Saturday, December 24, 2011

ರೈತ ದಿನಾಚರಣೆಯ ನೆನಪಲ್ಲಿ......


ಅದು 2009ರ ವರ್ಷ, ಆ ಸುದ್ದಿ ನನಗೆ ಕುತೂಹಲ ಮತ್ತು ದಿಗಿಲು ಹುಟ್ಟಿಸಿತ್ತು, ಆ ಹಳ್ಳಿಯ ಜನ ತಮ್ಮ ಜಮೀನು ಮತ್ತು ಹಳ್ಳಿಯನ್ನೇ ಹರಾಜಿಗಿಟ್ಟಿದ್ದರು. ಅದು ಪಂಜಾಬ್ ನ ಮುಂದುವರಿದ ಹಳ್ಳಿ ಅಂದರೆ ಆಧುನಿಕ ಜಗತ್ತಿನ ಎಲ್ಲಾ ಸೌಕರ್ಯಗಳನ್ನು ಪಡೆದ ಶ್ರೀಮಂತ ಹಳ್ಳಯೆಂದರೂ ತಪ್ಪಾಗಲಾರದೇನೋ. ಆ ಗ್ರಾಮದ ರೈತರು ತಮ್ಮ ಜಮೀನು ಸೇರಿದಂತೆ ಹಳ್ಳಿಯನ್ನೂ ಮಾರಾಟಕ್ಕಿಟ್ಟಿದ್ದರು.  ಬಹುತೇಕ ರೈತಾಪಿ ಕುಟುಂಬಗಳೇ ವಾಸಿಸುವ ಆ ಗ್ರಾಮದಲ್ಲಿ 1994ರ ಜಾಗತೀಕರಣ ನೀತಿಯ ನಂತರ ದಿಕ್ಕು ದೆಸೆಯೇ ಬದಲಾಗಿತ್ತು.  ದೇಸೀ ಪದ್ದತಿಯಲ್ಲಿ ಕೃಷಿ ನಡೆಸುತ್ತಿದ್ದ ಅಲ್ಲಿಯ ರೈತರು ನಂತರ ಹೊಸ ವೈಜ್ಞಾನಿಕ ಪದ್ದತಿಗೆ ಮಾರು ಹೋದರು, ದೀರ್ಘಾವದಿಯ ಬೆಳೆ ಬೆಳೆಯುವ ಬದಲಿಗೆ ಅಲ್ಪಾವಧಿಯ ಬೆಳೆ ಬೆಳೆಯಲು ಮುಂದಾಗಿದ್ದರು, ಹೊಸ ತಳಿಗಳ ಬಳಕೆ ಹೆಚ್ಚಿತು, ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಆಸ್ಪದ ಸಿಗತೊಡಗಿತು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆ ಅಧಿಕವಾಯಿತು, ನೀರಾವರಿಗೆ ಥರಹೇವಾರಿ ಆದುನಿಕ ಉಪಕರಣಗಳು ಬಂದವು, ಕೃಷಿಕಾರ್ಮಿಕರಿಗೆ ಬದಲಾಗಿ ಆಧುನಿಕ ಉಪಕರಣಗಳು ಬಂದವು, ಪ್ರತೀ ಮನೆಗೂ ಟ್ರಾಕ್ಟರ್ ಗಳ ಆಗಮನವಾಯಿತು. ಆಹಾರ ಬೆಳೆಗಳಿಗೆ ಬದಲಾಗಿ ವಾಣಿಜ್ಯ ಬೆಳೆಗಳು, ಹೈಬ್ರಿಡ್ ಬೆಳೆಗಳು ಆವರಿಸಿದವು. ಬ್ಯಾಂಕುಗಳು ಸಾಲದ ಹೊಳೆಯನ್ನೇ ಹರಿಸಿದವು. ಸಾಮಾನ್ಯ ರೈತ ಸಿರಿವಂತನಾದ, ಶ್ರಮದ ಜೀವನ ಮರೆಯಾಯಿತು ಆಧುನಿಕ ಬದುಕಿನ ಶೈಲಿ ತಳವೂರಿತು. ಜೊತೆಯಲ್ಲಿ ನೆಮ್ಮದಿ ಕೆಡಿಸುವ ಪರ್ವಕಾಲವೂ ಆರಂಭವಾಯಿತು. ಹವಾಗುಣ ಮೊದಲಿನಂತಿರಲಿಲ್ಲ, ನಿರೀಕ್ಷಿತ ಮಳೆಗಳು ಕೈಕೊಟ್ಟವು, ಕ್ರಿಮಿನಾಶಕ ಹಾಕಿದರೂ ಅದನ್ನೇ ತಿಂದು ಬದುಕುವ ಕೀಟಗಳು ಮತ್ತು ಕಾಯಿಲೆಗಳು ಬೆಳೆಗಳನ್ನು ಹಾಳು ಮಾಡಿದವು, ವಿರಾಮವಿಲ್ಲದೇ ಬೆಳೆ ಬೆಳೆಯುತ್ತಿದ್ದುದರಿಂದ ಹಾಗೂ ಹೆಚ್ಚಿನ ರಾಸಾಯನಿಕ ಪದಾರ್ಥಗಳ ಬಳಕೆ ಹೆಚ್ಚಿದ್ದರಿಂದ ಮಣ್ಣಿನ ಪಿಎಚ್ ಮೌಲ್ಯ ಹಾಳಾಯ್ತು ಭೂಮಿ ಬರಡಾಯಿತು. ಅಲ್ಲಿ ಏನೂ ಬೆಳೆಯದಂತಾಯಿತು. ಆಹಾರ ಬೆಳೆಗಳಿಗೆ ನಿರ್ಲಕ್ಷಿಸಿದ್ದರಿಂದ ರೈತರು ಪೇಟೆಗೆ ಹೋಗಿ ಭತ್ತ,ಗೋದಿಯಂತಹ ಆಹಾರ ಬೆಳೆ  ಖರಿದೀಸುವ ದುಸ್ತಿತಿ ಎದುರಾಯಿತು. ಕೈತುಂಬಾ ದುಡ್ಡು, ಐಷಾರಾಮಿ ಸೌಕರ್ಯ, ವಾಹನಗಳನ್ನು ಹೊಂದಿದ್ದರೂ ಬೂಮಿ ಬರಡಾಗಿದ್ದರಿಂದ ರೈತರ ಬದುಕು ಅಸಹನೀಯವಾಯಿತು. ಸಾಲಕೊಟ್ಟ ಬ್ಯಾಂಕುಗಳು  ಎದೆಮೇಲೆ ನಿಂತು ವಸೂಲಿಗೆ ಮುಂದಾದವು, ಬೇರೆ ದಾರಿಯಿಲ್ಲದ ರೈತಾಪಿ ಮಂದಿ ಜಮೀನುನೊಂದಿಗೆ ಗ್ರಾಮವನ್ನೇ ಹರಾಜಿಗೆ ಇಟ್ಟುಬಿಟ್ಟರು! ಇದು ಪಂಜಾಬ್ ನ ಹಳ್ಳಿಯೊಂದರ ನೈಜ ಕಥೆ.
ಪ್ರಸಕ್ತ ಸಂಧರ್ಭದಲ್ಲಿ   ಸ್ವತಂತ್ರ ಭಾರತದ ಪ್ರತೀ ಹಳ್ಳಿಗಳ ರೈತರ ಕಥೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇವತ್ತು ಡಿ.23, "ರೈತ ದಿನಾಚರಣೆ" ಈ ಸರ್ಕಾರಕ್ಕೆ ನಮ್ಮ ಜನರಿಗೆ ಈ ಕುರಿತು ಎಷ್ಟು ಅರಿವಿದೆಯೋ ತಿಳಿಯದು. ಭಾರತದ ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತದೆ, ಕೃಷಿಯೇ ದೇಶದ ಆರ್ಥಿಕತೆಯೂ ಮೂಲವಾಗಿತ್ತು ಎಂಬುದು ಯಾರಿಗೂ ತಿಳಿಯದ ಸಂಗತಿಯೇನಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ, ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ, ಕೃಷಿ ಜೀವನದ ಉಸಿರು ಯಾಕೆ ಎಂಬ ಪ್ರಶ್ನೆ ಕಾಡಬೇಕು ಮತ್ತು ಮಂಥನವಾಗಬೇಕು, ಈ ದಿನ ಇಂತಹದ್ದೊಂದು ಚರ್ಚೆಗೆ ವೇದಿಕೆಯಾಗಬಹುದು.

ವಿಚಾರದ ಮಂಥನಕ್ಕೆ ಮುನ್ನಾ ರೈತ ದಿನಾಚರಣೆಯ ಕುರಿತು ಒಂದು ಸಂಗತಿಯನ್ನು ಹೇಳಲೇಬೇಕು, ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಅತೀ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧುರಿ ಚರಣ್ ಸಿಂಗ್ ರ ಜನ್ಮ ದಿನವನ್ನು ಭಾರತ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಧಿಕೃತವಾಗಿ ಈ ಕುರಿತು ಸರ್ಕಾರಿ ಘೋಷಣೆಯಿಲ್ಲದಿದ್ದರೂ 80ರ ದಶಕದಲ್ಲಿ ಬಂದ ರೈತ ಚಳುವಳಿಯ ಸಂಧರ್ಭದಲ್ಲಿ ರೈತರು ಡಿ.23ರಂದು ರೈತದಿನಾಚರಣೆ ಆಚರಿಸುತ್ತಾರೆ.ಸಮಾಜವಾದಿ  ರಾಮಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ರ ಒಡನಾಡಿಯಾಗಿ ಗುರುತಿಸಿಕೊಂಡ ಚೌಧುರಿ ಚರಣ್ ಸಿಂಗ್ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ನೂರ್ ಪುರ್ ಎಂಬ ಸಣ್ಣ ಹಳ್ಳಿಯವರು. ಡಿ.23, 1902ರಂದು ಜನಿಸಿದ ಚರಣ್ ಸಿಂಗ್ ಪ್ರತಿಭಾವಂತ ಯುವಕ. ಎಕಾನಮಿಕ್ಸ್ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್ ಸಿಂಗ್ ತನ್ನ 34ನೇ ವಯಸ್ಸಿಗೆ ಮೊದಲ ಭಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾಗಿ ಆಯ್ಕೆಯಾದರು.ಕೃಷಿ ಬದುಕನ್ನು ಪ್ರೀತಿಸುತ್ತಿದ್ದ ಚರಣ್ ಸಿಂಗ್ ರೈತರ ಬದುಕು ಸುಧಾರಣೆಗೆ ತುಡಿತವನ್ನಿಟ್ಟುಕೊಂಡಿದ್ದರು.ಆದ್ದರಿಂದಲೇ  1938ರಲ್ಲಿ  ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು, ಆ ಮೂಲಕ ರೈತ ಪರವಾದ ಧೋರಣೆ ಪ್ರದರ್ಶಿಸಿದರು. ಮದ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆಯನ್ನು ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲಾ  ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು, ಪಂಜಾಬ್ ರಾಜ್ಯ ಇದನ್ನು ಅನುಷ್ಟಾನಕ್ಕೆ ತಂದ ಮೊದಲ ರಾಜ್ಯವಾಯಿತು. 1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿಯನ್ನು ನಿಷೇದಿಸುವ ಮತ್ತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮಹತ್ವದ ನಿರ್ಧಾರ ಕೈಗೊಂಡರು. ಮುಂದೆ ಇದು ಇಡೀ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು. ಅದೇ ರೀತಿ ದೇಶದ ಹಿತದೃಷ್ಟಿಯಿಂದ ಅನೇಕ ಮಹತ್ವದ ದೂರದೃಷ್ಟಿ ನಿಲುವುಗಳನ್ನು ಹೊಂದಿದ್ದ ಚರಣ್ ಸಿಂಗ್ ಭಾರತೀಯ ಕಾರ್ಮಿಕ ಕಾಯ್ದೆಗೆ ಹೊಸ ರೂಪುರೇಷೆ ನೀಡಿದರು. ರೈತ ಪರವಾದ ಚಿಂತನೆಗಳು ದೇಶದ ರೈತ ಸಮುದಾಯದಲ್ಲಿ ಚರಣ್ ಸಿಂಗ್ ರ ಹೆಸರನ್ನು ಹಸಿರಾಗಿಸಿದವು. ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚಿರಸ್ಥಾಯಿಯಾದ ಚರಣ್ ಸಿಂಗ್ ರೈತ ಸಮುದಾಯದಲ್ಲಿ ಸ್ಥಿರವಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತದಿನಾಚರಣೆ ಆಚರಣೆಗೆ ಬಂದಿದೆ.

ಭಾರತದ ದೇಶದ ಕೃಷಿಗೆ  9000ಕ್ರಿ ಪೂ. ದ ಇತಿಹಾಸ ಇರುವುದು  ಕಾಣಬರುತ್ತದೆ. ಅಲ್ಲಿಂದ ಅನೇಕ ಕಾಲಘಟ್ಟಗಳು ಸವೆದು ಹೋಗಿದ್ದರೂ ಆಧುನಿಕ ಪರಿಸರದ ನಿಲುವುಗಳು ಕೃಷಿ ಬದುಕನ್ನು ವರ್ತಮಾನದಲ್ಲಿ ತಲ್ಲಣಗೊಳಿಸುವಂತೆ ಮಾಡಿವೆ. ಉಸಿರಾಗಬೇಕಿದ್ದ ರೈತರ ಹಸಿರು ಭೂಮಿ ಕಾರ್ಪೋರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕುತ್ತಿರುವುದರಿಂದ ರೈತನ ಬದುಕು ಅಸಹನೀಯವಾಗಿದೆ, ಕೃಷಿ ಜಗತ್ತಿನ ಹೊಸ ಅವಿಷ್ಕಾರ ಮತ್ತು ಪದ್ದತಿಗಳು ರೈತನನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡಿವೆ, ಕೃಷಿ ಕುರಿತ ಸರ್ಕಾರಿ ಪಾಲಸಿಗಳೂ ಜಾಗತಿಕ ವ್ಯಾಪಾರದ ಅನುಸಾರವಾಗಿ ನಡೆಯುತ್ತಿರುವುದರಿಂದ ಭವಿಷ್ಯದ ದಿನಗಳು ಮತ್ತಷ್ಟು ಅಯೋಮಯವಾಗುವ ಸ್ಪಷ್ಟ ಸೂಚನೆಯಿದೆ. ರೈತ ಜಾಗೃತನಾಗಬೇಕು ಜನಸಾಮಾನ್ಯ ಎಚ್ಚೆತ್ತುಕೊಳ್ಳಬೇಕು ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

Sunday, December 11, 2011

ಮಡೇಸ್ನಾನ ನಿಷೇದಕ್ಕೆ ಅಷ್ಟಮಂಗಳ ಪ್ರಶ್ನೆ ಬೇಕಾ?



ರಾಮನಾಥಪುರದ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯ ದಿನದಂದು ಎಂಜಲು ಎಲೆ ಮೇಲೆ ಉರುಳುವ ಸೇವೆ ಇದೆ ! ತಕ್ಷಣವೇ ಅದಕ್ಕೊಂದು ಕರೆಕ್ಷನ್ ಹಾಕಿದ ಗೆಳೆಯ "ಆದ್ರೆ ಅಲ್ಲಿ ಬ್ರಾಹ್ಮಣರು ಉಂಡ ಎಲೆಗಳ ಮೇಲೆ, ಬ್ರಾಹ್ಮಣರೇ ಉರುಳುತ್ತಾರೆ" ಎಂದು ನಸುನಕ್ಕ. ಶಾಕ್ ಆಗುವ ಸರದಿ ನನ್ನದು. ಅದೇ ದಿನ ಹಾಸನದ ಮಿತ್ರರೊಬ್ಬರು ಫೋನಾಯಿಸಿ ನಗರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲೂ ಅಪೇಕ್ಷೆ ಈಡೇರಿಕೆಗಾಗಿ ಬರಿಯ ನೆಲದ ಮೇಲೆ ಊಟ ಮಾಡುವ ಪದ್ದತಿ ಇದೆ ಎಂದರು. ಆಮೇಲೆ ಹುಡುಕುತ್ತಾ ಹೋದರೆ ಇಂತಹ ವಿವಿಧ ಅನಾಗರಿಕ ಪದ್ದತಿಗಳು ನಮ್ಮ ಸುತ್ತಲೂ ಸಂಪ್ರದಾಯದ ಹೆಸರಿನಲ್ಲಿ ಚಾಲ್ತಿಯಲ್ಲಿರುವುದು ಅರಿವಿಗೆ ಬಂದು ದಿಗಿಲಾಯ್ತು. ಇದೆಲ್ಲದಕ್ಕಿಂತ ಹೆಚ್ಚು ವಿಷಾಧಭಾವ ಮೂಡಿಸಿದ ಸಂಗತಿ ಹಿರಿಯ ಸಚಿವ ವಿ ಎಸ್ ಆಚಾರ್ಯ ಹೇಳಿಕೆ. ಮಡೇಸ್ನಾನ ನಿಷೇದಿಸುವ ಕುರಿತು ಅಷ್ಟಮಂಗಳ ಪ್ರಶ್ನೆಯ ನಂತರ ನಿರ್ಧರಿಸಲಾಗುವುದಂತೆ, ಹಾಗೆಯೇ ಸಾಂಪ್ರಾದಾಯಿಕ ಪದ್ದತಿಗಳ ಆಚರಣೆ ಜನರ ಹಕ್ಕು ಅದಕ್ಕೆ ಅಡ್ಡಿ ಉಂಟು ಮಾಡಬಾರದಂತೆ ! ಇದು ಜವಾಬ್ದಾರಿಯುತ ಸಚಿವರುಗಳು  ಹಾಗೂ ಸಿಎಂ ಡೀವಿ ಮಾತನಾಡುವ ಪರಿ. ಕಳೆದ 15ದಿನಗಳಿಂದ ಮಡೇ ಸ್ನಾನ ಪರ/ವಿರೋಧ ಚರ್ಚೆಗಳು ನಡೆಯುತ್ತಿವೆ. ಅವರವರ ಮೂಗಿನ ನೇರಕ್ಕೆ ವಿಚಾರವನ್ನ ಚರ್ಚೆಗೆ ತಂದಿದ್ದಾರೆ. ಇರಲಿ ಇಂತಹದ್ದೊಂದು ಅನಿಷ್ಠ ಸಂಪ್ರದಾಯ ಕುರಿತ ಚರ್ಚೆ ನಾಗರಿಕ ಸಮಾಜದ ನಾಗರೀಕರಿಗೆ ಅಗತ್ಯವೇ ಆಗಿದೆ. 
         ಭಾರತ ದೇಶ ಹೇಳಿ ಕೇಳಿ ಸಾಂಪ್ರದಾಯಿಕ ಆಚರಣೆಗಳನ್ನು ಹೊಂದಿದ, ವಿವಿಧ ಧರ್ಮಗಳನ್ನು ಹೊಂದಿದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಈ ನಡುವೆಯೇ ನಾಗರಿಕ ಸಮಾಜಕ್ಕೆ ವಿರುದ್ದವಾದ ಆಚರಣೆಗಳನ್ನು ಕಾಲಘಟ್ಟಕ್ಕೆ ತೊರೆಯದೇ ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಭಾರತೀಯ ಪರಂಪರೆಯನ್ನು ಅತ್ಯಂತ  ಪುರಾತನವಾದ ನಾಗರಿಕೆತೆಯನ್ನು ಹೊಂದಿದ ರಾಷ್ಟ್ರವೆಂದು ಗುರುತಿಸಲಾಗುತ್ತದೆ. ಭಾರತೀಯ ಪರಂಪರೆಗೆ 8000ವರ್ಷಗಳಷ್ಟು ಹಳೆಯ ಇತಿಹಾಸವಿರುವುದನ್ನು ಕಾಣಬಹುದು. ವರ್ಗಬೇಧ, ಜಾತೀಯತೆ ಮತ್ತಿತರ ಅನಿಷ್ಟ ಸಂಪ್ರದಾಯಗಳ ವಿರುದ್ದ ಅನೇಕ ಸಮಾಜ ಸುಧಾರಕರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಿರುವಲ್ಲಿ ಕಾಲ ಕಳೆದಂತೆ ಒಂದೊಂದೆ ಅನಿಷ್ಠ ಸಂಕೋಲೆಗಳು ಕಳಚುತ್ತಾ ಬಂದಿವೆ. ಹಿಂದಿನ ಕಾಲ ಘಟ್ಟದಲ್ಲಿ ಅರಿವಿನ ಕೊರತೆಯಿಂದಾಗಿ ಅನಾಗರಿಕ ಆಚರಣೆಗಳನ್ನು ಪೋಷಿಸಿಕೊಂಡು ಬರಲಾಗಿತ್ತಾದರೂ ಕಾಲಘಟ್ಟದ ಬದಲಾವಣೆಯಿಂದ ಅಲ್ಲೆಲ್ಲ ಹೊಸತನದ ಅರಿವು ಮೂಡುತ್ತಿದೆ. 
          ಮೊನ್ನೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾ ಷಷ್ಠಿಯಂದು ನಡೆಯುತ್ತಿದ್ದ ಮಡೆಸ್ನಾನವನ್ನು ವಿರೋಧಿಸಿದ ಶಿವರಾಂ ಎಂಬುವವರಿಗೆ ಮನಸ್ಸೋ ಇಚ್ಚೆ ಸಾರ್ವಜನಿಕವಾಗಿಯೇ ಥಳಿಸಲಾಗಿದೆ, ಸಾಲದ್ದು ಎಂಬಂತೆ ದೇಗುಲದ ಮುಂದೆ ಭಕ್ತಾದಿಗಳ ಹೆಸರಿನ ಅನಾಗರಿಕರು ಮಡೇಸ್ನಾನದ ಪರವಾಗಿ ಭಾರಿ ಪ್ರತಿಭಟನೆಯನ್ನು ನಡೆಸಿದ್ದಾರೆ, ರಾಜ್ಯ ಸರ್ಕಾರ ತನ್ನದೇ ಆಡಳಿತದ ಸ್ಥಳೀಯ ಸಹಾಯಕ ಆಯುಕ್ತರು ನಿಷೇದಿಸಿದ ಮಡೇಸ್ನಾನವನ್ನು ಬೆಂಬಲಿಸಲು ಮೀನ ಮೇಷ ಎಣಿಸುತ್ತಾ, ಎಸಿ ಆದೇಶವನ್ನು ರದ್ದುಗೊಳಿಸಿ ಅಧಿಕೃತವಾಗಿ ಮಡೇಸ್ನಾನಕ್ಕೆ ಅವಕಾಶ ಮಾಡಿದೆ. ಮುಖ್ಯಮಂತ್ರಿ ಮತ್ತು ಸಚಿವರುಗಳು ಮಡೇಸ್ನಾನ ನಿಷೇಧಕ್ಕೆ ಅಷ್ಟಮಂಗಳ ಪ್ರಶ್ನೆಯನ್ನು ಕಾಯುವುದಾದರೆ ಅವರು ದೇಶದ ಕಾನೂನಿಗೆ, ಸಂವಿಧಾನಕ್ಕೆ ಕೊಡುವ ಗೌರವವೇನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಭಾವನಾತ್ಮಕ ವಿಚಾರಗಳು ನಾಗರೀಕತೆಯ ಚೌಕಟ್ಟಿನಲ್ಲಿರಬೇಕೆ ವಿನಹ ಎಲ್ಲೆಯನ್ನು ಮೀರುವಂತಾಗಬಾರದಲ್ಲವೇ?
             ಧೃಶ್ಯ ಮಾಧ್ಯಮವೊಂದರ ವರದಿಗಾರ ಅದೇ ಛಾನಲ್ ಗೆ ಸಂಬಂಧಿಸಿದ ಪತ್ರಿಕೆಯಲ್ಲಿ ಮಡೆ ಸ್ನಾನದ ಪರವಾಗಿ ವಿಚಾರ ಮಂಡಿಸುತ್ತಾ "ಈ ಸಂಪ್ರದಾಯ ಮುಂದುವರಿಯಬೇಕು ಇಲ್ಲವಾದರೆ ನಾವು ರಥ ಕಟ್ಟುವುದಿಲ್ಲ ಅಂತ ಪಟ್ಟು ಹಿಡಿದದ್ದು ಮಲೆಕುಡಿಯ ಜನಾಂಗದವರೇ ಹೊರತು ಮೇಲ್ಜಾತಿಯವರಲ್ಲ ಎನ್ನುತ್ತಾರೆ ಆದರೆ ಆದರೆ ಅನಿಷ್ಠ ಪದ್ದತಿಯನ್ನು ಜೀವಂತವಾಗಿಡುವ ಉದ್ದೇಶದಿಂದ ಮಲೆಕುಡಿಯರಂತಹ ಅಮಾಯಕ ಜನರನ್ನು ಕಾಲ ಕಾಲಕ್ಕೆ ಪಾಲಿಶ್ ಮಾಡಿ ಅನುಕೂಲಕ್ಕೆ ಬಳಸುವಂತಹ ಪಟ್ಟಭದ್ರ ಹಿತಾಸಕ್ತಿಗಳಿಗೆ ನಾಗರೀಕತೆಯ ಅರಿವಿಲ್ಲವೇ?  ಅದೇ ರೀತಿ ನೆಲದ ಮೇಲೆ ಊಟ ಮಾಡುವುದು ಮುಖ್ಯ ಪ್ರಾಣನಿಗೆ ಸಲ್ಲಿಸುವ ಸೇವೆಯಂತೆ ಇದಕ್ಕೆ ಉಡುಪಿ ಮಠದಲ್ಲಿ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲವಂತೆ ಹಾಗೆಂದ ಮಾತ್ರಕ್ಕೆ ಇಂತಹದ್ದನ್ನು ಪುರಸ್ಕರಿಸಬೇಕೆ? ಇದ್ಯಾವ ಸೀಮೆಯ ನಾಗರೀಕ ಪದ್ದತಿ? ಇದಕ್ಕೆ ಶುಲ್ಕ ಬೇರೆ ಬೇಕಿತ್ತಾ?  ಮಡೇಸ್ನಾನ ತೀರಾ ವೈಯುಕ್ತಿಕವಾದ ಸೇವೆ ದೇವರ ಮಾಮೂಲು ಸೇವಾ ಪಟ್ಟಿಯಲ್ಲಿ ಇದು ಸೇರಿಲ್ಲ ಎನ್ನಲಾಗುತ್ತದೆ ಹಾಗಾದರೆ ಚಂದ್ರಗುತ್ತಿಯ ಬೆತ್ತಲೆ ಸೇವೆ ತೀರಾ ವೈಯುಕ್ತಿಕ ಮತ್ತು ಭಾವನಾತ್ಮಕವಾದುದು, ಉತ್ತರ ಕರ್ನಾಟಕದಲ್ಲಿ ಬಸವಿ ಬಿಡುವ ಪದ್ದತಿ ವೈಯುಕ್ತಿಕವಾದುದು ಹೀಗೆ ಹೇಳುತ್ತಾ ಹೋದರೆ ಹಲವಾರು ಅನಿಷ್ಠ ಸಂಪ್ರದಾಯಗಳನ್ನು ಪಟ್ಟಿ ಮಾಡಬಹುದು. ಇವತ್ತು ನಾವೆಲ್ಲ ಯಾವ ಕಾಲ ಘಟ್ಟದಲ್ಲಿದ್ದೇವೆ? ವೈಜ್ಞಾನಿಕ ಅವಿಷ್ಕಾರಗಳು ಕಣ್ಣ ಮುಂದಿವೆ ಹೀಗಿದ್ದರೂ ಇಂತಹ ಮೂಡನಂಬಿಕೆಗಳ ಆಚರಣೆ ಬೇಕಾ ಎಂಬ ಪ್ರಶ್ನೆ ಮೂಡುತ್ತದೆ,. ಇದೇ ಲೇಖನದಲ್ಲಿ ಸದರಿ ವರದಿಗಾರ ಒಂದು ಪ್ರಶ್ನೆ ಮುಂದಿಡುತ್ತಾನೆ ಬಕ್ರಿದ್ ದಿನ ಕುರಿ ಕಡಿಯುವುದು ನಂಬಿಕೆಯ ಬಾಗ, ದೀಪಾವಳಿಗೆ ಕೋಳಿ ಬಲಿ ನೀಡುವುದು ಸಂಪ್ರದಾಯ ಅದೇ ರೀತಿ ಮಡೇಸ್ನಾನ ದಕ್ಷಿಣ ಕನ್ನಡದ ನಂಬಿಕೆ ಎಂದು ವಿತಂಡವಾದವನ್ನು ಮುಂದಿಡುತ್ತಾನೆ. ಕುರಿ-ಕೋಳಿ ಬಲಿ ಅನಾಗರಿಕ ಕೃತ್ಯವೆಂದೇ ಕಾಣಬಹುದು ಆದರೆ ಅದು ಆಹಾರ ಸೇವನೆಯ ಅನಿವಾರ್ಯ ಭಾಗ, ಮಾಂಸಹಾರ ಇಲ್ಲದಿದ್ದರೆ ಜಗತ್ತಿನ ಬಹುತೇಕ ರಾಷ್ಟ್ರಗಳ ಜನರು ಹಸಿವಿನಿಂದ ಸಾಯುವುದನ್ನು ಕಾಣಬೇಕಿತ್ತು, ಅಷ್ಟಕ್ಕೂ ಸಸ್ಯಾಹಾರಿಗಳ ಸೇವಿಸುವ ಗೋವಿನ ಹಾಲು ಮಾಂಸಜನ್ಯವಾದುದೇ ಅಲ್ಲವೇ ಆಗ ಅದು ಸಸ್ಯಾಹಾರ ಹೇಗಾದಿತು ?
       ಅನಾಗರಿಕ ಕೃತ್ಯಗಳನ್ನು ಬೆಂಬಲಿಸುವ ಭರದಲ್ಲಿ ವಿತಂಡ ವಾದಗಳು ಮತ್ತು ಸಮಂಜಸವಲ್ಲದ ತರ್ಕಗಳು ಹಾದಿ ತಪ್ಪಿಸುತ್ತವೆಯೇ ವಿನಹ ಸರಿಯಾದ ಪರಿಹಾರೋಪಾಯ ಕಂಡು ಕೊಳ್ಳಲಾಗುವುದಿಲ್ಲ. ಆರೋಗ್ಯವಂತ ಸಮಾಜದ ನಡೆಗೆ ಆರೋಗ್ಯವಂತ ಚಿಂತನೆಗಳು ಮಾತ್ರ ಬೇಕು ಅದು ನಾಗರೀಕತೆಯ ಲಕ್ಷಣವಾಗುತ್ತದೆ ಆದರೆ ತರ್ಕಕ್ಕೆ ಪ್ರತಿ ತರ್ಕ ಎಂದು ಮುಂದುವರೆದರೆ ಅದಕ್ಕೆ ಸರಿಯಾದ ಪರಿಹಾರ ದೊರಕಲಾರದು. ಸರ್ಕಾರವೂ ಕೂಡ ಮಡೇಸ್ನಾನ ಮತ್ತು ಮಡೇಸ್ನಾನದಂತಹ ಅನಿಷ್ಠ ಆಚರಣೆಗಳನ್ನು ನಿಷೇದಿಸುವಲ್ಲಿ ಸಂವಿದಾನದ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆ ವಿನಹ ಅಷ್ಟಮಂಗಳ ಪ್ರಶ್ನೆಯ ಮೂಲಕ ಅಲ್ಲ ಎಂಬುದನ್ನು ಅರಿಯಬೇಕಲ್ಲವೇ?

Sunday, November 27, 2011

ಭ್ರಷ್ಟಾಚಾರದ ವಿರುದ್ದ, ನಿಮ್ಮೊಂದಿಗೆ ನಾವಿದ್ದೇವೆ!

ದೇಶದ ಒಬ್ಬ ಸಾಮಾನ್ಯ ನಾಗರೀಕ ವ್ಯವಸ್ಥೆಯ ವಿರುದ್ದ ತಿರುಗಿ ಬೀಳುತ್ತಿದ್ದಾನೆ ಪರಿಣಾಮ ಕೇಂದ್ರದ ಮಂತ್ರಿಯಾಗಿರುವ ಶರದ್ ಪವಾರ್ ನಂತಹವರಿಗೆ ಕಪಾಳ ಮೋಕ್ಷವಾಗಿದೆ. ಒಂದು ಕ್ಷಣ ಅವಾಕ್ಕಾಗಿ ನಂತರ ಏನೂ ನಡೆದೆ ಇಲ್ಲವೇನೋ ಎಂಬಂತೆ ಆತನೇನೋ ನಡೆದು ಹೋಗಿದ್ದಾನೆ, ಆದರೆ ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಆತನ ಕಪಾಳಕ್ಕೆ ಬಾರಿಸಿದ ಹರ್ವಿಂದರ್ ಸಿಂಗ್ ದೇಶದ ಜನರ ಸಧ್ಯದ ಮನಸ್ಥಿತಿಯ ಪ್ರತೀಕವಾಗಿ ಗೋಚರಿಸಲಾರಂಭಿಸಿದ್ದಾನೆ. ಪ್ರಕರಣ ಕುರಿತು ಅಣ್ಣಾ ಹಜಾರೆಯನ್ನು ಪ್ರಶ್ನಿಸಿದರೆ "ಹೌದಾ ! ಒಂದೇ ಕೆನ್ನೆಗೆ ಏಟು ಬಿತ್ತಾ ಎಂದು ಪ್ರಶ್ನಿಸಿದ್ದಾರೆ" ಅಂದರೆ ನಾವೆಲ್ಲಿಗೆ ತಲುಪಿದ್ದೇವೆ ಅಥವಾ ಎಂಥ ಪರಿಸ್ಥಿತಿ ನಮ್ಮೆದುರಿಗಿದೆ ಎಂಬುದರ ದರ್ಶನ ಮಾಡಿಸುತ್ತದೆ.  ಘಟನೆಯನ್ನು ಟೀವಿಯಲ್ಲಿ ನೋಡಿದ ಜನ ಅದನ್ನು ಒಂದು ಪ್ರಹಸನದಂತೆ ವೀಕ್ಷಿಸಿದ್ದರೆ , ದೇಶದ ರಾಷ್ಟ್ರೀಯ ಖಾಸಗಿ ವಾಹಿನಿಗಳು ಗಂಭೀರವಾಗಿ ಚರ್ಚೆಗೂ ತಂದಿವೆ. ಕೆಲವೇ ಮಂದಿ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸಿದ್ದಾರೆ, ರಾಜಕೀಯ ಪಕ್ಷಗಳು ತಮಗೆ ಸಂಬಂಧಿಸಿಲ್ಲವೆಂದು ಮುಗುಮ್ಮಾಗಿವೆ. ಇದು ತಳ್ಳಿಹಾಕುವ ವಿಚಾರವಲ್ಲ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಎಂಬುದನ್ನು ಅರಿಯಬೇಕು.

