Sunday, November 15, 2015

ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ!

ದೇಶದಲ್ಲಿ ಅಸಹಿಷ್ಣುತೆಯ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ಕಲ್ಬುರ್ಗಿ ಹತ್ಯೆಯ ಪ್ರಕರಣ ನಿಗೂಡವಾಗಿರುವಾಗಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಧ್ವನಿ ಎತ್ತಲಿಲ್ಲ ಎಂಬ ಕಾರಣಕ್ಕೆ ಆರಂಭಗೊಂಡ ಪ್ರಶಸ್ತಿ ವಾಪ್ಸಿ ಚಳುವಳಿ ಇವತ್ತು ವಿರಾಟ್ ಸ್ವರೂಪ ಪಡೆಯುತ್ತಿದೆ. ಪ್ರಶಸ್ತಿ ವಾಪಸಾತಿ ವಿರುದ್ದವೂ ಅನೇಕರು ವಿವಿಧ ನೆಲೆಗಟ್ಟಿನ ಸಮರ್ಥನೆಯ ಮೂಲಕ ಸಾರ್ವತ್ರಿಕ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಈ ಪರ-ವಿರೋಧದ ಹೊತ್ತಿನಲ್ಲಿಯೇ ಅನೇಕ ಅನೈತಿಕ ಘಟನೆಗಳ, ನೈತಿಕ ಅಧ:ಪತನದ ಸಂಗತಿಗಳ ವಿಶ್ಲೇಷಣೆಯೂ ನಡೆಯುತ್ತಿದೆ. ಇವೆಲ್ಲ ಒಂದು ಕಾಲಘಟ್ಟದಲ್ಲಿ ಆಗಬೇಕಿತ್ತು ತಡವಾಗಿ ಆಗುತ್ತಿದೆಯಷ್ಟೇ! ಈ ಸಂಧರ್ಭದಲ್ಲಿ ಅನೇಕ ಮುಖವಾಡಗಳು ಸಹಾ ಬಯಲಿಗೆ ಬರುತ್ತಿರುವುದು ಸುಳ್ಳೇನಲ್ಲ.
         ದೇಶದಲ್ಲಿ ಅಸಹಿಷ್ಣುತೆ ಇವತ್ತು ಮತ್ತು ನಿನ್ನೆಯದಲ್ಲ. ಭಾರತಕ್ಕೆ ಸ್ವಾತಂತ್ರ ಬಂದಾಗಿನಿಂದಲೂ, ಅದಕ್ಕೂ ಮುಂಚಿನಿಂದಲೂ ಹಾಗೂ ಇವತ್ತಿಗೂ ಶಾಂತಿ ಕದಡುವ, ಸಾಮಾಜಿಕ ಅಸಹನೆಗೆ ಕಾರಣವಾಗುವ ಘಟನೆಗಳು ಜರುಗುತ್ತಲೇ ಇವೆ. ಆದರೆ ವರ್ತಮಾನದಲ್ಲಿ ಅಸಹಿಷ್ಣುತೆಯ ತೀವ್ರತೆ ಹೆಚ್ಚಿದೆ. ನೈತಿಕತೆಗೆ ಧಕ್ಕೆ ತರುವ,ವಿಚಾರವಾದಕ್ಕೆ ಅಡ್ಡಗಾಲಾಗುವ, ಸಾಮಾಜಿಕ ಸಾಮರಸ್ಯವನ್ನು ಕದಡುವ,ಧಾರ್ಮಿಕ ಕಂದಕ ಹೆಚ್ಚಿಸುವ ಸಂಗತಿಗಳು ಪ್ರತೀ ಕ್ಷಣಕ್ಕೂ ವಿವಿಧ ಆಯಾಮಗಳಲ್ಲಿ ಎದುರಾಗುತ್ತಿವೆ. ಇಂತಹ ಸಂದಿಗ್ದ ಸಂಧರ್ಭದಲ್ಲಿ ಅದರದ್ದೇ ಆದ ತಾತ್ವಿಕ ನೆಲೆಗಟ್ಟಿನಲ್ಲಿ ನಿಂತು ತೋರುವ ಸಾತ್ವಿಕ ಪ್ರತಿಭಟನೆಗೆ ಹೆಚ್ಚಿನ ಮಹತ್ವ ಇದೆ. ಮತ್ತು ಅದು ಹೆಚ್ಚು ಪರಿಣಾಮಕಾರಿಯಾದುದು ಆಗಿದೆ. ವಾಸ್ತವವನ್ನು ಗ್ರಹಿಸುವ ಸೂಕ್ಷ್ಮ ಮನಸ್ಥಿತಿ ಮಾತ್ರವೇ ಅಸಹಿಷ್ಣುತೆಯನ್ನು ಖಂಡಿಸಿ ಪ್ರಶಸ್ತಿ ವಾಪಸ್ ಮಾಡುವ ಕ್ರಿಯೆಯನ್ನು ಒಪ್ಪಿಕೊಳ್ಳುತ್ತದೆ. ಆದರೆ ಗ್ರಹಿಕೆಯ ಸೂಕ್ಷ್ಮವನ್ನು ಕಳೆದುಕೊಂಡ ಮನಸ್ಸುಗಳಿಗೆ ಪ್ರಶಸ್ತಿ ವಾಪಸಾತಿ ಹಿಂದಿನ ಶಕ್ತಿಯ ಅರಿವಿಗೆ ಬರುವುದೇ ಇಲ್ಲ, ಬದಲಿಗೆ ಮೇಲ್ನೋಟಕ್ಕೆ ಸಿಗುವ ಸಂಗತಿಗಳನ್ನೆ ಮುಂದುಮಾಡಿಕೊಂಡು ವಿತಂಡ ವಾದಕ್ಕೆ ಇಳಿದು ಬಿಡುತ್ತಾರೆ. 
        ಒಂದು ಮಾನವೀಯ ಸಂಗತಿಗೆ ನೈತಿಕ ನೆಲಗಟ್ಟಿನಲ್ಲಿ ನಿಂತು ಪ್ರತಿಕ್ರಿಯಿಸ ಬಹುದಾದ ವ್ಯಕ್ತಿ ಮಾತ್ರವೆ ಮುನುಷ್ಯ ಎನಿಸಿಕೊಳ್ಳುತ್ತಾನೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆಯುವ, ಪ್ರತಿಕ್ರಿಯಿಸುವ ಕ್ರಿಯೆಗಳು ಅಸಹಿಷ್ಣುತೆಯನ್ನು ಬೆಂಬಲಿಸುವ ಕ್ರಿಯೆಗಳಾಗುತ್ತವೆ. ಯಾವುದಕ್ಕೆ ಯಾವುದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು ಎಂಬ ಅರಿವಿಲ್ಲದೇ ಬೇರೆ ಬೇರೆ ಆಯಾಮದಲ್ಲಿ ಘಟಿಸುವ ಸಂಗತಿಗಳನ್ನು ತುಲನೆಗೆ ತೆಗೆದುಕೊಳ್ಳುವುದು ಪಲಾಯನ ವಾದವಲ್ಲದೇ ಮತ್ತೇನೂ ಆಗಿರದು.

ಕನ್ನಡ ಸಾಹಿತ್ಯ ಲೋಕದ ನೈತಿಕತೆಯ ಅಂತ:ಶಕ್ತಿಯಾಗಿರುವ ಸಾಹಿತಿ ದೇವನೂರ ಮಹದೇವ ಭಾರತ ಸರ್ಕಾರ ನೀಡಿದ ಪದ್ಮಶ್ರೀ ಗೌರವ ಪುರಸ್ಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿಯನ್ನು ಸಾಂಕೇತಿಕವಾಗಿ ಹಿಂತಿರುಗಿಸಿ ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಪಡೆದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚ ಇರುವ ಕುರಿತು ಪ್ರಸ್ತಾಪಿಸಿದ್ದಾರೆ. ಬಹುಶ: ಪ್ರಜ್ಞಾವಂತರಾದ ಯಾರೆ ಆದರೂ ಈ ಮಾತುಗಳ ಹಿಂದಿನ ವಾಸ್ತವಗಳನ್ನು ಗ್ರಹಿಸಿದರೆ ಪ್ರಶಸ್ತಿ ವಾಪ್ಸಿ ಚಳುವಳಿಯ ವಿರುದ್ದ ನಿಲ್ಲಲಾರರೇನೋ.
        ಒಟ್ಟಾರೆಯಾಗಿ ಹೇಳುವುದಾದರೆ ಯಾರ ವಿರುದ್ದವಾಗಿ ಮತ್ತು ಯಾರ ಪರವಾಗಿ ಪ್ರಶಸ್ತಿ ಕೊಟ್ಟರು ಎನ್ನುವ ವಾಗ್ವಾದವನ್ನು ಬದಿಗಿಟ್ಟು ನೋಡಿದರೆ ಪ್ರಶಸ್ತಿ ವಾಪಸಿ ಎನ್ನುವ ನಿರ್ದಾರದಡಿ ಸೈದ್ದಾಂತಿಕ ತತ್ವವಿದೆ ಮತ್ತು ಸಾಮಾಜಿಕ ಜಾಗೃತಿಯ ಸಂದೇಶವಿದೆ. ಸಾಹಿತ್ಯ ಮತ್ತು ಬೌದ್ದಿಕತೆ ಎನ್ನುವುದು ಘಟನೆಗಳ ಹಿಂದಿನ ರಾಜಕಾರಣ ಮತ್ತು ಪರಿಣಾಮಗಳೆರಡನ್ನೂ ಭೂತ-ಭವಿಷ್ಯತ್ ನೆಲೆಯಲ್ಲಿ ತರ್ಕಿಸುತ್ತದೆ. ವಿಷಯವೊಂದು ಇಡೀ ದೇಶದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಾ, ಅಸಹನೆಯನ್ನು ಸೃಷ್ಟಿಸಿ ಮುಂದೆ ಬದುಕಲಸಾಧ್ಯವಾದ ಪರಿಸ್ಥಿತಿಗೆ ಕಾರಣವಾಗಬಲ್ಲ ಮನೋಸ್ಥಿತಿಯನ್ನು ನಿರ್ಮಿಸುತ್ತದೆ ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಮತ್ತು ಜರೂರತ್ತು ಖಂಡಿತಾ ಇದೆ. ಅದರ ಒಂದು ಭಾಗವೇ ಪ್ರಶಸ್ತಿ ವಾಪಸ್. ಅಚ್ಚರಿ ಎಂದರೆ ಅವತ್ಯಾಕೆ ಕೊಟ್ಟಿಲ್ಲ, ಇವತ್ಯಾಕೆ ಕೊಡ್ತೀರಿ, ದುಡ್ಡು ವಾಪಸ್ ಕೊಡ್ತೀರಾ ಎನ್ನುವ ಚರ್ಚೆಗಷ್ಟೆ ನಾವು ಸೀಮಿತರಾಗಿದ್ದೇವೆ. ಎತ್ತಿದ ಪ್ರಶ್ನೆ ಮತ್ತು ಅದು ಜಾಗತಿಕವಾಗಿ ಉಂಟು ಮಾಡಿದ ಪರಿಣಾಮಗಳ ಬಗ್ಗೆ ಆದ ಚರ್ಚೆ ಮೂಲ ನೆಲೆಗಳಲ್ಲಿ ಆಗಿಲ್ಲ.ಜಾಗತಿಕ ನೆಲೆಯಲ್ಲಿ ಅದೊಂದು ಗಂಭೀರ ಸಂಗತಿ ಎಂದು ಒಪ್ಪಿಕೊಂಡರೆ ಮೂಲವನ್ನು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಕು. ಪ್ರಶಸ್ತಿ ವಾಪಸ್ ಮಾಡುವವರು ಮತ್ತು ಅದನ್ನು ವಿರೋಧಿಸುವವರು ಇಬ್ಬರಿಗೂ ಅವರವರದ್ದೇ ಆದ ಅಜೆಂಡಾಗಳಿವೆ ಆದರೆ ಅವಕ್ಕೆ ಅರ್ಥ ಸಿಗಬೇಕೆಂದರೆ ಪ್ರತಿಭಟನೆ, ಸತ್ಯಾಗ್ರಹ, ಉಪವಾಸ, ಪ್ರಶಸ್ತಿ ವಾಪಸಿಗಳು ನಿಜಾರ್ಥದಲ್ಲಿ ಎಲ್ಲ ನೆಲೆಗಳನ್ನು ಮೀರಿ ಜೀವಪರ ಕಾಳಜಿಯಿಂದ ನಡೆದಾಗ ಮಾತ್ರವೇ ಗಾಢ ಪರಿಣಾಮವನ್ನು ಬೀರುತ್ತವೆ ಎನ್ನುವುದರಲ್ಲಿ ಎಷ್ಟೊಂದು ಸತ್ಯವಿದೆ ಅಲ್ಲವೇ? ಬೌದ್ದಿಕ ದಾರಿದ್ರ್ಯ ಯಾವತ್ತಿಗೂ ಕಂಟಕ ಎನ್ನುವ ಸತ್ಯ ಬೇಗ ಅರಿವಿಗೆ ಬರಲಿ. ಅಂದ ಹಾಗೆ ಜಿಲ್ಲೆಯಲ್ಲಿ ಇಂತಹ ಕ್ರಿಯೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದೆ ಮುಗುಮ್ಮಾಗಿರುವುದು "ದುರ್ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಹೆಚ್ಚು ಅಪಾಯಕಾರಿ" ಎಂಬ ಮಾತನ್ನು ನೆನಪಿಸುತ್ತಿದೆ ;)

Sunday, November 8, 2015

ಮಕ್ಕಳ ದಿನಾಚರಣೆಯೂ, ಟಿಪ್ಪು ಜಯಂತಿಯೂ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಬಳಸಿ ಬಳಸಿ ಸವಕಲಾದ ಹಳೆ ಮಾತು, ಭಾರತದ ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ ರವರ ಕಾರಣಕ್ಕೆ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿ ಕೊಂಡು ಬಂದಿರುವುದು ಗೊತ್ತಿರುವ ಸಂಗತಿ. ಇದೇ ನವೆಂಬರ್ 14ಕ್ಕೆ ಮಕ್ಕಳ ದಿನಾಚರಣೆ ಹಾಗೆಯೇ ನವೆಂಬರ್ 10ಕ್ಕೆ ಟಿಪ್ಪು ಜಯಂತಿ. ಈ ಸಂಧರ್ಭದಲ್ಲಿ ಮಕ್ಕಳ ಸ್ಥಿತಿ ಗತಿ ಮತ್ತು ವರ್ತಮಾನವನ್ನು ಅವಲೋಕಿಸುವ ಜೊತೆಗೆ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಆಚರಿಸುತ್ತಿರುವ ಕುರಿತು ಎದ್ದಿರುವ ವಾದ ವಿವಾದಗಳ ಕಡೆಗೆ ಗಮನ ಹರಿಸಿ ಸತ್ಯ-ಅಸತ್ಯಗಳ ಮಂಥನ ಅಗತ್ಯ.
          ವರ್ತಮಾನದ ಈ ಹೊತ್ತಿನಲ್ಲಿ ನಾವೆಲ್ಲಿದ್ದೇವೆ ? ಸಂಬಂಧಗಳ ಪರಿಧಿ ಎಲ್ಲಿದೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಮಕ್ಕಳ ಕುರಿತ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳ ಬಹುದು. ಎರಡು ವರ್ಷದ ಹಿಂದೆ ಪತ್ರಿಕೆ ‘ನನ್ನ ಕನಸಿನ ಭಾರತ’ ಎಂಬ ಶೀರ್ಷಿಕೆಯಡಿ ಮಕ್ಕಳಿಂದ ಬರಹಗಳನ್ನು ಆಹ್ವಾನಿಸಿ ವಿಶೇಷ ಸಂಚಿಕೆಯನ್ನು ಮಾಡಿತ್ತು, ಸದರಿ ಸಂಚಿಕೆಯ ಖುಷಿಯನ್ನು ಹಂಚಿಕೊಳ್ಳುವ ವೇದಿಕೆಯಲ್ಲಿ ಮಕ್ಕಳು ಮಾತಿಗೆ ನಿಂತರು.ಪೋಷಕರಿಂದ ಪ್ರೇರಿತವಾದ ಬಹುತೇಕ ಮಕ್ಕಳು ತಮ್ಮ ಕನಸಿನ ಭಾರತದ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೆ ಮೀಸಲು ನೀತಿಯ ಕುರಿತು ಮಾತನಾಡಲು ತೊಡಗಿದರು. ನಾವು ಕಷ್ಟಪಟ್ಟು ಓದಿ ಮೆರಿಟ್ ಪಡೀತೀವಿ ಆದ್ರೆ ಮೀಸಲಾತಿ ಪಡೆದ ದಲಿತ ಮಕ್ಕಳು ಕಡಿಮೆ ಅಂಕ ಪಡೆದು ಉನ್ನತ ವಿದ್ಯಾಭ್ಯಾಸದ ಸೀಟು ಪಡೀತಾರೆ, ಉದ್ಯೋಗ ಪಡೀತಾರೆ, ಉದ್ಯೋಗದಲ್ಲಿ ಬಡ್ತಿ ಪಡೀತಾರೆ ನಮಗೆ ಮಾತ್ರ ಆ ಯೋಗ ಇಲ್ಲ. ಈ ದೇಶದಲ್ಲಿ ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತೆ ಆದ್ರೆ ಸಮಾನತೆಗೆ ಮೀಸಲಾತಿ ಬೇಕಿಲ್ಲ ತೆಗೆದು ಹಾಕಿ ಎಂದು ಒಬ್ಬರ ಮೇಲಾದ ಮೇಲೆ ಒಬ್ಬ ಮಕ್ಕಳು ವೇದಿಕೆಯಲ್ಲಿ ಮಾತನಾಡ ತೊಡಗಿದರು. ಅದನ್ನು ಕೇಳಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ ವರ್ತಮಾನದ ಪೂರ್ಣ ಅರಿವಿರದ ಮಕ್ಕಳು ಮೇಲುನೋಟಕ್ಕೆ ಸಿಗುವ ಸಂಗತಿಗಳನ್ನಷ್ಟೇ ಗ್ರಹಿಸಿ ಅಭಿಪ್ರಾಯಗಳನ್ನು ಹೊರ ಹಾಕಿದ್ದರು. ಈ ಅಭಿಪ್ರಾಯಗಳ ಹಿಂದೆ ಶೂದ್ರ ಮತ್ತು ಪುರೋಹಿತ ಶಾಹಿಗಳ ಗ್ರಹಣ ಬಡಿದ ಮನಸ್ಥಿತಿಯ ಒತ್ತಾಸೆ ಎದ್ದು ಕಾಣುತ್ತಿತ್ತು. ಇಂತಹ ಸಂಗತಿಗಳನ್ನು ವಿವೇಚನೆ ಇಟ್ಟು ನೋಡುವುದಾದರೆ, ಸಾಮಾಜಿಕ ಸಮಾನತೆಯ ಅರ್ಥವನ್ನು ನೈಜ ನೆಲಗಟ್ಟಿನಲ್ಲಿ ಗ್ರಹಿಸುವ ಸೂಕ್ಷ್ಮತೆ ಮರೆಯಾಗಿರುವುದು ಈ ದುರಂತಕ್ಕೆ ಕಾರಣ. ಸಮಾನತೆ ಎಂಬ ಪದದ ಹಿಂದಿನ ಕಹಿ ಸಂಗತಿಗಳು ಎಷ್ಟೋ ಸಲ ವಾಸ್ತವ ಸಂಗತಿಗಳ ಅರಿವಿನ ಕೊರತೆಯಿಂದ ಉಂಟಾದುದಾಗಿರುತ್ತವೆ. ಹಾಗಾಗಿ ಇಲ್ಲಿ ಒಂದಿಷ್ಟುಮಾಹಿತಿ ನಿಮ್ಮ ಗಮನಕ್ಕೆ ತರುತ್ತೇನೆ. ಸಂವಿಧಾನದಲ್ಲಿ ಸಮಾನತೆಯ ಸಮಾಜ ಸೃಷ್ಟಿಗಾಗಿ ಶೇ.49.5ರ ಮೀಸಲಾತಿಯನ್ನು ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ನೀಡಲಾಗಿದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 22.5 ಮೀಸಲಿದ್ದರೆ ಈ ವರೆಗೂ ಸದರಿ ಸಮುದಾಯ ಬಳಸಿದ್ದು ಸುಮಾರು 8.5% ಅಷ್ಟೇ, ಪರಿಶಿಷ್ಟ ಪಂಗಡದವರು ಶೇ.3.5% ಬಳಸಿದ್ದರೆ, ಹಿಂದುಳಿದ ವರ್ಗಕ್ಕೆ ಮೀಸಲಿರುವ ಶೇ.27ರ ಮೀಸಲಾತಿಯಲ್ಲಿ ಬಳಕೆಯಾಗಿರುವುದು ಶೇ.4.5% ರಿಂದ ಶೇ.5% ಮಾತ್ರ. ಅಂದರೆ ಇನ್ನೂ ಪೂರ್ತಿಯಾಗಿ ಮೀಸಲಾತಿ ಒಂದು ತಲೆಮಾರಿನ ಮೂರನೇ ಒಂದು ಭಾಗಕ್ಕೂ ತಲುಪಿಲ್ಲ ಆಗಲೆ ಮೀಸಲಾತಿ ಕುರಿತು ಅಸಹನೆ ಎದ್ದಿದೆ. ಹೋಗಲಿ ವರ್ತಮಾನದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂದರೆ ಅದೂ ಇಲ್ಲ ಜಾತಿ ಹಿಂದೆಂದಿಗಿಂತ ಇಂದು ಹೆಚ್ಚು ಜ್ವಲಿಸುತ್ತಿದ್ದು ಸುಪ್ತವಾಗಿ ಎಲ್ಲರ ಮನದಲ್ಲಿ ಅಡಕವಾಗಿದೆ ಮತ್ತು ಅದರ ವಿರಾಟ್ ಸ್ವರೂಪವನ್ನು ನಿತ್ಯವೂ ಕಾಣುತ್ತಲೇ ಇದ್ದೇವೆ. ಹೀಗಿರುವಾಗ ಮಕ್ಕಳಿಗೆ ಇಂತಹ ಸಂಗತಿಗಳನ್ನು ಪೋಷಕರು ಹೇಳ ಬೇಕಿತ್ತಲ್ಲವೇ?

