Sunday, April 15, 2012

ಕನ್ನಡ ಸಾಹಿತ್ಯ(ಜಾತಿ) ಪರಿಷತ್ ಚುನಾವಣೆ..!


ನಾನು ಕನ್ನಡ ಜಾತಿಯವನು ಅಂದ್ರೆ ತಪ್ಪಿಲ್ಲ.... ಆದ್ರೆ ಇದೆಂಥಹದು ಮಾರಾಯ್ರೇ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಾತಿ ಆಧರಿಸಿದ ರಾಜಕೀಯ? ಪರಮ ಅಸಹ್ಯ ಸೃಷ್ಟಿಸಿರುವ ಸನ್ನಿವೇಶ ಇದು.ಅಸಲಿಗೆ ಕನ್ನಡ ಸಾಹಿತ್ಯ ಪರಿಷತ್ ಅಂದರೆ ಏನು? ಅದರ ದ್ಯೇಯೋದ್ದೇಶಗಳೇನು? ಆ ಮೂಲಕ ಸಾಕಾರ ಆಗಬೇಕಾದುದೇನು? ಅಲ್ಲಿ ಅಧಿಕಾರವೆಂಬ ಹೊಣೆ ಹೊರಲು ಯಾವ ಯೋಗ್ಯತೆ ಇರಬೇಕು ? ಹೊಣೆಗಾರಿಕೆಯ ಆಯ್ಕೆ ಹೇಗಿರಬೇಕು ? ಮತದಾರರ ಜವಾಬ್ದಾರಿ ಏನು ? ಗೆದ್ದು ಬಂದವರು ಕಿಸಿಯುವುದೇನು?ನಾಡು ನುಡಿ ಕುರಿತು  ನಮ್ಮ ಕನಸುಗಳು ಮತ್ತು ಪರಿಷತ್ತಿನ  ಆಶಯಗಳು ಹೇಗೆ ದಿಕ್ಕು ತಪ್ಪಿವೆ ಎಂಬ ಕುರಿತು ಚರ್ಚಿಸಲು ಇದು ಸಕಾಲ.
          ರಾಜ್ಯ ರಾಜಕಾರಣದಲ್ಲಿ ಪರಿಪೂರ್ಣವಾಗಿ ಜಾತಿ ಆಧಾರಿತ ರಾಜಕೀಯ ರಾಡಿಯನ್ನು ಸೃಷ್ಟಿಸಿರುವ ಬಿಎಸ್ ವೈ ಮೊದಲ ಭಾರಿಗೆ ರಾಜ್ಯದ ಮಾನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಜಾತಿಯನ್ನೇ ಮುಂದು ಮಾಡಿಕೊಂಡು ಸಮಾವೇಶಗಳನ್ನ, ಸಂಚಾರ ಯಾತ್ರೆಗಳನ್ನ ಮಾಡುತ್ತಿದ್ದಾರೆ. ಜಾತಿಯ ಕಾರಣಕ್ಕಾಗಿಯಾದರೂ ಸಿಎಂ ಸದಾನಂದಗೌಡರನ್ನ ಪಟ್ಟದಿಂದ ಕೆಡವಲು ಹುನ್ನಾರ ನಡೆಸಿದ್ದಾರೆ. ಯಡ್ಡಿಯ ತಾಳಕ್ಕೆ ಅನುಗುಣವಾಗಿ ಆ ಜಾತಿಯ ಮಠಾದೀಶರುಗಳು,ಆಧುನಿಕ ದೇವರೆಂಬ ಬಿರುದಾಂಕಿತರು! ಮತ್ತು ಜಾತಿಯ ಜನರು ಹಿಂಬಾಲಿಸುತ್ತಿದ್ದಾರೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ನಡೆಯುವ ಯಡ್ಡಿಗೆ ಶಕ್ತಿ ತುಂಬುವ ಸಮಾವೇಶಕ್ಕೆ ಆ ವರ್ಗದ ಜನ ರಾಜ್ಯದ ಪ್ರತೀ ತಾಲೂಕು ಕೇಂದ್ರದಿಂದ  ತೆರಳುತ್ತಾರೆಂದರೆ ಜಾತಿ ರಾಜಕಾರಣ ಎಲ್ಲಿಗೆ ಬಂತು ಲೆಕ್ಕ ಹಾಕಿ! ಹೆಚ್ಚು ಕಡಿಮೆ ಇಂಥಹುದೇ ಪರಿಸ್ಥಿತಿ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕಾಣ ಸಿಗುತ್ತಿದೆ. ಇದು ಕನ್ನಡದ ಪಾಲಿಗೆ ದುರ್ದೈವದ ಸಂಗತಿಯೇ ಹೌದು. 
