Sunday, November 15, 2015

ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ!

ದೇಶದಲ್ಲಿ ಅಸಹಿಷ್ಣುತೆಯ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ಕಲ್ಬುರ್ಗಿ ಹತ್ಯೆಯ ಪ್ರಕರಣ ನಿಗೂಡವಾಗಿರುವಾಗಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಧ್ವನಿ ಎತ್ತಲಿಲ್ಲ ಎಂಬ ಕಾರಣಕ್ಕೆ ಆರಂಭಗೊಂಡ ಪ್ರಶಸ್ತಿ ವಾಪ್ಸಿ ಚಳುವಳಿ ಇವತ್ತು ವಿರಾಟ್ ಸ್ವರೂಪ ಪಡೆಯುತ್ತಿದೆ. ಪ್ರಶಸ್ತಿ ವಾಪಸಾತಿ ವಿರುದ್ದವೂ ಅನೇಕರು ವಿವಿಧ ನೆಲೆಗಟ್ಟಿನ ಸಮರ್ಥನೆಯ ಮೂಲಕ ಸಾರ್ವತ್ರಿಕ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಈ ಪರ-ವಿರೋಧದ ಹೊತ್ತಿನಲ್ಲಿಯೇ ಅನೇಕ ಅನೈತಿಕ ಘಟನೆಗಳ, ನೈತಿಕ ಅಧ:ಪತನದ ಸಂಗತಿಗಳ ವಿಶ್ಲೇಷಣೆಯೂ ನಡೆಯುತ್ತಿದೆ. ಇವೆಲ್ಲ ಒಂದು ಕಾಲಘಟ್ಟದಲ್ಲಿ ಆಗಬೇಕಿತ್ತು ತಡವಾಗಿ ಆಗುತ್ತಿದೆಯಷ್ಟೇ! ಈ ಸಂಧರ್ಭದಲ್ಲಿ ಅನೇಕ ಮುಖವಾಡಗಳು ಸಹಾ ಬಯಲಿಗೆ ಬರುತ್ತಿರುವುದು ಸುಳ್ಳೇನಲ್ಲ.
         ದೇಶದಲ್ಲಿ ಅಸಹಿಷ್ಣುತೆ ಇವತ್ತು ಮತ್ತು ನಿನ್ನೆಯದಲ್ಲ. ಭಾರತಕ್ಕೆ ಸ್ವಾತಂತ್ರ ಬಂದಾಗಿನಿಂದಲೂ, ಅದಕ್ಕೂ ಮುಂಚಿನಿಂದಲೂ ಹಾಗೂ ಇವತ್ತಿಗೂ ಶಾಂತಿ ಕದಡುವ, ಸಾಮಾಜಿಕ ಅಸಹನೆಗೆ ಕಾರಣವಾಗುವ ಘಟನೆಗಳು ಜರುಗುತ್ತಲೇ ಇವೆ. ಆದರೆ ವರ್ತಮಾನದಲ್ಲಿ ಅಸಹಿಷ್ಣುತೆಯ ತೀವ್ರತೆ ಹೆಚ್ಚಿದೆ. ನೈತಿಕತೆಗೆ ಧಕ್ಕೆ ತರುವ,ವಿಚಾರವಾದಕ್ಕೆ ಅಡ್ಡಗಾಲಾಗುವ, ಸಾಮಾಜಿಕ ಸಾಮರಸ್ಯವನ್ನು ಕದಡುವ,ಧಾರ್ಮಿಕ ಕಂದಕ ಹೆಚ್ಚಿಸುವ ಸಂಗತಿಗಳು ಪ್ರತೀ ಕ್ಷಣಕ್ಕೂ ವಿವಿಧ ಆಯಾಮಗಳಲ್ಲಿ ಎದುರಾಗುತ್ತಿವೆ. ಇಂತಹ ಸಂದಿಗ್ದ ಸಂಧರ್ಭದಲ್ಲಿ ಅದರದ್ದೇ ಆದ ತಾತ್ವಿಕ ನೆಲೆಗಟ್ಟಿನಲ್ಲಿ ನಿಂತು ತೋರುವ ಸಾತ್ವಿಕ ಪ್ರತಿಭಟನೆಗೆ ಹೆಚ್ಚಿನ ಮಹತ್ವ ಇದೆ. ಮತ್ತು ಅದು ಹೆಚ್ಚು ಪರಿಣಾಮಕಾರಿಯಾದುದು ಆಗಿದೆ. ವಾಸ್ತವವನ್ನು ಗ್ರಹಿಸುವ ಸೂಕ್ಷ್ಮ ಮನಸ್ಥಿತಿ ಮಾತ್ರವೇ ಅಸಹಿಷ್ಣುತೆಯನ್ನು ಖಂಡಿಸಿ ಪ್ರಶಸ್ತಿ ವಾಪಸ್ ಮಾಡುವ ಕ್ರಿಯೆಯನ್ನು ಒಪ್ಪಿಕೊಳ್ಳುತ್ತದೆ. ಆದರೆ ಗ್ರಹಿಕೆಯ ಸೂಕ್ಷ್ಮವನ್ನು ಕಳೆದುಕೊಂಡ ಮನಸ್ಸುಗಳಿಗೆ ಪ್ರಶಸ್ತಿ ವಾಪಸಾತಿ ಹಿಂದಿನ ಶಕ್ತಿಯ ಅರಿವಿಗೆ ಬರುವುದೇ ಇಲ್ಲ, ಬದಲಿಗೆ ಮೇಲ್ನೋಟಕ್ಕೆ ಸಿಗುವ ಸಂಗತಿಗಳನ್ನೆ ಮುಂದುಮಾಡಿಕೊಂಡು ವಿತಂಡ ವಾದಕ್ಕೆ ಇಳಿದು ಬಿಡುತ್ತಾರೆ. 