          ಮಕ್ಕಳಿಗೆ ಇವತ್ತು ಆಯ್ಕೆಯ ಅವಕಾಶಗಳು ಸಿಗುತ್ತಿಲ್ಲ, ಪೋಷಕರು ಇದಕ್ಕೆ ಅವಕಾಶ ಮಾಡುತ್ತಿಲ್ಲ ಇದು ವ್ಯತಿರಿಕ್ತ ಪರಿಣಾಮಕ್ಕೆ ದಾರಿಯಾಗುತ್ತಿದೆ. ಶಿಕ್ಷಣದ ವ್ಯಾಪಾರೀಕರಣದ ಈ ಹೊತ್ತಿನಲ್ಲಿ ಜಾಗತಿಕ ವ್ಯವಸ್ಥೆಯಲ್ಲಿ ಆಕರ್ಷಣೆಗೆ ಬಲಿಬಿದ್ದು ಮಕ್ಕಳನ್ನು ಬಾಲ್ಯದಲ್ಲಿಯೇ ಶಿಕ್ಷಣದ ನೆಪದಲ್ಲಿ ದೂರ ಮಾಡುವ ಪೋಷಕರು ಸಾಮಾಜಿಕ ಬಂಧದ ಎಳೆಯನ್ನೇ ಕಡಿಯುತ್ತಿದ್ದಾರೆ. ಆಸಕ್ತಿಯಿಲ್ಲದ ಸಂಗತಿಗಳ ಕಲಿಕೆ, ಒತ್ತಾಯ ಪೂರ್ವಕ ಕಲಿಕೆ ಮಕ್ಕಳ ಬದುಕನ್ನು ರೂಪಿಸಲಾರದು. ಹಾಗೆಯೇ ಸಂಬಂಧಗಳ ಅರಿವಿನ ಕೊರತೆ ತಂದೆ-ಮಗಳು, ಅಣ್ಣ-ತಂಗಿಯ ಸಂಬಂಧವನ್ನೇ ಮರೆಯುವಂತೆ ಮಾಡಿದೆ, ಮಕ್ಕಳು ಲೈಂಗಿಕ ಪೀಡನೆಗೆ ತುತ್ತಾಗುತ್ತಿದ್ದಾರೆ. ಶಾಲೆ, ಕಾಲೇಜು, ವಿವಿಗಳಲ್ಲಿ ಶಿಕ್ಷಕ/ಅದ್ಯಾಪಕ/ಪ್ರಾಧ್ಯಾಪಕರ ಕಾಮ ತೃಷೆಗೆ ಮಕ್ಕಳು ನಲುಗುವಂತಾಗಿದೆ. ಬಿಡುವಿರದ ದಿನಚರಿಯ ನಡುವೆ ಮಕ್ಕಳ ಆಗು-ಹೋಗುಗಳನ್ನು ಗಮನಿಸುವ ತಾಳ್ಮೆ ಪೋಷಕರಿಗೆ ಅಗತ್ಯವಾಗಿ ಬೇಕಿದೆ, ಮಕ್ಕಳಿಗೆ ಒಳ್ಳೆಯ ಸಂಗತಿಗಳ ಮಾರ್ಗದರ್ಶನ, ಮುಕ್ತ ಕಲಿಕೆಯ ಅವಕಾಶಗಳನ್ನು ಪೋಷಕರು ಒದಗಿಸಬೇಕಾಗಿದೆ.
 ಇನ್ನು ಟಿಪ್ಪು ಜಯಂತಿ, ಜಾತಿ-ಜನಾಂಗಗಳ ಓಲೈಕೆಯ ಹಪಾಹಪಿಗೆ ಬಿದ್ದ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಆದೇಶಿಸಿದೆ, ಟಿಪ್ಪು ಜಯಂತಿ ಮಾತ್ರವಲ್ಲ ಭೂತಕಾಲದ ಅನೇಕ ಮಹನೀಯರನ್ನು ಜಾತಿಯಿಂದ ಗುರುತಿಸಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಜಾತಿ ಜಯಂತಿಗಳ ಸಾಂಕ್ರಾಮಿಕ ಪಿಡುಗೆ ಹೇಗಿದೆಯೆಂದರೆ ಆಯಾ ಮಹನೀಯರ ಜಾತಿಗೆ ಸೇರಿದ ಜನಾಂಗಗಳನ್ನು ಪ್ರಮುಖವಾಗಿ ಸೇರಿಸಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಇದು ಕೆಟ್ಟ ಸಂಪ್ರದಾಯ. ಟಿಪ್ಪು ಸುಲ್ತಾನ್ ಭಾರತ ದೇಶದ ಇತಿಹಾಸದಲ್ಲಿ ದಾಖಲಾದ ಅರಸರಲ್ಲಿ ಪ್ರಮುಖ ಮತ್ತು ಬ್ರಿಟೀಷರ ವಿರುದ್ದ ಸೆಣಸಿದ ಅಪ್ರತಿಮ ಹೋರಾಟಗಾರ. ಆದರೆ ಟಿಪ್ಪು ಕುರಿತು ಇಲ್ಲದ ಫ್ಯಾಂಟಸಿ ಕಥೆಗಳನ್ನು ಹೆಣೆದು ಮತ್ತೆಲ್ಲೋ ಕೂರಿಸುವ ಬದಲು ವಾಸ್ತವ ಸಂಗತಿಗಳನ್ನು ಇತಿಹಾಸದಿಂದ ಹೆಕ್ಕಿ ನೋಡುವುದಾದರೆ ದೇಶಭಕ್ತಿಯಿಂದ ಹೋರಾಡುತ್ತಾ ರಣರಂಗದಲ್ಲೇ ಹುತಾತ್ಮನಾದ ಟಿಪ್ಪು, ರಣರಂಗದಲ್ಲಿ ಮಡಿದ ಕೆಲವೇ ಕೆಲವು ರಾಜರಲ್ಲಿ ಒಬ್ಬ ಟಿಪ್ಪು ಸುಲ್ತಾನ್.
ಟಿಪ್ಪು, ದಲಿತರನ್ನು ನೀರಗಂಟಿಯಾಗಿ ನೇಮಿಸಿದ, ದಲಿತ-ಹಿಂದುಳಿದವರಿಗೆ ಭೂ ಹಂಚಿಕೆಯನ್ನು ಮಾಡಿದ, ಅಂದು ಜನರು ಹೊಂದಿರುವ ಭೂಮಿಯಾದಾರದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದಾಗ ಅದನ್ನು ಕೈಬಿಟ್ಟು ನಿಮ್ಮ ಕೈಗೆ ಬಂದ ಬೆಳೆಯಲ್ಲಿ 1/6 ಭಾಗ ಮಾತ್ರ ತೆರಿಗೆ ನೀಡಿ ಎಂದು ರೈತ ಪರ ರಾಜ ಟಿಪ್ಪು. ಅಂದಿನ ದಿನಗಳಲ್ಲೇ 29ಸಾವಿರಕ್ಕೂ ಹೆಚ್ಚು ಕೆರೆಗಳ ನಿರ್ಮಾಣಕ್ಕೆ ಮತ್ತು ಕೆರೆಗಳ ಹೂಳೆತ್ತಲು ಸಹಾಯ ಮಾಡಿದ ರಾಜ ಟಿಪ್ಪು ಸುಲ್ತಾನ್. ಕ್ಷಿಪಣಿಯನ್ನು ಬಳಸಿದ ಮೊದಲ ಅರಸ ಟಿಪ್ಪು. ಅಂದಾಜು 17ವರ್ಷಗಳ ಕಾಲ ಅರಸನಾಗಿದ್ದ ಟಿಪ್ಪು ಮತಾಂಧನಾಗಿದ್ದರೆ ಮೈಸೂರು ಸುತ್ತಮುತ್ತಲಿನ ಪರಿಸ್ಥಿತಿ ಇವತ್ತು ಹೇಗಿರುತ್ತಿತ್ತು? ಆತನ ಆಡಳಿತದಲ್ಲಿ ಬ್ರಾಹ್ಮಣರು ಆಡಳಿತಗಾರರಾಗಿದ್ದರು,ಅತೀ ಹೆಚ್ಚು  ಹಿಂದೂಗಳು ಸೈನಿಕರಾಗಿದ್ದರು. ಈತನ ಪ್ರದಾನಿ ಪೂರ್ಣಯ್ಯ, ಕಂದಾಯ ಮಂತ್ರಿ ಕೃಷ್ಣರಾವ್, ಸೇನಾ ದಂಡನಾಯಕ ಶ್ರೀನಿವಾಸ ರಾವ್ ಮುಸ್ಲಿಮರಲ್ಲ ಅಥವಾ ಮತಾಂತರಕ್ಕೆ ಒಳಪಟ್ಟಿರಲಿಲ್ಲ ಎಂಬುದು ದಿಟವಲ್ಲವೇ? ಟಿಪ್ಪು ಹಿಂದೂ ವಿರೋಧಿಯಾಗಿದ್ದರೆ ಹಿಂದೂ ದೇಗುಳಗಳು ಉಳಿಯುತ್ತಿದ್ದವೆ? 150ಕ್ಕೂ ಅಧಿಕ ದೇಗುಲಗಳಿಗೆ ನಗ-ನಾಣ್ಯವನ್ನು ಟಿಪ್ಪು ನೀಡಿದ್ದ, ಶೃಂಗೇರಿಯಲ್ಲಿ ಮರಾಠರು ಅರ್ಚಕನನ್ನು ಕೊಲ್ಲುವ ಮೂಲಕ ಬೀದಿಗೆ ಎಸೆದಿದ್ದ ವಿಗ್ರಹವನ್ನು ಮರಳಿ ಸ್ಥಾಪಿಸಿದ್ದು ಟಿಪ್ಪು ಅಲ್ಲವೇ?
ಕೊಡಗು ಪ್ರಾಂತ್ಯದಲ್ಲಿ 77ಸಾವಿರ ಹಿಂದೂಗಳನ್ನು ಟಿಪ್ಪು ಮತಾಂತರಗೊಳಿಸಿದ್ದಾದರೆ ಆ ಕಾಲದಲ್ಲಿ ಕೊಡಗಿನಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಜನರು ಎಲ್ಲಿದ್ದರು? ಮತಾಂತರವಾದವರು ಎಲ್ಲಿದ್ದಾರೆ? ಟಿಪ್ಪು ಸುಲ್ತಾನ್ ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ದಾರವಾಡ, ತುಮಕೂರು ಮತ್ತು ಕೋಲಾರ ಭಾಗದಲ್ಲಿದ್ದ ಸುಮಾರು 200 ಪಾಳೇಗಾರರನ್ನು ಧ್ವಂಸ ಮಾಡಿ ಇಡೀಭಾಗವನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿ ಪಾಳೇಗಾರರ ಒಡೆತನದಲ್ಲಿದ್ದ ಭೂಮಿಯನ್ನು ಉಳುವ ರೈತರಿಗೆ ಹಂಚಿದ ಖ್ಯಾತಿ ಟಿಪ್ಪುವಿಗೆ ಸಲ್ಲುತ್ತದೆ. ರೈತಾಪಿ ಸಮುದಾಯಕ್ಕೆ ಬಡ್ಡಿರಹಿತ ಸಾಲವನ್ನು ಕೊಡುವ ವ್ಯವಸ್ಥೆಯನ್ನು ಮಾಡಿದ್ದ ಇಂತಹ ಟಿಪ್ಪು ಸುಲ್ತಾನನ್ನು ಮರಾಠರು ಮತ್ತು ನಿಜಾಮರ ನೆರವಿನಿಂದ ಮತ್ತು ತನ್ನ ಸೇನೆಯಲ್ಲಿದ್ದ ಪ್ರಮುಖರ ಕುತಂತ್ರದ ಲಾಭ ಪಡೆದ ಬ್ರಿಟೀಷರು ಮೋಸದಿಂದ ಯುದ್ದದಲ್ಲಿ ಟಿಪ್ಪುವನ್ನು ಹತಗೈದರು. ಇಂತಹ ವೀರನ ಸ್ಮರಣೆ ಮಾಡುವುದರಲ್ಲಿತಪ್ಪೇನಿದೆ?
ವಾಸ್ತವ ಸಂಗತಿಗಳನ್ನು ಪರಿಗ್ರಹಿಸುವ ಸೂಕ್ಷ್ಮತೆ ಸಮಾಜದಲ್ಲಿ ಬರಬೇಕಿದೆ, ಸಮಾಜದ ಸಮಾನತೆಯ ಹೊಣೆಯ ಅರಿವನ್ನು ಇಟ್ಟುಕೊಂಡು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಪೋಷಕರು, ಶಿಕ್ಷಕರು ಜಾಗೃತಾವಸ್ಥೆಯಲ್ಲಿರ ಬೇಕಾಗುತ್ತದೆ. ಅಸಹಿಷ್ಣುತೆಯ ಕಾವಿನ ಈ ದಿನಗಳಲ್ಲಿ ಯಾವುದನ್ನಾದರೂ ವಿರೋಧಿಸುವ ಮೊದಲು ಅಲ್ಲಿನ ಸಂಗತಿಗಳನ್ನು ಸೂಕ್ಷ್ಮವಾಗಿ ಗ್ರಹಿಸುವ, ಬದ್ದತೆ ಪ್ರದರ್ಶಿಸುವ ಜೀವಪರ ನಿಲುವುಗಳನ್ನು ಹೊಂದುವ ಪರಿಸ್ಥಿತಿ ಮೂಡಲಿ ಅಲ್ಲವೇ?

Saturday, August 29, 2015

ಏನಿದು ಕಳಸಾ-ಬಂಡೂರಿ ನಾಲಾ ವಿವಾದ?


                        ಚಿತ್ರ:ಗೋವಾದಲ್ಲಿ ಹರಿಯುವ ಮಾಂಡೋವಿ ನದಿ(ಮಹದಾಯಿ ನದಿ)
*****ಅರಕಲಗೂಡು ಜಯಕುಮಾರ್/7899606841
ರಾಜ್ಯದ ಜನತೆಯನ್ನು ಪ್ರತೀ ಬಾರಿ ಕಾಡುವ ಸಮಸ್ಯೆಗಳಲ್ಲಿ ಜಲವಿವಾದದ್ದು ಪ್ರಮುಖವಾದುದು. ಇತ್ತ ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಆಗಿಂದಾಗ್ಯೆ ಭುಗಿಲೇಳುತ್ತಿದ್ದ ಕಾವೇರಿ ನೀರಿನ ವಿವಾದ ಆತಂಕ ಸೃಷ್ಟಿಸಿದರೆ, ಅತ್ತ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ನದಿ ಯೋಜನೆಯ ಪಾಲು ಪಡೆಯುವಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಜಲವಿವಾದ ಪ್ರಾಧಿಕಾರ ರಚನೆಯಾದ ಮೇಲೆ ನೀರು ಬಳಕೆಗೆ ಕೇಂದ್ರದ ನ್ಯಾಯಾಧೀಕರಣದ ಒಪ್ಪಿಗೆ ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ ಅಂದಾಜು 500 ಕೋಟಿ ರೂ ವೆಚ್ಚದ ನೀರಾವರಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
          ಇಂತಹ ಸಂದಿಗ್ಧ ಸಂಧರ್ಭದಲ್ಲಿ ಕಳಸಾ-ಬಂಡೂರಿ ನಾಲಾ ವಿವಾದ ಹೊತ್ತಿ ಉರಿಯುತ್ತಿದೆ. ರಾಜ್ಯದ ಯಾವುದೇ ಭಾಗದಲ್ಲಿ ನೀರಿನ ವಿವಾದಗಳು ಉಂಟಾದರೆ ಮತ್ತು ಗಡಿ ವಿವಾದಗಳು ಉಂಟಾದರೆ ಸ್ಥಳೀಯ ಹೋರಾಟಗಳಿಗೆ ಸೀಮಿತವಾಗುತ್ತಿರುವುದರಿಂದ ನಿರೀಕ್ಷಿಸಿದ ನ್ಯಾಯ ಪಡೆಯಲು ಅಡ್ಡಗಾಲಾಗಿದೆ ಎನ್ನಬಹುದು. ಕಳಸಾ-ಬಂಡೂರಿ ನಾಲಾ ವಿವಾದದಲ್ಲೂ ಇದೇ ಮನಸ್ಥಿತಿ ಇಲ್ಲವೇ ಅರಿವಿನ ಕೊರತೆ ಒಗ್ಗಟ್ಟಿನ ಹೋರಾಟಕ್ಕೆ ಅವಕಾಶ ಮಾಡುತ್ತಿಲ್ಲ. ಹಾಗಾಗಿ ಈ ಕುರಿತು ಮಾಹಿತಿಯನ್ನು ಇಲ್ಲಿ ಅವಗಾಹನೆಗೆ ತರಲಾಗುತ್ತಿದೆ. ಹೆಚ್ಚು ಕಡಿಮೆ ನೇತ್ರಾವತಿ ನದಿ ನೀರನ್ನು ತಿರುಗಿಸಿ ಎತ್ತಿನ ಹೊಳೆ ಯೋಜನೆ ಮೂಲಕ ದೊಡ್ಡಬಳ್ಳಾಪುರ, ಕೋಲಾರ ಮತ್ತಿತರೆಡೆಗೆ ನೀರು ಹರಿಸುವ ಯೋಜನೆಯ ವಿವಾದಂತೆಯೇ ಇದೆ ಈ ಕಳಸಾ-ಬಂಡೂರಿ ನಾಲಾ ವಿವಾದ. ಆದರೆ ಇದು ರಾಜ್ಯದೊಳಗಿನ ವಿವಾದ, ಅದು ಅಂತರ ರಾಜ್ಯಗಳ ನಡುವಿನ ವಿವಾದ!
ಜೀವ ತಳೆದ ಕನಸು:
    ಗೋವಾ ರಾಜ್ಯದ ಜೀವನದಿ ಎಂದು ಕರೆಯಲ್ಪಡುವ ಮಹದಾಯಿ ನದಿಯ ಮೂಲ ಹೆಸರು ಮಾಂಡೋವಿ ನದಿ. ಸರಿ ಸುಮಾರು 77ಕಿಮೀ ಉದ್ದದ ವಿಸ್ತೀರ್ಣ ಹೊಂದಿರುವ ಮಹದಾಯಿ ನದಿ 59ಕಿಮಿ ಗೋವಾ ರಾಜ್ಯದ ವ್ಯಾಪ್ತಿಯಲ್ಲಿದ್ದರೆ, 29ಕಿಮಿ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿದೆ. ಗೋವಾ ರಾಜ್ಯದ ಉತ್ತರ ಭಾಗದಿಂದ ಹರಿದು ಬರುವ ಈ ನದಿ ರಾಜ್ಯದ ಬೆಳಗಾಂ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಭೀಮಘಡ  ಅರಣ್ಯದ ಮೂಲಕ 30ಕವಲುಗಳಾಗಿ ಹರಿಯುತ್ತದೆ ಈ ಪೈಕಿ ಗೋವಾ 1580ಚ.ಕಿ.ಮಿ ಜಲಾನಯನ ಪ್ರದೇಶ, ಕರ್ನಾಟಕ 375ಚ.ಕಿ.ಮಿ ಜಲಾನಯನ ಪ್ರದೇಶ ಮತ್ತು ಮಹರಾಷ್ಟ್ರ 77ಚ.ಕಿ.ಮಿ ಜಲಾನಯನ ಪ್ರದೇಶವನ್ನು ಹೊಂದಿದೆ. ಅದೇ ರೀತಿ ಕರ್ನಾಟಕದ ಮೂಲಕ 52.60ಟಿಎಂಸಿ ಅಡಿ, ಮಹರಾಷ್ಟ್ರ 8.33ಟಿಎಂಸಿ ಅಡಿ ಮತ್ತು ಗೋವಾ ರಾಜ್ಯದ ಮೂಲಕ 159.07 ಟಿಎಂಸಿ ಅಡಿ ನೀರು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ರಾಜ್ಯದ ಮೂಲಕ ಅರೇಬಿಯನ್ ಸಮುದ್ರಕ್ಕೆ ಸೇರಿ ಪೋಲಾಗುವ ನೀರನ್ನು ಸದ್ಭಳಕೆ ಮಾಡಿಕೊಳ್ಳಲು 35ವರ್ಷಗಳ ಹಿಂದೆ ಉತ್ತರ ಕರ್ನಾಟಕ ಜನರ ಆಶಯದಂತೆ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್, ಎಸ್ ಆರ್ ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. ನವಲಗುಂದ ಮತ್ತು ನರಗುಂದ ತಾಲೂಕುಗಳಿಗೆ ಮಲಪ್ರಭಾ ನದಿಯಿಂದ ಕೊರತೆ ಬೀಳುವ ಕುಡಿಯುವ ನೀರನ್ನು ಮಹದಾಯಿ ನದಿಯಿಂದ ಪಡೆದು ಕೊಳ್ಳುವ ಕುರಿತು ವರದಿ ನೀಡುವುದು ಈ ಸಮಿತಿಯ ಆದ್ಯ ಕರ್ತವ್ಯವಾಗಿತ್ತು.

ಯೋಜನೆಯ ರೂಪುರೇಷೆ:
          ಮುಂದೆ 1989ರಲ್ಲಿ ಇದೇ ಎಸ್ ಆರ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದರು. ತಾವೇ ತಯಾರಿಸಿದ್ದ ಮಹದಾಯಿ ನದಿ ನೀರಿನ ಯೋಜನೆಗೆ ಜೀವ ತುಂಬಲು ಸಿದ್ದರಾದರು. ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರನ್ನು ಭೇಟಿ ಮಾಡಿ ಚರ್ಚಿಸಿದರು, ಸಹಮತದೊಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವಷ್ಟರಲ್ಲಿ ಬೊಮ್ಮಾಯಿ ಸರ್ಕಾರ ಬಿದ್ದು ಹೋಯಿತು. 2000ನೇ ಇಸ್ವಿಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾದ ಎಸ್ ಎಂ ಕೃಷ್ಣ ಯೋಜನೆಯನ್ನು ಪುನರ್ ಪರಿಶೀಲಿಸಿ ಕಳಸಾ-ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದರು. ಈ ಯೋಜನೆಯ ಪ್ರಕಾರ ಗೋವಾ-ಕರ್ನಾಟಕ-ಮಹರಾಷ್ಟ್ರದ ಗಡಿ ಪ್ರದೇಶವಾದ ಭೀಮಘಡದಲ್ಲಿ ಕವಲಾಗಿ ಹರಿಯುವ ಮಹದಾಯಿ ನದಿಯ 7.56ಟಿಎಂಸಿ ನೀರನ್ನು ರಾಜ್ಯದ ಮಲಪ್ರಭಾ ನದಿಗೆ ಜೋಡಿಸುವ ಮೂಲಕ ರೇಣುಕಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿ ಗದಗ, ದಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ , ನಗರಗಳ ಮತ್ತು 200ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ದಾಹ ಇಂಗಿಸಲು ನಿರ್ಧರಿಸಲಾಯಿತು. ಯೋಜನೆಯ ಅನುಷ್ಠಾನಕ್ಕಾಗಿ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಯನ್ನು ರೂಪಿಸಲಾಯಿತು.

