Thursday, June 30, 2011

ಮಾಧ್ಯಮ ಜಗತ್ತು ಸಾಗಿರುವುದೆಲ್ಲಿಗೆ?

                                               ಚಿತ್ರ ಕೃಪೆ: rotikapdamakaan.wordpress.com
ಜನ ಕೇಳಿದ್ದನ್ನ ಕೊಡ್ತೀವಿ, ಅದಕ್ಕೆ ಆಕ್ಷೇಪಣೆ ಯಾಕೆ ಸಾರ್? ಎಂದು ಪ್ರಶ್ನಿಸುವ ಮಾಧ್ಯಮದ ಮಂದಿ ಜನ ಬಯಸುವುದನ್ನು ಕೊಡುವಲ್ಲಿ ಅಗತ್ಯವಾದುದನ್ನು ಆರೋಗ್ಯವಂತ ನೆಲೆಗಟ್ಟಿನಲ್ಲಿ ಕೊಟ್ಟರೆ ಅದಕ್ಕೆ ಆರ್ಥವಿರುತ್ತೆ. ಸಹಜವಾಗಿ ಶುಗರ್ ಪೇಷಂಟ್ ಸಿಹಿಯನ್ನೇ ಬಯಸುತ್ತಾನೆ, ಹಾಗಂತ ಸಿಹಿಯನ್ನೆ ಕೊಟ್ಟರೆ ಆತನ ಪರಿಸ್ಥಿತಿ ಏನಾಗಬೇಡ? ಸಿಹಿಗೆ ಪರ್ಯಾಯವಾಗಿ ರೋಗಿ ಬದುಕುವಂತಹ ಔಷಧವನ್ನೆ ಕೊಡುತ್ತಾರಲ್ಲವೇ ಎಂದು ನನಗೆ ಪ್ರಶ್ನೆ ಎಸೆದು ಮುಗುಳ್ನಕ್ಕಿದ್ದು ಪತ್ರಕರ್ತ ಮಿತ್ರ ಮಧುಸೂಧನ್  . ಹೌದು ಇಂತಹ ಕಾರಣಗಳಿಗಾಗಿ ಮಾಧ್ಯಮಗಳು ಇತ್ತೀಚೆಗೆ  ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಆಸ್ಪದ ಕೊಟ್ಟಿವೆ. ಜುಲೈ 1 ಪತ್ರಿಕಾ ದಿನಾಚರಣೆ, ಈ ಸಂಧರ್ಭದಲ್ಲಿ ಮಾಧ್ಯಮಗಳು ಮತ್ತು ಜನಸಾಮಾನ್ಯರು  ಸ್ಪಂದ ನೆ ಮತ್ತು ಪ್ರತಿಸ್ಪಂದನೆ ಹೇಗಿರಬೇಕು, ಮಾಧ್ಯಮ ಲೋಕದಲ್ಲಿ ಏನಾಗುತ್ತಿದೆ, ಆಧ್ಯತೆಯ ವಿಚಾರಗಳೇನು, ಜನರ ಮನಸ್ಥಿತಿ ಮಾಧ್ಯಮಗಳ ಕುರಿತು ಹೇಗಿದೆ, ಅದು ಹೇಗೆ ಬದಲಾಗಬೇಕು,  ಇತ್ಯಾದಿ ವಿಚಾರಗಳು  ಈ ಸಂಧರ್ಬದಲ್ಲಿ ಅಗತ್ಯವಾಗಿ ಚರ್ಚೆಯಾಗಬೇಕಿದೆ.
ಮಾಧ್ಯಮ ಎಂದರೇನು?
         ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಮಾಧ್ಯಮಗಳ ಕಾರ್ಯ ವೈಖರಿಯ ಬಗೆಗೆ ಸಾರ್ವಜನಿ ಕವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಅತಿರಂಜಿತಸುದ್ದಿ, ಮಸಾಲೆ ಸುದ್ದಿ, ಕ್ರೈಂ, ರಾಜಕೀಯ,ಹಣಕ್ಕಾಗಿ ಸುದ್ದಿ ಹೀಗೆ ಮಾಧ್ಯಮ ಲೋಕದ ವಿವಿಧ ಆಯಾಮಗಳನ್ನು ತಾಕುವ ವಿಚಾರಗಳು, ಅಲ್ಲಿ ವ್ಯಕ್ತವಾಗುತ್ತಿರುವ ಕ್ರೋಢಿಕೃತ ಅಭಿಪ್ರಾಯಗಳು ಮಾಧ್ಯಮಗಳ ಶುದ್ದೀಕರಣವನ್ನು ಬಯಸುತ್ತಿವೆ ಜೊತೆಗೆ ಮಾಧ್ಯಮಗಳನ್ನೆ ನಿರ್ದೇಶಿಸುವ ಕೆಟ್ಟ ಪ್ರವೃತ್ತಿ ಜಾರಿಯಲ್ಲಿದೆ. ಮಾಧ್ಯಮ ಎಂದರೆ ಪ್ರಖರವಾದ ಸಂವಹನ ಮಾಧ್ಯಮ, ಧ್ವನಿಯಿಲ್ಲದವರಿಗೆ, ಶೋಷಿತರಿಗೆ ನ್ಯಾಯವನ್ನು ಪ್ರತಿಪಾದಿಸಬಹುದಾದ ಪ್ರಭಾವಶಾಲಿ ಅವಕಾಶವೇ ಮಾಧ್ಯಮ. ಆಕಾಶ ವಾಣಿ ದೇಶದ ಹಸಿರು ಕ್ರಾಂತಿಗೆ ಮಹತ್ವದ ಕೊಡುಗೆಯನ್ನು ಕೊಟ್ಟಂತೆ  ಮುದ್ರಣ ಮಾಧ್ಯಮಗಳು ಸಹಾ 70ರ ದಶಕಕ್ಕೂ ಮುಂಚೆ ದೇಶದಲ್ಲಾದ ಕಾಲಘಟ್ಟದ ಪ್ರಮುಖ ಬದಲಾವ ಣೆಗಳಿಗೆ ಸಾಥ್ ನೀಡಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದು ಇದೇ ಮುದ್ರಣ ಮಾಧ್ಯಮ. ಆದರೆ ಪರಿಸ್ಥಿತಿ ಬದಲಾದಂತೆ ಮತ್ತು ತಂತ್ರಜ್ಞಾನದಲ್ಲಿ ಆದ ಬದಲಾವಣೆಗಳು ಮಾಧ್ಯಮ ಲೋಕದಲ್ಲಿನ ಹೊಸ ಅಲೆಗಳಿಗೆ ಕಾರಣವಾದವು. ಈ ಹೊಸ ಅಲೆಯಲ್ಲಿ ಬಂದ ಮಾಧ್ಯಮದ ವಿವಿಧ ಆಯಾಮಗಳು ಸಮಾಜದ ಸ್ವಾಸ್ತ್ಯ ಕ್ಕೆ ಪೂರಕವಾದಂತಹ ಅಗತ್ಯತೆಗಳನ್ನು ಆಧ್ಯತೆಯಾಗಿ ನೀಡುವಲ್ಲಿ ಅನುಸರಿಸುತ್ತಿರುವ ಅಡ್ಡ ಹಾದಿಗಳು ಒಟ್ಟು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಿದೆ.
ಸಂಘರ್ಷಕ್ಕೆ ಕಾರಣವೇನು?
        ಇಂತಹದ್ದೊಂದು ಬೆಳವಣಿಗೆ ಜನಸಾಮಾನ್ಯರು ಮತ್ತು ಮಾಧ್ಯಮಗಳ ನಡುವಣ ಸಂಘರ್ಷಕ್ಕೆ ನಾಂದಿ ಹಾಡಿದೆ. ಹಿಂದಿನ ದಶಕಗಳಲ್ಲಿ ಮಾಧ್ಯಮಗಳೆಡೆಗೆ ಜನರಿಗಿದ್ದ ಆದರ್ಶದ ಕಲ್ಪನೆಗಳು ಮತ್ತು ಗೌರವದ ಭಾವನೆಗಳು ಮರೆಯಾಗಿವೆ ಇದಕ್ಕೆ ಪ್ರಮುಖ ಕಾರಣ ಜಾಗತೀಕರಣದ ನಂತರ ಮಾಧ್ಯಮ ಲೋಕದಲ್ಲೂ ಆಗುತ್ತಿರುವ ವಾಣಿಜ್ಯೀಕರಣವೇ ಆಗಿದೆ. ಗಂಭೀರವಾದ ವಿಚಾರಗಳನ್ನು, ಸಂವೇದನಾತ್ಮಕ ವಿಚಾರಗಳನ್ನು, ಪ್ರಗತಿಪರವಾದ ವಿಚಾರಗಳನ್ನ ಜನರಿಗೆ ನೀಡುವ ಬದಲು ಮನರಂಜನೆಯನ್ನೇ ಪ್ರಧಾನವಾಗಿರಿಸಿದ ಸುದ್ದಿಗಳು ಮತ್ತು ಕಾರ್ಯಕ್ರಮಗಳು ಜನರ ಆಲೋಚನಾ ಕ್ರಮವನ್ನೆ ಹಾಳುಗೆಡವಿದೆ. ಪರಿಣಾಮ Infotainment ಎಂಬ Corporate culture ನಮಗೆ ಗೊತ್ತಿಲ್ಲದಂತೆ ನಮ್ಮ ಯೋಚನಾಕ್ರಮವನ್ನು ಆಳುತ್ತಿವೆ.  