ಈ ದೇಶದ ಸಾಮಾನ್ಯ ಜನತೆ ಗಮನಿಸಬೇಕು, ಜಾಗತೀಕರಣದ ಬಿಸಿ ದೇಶದ ಎಲ್ಲ ವ್ಯಾವಹಾರಿಕ ವಲಯಗಳನ್ನು ಆಪೋಶನ ತೆಗೆದುಕೊಳ್ಳಲಾರಂಭಿಸುತ್ತಿದ್ದಂತೆ ಚಿಲ್ಲರೆ ವಹಿವಾಟು ವಲಯದಲ್ಲೂ ಜಾಗತಿಕ ವ್ಯವಹಾರದ ಅವಕಾಶಗಳನ್ನು ನೀಡಲಾಗುತ್ತಿದೆ. ಅಭಿವೃದ್ದಿಯ ನೆಪದಲ್ಲಿ ದೇಶದ ಬೆನ್ನೆಲುಬಾದ ರೈತರ ಕೃಷಿ ಭೂಮಿಯನ್ನು ಕಿತ್ತು ಉದ್ದಿಮೆ ದಾರರಿಗೆ ಹೂಡಿಕೆದಾರರಿಗೆ ಡಿ ನೋಟೀಫೈ ಮಾಡುತ್ತಿರುವುದಾರಿಂದ ದೇಶದ ಆರ್ಥಿಕ ಪರಿಸ್ಥಿತಿ ಅಯೋಮಯವಾಗುತ್ತಿದೆ.ಆಹಾರ ಪದಾರ್ಥಗಳ ಉತ್ಪಾದನೆ ಕುಂಠಿತವಾಗಿದೆ, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದಂತಾಗಿದೆ, ಶಿಕ್ಷಣ,ಆರೋಗ್ಯಸೇವೆಗಳು ಮಾರಾಟದ ಸರಕಾಗಿವೆ,  ರೂಪಾಯಿಯ ಬೆಲೆ ಡಾಲರ್ ಎದುರು ಕುಸಿದಿದೆ. ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಯದ್ವಾ ತದ್ವಾ ಏರಿದೆ, ಪೆಟ್ರೋಲು, ಡಿಸೆಲ್, ಅಡುಗೆ ಅನಿಲದ ಬೆಲೆ ತಿಂಗಳಿಗೆ, 15ದಿನಕ್ಕೆ ದಿಕ್ಕು ದೆಸೆಯಿಲ್ಲದಂತೆ ಏರುತ್ತಿದೆ.ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಅವಕಾಶಗಳು ಬಿಸಿಲ್ಗುದುರೆಯಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನತೆ ಬದುಕು ಸಾಗಿಸುವುದು ಹೇಗೆ?
         ಜನಸಾಮಾನ್ಯರ ಸಂಕಷ್ಠಗಳನ್ನು ಸರ್ಕಾರಗಳು ಕೇಳುತ್ತಿಲ್ಲ, ವಿರೋಧ ಪಕ್ಷಗಳು ಆಲಿಸುತ್ತಿಲ್ಲ, ಧ್ವನಿಯೆತ್ತುತ್ತಿಲ್ಲ, ಹೀಗಿರುವಾಗ ಜನಸಾಮಾನ್ಯ ತಾನೆ ಏನು ಮಾಡಿಯಾನು? ಹರ್ವಿಂದರ್ ಸಿಂಗ್ ಇಂತಹ ಸಮಸ್ಯೆಗಳ ಪ್ರತಿನಿಧಿಯಾಗಿ ಒಬ್ಬ ಟ್ರಕ್ ಚಾಲಕನಾಗಿ ತನ್ನ ಅಸಹನೆಯನ್ನು ಹೊರಹಾಕಿದ್ದಾನೆ. ಆತ ಹೊರ ಹಾಕಿದ ಆಕ್ರೋಶ ನಾಗರೀಕತೆಯ ಲಕ್ಷಣವಾಗಿಲ್ಲದಿರ ಬಹುದು ಆದರೆ  ಅದು ಅನಿವಾರ್ಯದ ಸಂಕೇತವೂ ಹೌದಲ್ಲವೇ? ಉಸಿರುಗಟ್ಟಿದ ವಾತಾವರಣದಲ್ಲಿ ಸಾಮಾನ್ಯ ನಾಗರಿಕ ಇನ್ನೇನು ತಾನೆ ಮಾಡಲು ಸಾಧ್ಯ?
           ಇಂತಹ ದುಸ್ಥಿತಿಗೆ ಭ್ರಷ್ಟಾಚಾರವೂ ಮೂಲ ಕಾರಣವೆಂಬುದರಲ್ಲಿ  ಎರಡು ಮಾತಿಲ್ಲ, ಸಧ್ಯ ಅಣ್ಣಾ ಹಜಾರೆ ಗೆ ಮಾತು ಕೊಟ್ಟಂತೆ ಕೇಂದ್ರ ಸರ್ಕಾರ ಪರಿಷ್ಕೃತ ಜನಲೋಕಪಾಲ ಮಸೂದೆಯನ್ನು ಈಗ ನಡೆಯುತ್ತಿರುವ  ಸಂಸತ್   ನಲ್ಲಿ ಮಂಡಿಸಲಿದೆ, ಈ ಸನ್ನಿವೇಶದಲ್ಲಿ ಭ್ರಷ್ಟಾಚಾರ ದವಿರುದ್ದ ರಾಜ್ಯದಲ್ಲಿ ಜನರನ್ನು ಸಂಘಟಿಸಿ ನೇತೃತ್ವ ವಹಿಸಿದ್ದ ಮಾಜ  ಿಲೋಕಾಯುಕ್ತಸಂತೋಷ್    ಹೆಗಡೆಯವರ ವಿರುದ್ದ ಬಿಜೆಪಿ ಸೇರಿದಂತೆ ಇತರೆ ರಾಜಕೀಯ ಪಕ್ಷಗ ಳು ಮನೋಸಾಮರ್ತ್ಯ  ಕುಂದಿಸುವರೀತಿಯಲ್ಲಿ ನಡೆದುಕೊಳ್ಳುತ್ತಿವೆ. ವಿನಾಕಾರಣದ ಆಪಾದನೆಗಳನ್ನು ಮಾಜಿ ಸಿ ಎಂ ಯಡಿಯೂರಪ್ಪ ಮಾಡುತ್ತಿದ್ದಾರೆ. ಗಣಿ ದುಡ್ಡು ತಿಂದ ಕೆಲ ಪತ್ರಕರ್ತರು ಸಂತೋಷ್ ಹೆಗಡೆಯವರನ್ನು ವಿನಾಕಾರಣ ಹಳಿಯುವ ವರದಿಗಳನ್ನು ಪ್ರಕಟಿಸುತ್ತಾ ಸಾರ್ವಿಜನಿಕವಾಗಿ ಅಸಹ್ಯ ಸೃಷ್ಟಿಸುತ್ತಿದೆ, ಇಂತಹ ಸನ್ನಿವೇಶದಲ್ಲಿ ಸಂತೋಷ್ ಹೆಗಡೆಗೆ ನೈತಿಕ ಸ್ತ್ಐರ್ಯ ತುಂಬುವ ಕೆಲಸ ಆಗಬೇಕಾಗಿದೆ. ಭ್ರಷ್ಟಾಚಾರದ ವಿರುದ್ದದ ಹೋರಾಟ ಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಹಾಸನ ಪ್ರಗತಿ ಪರ ಚಿಂತಕರು "ಸಂತೋಷ್ ಹೆಗಡೆ ಭಾವಚಿತ್ರಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಿ  ವಿಚಾರಬೆಂಬಲ ಪಡೆಯುವ ಆಂಧೋಲನ ಆರಂಭಿಸಿದ್ದಾರೆ. ಅದೇ ರೀತಿ ನೀವು ನಿಮ್ಮೂರಿನಲ್ಲಿ ಭ್ರಷ್ಟಾಚಾರದ ವಿರುದ್ದ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಘೋಷಣಾ ಫಲಕದ ಸಂತೋಷ್ ಹೆಗಡೆ ಚಿತ್ರವನ್ನು ಹಾಕ ಬಹುದಲ್ಲವೇ?

Sunday, November 6, 2011

ಕನ್ನಡದ ಹಿರಿಮೆ ಗೊತ್ತೇ?ನ್ರಿ

ಕನ್ನ ಡ ಪ್ರೀತಿ ಎಂದರೇನು? ಕನ್ನಡ ಹಾಡು ಕೇಳೋದು, ಸಿನಿಮಾ ನೋಡೋದು, ಪುಸ್ತಕ ಓದೋದು, ಕನ್ನಡ ಮಾತನಾಡೋದು, ಕನ್ನಡದಲ್ಲಿ ಬರೆಯುವುದು ಎಲ್ಲಾ ಸರಿ ಆದರೆ ಕನ್ನಡದಲ್ಲಿ ಕಲಿಯುವುದು ಎಂಬ ಮಾತಿಗೆ ಮಾತ್ರ ಹೆಚ್ಚಿನ ಪುಷ್ಠಿ ಸಿಗುತ್ತಿಲ್ಲ. ಕನ್ನಡ ಭಾಷೆ ಅಳಿವು ಉಳಿವು ಕುರಿತು ಬೆರಳೇಣಿಕೆಯ ಮಂದಿ ಮಾತ್ರ ಪ್ರತಿಭಟನೆಗೆ ಮುಂದಾಗುವುದು, ಆಸಕ್ತಿ ವಹಿಸುವುದು ಕೆಲವರಿಗೆ ಮಾತ್ರ ಸೀಮಿತವಾದಂತಿದೆ. ಕನ್ನಡಿಗರಲ್ಲಿ ನೈಜವಾದ ಸ್ವಾಭಿಮಾನ ಭಾಷೆ-ಸಂಸ್ಕೃತಿಯ ಬಗೆಗೆ ಪ್ರೀತಿ ಇದ್ದಿದ್ದರೆ ಇವತ್ತಿನವರೆಗೂ ಭಾಷೆಯ ಉಳಿವಿಗೆ ಹೋರಾಡಬೇಕಾದಂತಹ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ 2011ರ ಜುಲೈ ತಿಂಗಳಲ್ಲಿಯೇ ಲಬಿಸಿದ್ದರೂ ಕೊಂಗರ ಕಿತಾಪತಿಯಿಂದ ಪೂರಕ ಚಟುವಟಿಕೆಗ ಳಿಗೆ ಹಿನ್ನೆಡೆ ಉಂಟಾಗಿದೆ.  ಈ ಸಂಧರ್ಭದಲ್ಲಾದರೂ ಈ ಕುರಿತು ಅವಲೋಕನವಾಗ ಬೇಕಾಗಿದೆ.
            ನಮ್ಮ ಅನ್ನದ ಭಾಷೆ ಕಸ್ತೂರಿ ಕನ್ನಡದ ಬಗೆಗೆ ಒಂದಿಷ್ಟು ಅರಿಯೋಣ.ಕನ್ನಡ ಭಾಷೆ ಭಾರತದ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆ, ಸುಮಾರು 50ಮಿಲಿಯನ್ ಜನ ಜಾಗತಿಕವಾಗಿ ಕನ್ನಡ ಭಾಷೆ ಮಾತನಾಡುತ್ತಾರೆ, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಬಳಸಲ್ಪಡುವ ಭಾಷೆಯಾಗಿ ಕನ್ನಡಕ್ಕೆ 27ನೇ ಸ್ಥಾನವಿದೆ. ಕನ್ನಡ ತನ್ನ ಒಡಲಲ್ಲಿ ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳಿಗೆ ಮಾತೃ ಸ್ಥಾನದಲ್ಲಿದೆ. 1600ವರ್ಷಗಳಷ್ಟು ಹಳೆಯದಾದ ಇತಿಹಾಸ ಹೊಂದಿರುವ ಕನ್ನಡ ಬಾಷೆಯ ಬರವಣಿಗೆ ಪ್ರಾಕಾರ ಆರಂಭವಾಗಿದ್ದು 5ಮತ್ತು 6ನೇ ಶತಮಾನದಲ್ಲಿ. ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ ಸಿಕ್ಕ ಮೇಲೆ ಸುಮಾರು 30000ಸಾವಿರಕ್ಕೂ ಹೆಚ್ಚು ಕನ್ನಡದ ಶಾಸನಗಳು ಸಿಕ್ಕಿದ್ದು ಕನ್ನಡದ ಅಸ್ತಿತ್ವ ಎಷ್ಟು ಹಳೆಯದು ಎಂಬುದನ್ನು ಸಾರಿ ಸಾರಿ ಹೇಳುತ್ತವೆ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದ್ದು 9ಮತ್ತು 10ನೇ ಶತಮಾನದಲ್ಲಿದ್ದ ರಾಷ್ಟ್ರಕೂಟರ ಆಡಳಿತದಲ್ಲಿ. ಕನ್ನಡದಲ್ಲಿ ಬಂದಷ್ಟು ಸಾಹಿತ್ಯ ಪ್ರಾಕಾರಗಳು ಜಗತ್ತಿನ ಯಾವ ಭಾಷೆಯಲ್ಲೂ ಬಂದಿರಲಾರದು. ಕನ್ನಡದಲ್ಲಿ ದ್ವಿಪದಿಗಳು, ತ್ರಿಪದಿಗಳು,ವಚನ ಸಾಹಿತ್ಯ, ರಗಳೆ, ವ್ಯಾಕರಣ, ಜೈನಸಾಹಿತ್ಯ,ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, 15ನೇ ಶತಮಾನ ದಲ್ಲಿ ಬಂದ ಕರ್ನಾಟಕ ಸಂಗೀತ ಪರಂಪರೆ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. 20ನೇ ಶತಮಾನದ ಆಧುನಿಕ ಕನ್ನಡ ಪರಂಪರೆಯಲ್ಲಿ ನವೋದಯ ಸಾಹಿತ್ಯ,ನವ್ಯೋತ್ತರ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಪರಂಪರೆಯನ್ನು ಶ್ರೀಮಂತ ಗೊಳಿಸಿರುವುದಷ್ಟೇ ಅಲ್ಲ ಸೂಕ್ಷ್ಮ ಸಂವೇದನೆಯ ಮೂಲಕ ಜಾಗತಿಕ ಭೂಪಟದಲ್ಲಿ "ಕನ್ನಡ" ಹೊಸ ಸಂಚಲನವನ್ನೇ ಉಂಟುಮಾಡಿದೆ. ಕನ್ನಡದ ಸಾಹಿತಿಗಳಿಗೆ ಇತರೆಲ್ಲ ಭಾಷೆಯ ಸಾಹಿತಿಗಳಿಗಿಂತ ಅತೀ ಹೆಚ್ಚಿನ ಎಂದರೆ 8 ಜ್ಞಾನಪೀಠಿಗಳನ್ನು ಪಡೆದಿದೆ. 52ಕ್ಕೂ ಹೆಚ್ಚು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳನ್ನ ಪಡೆದಿದೆ.
              ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಭಾಷೆಯನ್ನು ೨೦ ಶೈಲಿಗಳಲ್ಲಿ ಮಾತನಾಡುವುದನ್ನು ಕಾಣಬಹುದು. ಅವುಗಳಲ್ಲಿ ವಿಶಿಷ್ಠವಾದುದು ಕುಂದಾಪುರದ ಕುಂದಕನ್ನಡ, ನಾಡವ ಕನ್ನಡ, ಹವ್ಯಕರ ಹವಿಗನ್ನಡ, ಅರೆಭಾಷೆ, ಸೋಲಿಗ ಭಾಷೆ, ಬಡಗ, ಗುಲ್ಬರ್ಗ ಕನ್ನಡ, ದಾರವಾಡ ಕನ್ನಡ, ರಾಯಚೂರು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನಡ, ಮಂಗಳೂರು ಕನ್ನಡ, ಚಿತ್ರದುರ್ಗ ಕನ್ನಡ, ಕೊಳ್ಳೆಗಾಲದ ಭಾಷೆ ಹೀಗೆ ವೈವಿಧ್ಯವಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ ಜಗತ್ತಿಗೆ ಕರ್ನಾಟಕದ ಹೆಮ್ಮೆಯ ಕೊಡುಗೆ. ಬೇಲೂರು-ಹಳೆಬೀಡು,ಹಂಪೆ, ಶ್ರವಣಬೆಳಗೊಳ,ಪಟ್ಟದಕಲ್ಲು-ಐಹೊಳೆ,ಗೋಲಗುಮ್ಮಟ ದಂತಹ ಅಂತರ ರಾಷ್ಟ್ರೀಯ ಸ್ಮಾರಕಗಳು, ಶ್ರೇಷ್ಠ ಕವಿಗಳು,ಅರಸ ಪರಂಪರೆ, ಮುತ್ಸದ್ದಿ ರಾಜಕಾರಣಿಗಳು, ಕ್ರೀಡಾಪಟುಗಳು, ನಟರು,ನಿರ್ದೇಶಕರು, ಕಲಾವಿದರು ನಮ್ಮಲ್ಲಿದ್ದಾರೆ.


           ಇಂತಹದ್ದೊಂದು ಶ್ರೀಮಂತ ಪರಂಪರೆ ಇದ್ದಾಗ್ಯೂ ನಮಗೇಕೇ ಇಂತಹ ದುರ್ಗತಿ? ಕರ್ನಾಟಕ ರಾಜ್ಯ ಪ್ರಾಕೃತಿದತ್ತವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ ಹಾಗಾಗಿ ಬಹಳ ಹಿಂದಿನಿಂದಲೂ ಅಕ್ಕಪಕ್ಕದ ರಾಜ್ಯದವರು ಉತ್ತರ ಭಾರತದ ಮಂದಿ ಅಂದರೆ ಆಂಧ್ರ ವಾಳ್ಳುಗಳು,ತಮಿಳು ಕೊಂಗರು,ರಾಜಾಸ್ಥಾನದ ಸೇಟುಗಳು, ಮರಾಠಿಗಳು, ಬಿಹಾರಿಗಳು, ಬಂಗಾಲಿಗಳು, ಮಲೆಯಾಳಿಗಳು, ಉತ್ತರಪ್ರದೇಶದವರು ಹೀಗೆ ಸಮಸ್ತರು ಇಲ್ಲಿ ಬಂದು ನೆಲೆಗೊಂಡರು. ಈ ನಡುವೆ ಜಾಗತೀಕರಣದ ಭೂತದಿಂದಾಗಿ ರಾಜ್ಯದಲ್ಲಿ ಹಲವು ಉದ್ದಿಮೆಗಳು ಸ್ಥಾಪಿಸಲ್ಪಟ್ಟವು. ಬೆನ್ನಲ್ಲೇ ದೇಶ ವಿದೇಶಿಗರ ವಲಸೆಯು ಹೆಚ್ಚಿತು ಪರಿಣಾಮ ನಮ್ಮ ಆಲೋಚನೆಗಳು ಬದುಕಿನ ರೀತಿ ರಿವಾಜುಗಳು ಬದಲಾದವು. ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಆಯಿತು, ಬಾಷೆಯಿಂದ ವಿಮುಖತೆ ಆಯಿತು ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಗು ಹುಟ್ಟುತ್ತಲೇ ಅದು ಕನ್ನಡ ಕಲಿತರೆ ತಮಗೆ ಅಪಮಾನ ಎಂದು ತಂದೆತಾಯಿಯರು ಭಾವಿಸುವಂತಾಯಿತು. ಕನ್ನಡೇತರರ ಬಗೆಗಿನ ಅಭಿಮಾನ ಜಾಸ್ತಿಯಾಯಿತು, ಕನ್ನಡ ಶಾಲೆಗಳಿಗಿಂತ ಆಂಗ್ಲಭಾಷೆ ಮಾಧ್ಯಮ ಶಾಲೆಗಳಿಗೆ ಆದ್ಯತೆ ಹೆಚ್ಚಿತು. ರಾಜಕಾರಣಿಗಳು ಮತಬ್ಯಾಂಕಿಗೆ ಇತರೆ ಭಾಷಿಕರನ್ನು ಓಲೈಸಲು ನಿಂತರು. ನಮ್ಮ ನೆಲೆಯಲ್ಲಿ ನಾವೇ ಕನ್ನಡಕ್ಕೆ ಹೋರಾಡುವ ಪರಿಸ್ಥಿತಿಗೆ ಇದೇ ವೇದಿಕೆಯಾಯಿತು. ಕನ್ನಡ ಚಳುವಳಿಯನ್ನು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ ಪ್ರವರ್ದಮಾನಕ್ಕೆ ತಂದ ನಾರಾಯಣಗೌಡರು ಕನ್ನಡದ ರಕ್ಷಣೆಗೆ ರಕ್ಷಣಾ ವೇದಿಕೆ ಹುಟ್ಟುಹಾಕಿದರೆ, ಇತರರನೇಕರು ಹೊಟ್ಟೆ ಪಾಡಿಗೆ ಅದೇ ಮಾದರಿಯ ಸಂಘಟನೆಗಳನ್ನು ಹುಟ್ಟುಹಾಕಿದರು. ಕನ್ನಡ ರಕ್ಷಣೆಗೆ ಬದಲಾಗಿ ಸುಲಿಗೆಗೆ ನಿಂತು ಆ ಮೂಲಕ ಕನ್ನಡ ಚಳುವಳಿಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಶಾಸ್ತ್ರೀಯ ಭಾಷೆಯ ಸ್ತಾನಮಾನವನ್ನು ೩ ಭಾಷೆಗಳಿಗೆ ಮಾತ್ರ ನೀಡಲಾಗಿದೆ. ಈಗ ತಮಿಳುಭಾಷೆಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿದೆ. ಕನ್ನಡಕ್ಕೆ 2ವರ್ಷಗಳ ಹಿಂದೆಯೇ ಶಾಸ್ತ್ರೀಯ ಸ್ಥಾನಮಾನವಿದ್ದರೂ ತಮಿಳುನಾಡಿನ ಕೊಂಗರ ಕುಚೇಷ್ಟೇಯಿಂದ ಅದು ನಮಗಿನ್ನು ಬಿಸಿಲ್ಗುದುರೆಯಾಗಿಸಿತ್ತು.
                ರಾಜ್ಯದಲ್ಲಿ ಕಳೆದ 10ವರ್ಷಗಳಿಂದೀಚೆಗೆ 10500ಕ್ಕೂ ಹೆಚ್ಚು ಶಾಲೆಗಳನ್ನು ಮಕ್ಕಳ ಪ್ರವೇಶಾತಿ ಸಂಖ್ಯ ಗಣನೀಯವಾಗಿ ಇಳಿಕೆಯಾಗುತ್ತಿರುವುದರ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ, ಪ್ರಸಕ್ತ ವರ್ಷದಲ್ಲಿ 3500ಕ್ಕೂ ಅಧಿಕ ಶಾಲೆಗಳು ಮುಚ್ಚಲು ಸಿದ್ದತೆ ನಡೆದಿದೆ. ರಾಜ್ಯೋತ್ಸವ ಸಂಧರ್ಭದಲ್ಲಿ ಕನ್ನಡ ಸಂಘಟನೆಗಳ ಪ್ರತಿಭಟನೆಗೆ ಅಂಜಿದ ಸರ್ಕಾರ ಶಾಲೆಗಳನ್ನು ಮುಚ್ಚುತ್ತಿಲ್ಲ ಬದಲಾಗಿ ವಿಲೀನ ಗೊಳಿಸಲಾಗುತ್ತಿದೆ ಎಂದು ಹೇಳಿದೆ ಈ ಹಿನ್ನೆಲೆಯಲ್ಲಿ ವಾದ-ಪ್ರತಿವಾದಗಳು ಅವರವರ ತಿಳುವಳಿಕೆಯ ಮಟ್ಟದಲ್ಲಿ ಜಾರಿಯಲ್ಲಿವೆ.ಆದರೆ ಒಂದು ವಿಚಾರ ಗಮನಿಸಬೇಕು  ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೊಡುವಾಗ ಸರ್ಕಾರ  ಮನಸ್ಸೊಇಚ್ಚೆಅನುಮತಿ ನೀಡಿ ಕಾನೂನು ಉಲ್ಲಂಘಿಸಿದೆ. ಮೊದಲಿನಂತೆ ಶಿಕ್ಷಣ ಕ್ಷೇತ್ರವನ್ನು ಸೇವಾವಲಯದಲ್ಲಿದೆಯೆಂದು ಭಾವಿಸಬೇಕಿಲ್ಲ, ಬದಲಾಗಿ ಅದೊಂದು ವ್ಯವಹಾರದ ಭಾಗವಾಗಿದೆ ಹಾಗಾಗಿ ಬಂಡವಾಳ ಶಾಹಿಗಳು, ರಾಜಕಾರ ಣಿಗಳು ಶಿಕ್ಷಣದ ಅಂಗಡಿಗಳನ್ನು ತೆರೆದು ಕುಳಿತಿರುವುದು ಪ್ರಮಖ ಅಡ್ಡಿ ಎರಡನೇಯದಾಗಿ ಜಾಗತಿಕ ವ್ಯವಸ್ಥೆ ಯಲ್ಲಿ ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದ ಜನ ಕನ್ನಡ ಶಾಲೆ  ಗಳತ್ತ ಆಸಕ್ತಿ ತೋರದಿರುವುದು ಕನ್ನಡ ಶಾಲೆಗಳು ಮುಚ್ಚಲು ಕಾರಣವಾಗಿವೆ. ಪ್ರತೀ ಸರ್ಕಾರಿ ಉದ್ಯೋಗಿ ತಮ್ಮ ಮಕ್ಖಳನ್ನು  ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣವನ್ನು  ಕನ್ನಡ ಶಾಲೆಗಳಲ್ಲಿ  ಕೊಡಿಸಬೇಕು. ನಿಯಮ ಉಲ್ಲಂಘಿಸಿ ಅನು  ಮತಿನೀಡಿರುವ ಖಾಸಗಿ ಶಾಲೆಗಳನ್ನು ಕಡ್ಡಾಯವಾಗಿ  ಮುಚ್ಚಬೇಕು. ಉದ್ಯೋಗದಲ್ಲಿ ಮತ್ತಿತರ ಸವಲತ್ತುಗಳನ್ನು ನೀಡುವಾಗ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡಶಾಲೆಯಲ್ಲಿ ಮುಗಿಸಿದವರಿಗೆ  ಮಾತ್ರ  ಆದ್ಯತೆಸಿಗುವಂತೆ ಆದೇಶ ಹೊರಡಿಸಬೇಕು ಅಲ್ಲವೇ?(ಸಶೇಷ)

Sunday, October 30, 2011

'ನಮ್ಮ ಶಂಕರ'ನೆನಪಿಗೆ 'ನಮ್ಮ ಮೆಟ್ರೋ'!!

ವತ್ತು ಬೆಂಗಳೂರಿನ 'ಮೆಟ್ರೋ ರೈಲು' ಸಂಚಾರ ಉದ್ಘಾಟನೆಯ ದಿನ... ಜನ ಸಂಭ್ರಮದಿಂದ ಟಿಕೆಟ್ ಖರೀದಿಸಿ ಮೆಟ್ರೋ ಪ್ರಯಾಣದ ಸವಿ ಅನುಭವಿಸುವ ಖುಷಿಯಲ್ಲಿದ್ದರು..ನ್ಯೂಸ್ ಛಾನಲ್ ಒಂದು ಅದನ್ನ ಲೈವ್ ಆಗಿ ತೋರಿಸುತ್ತಿತ್ತು..  ಅಂತಹದ್ದೊಂದು ಗುಂಪಿನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಧರಿಸಿ ಸಂಭ್ರಮಿಸುತ್ತಿದ್ದ ಒಂದು ಹೆಣ್ಣು ಜೀವ ಕಾಣಿಸಿತು.. ಅದು ಸಂತೋಷವೋ, ಸಂತಸದ ದಿಗಿಲೋ ತಿಳಿಯುತ್ತಿರಲಿಲ್ಲ.. 'ಮೆಟ್ರೋ ನಮ್ಮ ಶಂಕರನ ಕನಸು ಅದು ಇವತ್ತು ನನಸಾಗಿದೆ ಅದಕ್ಕೆ ಟಿಕೆಟ್ ತಗೊಂಡಿದೀನಿ ನೋಡಿ, ಅವನ ನೆನಪಲ್ಲಿ ಪ್ರಯಾಣಿಸ್ತೀನಿ ಅಂತ ಹೇಳಿದ್ದು ಬೇರಾರು ಅಲ್ಲ, ಅವರೇ ಅರುಂಧತಿ ನಾಗ್!!ಒಂದೆಡೆ ಶಂಕರನ ಕನಸು ನನಸಾದ ಸಂಭ್ರಮ ಇನ್ನೊಂದೆಡೆ ಅದೇ ಸಮಯಕ್ಕೆ ಆತನಿಲ್ಲದ ದುಖ: ಅವರ ಮುಖಭಾವದಲ್ಲಿ ಬೇಡವೆಂದರೂ ಎದ್ದು ಕಾಣಿಸುತ್ತಿತ್ತು.  ಒಂದು ಕ್ಷಣ ನನಗೆ ತಿಳಿಯದಂತೆ ಕಣ್ಣಂಚು ಒದ್ದೆಯಾಯಿತು. ಹೌದು 'ನಮ್ಮ ಶಂಕರ'ನ ತಾಕತ್ತೇ ಅಂತಹುದು. 25ವರ್ಷಗಳ ಹಿಂದೆಯೇ ಇಂತಹದ್ದೊಂದು ಕನಸಿನ ಪ್ರಾಜೆಕ್ಟ್ ಸಿದ್ದಪಡಿಸಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಪ್ರಸ್ತಾಪ ಮಾಡಿದ್ದು ನಮ್ಮ ವರ್ಕಾಲಿಕ್ ನಟ-ನಿರ್ದೇಶಕ-ನಾಟಕಕಾರ ಮಾನವೀಯ ಸೆಲೆಯ ಶಂಕರ್ ನಾಗ್.
         ಶಂಕರ್ ನಾಗ್ ನಮ್ಮನಗಲಿ ಸೆ.30ಕ್ಕೆ ಸರಿಯಾಗಿ 21ವರ್ಷಗಳು, ಆತ ಕೇವಲ ನಟನಾಗಿ, ನಿರ್ದೇಶಕನಾಗಿ ಉಳಿಯದೇ ಸಮಾಜ ಮುಖಿಯಾಗಿ ಚಿಂತಿಸುವ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಅಜರಾಮರ ಎನಿಸಿದ್ದಾರೆ. ಶಂಕರ್ ನಾಗರಕಟ್ಟೆ ಉತ್ತರ ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಹಳ್ಳಿಯಲ್ಲಿ ಜನಿಸಿದ್ದು 9ನೇ ನವೆಂಬರ್ 1954ರಂದು. ಸಹಜಾಭಿನಯಕ್ಕೆ ಖ್ಯಾತಿ ಪಡೆದಿರುವ ಮೇರು ನಟ ಅನಂತ್ ನಾಗ್ ರ ಸಹೋದರಾಗಿದ್ದ ಶಂಕರ್ ನಾಗ್ ವಿದ್ಯಾಭ್ಯಾಸ ಮುಗಿದ ನಂತರ ಪ್ರಯಾಣ ಬೆಳೆಸಿದ್ದು ಮುಂಬೈಗೆ. ಅಲ್ಲಿ ಮರಾಠಿ ಹಾಗೂ ಕೊಂಕಣಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಶಂಕರ ಜೀವನೋಪಾಯಕ್ಕೆ ಬ್ಯಾಂಕ್ ನೌಕರಿಗೂ ಸೇರಿದ್ದರೂ. ಆದರೆ ರಂಗಭೂಮಿಯ ಸೆಳೆತ ಅವರನ್ನು ಕಲಾ ಲೋಕಕ್ಕೆ ಸೆಳೆದು ಬಿಟ್ಟಿತು. ಹೀಗಿರುವಾಗ ಅದೊಂದು ದಿನ ಗಿರಿಶ್ ಕಾರ್ನಾಡರು ದೆಹಲಿಯಲ್ಲಿ ನಡೆದ ಅಂತರ ರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಶ್ರೆಷ್ಠ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿ ಪಡೆದ ಅಕಿರಾ ಕುರುಸೋವ ಅವರ ಜಪಾನಿ ಭಾಷೆಯ "ಸೆವೆನ್ ಸಮುರಾಯ್ಸ್" ಚಿತ್ರವನ್ನು ಕನ್ನಡದಲ್ಲಿ ತೆರೆಗೆ ತರಲು ಸಿದ್ದತೆ ನಡೆಸಿದ್ದರು. ಆ ಚಿತ್ರದ ಪ್ರಧಾನ ಪಾತ್ರಕ್ಕೆ ಸೂಕ್ತ ನಾಯಕನನ್ನು ಹುಡುಕುತ್ತಿದ್ದಾಗ ಮರಾಠಿ ರಂಗಭೂಮಿಯಲ್ಲಿ ಗಮನ ಸೆಳೆದಿದ್ದ ಶಂಕರ ಕಣ್ಣಿಗೆ ಬಿದ್ದಿದ್ದ. ಕಾರ್ನಾಡರು ಆಹ್ವಾನ ನೀಡಿದಾಗ ಮೊದಲಿಗೆ ನಿರಾಕರಿಸಿದ್ದ ಶಂಕರ್ ನಂತರ ಸಹೋದರನ ಒತ್ತಾಸೆಯ ಮೇರೆಗೆ 'ಒಂದಾನೊಂದು ಕಾಲದಲ್ಲಿ " ಚಿತ್ರವನ್ನು ಒಪ್ಪಿಕೊಂಡರು. ದೇಸೀ ನೆಲಕ್ಕೆ ಒಗ್ಗಿಸಿದ್ದ ಕಥೆಗೆ ಕೇವಲ ನಟನಾಗದೇ ತಾನೇ ಪಾತ್ರವಾಗಿ ಹೋದ ಶಂಕರ ಸಿನಿಮಾ ರಂಗದಲ್ಲಿ ತನ್ನ ಛಾಪನ್ನು ಮೂಡಿಸಿ ಬಿಟ್ಟಿದ್ದ, ಅಷ್ಟೇ ಅಲ್ಲ ಆ ಚಿತ್ರದ ನಟನೆಗಾಗಿ ಆತನಿಗೆ ರಾಷ್ಟ್ರಪತಿಗಳ ಗೋಲ್ಡನ್ ಪೀಕಾಕ್ ಅವಾರ್ಡ್ ನ ಗರಿಯನ್ನು ಮುಡಿಗೇರಿಸಿಕೊಂಡಿದ್ದ. ನೆನಪಿರಲಿ ಕನ್ನಡದಲ್ಲಿ ಅಂತಹ ಪುರಸ್ಕಾರ ಪಡೆದ ಏಕೈಕ ನಟ ಶಂಕರ್ ನಾಗ್. 1978ರಿಂದ ಆರಂಭವಾದ ಶಂಕರನ ಸಿನಿಮಾಯಾನ 1990ರ ವರೆಗೆ ಸತತವಾಗಿ 12ವರ್ಷ ಮುಂದುವರೆದಿತ್ತು. 90ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕರ ಒಂದು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ನಟನಾಗಿ ಜನರನ್ನ ಆಕರ್ಷಿಸಿದ್ದಕ್ಕಿಂತ ನಿರ್ದೇಶಕನಾಗಿ ಹೆಚ್ಚು ಗಮನ ಸೆಳೆದ ಶಂಕರ್ ನಾಗ್ 70 ರ ದಶಕದಲ್ಲೇ ಅಡ್ವಾನ್ಸ್ ಆದ ಆಫ್ ಬೀಟ್ ಸಿನಿಮಾಗಳನ್ನು ನಿರ್ದೆಶಿಸಿದ್ದನಲ್ಲದೇ ಅದಕ್ಕಾಗಿ ಅಂತರ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದರು. ಏಕ ಕಾಲದಲ್ಲಿ ರಂಗಭೂಮಿಗೂ ಗಮನ ನೀಡಿದ ಶಂಕರ್ ವಿದೇಶಿ ನೆಲದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಬಹುಶ: ರಂಗಭೂಮಿಯ ಮೂಲಕ ಶಂಕರ್ ವಿದೇಶಗಳಲ್ಲಿ ನೀಡಿದಷ್ಟು ಪ್ರದರ್ಶನಗಳನ್ನ ಮತ್ಯಾವ ಕಲಾವಿದನೂ ನೀಡಿರಲಾರ. ತನ್ನದೇ ನಿರ್ದೇಶನದ 'ಮಿಂಚಿನ ಓಟ' 'ಆಕ್ಸಿಡೆಂಟ್', 'ಗೀತಾ', 'ನೋಡೀಸ್ವಾಮಿ ನಾವಿರೋದೇ ಹೀಗೆ'  ಯಂತಹ ಹಲವು ವಿಭಿನ್ನ ಧಾಟಿಯ ಸಿನಿಮಾಗಳನ್ನು ನೀಡಿದ ಶಂಕರ್ ನಾಗ್ ತಾಂತ್ರಿಕವಾಗಿ ಅಂದಿನ ದಿನಗಳಲ್ಲಿ ಸವಾಲಾಗಿದ್ದ ಛಾಯಾಗ್ರಹಣದ ಸಾಧ್ಯತೆಗಳನ್ನು ಭಾರತೀಯ ಚಿತ್ರರಂಗದಲ್ಲಿ ಮೊದಲಭಾರಿಗೆ ಬಳಕೆಗೆ ತಂದದ್ದು ಇದೇ ಶಂಕರ್ ನಾಗ್.. 7ರಾಷ್ಟ್ರಗಳಿಗೆ ಭೇಟಿ ನೀಡಿ ತಂತ್ರಜ್ಣಾನದ ಸಾಧ್ಯತೆಗಳನ್ನು ಒಗ್ಗಿಸಿಕೊಂಡು ನಿರ್ದೇಶಿಸಿದ ಆ ಚಿತ್ರ ಡಾ|| ರಾಜ್ ನಟಿಸಿದ್ದ 'ಒಂದು ಮುತ್ತಿನ ಕಥೆ'. 
        ಶಂಕರ್ ಯೋಚಿಸುವ ಪರಿಯನ್ನ ಆತ ನಿರ್ದೇಶಿಸಿ ಚಿತ್ರಗಳನ್ನು ನೋಡಿದರೆ ತಿಳಿಯಬಹುದು, ಸಾಮಾಜಿಕ ಪರಿಣಾಮ ಬೀರುವ ಮತ್ತು ವಾಸ್ತವ ಜಗತ್ತಿನ ಅರಿವು ಮೂಡಿಸುವ ಮೂಲಕ ಚಿಂತನೆಗೆ ಹಚ್ಚುವ ಚಿತ್ರಗಳನ್ನು ನಿರ್ದೇಶಿಸಿದ ಶಂಕರ್, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಧೃಢವಾಗಿ ತಮ್ಮನ್ನು ಪರಿಚಯಿಸಿ ಕೊಂಡದ್ದು 'ಮಾಲ್ಗುಡಿ ಡೇಸ್' ಎಂಬ ಕಿರುತೆರೆ ಸೀರಿಯಲ್ ಮೂಲಕ. ತಾನು ಬೆಳೆಯುವ ಜೊತೆಗೆ ಸಾವಿರಾರು ಕಲಾವಿದರು, ತಂತ್ರಜ್ಞರನ್ನು ಬೆನ್ನು ತಟ್ಟಿ ಉತ್ಸಾಹ ತುಂಬಿ ಬೆಳೆಸಿದ ಶಂಕರ್... ಮಾನವೀಯ ಸೆಲೆಯಿಂದಾಗಿ ಸಾಮಾನ್ಯ ಜನರ ಬದುಕಿನಲ್ಲೂ ಅಮರವಾಗಿ ಉಳಿದಿದ್ದಾರೆ. 'ಆಟೋ ರಾಜ' ಚಿತ್ರದ ನಂತರ ಖಾಯಂ ಆಗಿ ಆಟೋದವರ ಆರಾಧ್ಯ ಧೈವವಾಗಿ ಬೆಳೆದು ನಿಂತ ಶಂಕರ್ ನ ಎತ್ತರವನ್ನು ಎಷ್ಟೋ ಮಂದಿ ನಟರು ಬಂದು ಹೋದರು ಏರಲಾಗಿಲ್ಲವೆಂದರೆ ಅವನ ತಾಕತ್ತನ್ನು ಊಹಿಸಬಹುದು. ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಶಂಕರ್ ನಿಂದ ಪ್ರೇರಿತರಾಗಿ ಯಶಸ್ಸು ಕಂಡಿರುವ ಹಲವಾರು ಮಂದಿ ಯನ್ನು ವಿವಿಧ ವಿಭಾಗಗಳಲ್ಲಿ ಕಾಣಬಹುದು. 
       ಸ್ವಾಭಿಮಾನದ ಸಂಕೇತದಂತಿದ್ದ ಶಂಕರ್ ನಾಗ್ ಕನ್ನಡ ಚಿತ್ರಗಳ ಧ್ವನಿ ಗ್ರಹಣ ಹಾಗೂ ಸಂಕಲನಕ್ಕಾಗಿ ತಮಿಳುನಾಡಿಗೆ ಹೋಗಬೇಕಾದಂತಹ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಕೇತ್ ಸ್ಟುಡಿಯೋ ಸ್ಥಾಪಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಸರೆಯಾದವರು ಶಂಕರ್ ನಾಗ್. ಅವತ್ತಿನ ದಿನಗಳಲ್ಲೇ ನಂದಿ ಬೆಟ್ಟಕ್ಕೆ ರೋಪ್ ವೇ, ನಗರದಲ್ಲಿ ಮೆಟ್ರೋ ರೈಲು ಯೋಜನೆ, ಬಡವರಿಗೆ ಕಡಿಮೆ ಬೆಲೆಯಲ್ಲಿ ನಿರ್ಮಿಸಿಬಹುದಾದಂತಹ ಮನೆಗಳನ್ನು ಹಾಲೆಂಡ್ ದೇಶದ ಮಾದರಿಯಲ್ಲಿ ನಿರ್ಮಿಸುವ ಪ್ರಸ್ತಾವ ಮುಂದಿರಿಸಿದ್ದು ಹಾಗು ದೇಶದಲ್ಲಿ ರೆಸಾರ್ಟ್ ಮಾದರಿ ಕಂಟ್ರಿ ಕ್ಲಬ್ ಸ್ತಾಪಿಸಿ ಅಲ್ಲಿ ನಿರಂತರ ರಂಗಭೂಮಿಗೆ ಉತ್ತೇಜನ ನೀಡುವ ಮಹತ್ವದ ಸಂಕಲ್ಪ ಮಾಡಿ ಶ್ರಮಿಸಿದ್ದು ಇದೇ ಶಂಕರ್ ನಾಗ್. 
        ಚಿತ್ರರಂಗದಲ್ಲಿರುವ ತೆರೆಯ ಹಿಂದಿನ ಮತ್ತು ಮೇಲಿನ ಸಾವಿರಾರು ಮಂದಿ ಇವತ್ತಿಗೂ ಶಂಕರ್ ನಾಗ್ ರನ್ನು ನೆನಪಿಸಿಕೊಂಡು ಕಣ್ಣೀರಾಗುತ್ತಾರೆಂದರೆ ಅದಕ್ಕೆ ಶಂಕರ್ ನಾಗ್ ರ ಆಲೋಚನ ಪರಿ ಹಾಗೂ ಆತನ ಕನಸುಗಳ ಮೂಟೆ, ಪ್ರೀತಿ ವಾತ್ಸಲ್ಯ, ಪ್ರೋತ್ಸಾಹ ಕಾರಣ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ತಾನು ಕಂಡ ಕನಸುಗಳ ಸಾಕಾರಕ್ಕೆ ಇನ್ನಿಲ್ಲದ ಶ್ರಮ ಹಾಕುತ್ತಿದ್ದ ಶಂಕರ್ ನಾಗ್ ನಿದ್ರಿಸುತ್ತಿದುದು ತುಂಬಾ ಕಡಿಮೆ. ಅಂದರೆ ಸತ್ತ ಮೇಲೆ ದೀರ್ಘ ನಿದ್ದೆಗೆ ಅವಕಾಶವಿದೆ ಹಾಗಿರುವಾಗ ಬದುಕಿರುವಾಗ ದೀರ್ಘ ನಿದ್ರೆ ಮಾಡಿ ಸಮಯ ಹಾಳು ಮಾಡಬಾರದು ಎಂಬ ನಿಟ್ಟಿನಲ್ಲಿ ಶ್ರಮವನ್ನು ಧಾರೆಯೆರೆಯುತ್ತಿದ್ದ  ಶಂಕರ್ ನಾಗ್ ಯಾವತ್ತಿಗೂ ಜನಮಾನಸದಲ್ಲಿ ಅಜರಾಮರರೇ ಆಗಿದ್ದಾರೆ. ಒಂದು ಉತ್ತಮ ಅಭಿರುಚಿಯನ್ನ, ಅನುಭಾವವನ್ನ ನಮಗೆ ಉಳಿಸಿಹೋಗಿರುವ ಶಂಕರ್ ನಾಗ್ ಸದಾಕಾಲ ನೆನಪಿಗೆ ಅರ್ಹರೇ ಆಗಿದ್ದಾರೆ, ದೈಹಿಕಾವಾಗಿ ಇಲ್ಲದಿದ್ದರೂ ತಮ್ಮ ಕೆಲಸದ ಮೂಲಕ ನಮ್ಮೊಂದಿಗೆ ಇರುವ ಶಂಕರ್ ಹೆಸರನ್ನು 'ನಮ್ಮ ಮೆಟ್ರೋ'ಗೆ ಇಟ್ಟರೆ ಅದು ಸಾರ್ಥಕವಾದೀತು. ಸರ್ಕಾರ ದಿಸೆಯಲ್ಲಿ ಕ್ರಮ ವಹಿಸಬೇಕು, ಸಮಸ್ತ ಅಭಿಮಾನಿಗಳು ಮತ್ತು ಚಿತ್ರರಂಗದ ಒತ್ತಾಸೆ ಈ ನಿಟ್ಟಿನಲ್ಲಿ ಹೊರಹೊಮ್ಮಿದರೆ ಇದು ಸಾಧ್ಯವಾದೀತೇನೋ?