         ಇರಲಿ ಕನ್ನಡ ಸಾಹಿತ್ಯ ಪರಿಷತ್ ಕುರಿತು ಒಂದು ಕಿರುನೋಟದ ನಂತರ ಅತ್ತ ನೋಡೋಣ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಹೆಸರು ಕರ್ಣಾಟಕ ಸಾಹಿತ್ಯ ಪರಿಷತ್ತು. ಬೆಂಗಳೂರಿನ ಶ್ರೀ ಕೃಷ್ಣರಾಜೆ ಪರಿಷನ್ಮಂದಿರದಲ್ಲಿ 1915ರಲ್ಲಿ ಆರಂಭಗೊಂಡ ಪರಿಷತ್ತಿಗೆ ಚಾಲನೆ ನೀಡಿದ್ದು ಮೈಸೂರಿನ ಅರಸ ಮತ್ತು ರಾಜರ್ಷಿಯಾಗಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರ್. ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದು ಎಚ್ ವಿ ನಂಜುಂಡಯ್ಯ.. ಮುಂದೆ 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಮಾಡಲಾಯಿತು. ಇದು ಕನ್ನಡ ಪುಸ್ತಕಗಳ ಪ್ರಕಟಣೆ ಆ ಮೂಲಕ ಕನ್ನಡ ಬರಹಗಾರರನ್ನು ಪರಿಚಯಿಸುವ ಮತ್ತು ಪ್ರೋತ್ಸಾಹಿಸುವ ಕೆಲಸ, ನಾಡು ನುಡಿಯ ಸಂರಕ್ಷಣೆ ಅಂದರೆ ರಾಜ್ಯದ ಹಿತಕ್ಕೆ ಧಕ್ಕೆ ಆದಾಗ ಧ್ವನಿಯೆತ್ತುವ ಕಾರ್ಯ, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಪೂರಕ ಕ್ರಿಯೆಗಳನ್ನು ನಿರ್ವಹಿಸುವ ಮಹತ್ತರ ಹೊಣೆಗಾರಿಕೆ ಪರಿಷತ್ತಿಗಿದೆ. ತಿ.ತಾ. ಶರ್ಮ, ಎ.ಎನ್ ಮೂರ್ತಿರಾವ್, ಜಿ. ನಾರಾಯಣ, ಹಂಪನಾಗರಾಜಯ್ಯ, ಎಚ್ ಬಿ ಜ್ವಾಲನಯ್ಯ, ಜಿ ಎಸ್ ಸಿದ್ದಲಿಂಗಯ್ಯ, ಗೊ ರು ಚನ್ನಬಸಪ್ಪ, ಸಾ ಶಿ ಮರುಳಯ್ಯ ಮುಂತಾದ ಮಹನೀಯರು ಪರಿಷತ್ತಿನ ಅಧ್ಯಕ್ಷರಾಗಿ ಗುರುತರವಾದ ಕೆಲಸಗಳನ್ನು ಮಾಡಿದ್ದಾರೆ. ಪ್ರಸಕ್ತ ಅಧಿಕಾರದಲ್ಲಿರುವ ಡಾ ನಲ್ಲೂರು ಪ್ರಸಾದ್ ಪರಿಷತ್ತಿಗೆ 23ನೇ ಅಧ್ಯಕ್ಷರು. ಸಾಹಿತ್ಯ ಪರಿಷತ್ತಿಗೆ ಈಗ 97ತುಂಬಿದೆ ಶತಮಾನದ ಹೊಸ್ತಿಲಲ್ಲಿ ಪರಿಷತ್ತ ನಿಂತಿದೆ. 24ನೇ ಅಧ್ಯಕ್ಷ ಗಿರಿಗೆ ಚುನಾವಣೆ ನಡೆಯುತ್ತಿದೆ.