ತಡಯಾಜ್ಞೆ:
          2001ರಲ್ಲಿ ಮುಖ್ಯಮಂತ್ರಿ ಕೃಷ್ಣ ನೇತೃತ್ವದ ಸರ್ಕಾರ  ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿತು, ಕೇಂದ್ರ ಸರ್ಕಾರ ಕಳಸಾ-ಬಂಡೂರಿ ನಾಲಾ ಯೋಜನೆಗೆ ಪ್ರಾಥಮಿಕ ಅನುಮತಿಯನ್ನು ನೀಡಿ ಗೋವಾ ರಾಜ್ಯದ ನಿಲುವಿಗಾಗಿ ಅವಕಾಶ ನೀಡಿತು. ಹೀಗೆ ನೆನೆಗುದಿಗೆ ಬಿದ್ದ ಯೋಜನೆಯ ಅನುಮತಿಗೆ ರಾಜ್ಯ ಸರ್ಕಾರ ಒತ್ತಾಯಿಸುತ್ತಲೇ ಇತ್ತು. 2002ರಲ್ಲಿ ಗೋವಾ ಸರ್ಕಾರ, ರಾಜ್ಯದ ಕಳಸಾ-ಬಂಡೂರಿ ನಾಲಾ ಯೋಜನೆಗೆ ಸುಪ್ರೀಂಕೋರ್ಟಿನಿಂದ ತಡೆಯಾಜ್ಞೆ ತಂದಿತು. ಅಂದು ಗೋವಾದ ಮುಖ್ಯಮಂತ್ರಿಯಾಗಿದ್ದವರು ಇವತ್ತು ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ಮನೋಹರ್ ಪರಿಕ್ಕರ್ ಎಂಬುದು ಗಮನಾರ್ಹ ಸಂಗತಿ.
          ಕಳಸಾ-ಬಂಡೂರಿ ನಾಲಾ ಯೋಜನೆಯಿಂದ ಕರ್ನಾಟಕ-ಗೋವಾ ಗಡಿ ಪ್ರಾಂತ್ಯದ ಭೀಮಘಡ ಅರಣ್ಯ ದಲ್ಲಿರುವ ತನ್ನ ಭಾಗದಲ್ಲಿಅಮೂಲ್ಯ ಜೀವ ಸಂಕುಲಕ್ಕೆ ಹಾನಿಯಾಗುತ್ತದೆ ಎಂಬ ಕಾರಣ ನೀಡಿ ಗೋವಾ ಸರ್ಕಾರ, ರಾಜ್ಯದ ಯೋಜನೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿತ್ತು. ಮನವಿಯನ್ನು ಪುರಸ್ಕರಿಸಿದ ಕೋರ್ಟು ಪೂರ್ಣ ಪ್ರಮಾಣದ ಯೋಜನೆಗೆ ತಡೆ ನೀಡಲು ನಿರಾಕರಿಸಿ ಭೀಮಘಡ ಅರಣ್ಯ ಪ್ರದೇಶದಲ್ಲಿ ಮಾತ್ರ ಯೋಜನೆ ಮುಂದುವರೆಸದಂತೆ ತಡೆ ನೀಡಿತು.
ನೆನೆಗುದಿಗೆ:
          ಮತ್ತೆ ಈ ಯೋಜನೆಗೆ ಜೀವ ಬಂದಿದ್ದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ. ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಶತಾಯ ಗತಾಯ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ತರುವ ಸಲುವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 100ಕೋಟಿ ರೂ ವೆಚ್ಚದ ಯೋಜನೆಗೆ ಅಡಿಗಲ್ಲು ಹಾಕಿದರು. ಹೀಗೆ 2006ರಲ್ಲಿ ಜೀವತಳೆದ ಯೋಜನೆಯಲ್ಲಿ ಕಳಸಾ ದಿಂದ ಮಲಪ್ರಭಾ ನದಿಯ ವರೆಗಿನ ಕಾಲುವೆ ಉದ್ದ 5.15 ಕಿಮಿ ಯಲ್ಲಿ 3.56ಟಿಎಂಸಿ ಅಡಿ ನೀರು ಹರಿಸುವ ಯತ್ನವಾದರೆ ಭೀಮಘಡ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಬಂಡೂರಿ ನಾಲೆಯಲ್ಲಿ 4ಟಿಎಂಸಿ ಅಡಿ ನೀರು ಹರಿಸುವ ಯತ್ನವಿತ್ತು. ಈಗಾಗಲೆ ಕಳಸಾ ಕಾಲುವೆ ಶೇ.98ರಷ್ಟು ಪೂರ್ಣಗೊಂಡಿದೆ, 120ಮೀ ಮಾತ್ರ ಕಳಸಾ ಕಾಲುವೆ ನಿರ್ಮಾಣ ಬಾಕಿ ಇದೆ. ಆದರೆ ಭೀಮಘಡ ರಕ್ಷಿತಾರಣ್ಯದಲ್ಲಿ ಕಾಮಗಾರಿ ಮುಂದುವರೆಸಲು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದೆ.
          ಮಹದಾಯಿ ನದಿ ನೀರು ಬಳಕೆ ಯೋಜನೆಯ ಸಲುವಾಗಿ ನ್ಯಾಯಾಧೀಶರಾದ ಜೆ ಎಂ ಪಾಂಚಾಲ್ ನೇತೃತ್ವದಲ್ಲಿ 2010ರಲ್ಲಿ ರಚಿಸಲಾಗಿರುವ ಕೇಂದ್ರ ನ್ಯಾಯಾಧಿಕರಣ ಪ್ರಾದಿಕಾರ ಈ ವರೆಗೆ ಆಗಿರುವ ಕಾಮಗಾರಿಯ ಮುಂದಿನ ಆದೇಶದ ವರೆಗೆ ನದಿಗಳ ನೀರು ಬಳಕೆ ಯೋಜನೆ ಅನುಷ್ಠಾನಕ್ಕೆ ತರದಂತೆ ಆದೇಶಿಸಿದೆ, ಆದ್ದರಿಂದ ಬಂಡೂರಿ ಯೋಜನೆ ನೆನೆಗುದಿಗೆ ಬಿದ್ದಿದೆ. ಸದರಿ ಯೋಜನೆ ಅನುಷ್ಠಾನದಲ್ಲಿ ಮಹರಾಷ್ಟ್ರದ ಪಾತ್ರವಿಲ್ಲ ಆದರೆ ಕಳಸಾ-ಬಂಡೂರಿ ನಾಲೆ ಸೇರ್ಪಡೆಯಾಗುವ ಮಹದಾಯಿ ನದಿ ಸ್ವಲ್ಪ ಮಟ್ಟಿಗೆ ಮಹರಾಷ್ಟ್ರ ಗಡಿಯನ್ನು ಬಳಸಿಕೊಂಡು ಹೋಗುತ್ತದೆ ಎಂಬುದನ್ನು ಬಿಟ್ಟರೆ ಮಹರಾಷ್ಟ್ರಕ್ಕೆ ಯಾವುದೇ ಲಾಭವಿಲ್ಲ ಆದಾಗ್ಯೂ ಮಹರಾಷ್ಟ್ರ ಸರ್ಕಾರವನ್ನು ಗಣನೆಗೆ ತೆಗೆದುಕೊಂಡು ವಿವಾದ ಬಗೆ ಹರಿಸಲು ಉತ್ತರ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿದೆ.

ಬೇಕಿದೆ ಒಗ್ಗಟ್ಟು:

         ಹೀಗೆ ನಡೆಯುತ್ತಿರುವ ಈ ಹೋರಾಟಕ್ಕೆ ಇವತ್ತಿಗೆ 45 ಅಮೋಘ ದಿನಗಳು. ಕುಡಿಯುವ ನೀರಿನ ಸಂಕಷ್ಠಕ್ಕೆ ಸಿಲುಕಿರುವ ಅಲ್ಲಿನ ಜನರ ನೋವು ಮತ್ತು ಕಳಕಳಿ ರಾಜ್ಯದ ಎಲ್ಲೆಡೆ ಪಸರಿಸ ಬೇಕಿದೆ, ಕಾವೇರಿ ವಿವಾದ ಹಳೇ ಮೈಸೂರು ಜನರಿಗೆ ಮಾತ್ರ, ಗಡಿ ವಿವಾದ ಬೆಳಗಾವಿಗೆ ಮಾತ್ರ, ಕೃಷ್ಣಾ ನದಿ ನೀರಿನ ವಿವಾದ ಗುಲ್ಪರ್ಗಾ-ವಿಜಯಪುರ ಜನರಿಗೆ ಮಾತ್ರ, ಕೋಮು ಸಂಘರ್ಷದ ಸಮಸ್ಯೆ ದಕ್ಷಿಣ ಕನ್ನಡದ ಜನರದ್ದು ಮಾತ್ರ,  ಕಳಸಾ-ಬಂಡೂರಿ ವಿವಾದ ಉತ್ತರ ಕರ್ನಾಟಕದ ಸಮಸ್ಯೆ ಎಂದು ಕೂರುವುದಕ್ಕಿಂತ ಮಾನವೀಯ ನೆಲೆಗಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳ ಜನರು ಸಕ್ರಿಯವಾಗಿ ಉತ್ತರ ಕರ್ನಾಟಕದ ಜನರ ನೋವಿಗೆ ಸ್ಪಂದಿಸ ಬೇಕಾಗಿದೆಯಲ್ಲವೇ? 
ಈ ಲೇಖನದ ಪೂರ್ಣ ಪಾಠವನ್ನು ಅವಧಿಮ್ಯಾಗ್.ಕಾಮ್ ಪ್ರಕಟಿಸಿದೆ, ಅವದಿ ಸಂಪಾದಕೀಯ ಮಂಡಳಿಗೆ ಧನ್ಯವಾದಗಳು

http://avadhimag.com/2015/09/01/%E0%B2%8F%E0%B2%A8%E0%B2%BF%E0%B2%A6%E0%B3%81-%E0%B2%95%E0%B2%B3%E0%B2%B8%E0%B2%BE-%E0%B2%AC%E0%B2%82%E0%B2%A1%E0%B3%82%E0%B2%B0%E0%B2%BF-%E0%B2%A8%E0%B2%BE%E0%B2%B2%E0%B2%BE-%E0%B2%B5%E0%B2%BF/

Sunday, May 3, 2015

ಆ ದಿನಗಳು ಎಲ್ಲಿ ಹೋದವೋ?

ಕೃಪೆ: ಗೂಗಲ್ ಅಂತರ್ಜಾಲ
ವಾರ್ಷಿಕ ಪರೀಕ್ಷೆಗಳು ಇನ್ನೇನು ಮುಗಿಯುತ್ತಿವೆ ಎನ್ನುವ ಹೊತ್ತಿಗೆ ಸ್ವತಂತ್ರ ಪಕ್ಷಿಗಳಾಗಿ ಸ್ವಚ್ಚಂಧವಾಗಿ ಹಾರಾಡುವ ಮನಸ್ಥಿತಿ, ಅಪ್ಪ ಕೊಟ್ಟ ಕಾಸು ಡಬ್ಬಿಯಲ್ಲಿ ತುಂಬಿಸಿ ಒಡೆಯುವ ಘಳಿಗೆ ಅದು. ಆಟ-ಓಟ ಮಾಮೂಲು, ಹೆಚ್ಚು ಮಳೆ ಸುರಿಯುವ  ಆ ಪ್ರದೇಶದಲ್ಲಿ ರಾತ್ರಿ-ಹಗಲು ಅನುಭವಕ್ಕೆ ತಂದು ಕೊಳ್ಳುವುದೇ ಒಂದು ಅನನ್ಯ ಅನುಭವ. ಶಾಲೆಗೆ ನಾಳೆಯಿಂದ ರಜೆ ಎನ್ನುವಾಗಲೇ ತರಾತುರಿಯಲ್ಲಿ ಗ್ರಾಮದ ಸನಿಹದಲ್ಲಿರುವ ಬೆಟ್ಟಕ್ಕೆ ತೆರಳಿ ಉರುವಲು ಕಟ್ಟಿಗೆ ಆಯುವ ಕೆಲಸ ಅದೆಷ್ಟು ಮಜಾ ಕೊಡುತ್ತಿತ್ತೆಂದರೆ ಹೊತ್ತು ಹೋಗಿದ್ದೆ ತಿಳಿಯುತ್ತಿರಲಿಲ್ಲ. ಬೆಟ್ಟದ ಅರಣ್ಯಕ್ಕೆ ಓಡಿ, ಮರ ಹತ್ತಿ ಇಳಿದು ಎಲೆ, ಹಣ್ಣು ಕಿತ್ತು, ಬಂಡೆಯ ಮೇಲೆ ಪವಡಿಸಿ ತಿಂದು ತೇಗಿ ಝರಿಯ ನೀರ ಕುಡಿದು ಹೊರಲು ಸಾಧ್ಯವಾಗುವಷ್ಟು ಕಟ್ಟಿಗೆ ಹೊರೆ ಹೊತ್ತು ಶಾಲೆಗೆ ಬರುವ ಹೊತ್ತಿಗೆ ಆಯಾಸ ಮನೆ ಮಾಡಿ ಬಿಡುತ್ತಿತ್ತು. ಅಂದ ಹಾಗೆ ಅವತ್ತು ಉರುವಲು ಕಟ್ಟಿಗೆ ಎರಡು ಕಾರಣಗಳಿಗೆ ಸಂಗ್ರಹಿಸಲಾಗುತ್ತಿತ್ತು. ಒಂದು ಶಾಲೆಯಲ್ಲಿ ಪ್ರತೀ ದಿನ ಮದ್ಯಾಹ್ನ ನೀಡುತ್ತಿದ್ದ ಗೋದಿ ಉಪ್ಪಿಟ್ಟು ತಯಾರಿಗೆ ಮತ್ತೊಂದು ಶಾಲಾ ಮುಖ್ಯ ಶಿಕ್ಷಕರ ಮನೆಯ ಉಪಯೋಗಕ್ಕೆ. 
        ಅವತ್ತಿನ ದಿನಗಳಲ್ಲಿ ಯಾವ ಫಲಾಪೇಕ್ಷೆಯಿಲ್ಲದೇ (ಶುಲ್ಕ ರಹಿತವಾಗಿ) ಮನೆ ಪಾಠ ಮಾಡುತ್ತಿದ್ದ ಶಿಕ್ಷಕರು ಪಾಠವನ್ನಷ್ಟೇ ಅಲ್ಲ ಬದುಕಿನ ಪಾಠವನ್ನು ಹೇಳುತ್ತಿದ್ದರು. ಬೇಸಿಗೆ ರಜೆ ಬಂದಾಗ ಅವರನ್ನು ಒತ್ತಾಯ ಪೂರ್ವಕವಾಗಿ ಮನೆಗೆ ಕರೆತಂದು ಊಟ ಮಾಡಿಸಿದರೆ ಅದೇ ತೃಪ್ತಿ ಉಳಿದಂತೆ ಕಟ್ಟಿಗೆ ಸಂಗ್ರಹಿಸಿ ತಂದು ಹಾಕುವುದು. ಇವಷ್ಟೇ ಕೆಲಸ, ಆಮೇಲೆ ಶಾಲೆಯ ರಜೆ ಘೋಷಣೆಯ ದಿನ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಂತಲೇ  ಕೊಡಲಾಗುತ್ತಿದ್ದ ಪುಸ್ತಕಗಳನ್ನು ಶಿಕ್ಷಕರು ಮಾತ್ರ ಆಗಾಗ ತೆಗೆದು ಓದುತ್ತಿದ್ದುದನ್ನು ಗಮನಿಸಿದ್ದ ನನಗೆ ತುಂಬಾ ಗಮನ ಸೆಳೆದದ್ದು ಇತಿಹಾಸ, ಪುರಾಣದ ಅಮರ ಚಿತ್ರ ಕಥಾ ಮಾಲಿಕೆ. 
              ಆಗ ಟಿವಿ ಇಲ್ಲ, ಸಿನಿಮಾ ಥಿಯೇಟರ್ ಗಳಿಲ್ಲ, ಬೇಸಿಗೆ ಶಿಬಿರಗಳ ರೇಜಿಗೆ ಇಲ್ಲ, ಓದುವ ಹವ್ಯಾಸ ಒಂದೇ ನಮ್ಮನ್ನು ಬಂಧಿಸಿಟ್ಟಿದ್ದರಿಂದ ಓದಿನ ಹಸಿವು ಇನ್ನು 6-7ನೇ ತರಗತಿಗೆ ಬರುವ ವೇಳೆಗೆ ಜಾಸ್ತಿ ಆಗಿ ಬಿಟ್ಟಿತ್ತು. ಸುದರ್ಶನ, ಟಿ. ಕೆ. ರಾಮರಾವ್, ಹಂದನಕೆರೆ ವೆಂಕಟದಾಸು ಮತ್ತಿತರರ ಕೃತಿಗಳನ್ನು ವನಗೂರು ಕೂಡುರಸ್ತೆಯ ಕುಮಾರ ಲಿಂಗೇಶ್ವರ ಜಾತ್ರೆಗೆ ಹೋದಾಗ ಕೂಡಿಟ್ಟ ಹಣದಲ್ಲಿ ಖರಿದಿಸಿ ಓದುವುದೇ ಒಂದು ಮಜಾ ಆಗಿರ್ತಿತ್ತು. ಅದಕ್ಕೂ ಮುನ್ನ ರಜೆ ಸಿಕ್ಕಾಗಲೆಲ್ಲ ಭಾರತ-ಭಾರತಿ ಪುಸ್ತಕ ಮಾಲಿಕೆಯ ಅಂಗೈ ಅಗಲದ ಪುಟ್ಟ ಪುಸ್ತಕಗಳು ನನ್ನ ಓದಿನ ಹಸಿವನ್ನು ವಿಸ್ತರಿಸಿದವು. ನನಗೆ ನೆನಪಿರುವಂತೆ ಮೊದಲಿಗೆ ಓದಿದ ಪುಸ್ತಕ ವೀಣೆ ಶೇಷಣ್ಣ, ಭಗತ್ ಸಿಂಗ್, ಮಹಾತ್ಮ ಗಾಂಧಿ , ಅಂಬೇಡ್ಕರ್,ವಿವೇಕಾನಂದ, ಸಿದ್ದಾರ್ಥ, ಮಹಾ ಭಾರತ ಮತ್ತು ರಾಮಾಯಣದ ಎಲ್ಲ ಪಾತ್ರಗಳು, ಮೈಸೂರು ಮಹಾರಾಜರ ಕುರಿತಾದ ಪುಸ್ತಕಗಳು,ಹೀಗೆ ತುಂಬಾ ಸಂಕ್ಷಿಪ್ತವಾಗಿರುತ್ತಿದ್ದ ಸಾಹಿತ್ಯದ ಆ ಪುಸ್ತಕಗಳು ಅವತ್ತಿಗೆ ಅಚ್ಚುಮೆಚ್ಚು.  ಆದರೆ ಇವೆಲ್ಲವನ್ನು ಮೀರಿದ್ದು ರಾಮಾಯಣ-ಮಹಾಭಾರತದ ಕಥಾನಕಗಳನ್ನು ಮನಮುಟ್ಟುವಂತೆ ಚಿತ್ರಿಸಿ ಸಾಹಿತ್ಯ ಒದಗಿಸುತ್ತಿದ್ದ ಅಮರ ಚಿತ್ರಕಥಾ ಮಾಲಿಕೆ. ಮಂಗಲ್ ಪಾಂಡೆ ಕುರಿತಾದ ಅಮರ ಚಿತ್ರಕಥಾ ಮಾಲಿಕೆ ಅವತ್ತಿಗೆ ನನ್ನನ್ನು ಬಹುವಾಗಿ ಕಾಡಿತ್ತು, ಹೀಗೆ ಅಂಟಿಕೊಂಡ ಓದಿನ ಜಾಡ್ಯ ತೇಜಸ್ವಿಯವರ ಕರ್ವಾಲೋ ಕೃತಿಯನ್ನು 6ನೇ ಇಯತ್ತೆಯಲ್ಲಿರುವಾಗಲೇ ಓದುವ ಮೂಲಕ ಸಾಹಿತ್ಯದ ಓದಿನ ದಿಕ್ಕನ್ನು ಬದಲಿಸಿತ್ತು. ಶಾಲೆಯಲ್ಲಿದ್ದ ಪುಸ್ತಕಗಳನ್ನು ಓದಿ ಮುಗಿಸಿದ ಮೇಲೆ ಸೋದರ ಮಾವನ ಗೆಳೆಯರ ಮನೆಯಿಂದ ಅವತ್ತಿಗೆ ಪಡೆದು ಓದಿದ ಅಂಬೇಡ್ಕರ್ ಮತ್ತು ಗಾಂಧಿಯ ಪುಸ್ತಕಗಳು ವಾಸ್ತವ ಜಗತ್ತಿಗೆ ನನ್ನನ್ನು ತೆರೆದು ಕೊಳ್ಳುವಂತೆ ಮಾಡಿದವು. ಪತ್ರಿಕೆಗಳು ಬರುವುದನ್ನು ಕಾಯ್ದುಕೊಂಡು ಸಹೋದರನೊಡನೆ ಕಿತ್ತಾಡಿಕೊಂಡು ಒಂದಕ್ಷರವನ್ನು ಧಾವಂತದಲ್ಲಿ ಓದುತ್ತಿದ್ದ ದಿನಗಳು, ಸುಧಾ-ತರಂಗದ ಜೊತೆಗೆ ಆಗಷ್ಟೇ ಬಣ್ಣದ ಹೊಳಪಿನಲ್ಲಿ ಜೀವ ತಳೆಯುತ್ತಿದ್ದ ಲಂಕೇಶ್ ಪತ್ರಿಕೆ, ರಾಜು ಪತ್ರಿಕೆಗಳು ಹೊರ ಜಗತ್ತಿನ ಸಂಪರ್ಕವಿಲ್ಲದ ದಿನಗಳಲ್ಲೂ ಹೊರ ಜಗತ್ತಿನ ಅರಿವು ಮೂಡಿಸುತ್ತಿದ್ದವು, ರಜಾ ಕಾಲದಲ್ಲಿ ರೇಡಿಯೋ ಕೇಳುವುದೇ ಮಜಾ, ರೇಡಿಯೋ ಗೆ ಪತ್ರ ಬರೆಯುವುದು, ರೇಡಿಯೋ ನಾಟಕಗಳನ್ನು ಆಲಿಸುವುದು, ಯುವವಾಣಿಯ ವೈವಿದ್ಯಮಯ ಕಾರ್ಯಕ್ರಮಗಳು, ವಾರ್ತೆಗಳು ಅದರಲ್ಲೂ ವಿದೇಶಿ ರೇಡಿಯೋ ಗಳಲ್ಲಿ ಕನ್ನಡ ಕೇಳುವ ಖುಷಿ ಸಖತ್ತಾಗಿರ್ತಿತ್ತು. ರೇಡಿಯೋ ಮಾಸ್ಕೋ, ರೇಡಿಯೋ ಸಿಲೋನ್, ದಾರವಾಡ ಆಕಾಶವಾಣಿ, ಹಿಂದಿಯ ವಿವಿಧ ಭಾರತಿ ಅಬ್ಬಾ ಅಂತಹ ಸುಖದ ದಿನಗಳು ಮರೆಯಲು ಸಾಧ್ಯವೇ? 
           ಬಹುಶ: ಗಾಂಧಿ-ಅಂಬೇಡ್ಕರ್ ಚಿಂತನೆಗಳು,  ತೇಜಸ್ವಿಯವರ ಸಾಹಿತ್ಯದ ಓಘ, ಪತ್ರಿಕೆಗಳ   ಓದು ನನ್ನೊಳಗಿನ ಚಿಂತಕನನ್ನು, ಬರಹಗಾರನನ್ನು ಜಾಗೃತಗೊಳಿಸಿದ್ದವು, 7ನೇ ತರಗತಿಗೆ ಬರುವ ಹೊತ್ತಿಗೆ ರೈತ ಸಂಘದ ಚಳುವಳಿಯ ಕಾವು ಆದರ್ಶ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜದ ಕಲ್ಪನೆಯನ್ನು ಅವತ್ತಿಗೆ ನನ್ನಲ್ಲಿ ಒಡ ಮೂಡಿಸಿದ್ದವು.ಕಥೆ-ಕವನ-ಲೇಖನ ಬರೆಯುವ ತಹತಹಿಕೆ ಆರಂಭವಾಗಿತ್ತು. ಪರಿಸರದಲ್ಲಿ ಕಣ್ಣಳತೆಯಲ್ಲೇ ಕಾಣುತ್ತಿದ್ದ ಅಸ್ಪೃಶ್ಯತೆ, ತಾರತಮ್ಯದ ಧ್ವನಿಗಳು, ಶೋಷಣೆಯ ಮುಖಗಳು, ಪತ್ರಿಕೆಗಳಲ್ಲಿ ಓದುತ್ತಿದ್ದ ರೇಡಿಯೋದಲ್ಲಿ ಕೇಳುತ್ತಿದ್ದ ಬದನವಾಳು ದಲಿತರಿಗೆ ಮಲ ತಿನ್ನಿಸಿದ ಪ್ರಕರಣಗಳು ಬಂಡಾಯದ ಮತ್ತು ನಿಷ್ಟುರವಾದ ಗ್ರಹಿಕೆಗಳನ್ನು ಬೆಳೆಸಿಕೊಳ್ಳಲು ಮತ್ತು ಅಕ್ಷರ ರೂಪಕ್ಕೆ ಇಳಿಸಲು ಕಾರಣವಾದವು.  
          ಅಮರ ಚಿತ್ರಕಥೆಗಳನ್ನು ಓದಿದ ಪರಿಣಾಮ ನಮ್ಮ ಆಟಗಳಲ್ಲೂ ಅವೇ ಪಾತ್ರಗಳು ಒಡ ಮೂಡುತ್ತಿದ್ದವು. ಭೀಮ-ದುರ್ಯೋಧನರ ಕಾಳಗ, ಭರತ-ಬಾಹುಬಲಿಯ ಕಾಳಗ, ವೀರ ಅಭಿಮನ್ಯು, ದಾನಶೂರ ಕರ್ಣ,ಭೀಮ-ಬಕಾಸುರ, ಶ್ರೀರಾಮ, ಲವ-ಕುಶ ಹೀಗೆ ಅನೇಕ ಪಾತ್ರಗಳೇ ನಾವಾಗಿ ಆಡುವ ಭರಾಟೆಯಲ್ಲಿ ನಿಜವಾಗಿಯೂ ಗದೆಯಂತಹ ವಸ್ತುಗಳಲ್ಲಿ ಹೊಡೆದಾಡಿ ಅತ್ತದ್ದೆಷ್ಟೋ ದಿನಗಳು ಹಾಗೆಯೇ ಬಿಲ್ಲಿನಿಂದ ಬಿಟ್ಟ ಬಾಣಗಳು ತಗುಲಿ ರಾತ್ರಿಯೆಲ್ಲ ಬವನೆ ಪಟ್ಟ ದಿನಗಳು ಇವೆ. ಇದೆಲ್ಲಕ್ಕಿಂತ ಮಜಾ ಕೊಟ್ಟ ಸಂಗತಿಗಳೆಂದರೆ ದೇವರ ಅನ್ವೇಷಣೆ! ದೇವರನ್ನು ಕಾಣ ಬೇಕಾದರೆ ತಪಸ್ಸು ಮಾಡಬೇಕು, ತಪಸ್ಸು ಮಾಡಿದರೆ ದೇವರು ನಿಜಕ್ಕೂ ಬರುತ್ತಾನಾ ಎಂಬ ಪ್ರಶ್ನೆಯಿಟ್ಟುಕೊಂಡು ಅಮ್ಮನಿಗೆ ತಿಳಿಯದಂತೆ ಉಪವಾಸ ಇದ್ದು, ಮಡಿಯಲ್ಲಿದ್ದು ಅಮ್ಮ ಬಟ್ಟೆ ತೊಳೆಯಲು ಹೊಳೆಗೆ ಹೋಗುತ್ತಿದ್ದಂತೆ ಮನೆಯ ಹಿಂದಿನ ತಿಪ್ಪೆ (ಈಗಿನ ಗಲೀಜು ತಿಪ್ಪೆಗಳಲ್ಲ ಬದಲಿಗೆ ಕಟ್ಟಿಗೆ ಒಲೆ ಉರಿಸುತ್ತಿದ್ದ ಬೂದಿಯನ್ನು ಗುಡ್ಡೆ ಹಾಕುತ್ತಿದ್ದ ತಿಪ್ಪೆ) ಮೇಲೆ ಕುಳಿತು ನಿರ್ವಾಣ ಸ್ಥಿತಿಯಲ್ಲಿ ಲಂಗೋಟಿ ಕಟ್ಟಿಕೊಂಡು ದಂಡದ ಮೇಲೆ ಕೈ ಇಟ್ಟು ತಪಸ್ಸು ಕುಳಿತು ಬಿಡುತ್ತಿದ್ದೆ. ಬೆಳಿಗ್ಗೆ ಮದ್ಯಾಹ್ನ ಕಳೆದು ಸಂಜೆಯಾದರೂ ದೇವರೇ ಪ್ರತ್ಯಕ್ಷ ಆಗುತ್ತಿರಲಿಲ್ಲ, ಅದೊಂದು ದಿನ ಕೇರೆ ಹಾವು ತಿಪ್ಪೆಯ ಮೇಲೆ ಕುಳಿತಿದ್ದ ನನ್ನ ಬಳಿಗೆ ಬಂದಾಗಲೇ ಇನ್ನು ಯಾವ ತಪಸ್ಸು ಬೇಡಪ್ಪಾ ಅನಿಸಿಬಿಟ್ಟಿತ್ತು,. ಇದು ನನ್ನ ಅರಿವಿನ ಪ್ರಜ್ಞೆಯನ್ನು ಮತ್ತಷ್ಟು ಹೆಚ್ಚಿಸಿ ಬಿಟ್ಟಿತು, ಪ್ರಶ್ನಿಸುವ ಮನೋಧರ್ಮವನ್ನು, ವೈಚಾರಿಕೆ ನಿಲುವನ್ನು ಮತ್ತಷ್ಟು ಹೊಳಪುಗೊಳಿಸಿತು. 
            12ನೇ ವಯಸ್ಸಿಗೆ ಕಥೆ ಮತ್ತು ಅಪೂರ್ಣವಾದ ಕಾದಂಬರಿಗಳನ್ನು ಅರ್ದಂಬರ್ದ ಬರೆದು ಹಾಗೆ ಬಿಟ್ಟಿದ್ದೆ. ವರ್ಣ ಚಿತ್ರಗಳನ್ನು ಬಿಳಿಯ ಬಟ್ಟೆಯ ಮೇಲೆ ಬರೆಯುವ ಪ್ರಯತ್ನಗಳನ್ನು ಮಾಡಿದ್ದೆ, ಹಾಗೆ ಬರೆದ ಚಿತ್ರಗಳಲ್ಲಿ ಇವತ್ತಿಗೂ ನೆನಪಿನಲ್ಲಿ ಉಳಿದಿರುವುದು ಬುದ್ದ ಮತ್ತು ಟಿಪ್ಪು ಸುಲ್ತಾನ್ ಚಿತ್ರಗಳು, ಹಾಗೆಯೇ ರೇಡಿಯೋದಲ್ಲಿ ಕೇಳಿದ ಚಲನ ಚಿತ್ರಗಳಲ್ಲಿ ಬಹು ಕಾಲ ನೆನಪಿಗೆ ಉಳಿದದ್ದು ಕಿತ್ತೂರು ರಾಣಿ ಚನ್ನಮ್ಮ ಮತ್ತು ಬಬ್ರುವಾಹನ, ಮಯೂರ. ಚಿಕ್ಕಪ್ಪ-ಚಿಕ್ಕಮ್ಮಂದಿರಿಗೆ ಮತ್ತು ಸೋದರಮಾವ ಹಾಗೂ ಅವರ ಸ್ನೇಹಿತರಿಗೆ ಇನ್ ಲ್ಯಾಂಡ್ ಪತ್ರದಲ್ಲಿ ಆಗಾಗ ಬರೆಯುವ ಗೀಳು ಅಧಿಕವಾಗಿತ್ತು. ಸ್ವತ: ಗ್ರೀಟಿಂಗ್ ಕಾರ್ಡುಗಳನ್ನು ತಯಾರಿಸುವ ಹವ್ಯಾಸವೂ ಇತ್ತು, ಪರಿಸರದ ಪ್ರತಿಕೃತಿಗಳನ್ನು ತಯಾರಿಸುವ ಹುಮ್ಮಸ್ಸಿತ್ತು. ಇನ್ನೊಂದು ಸಂಗತಿ ಹೇಳಲೇ ಬೇಕು. 8ನೇ ತರಗತಿಯಲ್ಲಿ ಕರ್ವಾಲೋ ಪಠ್ಯ ಪುಸ್ತಕವಾಗಿ ಓದಬೇಕಿದ್ದ ನಾನು ಅದನ್ನು 7ನೇ ತರಗತಿಯಲ್ಲಿ ಓದಿ ಅರಗಿಸಿಕೊಂಡಿದ್ದೆ. 
               ಇವತ್ತಿಗೆ ಅಂತಹ ದಿನಗಳೆಲ್ಲಿವೆ? ವಿದ್ಯಾರ್ಥಿ ಜೀವನ, ಟ್ರಕ್ಕಿಂಗ್, ಬೇಸಿಗೆ ಶಿಬಿರ, ಕ್ರಿಕೆಟ್ , ವಂಡರ್ ಲಾ, ಜೂ ಗಾರ್ಡನ್, ಪಿಚ್ಚರ್ರು, ಟೀವಿಗಳ ಚೋಟಾ ಭೀಮ್, ಚಿಂಟೂ ಇತ್ಯಾದಿಗಳಲ್ಲಿ ಕಳೆದು ಹೋಗಿ ಬಿಡುತ್ತಾರೆ. ಪುಸ್ತಕದ ಹುಳುಗಳು ಜ್ಞಾನಾರ್ಜನೆಯೆಂದರೆ ಪಠ್ಯ ಪುಸ್ತಕ ಓದುವುದು ಮತ್ತು ಅಡ್ವಾನ್ಸ್ ಆಗಿ ಟ್ಯೂಷನ್ನು ಕ್ಲಾಸುಗಳಿಗೆ ಹೋಗುವುದು ಎಂದೇ ಭಾವಿಸಿರುವಂತಿದೆ. ಭಾವನಾತ್ಮಕವಾಗಿ ಮತ್ತು ಭೌದ್ದಿಕವಾಗಿ ಬೆಳೆಯ ಬಹುದಾದ ಸಾಧ್ಯತೆಗಳು, ಹಾಗೂ ಸಾಮಾಜಿಕ ಪ್ರಕ್ರಿಯೆಗಳನ್ನು ಅರಿಯುವ ಸಂಗತಿಗಳು ಬಾಲ್ಯದಲ್ಲೇ ಕಳೆದು ಹೋಗುತ್ತಿರುವುದರಿಂದ  ಸಮನಾಂತರ ಸಮಾಜವನ್ನು ಕಾಣಲು ಸಾಧ್ಯವಾಗುತ್ತಿಲ್ಲ, ಸಾಹಿತ್ಯದ ಓದು ಕ್ಷೀಣಿಸಿರುವುದರಿಂದ ಗ್ರಹಿಕೆಗಳು ಸತ್ತು ಹೋಗುತ್ತಿವೆ, ಮನುಷ್ಯ ಜಾತಿಯ ಅಂತರ ಹಾಗೂ ಕೌಟಂಬಿಕ ಸಂಬಂಧಗಳ ಅಂತರವೂ ಹೆಚ್ಚುತ್ತಿದೆ ಅನಿಸುವುದಿಲ್ಲವೇ? 