Sunday, October 16, 2011

'ಜ್ಞಾನ'ಪೀಠಕ್ಕೆ ಅಸಹನೆ ಯಾಕೆ?


ಮೊನ್ನೆ ಜಾನಪದ ವಿದ್ವಾಂಸ,ನಾಟಕಕಾರ, ಸಾಹಿತಿ,ನಿರ್ದೇಶಕ ಚಂದ್ರಶೇಖರ ಕಂಬಾರರಿಗೆ 8ನೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ಸಂಧರ್ಭ..'ಯೋಗ್ಯತೆ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿ ಬರುತ್ತಿದೆ, ಯೋಗ್ಯರು ಭಾಳಾ ಮಂದಿ ಅದಾರೆ ' ಎಂದು ಪ್ರತಿಕ್ರಿಯಿಸಿದ್ದು  ಪಾಟೀಲ ಪುಟ್ಟಪ್ಪ. "ಪ್ರಶಸ್ತಿ ಬಂದಾಗ ಪರ ವಿರೋಧ ಹೇಳಿಕೆ ನೀಡೋದು ಇರ್ತಾವಾ, ಅದು ಅವರವರ ಅಭಿಪ್ರಾಯ. ನಾನು ಅವರ ಹೇಳಿಕೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ" ಎಂದು  ಡಾ. ಚಂದ್ರಶೇಖರ ಕಂಬಾರರು ಪ್ರತಿಕ್ರಿಯಿಸಿದ್ದರು. ನಂತರ ಪಾಟೀಲ ಪುಟ್ಟಪ್ಪನವರ ಧಾಟಿಯಲ್ಲೇ ಬೈರಪ್ಪನವರನ್ನು ಬೆಂಬಲಿಸುವ ಅದರಲ್ಲೂ ಜಾತಿಯ ಹಿನ್ನೆಲೆಯಲ್ಲಿ ಕಂಬಾರರ ಶ್ರೇಷ್ಠತೆಯನ್ನು ಪ್ರಶ್ನಿಸಲು ನಿಂತದ್ದು ಒಂದು ಸಮೂಹ! ಇದನ್ನು ವಿರೋಧಿಸುವ ಭರದಲ್ಲಿ ಎಸ್ ಎಲ್ ಬೈರಪ್ಪನವರನ್ನು ಸಾರ್ವತ್ರಿಕವಾಗಿ ತೆಗಳಿದ್ದಲ್ಲದೇ ಅವರಿಗೆ ಜ್ಞಾನಪೀಠ ಸಿಗುವುದೇ ಆದರೆ ಮರಣೋತ್ತರವಾಗಿ ಸಿಗಲಿ  ಎಂದು ನಿಡುಮಾಮಿಡಿ ಸ್ವಾಮೀಜಿ ಹಾಗೂ ಅಗ್ನಿ ಶ್ರೀಧರ್ ಇತರರು ಜರಿದದ್ದು ಕನ್ನಡ ಸಾರಸ್ವತ ಲೋಕದಲ್ಲಿ ಒಳ್ಳೆಯ ಬೆಳವಣಿಗೆಯೇನಲ್ಲ. 
        8ನೇ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾರತೀಯ ಭಾಷೆಗಳ ಸಾಹಿತ್ಯ ವಲಯದಲ್ಲಿ ಉನ್ನತ ಸ್ಥಾನಕ್ಕೇರಿರುವ ಕನ್ನಡ ಭಾಷೆಯ ಶ್ರೇಷ್ಠತೆಗೆ ಸಮಸ್ತ ಕನ್ನಡಿಗರೂ ಸಂಭ್ರಮ ಪಡುವ ಕಾಲವಿದು. ಆದರೆ ಇದೇನಿದು? ಅತ್ಯುನ್ನತ ಪುರಸ್ಕಾರ ಲಭಿಸಿದಾಗ ಅದನ್ನು ಜಾತಿಯ ಹಿನ್ನೆಲೆಯಲ್ಲಿ, "ಲಾಬಿ" ಮಾಡಿ ಪಡೆದಿದ್ದಾರೆಂಬ ಅರ್ಥವಿಲ್ಲದ ವ್ಯಾಖ್ಯಾನ ಮಾಡುತ್ತಾ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತಾ ಹಂಗಿಸುವ ಪರಂಪರೆ? ನಾಚಿಕೆಯಾಗ ಬೇಕು ಸದರಿ ಬುದ್ದಿಜೀವಿಗಳಿಗೆ ಮತ್ತು ತಲೆ ಬುಡ ತಿಳಿಯದೇ ಯಾವುದಾದರೊಂದು ಕಾರಣಕ್ಕೆ ಎರಡೂ ಪಕ್ಷಗಳನ್ನು ಬೆಂಬಲಿಸುವ ಮೂರ್ಖರಿಗೆ! ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಶ್ರೀಮಂತವಾದದ್ದು ಇಲ್ಲಿ ಇನ್ನೂ ಹಲವಾರು ಮಂದಿ ಜ್ಞಾನಪೀಠಿಗಳಿದ್ದಾರೆ, ಪ್ರಶಸ್ತಿ ಬಾರದ ಮಾತ್ರಕ್ಕೆ ಅವರೆಲ್ಲ ತೃಣಕ್ಕೆ ಸಮಾನರೆಂದು ಯಾಕಾದರೂ ಭಾವಿಸಬೇಕು. ಕೆಲವು ಪ್ರಶಸ್ತಿಗಳಿಂದ ಯಾರೂ ದೊಡ್ಡವರಾಗುವುದಿಲ್ಲ, ಆದರೆ ಕೆಲವೊಮ್ಮೆ ಪುರಸ್ಕೃತರಾಗುವವರಿಂದ ಪ್ರಶಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕುಬಿಡುತ್ತದೆ. ಈಗ ಜ್ಞಾನ ಪೀಠ ಪಡೆದ 8ಮಂದಿ ಜ್ಞಾನಪೀಠಿಗಳು ಅದ್ವಿತೀಯರೇ ಆಗಿದ್ದಾರೆ. ಆದರೆ ವ್ಯವಸ್ಥೆಯಲ್ಲಿ ದಿಕ್ಕುತಪ್ಪಿದ ಆಲೋಚನೆಗಳು ವಿನಾಕಾರಣ ಅಪಪ್ರಚಾರಕ್ಕೆ ಮುಂದಾಗಿ ಬಿಡುತ್ತವೆ ಇದು ಸಾರಸ್ವತ ಲೋಕಕ್ಕೆ ಅಪಾಯಕಾರಿ. 
       ಜ್ಞಾನಪೀಠ ಪ್ರಶಸ್ತಿ ಕುರಿತು ಚೂರು ಮಾಹಿತಿ ಹೇಳಿ ನಂತರ ಚರ್ಚೆಗೆ ಬರೋಣ, ಜ್ಞಾನಪೀಠ ಪ್ರಶಸ್ತಿ ಯಾವುದೇ ಸರ್ಕಾರ ಕೊಡುವ ಪ್ರಶಸ್ತಿಯಲ್ಲ! ಜ್ಞಾನಪೀಠ ಟ್ರಸ್ಟ್ ಇದನ್ನು ಕೊಡಮಾಡುತ್ತದೆ. ಜ್ಞಾನಪೀಠ ಟ್ರಸ್ಟ್ ನ ನಿರ್ವಹಣೆ ಜೈನ ಕುಟುಂಬ ಮಾಡುತ್ತದೆ, ಜ್ಞಾಪೀಠ ಟ್ರಸ್ಟ್ ನ ಒಡೆತನ ಟೈಂಸ್ ಆಫ್ ಇಂಡಿಯಾ ಗ್ರೂಪ್ ಗೆ ಸೇರಿದೆ. ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ದೇಶದ ಅತ್ಯುತ್ತನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರುಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
         ಅಂದ ಹಾಗೆ ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿಯನ್ನು ತಂದು ಕೊಟ್ಟದ್ದು ಕುವೆಂಪು 1967ರಲ್ಲಿ. ಆ ದಿನಗಳಲ್ಲಿ ಇನ್ನೂ ಭಾರತೀಯ ಸಮಗ್ರ ಸಾಹಿತ್ಯಕ್ಕೆ ಕೊಡುಗೆ ನೀಡಿದವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲು ಆರಂಭಿಸಿರಲಿಲ್ಲ. ಆ ದಿನಗಳಲ್ಲಿ ತಮ್ಮ ಸಾಹಿತ್ಯ ಕೃತಿ ಶ್ರೀ ರಾಮಾಯಣ ದರ್ಶನಂ ಗೆ ಜ್ಞಾನಪೀಠ ಪ್ರಶಸ್ತಿಯನ್ನು ಕುವೆಂಪು ಪಡೆದಾಗ ಬೆಚ್ಚಿ ಬಿದ್ದದ್ದು ಪುರೋಹಿತ ಶಾಹಿ ವರ್ಗ.. ಒಬ್ಬ ಶೂದ್ರ ಜ್ಞಾನಪೀಠಕ್ಕೆ ಅರ್ಹವಾಗುವ ರಾಮಾಯಣ ದರ್ಶನಂ ಬರೆದನೋ ಎನ್ನುವ ಕಿಡಿಗೇಡಿ ಮಾತನ್ನು ಆಡಿ ಬಿಟ್ಟಿತ್ತು. ಅಂದು ಕುವೆಂಪು ತುಂಬ ನೊಂದು ಬಿಟ್ಟಿದ್ದರು. ಜ್ಞಾನಪೀಠ ಪ್ರಶಸ್ತಿ ಆರಂಭವಾದ ಕೆಲವೇ ವರ್ಷಗಳಲ್ಲಿ ಮೊಟ್ಟ ಮೊದಲ ಭಾರಿಗೆ  4ನೇ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟ ಹೆಮ್ಮೆ ಕುವೆಂಪು ರವರದ್ದಾಗಿತ್ತು. ಆದರೆ ಜಾತೀಯ ಅಸಹನೇ ಮತ್ತು ಕೀಳು ಮನೋಭಾವ,  ಸಂಕುಚಿತ ಮನೋಭಾವ ಜ್ಞಾನಪೀಠದ ಸಂಭ್ರಮವನ್ನು ಅಂದು ಹೊಸಕಿ ಹಾಕಿತ್ತು. ಇವತ್ತು ಅದೇ ಮನಸ್ಸುಗಳು ಕಂಬಾರರನ್ನು ಜಾತಿಯ ಹಿನ್ನೆಲೆಯಲ್ಲಿ ಅಣಕಿಸಲು ಪ್ರಯತ್ನಿಸುತ್ತಿರುವುದು ವ್ಯವಸ್ಥೆಯ ದುರಂತವೇ ಸರಿ! 
       ಚಂದ್ರ ಶೇಖರ ಕಂಬಾರರಿಗೂ ಇದು ಹೊಸತೇನಲ್ಲ.  ಕಂಬಾರರು ಯುವಕರಾಗಿದ್ದಾಗ ದಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ,ಖ್ಯಾತ ಕವಿಗಳೊಬ್ಬರು ಅಧ್ಯಕ್ಷತೆ ವಹಿಸಿದ್ದರು,ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ,ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು,"ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು,ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ.ಅವರ ಅಚಲ ನಿರ್ಧಾರ ಹಾಗೂ ಪ್ರಯತ್ನಗಳು ಇವತ್ತು ಅವರ ಸಾಧನೆಯನ್ನು ಜ್ಞಾನಪೀಠದ ಅಂಚಿಗೆ ತಂದು ನಿಲ್ಲಿಸಿದೆ. ಚಂದ್ರ ಶೇಖರ ಕಂಬಾರ ಕನ್ನಡದ ವರಕವಿ ದ.ರಾ ಬೇಂದ್ರೆಯವರ ನಂತರ ಕನ್ನಡ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡು ಸಾಹಿತ್ಯ ರಚಿಸಿದ ಕೀರ್ತಿ ಕಂಬಾರರಿಗೆ ಸಲ್ಲುತ್ತದೆ. ಮೊಟ್ಟ ಮೊದಲ ಭಾರಿಗೆ ಕನ್ನಡದಲ್ಲಿ ಜಾನಪದ ವಿಶ್ವಕೋಶವನ್ನು ರಚಿಸಿದ ಕಂಬಾರ ಆ ಮೂಲಕ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನವನ್ನು ಕಲ್ಪಿಸಿದ್ದಾರೆ. ಜಾನಪದದ ಜೊತೆಗೆ ವೈಚಾರಿಕತೆಯನ್ನು ಬೆಸೆಯುವ ಕಂಬಾರರ ಧಾಟಿ ಅವರಿಗೆ ಸರಿಸಾಟಿಯಾಗುವಂತಿದೆ. ಕಂಬಾರರು ಒಟ್ಟು ೨೨ ನಾಟಕಗಳು, ೮ ಕವನ ಸಂಕಲನಗಳು ಮತ್ತು ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ ಚಕೋರಿ ಎಂಬ ಮಹಾಕಾವ್ಯ, ಜಾನಪದ, ರಂಗಭೂಮಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ೧೪ ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ.ಏಲ್ಲಾ ಸೇರಿ ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.ಇವರ ಅನೇಕ ಕೃತಿಗಳು ಹಿಂದಿ, ಇಂಗ್ಲೀಷ್ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.‘ಬೆಂಬತ್ತಿದ ಕಣ್ಣು’(೧೯೬೧) ಮತ್ತು ‘ನಾರ್ಸಿಸಸ್‌’(೧೯೬೯) ಹೆಸರು ಮಾಡಿದ ಇವರ ನಾಟಕಗಳು.ಪದ್ಮಶ್ರೀ, ನಾಡೋಜ, ಕಬೀರ್ ಸಮ್ಮಾನ್ ಹೀಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಕಂಬಾರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು. ಅದೇ ರೀತಿ ಸಂತೆ ಶಿವರ ಲಿಂಗಣ್ಣಯ್ಯ ಬೈರಪ್ಪ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ರೀತಿಯಲ್ಲಿ ತಮ್ಮ ಅಸ್ತ್ವಿತ್ವ ದಾಖಲಿಸಿದವರು. ಆಧುನಿಕ ದಿನಗಳಲ್ಲಿ ಇವತ್ತಿಗೂ ಹೆಚ್ಚು ಓದಿಸಿಕೊಳ್ಳುವ ನಂ.1 ಸ್ಥಾನ ಅತಿಕ್ರಮಿಸಿದ ಹೆಗ್ಗಳಿಕೆ ಬೈರಪ್ಪನವರಿಗಿದೆ. 2010ರ ಸರಸ್ವತಿ ಸಮ್ಮಾನ್,ಪಂಪ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರ ಸಾಹಿತ್ಯ ಉರ್ದು,ಸಂಸ್ಕೃತ,ಇಂಗ್ಲೀಷ್, ಮರಾಠಿ,ಗುಜರಾತಿ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಿಗೆ ತರ್ಜುಮೆ ಗೊಂಡಿದೆ. ಹಿಂದಿ ಭಾಷೆಗೆ ಅನುವಾದಗೊಂಡ ಇವರ ಸಾಹಿತ್ಯ ಅಲ್ಲೂ ಇವರನ್ನು ಅತ್ಯುತ್ತಮ ಬರಹಗಾರರ ಸಾಲಿನಲ್ಲಿ ನಿಲ್ಲಿಸಿದೆ. 24ಕಾದಂಬರಿಗಳು, ಒಂದು ಆತ್ಮ ಕಥನ, 4ತತ್ವಶಾಸ್ತ್ರ ಸಾಹಿತ್ಯವನ್ನು ಬರೆದಿರುವ ಬೈರಪ್ಪ ನವರ "ಆವರಣ"ಮತ್ತು "ಕವಲು" ಕಾದಂಬರಿಗಳು ಬಿಡುಗಡೆಗೆ ಮುನ್ನವೇ ಸಂಚಲನ ಸೃಷ್ಟಿಸಿದವು. ಬಹುಶ: ಕನ್ನಡದ ಬೇರಾವ ಕೃತಿಗಳಿಗೆ ಮತ್ತು ಲೇಖಕರಿಗೆ ಈ ಮಟ್ಟದ ಪ್ರೋತ್ಸಾಹ ದೊರೆತಿರಲಾರದು.   ಸಾಹಿತ್ಯ ಕೃಷಿಗೂ ಮುನ್ನ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೂ ದುಮುಕಿ ದೇಶ ಪ್ರೇಮ ಮೆರೆದ ಅಸೀಮ ವ್ಯಕ್ತಿತ್ವ ಬೈರಪ್ಪನವರದ್ದು.   ಇದು ಅಸಲು ಸಂಗತಿ ಹೀಗಿರುವಾಗ ಕವಿಗಳನ್ನು ಸಾಹಿತಿಗಳನ್ನು ಏಕ ದೃಷ್ಠಿಕೋನದಿಂದ ಅಳೆಯುವುದು ಸರಿಯೇ? 
           ಬೈರಪ್ಪ ಮತ್ತು ಕಂಬಾರ ಅವರವರ ನೆಲೆಗಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಆದರೆ ಅವರ ವೈಯುಕ್ತಿಕ ವಿಚಾರಗಳು, ಜಾತೀಯ ಹಿನ್ನೆಲೆ ಒಂದು ಸಂಭ್ರಮವನ್ನು ಹಾಳು ಮಾಡಬಾರದಲ್ಲವೇ? ಪ್ರಶಸ್ತಿ ದಕ್ಕಿದ ಸಂಧರ್ಭದಲ್ಲಿ ಇವೆಲ್ಲಾ ಬೇಕಾ ಹೇಳಿ? ಇದುವರೆಗೆ ಪ್ರಶಸ್ತಿ ದಕ್ಕಿಸಿಕೊಂಡವರಲ್ಲಿ ಇಂತಹ ಅಸಹಜವಾದ ಮುಜುಗುರಕ್ಕೆ ಒಳಗಾಗಿದ್ದು ಕುವೆಂಪು ಮತ್ತು ಕಂಬಾರ ಮಾತ್ರವಲ್ಲ ಯು ಆರ್ ಅನಂತ ಮೂರ್ತಿ ಹಾಗೂ ಗಿರೀಶ್ ಕಾರ್ನಾಡರಿಗೆ ಪ್ರಶಸ್ತಿ ಬಂದಾಗಲೂ ಹೊಟ್ಟೆಕಿಚ್ಚಿನ ಒಂದು ವರ್ಗ "ಲಾಬಿ" ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡವರೆಂಬ ಹಣೆ ಪಟ್ಟಿ ಕಟ್ಟಿತ್ತು. ಕನ್ನಡಕ್ಕೆ ಇನ್ನೂ ಹೆಚ್ಚಿನ ಜ್ಞಾನಪೀಠಗಳು ಬರಬೇಕಿದೆ ಸಧ್ಯ ಜ್ಞಾನಪೀಠ ಪಡೆದಿರುವವರಲ್ಲಿ 2ನೇ ಸ್ಥಾನದಲ್ಲಿರುವ ಹಿಂದಿಗಿಂತಲೂ  ಕನ್ನಡ 2ಪ್ರಶಸ್ತಿಗಳಿಂದ ಮೇಲಿದೆ, ನಾವಿನ್ನೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ದಕ್ಕಿಸಿಕೊಳ್ಳಲಾಗಿಲ್ಲ, ಇಂತಹ ಸಂಧರ್ಭದಲ್ಲಾದರೂ ಒಗ್ಗೂಡಿ ಶಾಸ್ತ್ರೀಯ ಸ್ಥಾನಮಾನಕ್ಕೆ ಹಕ್ಕೊತ್ತಾಯ ಮಂಡಿಸುವುದನ್ನು ಬಿಟ್ಟು ಇದೆಂಥದು ಕೆಸರೆರಚಾಟ? ಇನ್ನಾದರೂ ಮೂರ್ಖರು ಬುದ್ದಿ ಕಲಿಯಬಾರದೇ?

Sunday, October 9, 2011

ಅಣ್ಣಾಹಜಾರೆ ಮತ್ತು ತಂಡಕ್ಕೆ ಇದೆಲ್ಲಾ ಬೇಕಿತ್ತಾ?

ಒಂದು ಕನಸು, ಒಂದು ನಿರೀಕ್ಷೆ, ಒಂದು ಕೆಚ್ಚು, ಒಂದು ನಂಬಿಕೆ ಹೀಗೆ ಎಲ್ಲವನ್ನೂ ಹುಸಿಗೊಳಿಸುವ ಮತ್ತು ಮನಸ್ಸಿಗೆ ಆಘಾತ ವಾಗುವಂತಹ ವಿದ್ಯಮಾನಗಳು ಈಗ ಘಟಿಸುತ್ತಿವೆ. ಗಾಂಧೀ ಮಾರ್ಗದಲ್ಲಿ ಆರಂಭಗೊಂಡ ಚಳುವಳಿಯೊಂದು ಇಷ್ಟು ಬೇಗ ದಿಕ್ಕು ತಪ್ಪ ಬಹುದೆಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ ಆದಾಗ್ಯೂ ಜನಲೋಕಪಾಲ ಮಸೂದೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿದ್ದ ಚಳುವಳಿ ಪೀಕ್ ಪಾಯಿಂಟ್ ತಲುಪಿದಾಗ, ಚಳುವಳಿಯ ಅಂತಿಮ ಸ್ವರೂಪ ಏನು? ಅಣ್ಣಾ ಮತ್ತು ತಂಡ ಚಳುವಳಿಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲವನ್ನ ಹೇಗೆ ಕಾಯ್ದು ಕೊಳ್ಳುತ್ತದೆ? ಎಂಬ ಪ್ರಶ್ನೆಯನ್ನು ಕೆಲವು ಬುದ್ದಿ ಜೀವಿಗಳು ಎತ್ತಿದ್ದರು. ಹಾಗೆಯೇ ಚಳುವಳಿಯೊಂದು ದಿಕ್ಕು ತಪ್ಪಿ ಆಶಯಗಳು ನೆನೆಗುದಿಗೆ ಬೀಳುವ ಬಗ್ಗೆಯೂ ಆತಂಕವಿತ್ತು. ಈಗ ಅಣ್ಣಾ ತಂಡದ ಕ್ರೇಜಿವಾಲ್ ಮತ್ತು ಕಿರಣ್ ಬೇಡಿ ಸಾರ್ವಜನಿಕ ಆತಂಕವನ್ನು ನಿಜವಾಗಿಸುತ್ತಿದ್ದಾರೆ. ಇದರ ಹಿಂದೆ ಜನಸಾಮಾನ್ಯರಿಗೆ ತಿಳಿಯದ ಹುನ್ನಾರವೂ ಸಹಾ ಇರಬಹುದೆಂಬ ಅನುಮಾನ ವ್ಯಕ್ತವಾಗಲಾರಂಬಿಸಿದೆ. ನಮ್ಮ ದೇಶದ ಮಟ್ಟಿಗೆ ಇದು ಭ್ರಷ್ಟಾಚಾರದ ವಿರುದ್ದದ ಚಳುವಳಿ ಇರಬಹುದು ಇತರೆ ಚಳುವಳಿಗಳಿರಬಹುದು , ಎಲ್ಲವುಗಳ ಹಿಂದೆಯೂ ಅಪಾಯಕಾರಿ ಹಾಗೂ ಸರ್ವ ಸಮ್ಮತವಲ್ಲದ ಗುರಿಗಳ ಈಡೇರಿಕೆಗೆ ಕೆಲವು ಚಳುವಳಿಗಳು ಬಳಕೆಯಾಗುತ್ತಿರುವುದು ಅತ್ಯಂತ ವಿಷಾಧನೀಯಕರ ಸಂಗತಿ.
           ದೇಶದ 1,210,193,422ಮಿಲಿಯನ್ ಜನಸಂಖ್ಯೆಯ ಬಹುಪಾಲು ಜನರ ಆಶೋತ್ತರದ ಪ್ರತೀಕವಾಗಿದ್ದ ಅಣ್ಣಾ ತಂಡದ ನಿಲುವು ಈಗ ರಾಜಕೀಯ ಶಕ್ತಿಯಾಗಿ ಬದಲಾಗುವ ಸೂಚನೆ ನೀಡಿದೆ. ರಾಜಕೀಯ ಶಕ್ತಿ ಯಾವುದೇ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂಬುದು ಒಪ್ಪ ತಕ್ಕ ಮಾತೆ ಆಗಿದೆ. ಆದರೆ ರಾಜಕೀಯದ ನೆವದಲ್ಲಿ,ಸದುದ್ದೇಶಕ್ಕೆ ಒಗ್ಗೂಡಿಸಿದ ಶಕ್ತಿಯನ್ನು, ಜನರ ಭಾವನೆಗಳನ್ನು ಒಮ್ಮೆಲೆ ತೂರಿ ಬಿಡುವುದನ್ನು ಅರಗಿಸಿಕೊಳ್ಳಲಾಗದು ಹಾಗೂ ಒಪ್ಪಿಕೊಳ್ಳಲಾಗದು. ಅಣ್ಣಾ ತಂಡ ಜನ್ ಲೋಕಪಾಲ ಮಸೂದೆಯನ್ನು ಒಪ್ಪದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎಂಬ ಘೋಷಣೆಯನ್ನು ಹೊರಡಿಸಿದೆ, ಇದಕ್ಕಾಗಿ ಕಿರಣ್ ಬೇಡಿ ಹಾಗೂ ಅರವಿಂದ ಕ್ರೇಜೀವಾಲ್ ಬೇರೆ ಬೇರೆ ರಾಜ್ಯಗಳಿಂದ ಆಂಧೋಲನ ಆರಂಭಿಸಿದ್ದಾರೆ. ಸದರಿ ಆಂಧೋಲನದಲ್ಲಿ ಕಾಂಗ್ರೆಸ್ ತಿರಸ್ಕರಿಸಿ ಎಂದು ಅಣ್ಣಾ ಭಾಷಣ ಮಾಡಿದ್ದಾರೆನ್ನಲಾದ ಧ್ವನಿ ಮುದ್ರಿಕೆಯನ್ನು ಬಳಸಿಕೊಳ್ಳಲಾಗುತ್ತ್ದೆದೆಯಂತೆ! ಕಾಂಗ್ರೆಸ್ ತಿರಸ್ಕರಿಸಿ ಎಂದರೆ ಯಾವುದನ್ನು ಪುರಸ್ಕರಿಸಬೇಕು? ಉತ್ತರ ಬಹಳ ಸರಳ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕಾ? ಚುನಾವಣೆಗಳು ಹತ್ತಿರವಿರುವ ಸಂಧರ್ಭದಲ್ಲೇ ಅತ್ಯಂತ ಕೆಟ್ಟ ಆಡಳಿತ ನೀಡಿ ಕೋಮುವಾದಿ ಭಾವನೆಗಳನ್ನು ಪುರಸ್ಕರಿಸುವ ಮೂಲಕ  ಹೀನ ಚಾರಿತ್ರ್ಯ ಹೊಂದಿರುವ ಗುಜರಾತ್ ನ ಮುಖ್ಯ ಮಂತ್ರಿ ನರೇಂದ್ರ ಮೋದಿ, ತನ್ನ ಹೆಸರು ಪ್ರಧಾನಿ ಪಟ್ಟಕ್ಕೆ ಕೇಳಿ ಬರುತ್ತಿದ್ದಂತೆಯೇ  ಉಪವಾಸದ ಸೋಗಿನಲ್ಲಿ ತಾನೊಬ್ಬ ಸತ್ಪುರುಷನೆಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಈ  ಮೂಲಕ ಬಿಜೆಪಿ ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ಪ್ರಸ್ತಾಪಿಸುತ್ತಾ ಚುನಾವಣೆಗಳನ್ನು ಎದುರು ನೋಡುತ್ತಿದೆ, ಹೀಗಿರುವಾಗ ಅಣ್ಣಾ ಹಜಾರೆಯಂತಹವರೇ ಕಾಂಗ್ರೆಸ್ ತಿರಸ್ಕರಿಸಿ ಎಂದು ಊರೂರು ತಿರುಗಿದರೆ ಇವರ ಆಂಧೋಲನವನ್ನು ಬೆಂಬಲಿಸಿದವರ ಕಥೆ ಏನಾಗಬೇಕು? 
            ಅಸಲಿಗೆ ಜನ ಲೋಕಪಾಲ ಮಸೂದೆಯ ಕರಡನ್ನು ತಯಾರಿಸಿದ್ದು ಶಾಂತಿಭೂಷಣ್ ಆದರೂ ಸಹಾ ಅದನ್ನು ಅಗತ್ಯಕ್ಕೆ ತಕ್ಕಂತೆ ತಿದ್ದಿ ಅಣ್ಣಾ ಹಜಾರೆಯನ್ನು ಹೈಜಾಕ್ ಮಾಡಿದವರು ಅರವಿಂದ ಕ್ರೇಜಿವಾಲ್ ಮತ್ತು ಕಿರಣ್ ಬೇಡಿ, ಅತ್ಯಂತ ನಾಟಕೀಯವಾಗಿ ನಡೆದು ಕೊಳ್ಳುವ ಮೂಲಕ ಸಾರ್ವಜನಿಕ ಅವಗಣನೆಗೂ ತುತ್ತಾಗಿದ್ದರು, ನಂತರದ ಬೆಳವಣಿಗೆಗಳಲ್ಲಿ ತಾವು ಸಂಸತ್ ಗೆ ಸ್ಪರ್ದಿಸುವ ಇಂಗಿತವನ್ನು ವ್ಯಕ್ತಪಡಿಸುವ ಮೂಲಕ ಈಗ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನ ಬದಿಗಿರಿಸಿ ಕಾಂಗ್ರೆಸ್ ತಿರಸ್ಕರಿಸಿ ಆಂಧೋಲನವನ್ನು ಮುನ್ನೆಡೆಸಲು ನಿಂತಿದ್ದಾರೆ ಅಂದರೆ ಇವರ ಹಿಂದಿರುವ ಶಕ್ತಿಗಳು ಯಾವುದು ಎಂಬುದು ಯಾರಿಗೂ ತಿಳಿಯದ ಸಂಗತಿಯಲ್ಲ ಅಲ್ಲವೇ? ಅಣ್ಣಾ ಟೀಂ ಈಗ ಒಟ್ಟಾಗಿ ಉಳಿದಿಲ್ಲ ಎಂಬ ಸಂಗತಿಯೂ ಬೇಸರದ ಸಂಗತಿಯೇ ಆಗಿದೆ, ಸ್ಪಷ್ಟ ನಿಲುವಿಲ್ಲದೆ, ಒಗ್ಗೂಡಿದ ಶಕ್ತಿಯನ್ನು ವೈಯುಕ್ತಿಕ ಉದ್ದೇಶಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ? ಅಣ್ಣಾ ಮತ್ತು ಅವರ ತಂಡ ರಾಜಕೀಯ ಶಕ್ತಿಯಾಗಿ ಬದಲಾಗುವುದಾದರೆ ಜನ ಲೋಕಪಾಲ ಮಸೂದೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಲು ಒಮ್ಮತದ ನಿರ್ಣಯ ಕೈಗೊಂಡ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ದವೂ ಸಮರ ಸಾರಬೇಕಲ್ಲವೇ? ಆದರೆ ವಾಸ್ತವದಲ್ಲಿ ಯಾಕೆ ಅಂತಹ ನಿಲುವು ವ್ಯಕ್ತವಾಗಿಲ್ಲ. ಅಣ್ಣಾ ಹಜಾರೆಯ ಉಪವಾಸದ ಅಂತಿಮ ದಿನಗಳಲ್ಲಿ ಪ್ರಧಾನಿ ಮತ್ತು ನ್ಯಾಯಾಂಗ ವ್ಯವಸ್ಥೆಗಿಂತ ಜನ ಲೋಕಪಾಲ ಸುಪ್ರೀಂ ಆಗುವುದು ಮತ್ತು ಆ ಮೂಲಕ ದೇಶದ ಸಂವಿಧಾನದ ಆಶಯಕ್ಕೆ ಪರ್ಯಾಯವನ್ನು ಸೃಷ್ಠಿಸುವ ಕ್ರಿಯೆಯನ್ನು ಪ್ರಮುಖ ವಿರೋಧ ಪಕ್ಷ ಬಿಜೆಪಿ ಯೂ ಸಹಾ ಒಪ್ಪಿಕೊಳ್ಳಲಿಲ್ಲ. ಅದರಂತೆ ಇತರೆ ರಾಜಕೀಯ ಪಕ್ಷಗಳು ಸಹಾ. ಹೀಗಿರುವಾಗ ಕೇವಲ ಕಾಂಗ್ರೆಸ್ ಒಂದನ್ನೇ ಯಾಕೆ ತಿರಸ್ಕರಿಸಬೇಕು? ಜನ ಲೋಕಪಾಲ ಮಸೂದೆ ತಿರಸ್ಕೃತವಾಗಿ ಪರಿಷ್ಕೃತ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ವಸಮ್ಮತ ನಿಲುವಿನೊಂದಿಗೆ ಒಪ್ಪಿಕೊಳ್ಳಲಾಗಿದೆ. ಇದನ್ನು ಅಣ್ಣಾ ಮತ್ತವರ ತಂಡವು ಒಪ್ಪಿದೆ ಹೀಗಿರುವಾಗ ಏಕಾಏಕಿ ಪಕ್ಷವೊಂದರ ವಿರುದ್ದ ಆಂಧೋಲನ ನಡೆಸುವುದನ್ನು ಏನೆನ್ನಬೇಕು ಹೇಳಿ? ಅಂದರೆ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಕಾಂಗ್ರೆಸ್ ವಿರೋಧಿ ಆಂಧೊಲನವನ್ನ ನಡೆಸಿದಲ್ಲಿ ಈ ಮೊದಲಿನ ಒಪ್ಪಂದದ ಕಥೆ ಏನಾಗುತ್ತೇ ಅನ್ನೋ ಪರಿಜ್ಞಾನವಿದ್ದರೂ ಲೋಕಪಾಲ ಮಸೂದೆ ಜಾರಿಯಾಗಬಾರದು ಎಂಬ ನಿಲುವನ್ನು ಅಣ್ಣಾ ತಂಡವೇ ತಳೆದಂತೆ ಆಗಲಿಲ್ಲವೇ? ಅಲ್ಲಿಗೆ ಕಳೆದ ನಾಲ್ಕು ದಶಕಗಳಿಂದ ನಡೆದುಕೊಂಡು ಬಂದ ಹೋರಾಟಕ್ಕೆ, ಗಾಂಧಿ ಮಾರ್ಗದ ಚಳುವಳಿಗೆ ಯಾವ ಮರ್ಯಾದೆ ಸಿಕ್ಕಂತಾಯಿತು? ಅಣ್ಣಾ ಹಜಾರೆಗೆ ಮತ್ತು ಅವರ ತಂಡಕ್ಕೆ ಇದೆಲ್ಲಾ ಬೇಕಿತ್ತಾ? 
          ಪ್ರಸಕ್ತ ದಿನಗಳಲ್ಲಿ ಚಳುವಳಿಗಳು ಮತ್ತು ಅದರ ಆಶಯಗಳು ಯಾಕೆ ಸಾಯುತ್ತಿವೆ ? ಎಂಬ ಪ್ರಶ್ನೆಗೆ ಅಣ್ಣಾಹಜಾರೆ ನಿಲುವು ಸದ್ಯದ ಪರಿಸ್ಥಿತಿಯಲ್ಲಿ ಉತ್ತರವಾಗ ಬಹುದೇನೋ. ಒಂದು ಪ್ರಾಮಾಣಿಕ ಚಳುವಳಿಯ ಹಿಂದೆ, ಅದನ್ನು ಬೆಂಬಲಿಸುವ ಮನಸ್ಸುಗಳ ಆಶಯವನ್ನು ದಿಕ್ಕುತಪ್ಪಿಸುವ ಪ್ರಕ್ರಿಯೆಗಳು ಯಾವ ಕಾರಣಕ್ಕೂ ನಡೆಯಬಾರದು. ಇದು ಅಭಿವೃದ್ದಿ ಶೀಲ ರಾಷ್ಟ್ರದ ಪ್ರಗತಿಗೂ ಕುಂಠಿತವಾಗುವುದಲ್ಲದೇ ದೇಶದಲ್ಲಿ ಅರಾಜಕತಗೆ ಸೃಷ್ಟಿಯಾಗುತ್ತದೆ ಅಲ್ಲವೇ?