         ಈ ನಡುವೆ ನಾಡು ನುಡಿಗೆ ಪೂರಕವಾದ ನಿರ್ಣಯಗಳನ್ನು ಇದುವರೆಗೂ ನಡೆದಿರುವ 78ರಾಜ್ಯ ಮಟ್ಟದ ಸಮಾವೇಶಗಳು ದಾಖಲಿಸಿವೆ. ಅದ್ದೂರಿತನ ಮೆರೆದಿವೆ ಆದರೆ ಸರ್ಕಾರಗಳ ಇಚ್ಚಾ ಶಕ್ತಿಯ ಕೊರತೆ ಇನ್ನೂ ಪರಿಪೂರ್ಣತೆ ಸಾಧಿಸಲು ವಿಫಲರಾಗಿದ್ದೇವೆ. ಪರಿಷತ್ತಿನ ಅಧ್ಯಕ್ಷರುಗಳ ಪರಿಶ್ರಮದಿಂದ ಹೆಚ್ಚೆಚ್ಚು ಕನ್ನಡ ಜಾತ್ರೆಗಳನ್ನು ನಡೆಸಲು ಸರ್ಕಾಋ ಅನುದಾನಗಳನ್ನ ಮಂಜೂರು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ರಾಜ್ಯ ಸರ್ಕಾರ ಅನುದಾನ ನೀಡುವ ಮಹತ್ವದ ನಿರ್ಣಯಕ್ಕೆ ಸಹಿ ಹಾಕಿದ್ದು 'ಮಣ್ಣಿನ ಮಗ' ಖ್ಯಾತಿಯ ರಾಜ್ಯದ ಅಂದಿನ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ! ನಂತರದಲ್ಲಿ ವಲಯವಾರು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ 4ಕೋಟಿ, ಜಿಲ್ಲಾ ಸಮ್ಮೇಳನಗಳಿಗೆ 5ಲಕ್ಷ, ತಾಲೂಕು ಸಮ್ಮೇಳನಗಳಿಗೆ 1ಲಕ್ಷ ಹೀಗೆ ಸರ್ಕಾರ ಸಹಾಯ ಹಸ್ತ ನೀಡುವ ಕ್ರಮ ಜಾರಿಗೆ ಬಂದಿದೆ. ಇಷ್ಟೇ ಅಲ್ಲ ಒಂದು ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಎಂದರೆ ಅದಕ್ಕಾಗಿ ದೇಣಿಗೆ ನೀಡುವ ಮಂದಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಸಧ್ಯ ಪರಿಷತ್ತಿನ ಸದಸ್ಯತ್ವ ಪಡೆದವರ ಸಂಖ್ಯೆ 1.25ಲಕ್ಷವನ್ನು ಮೀರಿದೆ. ಕನ್ನಡದ ಬಗೆಗಿನ ಪ್ರೀತಿ ಎಷ್ಟು ಮಂದಿಗಿದೆಯೋ ಗೊತ್ತಿಲ್ಲ ಆದರೆ ಭಾವಾಭಿಮಾನಕ್ಕೆ ಹುಕಿಗೆ ಬಿದ್ದು ಸದಸ್ಯರಾದವರೇ ಹೆಚ್ಚು. ಆದರೆ ಇವೆಲ್ಲಾ ಪ್ರಯೋಜನಗಳ ಹಿನ್ನೆಲೆಯಲ್ಲಿ ಅವಕಾಶವನ್ನು ಎನ್ ಕ್ಯಾಶ್ ಮಾಡಿಕೊಂಡು ಸಿಕ್ಕಿದಷ್ಟು ಲೂಟಿ ಹೊಡೆದು ಬಿಟ್ಟಿ ಪ್ರಚಾರ ಮತ್ತು ಕಮಾಯಿ ಪಡೆಯಲು ಪರಿಷತ್ತಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅದನ್ನೇ ದುರ್ದೈವದ ಸಂಗತಿ ಅಂದಿದ್ದು!    