Sunday, April 12, 2015

ಜಾತಿ ಮತದ ಎಲ್ಲೆ ಮೀರಿ....!



ಜಾತಿ ಸಮೀಕ್ಷೆಗೆಂದು
ಅಂಗಳ ತುಳಿದವನ ಜಾತಿ ಕೇಳಿ
ಬೆಚ್ಚಿ
ಜಾತ್ಯತೀತ ದೇಶದಲ್ಲಿ
ಜಾತಿ ಸಮೀಕ್ಷೆಯೇ? ಎಂದು 
ಉಗಿದು ಕಳುಹಿಸಿ
ಅಂಗಳವನ್ನು ಗೋ ಮೂತ್ರದಿಂದ
ಶುಚೀಕರಿಸಿದರು
ಇದು ಪತ್ರಕರ್ತ ಮಿತ್ರ ಬಿ ಎಂ ಬಷೀರ್ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹಾಕಿದ್ದ ಕವನ, ಓದಿ ಒಂದು ಕ್ಷಣ ಅವಾಕ್ಕಾದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಮಿತ್ರ ಸತೀಶ್ ಶಿಲೆ ಉಲ್ಲೇಖಿಸಿದ್ದ ಎರಡು ಪ್ರತಿಕ್ರಿಯೆಗಳು ಇದೆಂತಹ ವಿಪರ್ಯಾಸ ಎನಿಸಿ ಬಿಟ್ಟಿತು. 
ಹೇಳಿಕೆ-1
"ನಮ್ಮದು ಜಾತ್ಯತೀತ ರಾಷ್ಟ್ರ. ಆದರೂ ಅದ್ಯಾಕೆ ನಮ್ಮ ಸರಕಾರ ಜಾತಿಗಣತಿ ಮಾಡುತ್ತಿದೆಯೋ.. ಅರ್ಥವಾಗ್ತಿಲ್ಲ".
ಹೇಳಿಕೆ-2
"ಜಾತಿ ಗಣತಿ ಮೂಲಕ ರಾಜ್ಯವನ್ನು 100 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತಿದೆ ಈ ಸರಕಾರ".
ಈ ಮೇಲಿನ ಎರಡು ಹೇಳಿಕೆಗಳನ್ನು ಕೇಳಿದಾಕ್ಷಣ ಇವು ಯಾರೋ ಜಾತಿ ಮೀರಿದ ಮಹಾತ್ಮರು ಹೇಳಿದ ಮಾತುಗಳಿವು ಅನ್ನಿಸಬಹುದು. ಮೊದಲನೆಯದನ್ನು ಹೇಳಿದವರು ವೀರಶೈವ ಮಹಾಸಭಾದ ಕರ್ನಾಟಕ ರಾಜ್ಯ ಅಧ್ಯಕ್ಷರು. ಎರಡನೇ ಹೇಳಿಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರದು. 
ದೇಶದಲ್ಲಿ ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಪೈಲಟ್ ಯೋಜನೆಯಾಗಿ ರಾಜ್ಯದಲ್ಲಿ ಜಾತಿ ಜನಗಣತಿ ನಡೆಯುತ್ತಿದೆ. ಭಾರತ ಜಾತ್ಯಾತೀತ ರಾಷ್ಟವೆಂಬ ಹಣೆಪಟ್ಟಿ ಹಚ್ಚಿಕೊಂಡಿದ್ದರೂ ಸಹಾ ಸಾವಿರಾರು ಜಾತಿ, ಮತ,ಪಂಥ ಗಳಿರುವುದರಿಂದ ನೋವಿಗೆ ಒಳಗಾದವರು, ಅಸಹಾಯಕರು, ಆರ್ಥಿಕ ದುರ್ಬಲರನ್ನು ಗುರುತಿಸಿ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವುದು ಜಾತಿ ಗಣತಿಯ ಮುಖ್ಯ ಉದ್ದೇಶ. ಆದರೆ ಇದು ನಿರ್ದಿಷ್ಟ ಉದ್ದೇಶ ಹೊರತು ಪಡಿಸಿದ ಮತ್ಯಾವುದೇ ಉದ್ದೇಶಗಳಿಗೆ ಬಳಕೆಯಾಗುತ್ತದೆ ಎಂಬ ಸಂಗತಿಯೂ ಆತಂಕವನ್ನು ಉಂಟು ಮಾಡಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ಸ್ಥಾನಮಾನಗಳಿಂದಲೇ ಮುಖ್ಯ ವಾಹಿನಿಗೆ ಬಂದು ಬಹುಜನರ ಆಶಯಗಳನ್ನು ತುಳಿದು ಪ್ರತಿಷ್ಠಿತರಾಗಿರುವ ಅಲ್ಪ ಸಂಖ್ಯಾತ ಮಂದಿಗೆ ಜಾತಿ ಗಣತಿ ನಡುಕ ತಂದಿದೆ. ಆದಾಗ್ಯೂ ಹರಿದು ಹಂಚಿ ಹೋದ ಜಾತಿಯ ನಿಗಿ ನಿಗಿ ಕೆಂಡದುಂಡೆಗಳನ್ನು ಒಂದೇ ಮುಟಿಗೆ ತಂದು ಒಗ್ಗಟ್ಟು ಮತ್ತು ಪ್ರಾಬಲ್ಯ ತೋರಿಸುವ ಪ್ರಯತ್ನವನ್ನು ಎಲ್ಲಾ ಜಾತಿಗಳ ಮಹೋದಯರು ಸಮಾನವಾಗಿಯೇ ಮಾಡುತ್ತಿದ್ದಾರೆ ಎಂಬುದು ಸುಳ್ಳಲ್ಲ. ಸಮಾನತೆಯ ಸಮಾಜದ ಕನಸು ಕಂಡ ಡಾ ಭೀಮರಾವ್ ರಾಮ್ ಜಿ ಅಂಬೇಡ್ಕರ್ ರ 125ನೇ ಜನ್ಮ ದಿನಾಚರಣೆಯ ಈ ದಿನಗಳಲ್ಲೇ ಜಾತಿಗಣತಿ, ಜಾತೀಯ ಮನಸ್ಸುಗಳನ್ನು ಕದಲಿಸಿರುವುದು ಮತ್ತು ಆತಂಕ ದುಗುಡಕ್ಕೆ ಒಡ್ಡಿಕೊಳ್ಳುವಂತೆ ಮಾಡಿರುವುದು ಸೂಜಿಗವೇ ಸರಿ.
                                                      *******
            ಇವತ್ತಿಗೆ ಸರಿಯಾಗಿ 15ದಿನಗಳ ಹಿಂದೆ ಓರ್ವ ಪರಿಚಿತ ದಲಿತ ಯುವಕನೋರ್ವ ನನ್ನ ಮುಂದೆ ಕುಳಿತಿದ್ದ, ಅವನು ಹೇಳಿದ್ದು ಕೇಳಿ ಮನಸ್ಸು ದುಗುಡಕ್ಕೆ ಒಳಗಾಗಿತ್ತು. ಹತ್ತಿರದ ಹಳ್ಳಿ ಯ ಆ ಹುಡುಗನ ಊರಿಗೆ ಕೆಂಪು ಬಸ್ಸು ಸೇವೆ ಹಲವು ದಿನಗಳಿಂದ ನಿಂತು ಹೋಗಿತ್ತಂತೆ ಸರಿ ಚೆನ್ನಾಗಿ ಕಲಿತು ಪ್ಯಾಟೆಯಲ್ಲಿ ವ್ಯವಹಾರ ಮಾಡುವ ದಲಿತ ಕೇರಿಯ ಆ ಹುಡುಗನಿಂದ ಅರ್ಜಿ ಬರೆಸಲು, ದಲಿತೇತರರಿಂದ ಬುಲಾವ್ ಬಂದಿದೆ. ಸರಿ ಏನು ಬರೀತಾನೆ? ಹೇಗೆ ಬರೀತಾನೆ ಅಂತ ತಿಳಿಬೇಕಲ್ಲ ಅದಕ್ಕೆ ಅವನನ್ನು ಊರಿನ ಪಟೇಲನ ಮನೆಗೆ ಕರೆದೊಯ್ಯಲಾಗಿದೆ, ಇವನೋ ಅರ್ಜಿ ಬರೆಯುವ ಉತ್ಸಾಹದಲ್ಲಿ ಪಟೇಲರ ನಡು ಮನೆಗೆ ತೆರಳಿ ಅಲ್ಲೇ ಕುಳಿತು ಕೊಳ್ಳಲು ಬಳಸುವ ಕುರ್ಚಿ ಕಂ ಮಂಚದ ಮೇಲೆ ಕುಳಿತಿದ್ದಾನೆ, ಅರ್ಜಿಯನ್ನು ಬರೆದು ಮುಗಿಸಿದ್ದಾನೆ. ನಾಲ್ಕಾರು ದಿನಗಳು ಕಳೆದಿರ ಬೇಕು, ಊರಿನ ಪಂಚಾಯ್ತಿ ನಡೆಯುವಾಗ ದಲಿತ ಕೇರಿಯ ಯುವಕನ ತಂದೆ, ನ್ಯಾಯ ಇತ್ಯರ್ಥ ಮಾಡುವ ಪಟೇಲನಿಗೆ ಏನೋ ಸಲಹೆ ಕೊಡಲು ಹೋಗಿದ್ದಾನೆ. ಅಷ್ಟಕ್ಕೆ ಪಟೇಲನಿಗೆ ಪಿತ್ಥ ನೆತ್ತಿಗೇರಿದೆ "ಲೋ ಕರಿಯ ಸುಮ್ನೆ ಕುಂತ್ಕಳೋ ಬೋ... ಮಗ್ನೆ ನೀನೇನು ಸರಿಯಾದನಾ ? ನಿನ್ ಮಗನಿಗೆ ಬುದ್ದಿ ಹೇಳೋಕಾಗಲ್ವಾ ? ಆ ರಂಡೆ ಮಗ ಅರ್ಜಿ ಬರೆಯೋಕೆ ಬಂದ ದಿನ ಮನೆ ವಳೀಕೇ ಬತಾನೆ, ಮಂಚದ ಮೇಲ್ ಕುತ್ಕತನೇ, ಅವತ್ತೆ ತಿಕ್ಕೆ ಉಗ್ದು ಬಹಿಷ್ಕಾರ ಹಾಕನ ಅಂತಿದ್ದೆ ಸುಮ್ನಾಗಿದೀನಿ ಬೋಸುಡಿ ಮಗನೆ" ಘಟನೆ ನಡೆದಾಗ ಈ ಹುಡ್ಗ ಅಲ್ಲೇ ಇದ್ನಂತೆ ಮನಸ್ಸಿಗೆ ತುಂಬಾ ನೊಂದುಕೊಂಡು ಬಂದಿದ್ದ. 
                                                     *********
                ಅವತ್ತು ಆಲೂಗಡ್ಡೆ ತುಂಬಿಕೊಂಡು ಬರುತ್ತಿದ್ದ ಮಿನಿಟ್ರಕ ವೊಂದು ಉರುಳಿದ ಸುದ್ದಿ ಬಂತು, ತಕ್ಷಣ ಸ್ಥಳಕ್ಕೆ ಧಾವಿಸಿದೆ. 3ಅಮಾಯಕ ಜೀವಗಳು ಸ್ಥಳದಲ್ಲೇ ಶವವಾಗಿದ್ದವು. ಪಕ್ಕದ ಹಳ್ಳಿಯ ಜನ ಆಗಲೇ ಅಲ್ಲೆಲ್ಲಾ ನೆರೆದಿದ್ದರು. ಸಾಲ-ಸೋಲ ಮಾಡಿ ನಾಲ್ಕಾರು ಮಂದಿ ರೈತ ಕೂರ್ಮಿಕರು ಆಲೂಗಡ್ಡೆ ಬಿತ್ತನೆ ಬೀಜವನ್ನು ತುಂಬಿಕೊಂಡು ಜೀಪ್ ಟ್ರಕ್ ಒಳಗೆ ಕೂರಲು ಸ್ಥಳವಿಲ್ಲದೇ ಹಿಂಬದಿಯ ಲೋಡ್ ಮೇಲೆ ಕೂತು ಪ್ರಯಾಣಿಸುತ್ತಿದ್ದಾರೆ. ತಿರುವೊಂದರಲ್ಲಿ ವೇಗವಾಗಿ ಸಾಗುತ್ತಿದ್ದ ಟ್ರಕ್ ಆಯಾ ತಪ್ಪಿ ಮಗುಚಿಕೊಂಡಿದೆ. ಮೂಟೆಗಳ ಮೇಲೆ ಕುಳಿತವರ ಮೇಲೆಯೇ ಮೂಟೆಗಳೆಲ್ಲ ಬಿದ್ದಿವೆ ಅರೆಜೀವವಾಗಿ ಸೆಣಸಿ ಪ್ರಾಣ ಬಿಟ್ಟಿದ್ದಾರೆ. ಜೀಪ್ ಬೀಳುತ್ತಿದ್ದಂತೆ ಸ್ಥಳಕ್ಕೆ ಬಂದ ಪಕ್ಕದ ಹಳ್ಳಿಯ ಆ ಜನ ಅಪಘಾತಕ್ಕೀಡದಾವರ ನೆರವಿಗೆ ಧಾವಿಸುವ ಮುನ್ನ, ದುರಂತಕ್ಕೆ ಸಿಲುಕಿದವರು ದಲಿತರು ಎಂದು ಗೊತ್ತಾಗುತ್ತಿದ್ದಂತೆಯೇ ಮೂಗು ಮುರಿದು ವಾಪಾಸಾಗಿದ್ದಾರೆ. ಅಲ್ಲಿದ್ದ ಜನರ ಪ್ರಕಾರ ತತ್ ಕ್ಷಣ ಸ್ಥಳಕ್ಕೆ ಬಂದ ಹಳ್ಳಿಗರು ಸಹಾಯ ಹಸ್ತ ಚಾಚಿದ್ದರೆ ಒಂದೆರೆಡಾದರೂ ಜೀವಗಳು ಉಳಿಯುತ್ತಿದ್ದವೇನೋ?
                                                     *********
           ಭಾರತವನ್ನು ಮುಘಲರು 400ವರ್ಷಗಳ ಕಾಲ ಆಳಿದ ಇತಿಹಾಸವಿದೆ, ಹಾಗೆಯೇ ಬ್ರಿಟೀಷರು ಬರೋಬ್ಬರಿ 90ವರ್ಷಗಳ ಕಾಲ ಆಳಿದ್ದಾರೆ ಈ ಅವಧಿಯಲ್ಲಿ ಆಡಳಿತಾತ್ಮಕ ಸುಧಾರಣೆಗಳು, ಅಭಿವೃದ್ದಿಗಳು ಬದಲಾವಣೆ ಕಂಡಿವೆ. ಆದರೆ ಜಾತಿ ವ್ಯವಸ್ಥೆಯಲ್ಲಿ ಮಾತ್ರ ಬದಲಾವಣೆ ಮರಿಚಿಕೆಯಾಗಿಯೇ ಉಳಿದು ಹೋಗಿದೆ. ಮುಘಲರ ಅವಧಿಯಲ್ಲಿ ಪುರೋಹಿತ ಷಾಹಿ ನಿಲುವುಗಳಿಗೆ ಕಡಿವಾಣ ಹಾಕುವ ಪ್ರಯತ್ನವಾದರೂ  ಮೂಲಭೂತವಾದಿ ಮನೋಧರ್ಮ ಮಾತ್ರ ಹಾಗೆಯೇ ಉಳಿಯಿತು. ಅದೇ ರೀತಿ ಬ್ರಿಟೀಷ್ ರಾಜ್ ನಲ್ಲಿ ವರ್ಣಭೇಧ ನೀತಿಯ ಹುಳುಕುಗಳು ಒಡೆದು ಆಳುವ ಭೂಮಿಕೆಯನ್ನು ಸೃಷ್ಟಿಸಿ ಅಂತರವನ್ನು ಹೆಚ್ಚಿಸಿದವು ಆದರೆ ಭಾರತದ ರಾಜರುಗಳ ಆಳ್ವಿಕೆಯಲ್ಲಿ ವರ್ಗಭೇಧದಂತಹ ಸಂಗತಿಗಳು ಕೊಂಚ ಮಟ್ಟಿಗೆ ಸುಧಾರಣೆ ಕಂಡವು. ಮಹಾರಾಷ್ಟ್ರದಲ್ಲಿ ಆರಂಭಗೊಂಡ ಸುಧಾರಣೆಯ ಗಾಳಿ ಎಲ್ಲೆಡೆ ಬೀಸಲಾರಂಭಿಸಿತು, ಅದು ಮೈಸೂರು ಕರ್ನಾಟಕಕ್ಕೂ ತಲುಪಿ ಮಹತ್ವದ ಘಟ್ಟಗಳನ್ನು ಕಾಣುವಂತಾಯಿತು. ದಲಿತರಿಗೆ ಶೋಷಿತರಿಗೆ ಮೀಸಲಾತಿಯ ಕಲ್ಪನೆಯನ್ನು ಕೊಟ್ಟ ಮೈಸೂರು ಅರಸರು (ಒಡೆಯರ್) ಸಮಾನತೆಯ ಪ್ರತಿಪಾದಕರಾಗಿ ಇತಿಹಾಸದಲ್ಲಿ ದಾಖಲಾದರು. ನಂತರದ್ದು ಇತಿಹಾಸ, ಅಂಬೇಡ್ಕರ್ ದೇಶದಾಧ್ಯಂತ ಸಮಾನತೆಯ ಹಕ್ಕಿಗಾಗಿ ಸೃಷ್ಟಿಸಿದ ಸಂಚಲನ, ಸಂವಿಧಾನ ರಚನೆ ಮತ್ತು ಆ ಮೂಲಕ ದಲಿತರು, ದುರ್ಬಲರು, ಶೋಷಿತರಿಗೆ ನೀಡಿದ ರಕ್ಷಣೆ ಕೊಂಚವಾದರೂ ಉಸಿರಾಡುವಂತೆ ಮಾಡಿದೆ. 
          ದಕ್ಷಿಣ ಆಫ್ರಿಕಾದ ಕರಿಯರು ವರ್ಣಭೇಧದ ನೋವನ್ನಷ್ಠೇ ಅನುಭವಿಸತ್ತಾರೆ,ಅಲ್ಲಿ ಅವರಿಗೆ ಬದುಕುವ ಹಕ್ಕುಗಳು ಸಮಾನವಾಗಿ ಹಂಚಿಕೆಯಾಗಿದೆ, ಆದರೆ ಭಾರತ ದೇಶದ ದಲಿತರು ತಾರತಮ್ಯವನ್ನಷೆ ಅಲ್ಲದೇ ಬದುಕುವ ಹಕ್ಕುಗಳನ್ನೇ ನಿರಾಕರಿಸಲ್ಪಡುತ್ತಾರೆ ಎಂಬುದು ನೋವಿನ ಸಂಗತಿ. ಸಂವಿಧಾನ ರಚನೆಯಾಗಿ ಆರೂವರೆ ದಶಕಗಳಾಗಿವೆ, ದಲಿತರಿಗೆ ಸಂವಿಧಾನ ಬದ್ದ ರಕ್ಷಣೆಯೂ ಇದೆ ಆದರೆ ಅದು ಹೆಸರಿಗೆ ಮಾತ್ರ. ದಲಿತರನ್ನು ರಕ್ಷಿಸುವ ಕಾನೂನುಗಳು ಪುಸ್ತಕಗಳಲ್ಲಿ ಉಳಿದಿವೆಯೇ ವಿನಹ ಅನುಷ್ಠಾನಕ್ಕೆ ಬಂದಿಲ್ಲ, ರಾಜಕೀಯ ಹಿತಾಸಕ್ತಿಗಳು ಮತ್ತು ಆಡಳಿತಷಾಹಿ ಅಲ್ಲಿಯೂ ಪುರೋಗಾಮಿ ನಿಲುವುಗಳಿಗೆ ಶರಣಾಗಿದೆ ಎಂಬುದು ವರ್ತಮಾನದ ದುರಂತ. ಇತ್ತೀಚಿನ ದಿನಗಳಲ್ಲಿ ದಲಿತರನ್ನು ಮೀಸಲಾತಿಯ ನೆಲೆಯಲ್ಲಿ ಕುಹಕದಿಂದ ನೋಡಲಾಗುತ್ತದೆ, ಆದರೆ ಅವರಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಎಂತಹ ಸ್ಥಾನಮಾನಗಳಿವೆ ಎಂಬುದು ಚರ್ಚೆಗೆ ಬರುವುದೇ ಇಲ್ಲ, ಶತಮಾನಗಳಿಂದ ಅಕ್ಷರ ವಂಚಿತರಾಗಿದ್ದ ದಲಿತರು ಕೆಲವು ದಶಕಗಳಿಂದ ಅಕ್ಷರವಂತರಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ ಎಂಬುದು ಮುಂದುವರೆದ ವಲಯದ ಜನರಿಗೆ ಅರಗಿಸಿಕೊಳ್ಳಲಾಗದ ಸಂಗತಿ. 
          ಜಾತಿಯ ಕಂದಕ ಈ ಹಿಂದೆಂದಿಗಿಂತಲೂ ಈಗ ಹೆಚ್ಚು ಬಲಗೊಳ್ಳುತ್ತಿದೆ, ಹುಸಿ ಭ್ರಮೆಗಳು ಜಾತೀಯ ಕಬಂಧ ಬಾಹುಗಳಲ್ಲಿ ಸಿಲುಕಿಸುತ್ತಿದೆ, ದೇಶದ ಸಂವಿಧಾನದಲ್ಲಿ ದಲಿತರಿಗೆ ಮಾತ್ರ ಮೀಸಲಾತಿಯ ರಕ್ಷಣೆಯಿಲ್ಲ, ದಲಿತರಿಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿ ದಲಿತೇತರರಾದ ಶೂದ್ರರು, ಹಿಂದುಳಿದವರಿಗೆ ಇದೆ ಎಂಬ ಸತ್ಯದ ಅರಿವು ಆಗದಿರುವುದೇ ದಲಿತರನ್ನು ಇನ್ನೂ ಸಂಕಟದ ಒಲೆಯಲ್ಲಿ ಬೇಯುವಂತೆ ಮಾಡಿದೆ. ಹಿಂದುಳಿದ ವರ್ಗಗಳ ಸಮಾನತೆಯ ಹರಿಕಾರ ಮಾಜಿ ಪ್ರಧಾನಿ ವಿ ಪಿ ಸಿಂಗ್ ಕನಸಿನ ಮಂಡಲ್ ಆಯೋಗದ ವರದಿ ಸಂವಿಧಾನಾತ್ಮಕವಾಗಿ ಶೂದ್ರರಿಗೆ ಮೀಸಲಾತಿ ಕಲ್ಪನೆಯನ್ನು ಎತ್ತಿ ಹಿಡಿದಿದೆ, ಇದನ್ನು ಪಕ್ಕದ ಆಂಧ್ರ ಮತ್ತು ತಮಿಳುನಾಡು ಸುಗ್ರಿವಾಜ್ಞೆ ಮೂಲಕ ದಕ್ಕಿಸಿಕೊಂಡಿವೆ. ಈಗಿನ ಜಾತಿ ಜನಗಣತಿಯಲ್ಲಿ ಅರ್ಹರಿಗೆ ಸಂವಿಧಾನಾತ್ಮಕ ರಕ್ಷಣೆ ನೀಡುವ ಎಲ್ಲಾ ಆಶಯಗಳ ಅನುಷ್ಟಾನದ ಉದ್ದೇಶ ಇದ್ದಂತಿದೆ. ಹಾಗಾಗಿ ಅಂಬೇಡ್ಕರ ಜಯಂತಿಯ ಈ ಸಂಧರ್ಭದಲ್ಲಿ ಯಾವುದೇ ಜಿಜ್ಞಾಸೆಗೆ ಒಳಗಾಗದೇ ನಡೆದುಕೊಳ್ಳುವುದು ಸೂಕ್ತವಾಗಿದೆ ಆ ಮೂಲಕವಾದರೂ ಸಮಾಜದಲ್ಲಿ ಸಮಾನತೆ ಸಾಕಾರವಾಗುವುದೇ ? ಕುವೆಂಪು ಆಶಯದಂತೆ ಜಾತಿ ಮತದ ಎಲ್ಲೆ ಮೀರಲು ಸಾಧ್ಯವಾಗುವುದೇ ಕಾದು ನೋಡುವ.