Sunday, September 11, 2011

ದರ್ಶನ್ ಪ್ರಕರಣ;ನೈತಿಕ ಅಧ:ಪತನದ ಸಂಕೇತ!

ಅಪ್ಪ ಚಿತ್ರರಂಗದಲ್ಲಿ ವಿಲನ್ ಆದ್ರೆ ಮಗ ನಿಜ ಜೀವನದಲ್ಲಿ ವಿಲನ್ ! ಹೌದು ಕಳೆದ 2ದಿನಗಳಿಂದ ದೃಶ್ಯ ಮಾದ್ಯಮಗಳಲ್ಲಿ ಇದೇ ಸುದ್ದಿಯ ವೈಭವೀಕರಣ ನಡೆಯುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ನಟನೊಬ್ಬನ ಖಾಸಗಿ ಬದುಕಿನ ತಲ್ಲಣ ಬೀದಿಗೆ ಬಿದ್ದಿದೆ, ಚಿತ್ರರಂಗದ ಗಣ್ಯರಿರಲಿ, ಅಭಿಮಾನಿಗಳ ಸಮೂಹದ ಹೆಸರಿನಲ್ಲಿ ಬೊಬ್ಬೆ ಹಾಕುತ್ತಿರುವ ಕೆಲ ಮಂದಿ ಬೇಷರತ್ ಗೆ ಆಗಿ ದರ್ಶನ್ ಬೆಂಬಲಕ್ಕೆ ನಿಂತು ಬಿಟ್ಟಿದ್ದಾರೆ. ದರ್ಶನ್-ವಿಜಯಲಕ್ಷ್ಮಿಯವರ ಖಾಸಗಿ ಬದುಕಿನ ಒಳನೋಟಗಳೇನೆ ಇದ್ದರು ಅದು ಬೀದಿಗೆ ಬೀಳಬಾರದಿತ್ತು. ಇರಲಿ ಇಂತಹವರನ್ನು ಬೆಂಬಲಿಸುವ ಸಮೂಹ ಸನ್ನಿ ಮಾತ್ರ ಅತ್ಯಂತ ವಿಷಾಧನೀಯ ಸಂಗತಿ. ಸೆಲೆಬ್ರಿಟಿ ಗಳಾದವರನ್ನು ಹಿಂದೂ ಮುಂದೇ ನೋಡದೇ ಅಂದಾನುಕರಣೆ ಮಾಡುವುದು, ತೆರೆಯ ಮೇಲೆ ಇರುವ ಆತನ ಬದುಕನ್ನೇ ಆದರ್ಶವೆಂದು ಭ್ರಮಿಸುವುದು ನಮ್ಮ ಜನರ ಟಿಪಿಕಲ್ ಗುಣ. ಇಂತಹ ಸನ್ನಿವೇಶದಲ್ಲಿ ತಪ್ಪು ಸರಿಗಳ ಆಯ್ಕೆಗಿಂತ ಯಾವುದನ್ನು ಬೆಂಬಲಿಸ ಬೇಕು ಎಂಬುದನ್ನು ಸಹಾ ಜನರ ಅರಿಯುವುದು ಒಳಿತೇನೋ.

        ಒಬ್ಬ ವ್ಯಕ್ತಿ ಯಶಸ್ಸು ಸಾಧಿಸಿದಾಗ ಊರ ಮಂದಿಯೆಲ್ಲ ಆತನ ಹಿಂದೆ ಇರುತ್ತಾರಂತೆ, ಹಾಗೆಯೇ ಸೋತಾಗ ಆತನ ನೆರಳು ಸಹಾ ಆತನನ್ನು ಹಿಂಬಾಲಿಸದು ಎಂಬ ಮಾತಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಇವತ್ತು ದರ್ಶನ್ ಹಿಂದೆ  ಅಭಿಮಾನದ "ಪೊರ್ಕಿ" ದಂಡು ಇದೆ. ದರ್ಶನ್ ಸಾರ್ವಜನಿಕವಾಗಿ ಒಬ್ಬ ಸಭ್ಯ ನಟ, ಕಷ್ಟಪಟ್ಟು ಮೇಲೆ ಬಂದ ಯಶಸ್ವಿ ನಟ. ಇವತ್ತು ಚಿತ್ರರಂಗದಲ್ಲಿ ಮಿಂಚಲು ಹಿಂದಿನಂತೆ ಸಾಧನೆ-ಶ್ರಮ-ಚೆಲುವು ಈ ಮೂರೂ ಬೇಕಿಲ್ಲ.  ಜೇಬು ತುಂಬಾ ದುಡ್ಡು ಇದ್ದರೆ ಮದ್ಯ ವಯಸ್ಕನೂ ಇಲ್ಲಿ ನಾಯಕನಾಗಲೂ ಯಾವ ತಕರಾರೂ ಇಲ್ಲ ಆದರೆ ಪ್ರೇಕ್ಷಕ ಪ್ರಭು ಮಾತ್ರ ತನಗೆ ಇಷ್ಟ ಬಂದದ್ದನ್ನು ಆಯ್ಕೆ ಮಾಡಿಕೊಂಡು ಸರಿಯಾದ ಪಾಠ ಕಲಿಸುತ್ತಾನೆ.  ಇಂಥಹವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ ಈ ನಡುವೆ ಹಳಬರು ತಮ್ಮ  ಛಾರ್ಮನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ, ಈ ಪೈಕಿ ಪುನೀತ್ ರಾಜ್ ಕುಮಾರ್, ಸುದೀಪ್, ಶಿವರಾಜ್ ಕುಮಾರ್, ರವಿಚಂದ್ರನ್,ದರ್ಶನ್ ಮತ್ತು  ಪ್ರೇಮ್ ಮತ್ತಿತರರು ಇದ್ದಾರೆ. 
      
          ಚಿತ್ರರಂಗ ಬೆಳೆದಂತೆಲ್ಲ ತಾರೆಯರ ಸಂಭಾವನೆಯೂ ಏರುತ್ತಿದೆ, ಹೀಗೆ ಹಣ ಬಂದಾಗ ಅದನ್ನೆಲ್ಲ ಐಷಾರಾಮಿ ಜೀವನಕ್ಕೆ ವೆಚ್ಚ ಮಾಡಿಕೊಂಡು ತಮ್ಮದೇ ಸಿನಿಮಾ ತಯಾರಿಕಾ ಸಂಸ್ಥೆಯನ್ನು ಹುಟ್ಟುಹಾಕಿ ನಿರ್ದೇಶನಕ್ಕೆ ಇಳಿದು ಬಿಡುವವರೂ ಇದ್ದಾರೆ. ಹೀಗೆ ದುಡ್ಡು ಹೆಚ್ಚಿದಂತೆ ವೈಯುಕ್ತಿಕ ಮಟ್ಟದ ಈಗೋ ಸಹಾ ಬೆಳೆಯುತ್ತಿದೆ, ಪರಿಣಾಮ ನೈತಿಕ ಅಧ:ಪತನದಂತಹ ವಿಷಯಗಳು ಬೆಳಕಿಗೆ ಬರುತ್ತಿವೆ. ನಾಗತ್ತಿಹಳ್ಳಿ ಚಂದ್ರಶೇಖರ್-ಐಂದ್ರಿತಾ ಪ್ರಕರಣ, ದುನಿಯಾವಿಜಿ-ಶುಭಾಪೂಂಜ ಪ್ರಕರಣ, ದಿವಂಗತ  ಮೈಸೂರು ಲೋಕೇಶ್ ಪುತ್ರ ಆದಿಲೋಕೇಶನ sexual harassment ಪ್ರಕರಣ, ಮುಂಗಾರು ಮಳೆಯ ಗಣೇಶನ ವಿವಾದಾತ್ಮಕ ಮದುವೆ! ಹಾಸ್ಯ ನಟ ಶರಣ್ ಹಾಗೂ ಛಾಯಾಗ್ರಾಹಕ ವೇಣು ತಮ್ಮ ಮದುವೆ ಸಂಧರ್ಭ ಕೇಳಿಬಂದ ರಂಕಿನ ಕಥೆಗಳು,ಶೃತಿ-ಮಹೇಂದರ್ ನಡುವಿನ ವಿಭಜನೆ!ಸಿನಿಮಾ ಶೂಟಿಂಗ್ ಗೆ ತೆರಳಿದ್ದ ದಿಗಂತ್ ಅಮೇರಿಕಾದಲ್ಲಿ ಮಾಡಿಕೊಂಡರೆನ್ನಲಾದ ಅಪಸವ್ಯ, ನಿರ್ದೇಶಕ ನಾರಾಯಣ ತನ್ನ ತಂದೆ-ತಾಯಿಯರನ್ನೇ ಹೊರಗಟ್ಟಿದ್ದಾರೆ  ಹೀಗೆ ಹತ್ತು ಹಲವು ಘಟನೆಗಳು ನಮ್ಮ ಕಣ್ಣ ಮುಂದಿವೆ. ತೆರೆಯ ಮೇಲೆ ಪ್ರೇಕ್ಷಕರಿಗೆ ಸಜ್ಜನಿಕೆಯಿಂದ ಕಾಣಿಸಿಕೊಳ್ಳುವ  ಈ ಮಂದಿ ವೈಯುಕ್ತಿಕ ಬದುಕಿನಲ್ಲಿ ಅವರ ಈಗೋ ಅಥವ ತೆವಲಿನಿಂದಾಗಿ ಅಸಹ್ಯ ಎನಿಸುವಂತೆ ನಡೆದುಕೊಂಡು ಬಿಡುತ್ತಾರೆ. ನಮ್ಮ ಜನರೂ ಅಷ್ಟೇ ತೆರೆಯ ಮೇಲಿನದ್ದೇ ಜೀವನ ನಂಬಿ ಕೊಂಡು ಬದುಕುವ ಮತ್ತು ತಮ್ಮ ಜೀವನದಲ್ಲಿ ಪಾಲಿಸುವ ಹುಕಿಗೆ ಬೀಳುವ ಜನ..

         ಇವತ್ತು ಸಿನಿಮಾಗಳು ಅತ್ಯಂತ ಪರಿಣಾಮಕಾರಿಯಾದ ಸಂವಹನ ಮಾದ್ಯಮ. ಅಲ್ಲಿ ಜನ-ಜೀವನ ಮತ್ತು ಅವರ ಮನಸ್ಥಿತಿಯನ್ನಾಧರಿಸಿದ ಕಥೆಗಳು ಮತ್ತು ಪಾತ್ರಗಳನ್ನೆ ಸೃಜಿಸಿ ತೆರೆಯ ಮೇಲೆ ಅನಾವರಣ ಮಾಡಲಾಗುತ್ತಿದೆ. ಅದು ಈಗಷ್ಟೇ ಅಲ್ಲ ಚಿತ್ರರಂಗದ ಆರಂಭದ ದಿನಗಳಿಂದಲೂ ಇಂತಹ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಒಂದು ಚಿತ್ರ ಎಷ್ಟು ನೈಜವಾಗಿರುತ್ತೆ ಎನ್ನುವುದಕ್ಕಿಂತ ಫ್ಯಾಂಟಸಿ ಬೆರೆತ ಚಿತ್ರಗಳನ್ನೇ ಹೆಚ್ಚು ಇಷ್ಟ ಪಡಲಾರಂಭಿಸುತ್ತಾರೆ. ಆ ಪಾತ್ರಗಳ ಮೂಲಕ ತಮ್ಮ ಪ್ರತಿನಿಧಿಯನ್ನು ಗುರುತಿಸಿಕೊಂಡು ಬಿಡುತ್ತಾರೆ. ದುರಂತವೆಂದರೆ ಅಂತಹವರು ಚುನಾವಣೆಗೂ ಅಭಿಮಾನವನ್ನ ಎನ್ ಕ್ಯಾಶ್ ಮಾಡಿಕೊಂಡು ಬಿಡುತ್ತಾರೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಆಂದ್ರಪ್ರದೇಶದಲ್ಲಿ ಇಂತಹ ಹುಚ್ಚು ಅಭಿಮಾನ ಳಿದ್ದಾರೆ. ಕರ್ನಾಟಕದ ಮಟ್ಟಿಗೆ ಇಂತಹದ್ದೊಂದು ಅಪಾಯಕಾರಿ ಬೆಳವಣಿಗೆ ಆಗದಿದ್ದರೂ ಒಂದು ಚೌಕಟ್ಟಿನೊಳಗೆ ಎರಡು ಪರ್ವಗಳು ಮುಗಿದಿವೆ. ಒಂದು ಡಾ || ರಾಜ್, ಮತ್ತು ವಿಷ್ಣುವರ್ಧನ್. ಈ ಇಬ್ಬರೂ ಸಮಾಜಕ್ಕೆ ಮಾದರಿಯಾಗುವಂತೆ ಬದುಕಿದವರು, ತೆರೆಯ ಮೇಲಿನ ಬದುಕು ಹಾಗೂ ವೈಯುಕ್ತಿಕ ಬದುಕಿಗೆ ಸಾಮ್ಯ ವಿಟ್ಟುಕೊಂಡು ಆದರ್ಶ ಮೆರೆದವರು. ಇಂತಹ ಮೇರು ಆದರ್ಶಗಳ ನಡುವೆ ಪಡ್ಡೆ ಸಂಸ್ಕೃತಿಯನ್ನು ಹುಟ್ಟು ಹಾಕುವ ಸಿನಿಮಾಗಳ ಮೂಲಕ ಜನಪ್ರಿಯತೆಗೆ ಬಂದ ದರ್ಶನ್, ಗಣೇಶ್ ಸಿನಿಮಾ ಬಿಟ್ಟರೆ ತಮ್ಮ ಪಾಡಿಗೆ ತಾವು ಎಂದು ಬದುಕುತ್ತಿದ್ದಾರೆ. ಆದರೆ ದರ್ಶನ್ ತಮ್ಮ ವೈಯುಕ್ತಿಕ ಬದುಕಿನ ವಿಕೃತಿಯನ್ನು ಸಾರ್ವಜನಿಕವಾಗಿ ತೆರೆದಿಡುವ ಮೂಲಕ ದಿಗಿಲು ಹುಟ್ಟುವಂತೆ ನಡೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಇದು ಮಾಮೂಲು ಎಂದು ಅಂದು ಕೊಳ್ಳಬಹುದಾದರೂ ನಾಯಕ ನಟನೊಬ್ಬನ ವಿಲನ್ ನಡವಳಿಕೆಗಳು ರೇಜಿಗೆ ಹುಟ್ಟಿಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇಂತಹವರನ್ನು ಬೆಂಬಲಿಸುತ್ತಿರುವ ದಂಡು ದರ್ಶನ್ ಪತ್ನಿ ವಿಜಯಲಕ್ಷ್ಮಿಯವರನ್ನ ಸಾರ್ವಜನಿಕವಾಗಿ ತೆಗಳುವ ಮೂಲಕ ಅಪಮಾನಿಸುತ್ತಿರುವುದು ಸರಿಯಲ್ಲ. ಖಾಸಗಿ ಬದುಕು ಇಂದಲ್ಲ ನಾಳೆ ಸರಿಹೋಗಬಹುದು ಎಂಬ ದೂರದ ಆಸೆಯಲ್ಲೇ ವಿಜಯಲಕ್ಷ್ಮಿ ತಮ್ಮ ಹೇಳಿಕೆಗಳನ್ನು ನೋವಿನಲ್ಲೂ ಬದಲಿಸುತ್ತಿದ್ದಾರೆ ಅದು ಅವರ ವಿವೇಚನೆ!. ಆದರೆ ಇಂತಹ ವಿವೇಚನೆ ದರ್ಶನ್ ಅಭಿಮಾನಿಗಳಿಗಿಲ್ಲ, ಮತ್ತು ಆತನನ್ನು ಬೆಂಬಲಿಸುತ್ತಿರುವ ನಟರಿಗೂ ಇಲ್ಲ. 

      ಪ್ರಜ್ನಾವಂತ ವಲಯದಲ್ಲೂ   ಮಹಿಳೆ ಸಾಮಾಜಿಕವಾಗಿ ಇಂದಿಗೂ ಶೋಷಣೆಗೆ ಒಳಗಾಗಿದ್ದಾಳೆ ಮತ್ತು ಅಸಹನೆ ಬದುಕು ಸಾಗಿಸುತ್ತಿದ್ದಾಳೆ ಎಂಬುದಕ್ಕೆ ಈ ಪ್ರಕರಣ ಕೂಡ ಉದಾಹರಣೆ ಆಗಬಹುದು. ದರ್ಶನ್ ಪ್ರೀತಿಸಿ ಮದುವೆಯಾಗಿದ್ದರೂ ಕೂಡಾ ಪ್ರೀತಿಸಿದವಳ ಮೇಲೆಯೇ ಹಲ್ಲೆ ಮಾಡಿ ಚಪ್ಪಲಿಯಲ್ಲಿ ಹೊಡೆದು ಅಪಮಾನಿಸುವುದು ಎಂತಹ ನಾಗರೀಕತೆ? ಏನೂ ಅರಿಯದ ಮುಗ್ದ ಕಂದಮ್ಮನನ್ನು ಸಾಯಿಸಲು ಯತ್ನಿಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಸದರಿ ಘಟನೆಯಲ್ಲಿ ಅನಾಹುತ ಸಂಭವಿಸಿದ್ದರೆ ದರ್ಶನ್ ಏನಾಗುತ್ತಿದ್ದ ಹೇಳಿ? ಇಂತಹದ್ದನ್ನೆಲ್ಲ ಅಭಿಮಾನಿ ವರ್ಗ ಯಾಕೆ ಬೆಂಬಲಿಸುತ್ತದೆ? ಅವರ ಖಾಸಗಿ ಬದುಕಿನ ಅನಾಹುತಗಳಿಗೆ ಅಭಿಮಾನಿ ಹೆಸರಿನ ಜವಾಬ್ದಾರಿ ಏಕೆ? ದರ್ಶನ್ ಇನ್ನೂ ಹಲವು ಚಿತ್ರಗಳಿಗೆ ಸಹಿ ಹಾಕಿದ್ದು ಕೆಲವು ಪೂರ್ಣಗೊಂಡಿವೆ ಮತ್ತೆ ಕೆಲವು  ಅರ್ಧ ಚಿತ್ರೀಕರಣವಾಗಿವೆ. ಹೇಗಿರುವಾಗ ಸದರಿ ಚಿತ್ರಗಳ ನಿರ್ಮಾಪಕರುಗಳೇ ದರ್ಶನ್ ಪರವಾದ ಟ್ರೆಂಡ್ ಹುಟ್ಟು ಹಾಕುವ ಮೂಲಕ ಜನರನ್ನು ಮಾದ್ಯಮಗಳ ಮೂಲಕ 'ಮಂಗ' ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಮೂಡದಿರದು. ಒಟ್ಟಾರೆ ನೈತಿಕ ಅಧ:ಪತನದ ಈ ಅಂಶಗಳು ವಿನಾಕಾರಣ ಪ್ರಚಾರ ಪಡೆದುಕೊಳ್ಳ ತೊಡಗಿದೆಂತೆಲ್ಲಾ ಜನ ಅದಕ್ಕೆ ಮುಗಿಬಿದ್ದು ಸ್ಪಂದಿಸುವುದು ಸಾಂಸ್ಕೃತಿಕ ಪ್ರಜ್ಞೆಯ ದುರಂತವಲ್ಲವೇ?

Sunday, September 4, 2011

ಶಿಕ್ಷಕರ ದಿನಾಚರಣೆಯ ಪರಿಪೂರ್ಣತೆ ಹೇಗೆ?

ಇಂದು ಶಿಕ್ಷಕರ ದಿನ, ಶಿಕ್ಷಕ ಸ್ಥಾನಕ್ಕೆ ತನ್ನದೇ ಆದ ಘನತೆ-ಗೌರವಗಳಿವೆ. ಸಮಾಜದಲ್ಲಿ ತಂದೆ-ತಾಯಿಗಳ ನಂತರ ನೆನೆಯಬಹುದಾದ ಪ್ರಾತ:ಸ್ಮರಣೀಯರೆಂದರೆ ಶಿಕ್ಷಕರೇ ಆಗಿರುತ್ತಾರೆ. ಸದರಿ ಹುದ್ದೆಗೆ ಘನತೆ-ಗೌರವದ ಜೊತೆಗೆ ತನ್ನದೇ ಆದ ಔನ್ನತ್ಯವೂ ಸಹಾ ಇದ್ದರಷ್ಟೇ ವೃತ್ತಿಯ ಪಾವಿತ್ರ್ಯತೆ ಉಳಿಯಬಹುದು. ಸಮಾಜದಲ್ಲಿ ಶಿಕ್ಷಕ ಹುದ್ದೆಯೂ ಸಹಾ ಕಳಂಕಿತವಾಗುತ್ತಿರುವುದು ವಿಷಾಧನೀಯಕರ ಸಂಗತಿ. ನೈತಿಕ ಅಧ:ಪತನ ಹೊಂದಿದವರು, ವೃತ್ತಿಯ ಹೊಣೆಗಾರಿಕೆ ಅರಿವಿಲ್ಲದೇ ಹೊಟ್ಟೆ ಹೊರೆಯಲು ಶಿಕ್ಷಕ/ಕಿ ಯರಾಗಿ ಸೇರ್ಪಡೆಗೊಳ್ಳುತ್ತಿರುವುದು ಇದಕ್ಕೆ ಕಾರಣ ವಿರಬಹುದು. ಈ ನಡುವೆಯೇ ವೃತ್ತಿಯ ಪಾವಿತ್ರ್ಯ ಕಾಪಾಡುವ ಪ್ರಾಮಾಣಿಕರೂ ಇದ್ದಾರೆ. ಆದರೆ ಸಮುದಾಯದಲ್ಲಿ ಯಾರಾದರೊಬ್ಬ ಸಹದ್ಯೋಗಿ ಮಾಡುವ ಅನಾಚಾರಗಳಿಗೆ ಇಡೀ ಶಿಕ್ಷಕ ಸಮುದಾಯವನ್ನೇ ಪ್ರಶ್ನಾರ್ಥಕವಾಗಿ ನೋಡುವ ಪರಿಪಾಠ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆಯೇನಲ್ಲ. ಈ ಸಂಧರ್ಭ ಇಂತಹ ತಪ್ಪು-ಒಪ್ಪುಗಳ ಮಂಥನ ಅಗತ್ಯವಾಗಿದೆ.




ಸಮಾಜದಲ್ಲಿ ಶಿಕ್ಷಕ ಕೆಟ್ಟರೆ ಇಡೀ ವ್ಯವಸ್ಥೆಯೇ ಕೆಟ್ಟಂತೆ ಹಾಗಾಗಿ ತನ್ನ ತಪ್ಪು ದೊಡ್ಡದೇ ಇತರರು ತಪ್ಪು ಮಾಡುವುದಿಲ್ಲವೇ ಎಂದು ಕೈತೋರಿಸುವ ಹುಂಬ ಶಿಕ್ಷಕರುಗಳು ಇವತ್ತು ನಮ್ಮ ನಡುವೆಯೇ ಇದ್ದಾರೆ. ಇರಲಿ ಇದಕ್ಕೂ ಮುನ್ನ ಶಿಕ್ಷಕರ ದಿನ ಆಚರಣೆಯ ಕುರಿತ ಕೆಲವು ಕುತೂಹಲದ ಸಣ್ಣ ರಿಪೋರ್ಟು ನಿಮಗಾಗಿ. ಭಾರತದ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆಗೆ ಬಂದು ಇಲ್ಲಿಗೆ 49ವರ್ಷಗಳಾಗಿವೆ. ಇದು 50ನೇ ಶಿಕ್ಷಕರ ದಿನಾಚರಣೆ. ಎಲ್ಲರಿಗೂ ತಿಳಿದ ಹಾಗೆ ಭಾರತದ ರಾಷ್ಟ್ರಪತಿಯವರಾಗಿದ್ದ ಶ್ರೇಷ್ಠ ದಾರ್ಶನಿಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನವನ್ನೇ ದೇಶದಲ್ಲಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ದಾರ್ಶನಿಕರಾಗಿ,ಆದರ್ಶನೀಯ ಶಿಕ್ಷಕರಾಗಿ ಸೇವೆ ಸಲ್ಲಿಸುವ ಹಂತದಲ್ಲೇ ರಾಷ್ಟ್ರದ ಅತ್ಯುನ್ನತ ಹುದ್ದೆಗೇರಿದವರು. ಮತ್ತು ಆ ಮೂಲಕ ಶಿಕ್ಷಕ ಹುದ್ದೆಯ ಸಾಧ್ಯತೆಗಳನ್ನು ಜಗತ್ತಿಗೆ ತೆರೆದಿಟ್ಟವರು. ಅಂದರೆ 'ಶಿಕ್ಷಕ' ಸ್ಥಾನಕ್ಕೆ ಇರುವ ಶ್ರೇಷ್ಠತೆಗಿಂತ ಬೇರೊಂದು ಸ್ಥಾನವಿಲ್ಲ ಆತ ವ್ಯವಸ್ಥೆಯ ನಿರ್ಮಾತೃ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನಗಳು ಸಿಗಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ರಾಧಾಕೃಷ್ಣನ್ ರ ಜನ್ಮದಿನದಂದು ಶಿಕ್ಷಕ ದಿನ ಆಚರಿಸುವಂತೆಯೇ ಅರ್ಜೆಂಟಿನಾ ದೇಶದಲ್ಲಿ ದೊಮಿಂಗೊ ಫಾಸ್ಟಿನೋ ಎಂಬ ಶಿಕ್ಷಕ ನಿಧನರಾದ ದಿನ ಅಂದರೆ ಸೆ.11ರಂದು ಆಚರಿಸಲಾಗುತ್ತದೆ. ಅಂದರೆ 1915ರಿಂದಲೇ ಅಲ್ಲಿ ಶಿಕ್ಷಕ ದಿನಾಚರಣೆ ನಡೆಯುತ್ತದೆ. ಜಗತ್ತಿನ 70ಕ್ಕೂ ಹೆಚ್ಚು ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಶಿಕ್ಷಕರನ್ನು ನೆನೆಯುವ ದಿನಗಳಿವೆ. ಆದರೆ ವಿಶ್ವ ಸಂಸ್ಥೆಯ UNESCO ವಿಶ್ವ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ 5ರಂದು ಆಚರಿಸುತ್ತದೆ. ತೀರಾ ಇತ್ತೀಚೆಗೆ ಅಂದರೆ 1994ರಿಂದ ಇದು ಜಾರಿಗೆ ಬಂದಿದೆ.



ಮೊನ್ನೆ ಕಾಲೇಜೊಂದರ ಸಮಾರಂಭದ ವರದಿಗಾಗಿ ತೆರಳಿದ್ದೆ . ಠಾಕು ಠೀಕಾಗಿ ಡ್ರೆಸ್ ಮಾಡಿಕೊಂಡು ಟೈ ಬಿಗಿದು ಕೊಂಡು ನಿಂತಿದ್ದ ಒಬ್ಬ ಯುಜಿಸಿ ಉಪನ್ಯಾಸಕ ನಿರೂಪಣೆ ಮಾಡುತ್ತಿದ್ದರು. ಅವರು 'ಅ' ಕಾರ ಇರುವೆಡೆ 'ಹ'ಕಾರ, 'ಶ' ಕಾರವನ್ನು 'ಸ'ಕಾರವೆಂದು ಸಂಭೋಧಿಸುತ್ತಿದ್ದರು ಅಂದರೆ 'ಬಾಸಣ', 'ಸ್ರೀಯುತರು', 'ಹಬಿನಂದನೆಗಳು', ಸಂಯುಕ್ತ ಎಂಬುದನ್ನು 'ಸಯುಕ್ತ' ಇತ್ಯಾದಿ. ಅವರ ಪ್ರತೀ ಉಚ್ಚಾರಕ್ಕೂ ವಿದ್ಯಾರ್ಥಿಗಳು ಗೊಳ್ಳೆಂದು ನಗುತ್ತಿದ್ದರು ಆ ಪುಣ್ಯಾತ್ಮನಿಗೆ ಅದರ ಅರಿವಾಗಲಿಲ್ಲ ಅಷ್ಟೇ ಏಕೆ ವೇದಿಕೆಯಲ್ಲಿದ್ದ ಉಪನ್ಯಾಸಕರು/ಪ್ರಾಂಶುಪಾಲರು ಅದನ್ನು ಗಮನಿಸಿ ತಿಳಿ ಹೇಳುವ ಕೆಲಸ ಮಾಡಲಿಲ್ಲ. ಇನ್ನೊಂದು ಘಟನೆ ಹಳ್ಳಿಯೊಂದರೆ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರೋರ್ವರ ವಿರುದ್ದ ಶಾಲಾ ಮಕ್ಕಳು-ಪೋಷಕರು ಪ್ರತಿಭಟನೆ ನಡೆಸುತ್ತಿದ್ದರು, ಸ್ಥಳಕ್ಕೆ ಹೋದಾಗ ಸದರಿ ಮುಖ್ಯ ಶಿಕ್ಷಕನನ್ನು ಶಾಲಾ ಕೊಠಡಿಯೊಂದರಲ್ಲಿ ಕೂಡಿಹಾಕಲಾಗಿತ್ತು.ಹೆಣ್ಣು ಮಕ್ಕಳೊಂದಿಗೆ ಅನೈತಿಕವಾಗಿ ನಡೆದುಕೊಳ್ಳುತ್ತಾರೆ, ಆಶ್ಲೀಲ ಸಂಭಾಷಣೆ ಮಾಡುತ್ತಾರೆ, ಅಡುಗೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬುದು ಪ್ರಮುಖ ಆಪಾದನೆ. ಆತನ ಮುಖದಲ್ಲಿ ಕೊಂಚವೂ ಪಶ್ಚತ್ತಾಪ ಇರಲಿಲ್ಲ ಮತ್ತು ಅಂಜಿಕೆಯೂ ಇರಲಿಲ್ಲ ತನ್ನ ಹಿಂದೆ ಜಾತಿಯ ಬೆಂಬಲ ಮತ್ತು ರಾಜಕೀಯ ನಾಯಕರ ಬೆಂಬಲ ಇದೆ ಎಂಬುದೇ ಆತನ ಹುಂಬತನಕ್ಕೆ ಕಾರಣವಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಶಾಲಾವರಣದಲ್ಲಿ ಶಿಕ್ಷಕಿಯೊಬ್ಬಾಕೆಯೊಂದಿಗೆ ಲಲ್ಲೆಗೆರೆಯುತ್ತಾ ಪೋರ್ಕಿಯಂತೆ ವೇಷಭೂಷಣ ಧರಿಸಿದ್ದ ಯುವಕನೊಬ್ಬ ಕಂಡ, ಮತ್ತೊಬ್ಬ ಕೈಗೆ ರೌಡಿ ಬಳೆಯಂತಹದ್ದೇನೋ ಕಟ್ಟಿಕೊಂಡು ಕ್ಯಾಪು ಹಾಕಿಕೊಂಡು ಹೆಣ್ಣು ಮಕ್ಕಳ ಮೈಮೇಲೆ ಕೈಯಾಡಿಸುತ್ತಾ ಸಾಗುತ್ತಿದ್ದ. ಶಾಲಾ ಕಛೇರಿಗೆ ಬಂದರೆ ಆಗಷ್ಟೇ ಬ್ಯೂಟಿಪಾರ್ಲರ್ ನಿಂದ ಬಂದಿದ್ದಾರೋ ಎನ್ನುವಂತೆ ಆಫ್ ತೋಳಿನ ಬ್ಲೌಸ್, ಪಾರದರ್ಶಕ ಉಡುಗೆ ಧರಿಸಿ, ಢಾಳಾಗಿ ಕೆಂಪು ಬಣ್ಣವನ್ನ ತುಟಿಗೆ ಮೆತ್ತಿಕೊಂಡ ಒಬ್ಬಾಕೆ ಕಂಡರು. ಜೊತೆಯಲ್ಲಿದ್ದ ಅಧಿಕಾರಿಯನ್ನು ಕೇಳಿದೆ ಯಾರಿವರು? ಇವರೆಲ್ಲ ಶಿಕ್ಷಕರು ಎಂದು ಆತ ಮೌನಕ್ಕೆ ಶರಣಾದರು. ಇನ್ನೊಂದು ಪ್ರಕರಣ ಹೇಳಲೇ ಬೇಕು ಅದು ಸಾರಿಗೆ ವ್ಯವಸ್ಥೆಯೂ ಇಲ್ಲದ ಹಳ್ಳಿಯೊಂದರ ಶಾಲೆ. ಅಲ್ಲಿಗೆ ಆ ಶಿಕ್ಷಕ ಬಂದಾಗ ಶಾಲಾವರಣದಲ್ಲಿ ಸೊಂಪಾಗಿ ಬೆಳೆದಿದ್ದ ಹುಲ್ಲನ್ನು ಮೇಯಲು ದನಗಳನ್ನು ಬಿಟ್ಟಿದ್ದರು. ಪ್ರತೀ ವರ್ಷ ಅಲ್ಲಿ ಬೆಳೆಯುವ ಹುಲ್ಲನ್ನು ಗ್ರಾಮಸ್ಥರು ಹರಾಜು ಹಾಕಿಕೊಳ್ಳುತ್ತಿದ್ದರಂತೆ. ಈ ಶಿಕ್ಷಕರು ಬಂದ ದಿನದಿಂದಲೇ ಶಾಲಾ ಪರಿಸರದಲ್ಲಿ ಬದಲಾವಣೆ ತಂದರು. ತಮ್ಮ ವಾಸ ಸ್ಥಳದ ದೇಗುಲವೇನೋ ಎಂಬಂತೆ ಒಪ್ಪ ಓರಣವಾಗಿ ಪರವರ್ತಿಸಿದರು. ಶಾಲೆಯ ಮುಖ ಕಾಣದೇ ದಿಕ್ಕು ತಪ್ಪಿದ್ದ ಮಕ್ಕಳನ್ನು ಶಾಲೆಗೆ ಕರೆದು ತಂದರು. ಸಮಯದ ಪರಿಗಣನೆ ತೆಗೆದುಕೊಳ್ಳದೇ ಬೆಳಿಗ್ಗೆ 7ಗಂಟೆಗೆಲ್ಲ ಶಾಲೆಗೆ ಹಾಜರಾಗುತ್ತಿದ್ದ ಆ ಉಪಾಧ್ಯಾಯ ಪ್ರತೀ ಮನೆಗೂ ಹೋಗಿ ಮಕ್ಕಳನ್ನು ಹುರಿದುಂಬಿಸಿ ಕರೆತರುತ್ತಿದ್ದರು, ಕೈ ತೋಟದ ಮಹತ್ವ, ಔಷಧ ಗಿಡಗಳ ಮಹತ್ವ ಹೇಳುತ್ತಾ, ಹಾಡು ಸಂಭಾಷಣೆಗಳ ಮುಖಾಂತರವೇ ಮಕ್ಕಳ ಮನಗೆದ್ದು ಅಧ್ಯಯನಕ್ಕೆ ತೊಡಗಿಸುತ್ತಿದ್ದರು. ಮೊದಲಿಗೆ ಶಿಕ್ಷಕರ ಜಾತಿಯ ಕಾರಣಕ್ಕೆ ಊರಿನಲ್ಲಿ ಹನಿ ನೀರನ್ನು ಕೊಡಲು ನಿರಾಕರಿಸುತ್ತಿದ್ದ ಗ್ರಾಮದ ಜನ ಕ್ರಮೇಣ ಮೇಸ್ಟ್ರ ಕಾರ್ಯ ತತ್ಪರತೆಗೆ ತಲೆದೂಗಿದರು. ಇವತ್ತು ಅಲ್ಲಿ ಕಲಿತ ಮಕ್ಕಳು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಇವತ್ತಿಗೂ ಪ್ರಾಥಮಿಕ ಶಾಲೆಯಲ್ಲಿ ತನ್ನನ್ನು ತಿದ್ದಿ ತೀಡಿದ ಆ ಶಿಕ್ಷಕರನ್ನ ನೆನೆಯುತ್ತಾರೆ.



