Thursday, October 19, 2017

ಲಂಡನ್ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಹೆಚ್ ಎನ್ ಗಿರೀಶ್ ಎಂಗೇಜ್ ಮೆಂಟ್ ಫಿಕ್ಸ್




  • ಅರಕಲಗೂಡು ಜಯಕುಮಾರ್/7899606841-7338474765


ಐತಿಹಾಸಿಕ ಲಂಡನ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಹೈ ಜಂಪ್ ಬೆಳ್ಳಿ ಪದಕ ವಿಜೇತ ಹೆಚ್ ಎನ್ ಗಿರೀಶ ಕಂಕಣ ಬಂಧನಕ್ಕೆ ಸಜ್ಜಾಗುತ್ತಿದ್ದಾರೆ.ಸಧ್ಯ ಗಿರೀಶ್ ನವೆಂಬರ್ ನಲ್ಲಿ 27 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್ ಏಷಿಯನ್ ಫೆಡರೇಶನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸುತ್ತಿದ್ದಾರೆ. ಈ ನಡುವೆ ಬೆಳ್ಳಿ ಹುಡುಗನ ಎಂಗೇಜ್ ಮೆಂಟ್ ಸುದ್ದಿ ಹೊರ ಬಿದ್ದಿದೆ. 


ಇದೇ ಅಕ್ಟೋಬರ್ 22 ರಂದು ತವರೂರು ಹಾಸನದ ತನ್ವಿ ತ್ರಿಷಾ ಕಲ್ಯಾಣ ಮಂಟಪದಲ್ಲಿ ಎಂಗೇಜ್ ಮೆಂಟ್ ನಡೆಯುತ್ತಿದೆ. ಎಂಗೇಜ್ ಮೆಂಟ್ ಮುಗಿಸಿದ 3 ದಿನಗಳಿಗೆ ಯುಕೆ ಪೋರ್ಚುಗಲ್ ನಲ್ಲಿ ನಡೆಯುವ ವಿಶ್ವ ಗೇಮ್ಸ್ ನಲ್ಲಿ ಪಾಲ್ಗೊಳ್ಳುವರು. ಸಧ್ಯ ಜಾಗತಿಕ ಹೈಜಂಪ್ ರ್ಯಾಂಕಿಗ್ ನಲ್ಲಿ ಅಗ್ರ ನಾಲ್ಕನೇ ಶ್ರೇಯಾಂಕದಲ್ಲಿದ್ದಾರೆ. ಹಾಸನ ಮೂಲದವರೇ ಆದ ಮತ್ತು ಸರ್ಕಾರಿ ಕರ್ತವ್ಯ ನಿಮಿತ್ತ ಮೈಸೂರಿನಲ್ಲಿ ನೆಲೆಸಿರುವ ನಾಗರತ್ನ ಎಂಬುವವರ ಪುತ್ರಿ ಸಹನಾ ಬೆಳ್ಳಿ ಹುಡುಗನನ್ನು ವರಿಸಲಿದ್ದಾರೆ. ಸಹನಾ ಮೈಕ್ರೋಬಯೋಲಜಿಯಲ್ಲಿ ಎಂ ಎಸ್ಸಿ ಸ್ನಾತಕ ಪದವಿ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ ಮಾಹೆಯಲ್ಲಿ ಗಿರೀಶ್ ಮದುವೆ ನಿಕ್ಕಿಯಾಗಿದೆ. 




2012ರಲ್ಲಿ ನಡೆದ ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಹೈಜಂಪ್ ಬೆಳ್ಳಿ ಪದಕ ಜಯಿಸಿದ್ದ ಗಿರೀಶ್ ಆ ವರ್ಷ ಭಾರತಕ್ಕೆ ಪದಕಗಳ ಕೊರತೆಯನ್ನು ನೀಗಿಸಿದ್ದರು ಹಾಗೂ ಪ್ಯಾರಾಲಿಂಪಿಕ್ಸ್ ನಲ್ಲಿ ಮೊದಲ ಬೆಳ್ಳಿ ಪದಕ ಜಯಿಸಿದ ಕನ್ನಡಿಗರು ಹೌದು. ಇವರ ಸಾಧನೆಗಾಗಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ಹಾಗೂ ಪ್ರತಿಷ್ಠಿತ ಅರ್ಜುನ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬೆಂಗಳೂರು ವಲಯದ ಕೇಂದ್ರದಲ್ಲಿ ಕೋಚ್ ಹುದ್ದೆಯನ್ನು ಸಹಾ ಗಿರೀಶ್ ಗೆ ನೀಡಲಾಗಿದೆ. ರಾಜ್ಯ ಸರ್ಕಾರ 6 ನೇ ತರಗತಿಯ ಪಠ್ಯದಲ್ಲಿ ಗಿರೀಶ್ ಸಾಧನೆ ಕುರಿತ ಅಧ್ಯಾಯವನ್ನು ಸೇರಿಸಿದೆ. 




