಅಗ್ರಸ್ಥಾನ. ಆ ಬಾಲೆ ಮುಂದೆ ಕಾಲೇಜು ಶಿಕ್ಷಣಕ್ಕೆ ಸೇರ್ಪಡೆಯಾಗಿದ್ದು ಶ್ರೀ ಅರಬಿಂದೋ ಶಾಲೆಗೆ. ಸದಾ ತುಡಿತದ ಉತ್ಸಾಹದ ಚಿಲುಮೆಯಾಗಿದ್ದ ಆಕೆ ತುಸು ತುಂಟ ಸ್ವಭಾವದವಳು. ಒಮ್ಮೆ ಪತ್ರಿಕೆಯೊಂದರಲ್ಲಿ ನಟ-ನಟಿಯರು ಬೇಕಾಗಿದ್ದಾರೆ ಎಂಬ ಜಾಹೀರಾತಿನೆಡೆಗೆ ಕಣ್ಣಾಡಿಸಿದ ಆಕೆ ಹುಡುಗಾಟಕ್ಕೆ ಅರ್ಜಿ ಸಲ್ಲಿಸಿದ್ದರು. ಸಂದರ್ಶನಕ್ಕೆ ಕರೆಯೂ ಬಂತು. ದೂರದರ್ಶನದವರು ನಿರ್ಮಿಸುತ್ತಿದ್ದ ಸಮಾಗಮ ಧಾರವಾಹಿ ಅದು. ಸ್ಕ್ರೀನ್ ಟೆಸ್ಟ್ ನಲ್ಲಿ ಆಕೆಗೆ ಅಭಿನಯ ಬರೊಲ್ಲ ಅಂತ ಸಾರಸಗಟಾಗಿ ತಿರಸ್ಕರಿಸಲಾಯಿತು. ಇದರಿಂದ ವಿಚಲಿತಳಾಗದ ಆಕೆ ತನ್ನ ಪ್ರಯತ್ನವನ್ನು ಮುಂದುವರೆಸಿದರು. ಮುಂದೆ ಅವರು ಈಟಿವಿ ಯ ಪ್ರೇಮಕಥೆಗಳು, ಸರೋಜಿನಿ, ಹದ್ದಿನ ಕಣ್ಣು ಹೀಗೆ ಸಾಲು ಸಾಲು ಧಾರವಾಹಿಗಳಲ್ಲಿ ಅವಕಾಶ ಗಿಟ್ಟಿಸಿದಳು. ಅದೊಂದು ದಿನ ಕಲಾತ್ಮಕ ಚಿತ್ರಗಳ ನಿರ್ದೇಶಕ ಪಿ ಶೇಷಾದ್ರಿ, "ಮುನ್ನುಡಿ" ಚಿತ್ರಕ್ಕಾಗಿ ನಾಯಕಿಯ ಮಗಳ ಪಾತ್ರಕ್ಕೆ ಅನ್ವೇಷಣೆಯಲ್ಲಿದ್ದರು. ಆಗ ಪರಿಚಿತರ ಮೂಲಕ ಅವರ ಸಂಪರ್ಕಕ್ಕೆ ಬಂದ ಆಕೆ ಮುನ್ನುಡಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದರು. ತನ್ನ ಸ್ನಿಗ್ಧ ಸೌಂದರ್ಯ ಹಾಗೂ ತುಂಟತನದ ಹಾವಭಾವಗಳಿಂದ 'ಅಯ್ಯೋ ಇವಳು ನಮ್ಮ ಮನೆ ಹುಡುಗಿ ಅಲ್ವಾ' ಎಂದು ಉದ್ಘರಿಸುವಂತೆ ಕನ್ನಡ ಚಿತ್ರ ರಸಿಕರ ಮನಸೂರೆಗೈದುಬಿಟ್ಟರು. ಅವರೇ ನಮ್ಮ ಛಾಯಾಸಿಂಗ್.