Sunday, March 22, 2015

ವಕೀಲ ರಶೀದ್ ಹತ್ಯೆಯೂ, ರವಿ ಸಾವಿನ ಪ್ರಕರಣವೂ!


ಅದು 3ದಶಕಗಳ ಹಿಂದೆ ಭಾರೀ ಕುತೂಹಲ ಹುಟ್ಟಿಸಿದ ಮರ್ಡರ್ ಕಥನ! ಅವತ್ತು ಆಗಸ್ಟ್ 17, 1987 ಕೇರಳದ ವಕೀಲ ಅಬ್ದುಲ್ ರಶೀದ್ ರನ್ನು ಬರ್ಭರವಾಗಿ ಹತ್ಯೆಗೈದು ರೈಲ್ವೇ ಹಳಿಗಳ ಮೇಲೆ ದುಷ್ಕರ್ಮಿಗಳು ಬಿಸಾಡಿ ಹೋಗಿದ್ದರು. ಶವ ಪತ್ತೆಯಾಗಿದ್ದು ತಮಿಳು ನಾಡಿನ ಡ್ಯಾನಿಶ್ ಪೇಟೆಯ ರೈಲ್ವೇ ಹಳಿಗಳ ಪಕ್ಕ, ಸೇಲಂ ಪೋಲೀಸರು ಹತ್ಯೆಯನ್ನು ದಾಖಲು ಮಾಡಿಕೊಂಡಿದ್ದರು, ಕೊಲೆಯಾಗಿದ್ದ ವಕೀಲನ ಮೇಲೆ ಕರ್ನಾಟಕ ರಾಜ್ಯದಲ್ಲಿ ಅತ್ಯಾಚಾರದ ಪ್ರಕರಣ ದಾಖಲಾಗಿ ವಿಚಾರಣೆ ನ್ಯಾಯಾಲಯದಲ್ಲಿತ್ತು.ಆ ವಕೀಲ, ಅವತ್ತಿಗೆ ರಾಜ್ಯದಲ್ಲಿ ಗೃಹ ಸಚಿವರಾಗಿದ್ದ ಪ್ರಭಾವಿ ರಾಜಕಾರಣಿಯೊಬ್ಬರ ಅಪೇಕ್ಷೆಗೆ ವಿರುದ್ದವಾಗಿ ಮೆಡಿಕಲ್ ವಿದ್ಯಾಸಂಸ್ಥೆ ತೆರೆಯುವ  ಎದುರು ಪಾರ್ಟಿದಾರರ ಪರ ವಕಾಲತ್ತು ಹಾಕಿ ಆರಂಭದಲ್ಲೆ ಯಶಸ್ವಿಯಾಗಿ ಬಿಟ್ಟಿದ್ದ. ರಶೀದ್ ಶವವಾಗಿ ಪತ್ತೆಯಾಗುತ್ತಲೇ ರಾಷ್ಟ್ರಾಧ್ಯಂತ ಸುದ್ದಿಯಾಗಿದ್ದ ಆ ಪ್ರಕರಣದ ಅನುಮಾನದ ಎಳೆಗಳು ವೃತ್ತಿ ಪರ ವಿದ್ಯಾಸಂಸ್ಥೆಗಳ ಒಡೆಯ, ಪ್ರಭಾವಿ ರಾಜಕಾರಣಿ, ಸರ್ಕಾರದ ಗೃಹ ಸಚಿವ ಆರ್ ಎಲ್ ಜಾಲಪ್ಪ ಕಡೆಗೆ ತಿರುಗಿತ್ತು. 
   ರಾಜ್ಯ ಸರ್ಕಾರದ ಗೃಹ ಸಚಿವರು ಮತ್ತು ಪೋಲೀಸರ ವಿರುದ್ದವೇ ಅನುಮಾನಗಳು ಸಾರ್ವತ್ರಿಕವಾಗಿ ಹೊಗೆಯಾಡಲಾರಂಭಿಸಿ ವಕೀಲರು, ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇಕ್ಕಟ್ಟಿಗೆ ಸಿಲುಕಿದ್ದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪ್ರಕರಣವನ್ನು ಸಿಬಿಐ ಗೆ ವರ್ಗಾಯಿಸಿದ್ದರು. ಅಸಲಿಗೆ ಅವತ್ತು ಆ ಪ್ರಕರಣದಲ್ಲಿ ಆಗಿದ್ದೇನು? 
ಈಡಿಗ ಸಮುದಾಯದ ಪ್ರಭಾವಿ ರಾಜಕಾರಣಿ ವೃತ್ತಿ ಪರ ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದ ಗೃಹ ಸಚಿವ ಆರ್ ಎಲ್ ಜಾಲಪ್ಪ ಕೋಲಾರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತೆರೆಯಲು ಅರ್ಜಿ ಗುಜರಾಯಿಸಿದ್ದರು.ಅದೇ ವೇಳೆಗೆ ಕೇರಳ ರಾಜ್ಯದ ಉದ್ಯಮಿ ಪಿ ಸದಾಶಿವನ್ ಕೂಡ ಕೋಲಾರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತೆರೆಯಲು ಅರ್ಜಿ ಹಾಕಿದ್ದರು. ಇದು ಗೃಹ ಸಚಿವ ಆರ್ ಎಲ್ ಜಾಲಪ್ಪನವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.  ಈ ಸಂಧರ್ಭದಲ್ಲಿ ಸದಾಶಿವನ್ ರ ಟ್ರಸ್ಟ್ ನಲ್ಲಿ ಉಂಟಾಗಿದ್ದ ವ್ಯಾಜ್ಯವೊಂದನ್ನು ನಿಭಾಯಿಸಲು ವಕೀಲ ಅಬ್ದುಲ್ ರಶೀದ್ ನನ್ನು ರಾಜ್ಯಕ್ಕೆ ಕರೆಸಲಾಗಿತ್ತು. 
         ಜವಾಹರ್ ಭಾರತಿ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಸದಾಶಿವನ್ ನಡೆಸುತ್ತಿದ್ದ ರಾಜೀವ್ ಗಾಂಧಿ ಎಜುಕೇಶನ್ ಕಾಲೇಜಿನ ಬಿಎಡ್ ಸಂಸ್ಥೆಯ ಪ್ರಾಂಶುಪಾಲೆಯಾಗಿದ್ದ ಮಹಿಳೆ ರತ್ನ. ಸದಾಶಿವನ್ ಟ್ರಸ್ಟ್ ನಲ್ಲಿ ಉಂಟಾದ ಭಿನ್ನಮತದಿಂದ ಸದಸ್ಯರಾದ ಮರಿಯಪ್ಪ ಮತ್ತು ಶ್ರೀನಿವಾಸನ್, ಸದಾಶಿವನ್ ವಿರುದ್ದ ವ್ಯಾಜ್ಯ ದಾಖಲಿಸಿದ್ದರು. ಇದೇ ವೇಳೆಗೆ ರತ್ನಳನ್ನು ಸದಾಶಿವನ್ ಪ್ರಾಂಶುಪಾಲೆ ಹುದ್ದೆಯಿಂದ ತೆರವು ಗೊಳಿಸಿ ಬಿಟ್ಟರು. ಆದರೆ ಶ್ರೀನಿವಾಸನ್ ಮತ್ತು ಮರಿಯಪ್ಪ ಪ್ರಾಂಶುಪಾಲೆ ಹುದ್ದೆಯಿಂದ ತೆರವಾದ ರತ್ನಳ ಪರವಾಗಿ ನಿಂತರು. ಸಹಾಯಕ್ಕಾಗಿ ಯಾಚಿಸಿ ಎದುರಾಳಿಯಾಗಿದ್ದ ಗೃಹ ಸಚಿವ ಆರ್ ಎಲ್ ಜಾಲಪ್ಪ ಬಳಿ ಕರೆದೊಯ್ದು  ಅಳಲು ತೋಡಿಕೊಂಡರು, ಸಹಾಯಕ್ಕಾಗಿ ಕೋರಿದರು. ವೃತ್ತಿ ಶಿಕ್ಷಣ ಕಾಲೇಜು ತೆರೆಯಲು ಪ್ರತಿಸ್ಪರ್ಧಿಯಾಗಿದ್ದ ಸದಾಶಿವನ್ ರನ್ನು ಹಿಮ್ಮೆಟ್ಟಿಸಲು ಇದನ್ನು ದಾಳವಾಗಿ ತೆಗೆದುಕೊಂಡ ಜಾಲಪ್ಪ, ಅಂದಿನ ಬೆಂಗಳೂರು ಡಿಸಿಪಿ ನಾರಾಯಣನ್ ರನ್ನು ಕರೆದು ಸದಾಶಿವನ್ ಪರ ವಕಾಲತ್ತು ವಹಿಸಿರುವ ವಕೀಲ ರಶೀದ್ ಗೆ ಸರಿಯಾದ ಪಾಠ ಕಲಿಸಲು ಸೂಚಿಸಿ ಬಿಟ್ಟರು. ಡಿಸಿಪಿ ನಾರಾಯಣನ್ ಆ ಕೆಲಸವನ್ನು ಸಬ್ ಇನ್ಸ್ ಪೆಕ್ಟರ್ ಉತ್ತಪ್ಪ ಎಂಬಾತನಿಗೆ ವಹಿಸಿದರು. 
         ಸದಾಶಿವನ್ ರ ವಿದ್ಯಾ ಸಂಸ್ಥೆಯಲ್ಲಿ ಹೊಸದಾಗಿ ನೇಮಕಗೊಂಡಿದ್ದ ಪ್ರಾಂಶುಪಾಲರಿಗೆ ಅಧಿಕಾರ ವಹಿಸುವಂತೆ ರತ್ನ ರಿಗೆ ಒತ್ತಡ ಹೇರುತ್ತಿದ್ದ ವಕೀಲ ರಶೀದ್ ನನ್ನು ಪೋಲೀಸರು ಬಂಧಿಸಿ ಕರೆದೊಯ್ದರು ಮತ್ತು ಆತನ ಮೇಲೆ ಅತ್ಯಾಚಾರ ಮತ್ತು ಹಿಂಸೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಬಿಟ್ಟರು. ಅಂದಿನ ನ್ಯಾಯಾಧೀಶ ಗೋಪಾಲಗೌಡರ ಮುಂದೆ ಹಾಜರು ಪಡಿಸಿದ್ದರು. ಆಗ ಪೋಲೀಸರಿಂದ ತನಗಾದ ಹಿಂಸೆಯನ್ನು ವಿವರಿಸಿದ ರಶೀದ್ ತನಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಸದಾಶಿವನ್ ತನ್ನ ವಕೀಲನಿಗೆ ಬೈಲ್ ಕೊಡಿಸುವಲ್ಲಿ ಯಶಸ್ವಿಯಾದರು. ಆಗಸ್ಟ್ 16,1987 ಬೆಂಗಳೂರು ನಗರದ ಸಂದ್ಯಾ ಲಾಡ್ಜ್ ನ್ಲಲಿ ತಂಗಿದ್ದ ವಕೀಲ ರಶೀದ್ ನನ್ನು ಮತ್ತೆ ಅನಾಮತ್ತಾಗಿ ವಶಕ್ಕೆ ತೆಗೆದುಕೊಂಡ ಪೋಲೀಸರ್ ಸ್ವಸ್ತಿಕ ಸಿನಿಮಾ ಥಿಯೇಟರ್ ನ ಸಮೀಪದ ಸತ್ಯಪ್ರಕಾಶ್ ವಸತಿ ಗೃಹದ ಕೊಠಡಿ ಸಂಖ್ಯೆ 11ರಲ್ಲಿ ಕೂಡಿ  ಹಾಕಿ ಮನಬಂದಂತೆ ಥಳಿಸಿದರು, ಪೋಲೀಸರ ಹೊಡೆತಕ್ಕೆ ಸಿಲುಕಿ ನಲುಗಿದ ವಕೀಲ ರಶೀದ್ ಸ್ಥಳದಲ್ಲೇ ಸತ್ತು ಹೋಗಿ ಬಿಟ್ಟ.ಮದ್ಯ ರಾತ್ರಿಯ  ನಂತರ ರಶೀದ್ ನ ಶವವನ್ನು ಅಂದಿನ ರೌಡಿ ಶೀಟರ್ ಗಳಾದ ಗೋವಿಂದ ಪ್ರಸಾದ್, ಪಾಂಡಿಯನ್, ಶಿವಕುಮಾರ್ ಮತ್ತು ರಂಗನಾಥ್ ಜೊತೆ ಪೋಲೀಸರು  ಕಾರಿನಲ್ಲಿ ಹಾಕಿಕೊಂಡು ಸೇಲಂ ಜಿಲ್ಲೆಯ ಡ್ಯಾನಿಶ್ ಪೇಟೆಯ ರೈಲ್ವೇ ಹಳಿಗಳ ಬಳಿ ಬಿಸಾಡಿ ಬಿಟ್ಟರು. 
       ಮರುದಿನ ಸೇಲಂ ಪೋಲೀಸರು ಶವವನ್ನು ಕಂಡು ಪ್ರಕರಣ ದಾಖಲಿಸಿದರು, ಶವ ರಶೀದ್ ನದ್ದೇ ಎಂಬುದು ಅಷ್ಟೊತ್ತಿಗಾಗಲೇ  ಗೊತ್ತಾಗಿ ಹೋಗಿತ್ತು. ಆತನ ವಿರುದ್ದ ಅತ್ಯಾಚಾರ ಪ್ರಕರಣ ಇದ್ದುದು, ಪೋಲೀಸ್ ಕಸ್ಟಡಿಯಿಂದ ಬಿಡುಗಡೆ ಹೊಂದಿದ್ದ ರಶೀದ್ ಬರ್ಭರವಾಗಿ ಕೊಲೆಯಾಗಿ ಹೋದಾಗ ಇಡೀ ವಕೀಲ ಸಮೂಹವೇ ಬೆಚ್ಚಿ ಬಿದ್ದಿತ್ತು. ಇಡೀ ಪ್ರಕರಣದ ಕೇಂದ್ರ ಬಿಂದು ಪೋಲೀಸರೇ ಆಗಿದ್ದರು. ವಕೀಲರು ಸಭೆ ಸೇರಿ ರಾಜ್ಯದಾಧ್ಯಂತ ಹರತಾಳ, ಪ್ರತಿಭಟನೆ ಶುರು ಮಾಡಿದರು. ರಾಷ್ಟ್ರ ಮಟ್ಟದಲ್ಲಿ ಪ್ರಕರಣ ಪ್ರತಿಧ್ವನಿಸಿತು. ದಿನಗಳು ಕಳೆದಂತೆ ಪ್ರಕರಣ ಗೃಹ ಸಚಿವರ ಆರ್ ಎಲ್ ಜಾಲಪ್ಪನವರನ್ನೆ ಸುತ್ತಿಕೊಂಡಿತು. ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸಿಬಿಐ ಗೆ ವಹಿಸಿತು. ಹಲವು ವರ್ಷಗಳ ನಂತರ ಪ್ರಕರಣ ಸಾಬೀತಾಗಿ ಅಂತ್ಯ ಕಂಡಿತು. 
       ಇವತ್ತು ನಮ್ಮ ಮುಂದೆ ಹೆಚ್ಚು ಕಡಿಮೆ ಅದೇ ಮಾದರಿಯ ಪ್ರಕರಣವೊಂದು ರಾಜ್ಯದಲ್ಲಿ ಜರುಗಿದೆ. ದಕ್ಷ ಹಾಗೂ ಪ್ರಾಮಾಣಿಕ ಅದಿಕಾರಿಯೆಂದೇ ಹೆಸರು ಮಾಡಿದ್ದ ಐ ಎ ಎಸ್ ಅದಿಕಾರಿ ಡಿ ಕೆ ರವಿಯ ಸಾವು ಸದ್ಯಕ್ಕೆ ಉತ್ತರ ಸಿಗದ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರವಿಯ ಸಾವಿನ ನಂತರದ ಅಷ್ಟೂ ಘಟನೆಗಳು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿವೆ. ಪ್ರಕರಣದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಿತಾಸಕ್ತಿ ರಾಜಕೀಯ ಮಾಡುತ್ತಿವೆ. ರಾಜ್ಯ ಸರ್ಕಾರ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುವ ಮೂಲಕ ಸಾರ್ವತ್ರಿಕ ವಿಶ್ವಾಸವನ್ನು ಕಳೆದು ಕೊಳ್ಳುತ್ತಿದೆ. ಅನಮಾನಸ್ಪದವಾಗಿ ಸತ್ತ ರವಿಯ ತೇಜೋವಧೆಗೆ ಸರ್ಕಾರ ಮುಂದಾಗಿದೆ. ವ್ಯಕ್ತಿಯೋರ್ವನ ಸಾವಿಗೆ ಸಂಬಂಧಿಸಿದ ಸಂಗತಿಗಳು ತನಿಖೆಯ ನಂತರ ಹೊರಬೀಳಬೇಕು ಆದರೆ ಅದಕ್ಕೆ ಮುನ್ನವೇ ಮಾಧ್ಯಮಗಳ ಮೂಲಕ ತನಿಖಾ ವರದಿಗಳು ಮತ್ತಿತರ ವಿವರಗಳು ಹೊರಬೀಳುತ್ತಿವೆಯೆಂದರೆ ರಾಜ್ಯದ ಪೋಲೀಸ್ ವ್ಯವಸ್ಥೆಯ ಮೇಲೆ ಅದಿನ್ನೆಂತಹ ವಿಶ್ವಾಸ ಇಡುತ್ತಾರೆ ರಾಜ್ಯದ ಜನತೆ? ರವಿಯ ಖಾಸಗಿ ಬದುಕು ಏನೇ ಆಗಿರ ಬಹುದು ಆದರೆ ಅದಕ್ಕೂ ಸಾವಿಗೂ ಸಂಪರ್ಕಿಸುವ ಮೂಲಕ ಅಸಲಿ ಅನುಮಾನದ ದಿಕ್ಕುಗಳನ್ನು ಸರ್ಕಾರ ತಪ್ಪಿಸಲು ಹೊರಟಂತಿದೆ. ಇವತ್ತು (ಮಾ.23,2015) ರಾಜ್ಯ ಸರ್ಕಾರ ಅಧಿವೇಶನದಲ್ಲಿ ಸಿಓಡಿ ತನಿಖೆಯ ಮದ್ಯಂತರ ವರದಿಯನ್ನು ಪ್ರಕಟಿಸಲಿದೆ ನಂತರ ಸಿಬಿಐ ಗೆ ಪ್ರಕರಣವನ್ನು ದಾಟಿಸಲಿದೆ. 
       ಪ್ರಕರಣದ ನೈಜತೆ ತಿಳಿಯಬೇಕಾದರೆ ಸರ್ಕಾರ ಸಿಓಡಿ ವರದಿಯನ್ನು ಸದನದಲ್ಲಿ ಮಂಡಿಸದೇ ತತ್ ಕ್ಷಣದಿಂದಲೇ ಪ್ರಕರಣವನ್ನು ಬೇಷರತ್ತಾಗಿ ಸಿಬಿಐ ಗೆ ವಹಿಸಿದರೆ ಸರ್ಕಾರದ ಮೇಲಿನ ಗೌರವ ಉಳಿಯುತ್ತದೆ ಇಲ್ಲವೇ ಸರ್ಕಾರವೂ ಕೂಡ ರವಿ ಸಾವಿನ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಅಪಕೀರ್ತಿಗೆ ಪಾತ್ರವಾಗಲಿದೆ ಅಲ್ಲವೇ? 