ಹೆಚ್ ಎನ್ ಗಿರೀಶ್ ಹೇಮಾವತಿ ಜಲಾಶಯದ ಪುನರ್ವಸತಿ ಗ್ರಾಮ ಕೊಡಗಿನ ಗಡಿ ಪ್ರದೇಶದಲ್ಲಿರುವ ಹೊಸನಗರದವರು, ತಂದೆ ನಾಗರಾಜೇಗೌಡ, ತಾಯಿ ಜಯಮ್ಮ ಕೃಷಿ ಕಾರ್ಮಿಕರು. ಯಾವ ಗಾಡ್ ಫಾದರ್ ಗಳ ನೆರವಿಲ್ಲದೇ, ಮೂಲ ಸೌಕರ್ಯಗಳ ಕೊರತೆ, ಹಾಗೂ ಅಂಗವೈಕಲ್ಯದ ಕೊರತೆಯ ನಡುವೆಯೂ ಯಶಸ್ಸಿನ ಮೆಟ್ಟಿಲು ಏರಿ ಭಾರತದ ಕೀರ್ತಿ ಪತಾಕೆಯನ್ನು ಬ್ರಿಟೀಷ್ ಅಂಗಳದಲ್ಲಿ ಎತ್ತಿ ಹಿಡಿದ ಹೆಮ್ಮೆ ಹೆಚ್ ಎನ್ ಗಿರೀಶ್ ಅವರದ್ದು.



Padmashree H N Girish Achievements video clips here

ಹೆಚ್ ಎನ್ ಗಿರಿಶ್ ಕುರಿತ ಕೆಲವು ವಿಡಿಯೋ ಲಿಂಕ್ ಗಳು ಇಲ್ಲಿವೆ.









Tuesday, July 25, 2017

ಅಂಬೇಡ್ಕರರನ್ನು ಅರಿಯುವುದೆಂದರೆ….

ಭಾರತದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆಮೀಸಲಾತಿನಿಗದಿಯಾಗಿದ್ದು ಹಿಂದುಳಿದ ವರ್ಗದವರಿಗೆ, ಅದೂ ದಕ್ಷಿಣ ಭಾರತದಲ್ಲಿ ಶಾಹು ಮಹಾರಾಜ ಇಚ್ಛಾಶಕ್ತಿಯ ಫಲ. ನಂತರ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡುವ ನಿರ್ದಾರ ಪ್ರಕಟವಾದಾಗ ಪ್ರಖರವಾಗಿ ವಿರೋಧ ವ್ಯಕ್ತಪಡಿಸಿದ ದಿವಾನ್ ವಿಶ್ವೇಶ್ವರಯ್ಯ ದಿವಾನ ಗಿರಿಗೆ ರಾಜೀನಾಮೆ ಒಗೆದು ಹೊರ ಬಿದ್ದರು. ಆದರೆ ಇವತ್ತಿಗೂ ಅರಿವುಗೇಡಿ ಮಂದಿ ಅವರ ಚಿತ್ರಗಳನ್ನಿಟ್ಟುಕೊಂಡು ದೇವರಂತೆ ಪೂಜಿಸುತ್ತಾರೆ ಎಂಬುದು ವಿಷಾದನೀಯ.

ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಿಂದುಳಿದ ವರ್ಗದ ಹಿತಾಸಕ್ತಿ ರಕ್ಷಿಸಲು ಎಲ್ ಜಿ ಹಾವನೂರು ಸಮಿತಿಯನ್ನು ರಚಿಸಿದರು. ಹಾವನೂರು ವರದಿಯ ಫಲ ಇವತ್ತು ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗ ಮೀಸಲಾತಿಯನ್ನು ಅನುಭವಿಸುತ್ತಿದೆ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ದಲಿತರಿಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ ನೀಡಲಾಗಿದೆ (ಶೇ. 27). ಆದರೆ ಗುಂಪುಗಾರಿಕೆ, ಸ್ವಾರ್ಥ ಹಿತಾಸಕ್ತಿ, ಅರಿವಿನ ಪ್ರಜ್ಞೆ, ಸಂಘಟನೆಯ ಕೊರತೆ ಇರುವುದರಿಂದ  ಈ ಮೀಸಲಾತಿಯ ಪೈಕಿ ಸುಮಾರು ಶೇ. 4ರಷ್ಟು ಪ್ರಮಾಣವನ್ನು ಮಾತ್ರ ಅನುಭವಿಸುತ್ತಿದ್ದಾರೆ.

ಹಿಂದುಳಿದ ವರ್ಗದವರು ಸದಾ ಕಾಲಕ್ಕೂ ನೆನಪಿಟ್ಟುಕೊಳ್ಳ ಬೇಕಾದ ಮತ್ತು ಪೂಜಿಸ ಬೇಕಾದ ವ್ಯಕ್ತಿ ಭಾರತದ ಪ್ರಧಾನಿಯಾಗಿದ್ದ ವಿ ಪಿ ಸಿಂಗ್. ವಿ ಪಿ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮಂಡಲ್ ಆಯೋಗದ ವರದಿ ಜಾರಿಗೆ ತರಲು ಹೊರಟರೆ, ಮೇಲ್ವರ್ಗದ ಚಿತಾವಣೆಗೆ ಸಿಲುಕಿದ ಶೂದ್ರರೇ ಮಂಡಲ್ ಆಯೋಗದ ಅನುಷ್ಠಾನಕ್ಕೆ ಬಹು ದೊಡ್ಡ ತಡೆಗೋಡೆಯಾಗಿ ನಿಂತು ಬಿಟ್ಟರು. ರಾಷ್ಟ್ರಾಧ್ಯಂತ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿ ಹರತಾಳ ನಡೆದವು. ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ತರಲು ಹೊರಟರೆ ಅಲ್ಲಿಯೂ ಅರಿವುಗೇಡಿಗಳು ಪ್ರತಿಭಟನೆಗೆ ನಿಂತು ಅಪೂರ್ವ ಅವಕಾಶವನ್ನು ತಪ್ಪಿಸಿಕೊಂಡವು.

ಇಷ್ಟಕ್ಕೂ ಈ ಮೀಸಲಾತಿ ಎಂದರೆ ಏನು? ಯಾಕೆ ಅದನ್ನು ವಿರೋಧಿಸಲಾಗುತ್ತಿದೆ? ಮೀಸಲಾತಿ ಫಲಾನುಭವಿಗಳನ್ನು ತುಚ್ಚವಾಗಿ ನೋಡುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳನ್ನು ವರ್ತಮಾನದಲ್ಲಿ ಪ್ರತಿಯೊಬ್ಬರು ಹಾಕಿಕೊಳ್ಳ ಬೇಕಾದ ಅಗತ್ಯವಿದೆ. ಮೀಸಲಾತಿ ಹಿಂದಿನ ಸತ್ಯಗಳನ್ನು ಪುನರಾವಲೋಕನ ಮಾಡಿಕೊಳ್ಳುವಾಗ ಅರಗಿಸಿಕೊಳ್ಳಲಾಗದ ವಾಸ್ತವಗಳನ್ನ ಗ್ರಹಿಕೆಗೆ ತಂದುಕೊಳ್ಳುವ ಸೂಕ್ಷ್ಮತೆ ವರ್ತಮಾನದಲ್ಲಿ ಕಳೆದು ಹೋಗಿರುವುದರಿಂದಮೀಸಲಾತಿಪರಿಧಿಯನ್ನು ಆರ್ಥಿಕತೆಯ ಮಾನದಂಡದಲ್ಲಿ ಗ್ರಹಿಸುವ ಅಪಾಯ ಸನ್ನಿವೇಶದಲ್ಲಿದ್ದೇವೆ.