            ಬರೆಯಲು ಕೊಟ್ಟರೆ ನಾಲ್ಕು ಅಕ್ಷರ ಕನ್ನಡ ಬರೆಯಲು ಬಾರದವರು ಮತ್ತು ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದ ಪುಡಿ ರಾಜಕಾರಣಿಗಳು, ಜಾತಿ ಬೆಂಬಲಿತರು,  ಭಯಂಕರ ಕವಿಗಳೆನಿಸಿಕೊಂಡವರು, ಓರಾಟ ವೀರರು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ತಲೆ ತೂರಿಸಿದ್ದಾರೆ. ದುರಾದೃಷ್ಠಕರ ಸಂಗತಿಯೆಂದರೆ ಬಹುತೇಕರೆಲ್ಲರೂ ಜಾತಿಯ ಹಿನ್ನೆಲೆಯಿಂದ ಅವಕಾಶ ಪಡೆಯುವ ಕನಸು ಹೊತ್ತವರೇ ಆಗಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ತಿಂದುಂಡು ಅಭ್ಯಾಸ ಇರುವವರು ಮತ್ತೆ ಮತ್ತೆ ಚುನಾವಣೆಗಳಿಗೆ ಬರುತ್ತಲೇ ಇದ್ದಾರೆ. ಹಾಸನದ ಮಟ್ಟಿಗೆ ಜಾತಿಯ ಲಾಬಿ ಪರಿಷತ್ ಚುನಾವಣೆಯಲ್ಲಿ ಕೆಲಸ ಮಾಡಲಾರದು ಆದಾಗ್ಯೂ ಕೆಲವು ಅಭ್ಯರ್ಥಿಗಳು ಅದನ್ನೇ ಮುಂದು ಮಾಡಿಕೊಂಡು ಹೋಗುತ್ತಿರುವುದು ವಿಷಾಧನೀಯ ಸಂಗತಿ. ಪರಿಷತ್ ಕೆಲಸ ಮಾಡಲು ಸಾಹಿತ್ಯದ ಗಂಧ ತಿಳಿದವರು, ಕ್ರಿಯಾಶೀಲರು, ಒಗ್ಗೂಡಿಸಿ ಕರೆದೊಯ್ಯುವ ಮನಸ್ಥಿತಿಯವರು ಮಾತ್ರ ಬೇಕು ಆದರೆ ಸಧ್ಯಕ್ಕೆ ಅಂತಹ ಮುಖಗಳು ಕಾಣುತ್ತಿಲ್ಲ. ಕಾಟಾಚಾರಕ್ಕೆ ಒಂದು ಅಂತ ಮತಗಳೂ ಬಿದ್ದರೂ 'ಮತಗಳ ಕೊಳ್ಳುವಿಕೆ' ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕನ್ನಡದ ಕೆಲಸಕ್ಕೆ ಇಂಥ ವಾಮಮಾರ್ಗದ ಅಗತ್ಯವಿಲ್ಲ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಕುರಿತು ಬಹುತೇಕರಿಗೆ ಭ್ರಮನಿರಸನ ವಾಗಿದೆ. ದುಡ್ಡು ಮತ್ತು ಜಾತಿಯ ಲಾಬಿಗೆ ಹೆದರಿದ ಮಹಿಳೆಯರು ಮತ್ತು ದಲಿತರು ಚುನಾವಣೆಯಿಂದ ದೂರವೇ ಉಳಿದಿದ್ದಾರೆ,ಈಗ ಹೇಳಿ ಇಂಥಹ ಪರಿಸ್ಥಿತಿ ಬೇಕಿತ್ತಾ? ಕನ್ನಡ ಜಾತಿ ಪರಿಷತ್ತಿಗೆ !!!!

ದಲಿತ ಸೂರ್ಯನ ಕನಸು ನನಸಾಗುವುದೇ?


ಶಿಕ್ಷಣದ ಹಕ್ಕು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟು ಎತ್ತಿಹಿಡಿಯುವ ಮೂಲಕ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ದಲಿತ ಮತ್ತು ಶೋಷಿತ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿದ, ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾ ವಾದಿ ಡಾ|| ಭೀಮರಾವ್ ರಾಮ್ ಜೀ ಅಂಭೇಡ್ಕರ್  ಜನ್ಮ ದಿನಾಚರಣೆಯ ಮುನ್ನಾ ದಿನದಲ್ಲಿ ಹೊರಬಿದ್ದಿರುವ ಈ ತೀರ್ಪು ಐತಿಹಾಸಿಕವೇ ಸರಿ. ಶಿಕ್ಷಣ ಮತ್ತು ಆರೋಗ್ಯ ಇಂದು ಮಾರಾಟದ ಸರಕುಗಳಾಗಿವೆ! ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆಯುವ ಇವೆರೆಡು ಅಂಶಗಳು ಒಂದು ದೇಶದ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವನ್ನ ವಹಿಸುತ್ತವೆ.

ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು, ಮಹಿಳಾ ಮೀಸಲಾತಿ ಯಂತಹ ಪ್ರಮುಖ ಅಂಶಗಳನ್ನು ಮೊದಲ ಭಾರಿಗೆ ಪ್ರಸ್ತಾವಕ್ಕೆ ತಂದು ಅದರ ಅನುಷ್ಠಾನಕ್ಕೆ ಪಟ್ಟು ಹಿಡಿದಿದ್ದ ಡಾ ಅಂಬೇಡ್ಕರ್ 121ನೇ ಜನ್ಮ ಜಯಂತಿಯಂದು ಇಂತಹ ವಿಚಾರ ಚರ್ಚೆಗೆ ಬಂದಿರುವುದು ಸಂತಸದ ಸಂಗತಿಯೇ. ಈ ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣದ ಹಕ್ಕಿದೆ, ಅದನ್ನು ಪಡೆದು ಜಾಗೃತರಾಗಬೇಕು ಸಶಕ್ತವಾದ ಜಾತಿರಹಿತವಾದ ಮುಕ್ರ ಸಮಾಜ ನಿರ್ಮಾಣವಾಗಬೇಕು ಎಂಬ ಕನಸು ಹೊತ್ತಿದ್ದ ಅಂಬೇಡ್ಕರ್ ರ ದೂರದೃಷ್ಠಿಯ ಫಲಗಳ ಸಾಕಾರ ಇಂದು ಅಲ್ಪಮಟ್ಟಿಗಾದರೂ ನಡೆಯುತ್ತಿದೆ ಎಂಬುದೇ ಸಮಾಧಾನಕರ ಸಂಗತಿ  ಆದಾಗ್ಯೂ ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಜಾಗತೀಕರಣದ ಪ್ರಭಾವ ಅಥವಾ ಅಗತ್ಯ ಸೇವೆಗಳು ಮಾರಾಟದ ಉದ್ದೇಶಗಳಾಗಿ ಬಿಂಬಿತವಾಗುತ್ತಿರುವುದರಿಂದ ಸಮಾಜ ಎಷ್ಟೇ ಮುಂದುವರೆದಿದ್ದರು ಅವನ್ನು ದಕ್ಕಿಸಿಕೊಳ್ಳುವಲ್ಲಿ ಅಸಹಾಯಕತೆ ಅನುಭವಿಸುತ್ತಿದ್ದಾನೆ. ಜಾತೀಯ ವ್ಯವಸ್ಥೆ ಅಷ್ಟರ ಮಟ್ಟಿಗೆ ತನ್ನ ಹಿಡಿತವನ್ನು ಸಾಧಿಸಿದ್ದು ಹಿಂದೆಂದಿಗಿಂತಲೂ ಇಂದು ಅವು ಆಳವಾದ ಬೇರುಗಳನ್ನು ಹಬ್ಬಿಸಿವೆ. ಜಾತೀಯ ಪ್ರಾಧಾನ್ಯತೆ ಹಿಂದಿನಷ್ಟು ಸಾರ್ವಜನಿಕವಾಗಿ ಬಿಂಬಿತವಾಗಿಲ್ಲವಾದರೂ ಆಂತರಿಕವಾಗಿ ಹಿಂದೆಂದಿಗಿಂತಲೂ ಹೆಚ್ಚು ಮೇಲುಗೈ ಸಾಧಿಸಿವೆ ಎಂಬುದೇ ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಸರ್ಕಾರ ದಲಿತರಿಗೆ ಶೇ.22.5ರಷ್ಟು ಮೀಸಲು ನಿಗದಿಗೊಳಿಸಿದೆ ಆದರೆ ಅದರಲ್ಲೂ 106ಕ್ಕೂ ಹೆಚ್ಚು ಜಾತಿಗಳನ್ನು ಸೇರಿಸಿದೆ. ಇವರೆಲ್ಲಾ ಮೀಸಲು ಪಡೆಯಲು ಮಾತ್ರ ಮುಗಿ ಬೀಳುತ್ತಾರೆಯೇ ವಿನಹ ದಲಿತರಲ್ಲಿ ಪ್ರಾಧಾನ್ಯ ಪಡೆಯುವ ಎರಡು ಸಂಖ್ಯೆಯ ಜಾತಿಗಳವರು  ಶೋಷಣೆಗೊಳಗಾದಾಗ ಒಗ್ಗಟ್ಟು ಪ್ರದರ್ಶಿಸುವುದಿಲ್ಲ.. ಪರಿಣಾಮ ಕೇವಲ ಶೇ.10ರಷ್ಟು ಮೀಸಲು ಅನುಭವಿಸಲು ಸಾಧ್ಯವಾಗಿದೆ, ಅದೇ ರೀತಿ ಶೋಷಿತರ ಸಾಲಿಗೆ ಸೇರುವ ಹಿಂದುಳಿದವರ್ಗಗಳ ಗುಂಪಿಗೆ ನೂರಕ್ಕೂ ಹೆಚ್ಚು ಜಾತಿಗಳು ಸೇರುವುದರಿಂದ ಈ ಗುಂಪಿಗೆ ಇರುವ ಶೇ.27ರ ಮೀಸಲನ್ನು ಸಮರ್ಪಕವಾಗಿ ಬಳಸಲು ಸಾದ್ಯವೇ ಆಗಿಲ್ಲ ಎಂಬುದು ಮತ್ತು ದುರಂತದ ಸಂಗತಿ. ಅಂಬೇಡ್ಕರ್ ಕಲ್ಪನೆಯ ಮೀಸಲಾತಿ ಮನುಷ್ಯನನ್ನು ಭೌದ್ದಿಕವಾಗಿ ಹೆಚ್ಚು ಬುದ್ದಿವಂತನನ್ನಾಗಿ ರೂಪಿಸುವ ದಿಸೆಯಲ್ಲಿ ಇದೆಯಾದರೂ ಅದರ ಅನುಷ್ಠಾನದಲ್ಲಿ ಉಂಟಾಗಿರುವ ದೋಷಗಳು ಅಂಬೇಡ್ಕರ್ ಕನಸುಗಳನ್ನು ಗಾಳಿಗೆ ತೂರಿದಂತಾಗಿದೆ. ಸಮಾನತೆಯ ಕನಸಿನ ಹರಿಕಾರ ಹಾಗೂ ಶ್ರೇಷ್ಠ ದಾರ್ಶನಿಕರೆನಿಸಿದ ಅಂಬೇಡ್ಕರ್ ರ ಆಶಯಗಳು ಪ್ರಸಕ್ತ ದಿನಗಳಲ್ಲಿ ಹಲವು ಕ್ಷುಲ್ಲಕ ಕಾರಣಗಳಿಗೆ ಎರವಾಗುತ್ತಾ ನೈಜ ಅಂಶಗಳಿಗೆ ಹಿನ್ನೆಡೆ ಆಗುತ್ತಿರುವುದು ದುಖದ ಸಂಗತಿ.
ಇನ್ನು ಸುಪ್ರೀಂಕೋರ್ಟು ನೀಡಿರುವ ಶಿಕ್ಷಣ ಕುರಿತ ಹಕ್ಕುಗಳ ಕುರಿತು ಮಾತನಾಡುವುದಾದರೆ, ನಮ್ಮ ದೇಶದಲ್ಲಿ ರೈತರು ಮತ್ತು ಶ್ರಮಿಕ ವರ್ಗಗಳೇ ಹೆಚ್ಚು ಪ್ರಮಾಣದಲ್ಲಿವೆ, ಸಿರಿವಂತರ ಮಕ್ಕಳನ್ನು ಎಲ್ ಕೆ ಜಿ/ಯುಕೆಜಿಯಿಂದಲೇ ಬಾರಿ ಮೊತ್ತದ ಡೊನೇಷನ್ ತೆತ್ತು ಖಾಸಗಿ ಶಾಲೆಗಳೆಂಬ ಅಡ್ಡೆಗಳಿಗೆ ಸೇರಿಸಲಾಗುತ್ತದೆ. ಸರ್ಕಾರಿ ಶಾಲೆಯ ಗುಣಮಟ್ಟಕ್ಕಿಂತ ಖಾಸಗಿ ಶಾಲೆಗಳ ಕಲಿಸುವ ಗುಣಮಟ್ಟ ಶ್ರೇಷ್ಠ ಎಂದು ಯಾವ ಪುಣ್ಯಾತ್ಮ ತಲೆತುಂಬಿದನೋ ಕಾಣೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದೇ ತಮ್ಮ ಜೀವನದ ಪರಮಗುರಿ ಎಂದು ಭಾವಿಸುವ ಪೋಷಕರು ಅದಕ್ಕಾಗಿ ಸಮಯ/ದುಡಿಮೆ ಮತ್ತು ಶಿಫಾರಸ್ಸುಗಳನ್ನು ಬಳಸಿ ತಮ್ಮ ಮಕ್ಕಳಿಗೆ ಸೀಟು ಗಿಟ್ಟಿಸಿಕೊಂಡು ಬಿಡುತ್ತಾರೆ. ತಮ್ಮ ಮಗು/ಮಗ/ಮಗಳು ದಕ್ಷಿಣ ಕನ್ನಡ ಜಿಲ್ಲೆಯ ಯಾವುದಾದರೊಂದು ಖಾಸಗಿ ಅಡ್ಡೆಯಲ್ಲಿ ಕಲಿಯುತ್ತಿದೆ ಎಂಬುದೆ ಒಂದು ಪ್ರತಿಷ್ಠೆಯ ಸಂಗತಿಯಾಗಿ ಬಿಡುತ್ತಿದೆ. ಅಲ್ಲಿ ಸೀಟು ಗಿಟ್ಟಿಕೊಂಡ ಮೇಲೆ ಆ ಮಕ್ಕಳ ಕಲಿಕೆಗೆ ಇವರೇ ಒತ್ತಾಸೆಯಾಗಿ ನಿಂತು ಶ್ರಮಹಾಕಿ ಬಿಡುತ್ತಾರೆ. ಇಂಥಹದ್ದೇ ಆಸ್ಥೆಯನ್ನು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಯಾಕೆ ತೆಗೆದುಕೊಳ್ಳುವುದಿಲ್ಲ?