Sunday, February 22, 2015

ಫ್ಲಕ್ಸ್ ಬ್ಯಾನರು ಹಾವಳಿಗೊಂದು ಮಸೂದೆ ಇರಲಿ!

ರಾಜ್ಯ ಸರ್ಕಾರ ಬಜೆಟ್ ನಂತರದಲ್ಲಿ ಸಾರ್ವತ್ರಿಕವಾಗಿ ಬಿಡು ಬೀಸಾಗಿ ಫ್ಲಕ್ಸ್ ಮತ್ತು ಬ್ಯಾನರ್ ಹಾಕುವುದನ್ನು ನಿಷೇದಿಸಲು ಚಿಂತನೆ ನಡೆಸಿದೆ ಎಂಬ ಸಂಗತಿ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಬ್ಯುಸಿನೆಸ್ಸಿಗೆ ಕುಳಿತ ಬಂಡವಾಳಶಾಹಿಗಳ ನಿದ್ದೆಗೆಡಿಸಿದೆ. ಚುನಾವಣೆ ಸಂಧರ್ಭಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಫ್ಲಕ್ಸ್ ಮತ್ತು ಬ್ಯಾನರ್ ವಹಿವಾಟಿಲ್ಲದೆ ಬಕ್ಕಬಾರಲು ಬಿದ್ದಿತ್ತು, ಬ್ಯಾನರುಗಳಲ್ಲಿ ರಾರಾಜಿಸಲು ಕಾದು ಕುಂತಿದ್ದವರಿಗೂ ದೊಡ್ಡ ನಿರಾಸೆಯಾಗಿತ್ತು, ಈಗ ಮತ್ತೆ ಅದೇ ನಿರಾಸೆ ಇಣುಕುತ್ತಿದೆ. ವರ್ಚಸ್ಸು ಮತ್ತು ಪ್ರತಿಷ್ಠೆಯ ಸಂಕೇತಗಳಾಗಿರುವ ಫ್ಲಕ್ಸ್ ಬ್ಯಾನರುಗಳ ಭರಾಟೆ ಲಂಗು ಲಗಾಮಿಲ್ಲದೇ ಮುಂದುವರೆದಿರುವಾಗ ಅದಕ್ಕೊಂದು ನಿಯಂತ್ರಣ ಹಾಕುವ ಸರ್ಕಾರದ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ ಹೊಟ್ಟೆಪಾಡಿಗಾಗಿ ಬಂಡವಾಳ ಹಾಕಿ ಕುಳಿತ ನಿರುದ್ಯೋಗಿ ಇಂತಹ ನಿಲುವುಗಳಿಂದ ತತ್ತರಿಸಬಹುದು. ಸರ್ಕಾರ ಬ್ಯಾನರ್ ಹಾವಳಿಯನ್ನು ನಿಯಂತ್ರಿಸಲು ಮುಂದಾಗಿದ್ದೇಕೆ? ಅವುಗಳು ಉಂಟು ಮಾಡುತ್ತಿದ್ದ ಕಿರಿ ಕಿರಿಗಳಾದರೂ ಎಂಥಹವು? ಕಾಲ ಘಟ್ಟಗಳಲ್ಲಿ ಆದ ಬದಲಾವಣೆಗಳು ಯಾವೆಲ್ಲ ಸಂಗತಿಗಳನ್ನು ಆಪೋಶನ ತೆಗೆದುಕೊಂಡವು ಎಂಬ ಇಣುಕು ನೋಟ ಇಲ್ಲಿದೆ. 
      ಆಧುನಿಕ ತಂತ್ರಜ್ಞಾನದಿಂದಾಗಿ ಕೆಲಸಗಳು ತ್ವರಿತ ಗತಿಯಲ್ಲಿ ಶೀಘ್ರವಾಗಿ ಆಗುತ್ತವೆ ಎಂಬ ಕಾರಣಕ್ಕೆ ಯಂತ್ರೋಪಕರಣಗಳನ್ನು ಜನ ಜೀವನದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದೆ ಹಾಗಾಗಿ ಇಲ್ಲಿ ಶ್ರಮಕ್ಕಿಂತ 'ಕೌಶಲ್ಯ'ಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದೆಯಷ್ಟೇ.ವರ್ತಮಾನದ ಪ್ರತೀ ಆಗು ಹೋಗುಗಳು ಸಹಾ ಸಾರ್ವತ್ರಿಕವಾಗಿ ಜಾಹೀರಾಗಬೇಕಾದರೆ ವಿವಿಧ ಆಯಾಮಗಳಲ್ಲಿ ಅದನ್ನು ಪ್ರಸ್ತುತ ಪಡಿಸಲಾಗುತ್ತದೆ. ಜನ ಸಾಮಾನ್ಯರ ಅಗತ್ಯತೆಗಳಿಗೆ ಅನುಗುಣವಾಗಿ ಜಾಹೀರಾತುಗಳನ್ನು ಧ್ವನಿಯ ಮೂಲಕ, ಅಕ್ಷರಗಳ ಮೂಲಕ, ಚಿತ್ರಗಳ ಮೂಲಕ, ಗೋಡೆ ಬರಹಗಳ ಮೂಲಕ, ಕರ ಪತ್ರಗಳ ಮೂಲಕ, ಸುದ್ದಿ ವಾಹಿನಿಗಳ ಮೂಲಕ, ಅಂತರ್ಜಾಲದ ಮೂಲಕ, ಮೊಬೈಲ್ ಗಳ ಮೂಲಕ ಹೀಗೆ ಅನೇಕ ವಿಧಗಳ ಮೂಲಕ ಅಭಿವ್ಯಕ್ತಿಸಲಾಗುತ್ತಿದೆ. ನಿಮಗೆ ಗೊತ್ತಿರ ಬೇಕು ರಾಜ ಮಹಾರಾಜರ ಕಾಲದಲ್ಲಿ ಎಲೆಗಳ ಮೇಲೆ, ತಾಳೆಗರಿಗಳಲ್ಲಿ ಭಿನ್ನವತ್ತಳೆಗಳನ್ನು ಮತ್ತು ಬರಹಗಳನ್ನು ಬರೆಯಲಾಗುತ್ತಿತ್ತು. ಪ್ರಾಚೀನ ಗ್ರೀಸ್ ಮತ್ತು ರೋಂ ದೇಶಗಳಲ್ಲಿ ಮೊದಲ ಬಾರಿಗೆ ಸಾರ್ವತ್ರಿಕವಾದ ಪ್ರಚಾರ ಅಭಿವ್ಯಕ್ತಿಗಳನ್ನು ಕಾಣ ಬಹುದಾಗಿತ್ತು. ಕಲ್ಲುಗಳ ಮೇಲೆ ಅಕ್ಷರಗಳನ್ನು, ಅಂಕಿಗಳನ್ನು ಮತ್ತು ಚಿತ್ರಗಳನ್ನು ಕೆತ್ತನೆ ಮಾಡುವ ಮೂಲಕ ಪ್ರಚಾರದ ತಂತ್ರವನ್ನು ಕಂಡು ಕೊಳ್ಳಲಾಯಿತು. ಇದು ಕಂಡು ಬಂದಿದ್ದು ಕ್ರಿ.ಪೂ.4000 ರಲ್ಲಿ!
     ಮುಂದೆ ಇದೇ ತಂತ್ರವನ್ನು ಬಣ್ಣದ ಮೂಲಕ ಕಲ್ಲಿನ ಮೇಲೆ ಬರೆಯುವ ಕ್ರಿಯೆ ಆರಂಭವಾಗಿ ಅದು ಏಷ್ಯಾ ಖಂಡ, ಆಫ್ರಿಕಾ ಖಂಡ ಮತ್ತು ಅಮೇರಿಕಾ ಖಂಡದ ವಿವಿಧ ದೇಶಗಳಿಗೆ ವಿಸ್ತರಿಸಲ್ಪಟ್ಟಿತು. ವಾಣಿಜ್ಯ ಉದ್ದೇಶಕ್ಕೆ, ಸಾಹಿತ್ಯ ಪ್ರಸಾರಕ್ಕೆ, ಕ್ರಾಂತಿಕಾರಿ ಹೋರಾಟಗಳಿಗೆ, ಸ್ವಾತಂತ್ರ್ಯದ ಹೋರಾಟಗಳಿಗೆ ಜಾಹೀರಾತಿನ ವಿವಿಧ ಆಯಾಮಗಳನ್ನು ಅನ್ವೇಷಿಸಲಾಯಿತು. 7ನೇ ಶತಮಾನದಲ್ಲಿ ಚೀನಾದಲ್ಲಿ ನಡೆದ ಅವಿಷ್ಕಾರದಲ್ಲಿ ಪೇಪರಿನ ಮೇಲೆ ಇಂಕನ್ನು ಬಳಸಿ ಬರೆಯುವ ಮೂಲಕ ಹೊಸ ಸಾಧ್ಯತೆಗಳು ತೆರೆದುಕೊಂಡವು. ಹೀಗೆ ಕಾಲ ಘಟ್ಟದಲ್ಲಿ ಬದಲಾವಣೆಗೊಂಡ ಜಾಹೀರಾತು ಅಭಿವ್ಯಕ್ತಿ ಮಾಧ್ಯಮಗಳು ಫ್ಲಕ್ಸ್ ಮತ್ತು ಬ್ಯಾನರ್ ನ ರೂಪದಲ್ಲಿ ಬಂದುನಿಂತಿವೆ. ಈ ಫ್ಲಕ್ಸ್ ಮತ್ತು ಬ್ಯಾನರ್ ಗೂ ಮೊದಲು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚು ಜನ ಸಂದಣಿ ಇರುವ ಸ್ಥಳಗಳಲ್ಲಿ ಬೃಹತ್ ಪರದೆಗಳನ್ನಿಟ್ಟು ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿತ್ತು, ಅದರೆ ಅಲ್ಲಿನ ಜಾಹೀರಾತು ದರ ಎಲ್ಲರಿಗೂ ಎಟಕುವಂತಿರಲಿಲ್ಲ ಹಾಗಾಗಿ ಅದು ಬಂದಷ್ಟೇ ವೇಗದಲ್ಲಿ ಅಂತ್ಯ ಕಂಡಿತು. ದೊಡ್ಡ ದೊಡ್ಡ ಎಂ ಎನ್ ಸಿ ಕಂಪನಿಗಳು ಮಾತ್ರ ಅದನ್ನು ಬಳಸುತ್ತಿವೆ. 
      ಸಕಲ ಮಂದಿಗೂ ಸರಳವಾಗಿ ಮತ್ತು ಕಡಿಮೆ ದರದಲ್ಲಿ ಕೈಗೆಟುಕುವಂತಹ ಜಾಹೀರಾತು ಮಾಧ್ಯಮ ಫ್ಲಕ್ಸ್ ಬ್ಯಾನರ್ ಗಳು. ಆದರೆ ಇವು ಮಾಡುವ ಕಿರಿ ಕಿರಿಗಳು ಒಂದೆರೆಡಲ್ಲ. ತಮಿಳು ನಾಡು ಮತ್ತು ಆಂದ್ರ ಪ್ರದೇಶದಲ್ಲಿ ಹುಟ್ಟಿಕೊಂಡ ಬ್ಯಾನರ್ ಹಾವಳಿ ನಂತರ ರಾಜ್ಯಕ್ಕೆ ವಿಸ್ತರಿಸಿತು. ದಶಕಗಳ ಹಿಂದೆ ಒಂದು ಫ್ಲಕ್ಸ್ ಬ್ಯಾನರ್ ಮಾಡಿಸ ಬೇಕೆಂದರೆ ರಾಜಧಾನಿಗೆ ಹೋಗ ಬೇಕಿತ್ತು. ಈಗ ಪ್ರತೀ ಊರುಗಳಲ್ಲೂ ಪ್ರಿಂಟಿಂಗ್ ಮೆಷಿನುಗಳು ಬಂದು ಕುಳಿತಿವೆ. ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದ ಬ್ಯಾನರ್ ಹಾವಳಿ, ಹೋರಾಟದ ಸಂಘಟನೆಗಳ ಪ್ರತಿಷ್ಠೆಗೆ, ಪುಡಾರಿಗಳ ಪ್ರತಿಷ್ಠೆಗೆ, ಮದುವೆಗೆ, ಆರತಿ ಶಾಸ್ತ್ರಕ್ಕೆ, ಹುಟ್ಟಿದ ಹಬ್ಬಕ್ಕೆ, ತಿಥಿಗೆ ಮತ್ತು ಸತ್ತಾಗ, ಕೆಟ್ಟಾಗ ಎಲ್ಲದಕ್ಕೂ ಬ್ಯಾನರ್ ಹಾಕಲಾಗುತ್ತಿದೆ. 
      ಅದ್ಯಾರೋ ರೌಡಿ ಮಾಡ ಬಾರದ ಕೆಲಸ ಮಾಡಿ ಮರ್ಡರ್ ಆದರೆ, ಪೋಲಿ ತಿರುಗಿಕೊಂಡು ಸಮಾಜ ಕಂಟಕ ಎನಿಸಕೊಂಡವ ಕುಡಿದು, ಕೆಟ್ಟ ಚಟಗಳಿಂದ ಮತಿ ಬ್ರಾಂತನಾಗಿ ಸತ್ತು ಹೋದರೆ 'ಮತ್ತೆ ಹುಟ್ಟಿ ಬಾ ಗೆಳೆಯ' ಎಂಬ ಬ್ಯಾನರುಗಳು ರೇಜಿಗೆ ಹುಟ್ಟಿಸಿ ಬಿಡುತ್ತವೆ. ಗೌಪ್ಯವಾಗಿರ ಬೇಕಾದ ಆರತಿ ಶಾಸ್ತ್ರದ ಸಂಗತಿಯನ್ನು ಜಗಜ್ಜಾಹೀರು ಮಾಡುವುದಲ್ಲದೇ ಪ್ರೌಢಾವಸ್ತೆಗೆ ಬಂದ ಹುಡುಗಿಯ ಚಿತ್ರಗಳನ್ನೇ ವಿವಿಧ ಮಾದರಿಯಲ್ಲಿ ಪ್ರಿಂಟು ಹಾಕಿಸಿ ಊರೆಲ್ಲ ಹಚ್ಚಿ ಬಿಡುತ್ತಾರೆ! ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದಾಗಲಂತೂ ನೂರಾರು ಮಂದಿಯ ಫೋಟೋಗಳನ್ನ್ನು ಒಂದೇ ಬ್ಯಾನರಿಗೆ ಹಾಕಿ ಬೆಳಗಾಗುವುದರೊಳಗೆ ತಂದು ನಿಲ್ಲಿಸಿ ಬಿಡುತ್ತಾರೆ. ಮಂಡ್ಯ ಕಡೆ ಜನರಂತೂ ಗರಿ ಗರಿ ಖಾದಿ ಬಟ್ಟೆಗಳನ್ನು ಹಾಕಿಕೊಂಡು ಒಂದು ಕೈಯಲ್ಲಿ ಫೋನು ಕಿವಿಗೆ ಸಿಕ್ಕಿಸಿಕೊಂಡು ಮತ್ತೊಂದು ಕೈಯಲ್ಲಿ ಜನ ನಾಯಕರ ರೀತಿ ಕೈ ಬೀಸುತ್ತಾ ಇರುವ ಚಿತ್ರಗಳ ಬ್ಯಾನರುಗಳನ್ನು ಹಾಕಿಸಿಕೊಂಡರೆ, ನೆಚ್ಚಿನ ಸಿನಿಮಾ ನಟ ಅಥವ ನಟಿಯ ಕೆನ್ನೆಗೆ, ಕೈಯಿಗೆ ಮುತ್ತಿಡುವ ಚಿತ್ರಗಳನ್ನು ಯಾವುದೇ ಮುಜುಗರವಿಲ್ಲದೇ ಪ್ರಿಂಟು ಹಾಕಿಸಿಕೊಂಡು ಸಾರ್ವತ್ರಿಕ ಸ್ಥಳಗಳಲ್ಲಿ ಪ್ರದರ್ಶಿಸಿ ಬಿಡುತ್ತಾರೆ. ಒಮ್ಮೊಮ್ಮೆ ಈ ಅತಿರೇಕ ಯಾವ ಮಟ್ಟಕ್ಕೆ ಹೋಗಿ ಬಿಡುತ್ತದೆಂದರೆ ಯಾವುದಾದರೂ ಕಾರ್ಯಕ್ರಮ ಇದೆ ಎಂದಾದರೆ ನೂರಾರು ಸಂಖ್ಯೆಯ ಬ್ಯಾನರುಗಳನ್ನು ಮಾಡಿಸಿ ಇಂಚು ಜಾಗ ಬಿಡದಂತೆ ಊರ ತುಂಬ ಹಾಕಿಸುತ್ತಾರೆ. ಇವೆಲ್ಲ ಎಷ್ಟು ಕಿರಿ ಕಿರಿ ಉಂಟು ಮಾಡಿ ಬಿಡುತ್ತವೆಂದರೆ, ಅನೇಕ ಸಲ ಬ್ಯಾನರುಗಳ ವಿಷಯಕ್ಕೆ ದೊಡ್ಡ ಮಟ್ಟದ ಹೊಡದಾಟಗಳು ಆಗಿ ಬಿಡುತ್ತವೆ, ಒಬ್ಬನ ಬ್ಯಾನರಿಗೆ ಇನ್ನೊಬ್ಬ ಬೆಂಕಿ ಹಾಕುತ್ತಾನೆ, ಬ್ಲೇಡು ಹೊಡೆಯುತ್ತಾನೆ ಇಲ್ಲವೇ, ಎದುರಾಳಿಯ ಕಾರ್ಯಕ್ರಮ ಇದ್ದ ದಿನ ಆತನಿಗೆ ಅವಕಾಶ ಸಿಗದಂತೆ ಇವನೇ ಊರತುಂಬ ಇವನ ಚಿತ್ರಗಳ ಬ್ಯಾನರುಗಳನ್ನು ಅಂಟಿಸಿ ಬಿಡುತ್ತಾನೆ. 
    ಬ್ಯಾನರುಗಳು ಬಂದ ಮೇಲೆ ಬಟ್ಟೆಯ ಮೇಲೆ, ಗೋಡೆಯ ಮೇಲೆ ಬರೆಯುತ್ತಿದ್ದ ಕಲಾವಿದರುಗಳು ಕೆಲಸ ಕಳೆದುಕೊಂಡು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡರು, ತಂತ್ರಜ್ಞಾನದ ಅರಿವಿದ್ದವರು ಅಲ್ಲಿ ಪುನರ್ವಸತಿ ಪಡೆದರು, ಆದರೆ ಬಹುತೇಕ ಕಲಾವಿದರ ಬದುಕು ಮೂರಾ ಬಟ್ಟೆ ಆಯಿತು. ಬ್ಯಾನರುಗಳನ್ನು ಅನುಮತಿ ಪಡೆದು, ನಿಗದಿತ ಅವಧಿಗೆ ಮಾತ್ರ ಪ್ರದರ್ಶಿಸುವ ಮಾರ್ಗಸೂಚಿ ತಯಾರಾಗುತ್ತಿದೆ, ಈ ಮಾರ್ಗಸೂಚಿಯಲ್ಲಿ ಯಾವ ಕ್ರಿಯೆಗಳಿಗೆ ಬ್ಯಾನರು ಪ್ರಕಟಣೆ ಮಾಡ ಬಾರದು, ಮತ್ತು ಎಷ್ಟು ಸಂಖ್ಯೆಯಲ್ಲಿರಬೇಕು ಎಂಬುದರ ಜೊತೆಗೆ ಬ್ಯಾನರು ಪ್ರಿಂಟು ಮಾಡಿಸುವವರನ್ನು ಕಡ್ಡಾಯವಾಗಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ನಿಯಂತ್ರಣ ಹೇರಬೇಕಾದುದು ಇಂದಿನ ಅನಿವಾರ್ಯತೆ ಎನಿಸುವುದಿಲ್ಲವೇ? ಅತಿಯಾದರೆ ಎಲ್ಲವೂ ವಿಷವಲ್ಲವೇ? 

Sunday, February 15, 2015

ಭ್ರಮೆಗಳು ಸಾರ್ ಭ್ರಮೆಗಳು!