ಆದರೆ ಎಷ್ಟು ಶಾಲೆಗಳಲ್ಲಿ ಇಂತಹ ವಾತಾವರಣವಿದೆ. ಇಷ್ಟು ಜನ ಶಿಕ್ಷಕರಿಗೆ ತಾವು ಮಾಡುವ ವೃತ್ತಿಯಲ್ಲಿ ಬದ್ದತೆಯಿದೆ ಎಂಬುದು ಇಲ್ಲಿ ಮುಖ್ಯವಾಗುತ್ತಿದೆ. ಭಾರತೀಯ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ, ಇದರಲ್ಲಿ ಬದಲಾವಣೆ ಬೇಕು ಎಂಬಿತ್ಯಾದಿ ಆರೋಪಗಳನ್ನ ಮಾಡಲಾಗುತ್ತದೆ ಆದರೆ ನಮ್ಮ ಶಿಕ್ಷಣದಲ್ಲಿ ನೈತಿಕತೆಯ ಅಂಶಗಳಿವೆ, ವ್ಯಕ್ತಿಗಳ ಪರಿಪೂರ್ಣ ವಿಕಾಸಕ್ಕೆ ಅಗತ್ಯವಿರುವ ಅವಕಾಶಗಳಿವೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಇಲ್ಲಿ ಕೊರತೆಗಳನ್ನು ದೊಡ್ಡದು ಮಾಡುವುದಕ್ಕಿಂತ ಇರುವ ಅವಕಾಶಗಳು ಹೇಗೆ ಸದ್ವಿನಿಯೋಗವಾಗುತ್ತಿದೆ ಎಂಬುದು ಮುಖ್ಯವಾಗುತ್ತದೆ. ಈಗಿನಂತೆ ಹಿಂದೆ ಶಿಕ್ಷಣಕ್ಕೆ ಹೆಚ್ಚಿನ ಮೂಲಭೂತ ಸವಲತ್ತುಗಳು ಇರಲಿಲ್ಲ ಆದರೆ ಇವತ್ತು ಸಾಕು ಎನಿಸುವಷ್ಟು ಸವಲತ್ತುಗಳಿವೆ, ಗುಣಮಟ್ಟದ ಶಿಕ್ಷಣ ಕಾಯ್ದು ಕೊಳ್ಳಲು ಉನ್ನತ ದರ್ಜೆ ಯಲ್ಲಿ ಉತ್ತೀರ್ಣರಾದವರನ್ನೇ ಶಿಕ್ಷಕರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಹೆಚ್ಚುವರಿ ವೇತನ,ರಜೆ, ತರಬೇತಿ ಇತ್ಯಾದಿಗಳನ್ನು ಕೊಡಮಾಡಿದೆ ಆದರೆ ಫಲಿತಾಂಶ ಶೂನ್ಯ. ಸರ್ಕಾರಗಳು ಕೂಡ ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗಿದೆ ಅಂದರೆ ವಿಶ್ವ ಬ್ಯಾಂಕ್ ಯೋಜನೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದು ದುಡ್ಡು ಮಾಡಿಕೊಳ್ಳುವ ಹಪಾಹಪಿಗೆ ಬಿದ್ದು ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ಮಾಡುವ ಮೂಲಕ ಅನಗತ್ಯವಾಗಿ ವಿವಿಧ ಹುದ್ದೆಗಳನ್ನು ಸೃಜಿಸುವ ಮೂಲಕ ಪಾಠ ಮಾಡಿಕೊಂಡಿರಬೇಕಾದ ಶಿಕ್ಷಕರುಗಳನ್ನು ತಂದು ಕೂರಿಸುತ್ತಿದೆ. ಇದು ಮೊದಲ ಯಡವಟ್ಟು. ಶಿಕ್ಷಕರುಗಳು ಪಾಠ ಮಾಡುವುದನ್ನು ಬಿಟ್ಟು ಅನ್ಯ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಇದು ಕಾರಣವಾಗುತ್ತದೆ. ಇನ್ನು ಬಹುತೇಕ ಶಿಕ್ಷಕರುಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಶಾಲೆಯ ಪಾಠಕ್ಕಿಂತ ಮನೆ ಪಾಠದ ವ್ಯಾಪಾರಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ರಾಜಕೀಯ ದಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬಿಡುತ್ತಾರೆ. ಪ್ರಶ್ನಿಸುವ ಮೇಲಧಿಕಾರಿಗಳ ವಿರುದ್ದ ಸ್ಥಳೀಯ ವ್ಯವಸ್ಥೆಯನ್ನೆ ಎತ್ತಿ ಕಟ್ಟಿಬಿಡುತ್ತಾರೆ. ಎಲ್ಲದಕ್ಕಿಂತ ದುರಂತವೆಂದರೆ ಶಿಕ್ಷಕರುಗಳು ಜಾತಿವಾರು ಶಿಕ್ಷಕ ಸಂಘಗಳನ್ನು ಮಾಡಿಕೊಳ್ಳುವುದು! ಹೀಗಾದರೆ ಸಮಾಜ ಕಟ್ಟುವುದು ಸಾಧ್ಯವೇ ? ಶಿಕ್ಷಕ ಸ್ಥಾನದ ಘನತೆ ಉಳಿಸಲು ಸಾಧ್ಯವೇ ?

Sunday, August 28, 2011

ಗಾಂಧೀ ಮಾರ್ಗಕ್ಕೆ ದಕ್ಕಿದ ಗೆಲುವು!

ಗಾಂಧೀ ಮಾರ್ಗದ ಅಹಿಂಸಾತ್ಮಕ ಹೋರಾಟಕ್ಕೆ ಆರೂವರೆ ದಶಕಗಳ ನಂತರ ಮೊದಲ ಹಂತದ ಗೆಲುವು ದಕ್ಕಿದೆ. ಅಷ್ಟರಮಟ್ಟಿಗೆ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟ ಮತ್ತು ಜನಲೋಕಪಾಲ್ ಮಸೂದೆಯ ಅನುಷ್ಠಾನದ ಆಗ್ರಹ ಗಟ್ಟಿತನವನ್ನ ಉಳಿಸಿಕೊಂಡಿದೆ. ಕಳೆದ ಏಪ್ರಿಲ್ ನಲ್ಲಿ ಜನಲೋಕಪಾಲ್ ಮಸೂದೆಯ ಕರಡು ರಚನೆಗೆ ಆಗ್ರಹಿಸಿ ಅಣ್ಣಾ ನೇತೃತ್ವದ ತಂಡ ಚಳುವಳಿ ನಡೆಸಿತ್ತು. ಆಗ ದೊರೆತ ಅಭೂತ ಪೂರ್ವ ಬೆಂಬಲವನ್ನ ಅನಾಮತ್ತಾಗಿ ಹೈಜಾಕ್ ಮಾಡಲು ಹೊರಟ ಯೋಗ ಗುರು ಬಾಬಾ ರಾಮದೇವ ನೈತಿಕತೆ ಕಳೆದುಕೊಂಡು ಮೂಲೆಗುಂಪಾಗಿದ್ದು ಈಗ ಇತಿಹಾಸ. ನೈತಿಕತೆಯನ್ನ, ಸಿದ್ದಾಂತವನ್ನ ಯಾವ ಚಳುವಳಿಗಳು ಉಳಿಸಿಕೊಳ್ಳುತ್ತವೋ ಅದಕ್ಕೆ ಯಾವತ್ತಿದ್ದರೂ ಗೆಲುವು ಎಂಬುದಕ್ಕೆ ಅಣ್ಣಾ ಹಜಾರೆಯ 13ದಿನಗಳ ಶಾಂತಿಯುತ ಉಪವಾಸ ಸತ್ಯಾಗ್ರಹ ಇವತ್ತು ನಮ್ಮ ಕಣ್ಣೆದುರಿಗಿದೆ. ಈ ಸಂಧರ್ಭದಲ್ಲಿ ಚಳುವಳಿಯ ಕುರಿತು ಬುದ್ದಿ ಜೀವಿಗಳೆನಿಸಿಕೊಂಡವರಿಂದ, ರಾಜಕೀಯ ಪಕ್ಷಗಳ ಮುಖಂಡರಿಂದ, ಅಧಿಕಾರ ರೂಢರಿಂದ ನಾನಾ ರೀತಿಯ ಟೀಕೆಗಳು ಮತ್ತು ವಿಮರ್ಶೆಗಳು ಬಂದಿವೆ. ಚಳುವಳಿಗಳಲ್ಲಿ ಎಂಥಹವರು ಪಾಲ್ಗೊಂಡರು? ಯಾರು ಎಷ್ಟೆಷ್ಟು ವಿಚಾರ ಅರಿತಿದ್ದರು?ಅಂಥಹವರು ಚಳುವಳಿಗೆ ಯಾಕೆ ಬಂದರು? ಅಷ್ಟಕ್ಕೂ ಲೋಕಪಾಲ ಮಸೂದೆ ಜಾರಿಗೆ ಬಂದ ತಕ್ಷಣ ಭ್ರಷ್ಟಾಚಾರದ ಭೂತ ಓಡಿಸಲು ಸಾಧ್ಯವಾದೀತೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಅವಶ್ಯಕತೆ ಇದೆ.


ಇವತ್ತು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಜನಲೋಕಪಾಲ್ ಮಸೂದೆಗೆ ನಾಲ್ಕೂವರೆ ದಶಕಗಳ ಇತಿಹಾಸವಿದೆ. ಆದಾಗ್ಯೂ ಅಧಿಕಾರ ಷಾಹಿಗಳ ಕುತಂತ್ರದಿಂದಾಗಿ ಅದಕ್ಕೊಂದು ಸ್ಪಷ್ಟರೂಪ ಕೊಡುವ ಪ್ರಯತ್ನಕ್ಕೆ ಸರಿಯಾದ್ದೊಂದು ಅವಕಾಶ ದಕ್ಕಿರಲಿಲ್ಲ.ಆದರೆ ಅಣ್ಣಾ ಹಜಾರೆ ನೇತೃತ್ವದಲ್ಲಿ ಬದ್ದತೆಯ ಹೋರಾಟಕ್ಕೆ ಕೊಂಚ ಮಟ್ಟಿಗೆ ಗೆಲುವು ಸಿಕ್ಕಿದೆ. ಜನಲೋಕಪಾಲ ಮಸೂದೆ ಜಾರಿಗೆ ಬಂದಾಕ್ಷಣ ದೇಶದ ಆಡಳಿತ ವ್ಯವಸ್ತೆಯಲ್ಲಿ ಅಭೂತಪೂರ್ವ ಬದಲಾವಣೆ ಆಗಿಬಿಡುತ್ತದೆ ಲಂಚದ ಸಮಸ್ಯೆ ನಿವಾರಣೆಯಾಗುತ್ತದೆ, ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ 1461ಕೋಟಿಗೂ ಹೆಚ್ಚಿನ ಬೇನಾಮಿ ಹಣ ಪುಕ್ಕಟ್ಟೆಯಾಗಿ ಸಿಕ್ಕುಬಿಡುತ್ತೆ ಅದನ್ನು ಪ್ರತೀ ಹಳ್ಳಿಗೆ ತಲಾ 61ಕೋಟಿಯಂತೆ ಹಂಚಬಹುದು, ಅಬಿವೃದ್ದಿ ಕಾರ್ಯಕ್ಕೆ ಬಳಸಬಹುದು, ಅದೆಷ್ಟೋ ವರ್ಷ ಪುಕ್ಕಟ್ಟೆಯಾಗಿ ವಿದ್ಯುತ್ ಸರಬರಾಜು ಮಾಡಬಹುದು ಆಗ ಭಾರತ ದೇಶದ ಭವಿಷ್ಯ ಉಜ್ವಲವಾಗಿ ಬಿಡುತ್ತೆ ಅನ್ನೊ ಮೂರ್ಖತನದ ಮೂರ್ಖರ ಎಸ್ ಎಂ ಎಸ್ ಗಳು ಹರಿದಾಡಿ ಬಿಟ್ಟವು ಲಾಭವಾಗಿದ್ದು ಮಾತ್ರ ಮೆಸೆಜು ಸರ್ವಿಸ್ ನೀಡಿದ ಮೊಬೈಲು ಕಂಪೆನಿಗಳಿಗೆ! ಅದೇ ರೀತಿ ಇನ್ನೊಂದು ಮೂರ್ಖರ ಗುಂಪು ಅಣ್ಣಾ ಹಜಾರೆ ಕೇವಲ 7ನೇ ತರಗತಿ ಓದಿದ ನಿರಕ್ಷರಕುಕ್ಷಿ, ಭೂಮಿಯ ಮೇಲಿನ ರಕ್ಕಸ! ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನೇ ತಿದ್ದಲು ಆರ್ ಎಸ್ ಎಸ್ ನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡ ಒಬ್ಬ ಕೋಮುವಾದಿ ಎಂದು ಜರೆಯುವ ಮೆಸೆಜನ್ನು ಕಿಡಿಗೇಡಿಗಳು ಹರಿಯ ಬಿಟ್ಟಿದ್ದರು. ವಿ.ಕ ದ ದೆಹಲಿಯ ಹಿರಿಯ ವರದಿಗಾರ ಉಮಾಪತಿ, ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಸದವಕಾಶವನ್ನ ಮೀಸಲು ವಿರೋಧಿ ಗುಂಪು ಹೇಗೆ ಬಳಸಿಕೊಂಡು ಹೋರಾಟದ ಆಶಯವನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ವಿಚಾರವನ್ನ ಬರೆದಿದ್ದರು. ಅಷ್ಟೇ ಅಲ್ಲ ವೈಯುಕ್ತಿವಾಗಿ ಭ್ರಷ್ಟರಾದವರು ಸಾರ್ವಜನಿಕವಾಗಿ ಸಾಮೂಹಿಕವ ನೆಲೆಗಟ್ಟಿನಲ್ಲಿ ಹೇಗೆ ಮುಖವಾಡ ಧರಿಸಿ ಬರುತ್ತಿದ್ದಾರೆ ಎಂಬ ಸಾಕಷ್ಟು ವಿಚಾರಗಳು ನಮ್ಮ ಕಣ್ಣೆದುರಿಗೆ ಬಂದು ಹೋದವು ತಾತ್ವಿಕ ನೆಲೆಗಟ್ಟಿಗೆ, ತಾರ್ಕಿದ ಸಂಘರ್ಷಕ್ಕೆ ಎಣೆಯಿಲ್ಲದಂತೆ ವಿವಿಧ ಮಜಲುಗಳಿಂದ ಹರಿದು ಬಂದ ಬೆಂಬಲ ಅಂತಿಮವಾಗಿ ಯಾವ ರೂಪ ತಳೆಯುತ್ತಿತ್ತೋ ಗೊತ್ತಿಲ್ಲ ಆದರೆ ಸ್ವತಂತ್ರ ಭಾರತದಲ್ಲಿ ಒಂದು ಜೆಪಿ ಚಳುವಳಿಯ ನಂತರ ನಡೆದ ದೊಡ್ಡ ಹೋರಾಟ ಇದು.

ನಮ್ಮ ಜನ ಸಿನಿಕರು, ಕಲ್ಪನೆಗಳ ಸಾಮ್ರಾಜ್ಯದಲ್ಲಿ ವಾಸ್ತವತೆಯನ್ನು ಮೀರಿ ನಿಂತ ವಿಚಾರಗಳನ್ನ ಅರ್ಥೈಸಿಕೊಳ್ಳಲಾಗದವರು ಏಕಾಏಕಿ ಬದಲಾವಣೆಗಳನ್ನು ನಿರೀಕ್ಷಿಸಿ ಬಿಡುತ್ತಾರೆ. ನಿಮಗೆ ನೆನಪಿರಲಿ ಇವತ್ತು ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆಂದೇ ಸರಿ ಸುಮಾರು 6 ಸಂಸ್ಥೆಗಳಿವೆ. ಆದಾಗ್ಯೂ ಭ್ರಷ್ಟಾಚಾರ ಎಂಬುದು ಇಲ್ಲಿಂದ ಖಾಲಿ ಆಗಿಲ್ಲ ಏಕೆಂದರೆ ಇವೆಲ್ಲಾ ಹಲ್ಲು ಕಿತ್ತ ಹಾವುಗಳು! ಇವನ್ನು ಮೀರಿದ ಲೋಕಪಾಲ ಸಮಿತಿ ಅಸ್ತಿತ್ವಕ್ಕೆ ಬಂದರೆ ಅದಕ್ಕೊಂದು ಸ್ಪಷ್ಟ ನೀತಿ ನಿಯಮ ಸಂಸತ್ ನಲ್ಲಿ ಕಾನೂನಾಗಿ ಮಾರ್ಪಟ್ಟರೆ ಕೊಂಚ ಮಟ್ಟಿಗೆ ಭ್ರಷ್ಟಾಚಾರವನ್ನು ತಹಬಂದಿಗೆ ತರಬಹುದೇನೋ ಎನ್ನುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ಆದರೂ ಶೇ.2ರಷ್ಟು ಭ್ರಷ್ಟಾಚಾರ ನಿಯಂತ್ರಣ ಆಡಳಿತ ವ್ಯವಸ್ಥೆಯಲ್ಲಿ ಕಾಣಬಹುದೇ ವಿನಹ ಬಾಕಿಯಂತೆ ಯಥಾಸ್ಥಿತಿಯೇ ಉಳಿದು ಬಿಡುವ ಅಪಾಯವಿದೆ. ಹಾಗಾಗಿ ಸ್ವಿಸ್ ಬ್ಯಾಂಕಿನಿಂದ ಹಣ ತರುವುದು, ಭ್ರಷ್ಟರನ್ನ ಹಿಡಿದು ಮಟ್ಟಹಾಕುತ್ತೇವೆ ಎಂದು ಹೇಳಲ್ಪಡವುದು ಸಧ್ಯಕ್ಕೆ ಹಾಸ್ಯಾಸ್ಪದವೇ ಆಗಿದೆ. ಸ್ವತ: ಅಣ್ಣಾ ಹಜಾರೆ ಹೇಳುವಂತೆ ಇನ್ನು ಹತ್ತು ವರ್ಷಗಳಲ್ಲಷ್ಟೇ ಇದರ ಪರಿಣಾಮವನ್ನು ನಿರಿಕ್ಷಿಸಬಹುದು.

ಅಣ್ಣಾ ಹಜಾರೆ ಜನಲೋಕಪಾಲ್ ಮಸೂದೆಯಲ್ಲಿ ಸಂಸತ್ ಮೀರಿದ ಮತ್ತು ಪ್ರಧಾನ ಮಂತ್ರಿ,ನ್ಯಾಯಾಧೀಶರನ್ನು ಹದ್ದುಬಸ್ತಿನಲ್ಲಿಡುವ ಸೂಪರ್ ಪವರ್ ಲೋಕಪಾಲಕ್ಕೆ ಬೇಕೆಂದು ಪಟ್ಟು ಹಿಡಿದದ್ದು ನಿಜ. ಇದು ತುಂಬಾ ಸೂಕ್ಷ್ಮ ವಿಚಾರವೂ ಹೌದು ಭಾರತದ ದೇಶ ಸಂವಿಧಾನಕ್ಕೆ ಜಾಗತಿಕವಾಗಿ ಅತ್ಯಂತ ಮಹತ್ವದ ಸ್ಥಾನವಿದೆ. ಸಂವಿಧಾನದ ಆಶಯದಂತೆ ರಚನೆಯಾಗುವ ನ್ಯಾಯಾಂಗ/ಕಾರ್ಯಾಂಗ/ಶಾಸಕಾಂಗ ಗಳ ಪೈಕಿ ಶಾಸಕಾಂಗ ಮತ್ತು ಕಾರ್ಯಾಂಗ ನೈತಿಕತೆ ಕಳೆದುಕೊಂಡಿವೆ ಜನಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿವೆ ಆದರೆ ನ್ಯಾಯಾಂಗ ಇನ್ನೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಹೀಗಿರುವಾಗ ಲೋಕಪಾಲ ವ್ಯವಸ್ಥೆ ನ್ಯಾಯಾಂಗವನ್ನು ಆಳುವಂತಾಗಬಾರದಲ್ಲವೇ? ಅದೇ ರೀತಿ ಸಂವಿಧಾನದ ಆಶಯದಂತೆ ಸಂಸತ್ ನ ಮುಖ್ಯಸ್ಥನಾಗುವ ಪ್ರಧಾನಿ ಹೆಚ್ಚ ಶಕ್ತಿಶಾಲಿ. ಆ ಸ್ಥಾನಕ್ಕೆ ತನ್ನದೇ ಆದಂತಹ ಘನತೆ ಗೌರವಗಳಿವೆ ಮತ್ತು ರಿಯಾಯ್ತಿಗಳಿವೆ. ಹಾಗಾಗಿ ಪ್ರಧಾನಿಯನ್ನು ಸಹಾ ಲೋಕಪಾಲ ನಿಯಂತ್ರಿಸುವ ವ್ಯವಸ್ಥೆ ಸಂವಿಧಾನ ವಿರೋಧಿಯಾಗಿದೆಯಲ್ಲವೇ?

ಈಗಾಗಲೇ ದೇಶದಲ್ಲಿ ನಡೆದಿರುವ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಗೇಮ್ ಹಗರಣದ ಕೇಂದ್ರ ಬಿಂದುವಾಗಿ ಪ್ರಧಾನ ಮಂತ್ರಿಯವರನ್ನ ನೋಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಸಿಎಜಿ ನೇರ ವರದಿಯನ್ನು ನೀಡಿವೆ ಅಂದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾನೂನು ಅವರಿಗೂ ಅನ್ವಯವಾಗಬೇಕಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು ಆದರೆ ಪ್ರಧಾನಿಗೆ ಅತಿ ದೊಡ್ಡ ಹೊಣೆಗಾರಿಕೆಯಿದೆ ತನ್ನ ಕರ್ತವ್ಯವನ್ನು ನೋಡಿಕೊಳ್ಳಲು ಅನೇಕ ಮಂದಿ ಮಂತ್ರಿ ಮಾಗಧರು ಇರುತ್ತಾರೆ, ಐಎಎಸ್ ಅಧಿಕಾರಿಗಳಿರುತ್ತಾರೆ ಅವರು ಪ್ರಧಾನಿಗೆ ಆಗುಹೋಗುಗಳನ್ನು ಮನವರಿಕೆ ಮಾಡುವ, ದುರ್ವಿನಿಯೋಗವಾಗದಂತೆ ಹದ್ದಿನ ಕಣ್ಣಿಡುವ ವ್ಯವಸ್ಥೆಯನ್ನು ಮಾಡಬಹುದಲ್ಲವೇ ? ಇವುಗಳನ್ನು ನಿಯಂತ್ರಿಸಲು ಪ್ರಧಾನಿ ಅಸಮರ್ಥನಾದಾಗ ಆತ ರಾಜೀನಾಮೆ ಕೊಡಬಹುದು ಆಗ ಆತನ ಮೇಲೆ ಲೋಕಪಾಲ ಮಸೂದೆಯನ್ವಯ ಕ್ರಮ ಜರುಗಿಸಲು ಅವಕಾಶವಿದೆ. ಆದರೆ ಈ ವಿಚಾರದಲ್ಲಿ ಅಣ್ಣಾ ಕೊಂಚ ಬಿಗಿಪಟ್ಟು ಹಿಡಿದ ಮಾತ್ರಕ್ಕೆ ಹಿರಿಯ ಜೀವವನ್ನು ವಿನಾ ಕಾರಣ ಜರಿದು ಅಪಮಾನಿಸುವುದು ಸರಿಯೇ? ಸದರಿ ವಿಚಾರಗಳಲ್ಲಿ ಆಡಳಿತ ಪಕ್ಷವಿರಲಿ ವಿರೋಧ ಪಕ್ಷಗಳು ಕೂಡಾ ಅಣ್ಣಾ ಮನವಿಗೆ ಸ್ಪಂದಿಸಿಲ್ಲ ಮತ್ತು ಅಣ್ಣಾ ಕೂಡ ಸದರಿ ನಿಲುವಿನಿಂದ ಹಿಂದೆ ಸರಿದಿದ್ದಾರೆ ಹೀಗಿರುವಾಗ ಅವರನ್ನ ದೂಷಣೆ ಮಾಡುವುದು ಸರಿಯಲ್ಲ.

ಇನ್ನು ಹೋರಾಟ ವೀರರ ಕಥೆ. ನೈತಿಕತೆಯ ಚಳುವಳಿಯ ಬೆಂಬಲಕ್ಕೆ ಬಂದ ಅನೇಕ ರಾಜಕೀಯ ಪಕ್ಷಗಳು, ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಶ್ರೀ ಸಾಮಾನ್ಯರಲ್ಲಿ ಬಹುತೇಕರಿಗೆ ಚಳುವಳಿಯ ಆಶಯಗಳೇ ತಿಳಿಯದೇ ಹೋದುದು ದುರಂತದ ಸಂಗತಿ. ವಿದ್ಯಾರ್ಥಿಗಳ ಚಳುವಳಿಯಲ್ಲಿ ಗಾಂಭೀರ್ಯತೆ ಕಾಣಲಿಲ್ಲ ಜೋಶ್ ಎಂಬಂತೆ ಪ್ರತಿಬಿಂಬಿತವಾಯಿತು.ಕೆಲವು ಸಂಘಟನೆಗಳು ಪ್ರಚಾರದ ಸಲುವಾಗಿ ಬಂದು ಹೋದವು, ಬುದ್ದಿಜೀವಿಗಳೆನಿಸಿಕೊಂಡವರು ಕೆಲವರು ತಮ್ಮದೇ ಧಾಟಿಯಲ್ಲಿ ಬುದ್ದಿಹೀನರಂತೆ ಹೇಳಿಕೆ ನೀಡಿದರು.ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರ ಬೀಳಿಸಲು ಪ್ರತಿಭಟನೆಗೆ ಬಂದರು. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಸ್ಥೆಯ ಭ್ರಷ್ಟರು ಸಾಮೂಹಿಕ ನೆಲೆಗಟ್ಟಿನಲ್ಲಿ ಅಣ್ಣಾ ಗೆ ಜೈ ಎಂದದ್ದು ವಿಷಾಧವಲ್ಲದೇ ಮತ್ತೇನು.? ಜೆಪಿ ಚಳುವಳಿ ನಡೆದಾಗ ಅದರಲ್ಲಿದ್ದ ಬುದ್ದಿ ಜೀವಿಗಳು ಮತ್ತು ಮುತ್ಸದ್ದಿಗಳಂತಹವರು ಅಣ್ಣಾ ಹೋರಾಟದಲ್ಲಿ ಕಾರಬರಲಿಲ್ಲ ಆದರು ದೇಶದಲ್ಲಿ ರಕ್ತ ರಹಿತ ಕ್ರಾಂತಿಗೆ ಮತ್ತು ಗಾಂಧಿವಾದಕ್ಕೆ ಅಂತಿಮ ಜಯ ದೊರೆಯಿತಲ್ಲ ಎಂಬುದಷ್ಟೇ ಸಮಾಧಾನಕರ ಸಂಗತಿಯಲ್ಲವೇ?

Sunday, August 21, 2011

ಅಣ್ಣಾ ಹಜಾರೆ ಅಂದ್ರೆ ಯಾರು ಗೊತ್ತೇನ್ರೀ??

ಅದು 1962 ವರ್ಷ.ಭಾರತ ಮತ್ತು ಚೈನಾ ದೇಶದ ನಡುವಣ ಯುದ್ದದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯ ಸೈನಿಕರು ಹತರಾಗಿದ್ದರು. ಆಗ ಭಾರತ ಸರ್ಕಾರ ದೇಶಪ್ರೇಮ ಹೊಂದಿದ ಉತ್ಸಾಹಿ ಯುವಜನರನ್ನು ಭಾರತೀಯ ಸೇನೆಗೆ ಸೇರುವಂತೆ ಕರೆ ನೀಡಿತ್ತು. ಸರ್ಕಾರದ ಕರೆಗೆ ಒಗೊಟ್ಟ ರಾಲೇಗಾಂವ್ ಸಿದ್ದಿ ಗ್ರಾಮದ ಉತ್ಸಾಹಿ ಯುವ ತರುಣನೊಬ್ಬ 1963ರಲ್ಲಿ ಸೇನೆಗೆ ಸೇರಿದ. ಸಿಪಾಯಿಯಾಗುವ ಕನಸು ಹೊತ್ತಿದ್ದ ಆ ತರುಣ ತನ್ನ ಕಡಿಮೆ ಎತ್ತರದ ಕಾರಣದಿಂದಾಗಿ ಸೇನೆಯ ಟ್ರಕ್ ನಡೆಸುವ ಚಾಲಕನಾದ, ಆ ಮೂಲಕ ಭಾರತೀಯ ಸೇನೆಯ ಯೋಧನಾಗಿ ರೂಪುಗೊಂಡವನು ಸತತವಾಗಿ 15ವರ್ಷಗಳ ಸೇವೆಯಲ್ಲಿ ಸಿಕ್ಕಿಂ, ಭೂತಾನ್, ಜಮ್ಮು-ಕಾಶ್ಮೀರ, ಅಸ್ಸಾಂ ಮತ್ತು ಮಿಜೋರಾಂ, ಲೇಹ್-ಲಡಾಕ್ ಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ. ಅದೊಂದು ದಿನ ತನ್ನ ಸೇವಾವಧಿಯಲ್ಲೇ ವ್ಯವಸ್ಥೆಯ ಹುಳುಕುಗಳ ಬಗ್ಗೆ ಜಿಗುಪ್ಸೆ-ಅಸಹನೆಯನ್ನು ಹೊಂದಿದ್ದ, ಜೀವನದ ಪ್ರತೀ ಘಟ್ಟದಲ್ಲೂ ಎದುರಾಗುತ್ತಿದ್ದ ವ್ಯತಿರಿಕ್ತ ಪರಿಣಾಮಗಳು ಆ ಯೋಧನಿಗೆ ತೀವ್ರ ರೇಜಿಗೆ ಹುಟ್ಟಿಸಿಬಿಟ್ಟಿತ್ತು. ತನ್ನೆಲ್ಲ ಪ್ರಶ್ನೆಗಳನ್ನು ಸೇರಿದಂತೆ 2ಪುಟಗಳ ದೀರ್ಘ ಪತ್ರವನ್ನು ಬರೆದು ಆತ್ಮಹತ್ಯೆಗೆ ಯೋಜಿಸಿದ ಯುವಕನಿಗೆ ಹೊಸದೆಹಲಿಯ ರೈಲ್ವೇ ಸ್ಟೇಷನ್ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ಬುಕ್ ಸ್ಟಾಲ್ ಒಂದರಲ್ಲಿ ನೇತುಹಾಕಿದ್ದ ಪುಸ್ತಕ ಆಕರ್ಷಿಸಿತು. ಅದು ಸ್ವಾಮಿವಿವೇಕಾನಂದರು ಜೀವನದ ಉದಾತ್ತ ದ್ಯೇಯಗಳ ಬಗೆಗೆ ಬರೆದ ಪುಸ್ತಕ. ಪುಸ್ತಕ ಕೊಂಡು ಓದಿದ ಯುವಕನಿಗೆ ಆತ್ಮಹತ್ಯೆಗೆ ಮುನ್ನ ಬರೆದ 2ಪುಟಗಳ ಪತ್ರದಲ್ಲಿ ಎತ್ತಿದ್ದ ಹಲವು ಪ್ರಶ್ನೆಗಳಿಗೆ ಪುಸ್ತಕದಲ್ಲಿ ಉತ್ತರ ಲಭಿಸಿತ್ತು. ಪುಸ್ತಕ ಓದಿದ ಆತ ತನ್ನ ನಿಲುವು ಬದಲಿಸಿಕೊಂಡ ಹೊಸ ಜೀವನಕ್ಕೆ ತನ್ನನ್ನು ತೊಡಗಿಸಿಕೊಳ್ಳಲು ಅನುವಾದ. ಜೀವನವೆಂದರೆ ಅದು ವ್ಯರ್ಥವಲ್ಲ, ಸಾರ್ಥಕತೆಯನ್ನು ಕಾಣುವ ಬದುಕು ಎಂದು ಆಗ ಅವನಿಗೆ ಅನಿಸಲಾರಂಭಿಸಿತು. ಇದು ಆತನ ಯೋಚನಾ ಲಹರಿಯನ್ನು ಬದುಕಿನ ದಿಕ್ಕನ್ನು ಸಂಪೂರ್ಣವಾಗಿ ಯು ಟರ್ನ್ ತೆಗೆದುಕೊಳ್ಳುವಂತೆ ಮಾಡಿಬಿಟ್ಟಿತು. ಜನರ ಸೇವೆಗೆ ತನ್ನ ಜೀವನ ಮುಡಿಪು, ಅದರಲ್ಲೆ ನನ್ನ ಬದುಕಿನ ಸೇವೆ ಅಡಗಿದೆ ಎಂದು ಆತನಿಗೆ ಅನಿಸಿದ್ದೇ ತಡ ತನ್ನ ನಿರ್ಧಾರಕ್ಕೆ ಗಟ್ಟಿತನ ದೊರಕಿಸಿಕೊಂಡು ಬಿಟ್ಟ ಯೋಧ, ನವ ತರುಣನೇ ಅಣ್ಣಾ ಸಾಹೇಬ್ ಹಜಾರೆ!


ಇವತ್ತು ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ ವಿರೋಧಿ ಆಂಧೋಲನದ ಕ್ರಾಂತಿಯ ಕಿಡಿಯನ್ನು ಹೊತ್ತಿಸಿರುವ 74ರ ವಯೋವೃದ್ದ ಅಣ್ಣಾ ಹಜಾರೆ ತನ್ನ ಜೀವನದಲ್ಲಿ ಸಾಗಿ ಬಂದ ಹಾದಿ ತೋರುತ್ತಿರುವ ಬದ್ದತೆ ಇದೆಯಲ್ಲ ಅದು ಪ್ರಶ್ನಾತೀತವಾದುದು ಮತ್ತು ಯುವ ಜನತೆಗೆ ಆದರ್ಶಯುತವಾದುದು. ತನ್ನ 26ನೇ ವಯಸ್ಸಿನಲ್ಲೇ ಸಾರ್ವಜನಿಕ ಸೇವೆಗೆ ತನ್ನ ನಿರ್ಧಾರ ತೆಗೆದುಕೊಂಡು ಬ್ರಹ್ಮಚಾರಿಯಾಗಿಯೇ ಉಳಿಯುವ ಅಚಲ ನಿರ್ಧಾರ ಕೈಗೊಂಡ ಅಣ್ಣಾ 15ವರ್ಷಗಳ ಸೇನಾ ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು ಅಹಮ್ಮದ್ ನಗರ ಜಿಲ್ಲೆಯ ರಾಲೇ ಗಾಂವ್ ಸಿದ್ದಿ ಎಂಬ ಬರಪೀಡಿತ ಹಳ್ಳಿಗೆ ಬಂದು ನೆಲೆನಿಂತ. ಆ ಹಳ್ಳಿಯಲ್ಲಿ ವಾರ್ಷಿಕವಾಗಿ 400-500ಮಿಮಿ ಮಳೆಯಾಗುತ್ತಿದ್ದರೂ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹಲವು ಕಿಮಿಗಳ ದೂರದಿಂದ ಕುಡಿಯುವ ನೀರನ್ನು ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು, ಆಹಾರ ಧಾನ್ಯಗಳಿಗೆ ಅಕ್ಕಪಕ್ಕದ ಗ್ರಾಮದವರನ್ನ ಅವಲಂಬಿಸಬೇಕಾಗಿತ್ತು. ಅರಾಜಕತೆಯ ತಾಣವಾಗಿದ್ದ ಗ್ರಾಮದಲ್ಲಿ ಸಲೀಸಾಗಿ ಸಿಗುತ್ತಿದ್ದುದು ಸಾರಾಯಿ ಮಾತ್ರ! ಇದೆಲ್ಲವನ್ನೂ ಮನಗಂಡ ಅಣ್ಣಾ ಗ್ರಾಮದ ಜನರನ್ನೆಲ್ಲ ಒಗ್ಗೂಡಿಸಿದರು. ದೊರೆಯುತ್ತಿದ್ದ ಅಲ್ಪ ನೀರನ್ನೇ ಸಂರಕ್ಷಣೆ ಮಾಡುವುದು ಹೇಗೆ,ಆಹಾರ ಧಾನ್ಯ ಸ್ವಾವಲಂಬನೆ ಸಾಧಿಸುವುದು ಹೇಗೆ?ಸಾಮಾಜಿ ಅನಿಷ್ಠಗಳನ್ನು ತಡೆಯಲು ಏನು ಮಾಡಬೇಕು ಎಂದೆಲ್ಲಾ ಚಿಂತಿಸಿದರು ಅದಕ್ಕೆ ಪೂರಕವಾದ ಮಾರ್ಗೋಪಾಯಗಳನ್ನು ರೂಪಿಸುವ ಮೂಲಕ ಅಭಿವೃದ್ದಿಯ ಮುನ್ನುಡಿಯನ್ನು ಬರೆದರು. 50ಕ್ಕೂ ಹೆಚ್ಚು ನಾಲಾ ಬಂಡಿಂಗ್ ನಿರ್ಮಾಣವಾಯಿತು. ನೀರು ಸಂಗ್ರಹಕ್ಕೆ ಬ್ಯಾರೇಜ್ ನಿರ್ಮಾಣ ಮಾಡಲಾಯಿತು. ಅನಾಮತ್ತಾಗಿ 500ಎಕರೆ ಪ್ರದೇಶದಲ್ಲಿ ಗಿಡ ನೆಟ್ಟು ಅರಣ್ಯವನ್ನು ಬೆಳೆಸಲಾಯಿತು. ಗ್ರಾಮ ಪಂಚಾಯ್ತಿಗೆ ಪುನಶ್ಚೇತನ ನೀಡಿದ ಅಣ್ಣಾ ಅದನ್ನು ಶಕ್ತಿಯುತ ಕೇಂದ್ರವಾಗಿ ರೂಪುಗೊಳಿಸಿದರು. ಗ್ರಾಮಕ್ಕೆ ಬೇಕಾದ ಸ್ಕೂಲು, ಆಸ್ಪತ್ರೆ, ಹಾಸ್ಟೆಲುಗಳನ್ನು ಸಹಾ ಕಟ್ಟಿದ ಅಣ್ಣಾ ಇದಕ್ಕಾಗಿ ಬಳಸಿದ್ದು ಒನ್ಸ್ ಎಗೇನ್ ಅದೇ ಗ್ರಾಮದ ಜನರನ್ನು! ಅಂದರೆ ಜನಶಕ್ತಿಯನ್ನೆ ಬಂಡವಾಳ ಮಾಡಿಕೊಂಡ ಅಣ್ಣಾ ತಾನಂದುಕೊಂಡಿದ್ದನ್ನೆಲ್ಲ ಸಾಕಾರ ಮಾಡಿಕೊಂಡರು. ಇದೀಗ ಅಣ್ಣಾ ಹಜಾರೆಯ ಗ್ರಾಮದ ದೇಶದ ಆದರ್ಶ ಗ್ರಾಮವಾಗಿ ಮಾರ್ಪಟ್ಟದೆ ದೇಶ ವಿದೇಶಗಳಿಂದ ಜನ ಅಲ್ಲಿಗೆ ಬರುತ್ತಿದ್ದಾರೆ. ಅಭಿವೃದ್ದಿಗೆ ಅದು ಮಾದರಿಯಾಗಿ ನಿಂತಿದೆ.

1991ರಲ್ಲಿ ಅಣ್ಣಾ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನು ಸಂಘಟಿಸಿದರು. ಆಗ ಮಹಾರಾಷ್ಟ್ರದಲ್ಲಿ 42ಜನ ಅರಣ್ಯಾದಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಹಲವು ಕೋಟಿ ರೂಪಾಯಿಗಳನ್ನು ವಂಚಿಸಿದ್ದರು. ಈ ವಂಚನೆಯ ವಿರುದ್ದ ದಾಖಲೆಗಳೊಂದಿಗೆ ಹೋರಾಡಿದ ಅಣ್ಣಾ ನಿಗೆ ಸೋಲು ಕಾದಿತ್ತು. ಯಾಕೆಂದರೆ ಸದರಿ ಹಗರಣದಲ್ಲಿ ಪ್ರಭಾವ ಶಾಲಿ ಮಂತ್ರಿಯೋರ್ವನ ಕೈವಾಡವೂ ಇತ್ತು.ಬೇಸತ್ತ ಅಣ್ಣಾ ಆಗ ತಮಗೆ ಕೊಡಮಾಡಿದ್ದ ಪದ್ಮಶ್ರೀ ಪುರಸ್ಕಾರ ಹಾಗೂ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ನೀಡಿದ್ದ ವೃಕ್ಷಮಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಿದರು, ಧೃತಿಗೆಡದ ಅಣ್ಣಾ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ಉಪವಾಸ ಕುಳಿತರು ಕಡೆಗೆ ಮಣಿದ ಸರ್ಕಾರ ಸದರಿ ಹಗರಣಕ್ಕೆ ಸಂಬಂದಿಸಿದಂತೆ 6ಮಂದಿ ಮಂತ್ರಿಗಳನ್ನು 400ಮಂದಿ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಮಾಡಿತು. ಈ ಪ್ರಕರಣದಲ್ಲಿ ಅಗತ್ಯ ಮಾಹಿತಿಗಳ ಅವಶ್ಯಕತೆಯನ್ನು ಮನಗಂಡ ಅಣ್ಣಾ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರುವಂತೆ 1997ರಲ್ಲಿ ಚಳುವಳಿ ಆರಂಭಿಸಿದರು. ತೀವ್ರ ಒತ್ತಡದ ಪರಿಣಾಮ 2003ರಲ್ಲಿ ರಾಷ್ಟ್ರಪತಿಯವರು ಮಾಹಿತಿ ಹಕ್ಕು ಕಾಯ್ದೆಯನ್ನು ದೇಶಾಧ್ಯಂತ ಜಾರಿಗೆ ತರಲು ಅಂಕಿತ ಹಾಕಬೇಕಾಯ್ತು. ಇಂತಹ ಅಣ್ಣಾ ಹಜಾರೆ ಇವತ್ತು ಪ್ರಬಲ ಲೋಕಪಾಲ ಮಸೂದೆಗೆ ಪಟ್ಟು ಹಿಡಿದು ಕುಳಿತಿದ್ದಾರೆ ಇಡೀ ದೇಶದ ಜನತೆ ಇವತ್ತು ಅಣ್ಣಾ ಹಿಂದೆ ಹೊರಟಿದೆ, ಜಾಗತಿಕವಾಗಿ ಯಾವ ದೇಶದಲ್ಲೂ ಈ ಮಟ್ಟಿಗಿನ ಭ್ರಷ್ಟಾಚಾರದ ವಿರುದ್ದದ ಹೋರಾಟ ನಡೆದಿರಲಾರದು. 2ನೇ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸುವಂತೆ ಆಂಧೋಲನ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಅಣ್ಣಾ ಹಜಾರೆಯ ಬೆಂಬಲಕ್ಕೆ ನಾವೂ ಕೈ ಜೋಡಿಸಬೇಕಲ್ಲವೇ???? (ಸಶೇಷ)

Sunday, August 14, 2011

ಸ್ವಾತಂತ್ರ್ಯ ಎಲ್ಲಿಗೆ ಬಂತು ? ಯಾರಿಗೆ ಬಂತು?

ಇವತ್ತು 64ನೇ ಸ್ವಾತಂತ್ರ್ಯ ದಿನಾಚರಣೆ,ದೇಶಕ್ಕೆ ಸ್ವಾತಂತ್ರ್ಯ ಬಂದು 6ವರೆ ದಶಕಗಳು ಸದ್ದಿಲ್ಲದಂತೆ ಸರಿದು ಹೋಗಿವೆ. ಸತತವಾಗಿ 90ವರ್ಷಗಳಿಗೂ ಅಧಿಕ ಕಾಲ ನೆತ್ತರು ಹರಿಸಿ, ಮಾನಸಿಕ ತೊಳಲಾಟಕ್ಕೆ ಸಿಲುಕಿ , ಅಪಮಾನವನ್ನೆದುರಿಸಿ ಗಳಿಸಿದ ಸ್ವಾತಂತ್ರ್ಯದ ಪರಿಕಲ್ಪನೆ ಇವತ್ತು ಹೇಗಿದೆ? ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ದೇಶದಲ್ಲಿ ಆಗಿಹೋದ ಘಟನೆಗಳು, ಪ್ರಸಕ್ತ ರಾಜಕೀಯ,ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಗಳು ಹೇಗಿವೆ? ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದು ಯಾರಿಗೆ ? ಸ್ವತಂತ್ರ ಭಾರತದಲ್ಲಿ ಆಗುತ್ತಿರುವುದೇನು? ಎಂಬೆಲ್ಲ ಪ್ರಶ್ನೆಗಳು ನಮ್ಮೆದುರಿಗಿವೆ. 

       ಭಾರತೀಯ  ಎನಿಸಿಕೊಂಡ ಪ್ರತಿಯೊಬ್ಬರು ಪ್ರಜ್ಞಾಪೂರ್ವಕವಾಗಿ ಸ್ವಾತಂತ್ರ್ಯದ  ಆಶೋತ್ತರಗಳನ್ನು ಅರಿಯುವುದು ಅನಿವಾರ್ಯವಾಗಿದೆ. ಪ್ರಸಕ್ತ ವಿದ್ಯಮಾನಗಳು ನಮ್ಮ ಹಿರಿಯುರು  ಕಷ್ಟಪಟ್ಟು ದೊರಕಿಸಿಕೊಟ್ಟ ನೈಜ ಆಶಯಗಳಿಗೆ ಪೂರಕವಾಗಿ ನಡೆಯುವ ಬದಲಾಗಿ ತದ್ವಿರುದ್ದದ ದಿಕ್ಕಿನಲ್ಲಿ ಸಾಗಿವೆ. ಸಧ್ಯ ದೇಶದಲ್ಲಿ 2001ರ ಜನಗಣತಿ ಅಂಕಿಅಂಶಗಳ ಪ್ರಕಾರ ಹಿಂದೂಗಳೂ ಶೇ.80.5ರಷ್ಟು,ಮುಸ್ಲಿಂ ಶೇ.13.4%,ಕ್ರಿಶ್ಚಿಯನ್ ಶೇ.2.3%, ಸಿಖ್ಖರು 1.9% ಮಂದಿ ಇದ್ದಾರೆ.2011ರ ಜನಗಣತಿಯ ಪ್ರಕಾರ ದೇಶದಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 640ಜಿಲ್ಲೆಗಳೂ,5924 ಉಪಜಿಲ್ಲೆಗಳು,7935ನಗರಗಳು,6,40,867ಹಳ್ಳಿಗಳು ದಾಖಲಾಗಿವೆ. ಅಂದರೆ 10ವರ್ಷಗಳಲ್ಲಿ 47ರಾಜ್ಯಗಳು,461ಉಪ ಜಿಲ್ಲೆಗಳು, 224ನಗರಗಳು, 2279ಹಳ್ಳಿಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಅನಾಮತ್ತು 1,210ಮಿಲಿಯನ್ ಜನಸಂಖ್ಯೆ ಯನ್ನು ಹೊಂದಿರುವ ದೇಶ ಜಾಗತಿಕವಾಗಿ ಜನಸಂಖ್ಯೆಯಲ್ಲಿ 2ನೇ ಸ್ಥಾನ ಗಿಟ್ಟಿಸಿದೆ. ಕಳೆದ ಒಂದು ಶತಮಾನದ ಜನಸಂಖ್ಯೆಗೆ ಇದನ್ನು ಹೋಲಿಕೆ ಮಾಡುವುದಾದರೆ 4ಪಟ್ಟು ಜನಸಂಖ್ಯೆ ಏರಿಕೆ ಕಂಡಿದೆ. 1901ರಲ್ಲಿ ಇದ್ದ ಜನಸಂಖ್ಯೆ ಪ್ರಮಾಣ 238.4ಮಿಲಿಯನ್! 
            ದೇಶದಲ್ಲಿ 6000ಕ್ಕೂ ಮಿಕ್ಕಿದ ವಿವಿಧ ವರ್ಗದ ಜನಾಂಗದವರಿದ್ದಾರೆ ಸಂಸ್ಕೃತಿಯ ನೂರಾರು ವಿಧಗಳು ಇಲ್ಲಿ ಕಾಣುತ್ತವೆ. ದೇಶದ ಸಾಂಸ್ಕೃತಿಕ ಪರಂಪರೆಗೆ 5500ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ಧಾರ್ಮಿಕ/ದಾರ್ಶನಿಕ ಪರಂಪರೆಯ ವಿಚಾರಕ್ಕೆ ಬಂದರೆ  ಜಾಗತಿಕವಾಗಿ ಸಮಸ್ತ ದೇಶಗಳಿಗೂ ಸಡ್ಡು ಹೊಡೆದು ಸವಾಲಾಗಿ ನಿಲ್ಲಬಲ್ಲ ಛಾತಿ ಭಾರತಕ್ಕಿದೆ.ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಶೇ.5ರಷ್ಟು ಜಿಡಿಪಿ ಯನ್ನು ಆರ್ಥಿಕ ಕ್ಷೆತ್ರದ ಹಿನ್ನೆಡೆ ಇವತ್ತು ಜಗತ್ತಿಗೆ ಸವಾಲಾಗುವಂತೆ ಶೇ.10ಕ್ಕೇರಿದೆ, ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವನ್ನೇ ನಮ್ಮಡೆಗೆ ನೋಡುವಂತೆ ಮಾಡಿದೆ. ಕಂಪ್ಯೂಟರ್ ಕ್ಷೇತ್ರದ ಸಾಧನೆ ಜಗತ್ತಿನಲ್ಲಿ ಸಾರ್ವಕಾಲಿಕವಾದ ಛಾಪು ಮೂಡಿಸಿದೆ. ಜಗತ್ತಿನ ಯಾವುದೇ ರಾಷ್ಟ್ರ ಕಂಪ್ಯೂಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಸೇವೆಗಳಿಗಾಗಿ ಭಾರತದ ಯುವ ಜನಾಂಗದತ್ತ ನೋಡುವಂತಹ ಹೆಮ್ಮೆಯ ಸಾಧನೆಯಿದೆ. ಅಮೇರಿಕಾದಂತಹ ದೇಶದ ಬಲಿಷ್ಠ ಅಧ್ಯಕ್ಷ ಬಾರಕ್ ಒಬಾಮ ಭಾರತೀಯ ತರುಣರ ಕುರಿತು ಎಷ್ಟರ ಮಟ್ಟಿಗೆ disturb ಆಗುತ್ತಾನೆಂದರೆ  ಅಧಿಕಾರಕ್ಕೆ ಬಂದ ತಕ್ಸಣ ಭಾರತೀಯರಿಗೆ ಹೊರಗುತ್ತಿಗೆ ಸೇವೆಯನ್ನು ರದ್ದು ಗೊಳಿಸುತ್ತಾನೆ. ತನ್ನ ದೇಶದ ಆರ್ಥಿಕತೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ಸರಿದೂಗಿಸುಲು ಹರ ಸಾಹಸ ಮಾಡುತ್ತಾನೆಂದರೆ ಅದಕ್ಕೆ ಭಾರತ ದೇಶ ಮತ್ತು ಇಲ್ಲಿನ್ ವಿದ್ವತ್,ಶೈಕ್ಷಣಿಕ ಸಂಪನ್ನರಾದ ಯುವ ಭಾರತದ ತರುಣರು ಕಾರಣವಲ್ಲವೇ?

              ಆದರೆ ಇಂತಹ ದೇಶದಲ್ಲಿ ಕಳೆದ 6ದಶಕಗಳಲ್ಲಿ ಆಗಿರುವುದೇನು?  ಸ್ವಾತಂತ್ರ್ಯದ ಪರಿಕಲ್ಪನೆ ಎಷ್ಟರ ಮಟ್ಟಿಗಿದೆ? ಎಂಬ ವಿಚಾರಗಳು ಗಹನವಾಗಿ ಚರ್ಚೆಯಾಗಬೇಕು. ದೇಶದಲ್ಲಿ ಕೋಮುಗಲಭೆಗಳಾಗಿವೆ, ಇನ್ನಿಲ್ಲದಂತ 'ಬರ' ನಮ್ಮನ್ನಾವರಿಸಿದೆ, ಕೃಷಿ ಕ್ಷೇತ್ರಗಳು ಕೈಗಾರಿಕ ಆರ್ಥಿಕ ವಲಯಗಳಿಂದಾಗಿ ಕಡಿಮೆಯಾಗುತ್ತಿವೆ, ಭೂಮಿ ಕಳೆದುಕೊಂಡ ರೈತ ನಗರ ಪ್ರದೇಶಗಳಲ್ಲಿ ಬಂಡವಾಳಶಾಹಿಗಳ ಗುಲಾಮ ಗಿರಿ ಮಾಡಲು ಹೊರಟ್ಟಿದ್ದಾನೆ.  ರಾಜಕೀಯ ಅರ್ಥ ಕಳೆದುಕೊಂಡಿದ್ದು ಬಂಡವಾಳ ಶಾಹಿಗಳು ರಾಜಕೀಯಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥ ಹೀನವಾಗಿ ಹೋಗಿದೆ.  ರಾಜಕೀಯ ನೇತಾರರ ಪರಿಪಕ್ವವಿಲ್ಲದ ನಿಲುವುಗಳೂ, ಸ್ವಾರ್ಥ ಸಾಧನೆಯ ಹಪಾಹಪಿ ದೇಶವನ್ನೇ ಬಂಡವಾಳಶಾಹಿಗಳಿಗೆ ಒಪ್ಪಿಸುವ ಮೂಲಕ ಮತ್ತೆ ಸ್ವಾತಂತ್ರ್ಯ ಭಾರತದ  ಆಶೋತ್ತರಗಳಿಗೆ ಧಕ್ಕೆ ತಂದಿದ್ದಾರೆ. ನಮಗೆ ಗೊತ್ತಿಲ್ಲದಂತೆ ಬಂಡವಾಳ ಶಾಹಿಗಳೂ ಎಲ್ಲ ದಿಕ್ಕುಗಳಿಂದಲೂ ಶ್ರೀ''ಸಾಮಾನ್ಯ'' ನನ್ನು ಆಳಲಾರಂಭಿಸಿದ್ದಾರೆ.ಸಾಮಾಜಿಕ/ ಧಾರ್ಮಿಕ ವ್ಯವಸ್ಥೆಯ ಕಟ್ಟುಪಾಡುಗಳೂ ಕೊಂಚವೂ ಬದಲಾಗದೇ ಹಾಗೆಯೇ ಉಳಿದುಕೊಂಡಿವೆ. ಧಾರ್ಮಿಕ ವ್ಯವಸ್ಥೆ ಕೂಡಾ ಬಂಡವಾಳಶಾಹಿ ಎಲ್ಲ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದೊಡ್ಡ ನಿರಾಶೆಯನ್ನು ಹುಟ್ಟುಹಾಕಿದೆ. ಸಾಮಾಜಿಕ ಅನಿಷ್ಠಗಳನ್ನು ತೊಡೆಯಲು ಸಂವಿಧಾನ  ಎಲ್ಲ ರೀತಿಯ ರಕ್ಷಣೆ ಒದಗಿಸಿದ್ದರೂ ಕೂಡ ಅದು ಪುಸ್ತಕದ ಬದನೇಕಾಯಿ ಆಗಿದೆ. ಇವತ್ತಿಗೂ ಜೀತಪದ್ದತಿ, ಮಲಹೊರುವ ಪದ್ದತಿ , ಜಾತಿ ಪದ್ದತಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ನಡೆಯುತ್ತಿವೆ. ಆದರೆ ಪ್ರಗತಿ ಪರ ಮುಖವಾಡಗಳ ಮರೆಯಲ್ಲಿ ಇವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿಲ್ಲವಷ್ಡೆ. 
          ಇವತ್ತು ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬಡತನ, ಹಸಿವು, ಜಾತೀಯತೆಯ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಕಾರಣ ಅನುಷ್ಠಾನ ಹಂತದಲ್ಲಿ ಆಗುತ್ತಿರುವ ಲೋಪದೋಷಗಳು, ಮಿತಿಮೀರಿದ ಭ್ರಷ್ಟಾಚಾರ ಪಕ್ಷಪಾತ ಧೋರಣೆ ಕಾರಣವಾಗಿವೆ. ಜನರ ಮೂಲಭೂತ ಸಮಸ್ಯೆಗಳನ್ನೆ ಬಂಡವಾಳ ಮಾಡಿಕೊಂಡು ಅಧಿಕಾರಕ್ಕೆ ಬರುವ ರಾಜಕೀಯ ನೇತಾರರು ಅಧಿಕಾರ ಸಿಕ್ಕ ತಕ್ಷಣ ಮೂಲ ವಿಷಯಗಳನ್ನು ಬದಿಗೆ ಸರಿಸಿ ಭ್ರಷ್ಟಾಚಾರಕ್ಕೆ ಒತ್ತಾಸೆಯಾಗಿ ನಿಲ್ಲುತ್ತಿದ್ದಾರೆ. ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರ ಖರೀದಿ, ಭೋಫೋರ್ಸ್ ಹಗರಣ, ಭೂಪಾಲ್ ಅನಿಲ ದುರಂತ, 70ರ ದಶಕದ ತುರ್ತು ಪರಿಸ್ಥಿತಿ, ಕಾಮನ್ ವೆಲ್ತ್ ನ ಹಗರಣ, 2ಜಿ ಸ್ಪೆಕ್ರ್ಟ್ಂ ಹಗರಣ  ಇತ್ಯಾದಿಗಳು ನಮ್ಮ ನೈತಿಕ ದಿವಾಳಿತನವನ್ನು, ನಿರ್ವಹಣೆಯ ಅಸಮರ್ತತೆಯನ್ನು ಎತ್ತಿ ತೋರಿಸುತ್ತಿವೆ. 70ರ ದಶಕದಲ್ಲಿ ಸ್ವತಂತ್ರ ಭಾರತ ಪ್ರಗತಿಗೆ ಪೂರಕವಾದ ಚಳುವಳಿಗಳು ಬಂದವಾದರೂ ಮುಂದಿನ ದಿನಗಳಲ್ಲಿ ದಿಕ್ಕು ತಪ್ಪಿದ ನಾವೆಯಂತಾದ ಚಳುವಳಿಗಳು ಪರಿಸ್ಥಿತಿಯ ಕೈಗೊಂಬೆಯಾಗಿದ್ದು ದುರಂತವೇ ಸರಿ. ಸ್ವಾತಂತ್ರ್ಯ ಎಂದರೆ ಸ್ವೇಚ್ಚಾಚಾರವಲ್ಲ ಅದರ ಹಿಂದೆ ಕೋಟ್ಯಾಂತ ಜೀವಗಳ ಭಾವನೆಯಿದೆ ಸುಂದರ ರಾಷ್ಟ್ರದ ಪರಿಕಲ್ಪನೆಯಿದೆ, ಅದಕ್ಕೆ ಪೂರಕವಾದ ವಿಚಾರಗಳ ಸಾಂಗತ್ಯವಿದೆ ಆದರೆ ಅವನ್ನೆಲ್ಲ ಕಡೆಗಣಿಸುವ ಮೂಲಕ ಮಸಿಬಳಿಯಲಾಗುತ್ತಿದೆ. ಶ್ರೀ ಸಾಮಾನ್ಯನ ಜಾಗೃತಿ ಮತ್ತು ಪಾಲ್ಗೊಳ್ಳುವಿಕ ಮಾತ್ರ ಸಧೃಢ ರಾಷ್ಟ್ರದ ನಿರ್ಮಾಣಕ್ಕೆ ತಳಹದಿಯನ್ನು ಭದ್ರಪಡಿಸಬಲ್ಲದು. ರಾಷ್ಟ್ರೀಯತೆಯ ಕೆಚ್ಚು ಪ್ರತಿಯೊಬ್ಬ ಭಾರತೀಯನಿಗೆ ಬಂದಾಗ ಮಾತ್ರ ಅದು ಸಾಧ್ಯವಾದೀತು ಅಲ್ಲವೇ?

Wednesday, August 3, 2011

ಕೋಲ್ಗೇಟ್ ನಗೆಯ ಸರದಾರ,ಈಗ ರಾಜ್ಯದ ನೇತಾರ!

ಕರ್ನಾಟಕ ರಾಜ್ಯದ ಒಬ್ಬ ಪರಮ ಭ್ರಷ್ಟ ಮುಖ್ಯಮಂತ್ರಿಯ ನಿರ್ಗಮನದ ನಂತರ ಶ್ರಮಿಕ ವರ್ಗದ ನೇತಾರ, ವಿದ್ಯಾರ್ಥಿ ಪರಿಷತ್ ನ ಯೂತ್ ಐಕಾನ್ , ವಕೀಲ, ಸಂಸದ ಹಾಗೂ ಶುದ್ದ ಹಸ್ತರೆನಿಸಿದ ಡಿ ವಿ ಸದಾನಂದ ಗೌಡ ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅಷ್ಟರ ಮಟ್ಟಿಗೆ ಭಾರತೀಯ ಜನತಾ ಪಕ್ಷ ದಕ್ಷಿಣ ಭಾರತದಲ್ಲಿ ತನ್ನ ವರ್ಚಸ್ಸಿಗೆ ಉಂಟಾಗಿದ್ದ  ಹಾನಿಯನ್ನು ಸ್ವಲ್ಪಮಟ್ಟಿಗಾದರೂ ತೊಡೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬ ಆಶಾಭಾವನೆ ಮೂಡಿಸಿದೆಯಾದರೂ ಆತ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನ ಹಾಟ್ ಫೇವರಿಟ್ ಎಂಬುದು ಮಾತ್ರ ಬೇಸರ ಭಾವ ಮೂಡಿಸಿದೆ. ಶತಾಯ ಗತಾಯ ಪಕ್ಷದ ವರ್ಚಸ್ಸು ಕಾದುಕೊಳ್ಳುವ ನಿಟ್ಟಿನಲ್ಲಿ ಬಾಜಪ ತೆಗೆದುಕೊಂಡ ಕಠಿಣ ನಿಲುವು ನಾಯಕತ್ವ ಬದಲಾವಣೆಗೆ ನಾಂದಿ ಹಾಡಿದೆ. ಇಂತಹ ಸನ್ನಿವೇಶದಲ್ಲಿ ಮುಳ್ಳು ಹಾದಿಯನ್ನು ಕ್ರಮಿಸಬೇಕಿರುವ ಡಿ ವಿ ಸದಾನಂದಗೌಡ ಆದ್ಯತೆಗಳೇನು? ಅವರು ಸಾಗಿಬಂದ ಹಿನ್ನೆಲೆ ಏನು? ಮಾಜಿ ಮುಖ್ಯಮಂತ್ರಿಯ ಅಡಿಯಾಳಾಗುವ ಮೂಲಕ ರಾಜ್ಯದಲ್ಲಿ ತಮಿಳುನಾಡು ಮಾದರಿಯ ಮತ್ತೊಬ್ಬ ಸೆಲ್ವಂ ಆಗುವರೇ? ಗಣಿ ವರದಿ ಕುರಿತು ಎಂತಹ ನಿಲುವು ತಳೆಯಬಹುದು? ಪಕ್ಷದ ಭ್ರಷ್ಟರನ್ನು ಮಟ್ಟ ಹಾಕುವರೇ? ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಬಲ್ಲರೇ ಎಂಬುದು ಸಧ್ಯ ನಮ್ಮೆದುರಿಗಿರುವ ಪ್ರಶ್ನೆಗಳು.
              ಡಿ ವಿ ಸದಾನಂದ ಗೌಡ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೇಕೋಲು ಗ್ರಾಮದ ದೇವರಗುಂಡ ಕುಟುಂಬದ ಸಾಮಾನ್ಯ ಕುಟುಂಬಕ್ಕೆ ಸೇರಿದವರು. ತಂದೆ ವೆಂಕಪ್ಪಗೌಡ, ತಾಯಿ ಕಮಲ, ಜನನ 1953ರಲ್ಲಿ.ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಸುಳ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣವನ್ನು ಮುಗಿಸಿದ ಗೌಡರು ಕಾಲೇಜು ವಿದ್ಯಾಭ್ಯಾಸ ಮುಂದುವರೆಸಿದ್ದು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನಲ್ಲಿ. ಅದೇ ಕಾಲೇಜಿನಿಂದ ಬಿಎಸ್ಸಿ ಪಧವೀಧರರಾದ ಗೌಡರು ಮುಂದೆ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಶಿಕ್ಷಣ ಪೂರೈಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ವಿಧ್ಯಾರ್ಥಿ ಚಳುವಳಿಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳಲಾರಂಭಿಸಿದ ಗೌಡರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ನಾಯಕನಾಗಿ ರೂಪುಗೊಳ್ಳಲು ಅತ್ಯತ್ತಮ ವೇದಿಕೆಯನ್ನು ಒದಗಿಸಿತು. ನಂತರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತನಾಗಿ ರೂಪುಗೊಂಡ ಗೌಡರು 1976ರಲ್ಲಿ ಸುಳ್ಯ ಮತ್ತು  ಪುತ್ತೂರಿನಲ್ಲಿ ವಕೀಲಿಕೆ ವೃತ್ತಿಯನ್ನು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿಯೂ ಕಾರ್ಯ ನಿರ್ವಹಿಸಿದ ಗೌಡರಿಗೆ ರಾಜಕೀಯ ಸೆಳೆತವೂ ಆಗಾಗ್ಯೆ ಕಾಡುತ್ತಲೇ ಇತ್ತು. ವಕೀಲಿಕೆಯ ದಿನಗಳಲ್ಲೇ ಸಾರ್ವಜನಿಕ ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ  ಡಿವಿಎಸ್ ಸರ್ಕಾರಿ ಅಭಿಯೋಜಕರಾಗಿ ನಿಯುಕ್ತಿಗೊಂಡ ಅಲ್ಫಾವಧಿಯಲ್ಲೇ ತಮ್ಮ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿಬಿಟ್ಟರು. ಅಷ್ಟರಮಟ್ಟಿಗೆ ಅವರ ರಾಜಕೀಯ ಸೆಳೆತ ಅವರನ್ನು ಆಕರ್ಷಿಸಿತ್ತು. 1981ರಲ್ಲಿ ಡಾಟಿ ಎಂಬುವವರನ್ನು ವರಿಸಿದ ಗೌಡರಿಗೆ ತಾಂತ್ರಿಕ ಶಿಕ್ಷಣ ಪೂರೈಸಿರುವ ಕಾರ್ತಿಕ್ ಎಂಬ ಪುತ್ರನೂ ಇದ್ದಾನೆ. 
           ಸಹಕಾರಿ ಚಳುವಳಿಗಳಲ್ಲಿ ತೊಡಗಿಕೊಂಡ ಗೌಡರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಹಕಾರಿ  ಬ್ಯಾಂಕಿನ ಉಪಾಧ್ಯಕ್ಷರೂ ಕೂಡ ಆಗಿದ್ದರು ಎಂಬುದು ಗಮನಾರ್ಹ. ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್, ಕ್ಯಾಂಪ್ಕೋ ಮತ್ತಿತರ ಸಹಕಾರಿ ವಲಯಗಳಲ್ಲಿ ಸಾರ್ವಜನಿಕ ಪ್ರತಿನಿಧಿಯಾಗಿ ಸೇವೆಗೈದ ಗೌಡರು ಶ್ರಮಿಕ ವರ್ಗದ ನ್ಯಾಯೋಚಿತ ಹೋರಾಟಗಳಿಗೆ ಧ್ವನಿಯಾಗುವ ಮೂಲಕ ಕಾರ್ಮಿಕ ವರ್ಗದ ನೇತಾರರಾಗಿಯೂ ರೂಪುಗೊಂಡರು. ಭಾರತೀಯ ಮಜ್ದೂರ್ ಸಂಘ, ಆಟೋ ರಿಕ್ಷಾ ಮತ್ತು ಮಾಲೀಕರ ಸಂಘದ ಅಧ್ಯಕ್ಷ , ಬೀಡಿ ಮಜ್ದೂರ್ ಸಂಘದ ಅಧ್ಯಕ್ಷ, ಕರ್ನಾಟಕ ಕೈಗಾರಿಕೆಗಳ ಸಿಬ್ಬಂದಿ ಯೂನಿಯನ್ ಅಧ್ಯಕ್ಷ ರಾಗಿದ್ದುದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಗೌಡರು ಸುಖಾ ಸುಮ್ಮನೆ ಪ್ರವರ್ಧಮಾನಕ್ಕೆ ಬಂದವರಲ್ಲವೆಂಬುದನ್ನು ಸಾಕ್ಷೀಕರಿಸುತ್ತವೆ. ರಾಜಕೀಯದ ಒಳ ಹೊರಗುಗಳನ್ನು ಅರಿಯುವ ಸಲುವಾಗಿ ಜನಸಂಘದ ಪ್ರಾಥಮಿಕ ಸದಸ್ಯತ್ವ ಪಡೆದ ಗೌಡರು ಮುಂದೆ ಸುಳ್ಯದ ಭಾಜಪ ಕ್ಷೇತ್ರ ಅಧ್ಯಕ್ಷರಾಗಿ ಆಯ್ಕೆಯಾದರು. ಹಾಗೆಯೇ ಯುವಮೋರ್ಚಾದ ನಾಯಕರಾಗಿ ರಾಜ್ಯದ ಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿಯೂ ವಿವಿಧ ಸ್ಥಾನಗಳನ್ನು ಪಕ್ಷದಲ್ಲಿ ಅಲಂಕರಿಸಿ 2006ರಲ್ಲಿ ಮೊದಲ ಭಾರಿಗೆ ರಾಜ್ಯ ಭಾಜಪ ಅಧ್ಯಕ್ಷರಾಗುವ ಮೂಲಕ ಭಾಜಪದ ಮಂಚೂಣಿ ನಾಯಕರೆನಿಸಿದರು. 1989ರಲ್ಲಿ ಮೊದಲ ಬಾರಿಗೆ ಪುತ್ತೂರಿನಿಂದ ವಿಧಾನ ಸಭಾ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗಳಿಗೆ ಕಾಲಿರಿಸಿದ ಗೌಡರು 1994ರಲ್ಲಿ ಮೊದಲ ಭಾರಿಗೆ ವಿಧಾನ ಸಭಾ ಸದಸ್ಯರಾಗಿ ಚುನಾಯಿತರಾದರು ಗೆಲುವಿನ ನಗೆ ಬೀರಿದರು. ಎರಡನೇ ಭಾರಿಗೆ ಎಂಎಲ್ ಎ ಆಗಿ ಆಯ್ಕೆಯಾಗುತ್ತಿದ್ದಂತೆ ವಿಧಾನ ಸಭೆಯಲ್ಲಿ ಶಾಸಕಾಂಗ ಪಕ್ಷದ ಉಪನಾಯಕನಾಗುವ ಮೂಲಕ ತಾನೊಬ್ಬ ಸಮರ್ಥ ನಾಯಕ ಎಂಬುದನ್ನು ಸಾಬೀತುಪಡಿಸಿದರು.ಸುಧೀರ್ಘ 10ವರ್ಷಗಳ ಶಾಸಕತ್ವದ ಸೇವೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರಲ್ಲದೇ ಅಡಿಕೆ ಬೆಳೆಗಾರರಿಗೆ ನಾಯಕತ್ವ ಒದಗಿಸಿದರು. ಸಂಸದರಾಗಿ ಆಯ್ಕೆಯಾದಾಗ ಕಾಫಿ ಬೆಳೆಗಾರಿರಿಗೆ ವಿಶೇಷ ಪ್ಯಾಕೇಜ್ ಒದಗಿಸುವ ಜೊತೆಗೆ ಕಡೂರು-ಚಿಕ್ಕಮಗಳೂರು ಮತ್ತು ಮಂಗಳೂರು ನಡುವಣ ರೈಲ್ವೇ ಮಾರ್ಗದ  ಕೆಲಸ ಪೂರ್ಣಗೊಳಿಸಲು ಪ್ರಮುಖ ಕಾರಣಕರ್ತರೆನಿಸಿದ್ದಾರೆ. ಅತ್ಯುತ್ತಮ ಜನಾನುರಾಗಿ, ಪ್ರಾಮಾಣಿಕ ಹೋರಾಟಗಾರ,ನಿಷ್ಪೃಹ ಸಮಾಜ ಸೇವಕ, ಅಧ್ಯಯನ ಶೀಲ ಹಾಗೂ ರಾಷ್ಟ್ರೀಯವಾದಿಯೂ ಆಗಿರುವ ಸದಾನಂದಗೌಡ ನಿಜಕ್ಕೂ ಭಾಜಪದ ಅತ್ಯುತ್ತಮ ನಾಯಕ ಎನ್ನುವುದರಲ್ಲಿ ಸಂದೇಹವಿಲ್ಲ.
         ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಆಗಬಹುದಾದ ಮುಖಭಂಗ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪಕ್ಷದ ಮಂಚೂಣಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ತೆಗೆದುಕೊಂಡ ಕಠಿಣ ಹಾಗೂ ಸೂಕ್ತ ನಿಲುವಿನಿಂದ ಯಡಿಯೂರಪ್ಪ ರಾಜೀನಾಮೆ ನೀಡುವಂತಾಗಿದೆ. ಇಂತಹ ಸಂಧರ್ಭದಲ್ಲಿ ಪಕ್ಷದ ನಾಯಕನ ಆಯ್ಕೆ ಯಡಿಯೂರಪ್ಪನ ಬಿಗಿಪಟ್ಟಿನಿಂದಾಗಿ ಕಷ್ಟ ಎನಿಸಿದಾಗ ಮುಖ್ಯ ಮಂತ್ರಿ ಅಭ್ಯರ್ಥಿಯ ಆಯ್ಕೆಗೆ ಮತದಾನ ನಡೆದಿದೆ. ಈ ಸಂಧರ್ಭದಲ್ಲಿ ಎರಡು ಬಣಗಳಾಗಿ ಒಡೆದು ಹೋದ ಬಿಜೆಪಿಗೆ ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡ ಇಬ್ಬರು ಸಮರ್ಥ ನಾಯಕರೆನಿಸಿದರೂ ಸಹಾ ಅವರಿಬ್ಬರ ಬೆಂಬಲಕ್ಕೆ ನಿಂತವರ ಹುನ್ನಾರಗಳು ಮಾತ್ರ ಅಸಹ್ಯ ಹುಟ್ಟಿಸುವಂತಿವೆ. ಇದ್ದುದರಲ್ಲಿ ಜಗದೀಶ್ ಶೆಟ್ಟರ್ ಪರವಾಗಿ ಇದ್ದವರು ಪರವಾಗಿಲ್ಲ ಎನಿಸಿದರೂ ಸಹಾ ಜಾತಿ ರಾಜಕಾರಣ ಅಲ್ಲಿ ನೆಲೆ ನಿಂತದ್ದು ಮಾತ್ರ ಒಪ್ಪಿಕೊಳ್ಳುವಂತಿರಲಿಲ್ಲ.ಇನ್ನು ಸಂಘದ ಹುರಿಯಾಳು ಸದಾನಂದಗೌಡ ರ ಬೆನ್ನ ಹಿಂದೆ ನಿಂತದ್ದು ಖುದ್ದು ಯಡಿಯೂರಪ್ಪ ಮತ್ತು ಗಣಿ ಹಗರಣದಲ್ಲಿ ಕೊಚ್ಚಿ ಹೋಗುತ್ತಿರುವ ರೆಡ್ಡಿ ಬ್ರದರ್ಸ್. ತಮ್ಮ ಬೆಂಬಲದ ಅಭ್ಯರ್ಥಿ ಗೆಲುವಿಗೆ ಅನಾಮತ್ತು 500ಕೋಟಿ ಹೂಡಿಕೆ ಮಾಡಲು ಸಜ್ಜಾಗಿದ್ದ ರೆಡ್ಡಿಗಳ ಹುನ್ನಾರ ಯಾರಿಗೂ ತಿಳಿಯದ್ದೇನಲ್ಲ, ಅದೇ ರೀತಿ ಇನ್ನಾರು ತಿಂಗಳಲ್ಲಿ ತಾವೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುವುದಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸದಾನಂದ ಗೌಡರನ್ನು ಆಟಿಕೆ ಬೊಂಬೆಯಂತೆ ಆಡಿಸುವರೆ ? ತಮಿಳುನಾಡಿನಲ್ಲಿ ಮುಖ್ಯ ಮಂತ್ರಿಯಾಗಿದ್ದ ಜಯಲಲಿತ ಹಿಂದೊಮ್ಮೆ ತಮ್ಮ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯನ್ನಾಗಿ ಸೆಲ್ವಂ ನನ್ನು ಆಯ್ಕೆ ಮಾಡಿಕೊಂಡಂತೆ ರಾಜ್ಯದಲ್ಲೂ ಡಿವಿಎಸ್ ಆಯ್ಕೆಯಾಗಿದ್ದರೆ ಅದಕ್ಕಿಂತ ದುರಂತ ಮತ್ತೊಂದಿರಲಾರದು.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಬುದ್ದಿವಂತರು ಹಾಗೂ ಪ್ರಾಮಾಣಿಕರು ಎಂಬ ಭಾವನೆಯಿದೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಎರಡನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿವಿಎಸ್ ತಮ್ಮ ಮುಂದಿರುವ ಅಡ್ಡಿ ಆತಂಕಗಳನ್ನು ಮೀರುವರೆಂಬ ನಿರೀಕ್ಷೆಯಿದೆ. ಆದಾಗ್ಯೂ ಒಬ್ಬ ಪರಿಪೂರ್ಣ ನಾಯಕನಾಗಿ ರೂಪುಗೊಂಡಿರುವ ಡಿವಿಎಸ್ ಅಧಿಕಾರ ಸ್ಥಾನದಲ್ಲಿ ಕುಳಿತುಕೊಂಡಾಗ  ಆದರ್ಶವನ್ನೇ ಹೊದ್ದುಕೊಂಡು ಪ್ರಾಮಾಣಿಕವಾಗಿ ಕೆಲಸಮಾಡಲು ಸಧ್ಯದ ಪರಿಸ್ಥಿತಿ ಪೂರಕವಾಗಿಲ್ಲ ಆದಾಗ್ಯೂ ಇವೆಲ್ಲವನ್ನು  ಮೆಟ್ಟಿ ನಿಂತು ಸದಾನಂದಗೌಡ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವರೇ ಕಾದು ನೋಡಬೇಕು.