ಛಾಯಾ ಸಿಂಗ್ ಪ್ರಬುದ್ಧ ಅಭಿನೇತ್ರಿ. ಇಂದ್ರಜಿತ್ ಲಂಕೇಶ್ ನಿರ್ದೇಶನದ 'ತುಂಟಾಟ', ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದ ಅವರು, ಕನ್ನಡ ಚಿತ್ರರಂಗಕ್ಕೆ ದೊರಕಿದ ಅಪೂರ್ವ ಪ್ರತಿಭೆಯೂ ಹೌದು.ದಿನೇಶ್ ಬಾಬು ನಿರ್ದೇಶನದ ಚಿಟ್ಟೆ ಚಿತ್ರದಲ್ಲಿ ಹಿರಿಯ ನಟ ಅನಂತನಾಗ್ ರೊಂದಿಗೆ ನಟಿಸಿ ಸೈ ಎನಿಸಿಕೊಂಡ ಛಾಯಾಸಿಂಗ್ , ದಿವಂಗತ ಡಾವಿಷ್ಣುವರ್ಧನ್ ರಿಂದಲೂ ಇದೊಂದು ಅಪ್ಪಟ ಪ್ರತಿಭೆ ಎಂಬ ಪ್ರಶಂಸೆ ಪಡೆದಿದ್ದರು. ಆಮೇಲೆ ಅವರಿಗೆ ತಮಿಳಿನಲ್ಲಿ ಅವಕಾಶಗಳು ಬಂದವು, ಧನುಷ್ ಜೊತೆ ತಿರುಡಾ ತಿರುಡಿ' ಯಲ್ಲಿ ನಟಿಸಿದರು. ಅದರಲ್ಲಿನ ಮದರಾಸ ಹಾಡಿಗೆ ಮಾಡಿದ ನೃತ್ಯ ಅವರ ಕೆರಿಯರ್ ಗ್ರಾಫ್ ಅನ್ನು ಏರಿಸಿ ಬಿಟ್ಟಿತು.ವಿಕ್ರಂ, ಸೂರ್ಯ, ವಿಜಯ್ ಹೀಗೆ ತಮಿಳಿನ ಎಲ್ಲಾ ಸೂಪರ್ ಹೀರೋಗಳ ಜೊತೆಗೂ ಛಾಯಾ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನಲ್ಲಿ ಎನ್ ಟಿ ಆರ್ ಮೊಮ್ಮಗ ನ ಜೊತೆಗೆ 'ನೋ', ಮಲೆಯಾಳಂನಲ್ಲಿ 'ಪೊಲೀಸ್' ಸೇರಿದಂತೆ ಎರಡು ಚಿತ್ರಗಳು, ಬೋಜ್ ಪುರಿ ಭಾಷೆಯಲ್ಲಿ ಒಂದು ಹೀಗೆ 5ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ಛಾಯಾಸಿಂಗ್ ಪಂಚಭಾಷಾ ತಾರೆಯಾಗಿದ್ದಾರೆ. ಈ ಮಧ್ಯೆ ಕನ್ನಡದಲ್ಲಿ ಇಷ್ಟವಾಗುವ ಕಥೆಗಳು/ಪಾತ್ರಗಳು ಸಿಗದಿದುದರಿಂದ ಕೊಂಚ ಕಾಲ ಬಿಡುವಾಗಿದ್ದರಂತೆ. ಆದರೆ ಇದನ್ನೇ ತಪ್ಪಾಗಿ ತಿಳಿದುಕೊಂಡ ಕೆಲವು ಪತ್ರಕರ್ತರು ಆಕೆ ಇನ್ನು ಕನ್ನಡ ಚಿತ್ರಗಳಲ್ಲಿ ನಟಿಸಲ್ವಂತೆ, ಅವರು ಸತ್ತೇ ಹೋದರು ಎಂದೆಲ್ಲ ಇಂಡಸ್ಟ್ರಿಯಲ್ಲಿ ಸುದ್ದಿ ಹಬ್ಬಿಸಿ ಬಿಟ್ಟಿದ್ದರು. ಇಂತಹ ಬೆಳವಣಿಗೆಗಳೆಲ್ಲ ಛಾಯಾ ಅವರಿಗೆ ಬೇಸರ ಮೂಡಿಸಿದೆ. ನೃತ್ಯದ ಬಗ್ಗೆ ಹೆಚ್ಚು ಒಲವು ಇರಿಸಿಕೊಂಡ ಛಾಯಾಸಿಂಗ್ ಇದೀಗ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಕುಣಿಯೋಣು ಭಾರಾ ದಲ್ಲಿ ತೀರ್ಪುಗಾರರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರು ನಟಿಸಿದ ಬಹುತೇಕ ಚಿತ್ರಗಳಲ್ಲಿಯೂ ಬರುವ ಹಾಡಿನ ನೃತ್ಯಗಳಲ್ಲಿ ಅವರಿಗೆ ಅವರೇ ಸಾಟಿಯಾಗುವಂತೆ ನರ್ತಿಸಿದ್ದಾರೆ. ಅವರ ನೃತ್ಯಕ್ಕೆ ಅವರೇ ಸಾಟಿ ಎನಿಸುವಷ್ಟು. ಇದಕ್ಕೆ ತಮಿಳಿನ ತಿರುಡಾ ತಿರುಡಿ ಹಾಗೂ ಕನ್ನಡದ ಸಖ-ಸಖಿ ಉತ್ತಮ ಉದಾಹರಣೆ ಆಗಬಹುದು.