        ಒಂದು ಮಾನವೀಯ ಸಂಗತಿಗೆ ನೈತಿಕ ನೆಲಗಟ್ಟಿನಲ್ಲಿ ನಿಂತು ಪ್ರತಿಕ್ರಿಯಿಸ ಬಹುದಾದ ವ್ಯಕ್ತಿ ಮಾತ್ರವೆ ಮುನುಷ್ಯ ಎನಿಸಿಕೊಳ್ಳುತ್ತಾನೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆಯುವ, ಪ್ರತಿಕ್ರಿಯಿಸುವ ಕ್ರಿಯೆಗಳು ಅಸಹಿಷ್ಣುತೆಯನ್ನು ಬೆಂಬಲಿಸುವ ಕ್ರಿಯೆಗಳಾಗುತ್ತವೆ. ಯಾವುದಕ್ಕೆ ಯಾವುದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು ಎಂಬ ಅರಿವಿಲ್ಲದೇ ಬೇರೆ ಬೇರೆ ಆಯಾಮದಲ್ಲಿ ಘಟಿಸುವ ಸಂಗತಿಗಳನ್ನು ತುಲನೆಗೆ ತೆಗೆದುಕೊಳ್ಳುವುದು ಪಲಾಯನ ವಾದವಲ್ಲದೇ ಮತ್ತೇನೂ ಆಗಿರದು.

ಕನ್ನಡ ಸಾಹಿತ್ಯ ಲೋಕದ ನೈತಿಕತೆಯ ಅಂತ:ಶಕ್ತಿಯಾಗಿರುವ ಸಾಹಿತಿ ದೇವನೂರ ಮಹದೇವ ಭಾರತ ಸರ್ಕಾರ ನೀಡಿದ ಪದ್ಮಶ್ರೀ ಗೌರವ ಪುರಸ್ಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿಯನ್ನು ಸಾಂಕೇತಿಕವಾಗಿ ಹಿಂತಿರುಗಿಸಿ ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಪಡೆದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚ ಇರುವ ಕುರಿತು ಪ್ರಸ್ತಾಪಿಸಿದ್ದಾರೆ. ಬಹುಶ: ಪ್ರಜ್ಞಾವಂತರಾದ ಯಾರೆ ಆದರೂ ಈ ಮಾತುಗಳ ಹಿಂದಿನ ವಾಸ್ತವಗಳನ್ನು ಗ್ರಹಿಸಿದರೆ ಪ್ರಶಸ್ತಿ ವಾಪ್ಸಿ ಚಳುವಳಿಯ ವಿರುದ್ದ ನಿಲ್ಲಲಾರರೇನೋ.