Sunday, July 17, 2011

ಹೇಳುವುದು ಒಂದು.. ಮಾಡುವುದು ಇನ್ನೊಂದು..

ಹೌದು ಆಚಾರ-ವಿಚಾರ, ಸಿದ್ದಾಂತಗಳು ಹೇಳಲಿಕ್ಕೆ ಕೇಳಲಿಕ್ಕೆ ಮಾತ್ರ ಚೆಂದ.. ಆದರೆ ಬದುಕಲು ಅಲ್ಲ. ಉಪದೇಶ ಪರರಿಗೆ ನನಗೆ ಮಾತ್ರ ಅದೆಲ್ಲ ಅನ್ವಯಿಸುವುದಿಲ್ಲ ಎಂಬ ತದ್ವಿರುದ್ದದ ಪ್ರಕ್ರಿಯೆಗಳು ವಾಸ್ತವದಲ್ಲಿ ಜಾರಿಯಲ್ಲಿರುವುದನ್ನು ಕಾಣಬಹುದು. ಪರಿಣಾಮ ಸಮಾಜದಲ್ಲಿ ನೈತಿಕ ಅಧ:ಪತನವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಯಾಕೆ ಹೀಗಾಗುತ್ತಿದೆ? ನೈತಿಕತೆ, ಸಿದ್ದಾಂತಗಳು ಯಾಕೆ ಬಾಳಿಕೆ ಬರುತ್ತಿಲ್ಲ? ಇದರಿಂದ ಆಗುತ್ತಿರುವುದೇನು? ಸಮಾಜದ ವಿವಿಧ ಸ್ಥರಗಳಲ್ಲಿ ಎರಡು ಮುಖಗಳಿಂದ ಆಗುತ್ತಿರುವ ಪರಿಣಾಮಗಳೇನು ಎಂಬ ಕುರಿತು ಒಂದು ಅವಲೋಕನ ಅಗತ್ಯವಾಗಿ ಆಗಬೇಕಾಗಿದೆ. 
        ಸಮಾಜದ ವಿವಿಧ ಸ್ಥರಗಳಲ್ಲಿ ಗಣ್ಯರೆಂದು ಗುರುತಿಸಿಕೊಂಡವರನ್ನ, ವಿವಿಧ ಕಾರಣಗಳಿಗಾಗಿ ಜನಪ್ರಿಯತೆ ಪಡೆದವರನ್ನ ನಮ್ಮ ದೇಶದಲ್ಲಿ ಅನುಸರಿಸುವುದು ಹೆಚ್ಚು ಮತ್ತು ಅವರ ಬದುಕನ್ನು ಆದರ್ಶವೆಂದು ಭಾವಿಸುವುದು ಸಹಜವೇ ಆಗಿದೆ. ಆದರೆ ವಾಸ್ತವದಲ್ಲಿ ಯಾಕೆ ಹೀಗಾಗುತ್ತಿದೆ? ಒಬ್ಬ ಸಿನಿಮಾ ನಟ ತೆರೆಯ ಮೇಲೆ ಆಡುವ ಡೈಲಾಗ್ ಗಳು, ಹೇಳುವ ನೀತಿಗಳು ಅವನ ನಿಜ ಜೀವನದಲ್ಲ್ಲಿಯೂ ಇರುತ್ತವೆ ಎಂದು ಬಹುತೇಕರು ಭಾವಿಸಿರುತ್ತಾರೆ, ಹಾಗೆಯೇ ಒಬ್ಬ ರಾಜಕಾರಣಿ, ಒಬ್ಬ ಅದಿಕಾರಿ, ಒಬ್ಬ ಪತ್ರಕರ್ತ, ಒಬ್ಬ ಶಿಕ್ಷಕ, ಒಬ್ಬ ಸಾಹಿತಿ ಹೀಗೆ ಇನ್ನು ಅನೇಕ ಮಂದಿ ತಮ್ಮದೇ ಆದ ಚೌಕಟ್ಟಿನಲ್ಲಿ ಕೆಲವೊಮ್ಮೆ ಅದನ್ನು ಮೀರಿ ಸಮಾಜಕ್ಕೆ ವೇದಾಂತವನ್ನ, ಸಿದ್ದಾಂತವನ್ನು, ನೈತಿಕತೆಯ ಪಾಠವನ್ನ ಅವರವರದ್ದೇ ಧಾಟಿಯಲ್ಲಿ ಅನುಕೂಲಕ್ಕೆ ತಕ್ಕಂತೆ ಆಡಿರುತ್ತಾರೆ. ಅಮಾಯಕ ಜನ ಸಮೂಹ ಅದನ್ನು ನಿಜವೆಂದು ಭ್ರಮಿಸುತ್ತದೆ, ಬದಲಾವಣೆಯ ಕನಸನ್ನು ಕಾಣುತ್ತದೆ ಆದರೆ ಅವೆಲ್ಲ ಮರೀಚಿಕೆಗಳು ಎಂಬುದು ಅರ್ಥವಾಗುವಷ್ಟರಲ್ಲಿ ಎಷ್ಟೋ ಮಂದಿ ತಮ್ಮ ಬದುಕಿನ ಹಾದಿಯ ಅಂತ್ಯಕ್ಕೆ ಬಂದಿರುತ್ತಾರೆ. ನೆಚ್ಚಿಕೊಂಡವರ ಆದರ್ಶಗಳನ್ನು ಪಾಲಿಸುವ ಹುಕಿಗೆ ಬಿದ್ದು ಭ್ರಮನಿರಸನಗೊಂಡು ಬಿಡುತ್ತಾರೆ. ಈ ದೇಶದಲ್ಲಿ ಆದರ್ಶ ಎನಿಸಬಹುದಾದಂತಹ ಅನೇಕ  ವ್ಯಕ್ತಿತ್ವಗಳು ಆಗಿ ಹೋಗಿವೆ,ಗಾಂಧಿ,ಅಂಬೇಡ್ಕರ್,ಬಸವ,ಬುದ್ದ ಹೀಗೆ ಅಲ್ಲಿ ಬದಲಾವಣೆಗಳಲ್ಲಿ ಒಂದು ಖಚಿತತೆ ಇತ್ತು.  ಅಂದಿನ ದಿನಗಳಲ್ಲಿ ನಂಬಿಕೊಂಡ ವಿಚಾರಕ್ಕೊಂದು ಬದ್ದತೆ ಇರುತ್ತಿದ್ದಾದರೂ ಇತ್ತೀಚೆಗಿನ ದಿನಗಳಲ್ಲಿ ಆ ಬದ್ದತೆಗಳು ಕಳೆದು ಹೋಗಿ ಕೇವಲ ಸ್ವಾರ್ಥ ಮಾತ್ರ ಪ್ರಧಾನವಾಗಿ ಕಾಣುತ್ತಿರುವುದು ವಿಷಾಧನೀಯಕರ ಸಂಗತಿಗಳಲ್ಲೊಂದು. 
         ಇವೆಲ್ಲಾ ಯಾಕೆ ಪ್ರಸ್ತಾಪಿಸ ಬೇಕಾಯಿತೆಂದರೆ ಕಳೆದ ವಾರ ನಡೆದ ರಾಜ್ಯ ಮಟ್ಟದಲ್ಲಿ ನಡೆದ 2 ಪ್ರಮುಖ ಸಂಗತಿಗಳು ಇಲ್ಲಿ ಉಲ್ಲೇಖಾರ್ಹ ಈ ಪೈಕಿ ಮೊದಲನೆಯದ್ದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕು ಎಂದು ಉಪವಾಸ ಸತ್ಯಾಗ್ರಹ ಹೂಡಿದ್ದ ಮೈಸೂರು ವಿವಿ ಮಾಜಿಉಪ ಕುಲಪತಿ ದೇ. ಜವರೇಗೌಡ, ರಾಜ್ಯ ಸರ್ಕಾರ 5ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದನ್ನು ವಿರೋಧಿಸುವ ನಿಲುವು ವ್ಯಕ್ತಪಡಿಸುತ್ತಿರುವುದು. ಇನ್ನೊಂದು ಮುಖ್ಯ ಮಂತ್ರಿ ಯಡಿಯೂರಪ್ಪ ತಮ್ಮ ಮತ್ತು ತಮ್ಮ ಕುಟುಂಬದವರ ವಿರುದ್ದ ಹೊರಡಿಸಿದ ಆರೋಪಗಳ ಪ್ರಕರಣವನ್ನ ಸಿಬಿಐ ಗೆ ವಹಿಸಲು ಆಗ್ರಹಿಸಿ ನಡೆಸಿದ ಉಪವಾಸದ ವೇಳೆ ಸಾಹಿತಿ ಅನಂತಮೂರ್ತಿ, ಎಚ್ ಡಿ ಕುಮಾರಸ್ವಾಮಿಯನ್ನ ಭೇಟಿಯಾಗಿದ್ದು. 
         ಮೈಸೂರು ಮಹರಾಜ ಕಾಲೇಜಿನಲ್ಲಿ  ಪ್ರಾಧ್ಯಾಪಕರಾಗಿದ್ದ ಹಾಗೂ ಖ್ಯಾತ ಚಿಂತಕ ಮತ್ತು ಸಾಹಿತಿಯೂ ಆಗಿರುವ ಪ್ರೊ|| ಕೆ ಎಸ್ ಭಗವಾನ್ , ದೇ ಜವರೇಗೌಡರ ವ್ಯತಿರಿಕ್ತ ನಿಲುವುಗಳ ಕುರಿತು ರಾಜ್ಯದ ಪತ್ರಿಕೆಗಳಿಗೆ ಪತ್ರ ಬರೆದಿದ್ದರು ಅದರಲ್ಲಿ ವ್ಯಕ್ತವಾಗಿರುವಂತೆ, ದೇಜಗೌ ರ ಕನ್ನಡ ಪರ ಹೋರಾಟ, ಚಿಂತನೆ ಮತ್ತು ಅಭಿಮಾನವನ್ನೇನೋ ಒಪ್ಪೋಣ ಆದರೆ ಅದೇ ಮನುಷ್ಯ ಅಧ್ಯಕ್ಷರಾಗಿರುವ ಕುವೆಂಪು ಶಿಕ್ಷಣ ಟ್ರಸ್ಟ್ ಅಡಿಯಲ್ಲಿ ಎಲ್ ಕೆ ಜಿ/ಯುಕೆಜಿ ಯಿಂದಲೇ ಆಂಗ್ಲಮಾಧ್ಯಮದಲ್ಲಿ ಭೋಧಿಸಲಾಗುತ್ತಿದೆ.. ಆದರೆ ಅವರ ಮೂಗಿನಡಿಯಲ್ಲೆ ಆಂಗ್ಲ ಮಾಧ್ಯಮವನ್ನ ಪ್ರೋತ್ಸಾಹಿಸಲಾಗುತ್ತಿದೆ ಹೀಗಿರುವಾಗ ಅವರ ಹೋರಾಟಗಳಿಗೆ ಅರ್ಥ ಬರುವುದೇ? ಇನ್ನು ಯು ಆರ್ ಅನಂತಮೂರ್ತಿ 70ರ ದಶಕದ ಬದಲಾವಣೆಯ ಹೊಸ ಗಾಳಿ ಬೀಸಿದ ಸಾಹಿತ್ಯವನ್ನ ನೀಡಿದವರು, ಸಾಹಿತ್ಯದ ಮೂಲಕ ಸಂಚಲನ ಸೃಷ್ಟಿಸಿದ ಇವರು ಕಳೆದೆರೆಡು ದಶಕಗಳಿಂದ ಅತ್ತ ಬಲಪಂಥೀಯವೂ ಅಲ್ಲದ ಇತ್ತ ಎಡಪಂಥೀಯನೂ ಆಗದೆ ಎಡಬಿಡಂಗಿ ಧೋರಣೆಯನ್ನೇ ಪ್ರದರ್ಶಿಸುತ್ತಾ ಅವಕಾಶವಾದಿ ತನವನ್ನ ಪ್ರದರ್ಶಿಸಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ 1500ಕೋಟಿ ರೂಪಾಯಿ ಆಸ್ತಿ ಮಾಡಿಕೊಂಡು ಅದನ್ನೆಲ್ಲ ತಾನು ಲೀಗಲ್ ಆಗಿ ಸಂಪಾದಿಸಿದೆ ಎಂದು ಹೇಳುವುದು ಒಂದು ಬಾಲಿಶವಾದ ಪ್ರಯತ್ನ.. ಇಂತಹವರ ಬೆಂಬಲಕ್ಕೆ ಅನಂತಮೂರ್ತಿ ಬರುತ್ತಾರೆ. ಹಾಗೆಯೇ ಮೈಸೂರು ವಿವಿ ಯ ಉಪಕುಲಪತಿಯಾಗಿದ್ದ ಪುಣ್ಯಾತ್ಮನೋರ್ವ ಜಾತಿ ವ್ಯವಸ್ಥೆಯಲ್ಲಿ ತನಗೆ ನಂಬಿಕೆಯಿಲ್ಲ ವೆಂದು ಸಾರ್ವಜನಿಕವಾಗಿ ಬಿಂಬಿಸಿಕೊಂಡಿದ್ದರು, ತಮ್ಮ ಮಕ್ಕಳ ಜಾತಿಯನ್ನು ಶಾಲೆಗೆ ಸೇರಿಸುವಾಗ 'ಭಾರತೀಯ' ಎಂದೇ ನಮೂದಿಸಿದ್ದರು. ಆದರೆ ಕುಲಪತಿ ಹುದ್ದೆಗೆ ಏರಿದಾಗ ಆತ ಮಾಡಿದ್ದೇ ಬೇರೆ ಮೀಸಲು ಕೋಟ ಇರಲಿ ಸಾಮಾನ್ಯ ಕೋಟಾದಲ್ಲೂ ತನ್ನದೇ ಜಾತಿಯ ಜನರನ್ನ ಶೇ.70 ರಷ್ಟು ತುಂಬಿದರು. ಅಂದರೆ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇರುವವರಿಗಿಂತ ಜಾತ್ಯಾತೀತ ಎಂದು ಬಿಂಬಿಸುವುದರಲ್ಲೇ ಹೆಚ್ಚಿನ ಹುಳುಕು ತುಂಬಿರುತ್ತದೆ ಎಂದು ಭಾವಿಸಬೇಕಾಗುತ್ತದೆಯಲ್ಲವೇ? 
         ಇವತ್ತು ಪ್ರತೀ ಊರುಗಳಲ್ಲೂ ಇಂತಹ ವ್ಯಕ್ತಿತ್ವಗಳನ್ನ ಕಾಣಬಹುದು. ಒಬ್ಬ ವ್ಯಕ್ತಿ ಹೆಚ್ಚು ಭ್ರಷ್ಟನಾದ ನಂತರ ಸಮಾಜ ಸೇವೆಯತ್ತ ಹೊರಳುತ್ತಾನೆ. ಯಾವತ್ತಿಗೂ ಜನಸಾಮಾನ್ಯರನ್ನ ಕಣ್ಣೆತ್ತಿ ನೋಡದವನು ಅವರ ಆತ್ಮೀಯ ಬಂಧುವಿನಂತೆ ನಡೆದುಕೊಳ್ಳಲಾರಂಭಿಸುತ್ತಾನೆ.ಇಂತಹ ಬದಲಾವಣೆಗಳು ಶಾಶ್ವತವಾಗಿ ಆದರೆ ಒಳ್ಳೆಯದೇ ಆದರೆ ಆತನ ಆಕಾಂಕ್ಷೆ ಸಾಧನೆಯಾಗುವವರೆಗೆ ಮಾತ್ರ ಇದ್ದರೆ ಅದು ದುರಂತ.ಸಾಮಾಜಿಕ ಸುಧಾರಣೆ ಬಗ್ಗೆ ಭಾಷಣ ಮಾಡುವವನು ಅಂತರಂಗದಲ್ಲಿ ಅದಕ್ಕೆ ವಿರುದ್ದ ದೋರಣೆ ಹೊಂದಿರುತ್ತಾನೆ, ಸ್ತ್ರೀ ಪೀಡಕ, ಮಹಿಳಾ ಶೋಷಕ ಸಮಾಜದಲ್ಲಿ ಸುಧಾರಣಾವಾದಿಯ ಮುಖವಾಡ ಧರಿಸಿರುತ್ತಾನೆ. ಒಬ್ಬ ಬೇಟೆಗಾರ, ಒಬ್ಬ ಕಲ್ಲುಗಣಿ ಮಾಲಿಕ, ಪರಿಸರ ಹಾಳುಮಾಡುವ ಉದ್ಯಮ ನಡೆಸುವವ ಇದ್ದಕ್ಕಿದ್ದಂತೆ ಸಮಾಜದಲ್ಲಿ 'ಪರಿಸರವಾದಿ' ಎಂಬ ಮುಖವಾಡ ಹೊತ್ತು ಪ್ರತ್ಯಕ್ಷವಾಗಿ ಬಿಡುತ್ತಾನೆ. ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಅರಿವೆ ಇರದ ಕೋಡಂಗಿ ಕನ್ನಡ ಹೋರಾಟಗಾರನಾಗಿ ಬಿಡುತ್ತಾನೆ. ಒಬ್ಬ ಸಮಾಜ ಘಾತುಕ  , ರೋಲ್ ಕಾಲ್ ಮಾಡಿಕೊಂಡು ಬದುಕುವವನು ಸಮಾಜ ಸೇವೆಯ ಸಂಘಟನೆಯ ಮಂಚೂಣಿಯಲ್ಲಿ ನಿಲ್ಲುತ್ತಾನೆ.ಕಳ್ಳದಂಧೆ ನಡೆಸುವವನು, ವಂಚಿಸುವವನು, ಹೆಂಡಕುಡುಕತನ, ಅಂದರ್ ಬಾಹರ್ ಆಡುವವನು, ಕಾಮುಕ ಪ್ರವೃತ್ತಿಯುಳ್ಳವನು, ಪಾರ್ಟು ಟೈಂ ರಾಜಕಾರಣ ಮಾಡುವವನು ರಾಜಕಾರಣಿಯಾಗಿ, ಮಠದ ಸ್ವಾಮೀಜಿಯಾಗಿ, ಪತ್ರಕರ್ತನಾಗಿ, ಶಿಕ್ಷಕನಾಗಿ, ನೌಕರನಾಗಿ, ಅಧಿಕಾರಿಯಾಗಿ ಸ್ಥಾಪಿತನಾಗುತ್ತಾನೆ. ಅಂದರೆ ಎಲ್ಲರೂ ಅಂತಹವರೇ ಎಂದು ಹೇಳುವುದಿಲ್ಲ, ಹೆಚ್ಚಿನ ಪಾಲು ಮಂದಿ ತಮ್ಮ ವೈಯುಕ್ತಿಕ ಹಿತಾಸಕ್ತಿಗೋಸ್ಕರ ಸಮಾಜದ ಮುಖವಾಣಿಗಳನ್ನು 'ಮುಖವಾಡ'ಗಳನ್ನಾಗಿ ಮಾಡಿಕೊಂಡು ಬಿಡುತ್ತಾರೆ ಅದೇ ದುರಂತ. 
          ಬದಲಾವಣೆಗಳು ಕಾಲಘಟ್ಟಕ್ಕೆ ಅನುಗುಣವಾಗಿ ಆರೋಗ್ಯಕರವಾಗಿ ಆಗಬೇಕೆ ವಿನಹ ಅದು ಸ್ವಾರ್ಥದ ಮೂಸೆಯಲ್ಲಿ ಬಂದರೆ ಹೀಗೆಲ್ಲಾ ಆಗಿಬಿಡುತ್ತವೆ. ಆಂತರಿಕ ಒತ್ತಡಕ್ಕಿಂತ ಬಾಹ್ಯ ಒತ್ತಡಗಳು, ಆಕಾಂಕ್ಷೆಗಳು ಮೇರೆ ಮೀರಿದಾಗ ನೈತಿಕತೆಯು ಕಳೆದು ಹೋಗುತ್ತದೆ.ಸಿದ್ದಾಂತಗಳ ಪ್ರತಿಪಾದನೆಗೆ ಗಟ್ಟತನ ಪ್ರದರ್ಶಿಸುವ ವ್ಯಕ್ತಿತ್ವಗಳು ಇಂದಿನ ದಿನಮಾನದಲ್ಲಿ ಕಾಣಸಿಗುತ್ತಿಲ್ಲ, ವೇಗದ ಬದುಕಿನಲ್ಲಿ ತಾನು ಹೇಗೆ ಬದುಕಿದೆ ಎನ್ನುವುದಕ್ಕಿಂತ ತಾನು ಬದುಕಿರುವಷ್ಟು ದಿನ ಹೇಗೆಲ್ಲ ಅಧಿಕಾರ ಹಿಡಿಯಬೇಕು, ದುಡ್ಡು ಮಾಡಬೇಕು ಅದರಲ್ಲಿ ತಾನು ಮತ್ತು ತನ್ನ ಕುಟುಂಬ ಹೇಗೆ ಬದುಕಬೇಕು ಎಂದು ಯೋಚಿಸುವವರ ಸಂಖ್ಯೆಯೇ ಹೆಚ್ಚು. ವ್ಯವಸ್ಥೆಯ ಲೋಪದೋಷಗಳನ್ನು ವೈಯುಕ್ತಿಕ ಲಾಲಸೆಗೆ ಬಳಸಿಕೊಳ್ಳುವ ಮಂದಿ ಅದರಲ್ಲೂ  ತಮ್ಮ ಬೇಳೆ ಬೇಯಿಸಿಕೊಂಡು ಬಿಡುತ್ತಾರೆ. ಹೀಗಿರುವಾಗ ಯಾರನ್ನ ನಂಬಬೇಕು ಯಾರನ್ನು ಬಿಡಬೇಕು ಎಂಬುದೇ ಗೋಂದಲಕ್ಕೆ ಸಿಲುಕಿಸಿ ಬಿಡುತ್ತದೆ.ಹೀಗಾದಾಗ ಸಿದ್ದಾಂತಗಳು ಅರ್ಥ ಕಳೆದುಕೊಂಡು ಅವು ಬದುಕು ಕಟ್ಟಿಕೊಡುವುದಿಲ್ಲ ಎಂಬ ಭಾವನೆಯನ್ನು ಮೂಡಿಸಿ ಬಿಡುತ್ತವೆ. ವ್ಯವಸ್ಥೆಯಲ್ಲಿ ನಂಬಿದ ಸಿದ್ದಾಂತದಿಂದಲೇ ಎಲ್ಲವನ್ನು ಜಯಿಸಿ ಬಿಡುತ್ತೇನೆ ಎಂಬುದೂ ಕೂಡಾ ಹಾಸ್ಯಸ್ಪದವೇ ಅದಕ್ಕೆ ಜಾಗತಿಕ ವರ್ತಮಾನದ ಆಶಯಗಳು ನಮಗರಿವಿಲ್ಲದಂತೆ ನಮ್ಮ ಬದುಕುಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ.  ಆದರೆ ಜಾಗೃತ ಸ್ಥಿತಿ ಮಾತ್ರ ಇಂತಹ ಕ್ರಿಯೆಗಳ ಪರಿಣಾಮವನ್ನ ಕೊಂಚ ಮಟ್ಟಿಗಾದರೂ ಕಡಿಮೆ ಮಾಡಬಲ್ಲದಾಗಿವೆ.   ಜನಪ್ರಿಯತೆಯ ಕಕ್ಕುಲಾತಿಗೆ ಸಿಲುಕಿದ ಮುಖವಾಡಗಳು ನಂಬಿದ ಅಮಾಯಕರನ್ನ ವಂಚಿಸಿಬಿಡುತ್ತವೆ. ನಮ್ಮ ನಡುವೆಯೇ ಇಂತಹ ಹಲವು ಮುಖಗಳು ಕಾಣಿಸಿಕೊಳ್ಳುತ್ತವೆ ಅಂತಹವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಷ್ಟೇ.

Sunday, July 3, 2011

ಮಹಿಳಾ ಸಬಲೀಕರಣ ಎಂದರೆ ಇದೇನಾ?

ಮೊನ್ನೆಯಷ್ಟೆ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಗುಲ್ಬರ್ಗಾ ಜಿ.ಪಂ. ಸಭೆಯಲ್ಲಿ ಗಂಡಂದಿರ ಮಾತಿಗೆ ಸೊಪ್ಪು ಹಾಕದ ಅಧಿಕಾರಿಗಳ ವಿರುದ್ದ ಪ್ರತಿಭಟಿಸಿ ಮಹಿಳಾ ಸದಸ್ಯೆಯರು ಹಚಾ ಅಂದು ಎದ್ದು ಹೋದ ಘಟನೆಯನ್ನು ಸ್ವಾರಸ್ಯಕರವಾಗಿ ಪ್ರಕಟಿಸಲಾಗಿತ್ತು.ದೇಶಕ್ಕೆ  ಸ್ವಾತಂತ್ರ್ಯ ಬಂದು 64ವರ್ಷಗಳು ಸರಿದು ಹೋಗಿವೆ, ಆ ನಂತರ ಮಹಿಳೆಯರಿಗೆ ಅನುಕಂಪ ತೋರುತ್ತ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಅನೇಕ ರಾಜಕೀಯ ಪಕ್ಷಗಳು ಅಧಿಕಾರವನ್ನಷ್ಟೇ ಅನುಭವಿಸಿ ಹೋಗಿವೆ. ಸಾಮಾಜಿಕ-ಧಾರ್ಮಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಹಿತಾಸಕ್ತಿಗಳು ಮಹಿಳೆಯರಿಗೆ ಸಿಕ್ಕ ಅಲ್ಪಸ್ವಲ್ಪ ಅವಕಾಶಗಳನ್ನು ಮುಕ್ತವಾಗಿ ಚಲಾಯಿಸಲು ಬಿಡದೇ 'ಸಬಲೀಕರಣ'ದ ವ್ಯರ್ಥ ಪ್ರಯತ್ನಗಳನ್ನ ಅಣಕಿಸುತ್ತಾ ಬಂದಿವೆ. ಇದು ಎಷ್ಟರ ಮಟ್ಟಿಗೆ ಸರಿ? ಸರಿ-ತಪ್ಪುಗಳ ಹೊಯ್ದಾಟದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯದ್ದೇ ಮೇಲುಗೈ ಯಾಕಾಗುತ್ತೆ? ಮಹಿಳೆ ಸಬಲೆಯಾಗುವುದು ಎಂದರೆ ಅಂಕೆಯಿಲ್ಲದ ಬಿಡು ಬೀಸು ವರ್ತನೆಯೇ?  ರಾಜಕೀಯ ಮಹಿಳಾ ಮೀಸಲು ಎಂತಹವರಿಗೆ ಸಿಗುತ್ತಿದೆ? ಅಸಲಿಗೆ ಮಹಿಳಾ ಮೀಸಲು ಹೇಗಿರಬೇಕು? ಇತ್ಯಾದಿ ಪ್ರಶ್ನೆಗಳು ಕಾಡುತ್ತವೆ.

     ಭಾರತ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ  ದೇಶ, ವೇದಗಳ ಕಾಲದ ನಂತರವಷ್ಟೇ ಇಲ್ಲಿ ಮಹಿಳೆಯರಿಗೆ ಕಟ್ಟುಪಾಡುಗಳನ್ನ ವಿಧಿಸುವ ಹಾಗೂ ವ್ಯವಸ್ಥಿತವಾಗಿ ಶೋಷಿಸುವ ಪದ್ದತಿ ಬೆಳೆದು ಬಂದಿದೆ. 'ಸ್ತ್ರೀ' ಎಂದರೆ ದೇವತೆ, ಅದೊಂದು ಅತೀಂದ್ರಿಯ ಶಕ್ತಿಯ ಸ್ವರೂಪ ಎಂಬೆಲ್ಲ ಉಪಮೇಯಗಳ ಮೂಲಕ ಹೇಳಲಾಗುತ್ತದೆಯಾದರು ಭಾರತದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯದ್ದೆ ಮೇಲುಗೈ ಆಗಿರುವುದು ಎಲ್ಲರಿಗೂ ತಿಳಿದ ಸಂಗತಿ. ರಾಜಕೀಯ, ಉದ್ಯೋಗ, ಶಿಕ್ಷಣ, ಹಾಗೂ ಕೌಟುಂಬಿಕ ಪರಿಸರದಲ್ಲಿ ಮಹಿಳೆಯರಿಗೆ ಸಿಗಬೇಕಾದ ಆದ್ಯತೆಗಳು ಹಿಂದಿಗಿಂತ ಈಗ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ ಅನಿಸುತ್ತದೆಯಾದರೂ ಅಲ್ಲಿ ಗಂಡಸಿನ ಮರ್ಜಿ ಕಾಣಬರುತ್ತದೆ. ಒಂದು ಹೆಣ್ಣು ಎಷ್ಟೇ ವಿದ್ಯಾವಂತಳಾದರೂ, ತಿಳುವಳಿಕೆಯುಳ್ಳವಳಾದರೂ, ಪ್ರಬುದ್ದ ಮನಸ್ಥಿತಿಯವಳಾದರೂ ಸಾಂಸಾರಿಕ ವಿಚಾರಗಳಲ್ಲಿ ಪುರುಷನೇ ಮೇಲುಗೈ ಸಾಧಿಸುತ್ತಾನೆ. ವೇದಗಳ ಕಾಲಕ್ಕಿಂತ ಮೊದಲು ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಗೌರವಾದರಗಳು ಮತ್ತು ಸಮಾನ ಅವಕಾಶಗಳು ಮುಕ್ತವಾಗಿರುತ್ತಿತ್ತು, ಈಗಲೂ ಅದು ಹೆಸರಿಗಷ್ಟೇ ಇದೆ ಮತ್ತು ಅನುಕಂಪದ ದಾಟಿಯಲ್ಲಿ ಅದನ್ನು ಕೊಡುತ್ತಿದ್ದೇವೆ ಅಂದುಕೊಳ್ಳಲಾಗುತ್ತಿದೆ. ಆದರೆ ಇದು ತಪ್ಪು ಸಮಾನ ಅವಕಾಶಗಳನ್ನ ಯಾರಿಗೂ ಯಾರೂ ಕೊಡಬೇಕಾದ ಅವಶ್ಯಕತೆ ಇಲ್ಲ, ಅದು ವ್ಯಕ್ತಿಗತವಾಗಿ ಅನುಭವಕ್ಕೆ ಬರುವಂತಹದ್ದು ಹಾಗೂ ಚೌಕಟ್ಟಿನ ಎಲ್ಲೆ ಮೀರದಂತೆ ನಡೆದುಕೊಳ್ಳುವಂತಹದ್ದು, ಹೀಗಿರುವಾಗ ಮಹಿಳಾ ಸಮಾನತೆ ಎನ್ನುವುದೇ ಹಾಸ್ಯಾಸ್ಪದವಲ್ಲವೇ? ಆದರೂ ಸಮಾನತೆಯ ಮತ್ತು ಸಬಲೀಕರಣದ ಅಂಶಗಳು ಚರ್ಚೆಗೆ ಬರಲು ಸಧ್ಯದ ಅನಿಷ್ಟ ವ್ಯವಸ್ತೆ ಕಾರಣ ಎಂಬುದು ಅತ್ಯಂತ ವಿಷಾಧನೀಯಕರ.
        ಚರ್ಚೆ ಗಂಭೀರ ದಾಟಿಯಿಂದ ಹೊರಳುವುದಾದರೆ ವಾಸ್ತವ ನೆಲೆಗಟ್ಟಿನಲ್ಲಿ ಮಹಿಳೆಯರ ಸ್ಥಿತಿಗತಿ ಹೇಗಿದೆಯೆಂದು ಅವಲೋಕಿಸಬಹುದು. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬರಲು ಆಧುನಿಕತೆಯ ಸಂಸ್ಕೃತಿ ಮಹಿಳೆಯರಿಗೆ ಸಹಾಯ ಮಾಡಿರಬಹುದಾದರೂ ಅದು ನೈತಿಕತೆಯ ಎಲ್ಲೆಯನ್ನು ಮೀರಿ ನಿಂತಿದೆ ಎಂಬುದು ಅಷ್ಟೇ ಸತ್ಯ. ಮಹಿಳಾ ಸಂವೇದನೆಗಳು ಜಾಗತೀಕರಣದ ಭರಾಟೆಯಲ್ಲಿ  ಹಿಂದಕ್ಕೆ ಸರಿದಿವೆ, ಪ್ರಭಾವಶಾಲಿಯಾಗಿ ಅದನ್ನು ಅಭಿವ್ಯಕ್ತಿಸುವ ಸಾಮರ್ತ್ಯ ಮಾತ್ರವೇ ಮಹಿಳೆಯರ ಹಿತಕಾಪಾಡಬಲ್ಲವು. ಮಹಿಳೆಯರ ಜಾಗೃತಿಗೆ, ಹಕ್ಕಿನ ಹೋರಾಟಕ್ಕೆ ರಾಜಕೀಯ ಪ್ರಧಾನ ಅವಕಾಶ ಎಂದೇ ಭಾವಿಸಲಾಗಿದೆ, ಹಾಗಾಗಿ ಶೇ.33.3 ಮಹಿಳಾ ಮೀಸಲು ವಿಧೇಯಕವನ್ನು ಮೊದಲ ಭಾರಿಗೆ ಇತ್ತೀಚಿನ ದಿನಗಳಲ್ಲಿ ಅಂದರೆ 1996ರಲ್ಲಿ ಹೆಚ್ ಡಿ ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಮಂಡಿಸಲಾಗಿತ್ತು. ಸದರಿ ವಿಧೇಯಕದ ಅನುಷ್ಠಾನ ಕೊಂಚ ಮಟ್ಟಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾತ್ರ ಜಾರಿಗೆ ಬಂದಿದೆ. ಶಾಸಕರು ಮತ್ತು ಸಂಸದರಾಗುವ ಅವಕಾಶಗಳು ಮಹಿಳೆಯವರಿಗೆ ಇದೆಯಾದರೂ ದೇಶದಲ್ಲಿರುವ ಸುಮಾರು 750ಕ್ಕೂ ಮಿಕ್ಕಿದ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಪೂರ್ಣಪ್ರಮಾಣದ ಅವಕಾಶಗಳನ್ನು ನಿರಾಕರಿಸಿವೆ. ಇದ್ದುದರಲ್ಲಿ ರಾಜ್ಯ ಸಭಾ ಸ್ಥಾನಕ್ಕೆ ಆಯ್ಕೆಯಾಗುವ ಬಹುತೇಕ ಮೀಸಲು ಸ್ಥಾನಗಳಿಗೆ ರಾಜಕಾರಣಿಗಳ ಗೆಣೆಕಾರ್ತಿಯರು, ಬಹುಗಳು ಬರುತ್ತಿದ್ದಾರಾದರೂ ಅವರು ಕೇವಲ ಶೋಕೇಸ್ ಗೊಂಬೆಗಳಂತೆ ಇದ್ದು ಹೋಗುತ್ತಾರಷ್ಟೇ.  ಕೆಳ ಸ್ಥರದಿಂದ ಬಂದವರಿಗೆ, ಮದ್ಯಮವರ್ಗದವರಿಗೆ,ಸುಶಿಕ್ಷಿತ ಮಹಿಳೆಯರಿಗೆ ಅವಕಾಶ ದೊರೆತರೆ ನಿಜವಾದ ಮಹಿಳಾ ಪ್ರಾತಿನಿಧ್ಯ ಮತ್ತು ಹಕ್ಕುಗಳ ರಕ್ಷಣೆ ಸಾಧ್ಯವಾಗಬಹುದು. ಅದೇ ರೀತಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಇವತ್ತಿಗೂ ಮಹಿಳೆಯರ ಮೇಲೆ ಪುರುಷರ ಪ್ರಾತಿನಿಧ್ಯ ಇರುವುದರಿಂದ, ಸ್ತ್ರೀಯರು ಅವಕಾಶ ದೊರೆತರೂ ಕೂಡ ಗಂಡಸಿನ ಅಣತಿಯಂತೆ ಅಧಿಕಾರ ಚಲಾಯಿಸುತ್ತಿರುವುದು ದುರಂತದ ಸಂಗತಿಯಲ್ಲವೇ? ಇಷ್ಟೇ ಏಕೆ ಆಕೆ ಸದಸ್ಯಳಾಗುತ್ತಿದ್ದಂತೆಯೇ ತನ್ನ ಪುರುಷ ಪುಂಗವನ ಹೆಸರನ್ನು ತನ್ನ ಹೆಸರಿನ ಮುಂದೆ ಚಲಾವಣೆಗೆ ತರಬೇಕಾಗುತ್ತದೆ, ಆಕೆ ಅಧಿಕಾರಿಯಾದರೂ ಅಷ್ಟೆ ಹೆಸರಿನ ಮುಂದೆ ಅಥವಾ ಹಿಂದೆ ಗಂಡನ ಹೆಸರನ್ನು ತಗುಲಿಸಕೊಳ್ಳಬೇಕು ಇದು ಮಹಿಳೆಯರಿಗೆ ಅನಿವಾರ್ಯವೇ? 
       ಆದರೆ ಕೌಟುಂಬಿಕ ವ್ಯವಸ್ಥೆಯಲ್ಲಿ ಎಂತಹುದೇ ಹೀನ ನಿರ್ಬಂದಿಸುವ ಕ್ರಮಗಳು ಮಹಿಳೆಯರ ಪಾಲಿಗಿದ್ದರೂ ಕೆಲವು ಸಂಸಾರಗಳನ್ನು ಹೊರತು ಪಡಿಸಿದರೆ ಬಹುತೇಕ ಕುಟುಂಬಗಳಲ್ಲಿ ಮಹಿಳೆಯರ ಅಧಿಕಾರ ಚಲಾವಣೆ ಇರುವುದನ್ನು ಕಾಣಬಹುದು, ಘಟವಾಣಿಯರ ಕಾರುಬಾರು ಪುರುಷರನ್ನು ಕಟ್ಟಿಹಾಕಿದರು ಹೊರಗಿನ ಜಗತ್ತಿಗೆ ಬಂದಾಗ ಮಾತ್ರ ಅದೇ ಗಂಡಸಿನ ಅಂಕೆಗೆ ಅಂಟಿಕೊಳ್ಳುವುದು ಕಾಣುತ್ತದೆ. ಮಹಿಳೆಯರ ಸಬಲೀಕರಣಕ್ಕೆ ನೈಜವಾದ ಚಿಂತನೆಗಳು ಪ್ರಾಮಾಣಿಕವಾಗಿ ಆಗಬೇಕಿದೆ, ಮಹಿಳೆಯರ ಒಗ್ಗೂಡುವಿಕೆ, ಶಿಕ್ಷಣ ಮುಂತಾದ ಅಂಶಗಳು ಪರಿಣಾಮಕಾರಿಯಾಗಿ ಇದಕ್ಕೆ ಬೆನ್ನೆಲುಬಾಗುತ್ತವೆ ಆದರೆ ಪ್ರಯತ್ನ ಆಗಬೇಕಷ್ಟೆ.. ಅದು ಯಾವಾಗ ಅನ್ನೋದನ್ನ ಕಾದು ನೋಡಬೇಕು.