  • ಬಣ್ಣದ ಬದುಕಿನ ಪ್ರವೇಶ ಹೇಗಾಯ್ತು ?
- ನಾವು ಮೂಲತ: ಉತ್ತರಪ್ರದೇಶದವರು. ಆದ್ರೆ 25-30ವರ್ಷಗಳ ಹಿಂದೆ ನಮ್ಮ ಕುಟುಂಬ ಬೆಂಗಳೂರಿಗೆ ವಲಸೆ ಬಂದು ನೆಲೆಸಿದೆ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ, ಹಾಗಾಗಿನಾನು ಕನ್ನಡಿಗಳು , ಅದು ಹೆಮ್ಮೆಯ ವಿಚಾರವೂ . ತಂದೆ ಗೋಪಾಲ್ ಸಿಂಗ್ ಬ್ಯುಸಿನೆಸ್ ಮನ್, ತಾಯಿ ಚಮನ್ ಲತಾ ಗೃಹಿಣಿ. ಅಣ್ಣ ಬ್ಯುಸಿನೆಸ್ ಮಾಡ್ತಾರೆ. ನಮ್ಮದು ತುಂಬಾ ಸಂಪ್ರದಾಯಸ್ಥರ ಕುಟುಂಬ. ನಾನು ಸಿನಿಮಾಕ್ಕೆ ಬರೋದು ಅಪ್ಪನಿಗೆ ಬಿಲ್ ಕುಲ್ ಇಷ್ಟ ಇರ್ಲಿಲ್ಲ, ಆದ್ರೆ ಅಮ್ಮ ಸಪೋರ್ಟ್ ಮಾಡೋರು. ಜಾಹೀರಾತು ನೋಡಿ ಅರ್ಜಿ ಸಲ್ಲಿಸಿದ್ದೆ, ನಿರಾಶೆ ಆಯ್ತು ಮುಂದೆ ಶೇಷಾದ್ರಿ ಅವರ ಮುನ್ನುಡಿಯಲ್ಲಿ ಚಿತ್ರರಂಗ ಪ್ರವೇಶ ಮಾಡಿದೆ. ಕನ್ನಡದಲ್ಲಿ ತುಂಟಾಟ, ಚಿಟ್ಟೆ, ರೌಡಿ ಅಳಿಯ, ಪ್ರೀತಿಸ್ಲೇ ಬೇಕು, ಆಕಾಶ ಗಂಗೆ, ಸಖ-ಸಖಿ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಬೇರೆ ಬಾಷೆಗಳಲ್ಲೂ ಅನೇಕ ಹೆಸರಾಂತ ನಟರ ಜೊತೆ ನಟಿಸಿದ್ದೇನೆ. ಅದೊಂದು Wonderful Experience. ಸಿನಿಮಾಕ್ಕೆ ಬಂದ ಹೊಸದರಲ್ಲಿ ಅಪ್ಪ ಜೊತೆಗೆ ಬರೋರು. ಆಗ ನಾವು ಅಂದಕೊಂಡಂಗೆ ಇಲ್ಲ, ಇಲ್ಲಿಯೂ ವಾತಾವರಣ ಚೆನ್ನಾಗಿದೆ, ಅದು ಬಳಸಿಕೊಂಡ ಹಾಗೆ, ನಡೆದು ಕೊಂಡ ಹಾಗೆ ಅನ್ನೋದು ಗೊತ್ತಾಯಿತು. ಈಗ ಮನೇನಲ್ಲಿ ನನ್ನ ಸಿನಿಮಾ ಬದುಕಿಗೆ ಸಪೋರ್ಟು ಮಾಡ್ತಾರೆ.
  • ಸಿನಿಮಾದಲ್ಲಿ ಗಾಡ್ ಫಾದರ್ ಯಾರು? ನಿಮ್ಮ ಸಿನಿಮಾಗಳು ಈಚೆಗೆ ಕಡಿಮೆ ಆಗಿದೆಯಲ್ವಾ?