            ಇವತ್ತು ವಿಶ್ವ ಸಂಸ್ಥೆಯ ಸಹಯೋಗದೊಂದಿಗೆ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆದಿದೆ, ಅತ್ಯುನ್ನತ ದರ್ಜೆಯ ಶಿಕ್ಷಕ/ಶಿಕ್ಷಕಿಯರನ್ನು ನೇಮಿಸಿಕೊಂಡಿದೆ, ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಿದೆ, ಬಟ್ಟೆ, ಪುಸ್ತಕ , ಉಚಿತ ಊಟ ಹೀಗೆ ತರಹೇವಾರಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳು ಇವೆ, ಉಚಿತ ಪ್ರವಾಸ, ವಿಜ್ಞಾನದ ಕಲಿಕೆಗೆ ವಿಶೇಷ ಪ್ರೋತ್ಸಾಹ ಧನ, ಆಟೋಟ ಚಟುವಟಿಕೆಗೆ ವಿಶೇಷ ವೆಚ್ಚದ ಕಾರ್ಯಕ್ರಮಗಳು, ಶಿಕ್ಷಕರನ್ನು ಹುರಿದುಂಬಿಸಲು ವಿಶೇಷ ತರಬೇತಿಗಳು, ಅವರ ಉಸ್ತುವಾರಿಗೆ ಮೇಲಾಳುಗಳು ಹೀಗೆ ಏನೇನೋ ಇದ್ದರೂ ಸರ್ಕಾರಿ ಶಾಲೆಗಳಿಗೆ ಕೇವಲ ದುರ್ಬಲರ ಮಕ್ಕಳು ಮಾತ್ರ ಪ್ರವೇಶ ಪಡೆಯುತ್ತಿವೆ.ಕೆಲವು  ಶಿಕ್ಷಕರುಗಳ ಅಸಡ್ಡಾಳತನದಿಂದಾಗಿ ಆ ಮಕ್ಕಳು ಅರ್ದದಲ್ಲೇ ಶಾಲೆ ಬಿಡುವ ಸಂಧರ್ಭಗಳು ಬರುತ್ತಿವೆ. ರಾಜ್ಯದಾಧ್ಯಂತ 10500ಕ್ಕೂ ಹೆಚ್ಚು ಸಂಖ್ಯೆಯ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕೇಂದ್ರ ಸರ್ಕಾರ 1500ಕ್ಕೂ ಹೆಚ್ಚು ಶಾಲೆಗಳನ್ನು ತೆರೆಯಲು ರಾಜ್ಯಕ್ಕೆ ಆದೇಶಿಸಿದೆ. ಆದರೆ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಲೆಕ್ಕವಿಲ್ಲದಂತೆ ಬಂಡವಾಳಶಾಹಿಗಳೀಗೆ ಖಾಸಗಿ ಅಡ್ಡೆಗಳನ್ನು ತೆರೆಯಲು ಅವಕಾಶ ನೀಡಿರುವ ರಾಜ್ಯ ಸರ್ಕಾರ ಸರಿಯಾದದ್ದೊಂದು ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳದೇ ಮನಬಂದಂತೆ ನಿರ್ಧಾರಗಳನ್ನು ಪ್ರಕಟಿಸುತ್ತಿದೆ.