Thursday, June 30, 2011

ಮಾಧ್ಯಮ ಜಗತ್ತು ಸಾಗಿರುವುದೆಲ್ಲಿಗೆ?

                                               ಚಿತ್ರ ಕೃಪೆ: rotikapdamakaan.wordpress.com
ಜನ ಕೇಳಿದ್ದನ್ನ ಕೊಡ್ತೀವಿ, ಅದಕ್ಕೆ ಆಕ್ಷೇಪಣೆ ಯಾಕೆ ಸಾರ್? ಎಂದು ಪ್ರಶ್ನಿಸುವ ಮಾಧ್ಯಮದ ಮಂದಿ ಜನ ಬಯಸುವುದನ್ನು ಕೊಡುವಲ್ಲಿ ಅಗತ್ಯವಾದುದನ್ನು ಆರೋಗ್ಯವಂತ ನೆಲೆಗಟ್ಟಿನಲ್ಲಿ ಕೊಟ್ಟರೆ ಅದಕ್ಕೆ ಆರ್ಥವಿರುತ್ತೆ. ಸಹಜವಾಗಿ ಶುಗರ್ ಪೇಷಂಟ್ ಸಿಹಿಯನ್ನೇ ಬಯಸುತ್ತಾನೆ, ಹಾಗಂತ ಸಿಹಿಯನ್ನೆ ಕೊಟ್ಟರೆ ಆತನ ಪರಿಸ್ಥಿತಿ ಏನಾಗಬೇಡ? ಸಿಹಿಗೆ ಪರ್ಯಾಯವಾಗಿ ರೋಗಿ ಬದುಕುವಂತಹ ಔಷಧವನ್ನೆ ಕೊಡುತ್ತಾರಲ್ಲವೇ ಎಂದು ನನಗೆ ಪ್ರಶ್ನೆ ಎಸೆದು ಮುಗುಳ್ನಕ್ಕಿದ್ದು ಪತ್ರಕರ್ತ ಮಿತ್ರ ಮಧುಸೂಧನ್  . ಹೌದು ಇಂತಹ ಕಾರಣಗಳಿಗಾಗಿ ಮಾಧ್ಯಮಗಳು ಇತ್ತೀಚೆಗೆ  ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಆಸ್ಪದ ಕೊಟ್ಟಿವೆ. ಜುಲೈ 1 ಪತ್ರಿಕಾ ದಿನಾಚರಣೆ, ಈ ಸಂಧರ್ಭದಲ್ಲಿ ಮಾಧ್ಯಮಗಳು ಮತ್ತು ಜನಸಾಮಾನ್ಯರು  ಸ್ಪಂದ ನೆ ಮತ್ತು ಪ್ರತಿಸ್ಪಂದನೆ ಹೇಗಿರಬೇಕು, ಮಾಧ್ಯಮ ಲೋಕದಲ್ಲಿ ಏನಾಗುತ್ತಿದೆ, ಆಧ್ಯತೆಯ ವಿಚಾರಗಳೇನು, ಜನರ ಮನಸ್ಥಿತಿ ಮಾಧ್ಯಮಗಳ ಕುರಿತು ಹೇಗಿದೆ, ಅದು ಹೇಗೆ ಬದಲಾಗಬೇಕು,  ಇತ್ಯಾದಿ ವಿಚಾರಗಳು  ಈ ಸಂಧರ್ಬದಲ್ಲಿ ಅಗತ್ಯವಾಗಿ ಚರ್ಚೆಯಾಗಬೇಕಿದೆ.
ಮಾಧ್ಯಮ ಎಂದರೇನು?
         ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಮಾಧ್ಯಮಗಳ ಕಾರ್ಯ ವೈಖರಿಯ ಬಗೆಗೆ ಸಾರ್ವಜನಿ ಕವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಅತಿರಂಜಿತಸುದ್ದಿ, ಮಸಾಲೆ ಸುದ್ದಿ, ಕ್ರೈಂ, ರಾಜಕೀಯ,ಹಣಕ್ಕಾಗಿ ಸುದ್ದಿ ಹೀಗೆ ಮಾಧ್ಯಮ ಲೋಕದ ವಿವಿಧ ಆಯಾಮಗಳನ್ನು ತಾಕುವ ವಿಚಾರಗಳು, ಅಲ್ಲಿ ವ್ಯಕ್ತವಾಗುತ್ತಿರುವ ಕ್ರೋಢಿಕೃತ ಅಭಿಪ್ರಾಯಗಳು ಮಾಧ್ಯಮಗಳ ಶುದ್ದೀಕರಣವನ್ನು ಬಯಸುತ್ತಿವೆ ಜೊತೆಗೆ ಮಾಧ್ಯಮಗಳನ್ನೆ ನಿರ್ದೇಶಿಸುವ ಕೆಟ್ಟ ಪ್ರವೃತ್ತಿ ಜಾರಿಯಲ್ಲಿದೆ. ಮಾಧ್ಯಮ ಎಂದರೆ ಪ್ರಖರವಾದ ಸಂವಹನ ಮಾಧ್ಯಮ, ಧ್ವನಿಯಿಲ್ಲದವರಿಗೆ, ಶೋಷಿತರಿಗೆ ನ್ಯಾಯವನ್ನು ಪ್ರತಿಪಾದಿಸಬಹುದಾದ ಪ್ರಭಾವಶಾಲಿ ಅವಕಾಶವೇ ಮಾಧ್ಯಮ. ಆಕಾಶ ವಾಣಿ ದೇಶದ ಹಸಿರು ಕ್ರಾಂತಿಗೆ ಮಹತ್ವದ ಕೊಡುಗೆಯನ್ನು ಕೊಟ್ಟಂತೆ  ಮುದ್ರಣ ಮಾಧ್ಯಮಗಳು ಸಹಾ 70ರ ದಶಕಕ್ಕೂ ಮುಂಚೆ ದೇಶದಲ್ಲಾದ ಕಾಲಘಟ್ಟದ ಪ್ರಮುಖ ಬದಲಾವ ಣೆಗಳಿಗೆ ಸಾಥ್ ನೀಡಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದು ಇದೇ ಮುದ್ರಣ ಮಾಧ್ಯಮ. ಆದರೆ ಪರಿಸ್ಥಿತಿ ಬದಲಾದಂತೆ ಮತ್ತು ತಂತ್ರಜ್ಞಾನದಲ್ಲಿ ಆದ ಬದಲಾವಣೆಗಳು ಮಾಧ್ಯಮ ಲೋಕದಲ್ಲಿನ ಹೊಸ ಅಲೆಗಳಿಗೆ ಕಾರಣವಾದವು. ಈ ಹೊಸ ಅಲೆಯಲ್ಲಿ ಬಂದ ಮಾಧ್ಯಮದ ವಿವಿಧ ಆಯಾಮಗಳು ಸಮಾಜದ ಸ್ವಾಸ್ತ್ಯ ಕ್ಕೆ ಪೂರಕವಾದಂತಹ ಅಗತ್ಯತೆಗಳನ್ನು ಆಧ್ಯತೆಯಾಗಿ ನೀಡುವಲ್ಲಿ ಅನುಸರಿಸುತ್ತಿರುವ ಅಡ್ಡ ಹಾದಿಗಳು ಒಟ್ಟು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಿದೆ.
ಸಂಘರ್ಷಕ್ಕೆ ಕಾರಣವೇನು?
        ಇಂತಹದ್ದೊಂದು ಬೆಳವಣಿಗೆ ಜನಸಾಮಾನ್ಯರು ಮತ್ತು ಮಾಧ್ಯಮಗಳ ನಡುವಣ ಸಂಘರ್ಷಕ್ಕೆ ನಾಂದಿ ಹಾಡಿದೆ. ಹಿಂದಿನ ದಶಕಗಳಲ್ಲಿ ಮಾಧ್ಯಮಗಳೆಡೆಗೆ ಜನರಿಗಿದ್ದ ಆದರ್ಶದ ಕಲ್ಪನೆಗಳು ಮತ್ತು ಗೌರವದ ಭಾವನೆಗಳು ಮರೆಯಾಗಿವೆ ಇದಕ್ಕೆ ಪ್ರಮುಖ ಕಾರಣ ಜಾಗತೀಕರಣದ ನಂತರ ಮಾಧ್ಯಮ ಲೋಕದಲ್ಲೂ ಆಗುತ್ತಿರುವ ವಾಣಿಜ್ಯೀಕರಣವೇ ಆಗಿದೆ. ಗಂಭೀರವಾದ ವಿಚಾರಗಳನ್ನು, ಸಂವೇದನಾತ್ಮಕ ವಿಚಾರಗಳನ್ನು, ಪ್ರಗತಿಪರವಾದ ವಿಚಾರಗಳನ್ನ ಜನರಿಗೆ ನೀಡುವ ಬದಲು ಮನರಂಜನೆಯನ್ನೇ ಪ್ರಧಾನವಾಗಿರಿಸಿದ ಸುದ್ದಿಗಳು ಮತ್ತು ಕಾರ್ಯಕ್ರಮಗಳು ಜನರ ಆಲೋಚನಾ ಕ್ರಮವನ್ನೆ ಹಾಳುಗೆಡವಿದೆ. ಪರಿಣಾಮ Infotainment ಎಂಬ Corporate culture ನಮಗೆ ಗೊತ್ತಿಲ್ಲದಂತೆ ನಮ್ಮ ಯೋಚನಾಕ್ರಮವನ್ನು ಆಳುತ್ತಿವೆ.  ದೇಶದಲ್ಲಿ ಪ್ರಮುಖವಾಗಿ ರಾಜ್ಯದ ಪತ್ರಿಕೆಗಳಿಗೆ ಜನರ ಮನಸ್ಥಿತಿಯನ್ನು ಆರೋಗ್ಯಕರವಾದ ನಿಟ್ಟಿನಲ್ಲಿ ಕೊಂಡೊಯ್ಯುವ ಪ್ರಗತಿ ಪರ ಚಿಂತನೆಗಳಿಗೆ ಹಚ್ಚುವ, ಸಧಭಿರುಚಿಯನ್ನು ಮೂಡಿಸುವ ತಾಕತ್ತು ಇತ್ತು ಆದರೆ ಈ ದೃಶ್ಯ ವಾಹಿನಿಗಳು ಪ್ರಾರಂಭವಾದ್ದದ್ದೇ ಆಗಿದ್ದು ಜನಸಾಮಾನ್ಯರ ಆಲೋಚನೆಗಳೆಲ್ಲ ದಿಕ್ಕಾಪಾಲಾಗಿವೆ.ಜನ ಕೀಳುಅಭಿರುಚಿಯನ್ನು ನೋಡುತ್ತಾರೆಂದರೆ ಅಂತಹುದೇ ವಿಚಾರಗಳಿಗೆ ಹೆಚ್ಚು ಒತ್ತು ಕೊಟ್ಟು ಪದೇ ಪದೇ ಪ್ರಸಾರ ಮಾಡುವುದನ್ನು ದೃಶ್ಯ ವಾಹಿನಿಗಳಲ್ಲಿ ಕಂಡರೆ ಕಾರ್ಪೊರೇಟ್ ವಿಚಾರಗಳಿಗೆ ಮತ್ತು ಆಧ್ಯತೆಗಳಿಗೆ ಒತ್ತು ನೀಡಿ ಪೂರಕವಾಗಿ ಸುದ್ದಿ/ಲೇಖನ/ಚಿತ್ರಗಳನ್ನು ಪ್ರಕಟಿಸುವ ಮೂಲಕ ಪತ್ರಿಕೆಗಳು ಸಹಾ ನೈತಿಕ ಅಧ:ಪತನಕ್ಕೆ ತುತ್ತಾಗಿವೆ. ಪತ್ರಿಕಾ ಲೋಕಕ್ಕೆ ಬಂಡವಾಳಶಾಹಿಗಳು,ರೌಡಿಗಳು, ರಾಜಕಾರಣಿಗಳು, ವಂಚಕರು ಪ್ರವೇಶ ಪಡೆಯುತ್ತಿರುವುದು ಮತ್ತು ಅವರೇ ಪತ್ರಕರ್ತರನ್ನು ನಿಯಂತ್ರಿಸುತ್ತಿರುವುದರಿಂದ ಸಮಾಜದಲ್ಲಿ ಮಾಧ್ಯಮಗಳು ವ್ಯತಿರಿಕ್ತ ಪರಿಣಾಮ ಉಂಟಾಗಲು ಕಾರಣವಾಗಿದೆ.

        ಸಂವಿಧಾನದ ನಾಲ್ಕನೇ ಅಂಗವೆಂದು ಪತ್ರಿಕಾ ರಂಗ ಎಂದು ಹೇಳಲಾಗುತ್ತದೆ ಆದರೆ ಅದನ್ನು ಸಂವಿದಾನದಲ್ಲಿ ನಮೂದಿಸಿಲ್ಲ ಅದೊಂದು ಸಾರ್ವಜನಿಕ ಕಲ್ಪನೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಗುರುತಿಸಲ್ಪಡುವ ಪತ್ರಿಕಾರಂಗದ ಹೊಸ ಅಲೆಯಲ್ಲಿ ಪತ್ರಿಕೋಧ್ಯಮದ ಪಾಠ ಕಲಿತ ಮಂದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರಾದರೂ ಅವರ ನೈತಿಕ ಬದ್ದತೆ ಕುಸಿಯುತ್ತಿದೆ. ಮಾಧ್ಯಮ ಪ್ರಪಂಚದ ಸಂವೇದನೆಗಳನ್ನ ಅರಿಯುವ ಮುನ್ನವೇ ಇಲ್ಲಿನ ಆಕರ್ಷಣೆಗಳು ಅವ ರ ಬದ್ದತೆ ಗೆ ಧಕ್ಕೆ ತರುತ್ತಿವೆ. ನೈತಿಕತೆ ಮರೆತಾಗ ನಂಬಿಕೊಂಡ ಧೋರಣೆಗಳಿಗೆ ಅಸ್ತಿತ್ವ ಇರುವುದಿಲ್ಲ, ಆಗ ಗ್ರಹಿಕೆಗಳೀಗೆ, ಸಂವೇದನಾತ್ಮಕ ಅಂಶಗಳಿಗೆ ಕಿಲುಬು ಕಾಸಿನ ಕಿಮ್ಮತ್ತು ಇರುವುದಿಲ್ಲ. ಒಂದು ಉದಾಹರಣೆ ಹೇಳುವುದಾದರೆ ಇವತ್ತು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ 15ದಿನಕ್ಕೊಮ್ಮೆ ಪತ್ರಕರ್ತರಿಗಾಗಿ ನಡೆಸುವ ಔತಣಕೂಟಗಳಿಗೆ ಹೋಗಿ ಬರುವ ಪತ್ರಕರ್ತರಿಂದ ಪ್ರಾಮಾಣಿಕತನವನ್ನ ನಿರೀಕ್ಷಿಸಲು ಸಾಧ್ಯವಿಲ್ಲ, ಕಾರ್ಪೊರೇಟ್ ವಲಯಗಳಿಂದ ಪಡೆಯುವ ಉಡುಗೊರೆಗಳು ಪತ್ರಕರ್ತನ ಅಂತಸತ್ವವನ್ನು ನಾಶಮಾಡುತ್ತಿವೆ. ಪ್ರಭಾವ ಬಳಸಿ ಲಾಭ ಪಡೆಯುವ ಅನುಕೂಲಸಿಂಧು ಪತ್ರಕರ್ತರಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಹಾಗೆಯೇ ಸಾರ್ವಜನಿಕ ವಲಯದಲ್ಲೂ ಅಂತಸತ್ವ ದಪ್ರಭಾವ ಕ್ಷೀಣಿಸಿದ್ದು ಜನರಲ್ಲಿ ಜಾಗೃತ ಪ್ರಜ್ಞೆಯಿಲ್ಲ. ಸಮಸ್ಯೆ ಬಂದಾಗ ಮಾತ್ರ ಪತ್ರಕರ್ತರತ್ತ ಬೊಟ್ಟು ಮಾಡುವ ಜನ ತಾವೇನೂ ಮಾಡಬೇಕು ತಮ್ಮ ಆದ್ಯತೆಗಳೇನು ಎಂಬುದನ್ನು ಮರೆತು ಬಿಡುತ್ತಾರೆ. ಅಧಿಕಾರಶಾಹಿ ಸದಾ ಪ್ರಚಾರದ ಸಲುವಾಗಿ ಮಾಧ್ಯಮವನ್ನು ಬಳಸಿಕೊಳ್ಳಲು ನೋಡುತ್ತದೆಯಾದರೂ ಅಲ್ಲೊಂದು ಇಲ್ಲೊಂದು ಪ್ರಾಮಾಣಿಕವಾದ ಮತ್ತು ಪಾರದರ್ಶಕ ನಡವಳಿಕೆಯ ಪತ್ರಕರ್ತರಿಂದ ಸಮಾಜದಲ್ಲಿ ಇನ್ನು ಮಾಧ್ಯಮಗಳ ಮೇಲಿನ ವಿಶ್ವಾಸ ಕಡಿಮೆಯಾಗಿಲ್ಲ ಎಂಬುದೇ ಸಮಾಧಾನಕರ ಅಂಶ ಅಲ್ಲವೇ? ಪತ್ರಿಕೆಗಳ ಸಮಾಜ ಮುಖಿ ಕಾರ್ಯ ಮತ್ತು ಅದನ್ನು ಸ್ವೀಕರಿಸುವ ಜನರ ಮನಸ್ಥಿತಿಗಳು ಮಾತ್ರ ಸಮಾಜದ ಆರೋಗ್ಯ ಕಾಯಬಲ್ಲದು ಈ ದಿಸೆಯಲ್ಲಿ ಮಾಧ್ಯಮಗಳು ಅಗತ್ಯ ಬಿದ್ದಾಗ ವಿಚಾರವಂತರ ಸಲಹೆಗಳನ್ನು ಸ್ವೀಕರಿಸಿ ಮುನ್ನೆಡೆಯುವುದು ಒಳ್ಳೆಯದಲ್ಲವೇ?

Sunday, June 12, 2011

ಬಾಬಾ ರಾಮದೇವರ ಉಪವಾಸವೆಂಬ ಪ್ರಹಸನವೂ

ಬಾಬಾ ರಾಮದೇವರ ಉಪವಾಸ ಅಂತ್ಯಗೊಂಡಿದೆ, ಕಳೆದ ಒಂದು ವಾರದಿಂದಲೂ ನಡೆಯುತ್ತಿದ್ದ ಹೈಡ್ರಾಮಾ ಸಧ್ಯಕ್ಕೆ ಮುಗಿದಂತೆ ಕಂಡರೂ ಈ ಹೋರಾಟದ ಆಜೂಬಾಜೂ ಹಲವಾರು ಅನುಮಾನಗಳನ್ನ ಮತ್ತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಂದು ಹೋರಾಟಕ್ಕೆ ನಾಯಕನಿಗೆ ಇರಬೇಕಾದ ತಾತ್ವಿಕ ನೆಲೆಗಟ್ಟು, ನಿಖರತೆ, ಛಲ,ಗಟ್ಟಿತನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಬಾಬಾ ನೇತೃತ್ವದ ಹೋರಾಟ ಜ್ವಲಂತ ಸಾಕ್ಷಿಯಾಗಿ ನಮ್ಮ ಮುಂದೆ ಅಣಕಿಸಿದಂತೆ ಭಾಸವಾಗುತ್ತಿದೆ. ಇವತ್ತು  ನೈಜ ನೆಲೆಗಟ್ಟಿನಲ್ಲಿ ಜರುಗುವ ಹೋರಾಟಗಳು ಸಹಾ ಇಂತಹ ನಾಯಕರುಗಳ  ಜೊಳ್ಳುತನದಿಂದಾಗಿ ಅರ್ಥ ಕಳೆದುಕೊಳ್ಳುತ್ತಿವೆ ಎಂದು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ. ಬಾಬಾ ರಾಮದೇವ ದೇಶದ ಶ್ರೇಷ್ಠ ಯೋಗಪಟು, ಆಧ್ಯಾತ್ಮಿಕ ಚಿಂತಕ ಆಗಾಗ ಭ್ರಷ್ಟಾಚಾರದ ವಿರುದ್ದ ಹೋರಾಟಕ್ಕೆ ಧುಮುಕುವ ಚಳುವಳಿಯ ನೇತಾರ, ರಾಜಕೀಯ ಪಕ್ಷ ಕಟ್ಟಿ ಚುನಾವಣೆಗೆ ಇಳಿಯುವ ಉತ್ಸಾಹ ಪ್ರದರ್ಶಿಸುವ ರಾಜಕೀಯ ಉತ್ಸಾಹಿ, ಯೋಗದ ಜೊತೆಗೆ ವಿವಿಧ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸುತ್ತೇನೆ ಎಂದು ಔಷಧಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಒಬ್ಬ ವ್ಯಾಪಾರಿ ಅಷ್ಟೇ ಅಲ್ಲ ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಒಮ್ಮತದ ನಾಯಕತ್ವದಲ್ಲಿ ಸಾಗುತ್ತಿದ್ದ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಒಮ್ಮೆಲೆ ಹೈಜಾಕ್ ಮಾಡಿದ ಖಳ'ನೇತಾರ' ನೂ ಹೌದು. ಇಂತಹ ಬಾಬಾ ರಾಮದೇವರ ವಿಚಾರಗಳೇನು? ಅಸಲಿಯತ್ತೇನು? ಇಂತಹವರನ್ನು ಬೆಂಬಲಿಸುವುದರಿಂದ ಆಗುವ ಪರಿಣಾಮಗಳೇನು ಎಂಬ ವಿಚಾರ ಅಗತ್ಯವಾಗಿ ಚರ್ಚೆಗೆ ಬರಬೇಕಾಗಿದೆ.

          ಬಾಬಾ ರಾಮದೇವ್ ಅಲಿಯಾಸ್ ರಾಮಕೃಷ್ಣ ಯಾದವ್ ಜನಿಸಿದ್ದು ಹರ್ಯಾಣ ರಾಜ್ಯದ ಮಹೇಂದ್ರಘರ್ ಜಿಲ್ಲೆಯಲ್ಲಿ.ಬಾಲ್ಯದಲ್ಲಿಯೇ  ಸ್ವಾತಂತ್ರ್ಯ ಚಳುವಳಿಯ ನೇತಾರ ರಾಮಪ್ರಸಾದ್ ಬಿಸ್ಮಿಲ್ಲಾ ರ ಜೀವನ ಚರಿತ್ರೆ ಓದಿ ಸ್ಪೂರ್ತಿಗೊಂಡ ರಾಮಕೃಷ್ಣಯಾದವ್ ಪ್ರೌಢಶಾಲೆಯ ಮೊದಲ ವರ್ಷಕ್ಕೆ ವಿದ್ಯೆಗೆ ಶರಣು ಹೊಡೆದು ಶಹಜಾದ್ ಪುರದ ಆರ್ಸ್ ಗುರುಕುಲಕ್ಕೆ ಸೇರಿ ಯೋಗ ಮತ್ತು ಸಂಸ್ಕೃತವನ್ನು ಕಲಿತರು. ನಂತರ ಆಚಾರ್ಯ ಬಲ್ ದೇವ್ ಜೀ ಯಿಂದ ಸನ್ಯಾಸ ದೀಕ್ಷೆ ಪಡೆದ ಬಾಬಾ , ಜಿಂದ್ ಜಿಲ್ಲೆಯ ಕಲ್ವಾ ಗುರುಕುಲದಲ್ಲಿ ಉಚಿತ ಯೋಗಾ ತರಗತಿಗಳನ್ನು ಹೇಳಿಕೊಡುವ ಮೂಲಕ ಹೊಸ ಬದುಕು ಆರಂಬಿಸಿದರು. ಆಗಲೇ ಆತನ ಹೆಸರು ಸ್ವಾಮಿ ರಾಮದೇವ ಅಥವಾ ಬಾಬಾ ರಾಮದೇವ ಎಂದು ಬದಲಾಯಿತು.೨೦೦೬ರಲ್ಲಿ ಪತಂಜಲಿ ಯೋಗ ಪೀಠ ಸ್ತಾಪಿಸಿದ ಬಾಬಾ ಯೋಗ, ಆಯುರ್ವೇದ ಕಾಲೇಜು, ಯೋಗ ಚಿಕಿತ್ಸೆ, ಗೋಶಾಲೆ, ಹರ್ಬಲ್ ಉದ್ಯಾನವನ ಹೀಗೆ ಸುಮಾರು ೩೦ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಂಪನಿಗಳನ್ನ ಸ್ಥಾಪಿದ್ದಾರೆ.ಯೋಗ ಪೀಠದ ಚಟುವಟಿಕೆಗಳು ವಿದೇಶದಲ್ಲೂ ಹಬ್ಬಿವೆ ಕೇಂದ್ರಗಳು ಸ್ಥಾಪನೆಗೊಂಡಿವೆ.ಹಾಗಾಗಿ ಕೋಟ್ಯಾಂತ ರೂಪಾಯಿ ಆದಾಯವೂ ಇದೆ, ಬಾಬಾ ಹೇಳುವಂತೆ ಅಧಿಕೃತವಾಗಿ ೧೨೦೦ಕೋಟಿ ಮೌಲ್ಯದ ಆಸ್ತಿಪಾಸ್ತಿ ಇವೆ.  ಈ ನಡುವೆ ಬಾಬಾರಾಮದೇವರನ್ನು ಅವರು ನೀಡುವ ಔಷಧಗಳು ನಕಲಿ ಮತ್ತು ದನದ ಮೂಳೆಯನ್ನು ಬೆರೆಸಿ ಮಾರಲಾಗುತ್ತಿದೆ ಎಂಬ ಆಪಾದನೆಯೂ ಇದೆ. ಯೋಗ ಚಿಕಿತ್ಸೆಯಿಂದ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳನ್ನು ನಿವಾರಿಸುತ್ತೇನೆ ಎಂಬ ಮಾತುಗಳು ಪೊಳ್ಳಾಗಿವೆ, ಕಳೆದ ಚುನಾವಣೆಗಳಲ್ಲಿ  ದೇಶದ ರಾಜಕೀಯವನ್ನು ಸುಧಾರಿಸುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷವನ್ನು ಕಟ್ಟಿ ಚುನಾವಣೆಗೆ ಇಳಿಯುವ ಮಾತನ್ನೂ ಇದೇ ಬಾಬಾ ಆಡಿದ್ದಾರೆ. ಅಷ್ಟೇ ಅಲ್ಲ ದೇಶದ ಸಂವಿಧಾನಕ್ಕೆ ವಿರುದ್ದವಾದ ನಿಲುವುಗಳು ಅಂದರೆ ದೇಶದ ಪ್ರಧಾನಿ ನೇರವಾಗಿ ಜನರಿಂದ ಆಯ್ಕೆಯಾಗಬೇಕು, ಭಾರತ ಆಧ್ಯಾತ್ಮಕ ರಾಷ್ಟ್ರ, ದೇಶದ ಜನ ಚೀನಾ ಮತ್ತು ಜಪಾನ್ ದೇಶದ ಪ್ರಜೆಗಳು ಕಡ್ಡಾಯವಾಗಿ ಅಲ್ಲಿನ ಸ್ಥಳೀಯ ಭಾಷೆಯನ್ನು ಮಾತನಾಡುವಂತೆ ಭಾರತ ದೇಶದ ಜನರೆಲ್ಲ ಹಿಂದಿಯನ್ನು ಕಡ್ಡಾಯವಾಗಿ ಮಾತನಾಡಬೇಕು ಎಂಬ ಅವಿವೇಕದ ನಿಲುವುಗಳನ್ನು ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲ ನಿಜವಾದ ಒಬ್ಬ ದೇಶಭಕ್ತ, ಸ್ವಾತಂತ್ರ್ಯ ಯೋಧ, ಸಾರ್ವಜನಿಕ ಸೇವಕ ಅಣ್ನಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನೇ ಹೈಜಾಕ್ ಮಾಡಿ ಉಪವಾಸ ನಡೆಸಲು ಹೋಗುವ ಬಾಬಾ, ಪ್ರಚಂಡ ಯೋಗದ ಬೆಂಬಲವಿದ್ದರೂ ಕೇವಲ ೫-೬ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗದೇ ಕುಸಿದು ಬಿದ್ದು ಆಸ್ಪತ್ರೆ ಸೇರುತ್ತಾರೆ. ಒಂದು ಹೋರಾಟವನ್ನು ಹತ್ತಿಕ್ಕುವ ದುಷ್ಟ ಕಾಂಗ್ರೆಸ್ ಸರ್ಕಾರದ ಪ್ರಯತ್ನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮದ್ಯ ರಾತ್ರಿ ಮಹಿಳೆಯರ ಉಡುಪು ಧರಿಸಿ ಪರಾರಿಯಾಗಲು ಯತ್ನಿಸುತ್ತಾರೆ ಬಾಬಾ ಮತ್ತು ಆಮೂಲಕ ತನ್ನನ್ನೇ ನಂಬಿ ಹೋರಾಟ ಬೆಂಬಲಿಸಲು ಬಂದ ಲಕ್ಷಾಂತರ ಮಂದಿ ಬೆಂಬಲಿಗರ ಹಿತವನ್ನೇ ಕಡೆಗಣಿಸುವ ಪ್ರಯತ್ನ ಮಾಡುತ್ತಾರೆ ಈ ಬಾಬಾ, ಅಣ್ಣಾ ಹಜಾರೆ ದೂರವಿಟ್ಟ ರಾಜಕೀಯ ಮಂದಿಯನ್ನ ಸ್ವಾಗತಿಸಿ ಪಕ್ಕಕ್ಕಿಟ್ಟುಕೊಳ್ಳುವ ಬಾಬಾ ೧೧೦೦೦ಮಂದಿಯ ಸ್ತ್ರೀ-ಪುರುಷರ ಪಡೆ ರಚಿಸುವ ದೀಕ್ಷೆ ತೊಡುತ್ತಾರೆ. ಕೇಂದ್ರ ಸರ್ಕಾರದಿಂದ ಯೋಗ ಶಿಬಿರದ ಹೆಸರಲ್ಲಿ ಅನುಮತಿ ಪಡೆದು ಕಪ್ಪು ಹಣ ತರಬೇಕೆಂದು ಹೋರಾಟಕ್ಕಿಳಿಯುವ ಬಾಬಾ ಮೊದಲೇ ತನ್ನ ಬೆಂಬಲಿಗರಿಗೆ ತಿಳಿಯದಂತೆ ಕೇಂದ್ರಕ್ಕೆ ಹೋರಾಟ ಅಂತ್ಯಗೊಳಿಸುವ ಮುಚ್ಚಳಿಕೆ ಬರೆದುಕೊಡುತ್ತಾರೆ. ತನ್ನನ್ನು ಹೀನಾಯವಾಗಿ ಹತ್ತಿಕ್ಕುವ ಕೇಂದ್ರದ ಕೃತ್ಯದ ನಂತರವೂ ಪ್ರಧಾನಿ ಮನಮೋಹನ್ ಸಿಂಗರನ್ನು ಕ್ಷಮಿಸಿದ್ದೇನೆ ಎಂಬ ಮಾತು ಹೇಳುವ ಬಾಬಾ ತಾನು ಹೋರಾಟ ಕುಳಿತ ದಿನದಿಂದಲೂ ಪ್ರತೀ ದಿನ ಎಡಬಿಡದೇ ಮಾದ್ಯಮಗಳಿಗೆ ಸಂದರ್ಶನ ನೀಡುತ್ತಾರೆ ಅಂದರೆ ಇಷ್ಟು ಸಾಕಲ್ಲವೇ ಬಾಬಾನ ಅಸಲಿಯತ್ತು ತಿಳಿಯಲು. 
        ಬಾಬಾ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಾಸ್ಸು ತರಬೇಕೆಂದು ಹೇಳುವುದನ್ನು ಒಪ್ಪೋಣ ಆದರೆ ಆ ನಿಲುವಿಗೆ ಬದ್ದತೆಯನ್ನೇ ಪ್ರದರ್ಶಿಸದೇ ಎಳಸುತನವನ್ನೆ ಪ್ರದರ್ಶಿಸಿದರೆ, ನಾಟಕೀಯವಾಗಿ ನಡೆದುಕೊಂಡರೆ ಇದನ್ನು ಬೆಂಬಲಿಸಬೇಕಾ? ಹೋರಾಟದಲ್ಲಿ ನಿರತರಾಗಿದ್ದ ಬಾಬಾ ರಾಮದೇವನನ್ನು ಮದ್ಯರಾತ್ರಿ ಎತ್ತಿಹಾಕಿದ ಕೇಂದ್ರದ ಕ್ರಮ ಅತ್ಯಂತ ಅಮಾನುಷ ಆದರೆ ಈ ಕ್ರಮದಿಂದ ಗಟ್ಟಿತನ ಪ್ರದರ್ಶಿಸಬೇಕಿದ್ದ ಬಾಬಾ ಪ್ರದರ್ಶಿಸಿದ್ದು ಬಾಲಿಶತನವನ್ನ. ಈ ಘಟನೆಯ ನಂತರ ಬಾಬಾ ವಿಚಾರವನ್ನು ಕೆದಕುವ ಪ್ರಯತ್ನ ಮಾಡಲಾಗುತ್ತದೆ ಇದು ವೈಯುಕ್ತಿಕ ಮಟ್ಟದ ಹುನ್ನಾರವೇ ಸರಿ ಆದರೆ ಒಬ್ಬ ವ್ಯಕ್ತಿ ರಾಷ್ಟ್ರೀಯ ಮಟ್ಟದಲ್ಲಿ ಒಮ್ಮೆಗೆ ಚಲಾವಣೆಗೆ ಬಂದನೆಂದರೆ ಆತನ ಪೂರ್ವಾಪರ ತಿಳಿಯುವುದು ಅತ್ಯಂತ ಅಗತ್ಯವೇ ಆಗಿದೆ. ರಾಜಕೀಯದಲ್ಲಿ ಕಾರ್ಪೊರೇಟ್ ಮಂದಿ, ಭ್ರಷ್ಟರು, ಕಳ್ಳರು, ಸುಳ್ಳರು, ಮೋಸಗಾರರು ಪ್ರವೇಶಿಸಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತಂದಿರುವಾಗ ಒಂದು ಪ್ರಮುಖವಾದ ಜನಪರ ಹೋರಾಟದಲ್ಲಿ ನೇತೃತ್ವ ವಹಿಸಲು ಬರುವ ವ್ಯಕ್ತಿಯ ಪೂರ್ವಾಪರ ಮತ್ತು ಆತನ ನೈತಿಕತೆಗಳು ಕೂಡಾ ಪ್ರಶ್ನಾರ್ಹವಾಗಿರಬೇಕಾಗುತ್ತದೆ ಹೀಗಿರುವಾಗ ಆತನ ಬಗ್ಗೆ ತಿಳಿಯುವುದು ಅವಶ್ಯಕ ಮತ್ತು ಶುದ್ದತೆಯನ್ನು ಬಯಸುವುದು ಸಹಾ ಅಗತ್ಯವೇ ಆಗಿದೆಯಲ್ಲವೇ? ಬಾಬಾ ನಿಗೆ ಲಕ್ಷಾಂತರ ಮಂದಿಯನ್ನು ಸೇರಿಸುವ ತಾಕತ್ತಿದೆ ಎಂಬ ವಾದವೂ ಇದೆ. ನೋಡಿ ನಮ್ಮ ದೇಶದಲ್ಲಿ ಮೌಡ್ಯಗಳನ್ನು ಬೆಂಬಲಿಸುವಂತೆ ಇಂತಹ ಬಾಬಾಗಳ ಹಿಂದೆಯೂ ಜನಸಾಗರವಿರುತ್ತದೆ. ವ್ಯವಸ್ಥೆಯ ಚಲನಶೀಲತೆಯಲ್ಲಿ ಭ್ರಷ್ಟಾಚಾರದಂತಹ ವಿಚಾರಕ್ಕೆ ಈಗ ಪ್ರಾಮುಖ್ಯತೆ ಸಿಕ್ಕಿದೆ ಹೀಗಾಗಿ ಜನ ತಂಡೋಪತಂಡವಾಗಿ ಅವರನ್ನ ಹಿಂಬಾಲಿಸದ್ದಾರೆ ಆದರೆ ವಿಚಾರ ಸ್ಪಷ್ಟತೆ ಇಟ್ಟುಕೊಳ್ಳದೇ  ಗಟ್ಟಿತನ ಪ್ರದರ್ಶಿಸದೇ ನಡು ನೀರಿನಲ್ಲಿ ಬೆಂಬಲಿಗರನ್ನು ಕೈ ಬಿಡುವ ಮೂಲಕ ಒಂದು ಚಳುವಳಿಯನ್ನು ದಿಕ್ಕು ತಪ್ಪಿಸುವುದನ್ನು ಒಪ್ಪಲಾದೀತೆ ನೀವೇ ಹೇಳಿ?
           

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...