        ಒಟ್ಟಾರೆಯಾಗಿ ಹೇಳುವುದಾದರೆ ಯಾರ ವಿರುದ್ದವಾಗಿ ಮತ್ತು ಯಾರ ಪರವಾಗಿ ಪ್ರಶಸ್ತಿ ಕೊಟ್ಟರು ಎನ್ನುವ ವಾಗ್ವಾದವನ್ನು ಬದಿಗಿಟ್ಟು ನೋಡಿದರೆ ಪ್ರಶಸ್ತಿ ವಾಪಸಿ ಎನ್ನುವ ನಿರ್ದಾರದಡಿ ಸೈದ್ದಾಂತಿಕ ತತ್ವವಿದೆ ಮತ್ತು ಸಾಮಾಜಿಕ ಜಾಗೃತಿಯ ಸಂದೇಶವಿದೆ. ಸಾಹಿತ್ಯ ಮತ್ತು ಬೌದ್ದಿಕತೆ ಎನ್ನುವುದು ಘಟನೆಗಳ ಹಿಂದಿನ ರಾಜಕಾರಣ ಮತ್ತು ಪರಿಣಾಮಗಳೆರಡನ್ನೂ ಭೂತ-ಭವಿಷ್ಯತ್ ನೆಲೆಯಲ್ಲಿ ತರ್ಕಿಸುತ್ತದೆ. ವಿಷಯವೊಂದು ಇಡೀ ದೇಶದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಾ, ಅಸಹನೆಯನ್ನು ಸೃಷ್ಟಿಸಿ ಮುಂದೆ ಬದುಕಲಸಾಧ್ಯವಾದ ಪರಿಸ್ಥಿತಿಗೆ ಕಾರಣವಾಗಬಲ್ಲ ಮನೋಸ್ಥಿತಿಯನ್ನು ನಿರ್ಮಿಸುತ್ತದೆ ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಮತ್ತು ಜರೂರತ್ತು ಖಂಡಿತಾ ಇದೆ. ಅದರ ಒಂದು ಭಾಗವೇ ಪ್ರಶಸ್ತಿ ವಾಪಸ್. ಅಚ್ಚರಿ ಎಂದರೆ ಅವತ್ಯಾಕೆ ಕೊಟ್ಟಿಲ್ಲ, ಇವತ್ಯಾಕೆ ಕೊಡ್ತೀರಿ, ದುಡ್ಡು ವಾಪಸ್ ಕೊಡ್ತೀರಾ ಎನ್ನುವ ಚರ್ಚೆಗಷ್ಟೆ ನಾವು ಸೀಮಿತರಾಗಿದ್ದೇವೆ. ಎತ್ತಿದ ಪ್ರಶ್ನೆ ಮತ್ತು ಅದು ಜಾಗತಿಕವಾಗಿ ಉಂಟು ಮಾಡಿದ ಪರಿಣಾಮಗಳ ಬಗ್ಗೆ ಆದ ಚರ್ಚೆ ಮೂಲ ನೆಲೆಗಳಲ್ಲಿ ಆಗಿಲ್ಲ.ಜಾಗತಿಕ ನೆಲೆಯಲ್ಲಿ ಅದೊಂದು ಗಂಭೀರ ಸಂಗತಿ ಎಂದು ಒಪ್ಪಿಕೊಂಡರೆ ಮೂಲವನ್ನು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಕು. ಪ್ರಶಸ್ತಿ ವಾಪಸ್ ಮಾಡುವವರು ಮತ್ತು ಅದನ್ನು ವಿರೋಧಿಸುವವರು ಇಬ್ಬರಿಗೂ ಅವರವರದ್ದೇ ಆದ ಅಜೆಂಡಾಗಳಿವೆ ಆದರೆ ಅವಕ್ಕೆ ಅರ್ಥ ಸಿಗಬೇಕೆಂದರೆ ಪ್ರತಿಭಟನೆ, ಸತ್ಯಾಗ್ರಹ, ಉಪವಾಸ, ಪ್ರಶಸ್ತಿ ವಾಪಸಿಗಳು ನಿಜಾರ್ಥದಲ್ಲಿ ಎಲ್ಲ ನೆಲೆಗಳನ್ನು ಮೀರಿ ಜೀವಪರ ಕಾಳಜಿಯಿಂದ ನಡೆದಾಗ ಮಾತ್ರವೇ ಗಾಢ ಪರಿಣಾಮವನ್ನು ಬೀರುತ್ತವೆ ಎನ್ನುವುದರಲ್ಲಿ ಎಷ್ಟೊಂದು ಸತ್ಯವಿದೆ ಅಲ್ಲವೇ? ಬೌದ್ದಿಕ ದಾರಿದ್ರ್ಯ ಯಾವತ್ತಿಗೂ ಕಂಟಕ ಎನ್ನುವ ಸತ್ಯ ಬೇಗ ಅರಿವಿಗೆ ಬರಲಿ. ಅಂದ ಹಾಗೆ ಜಿಲ್ಲೆಯಲ್ಲಿ ಇಂತಹ ಕ್ರಿಯೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದೆ ಮುಗುಮ್ಮಾಗಿರುವುದು "ದುರ್ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಹೆಚ್ಚು ಅಪಾಯಕಾರಿ" ಎಂಬ ಮಾತನ್ನು ನೆನಪಿಸುತ್ತಿದೆ ;)

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...