ಬದುಕು ಸರಾಗವಾದ ಹಾದಿಯಲ್ಲ..! ಅಲ್ಲಿ ಏಳು ಬೀಳುಗಳು ಸಹಜ, ಒಮ್ಮೆ ಉತ್ತುಂಗದಲ್ಲಿದ್ದವರು ಈಗ ಸಾಮಾನ್ಯ ಸ್ಥಿತಿಗೆ ಮರಳಿರ ಬಹುದು.ಸಾಮಾನ್ಯರಾಗಿದ್ದವರು ಎತ್ತರಕ್ಕೆ ತಲುಪಿಕೊಂಡಿರ ಬಹುದು. ಆದರೆ ಎಷ್ಟೋ ಸನ್ನಿವೇಶಗಳಲ್ಲಿ ಪೂರ್ವ ಸ್ಥಿತಿಯನ್ನು ಎಲ್ಲ ಆತಂಕಗಳ ನಡುವೆಯೂ ಕಾಯ್ದುಕೊಂಡು ಹೋಗಲು ಹೆಣಗುವ ವ್ಯಕ್ತಿತ್ವಗಳನ್ನು ನಮ್ಮ ನಡುವೆ ಕಾಣ ಬಹುದು. ಇದು ಕೆಲವೊಮ್ಮೆ ಫನ್ನಿಯಾಗಿ ಮತ್ತೆ ಕೆಲವೊಮ್ಮೆ ವಿಷಾದವಾಗಿ ಕಾಣಬಹುದು. ಅಂತಹ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದೇನೆ ಓದಿಕೊಳ್ಳಿ.
        ಬಹಳಷ್ಟು ಮಂದಿಗೆ ಎಲ್ಲವೂ ಇರುತ್ತದೆ ಆದರೆ ಏನಾದರೊಂದು ಕೊರತೆ ಇದ್ದೆ ಇರುತ್ತೆ ಹಾಗಾಗಿ ಅಂತಹ ವರ್ತುಲದಿಂದ ಆಚೆಗೆ ಅವರು ಬರಲು ಸಾಧ್ಯವಾಗುವುದೇ ಇಲ್ಲ. ನಮ್ಮ ಜಿಲ್ಲೆಯ  ಕಾಫಿ-ಏಲಕ್ಕಿ ಬೆಳೆಗಾರರನ್ನೇ ತೆಗೆದುಕೊಳ್ಳಿ. ದುಡ್ಡಿದ್ದಾಗ ಎಲ್ಲಮ್ಮನ  ಜಾತ್ರೆ, ಕಿಸೆಯಲ್ಲಿ ಕಾಸಿಲ್ಲದಾಗ ಯಾವ ಜಾತ್ರೆಗಳ ಸುಳಿವು ಇಲ್ಲ, ಸಧ್ಯ ನಮ್ಮ ಜೇಬಿನಲ್ಲಿ ಕಾಸಿಲ್ಲವೆಂಬುದು ಜನರಿಗೆ, ಬಂಧುಗಳಿಗೆ ತಿಳಿಯದಿದ್ದರೆ ಸಾಕು ಸಾಲವೋ ಸೋಲವೋ, ಬೇಕಾದರೆ ಸಿಕ್ಕಷ್ಟು ದುಡ್ಡಿಗೆ ಅರೆಬರೆ ತೋಟ ಮಾರುವುದಾಗಲಿ ಜೀವನ ಶೈಲಿಯನ್ನು ಮಾತ್ರ ಬದಲಿಸಿಕೊಳ್ಳಲು ಸಿದ್ದರಿರುವುದಿಲ್ಲ, ಇಂಥಹವರು ನೆಮ್ಮದಿಯಿಲ್ಲದ ಅಂತರ ಪಿಚಾಚಿಗಳಾಗಿ ಮಾನಸಿಕ ಕ್ಷೇಶವನ್ನು ಹಾಳುಮಾಡಿಕೊಂಡು ಅಂತ್ಯ ಕಾಣುತ್ತಾರೆ. ತಂಬಾಕು-ಆಲೂಗಡ್ಡೆ-ಜೋಳದ ಸೀಸನ್ ಗಳು ಹಾಗೆಯೇ ವರ್ಷಪೂರ್ತಿ ಹೊಟ್ಟೆ ಬಟ್ಟೆ ಕಟ್ಟಿ ದುಡಿದದ್ದನ್ನೆಲ್ಲ ದಾಂ ಧೂಂ ಅಂತ ದೇವರು-ದಿಂಡಿರು-ಜಾತ್ರೆ-ಮದುವೆಗಳಿಗೆ ಖರ್ಚು ಮಾಡಿ, ಬೈಕು-ಕಾರು-ಟ್ರಾಕ್ಟರು-ಜೆಸಿಬಿ ಕೊಂಡು ಒಂದಿಷ್ಟು ಸಾಲಗಳನ್ನು ಬೆನ್ನಿಗೆ ತಗಲು ಹಾಕಿಕೊಂಡು ಬಿಡುತ್ತಾರೆ. ಇದರ ಜೊತೆ ಜೊತೆಗೆ ಅವರ ಜೀವನ ಶೈಲಿಯು ಬದಲಾಗಿ ಬಿಡುತ್ತದೆ ತೊಡುವ ಬಟ್ಟೆ, ಕುಡಿಯುವ ಎಣ್ಣೆ,ತಿನ್ನುವ ಊಟ ಎಲ್ಲದರಲ್ಲೂ ಚೇಂಜ್. ಆದರೆ ಕೃಷಿ ಬೆಳೆಗೆ ಮತ್ತು ಮಾರುಕಟ್ಟೆಗೆ ಸ್ಥಿತ್ಯಂತರವಿಲ್ಲ ನೋಡಿ ಆಗ ಉಂಟಾಗುವ ಶಾಕ್ ದೊಡ್ಡ ರೈತರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ.
      ಅವತ್ತು ನನ್ನೆದುರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕರೊಬ್ಬರು ಕುಳಿತಿದ್ದರು. ನೂರಾರು ಎಕರೆ ಜಮೀನು, ಆಳುಕಾಳು, ಆಧುನಿಕ ಯಂತ್ರೋಪಕರಣಗಳು, ಓಡಾಡಲು ಐಷಾರಾಮಿ ಕಾರು. ಇವರದ್ದು ಸಮೃದ್ದ ಜೀವನ, ಇದ್ದರೆ ಹೀಗಿರ ಬೇಕು ಅಂದುಕೊಂಡು ಪ್ರಶ್ನಿಸಿದೆ. ತಕ್ಷಣ ಕಿವಿಯ ಬಳಿ ಬಂದ ಅವರು ಮೆಲ್ಲಗೆ ಉಸುರಿದರು ನೋಡಿ ಸರ್ ನಾನು ಯಶಸ್ಸು ಪಡೆದ ಕೃಷಿಕನೇ ಹೌದು ಆದರೆ ನೆಮ್ಮದಿಯ ಜೀವನ ಇಲ್ಲ, ನನಗಿರುವ ನೂರಾರು ಎಕರೆ ಜಮೀನು ಉತ್ಪನ್ನ ನೋಡಿ ಬ್ಯಾಂಕ್ ನವರು ಮೇಲೆ ಬಿದ್ದು ಕೋಟಿಗಳ ವರೆಗೆ ಸಾಲ ನೀಡಿದ್ದಾರೆ, ನನ್ನನ್ನು ಗಮನಿಸುವ ಜನರ ಎದುರಿಗೆ ಸ್ಟೇಟಸ್ ಮೈಂಟೇನ್ ಮಾಡ್ಲೇ ಬೇಕಲ್ವಾ ಹಾಗಾಗಿ ಜೀವನ ಶೈಲಿಯನ್ನು ಬದಲಿಸಿಕೊಂಡಿದ್ದೇನೆ , ಕುಟುಂಬದವರು ಶ್ರೀಮಂತಿಕೆಯ ಬದುಕಿಗೆ ಒಗ್ಗಿಕೊಂಡಿದ್ದಾರೆ ಕಷ್ಟ-ಸುಖದ ಅರಿವಿಲ್ಲ ಹೈರಾಣಾಗಿದ್ದೇನೆ ಎಂದು ಅಲವತ್ತುಕೊಂಡರು.
        ಆತನೊಬ್ಬ ಸಿನಿಮಾ ನಿರ್ದೇಶಕ, ಈಗ್ಯೇ 7-8 ವರ್ಷಗಳಿಂದ ಆತನ ಕೈಯಲ್ಲಿ ಕೆಲಸವಿಲ್ಲ ಆದರೂ ಸಾರ್ವತ್ರಿಕವಾಗಿ ತಾನು ತುಂಬಾ ಬ್ಯುಸಿ ಕೆಲಸದಲ್ಲಿದ್ದೇನೆ, ಅಲ್ಲೇಲ್ಲೋ ಸ್ಟಾರ್ ಒಬ್ಬನ ಚಿತ್ರ ನಿರ್ದೇಶಿಸುತ್ತಿದ್ದೇನೆ ಎನ್ನುತ್ತಾನೆ. ಮಾತಿಗೆ ಕುಳಿತರೆ ದೊಡ್ಡ ದೊಡ್ಡವರ ಹೆಸರು ಹೇಳುತ್ತಾನೆ. ಇನ್ನೊಬ್ಬ ಕಮೆಡಿಯನ್ ಮತ್ತು ಸಹ ನಿರ್ದೇಶಕನಾಗಿದ್ದವನು ದಶಕಗಳ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಮಾಡಿದ್ದಾನೆ ಆದರೆ ಈಗ ಕೈಯಲ್ಲಿ ಕೆಲಸವಿಲ್ಲ, ಖಾಲಿ ಖಾಲಿ ಆದರೆ ಸಾರ್ವತ್ರಿಕವಾಗಿ ಆತ ಹಾಗೆ ಹೇಳಿಕೊಳ್ಳಲು ತಯಾರಿಲ್ಲ, ತನ್ನ ಕೆರಿಯರ್, ವರ್ಚಸ್ಸು ಇನ್ನೂ ಚಾಲ್ತಿಯಲ್ಲಿದೆ ಎಂಬ ಭ್ರಮೆಯಲ್ಲೇ ಮಾತಾಡುತ್ತಾನೆ. 
          ದೊಡ್ಡ ನಟರೊಬ್ಬರ ಅನಧಿಕೃತ ಮಗ ಎಂದು ಸಾರ್ವತ್ರಿಕವಾಗಿ ಗುರುತಿಸಲ್ಪಡುವ ನಟನೊಬ್ಬನ ಸಿನಿಮಾ 2ವರ್ಷಗಳ ಹಿಂದೆ ಬಿಡುಗಡೆಗೆ ಸಿದ್ದವಾಗಿತ್ತು. ಸರಿ ಒಂದು ಖಾಸಗಿ ಛಾನಲ್ ನವರು ಪ್ರಸಾರದ ಹಕ್ಕುಗಳನ್ನು ಖರೀದಿಸಲು ಆತನೊಂದಿಗೆ ಮಾತುಕತೆಗೆ ಕುಳಿತರು. ಸರಿ ಸುಮಾರು ಲಾಭದ ಲೆಕ್ಕಾಚಾರದಲ್ಲೇ ಸಂಭಾವನೆ ಕೊಡಲು ಛಾನಲ್ ನವರು ಸಿದ್ದರಾದರು ಆದರೆ ಆತ ಪಟ್ಟು ಬಿಡಲಿಲ್ಲ ತನ್ನ ವರ್ಚಸ್ಸು ಹಾಗೇ ಹೀಗೆ ಅಂತೆಲ್ಲ ಮಾತನಾಡಿ ಹಕ್ಕುಗಳನ್ನು ನಿರಾಕರಿಸಿ ಎದ್ದು ಹೋದ. ಮರುವಾರ ಸಿನಿಮಾ ಬಿಡುಗಡೆಯಾಯಿತು, ನಾಲ್ಕು ದಿನ ಓಡುವುದಿರಲಿ ಹಾಕಿದ ದುಡ್ಡು ಬಾರಲಿಲ್ಲ, ಆತ ಮತ್ತೆ ಸಿನಿಮಾ ಕಡೆಗೆ ತಲೆ ಹಾಕಿಲ್ಲ!
         ಮೊನ್ನೆ ಮೊನ್ನೆ ಮುಗಿದ ನುಡಿಹಬ್ಬದ ಅಧ್ಯಕ್ಷರಾಗಿದ್ದ ಕವಿ ಡಾ ಸಿದ್ದಲಿಂಗಯ್ಯ 70-80ರ ದಶಕಗಳಲ್ಲಿ ಕ್ರಾಂತಿಯ ಕಿಡಿ ಹಚ್ಚಿದ ಮೇರು ವ್ಯಕ್ತಿತ್ವದವರು. ಕಾಲ ಕಳೆದಂತೆ ಅವರೊಳಗಿನ ಸಾರ್ವತ್ರಿಕ ಹೋರಾಟದ ಕಾವು ಕುಂದಿದಂತೆ, ವ್ಯವಸ್ಥೆಯ ಜೊತೆ ರಾಜೀ ಮಾಡಿಕೊಂಡಂತೆ ಭಾಸವಾಗುತ್ತದೆ.  ಸಿದ್ದಲಿಂಗಯ್ಯನವರ ಕುರಿತು ಸಾಮಾನ್ಯ ಜನತೆ ಸಾರ್ವತ್ರಿಕವಾಗಿ ಇಟ್ಟುಕೊಂಡ ನಿರೀಕ್ಷೆಗಳು ದಶಕಗಳ ಹಿಂದಿನ ಕಾವನ್ನೇ ಬೇಡುತ್ತವೆ , ಆದರೆ ಸಿದ್ದಲಿಂಗಯ್ಯನವರ ನಿಲುವುಗಳ ಬದಲಾವಣೆಯನ್ನು ಜನ ಏಕೆ ಒಪ್ಪುವುದಿಲ್ಲ. ಸಮಾಜ ಮುಖಿಯಾದ ಚಿಂತನೆ, ಹೋರಾಟ ಒಬ್ಬರಿಗೆ ಮಾತ್ರ ಸೀಮಿತವೇ ? ಅವರವರ ವೈಯುಕ್ತಿಕ ಬದುಕಿನ ಜಂಜಾಟದಲ್ಲಿ ನಿಲುವುಗಳು ಪಲ್ಲಟವಾಗ ಬಹುದು, ವರ್ತಮಾನದಲ್ಲಿ ಚಲಾವಣೆ ಯಾಗುವ ಸಂಗತಿಗಳಿಗೆ ಆದ್ಯತೆ ಸಿಗಬಹುದೇನೋ ಆದರೆ ಜನ ಅದನ್ನು ಸ್ವೀಕರಿಸಲು ಸಿದ್ದರಿಲ್ಲ. 
       ಎಂದರೆ ಈ ಮೇಲಿನ ಉದಾಹರಣೆಗಳು ವೈಯುಕ್ತಿಕ ನೆಲೆಗಟ್ಟಿನಲ್ಲಿ ಬದಲಾವಣೆ ಬಯಸದೇ  ಮುಂದುವರೆಯುವ ಒಂದು ಗುಂಪು, ಬದಲಾಗುವ ವ್ಯಕ್ತಿತ್ವವನ್ನು ವಾಸ್ತವ ನೆಲೆಗಟ್ಟಿನಲ್ಲಿ ಗ್ರಹಿಸದ ಮತ್ತೊಂದು ಗುಂಪು. ಬದುಕಿಗೆ ಕನಸುಗಳು ಬೇಕು ಭ್ರಮೆಗಳು ಇರಬಾರದಲ್ಲವೇ? 

Sunday, February 8, 2015

ಸಂಪನ್ನ ನುಡಿಹಬ್ಬವೂ, ವಾರ್ಷಿಕ ಶ್ರಾದ್ದವೂ!



ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಗಿದಿದೆ,  ಗೋಷ್ಠಿಗಳಲ್ಲಿ ತದುಕಿಸಿಕೊಂಡವರು!, ಅವಕಾಶ ವಂಚಿತರು, ಅತೃಪ್ತರು ಸಮ್ಮೇಳನದ ನಂತರ, ಸಮ್ಮೇಳನವನ್ನು ತಮಗೆ ತೋಚಿದಂತೆ ಪೋಸ್ಟ್ ಮಾರ್ಟಂ ಮಾಡುತ್ತಿದ್ದಾರೆ. ಅವರವರ ಭಾವಕ್ಕೆ ತೋಚಿದಂತೆ ಪಿಂಡ ಪ್ರಧಾನ ಸಮಾರಂಭ ಎಂತಲೋ, ವಾರ್ಷಿಕ ಶ್ರಾದ್ಧವೆಂತಲೋ ಬರೆದು ವಿಕೃತ ಆನಂದವನ್ನು ಅನುಭವಿಸುತ್ತಿದ್ದಾರೆ. ಒಂದಂತೂ ಸತ್ಯ ಎಲ್ಲ ಆಯಾಮಗಳಲ್ಲೂ ಎಲ್ಲರನ್ನೂ ಸಮ್ಮೇಳನ ತಲುಪಿದೆ ಮತ್ತು ಸದ್ಯಕ್ಕೆ ಆರದ ಕಿಚ್ಚನ್ನು ಹಚ್ಚಿದೆ. ಹಾಸನ ಜಿಲ್ಲಾ ಕಸಾಪ ತನಗೆ ವಹಿಸಿದ ಕೆಲಸವನ್ನು ಸಮಸ್ತರ ಸಹಕಾರದೊಂದಿಗೆ ಮಾಡಿ ಮುಗಿಸಿದೆ ಮತ್ತು ಯಶಸ್ಸಿನ ಗರಿಯನ್ನು ಸಿಕ್ಕಿಸಿಕೊಂಡಿದೆ!
            ಶ್ರವಣಬೆಳಗೊಳದಲ್ಲಿ ನಡೆದ ಎರಡನೇ ಸಮ್ಮೇಳನವಾದರೆ, ಹಾಸನ ಜಿಲ್ಲೆಯಲ್ಲಿ ನಡೆದ ಐದನೇ ಸಮ್ಮೇಳನ ಇದು. ರೈತ ಚಳುವಳಿ ಮತ್ತು ದಲಿತ ಚಳುವಳಿಯ ಕಾವನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ಜಿಲ್ಲೆಗೆ ಬೇರೆಯದ್ದೇ ಆದ ಮಹತ್ವವಿದೆ. ಸಂವೇದನಾ ಶೀಲ ಮನಸ್ಸುಗಳ ಮಾನವೀಯ ತುಡಿತದ ಕಿಚ್ಚು ಹಚ್ಚಿಸಿಕೊಂಡವರ ಬಿಸಿ ಕೊಂಚ ಆರಿದೆ ಎಂಬ ಹಂತದಲ್ಲಿ ಶತಮಾನೋತ್ಸವ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪರಿಷತ್ತು ಗೊಮ್ಮಟನ ನಾಡಿನಲ್ಲಿ ಆಯೋಜಿಸಿದ್ದು  ಮತ್ತು 100ವರ್ಷಗಳಿಂದ ಸಮ್ಮೆಳನ ಸರ್ವಾಧ್ಯಕ್ಷತೆಯ ಸ್ಥಾನದಿಂದ ವಂಚಿತವಾಗಿದ್ದ ದಲಿತ ಸಮುದಾಯಕ್ಕೆ ಆದ್ಯತೆಯ ಮೇಲೆ ಅವಕಾಶ ಒದಗಿಸಿದ್ದು ಬಹುಕಾಲ ನೆನಪಿನಲ್ಲುಳಿಯುವಂತಹದ್ದು. ನೈತಿಕತೆಯ ತಳಹದಿಯನ್ನು ಗಟ್ಟಿಯಾಗಿ ಕಾಯ್ದುಕೊಂಡಿರುವ ಖ್ಯಾತ ಸಾಹಿತಿ ದೇವನೂರ ಮಹದೇವ ಸಮ್ಮೇಳನ ಅಧ್ಯಕ್ಷರಾಗ ಬೇಕೆಂಬುದು ಜಾತಿಯ ಎಲ್ಲೆಯನ್ನು ಮೀರಿದ ಸಮಸ್ತ ಜನರ ಆಶಯವೂ ಆಗಿತ್ತು, ಆದರೆ ಸಾರ್ವತ್ರಿಕವಾಗಿ ಮಾತೃಭಾಷಾ ಶಿಕ್ಷಣ ಜಾರಿಯ ಮಹತ್ವವವನ್ನು ಸರ್ಕಾರದ ನೆರವಿಲ್ಲದೇ ಮಾಡಬೇಕೆನ್ನುವ ಆಶಯದೊಂದಿಗೆ ದೇವನೂರು ಹಿಂದುಳಿದರು. 
         ದೇವನೂರು ಒಲ್ಲೆನೆಂದ ಸ್ಥಾನವನ್ನು ಜನರ ನಡುವೆ ಇದ್ದು ಮಾತೃಭಾಷಾ ಶಿಕ್ಷಣದ ಆಶಯಕ್ಕೆ ಶಕ್ತಿ ತುಂಬುತ್ತೇನೆ ಎಂದು ಸಮ್ಮೇಳನ ಸರ್ವಾಧ್ಯಕ್ಷತೆಯನ್ನು ಒಪ್ಪಿಕೊಂಡವರು 70-80ರ ದಶಕದ ಕ್ರಾಂತಿಕಾರಿ ಕವಿ-ಸಾಹಿತಿ-ಹೋರಾಟಗಾರ-ಚಿಂತಕ ಡಾ ಸಿದ್ದಲಿಂಗಯ್ಯ. ಸಿದ್ದಲಿಂಗಯ್ಯ ಅಧ್ಯಕ್ಷತೆ ಒಪ್ಪಿಕೊಂಡಾಗ ಸಹಜವಾಗಿ ನಿರೀಕ್ಷೆಗಳಿದ್ದವು, ಕ್ರಾಂತಿಕಾರಿ ಸಾಹಿತಿ ಭಾಷಣದಲ್ಲಿ ಸರ್ಕಾರಕ್ಕೆ ನೇರ ಚಾಟಿ ಬೀಸುವ ಧ್ವನಿ ಹೊರಡ ಬಹುದು ಎಂಬುದು. ಆದರೆ ಸದ್ಯಕ್ಕೆ ಅಂತಹ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. ಸಮ್ಮೆಳನಾಧ್ಯಕ್ಷರ ಜೊತೆಗಿನ  ಸಂವಾದದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಭಾನುಮುಷ್ತಾಕ್ ಎತ್ತಿದ ಖಡಕ್ ಪ್ರಶ್ನೆಗೆ ನೇರ ಉತ್ತರವೂ ಸಿಗಲಿಲ್ಲ, ಸಿದ್ದಲಿಂಗಯ್ಯನವರ ಅಧ್ಯಕ್ಷೀಯ ಭಾಷಣದಲ್ಲೂ ಸಮಸ್ತ ಕನ್ನಡಿಗರ ಭಾವನಾತ್ಮಕವಾದ ಆಶಯಗಳಿಗೆ ಒತ್ತಾಸೆ ಸಿಗಲೇ ಇಲ್ಲ. ಸರ್ಕಾರದ ಪರವಾದ ಭರವಸೆ ಗಳಂತೆ ಭಾಷಣ ಇತ್ತೇ ವಿನಹ ಹಕ್ಕೊತ್ತಾಯ ಮಂಡನೆಯಾಗಲಿಲ್ಲ. ರಾಜ್ಯದಲ್ಲಿ ದಲಿತ ಚಳುವಳಿಗೆ ಕಾವು ಕೊಟ್ಟ ಪ್ರಮುಖರಲ್ಲಿ ಸಿದ್ದಲಿಂಗಯ್ಯ ಒಬ್ಬರು, ದಲಿತ ಮತ್ತು ರೈತ ಚಳುವಳಿ ಉತ್ತುಂಗದಲ್ಲಿದ್ದಾಗ ಹೆಚ್ಚು ಪ್ರಚಲಿತದಲ್ಲಿದ್ದ ಸಿದ್ದಲಿಂಗಯ್ಯ ತಮ್ಮ ಭಾಷಣದಲ್ಲೆಲ್ಲು ಈ ಎರಡು ಸಂಘಟನೆಗಳ ಕುರಿತಾಗಲಿ ವರ್ತಮಾನದ ಸ್ಥಿತಿಯನ್ನಾಗಲಿ ಪ್ರಸ್ತಾಪಿಸಲೇ ಇಲ್ಲ.  ದಲಿತರೊಬ್ಬರು ಅಧ್ಯಕ್ಷರಾದರು ಶತಮಾನೊತ್ಸವ ವರ್ಷದಲ್ಲಿ ಎಂಬುದಷ್ಟೇ ತೃಪ್ತಿ!
       ಸಮ್ಮೆಳನಗಳನ್ನು ಸಂಘಟಿಸುವ ಹೊಣೆಗಾರಿಕೆ ಎಷ್ಟಿದೆಯೋ ಅದನ್ನು ಜಿಲ್ಲೆಗೆ ತರುವಲ್ಲಿಯೂ ಅಷ್ಟೇ ಪರಿಶ್ರಮವೂ ಇದೆ. ಹಾವೇರಿಯಲ್ಲಿ ನಡೆಯಬೇಕಾದ ಸಮ್ಮೇಳನ ಕೈ ತಪ್ಪಬಹುದು ಎಂಬ ಸೂಚನೆ ಸಿಗುತ್ತಿದ್ದಂತೆಯೆ 5ತಿಂಗಳಿಗೆ ಮುಂಚಿನಿಂದಲೇ ಮಾನಸಿಕವಾಗಿ ಸಿದ್ದತೆಯನ್ನು ಮಾಡಿಕೊಂಡಿದ್ದು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಚ್ ಎಲ್ ಜನಾರ್ಧನ್. ರಾಜ್ಯದ ಉದ್ದಗಲಕ್ಕೂ ನಡೆದ ಪರಿಷತ್ತು ಕಾರ್ಯಕಾರಿಣಿ ಸಭೆಗಳಲೆಲ್ಲಾ ಪಾಲ್ಗೊಂಡ ಅವರಿಗೆ ಸಮ್ಮೇಳನ ಹಾವೇರಿಯ ಕೈ ತಪ್ಪುತ್ತಿದೆ ಎಂಬ ಸೂಚನೆ ಸಿಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಸಮ್ಮೇಳನ ಸಂಘಟಿಸುವ ಮಹತ್ವಾಕಾಂಕ್ಷೆಯನ್ನು ಪುಂಡಲೀಕ ಹಾಲಂಬಿಯವರ ಬಳಿ ವ್ಯಕ್ತಪಡಿಸಿಬಿಟ್ಟರು. ಪುಂಡಲೀಕ ಹಾಲಂಬಿ ಕೂಡ ಅಂತಿಮ ಹಂತದವರೆಗು ಕಾಯ್ದು ಶ್ರವಣಬೆಳಗೊಳ ಶ್ರೀ ಕ್ಷೇತ್ರ ಮಠದ ಸ್ವಾಮೀಜಿ ಮತ್ತು ಪ್ರಾಕೃತ ಭಾಷೆಯ ಘನ ವಿದ್ವಾಂಸರಾದ ಭಟ್ಟಾರಕ ಸ್ವಾಮೀಜಿಯವರನ್ನು 2-3 ಬಾರಿ ಭೇಟಿಯಾಗಿ ಭರವಸೆ ಪಡೆದಿದ್ದರು. ಇನ್ನು ಹಾವೇರಿಯಲ್ಲಿ ಸಮ್ಮೇಳನ ಸಾಧ್ಯವೇ ಇಲ್ಲ ಎಂದಾಗ ನವೆಂಬರ್ ನಲ್ಲಿ ನಡೆದ ಹಲ್ಮಿಡಿ ಉತ್ಸವಕ್ಕೆ ಬಂದವರು ಕಾರ್ಯಕಾರಿಣಿ ಸಭೆ ನಡೆಸಿ ಹಾಸನ ಜಿಲ್ಲೆಯಲ್ಲಿಯೇ ಸಮ್ಮೇಳನ ಎಂದು ಘೋಷಿಸಿ ಬಿಟ್ಟರು.
      ಹೀಗೆ ದಕ್ಕಿದ ಸಮ್ಮೇಳನವನ್ನು ಕೇವಲ ಒಂದೂವರೆ ತಿಂಗಳಿನಲ್ಲಿ ಸಂಘಟಿಸುವ ಪ್ರಯತ್ನ ಶುರುವಾಯಿತು. ಹಾಸನ ಜಿಲ್ಲೆ ಹೇಳಿ ಕೇಳಿ ರಾಜಕೀಯವನ್ನೇ ಹಾಸಿ ಹೊದ್ದು ಮಲಗುವ ಜಿಲ್ಲೆ, ಇಲ್ಲಿಯ ಜನರ ನಾಡಿ ಮಿಡಿತದಲ್ಲು ರಾಜಕೀಯದ ಮಿಡಿತವೇ ಜಾಸ್ತಿ. ಇದೆಲ್ಲದರ ನೇರ ದಾಳಿಗೆ ಸಿಲುಕಿದವರು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಜನಾರ್ದನ್. ಆದಾಗ್ಯೂ ಅವರಿಗೆ ದೊರೆತ ಎಲ್ಲ ಸಹಕಾರ ಮತ್ತು ಬೆಂಬಲ ಸಮ್ಮೇಳನದ ಯಶಸ್ಸಿನ ಗರಿಯನ್ನು ಸಿಕ್ಕಿಸಿಕೊಳ್ಳುವಂತೆ ಮಾಡಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಂಯಮ ಮತ್ತು ಮಾರ್ಗದರ್ಶನ, ಹಾಲಂಬಿಯವರ ಒತ್ತಾಸೆ, ಕಾರ್ಯಾಧ್ಯಕ್ಷರಾಗಿ ಸಂಪೂರ್ಣ ಅರ್ಪಿಸಿಕೊಂಡ ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ . ಇದೇ ನೆಪದಲ್ಲಿ 37ಕೋಟಿ ರೂಪಾಯಿಗಳನ್ನು ಮೂಲ ಸೌಕರ್ಯ ಮತ್ತು ರಸ್ತೆ ನಿರ್ಮಾಣಕ್ಕೆ ಬಿಡುಗಡೆ ಮಾಡಿ ಸಮ್ಮೇಳನದ ಯಶಸ್ಸಿಗೆ ಜಿಲ್ಲಾಡಳಿತವನ್ನು ಮುಡುಪಿಟ್ಟ ಡಾ ಎಚ್ ಸಿ ಮಹದೇವಪ್ಪ ಪ್ರಶಂಸೆಗೆ ಅರ್ಹರು. 
        ಸಮ್ಮೇಳನಕ್ಕೆ ಮುನ್ನಾ ದಿನಗಳಲ್ಲಿ ರಾಜ್ಯ ಸರ್ಕಾರ ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸುವ ಕ್ರಿಯೆಗೆ ಚಾಲನೆ ನೀಡಿದೆ, ಈ ಕುರಿತು ಕೇಂದ್ರದೊಂದಿಗೆ ಸಂಪರ್ಕ ಇಟ್ಟುಕೊಂಡಿದೆ ಮತ್ತು ಸಮ್ಮೆಳನದ ವೇದಿಕೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಕೊರತೆ ಬೀಳುವ 1ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುವ ಮಾತುಗಳನ್ನಾಡಿದ್ದು ಸಂಧರ್ಬೋಚಿತವಾದುದೆ ಆಗಿದೆ. ನುಡಿಜಾತ್ರೆ ಪರಿಷತ್ತಿಗೆ ಸೀಮಿತವಾದ ಕಾರ್ಯಕ್ರಮವಲ್ಲ, ಸಮಸ್ತ ಕನ್ನಡಿಗರ ಭಾವನಾತ್ಮಕ ಆಶಯಗಳಿಗೆ ಇಂಬು ಕೊಡುವ ಪರಿಷೆ! ಹಾಗೂ ಉತ್ತರದಾಯಿಯೂ ಕೂಡಾ ಆಗಿದೆ, ಹಾಲಂಬಿ ಸಮ್ಮೇಳನದ ಒಂದು ಸಾಲಿನ ನಿರ್ಣಯ ಈಡೇರದಿದ್ದರೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ ಇದು ಮುಂದಿನ ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
            ಸಮ್ಮೇಳನಕ್ಕೆ ಆಗಮಿಸಿ ಗಣ್ಯ ವೀಕ್ಷಕರ ಸಾಲಿನಲ್ಲಿ ಪವಡಿಸಿದ್ದ ರಾಜ್ಯ ಮಟ್ಟದ ದಿನಪತ್ರಿಕೆಯೊಂದರ ಸಂಪಾದಕರಾದ ವಿಶ್ವೇಶ್ವರ ಭಟ್ಟರನ್ನು ಸಂಘಟಕರು ವೇದಿಕೆಗೆ ಕರೆದು ಸನ್ಮಾನಿಸಿ, ಆತಿಥ್ಯ ನೀಡಿ ಕಳುಹಿಸಿ ಕೊಟ್ಟರು. ಅದೇ ಸಂಪಾದಕರು ಸಮ್ಮೇಳನದ ಮರುದಿನದ ಪತ್ರಿಕೆಯಲ್ಲಿ ಅಂಕಣವೊಂದನ್ನು ಬರೆದು ಕನ್ನಡಿಗರ ಶ್ರದ್ದೆಯ ಸಮ್ಮೇಳನವನ್ನು ಪಿಂಡ ಪ್ರಧಾನ ಸಮಾರಂಭ, ವಾರ್ಷಿಕ ಶ್ರಾದ್ಧ ಎಂದು ಬರೆದು ಅಸಹ್ಯ ಸೃಷ್ಟಿಸಿಕೊಂಡರು. ಅವರ ಅಂಕಣದಲ್ಲಿ ಎತ್ತಿದ ಕೆಲವು ಪ್ರಶ್ನೆಗಳು ಉಚಿತವೇ ಆದರೂ ವಾರ್ಷಿಕ ಶ್ರಾದ್ಧ ಎಂದು ಕರೆಯುವ ಮನಸ್ಥಿತಿ ಅವರಿಗೆ ಬರಬಾರದಿತ್ತು. ಸಮ್ಮೇಳನದ ಯಶಸ್ಸಿಗೆ ಚನ್ನರಾಯಪಟ್ಟಣದ ಸಹೃದಯವಂತ ಜನಸಾಮಾನ್ಯರು, ರೈತರು, ವ್ಯಾಪಾರಿಗಳು ಶಕ್ತ್ಯಾನುಸಾರ ಕೊಬ್ಬರಿ, ಬೆಲ್ಲ, ಅಕ್ಕಿ, ದುಡ್ಡು ನೀಡಿದ್ದಲ್ಲದೇ ಸ್ವಯಂಸೇವಕರಾಗಿ ಬಂದರು, ಹಾಸನ ಜಿಲ್ಲೆಯ ವಿವಿಧ ಖಾಸಗಿ ಸಂಘ, ಸಂಸ್ಥೆಗಳಿಂದಲೂ ದನಸಹಾಯ ಹರಿದು ಬಂತು ಹೀಗಿರುವಾಗ ಚನ್ನರಾಯ ಪಟ್ಟಣದವರೇ ಆದ ಬಾಗೂರು ಮಂಜೇಗೌಡ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಹೌದು, ಅವರದೇ ನೆಲದಲ್ಲಿ ರಾಜ್ಯ ಮಟ್ಟದ ಸಮ್ಮೇಳನವೂ ಜರುಗಿದೆ, ಆದರೆ ಸಮ್ಮೇಳನಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನವನ್ನು ನೀಡುವಾಗ ಷರತ್ತುಗಳನ್ನು ಹಾಕಿ ನಗೆಪಾಟಲಿಗೆ ಈಡಾದರು, ಹಾಗೆಂದು ಸಮ್ಮೇಳನವೇನೂ ನಿಲ್ಲಲಿಲ್ಲ ಅಲ್ಲವೇ? 