ಮೀಸಲಾತಿ ಎಂದರೆ ಸಾಮಾಜಿಕ ನ್ಯಾಯದ ಮಾನದಂಡ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಕ್ರಿಯೆಗಳು ಸತ್ತು ಹೋಗಿರುವ  ಈ ಹೊತ್ತಿನಲ್ಲಿ ಧ್ವನಿ ಅಡಗಿ ಹೋದ ಜೀವಗಳಿಗೆ ಕನಿಷ್ಠ ಉಸಿರಾಡುವಂತೆ ಮಾಡುವ ಕ್ರಿಯೆ. ಜೀವಪರ ಕಾಳಜಿಯ ಸೂಕ್ಷ್ಮ ಮನಸ್ಸುಗಳಿಗೆ ಮಾತ್ರ ಇದು ಅರ್ಥವಾದೀತು. ಸಾಮಾಜಿಕ ಅಸ್ಪೃಶ್ಯತೆಗೂ, ಆರ್ಥಿಕ ಅಸ್ಪೃಶ್ಯತೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೆಯೇ ದಲಿತರು ಅನುಭವಿಸುವ ಅಸ್ಪೃಶ್ಯತೆಗೂ, ಅಮೇರಿಕಾದ ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಗೂ ಸಾಕಷ್ಟು ವ್ಯತ್ಯಾಸವಿದೆ. ದಲಿತರು ಅನುಭವಿಸುವ ಸಾಮಾಜಿಕ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳನ್ನೇ ನಿರಾಕರಿಸಲಾಗುತ್ತದೆ, ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳಿಗೆ ಧಕ್ಕೆಯಿಲ್ಲ ಆದರೆ ಸಮಾನತೆಯ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ. ಹಾಗಾಗಿ ಭಾರತದಲ್ಲಿ ದಲಿತರು ಅನುಭವಿಸುವ ಸಾಮಾಜಿಕ ಅಸಹನೆ ಅತ್ಯಂತ ಕ್ರೂರವಾದುದು, ಮತ್ತು ಆ ವರ್ಗಕ್ಕೆ ಮಾನಸಿಕ ಸ್ಥೈರ್ಯ ನೀಡುವ ಕೆಲಸಮೀಸಲಾತಿಯಿಂದ ಮಾತ್ರ ಸಾಧ್ಯ ಎಂಬುದು ಇಂದಿನ ತುರ್ತು.

ಮೀಸಲಾತಿಯ ಫಲಾನುಭವಿಗಳ ಪಟ್ಟಿಯಲ್ಲಿ ಮಹಿಳೆಯರು ವರ್ತಮಾನದಲ್ಲಿ ಮಂಚೂಣಿ ಸ್ಥಾನ ಪಡೆದಿದ್ದಾರೆ. ಸಂಸತ್ ನಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂದು ಪಟ್ಟು ಹಿಡಿದ ಭಾರತ ರತ್ನ ಸಮತೆಯ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ತಮ್ಮ ಬೇಡಿಕೆ ಈಡೇರದಿದ್ದಾಗ ರಾಜೀನಾಮೆ ಒಗೆದು ಬಂದರು, ಅಧಿಕಾರವನ್ನೇ ತ್ಯಾಗ ಮಾಡಿದರು ಅಂತಹ ಅಂಬೇಡ್ಕರ್ ಗೆ ಇವತ್ತು ಮಹಿಳಾ ವಲಯದಲ್ಲಿ ಸ್ಥಾನವಿಲ್ಲ! ಸಾಮಾಜಿಕ ವಲಯದಲ್ಲಿ ಹಕ್ಕುಗಳನ್ನು ಪ್ರತಿಪಾದಿಸುವ, ಪ್ರಶ್ನೆಗಳನ್ನು ಕೇಳುವ ಚಳುವಳಿ ರೂಪಿತವಾಗಿದ್ದೆ ಡಾ ಬಿ ಆರ್ ಅಂಬೇಡ್ಕರ್ ಅವರಿಂದ. ಪ್ರತಿಫಲನವಾಗಿ ಸ್ವತಂತ್ರ ಭಾರತದಲ್ಲಿ ಸಾರ್ವತ್ರಿಕವಾಗಿ ಹುಟ್ಟಿದ ಎಲ್ಲ ಚಳುವಳಿ ಹಿಂದೆಯೂ ಅಂಬೇಡ್ಕರ್ ಹಾಕಿ ಕೊಟ್ಟ ಬುನಾದಿ ಇದೆ. ಆದರೆ ಅಂಬೇಡ್ಕರ್ ಅವರನ್ನು ಅರಿಯುವ ಪ್ರಯತ್ನಗಳಿಗೆ ಹಿನ್ನೆಡೆಯಾಗಿದೆ. ಅಂಬೇಡ್ಕರ್ ತೋರಿದ ಹಾದಿಯಲ್ಲಿ ನಡೆಯುವ ಬದಲಿಗೆ ಅವರನ್ನೆ ದೇವರಾಗಿ ಪೂಜಿಸುತ್ತಾ ಅದರಾಚೆಗೂ ಅಂಬೇಡ್ಕರ್ ತೋರಿಸದ ಬೆಳಕಿನ ಹಾದಿಯಿದೆ ಎಂಬ ಸತ್ಯ ದಲಿತರಿಗೂ ಅರ್ಥವಾದಂತಿಲ್ಲ. ಇದರ ಪರಿಣಾಮ ದಲಿತೇತರರು ಅಂಬೇಡ್ಕರರನ್ನು ಅರಿಯುವ ಪ್ರಯತ್ನಕ್ಕೆ ಭಾಗಶ: ತಡೆಗೋಡೆಯಾಗಿರ ಬಹುದೇನೋ.