-ನನಗೆ ಸಿನಿಮಾದಲ್ಲಿ ಗಾಡ್ ಫಾದರ್ ಅಂತ ಯಾರೂ ಇಲ್ಲ, ನನ್ನ ಪ್ರಯತ್ನಗಳೇ ಮುಖ್ಯವಾಗಿ ಅವಕಾಶಗಳು ಒದಗಿ ಬಂದ್ವು. ನನಗೆ ಅವಕಾಶಗಳು ಬರ್ತಿಲ್ಲ ಅಂತ ಅಲ್ಲ, ಪಾತ್ರಕ್ಕೆ scope ಇಲ್ಲದಿದ್ದರೆ ಅದನ್ನ ಒಪ್ಪಕೊಳ್ಳೋದಾದ್ರು ಹೇಗೇ ಹೇಳಿ? ಹೀಗೆ ಬಂದು ಹಾಗೆ ಹೋಗುವಂತಹ ಅವಕಾಶಗಳು ಬೇಡ. ಮೊದಲಿಗೆ ಚಿತ್ರದ ಕಥೆ, ಚಿತ್ರಕಥೆ ನೋಡ್ತೀನಿ. ಇಷ್ಟ ಆದ್ರೆ ಮಾತ್ರ ಮಾಡ್ತೀನಿ. ಇದುವರೆ 5ಭಾಷೆಗಳಿಂದ ಸರಿಸುಮಾರು 50ಚಿತ್ರಗಳಲ್ಲಿ ನಟಿಸಿದ್ದೀನಿ.. ಮುಂದೇನೂ ನಟಿಸುತ್ತೇನೆ. ತಮಿಳಿನಲ್ಲಿ ನಾನು ನಾಯಕಿಯಾಗಿರುವ ಚಿತ್ರವೊಂದು ಈ ವಾರ ತೆರೆಗೆ ಬರ್ತಿದೆ. ಕನ್ನಡದಲ್ಲೂ ಅವಕಾಶಗಳಿವೆ. ಮಹಿಳೆ ನಿರ್ದೇಶಕರಾಗಿರುವ ಚಿತ್ರ ಮತ್ತೊಂದು ಚಿತ್ರ ಮಾತುಕಥೆಯ ಹಂತದಲ್ಲಿದೆ.
  • ಹಿರಿತೆರೆ ಹಾಗೂ ಕಿರುತೆರೆಯ ಅನುಭವ ಹೇಗಿದೆ?
-ಹಿರಿತೆರೆ ಅಂದ್ರೆ ಎತ್ತರದ ಅವಕಾಶ, ಕಿರುತೆರೆ ಅಂದ್ರೆ ವಿಶಾಲವಾದ ಅವಕಾಶ. ಆ ಅವಕಾಶಗಳನ್ನು ನಾವು ಹೇಗೆ ಬಳಸಿಕೊಳ್ತೀವೆ ಅನ್ನೋದ್ರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತೆ. ಅದು ನಮ್ಮ ಅಸ್ತಿತ್ವದ ಪ್ರಶ್ನೆಯೂ ಹೌದು. ಎರಡೂ ಕಡೆಯ ಅವಕಾಶವನ್ನೂ ಸಮರ್ಪದಕವಾಗಿ ಬಳಸಿಕೊಳ್ಳುವ ಬಗ್ಗೆ ಮಾತ್ರ ಯೋಚಿಸುತ್ತೇನೆ.
  • ನಿಮ್ಮ ಮದುವೆ ಬಗ್ಗೆ ಗಾಸಿಪ್ ಹುಟ್ಟಿತ್ತಲ್ಲಾ ಏನಿದೆಲ್ಲಾ?