ಶಿಕ್ಷಕರಿಗೆ ಸರಿಯಾದ ತರಬೇತಿ ಮತ್ತು ಸಿದ್ದತೆಗಳಿಲ್ಲದೇ ಪ್ರಾಥಮಿಕ ಮತ್ತು ಕಾಲೇಜು ಹಂತದಲ್ಲಿ ಕೇಂದ್ರ ಮಾದರಿಯ ಪಠ್ಯ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ.ಪಠ್ಯದಲ್ಲಿ ಇತಿಹಾಸವನ್ನು ತಿರುಚಿ ಕೇಸರಿಮಯವಾದ ಪಠ್ಯಗಳನ್ನು ಬಲವಂತವಾಗಿ ಹೇರುವ ಪ್ರಕ್ರಿಯೆ ಜಾರಿಯಲ್ಲಿದೆ. ಖಾಸಗಿ ಶಿಕ್ಷಣ ಅಡ್ಡೆಗಳು ಮಾತ್ರ ಯಾವ ನಿಯಮಗಳಿಗೂ ಒಳಪಡದೇ ಮನಸೋಇಚ್ಚೆ ಸುಲಿಗೆ ಮಾಡುವ ಕೇಂದ್ರಗಳಾಗಿ ಬಡವರಿಗೆ ಎಟುಕುಲಾರದ ಸ್ಥಿತಿಯಲ್ಲಿದ್ದವು. ಆದರೆ ಈ ಎಲ್ಲಾ ಗೋಂದಲಗಳ ನಡುವೆ   ಶೇ.25ಮೀಸಲು ಸೀಟುಗಳನ್ನು ಖಾಸಗಿ ಶಾಲೆಗಳಲ್ಲೂ ನೀಡುವಂತೆ ಸುಪ್ರೀಂ ಕೋರ್ಟು ಆದೇಶ ನೀಡಿರುವುದು ಸ್ವಾಗತಾರ್ಹವೇ ಆಗಿದೆ. ಆದರೆ ಶೆ.25ರ ಮೀಸಲಿನಿಂದ ಅಲ್ಪ ಸಂಖ್ಯಾತರ ಪಟ್ಟಿಯಲ್ಲಿ ಬರುವ ಮಾರ್ವಾಡಿಗಳು, ಜೈನರು , ಕ್ರಿಶ್ಚಿಯನ್ನರು, ಮುಸ್ಲಿಂರ ವಿದ್ಯಾಸಂಸ್ಥೆಗಳಿಗೆ ವಿನಾಯಿತಿ ನೀಡಿರುವ ಕ್ರಮ ಮಾತ್ರ ಆಕ್ಷೇಪಾರ್ಹಾ ವಾಗಿದೆ. ದೇಶದಲ್ಲಿ ಶಿಕ್ಷಣವನ್ನು ಮಾರಾಟದ ಸರಕಾಗಿ ಇಟ್ಟವರೇ ಈ ಅಲ್ಪಸಂಖ್ಯಾತರು! ಹೀಗಿರುವಾಗ ಇಂತಹವರ ಸಂಸ್ಥೆಗಳಿಗೆ ರಿಯಾಯ್ತಿ ನೀಡುವ ಕ್ರಮ ಸಾಧುವಲ್ಲ.ಅಷ್ಟಕ್ಕೂ ಸುಪ್ರೀಕೋರ್ಟಿನ ಈ ಆದೇಶ ನಿಜಕ್ಕೂ ಜಾರಿಗೆ ಬರುವುದೇ ಎಂಬುದು ಪ್ರಶ್ನೆ? ಏಕೆಂದರೆ ಸಂವಿಧಾನ ಬದ್ದವಾಗಿ ಈ ದೇಶದ ಜನರಿಗೆ ಸಾಮಾಜಿಕ ನ್ಯಾಯಕ್ಕಾಗಿ ಹತ್ತು ಹಲವು ಅವಕಾಶಗಳನ್ನು ಕಲ್ಪಿಸಲಾಗಿದ್ದರೂ ಆಢಳಿತಾಗಾರರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಅನುಷ್ಠಾನಗೊಳ್ಳದೇ ನೆನೆಗುದಿಗೆ ಬಿದ್ದಿವೆ ಎಂಬುದು ಶೋಚನೀಯಕರ ಸಂಗತಿ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...