Sunday, January 11, 2015

ದೊಡ್ಡವರ ಸಣ್ಣತನಗಳು!

ಲವಾರು ಬಾರಿ ಸಾರ್ವಜನಿಕ ಇಮೇಜಿನಲ್ಲಿ ದೊಡ್ಡವರು ಎನಿಸಿಕೊಂಡ ಅನೇಕರು ಸಣ್ಣತನದ ಅವಿವೇಕವನ್ನು ಪ್ರದರ್ಶಿಸಿ ಸಾರ್ವತ್ರಿಕ ಅಸಹ್ಯ ಸೃಷ್ಟಿಸಿ ಕೊಳ್ಳುವುದು ಮಾಮೂಲು ಸಂಗತಿ.  ಅಲ್ಲಿ ಕಮರ್ಷಿಯಲ್ ಅಂಶಗಳು ಪ್ರಧಾನವಾದರೆ ಇನ್ನು ಕೆಲವೊಮ್ಮೆ ತಾವೆಷ್ಟು ಬ್ಯುಸಿ ಎಂದು ತೋರಿಸಿಕೊಳ್ಳುವ ಹಮ್ಮು  ಅಡಗಿರುತ್ತದೆ. ಅಂತಹ ಕೆಲವು ಸ್ಯಾಂಪಲ್ ಗಳು ನಿಮಗಾಗಿ
    ಸಾಂಸ್ಕೃತಿಕ ನಗರಿಗೆ ಹೋಗಿದ್ದೆ, ಅವತ್ತು ಅಚಾನಕ್ ಆಗಿ ರಸ್ತೆ ಬದಿಯ ಕಾಂಪೌಂಡ್ ಬಳಿ ಕಾರು ಪಾರ್ಕ ಮಾಡಿದೆ, ಜೊತೆಯಲ್ಲಿದ್ದ ಗೆಳೆಯರೊಬ್ಬರು ಕಾರಿನಿಂದಿಳಿದವರೇ ಕಾಂಪೌಂಡ್ ಗೋಡೆಯ ಮೇಲೆ ಇದ್ದ ಹೆಸರು ಕಂಡು ಅಚ್ಚರಿಯಿಂದ ತೋರಿಸಿದರು, ನಾನು ಕೂಡ ಬೆರಗಾದೆ. ಅವರ ಕನ್ನಡ ಸಾರಸ್ವತ ಲೋಕ ಕಂಡ ದೊಡ್ಡ ಸಾಹಿತಿಗಳು, ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಧೀಮಂತರು ಹೌದು. ವರ್ತಮಾನದಲ್ಲೂ ಅವರ ಕೃತಿಗಳು ಬಿಡುಗಡೆಯಾಗಿವೆ ಮತ್ತು ಬೇರೆ ಸಾಹಿತ್ಯದ ಪುಸ್ತಕಗಳಿಗಿಂತ ದಾಖಲೆಯ ಮಾರಾಟ, ಜನಪ್ರಿಯತೆಯನ್ನು ಗಳಿಸಿದೆ.    ಸರಿ ಘನ ಸಾಹಿತಿಗಳನ್ನು ಭೇಟಿ ಮಾಡುವ ಎಂದು ಕೊಂಡು ಮನೆಯ ಕಡೆ ನೋಡಿದೆ. ಅಲ್ಲಿ ಎಲ್ಲೋ ನೋಡಿದ ಪರಿಚಯದ ಮುಖವೊಂದು ಹ್ಯಾಪು ಮೋರೆ ಹೊತ್ತು ಆಚೆಗೆ ಬರುತ್ತಿತ್ತು. ಹೌದಲ್ವಾ ಅಂತಂದುಕೊಂಡು ಮಾತನಾಡಿಸಿದೆ. ಅವರ ಮಾತು ಕೇಳಿ ಘನ ಸಾಹಿತಿಯವರನ್ನ ಭೇಟಿ ಮಾಡುವ ಅಪೇಕ್ಷೆಗೆ ತಣ್ಣೀರೆರಚಿದಂತೆ ಆಯಿತು. ಆತ ತಿಂಗಳ ಹಿಂದೆಯೇ ಸಾಹಿತ್ಯ ಸಂಬಂಧಿತ ಸಮ್ಮಾನದ ಕಾರ್ಯಕ್ರಮವೊಂದಕ್ಕೆ ಸದರಿ ಸಾಹಿತಿಗಳನ್ನು ಬುಕ್ ಮಾಡಿದ್ದರು. ಅವರನ್ನು ವಾಹನ ಮಾಡಿ ಆಡಳಿತದ ರಾಜಧಾನಿಗೆ ಕರೆದುಕೊಂಡು ಹೋಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೇಲೆ ಸೇಪ್ಟಿಯಾಗಿ ಮತ್ತೆ ಸಾಂಸ್ಕೃತಿಕ ರಾಜಧಾನಿಗೆ ಹಿಂತಿರುಗಿಸುವ ವ್ಯವಸ್ಥೆ ಮಾಡಲಾಗಿತ್ತು. ಅವತ್ತು ಸಂಜೆ ಸಾಹಿತ್ಯದ ಕಾರ್ಯಕ್ರಮ  ಸಂಘಟನೆಯ ಹೊಣೆ ಹೊತ್ತ ಆ ಯುವಕ ನಿನ್ನೆಯಿಂದಲೇ ಸಾಹಿತಿಯನ್ನು ಭೇಟಿಯಾಗಲು ಹೆಣಗುತ್ತಿದ್ದ ಪ್ರತೀ ಸಲ ಹೋಗಿ ಬಾಗಿಲು ತಟ್ಟಿದಾಗಲೂ ಕೆಲಸದವರು ಇಲ್ಲವೇ ಮನೆಯ ಸದಸ್ಯರು ಬಾಗಿಲು ತೆರೆದು 'ಅವರಿಲ್ಲ' ಮಲಗಿದ್ದಾರೆ, ಉಷಾರಿಲ್ಲ, ಆಮೇಲೆ ಬನ್ನಿ ಹೀಗೆ ಸಾಗ ಹಾಕುತ್ತಲೆ ಇದ್ದರು. ಆತನಂತು ಸಾಹಿತಿಯ ದರ್ಶನವಾಗದೇ ಹೈರಾಣಾಗಿ ಹೋಗಿದ್ದ. ಅವತ್ತಿನ ಸಾಹಿತ್ಯದ ಕಾರ್ಯಕ್ರಮದಲ್ಲಿ ಅವರೇ ಪ್ರಧಾನ ವಾಗಿದ್ದರು. ಆದರೆ ಗಂಟೆ 12.30 ಆದರೂ ಆ ಸಾಹಿತಿಯ ದರ್ಶನ ಭಾಗ್ಯವೂ ಅವರಿಗೆ ದಕ್ಕಿರಲಿಲ್ಲ, ಅವರನ್ನ ಶತಾಯ ಗತಾಯ ಕರೆಸುವ ಪ್ರಯತ್ನವನ್ನ ಹಾಸನ ಜಿಲ್ಲೆಯಲ್ಲು ಮಾಡಲಾಗಿತ್ತು ವಿವಿಧ ಕಾರಣ ನೀಡಿ ಅವರು ಬಂದಿರಲಿಲ್ಲ ಬಹುಶ: ವಯೋಮಾನ ಕಾರಣ ಇರಬಹುದೇನೋ ಆದರೆ ಇಚ್ಚಾಶಕ್ತಿಯೂ ಬೇಕಲ್ಲವೇ? ಯಾರದ್ದೋ ತೀಟೆಗೆ ಕರೆಯುವುದಿಲ್ಲ ಜನರ ಪ್ರೀತಿಗೆ ಕರೆಯುವ ಪ್ರಯತ್ನ ಮಾಡಿ ಕಿರಿ ಕಿರಿ ಆಗದಂತೆ ನೋಡಿಕೊಂಡರೆ ಬರಲು ಏನು ಅಡ್ಡಿಯೋ ಗೊತ್ತಿಲ್ಲ. ಅಂದ ಹಾಗೆ ಆ ಸಾಹಿತಿಗಳು ಹಾಸನ ಜಿಲ್ಲೆಯ ಮೂಲದವರು!
      ಅದೊಂದು ಸಾಧಕರನ್ನು ಸನ್ಮಾನಿಸುವ ಬಹು ದೊಡ್ಡ ಕಾರ್ಯಕ್ರಮ. ಊರಿನ ಜನರ ಪ್ರೀತಿಯ ಅಹವಾಲಿಗೆ ಮಣಿದ ಸಂಘಟಕರು ಆ ಕಲಾವಿದನನ್ನು ಸಭೆಗೆ ಕರೆದರು. ಆತ ಹುಟ್ಟೂರಿನ ಸಭೆಗೆ ಬರಲು ದೊಡ್ಡ ಬೇಡಿಕೆಯನ್ನೇ ಇಟ್ಟುಬಿಟ್ಟ ! ರಾಜಧಾನಿಯಿಂದ ಊರಿಗೆ ಬರಲು ಬಾಡಿಗೆ ಇನ್ನೋವಾ ಕಾರು, ಕಾಲ್ ಶೀಟ್ ಲೆಕ್ಕದಲ್ಲಿ ಸಂಭಾವನೆ, ಉಳಿಯಲು ಸರ್ಕ್ಯೂಟ್ ಹೌಸ್ ( ಊರಿನಲ್ಲಿ ಆತನದ್ದೇ ಮನೆಯಿದೆ) ಮತ್ತು ಸಂಜೆಗೆ ದೊಡ್ಡ ದರದ ಅಬಕಾರಿ ವ್ಯವಸ್ಥೆ! ಅಲ್ಲಾ ಸಾರ್  ಹುಟ್ಟೂರಿಗೆ ಬರಲು ಇಷ್ಟೇಲ್ಲ ವ್ಯವಸ್ಥೆ ಮಾಡಬೇಕಾ? ನಾವ್ ಕರಿತಿರೋದು ಸನ್ಮಾನಕ್ಕೆ ಎಂದರೆ, ನೋಡಿ ಇವ್ರೆ ನನಗೆ ಅವೆಲ್ಲಾ ಗೊತ್ತಿಲ್ಲ, ಎಂಥ ಹುಟ್ಟೂರು ಅದು ನನಗೇನೂ ಕೊಟ್ಟಿದೆ ಅದು ಎನ್ನಬೇಕೆ, ಸಂಘಟಕರು ಸುಸ್ತು. ಹಿಂದೊಮ್ಮೆ ಇನ್ನೊಂದು ಸಾರ್ವಜನಿಕ ಸಂಘಟನೆಯೊಂದು ಕಾರ್ಯಕ್ರಮ ಮಾಡಿ ಈ ಕಲಾವಿದನನ್ನು ಕರೆದಾಗ ಮಾಮೂಲು ಬೇಡಿಕೆಗಳು ಬಂದವು ಆತನು ಬಂದು ಸರ್ಕ್ಯೂಟ್ ಹೌಸ್ ನಲ್ಲಿ ಉಳಿದ ಗುಂಡು ಒಳಗೆ ಹೋದ ಮೇಲೆ ಸಂಘಟಕರಿಗೆ ಫೋನು, ಏನ್ರೀ ನನ್ನ ಅಭಿಮಾನಿಗಳು ಕೇಳ್ತಾವ್ರೆ ನನ್ನ ಫೋಟೋದ ಬ್ಯಾನರ್ ದೊಡ್ಡದಾಗಿಲ್ವಂತೆ ಅಂತ ಕಿಡಿಕಾರಿಬಿಟ್ಟ, ಹೀಗೆಲ್ಲ ಆದರೆ ನಾನು ಬರೋದಿಲ್ಲ ನೋಡಿ ಎಂದ. ತಾಳ್ಮೆ ಕಳೆದುಕೊಂಡ ಸಂಘಟಕರು ನೀನು ಬರದಿದ್ರೆ ನಷ್ಟ ಏನಿಲ್ಲ ಇಡಯ್ಯಾ ಫೋನು ಎಂದರು. ಆತ ಏನಿಲ್ಲವೆಂದರೂ 1000ಕ್ಕೂ ಮಿಕ್ಕಿದ ಸಿನಿಮಾಗಳಲ್ಲಿ ನಟಿಸಿದ ಕಾಮಿಡಿ ಆಕ್ಟರ್ರು, ರಾಜ್ ಕ್ಯಾಂಪಿನಲ್ಲಿ ಗುರುತಿಸಿಕೊಂಡವರು ಮತ್ತು ಹಾಸನ ಜಿಲ್ಲೆಯ ಮೂಲದವರು!
      ಮೊನ್ನೆಯಷ್ಟೇ ಹೊಯ್ಸಳ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಅದೇ ಊರಿನಲ್ಲಿ ಜನಿಸಿದ ಸಾಧಕರ ಸನ್ಮಾನದ ಸಲುವಾಗಿ ಹೆಸರು ಮಾಡಿದ ಕಲಾವಿದಯೊಬ್ಬರನ್ನು ಸಂಘಟಕರು ಆಹ್ವಾನಿಸಿದರು, ಕಾರ್ಯಕ್ರಮದಲ್ಲಿ ಗೊಂಬೆಯೊಂದಿಗೆ ಒಂದು ಶೋ ನೀಡಿದರೆ ಸಂಭಾವನೆ ನೀಡುವುದಾಗಿಯೂ ತಿಳಿಸಿದರು. ಆದರೆ ಫೋನೆತ್ತಿಕೊಂಡ ಆಕೆ ತಾನು ಬಾಂಬೆಗೆ ಕಾರ್ಯಕ್ರಮದ ಸಲುವಾಗಿ ಹೋಗುತ್ತಿದ್ದೇನೆ ಆದ್ದರಿಂದ ಊರಿನಲ್ಲಿ ನಡೆಯುತ್ತಿರುವ ಉತ್ಸವದ ಕಾರ್ಯಕ್ರಮಕ್ಕೆ ಬರಲು ಬಿಡುವಾಗುತ್ತಿಲ್ಲ ಎಂದು ಬಿಟ್ಟರು. ಸರಿ ಎಂದು ಕೊಂಡ ಸಂಘಟಕರು ಅವರನ್ನು ಕೈಬಿಟ್ಟು ಉತ್ಸವವನ್ನು ಸಂಘಟಿಸಿದರು. ಆದರೆ ಆ ಕಲಾವಿದೆ ಊರಿನ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಬಾಂಬೆಗೆ ಹೋಗುತ್ತಿದ್ದೇನೆ ಎಂದು ಹೇಳಿದ ದಿನವೇ ಜಿಲ್ಲಾ ಕೆಂದ್ರದಲ್ಲಿ ನಡೆದ ಹೊಯ್ಸಳ ಮಹೋತ್ಸವದ ಕಾರ್ಯಕ್ರಮಕ್ಕೆ ಬಾರೀ ಮೊತ್ತದ ಸಂಭಾವನೆ ಪಡೆದು ಹಾಜರಾಗಿದ್ದರು! ಆಕೆಯೂ ಹಾಸನ ಜಿಲ್ಲೆಯ ಮೂಲದವರೇ

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...