ಇತಿಹಾಸದತ್ತ ಹೊರಳಿ ನೋಡಿದರೆ ಕಠಿಣ ಸ್ಥಿತಿಯಲ್ಲಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯಕ್ಕಾಗಿ ಸೆಣಸಿದರು, ಆದರೆ ಅವತ್ತಿನ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಸಾಂಸ್ಥಿಕ ರೂಪ ಕೊಡುವ ಮುನ್ನವೇ ಕಗ್ಗೊಲೆಯಾದರು. ಬಸವೇಶ್ವರರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ, ಚಳುವಳಿಗೆ ತಾರ್ಕಿಕವಾಗಿ ಸಾಂಸ್ಥಿಕ ರೂಪುಕೊಟ್ಟವರು ಅಂಬೇಡ್ಕರ್. ಅವರು ಸಾಮಾಜಿಕ ನ್ಯಾಯದ ಪರಿಧಿಯಾಚೆಗೂ ತಮ್ಮ ಜ್ಞಾನದ ಹರವನ್ನು ವಿಸ್ತರಿಸಿದ್ದರು. ಅಲ್ಲಿ ಬೆಳಕಿತ್ತು ಆದರೆ ಆ ಬೆಳಕನ್ನು ಗುರುತಿಸಲಾಗದೇ ಅಂಬೇಡ್ಕರರನ್ನು ಸಹಾಮೀಸಲಾತಿಯ ಪರಿಧಿಯಲ್ಲೇ ನೋಡುವ ಮೂಲಕ ಬಹು ಸಂಖ್ಯೆಯ ದಲಿತೇತರರು ರೋಗಗ್ರಸ್ಥ ಮನಸ್ಥಿತಿಯಲ್ಲೇ ಕೊಳೆಯುತ್ತಿದ್ದಾರೆ.


ಅಂಬೇಡ್ಕರರನ್ನು ದಕ್ಕಿಸಿಕೊಳ್ಳುವುದೆಂದರೆ ಪ್ರಶ್ನಾ ಮನೋಭಾವ, ಹಕ್ಕುಗಳ ಪ್ರತಿಪಾದನೆ, ಪ್ರಗತಿಪರವಾದ ಚಿಂತನೆ, ವಾಸ್ತವವನ್ನು ಪರಿಗ್ರಹಿಸಿ ನೋಡುವುದೇ ಆಗಿದೆ. ಆದರೆ ವರ್ತಮಾನದಲ್ಲಿ ಸೂಕ್ಷ್ಮ ಗ್ರಹಿಕೆಗಳೇ ಕಳೆದು ಹೋಗಿವೆ, ಅರಿವಿನ ಬೆಳಕಿಗೆ ವರ್ತಮಾನದಲ್ಲಿ ನಮ್ಮನ್ನು ಒಡ್ಡಿಕೊಳ್ಳ ಬೇಕಿದೆ. ಅಂಬೇಡ್ಕರ್ ಎಂಬ ಹಣತೆಯನ್ನು ಎದೆಯ ಗೂಡಿನಲ್ಲಿ ಇರಿಸಿಕೊಂಡು ಪುನರಾವಲೋಕಿಸಬೇಕಾದ ತುರ್ತು ಇದೆ

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...