- ನೋಡಿ ಇದೇ ನನಗೆ ಬೇಜಾರಾಗೋದು. ಒಂದ್ಸಾರಿ ನಾನು ಶೂಟಿಂಗ್ ಸೆಟ್ ನಲ್ಲಿರೊವಾಗ ನನ್ನ ಫ್ರೆಂಡ್ಸ್ ಫೋನ್ ಮಾಡಿ ನಿಂದು ಮದ್ವೆ ಆಯ್ತಂತೆ , ಹೈದರಾಬಾದ್ ಹುಡುಗ ಸಾಪ್ಟ್ ಇಂಜಿನಿಯರ್ ಅಂತೆ ಅಂದ್ರು. ಆಗ ನಾನು ನಕ್ಕುಬಿಟ್ಟೆ, ಯಾಕೆ ಇಂತಹ ರೂಮರ್ ಗಳು ಹಬ್ಬುತ್ತವೋ ತಿಳಿಯುತ್ತಿಲ್ಲ. ನಾನು ಅದನ್ನೆಲ್ಲಾ ಸೀರಿಯಸ್ ಆಗಿ ತಗೊಳಲ್ಲ. ಪತ್ರಕರ್ತರು ಕೂಡ ಿಂತಹ ವಿಚಾರಗಳ ಬಗ್ಗೆ ಪೂರ್ಣ ವಿಚಾರ ತಿಳಿದು ಕೊಂಡು ಬರೆದ್ರೆ ಒಳ್ಳೆದಲ್ವಾ? ಇದೆಲ್ಲಕ್ಕಿಂತ ನನಗೆ ಶಾಕಿಂಗ್ ನ್ಯೂಸ್ ಅಂದ್ರೆ ನಾನು ಸತ್ತು ಹೋಗಿಬಿಟ್ಟಿದೀನಿ ಅಂತ ಸುದ್ದಿ ಬಂದಿತ್ತು. ಅದೇನಾದ್ರೂ ನಿಜ ಆಗಿದ್ರೆ ನೀವೀಗ ಛಾಯಾಸಿಂಗ್ ದೆವ್ವದ ಜೊತೆ ಮಾತಾಡ್ಬೇಕಿತ್ತು ಹ...ಹ..ಹ.ಹ...ಹಾ. ನೋಡಿ ಸಾರ್ ಇದು ತುಂಬಾ ಬೇಸರ ವಾಗುತ್ತೆ. ನಾನು ಇನ್ನೂ ಒಳ್ಳೊಳ್ಳೆ ಸಿನಿಮಾದಲ್ಲಿ ಮಾಡ್ಬೇಕು ಇಂಡಷ್ಟ್ರೀಲಿ ಇರಬೇಕು ಅಲ್ವಾ?
  • ಕುಣಿಯೋಣು ಬಾರ ರಿಯಾಲಿಟಿ ಶೋ ಬಗ್ಗೆ ಹೇಳಿ?
- ಆ ಶೋ ತುಂಬಾ ಇಷ್ಟವಾಗಿದೆ. ಮಕ್ಕಳ ಕಾರ್ಯಕ್ರಮ, ಅವರ ಪ್ರತಿಭಾ ಪ್ರದರ್ಶನ, ತಪ್ಪು-ಒಪ್ಪುಗಳನ್ನು ತಿದ್ದಿ ಹೇಳೋಕೆ ಖುಷಿ. ಮಕ್ಕಳು ಹೇಳಿದ್ದನ್ನು ಬಹಳ ಬೇಗ ಕಲಿಯುತ್ತಾರೆ. ಅವರ performance level super. ಅದ್ರಲ್ಲೂ ಅವರ ತಂದೆ - ತಾಯಿಗಳ ಜೊತೆ ಅವರು ಡ್ಯಾನ್ಸ್ ಮಾಡಿದ್ದು ನನಗೆ ಮರೆಯಲಾಗದ ಕ್ಷಣ. ಆಗೆಲ್ಲ ನಾನು ಅತ್ತು ಬಿಟ್ಟಿದ್ದೇನೆ, ಅಂತಹ ಅವಕಾಶ ಎಷ್ಟು ಮಕ್ಕಳಿಗೆ ಸಿಗುತ್ತೆ ಹೇಳಿ?
  • ಸಿನಿಮಾ ರಂಗದಲ್ಲಿ ನಿಮ್ಮ ಕನಸುಗಳ ಬಗ್ಗೆ ಹೇಳಿ?
-ನಿಜ ಜೀವನದಲ್ಲಿ ನಾವು ಏನಾಗಲು ಸಾಧ್ಯವಿಲ್ಲವೋ ಅದೆಲ್ಲಾ ಪಾತ್ರಗಳಲ್ಲಿ ನಾವು ಅಭಿನಯಿಸಬಹುದು ಅದು ಖುಷಿಯ ವಿಚಾರ, ನನಗೂ ಒಮ್ಮೆ ನಿರ್ದೇಶಕಿಯಾಗುವ ಕನಸಿದೆ. ಒಳ್ಳೊಳ್ಳೆ ಪಾತ್ರಗಳ ನಿರೀಕ್ಷೆಯೂ ಇದೆ. ಆದ್ರೆ ನಿರೀಕ್ಷೆಗಳು ನಿರಾಶೆ ಮಾಡ್ತಾವೆ. ಹಾಗಾಗಿ ಕನಸುಗಳು ಬೇಕು, ಪ್ರಯತ್ನ ಬೇಕು ಆದರೆ ಅತಿಯಾದ ನಿರೀಕ್ಷೆಗಳು ಖಂಡತ ಬೇಡ. ಅದು ತುಂಬಾ ದುಖ ತರುತ್ತೆ ಎಂದು ಮಾತು ಮುಗಿಸಿದರು.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...