ದೇಶದಲ್ಲಿ ಪ್ರಮುಖವಾಗಿ ರಾಜ್ಯದ ಪತ್ರಿಕೆಗಳಿಗೆ ಜನರ ಮನಸ್ಥಿತಿಯನ್ನು ಆರೋಗ್ಯಕರವಾದ ನಿಟ್ಟಿನಲ್ಲಿ ಕೊಂಡೊಯ್ಯುವ ಪ್ರಗತಿ ಪರ ಚಿಂತನೆಗಳಿಗೆ ಹಚ್ಚುವ, ಸಧಭಿರುಚಿಯನ್ನು ಮೂಡಿಸುವ ತಾಕತ್ತು ಇತ್ತು ಆದರೆ ಈ ದೃಶ್ಯ ವಾಹಿನಿಗಳು ಪ್ರಾರಂಭವಾದ್ದದ್ದೇ ಆಗಿದ್ದು ಜನಸಾಮಾನ್ಯರ ಆಲೋಚನೆಗಳೆಲ್ಲ ದಿಕ್ಕಾಪಾಲಾಗಿವೆ.ಜನ ಕೀಳುಅಭಿರುಚಿಯನ್ನು ನೋಡುತ್ತಾರೆಂದರೆ ಅಂತಹುದೇ ವಿಚಾರಗಳಿಗೆ ಹೆಚ್ಚು ಒತ್ತು ಕೊಟ್ಟು ಪದೇ ಪದೇ ಪ್ರಸಾರ ಮಾಡುವುದನ್ನು ದೃಶ್ಯ ವಾಹಿನಿಗಳಲ್ಲಿ ಕಂಡರೆ ಕಾರ್ಪೊರೇಟ್ ವಿಚಾರಗಳಿಗೆ ಮತ್ತು ಆಧ್ಯತೆಗಳಿಗೆ ಒತ್ತು ನೀಡಿ ಪೂರಕವಾಗಿ ಸುದ್ದಿ/ಲೇಖನ/ಚಿತ್ರಗಳನ್ನು ಪ್ರಕಟಿಸುವ ಮೂಲಕ ಪತ್ರಿಕೆಗಳು ಸಹಾ ನೈತಿಕ ಅಧ:ಪತನಕ್ಕೆ ತುತ್ತಾಗಿವೆ. ಪತ್ರಿಕಾ ಲೋಕಕ್ಕೆ ಬಂಡವಾಳಶಾಹಿಗಳು,ರೌಡಿಗಳು, ರಾಜಕಾರಣಿಗಳು, ವಂಚಕರು ಪ್ರವೇಶ ಪಡೆಯುತ್ತಿರುವುದು ಮತ್ತು ಅವರೇ ಪತ್ರಕರ್ತರನ್ನು ನಿಯಂತ್ರಿಸುತ್ತಿರುವುದರಿಂದ ಸಮಾಜದಲ್ಲಿ ಮಾಧ್ಯಮಗಳು ವ್ಯತಿರಿಕ್ತ ಪರಿಣಾಮ ಉಂಟಾಗಲು ಕಾರಣವಾಗಿದೆ.

        ಸಂವಿಧಾನದ ನಾಲ್ಕನೇ ಅಂಗವೆಂದು ಪತ್ರಿಕಾ ರಂಗ ಎಂದು ಹೇಳಲಾಗುತ್ತದೆ ಆದರೆ ಅದನ್ನು ಸಂವಿದಾನದಲ್ಲಿ ನಮೂದಿಸಿಲ್ಲ ಅದೊಂದು ಸಾರ್ವಜನಿಕ ಕಲ್ಪನೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಗುರುತಿಸಲ್ಪಡುವ ಪತ್ರಿಕಾರಂಗದ ಹೊಸ ಅಲೆಯಲ್ಲಿ ಪತ್ರಿಕೋಧ್ಯಮದ ಪಾಠ ಕಲಿತ ಮಂದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರಾದರೂ ಅವರ ನೈತಿಕ ಬದ್ದತೆ ಕುಸಿಯುತ್ತಿದೆ. ಮಾಧ್ಯಮ ಪ್ರಪಂಚದ ಸಂವೇದನೆಗಳನ್ನ ಅರಿಯುವ ಮುನ್ನವೇ ಇಲ್ಲಿನ ಆಕರ್ಷಣೆಗಳು ಅವ ರ ಬದ್ದತೆ ಗೆ ಧಕ್ಕೆ ತರುತ್ತಿವೆ. ನೈತಿಕತೆ ಮರೆತಾಗ ನಂಬಿಕೊಂಡ ಧೋರಣೆಗಳಿಗೆ ಅಸ್ತಿತ್ವ ಇರುವುದಿಲ್ಲ, ಆಗ ಗ್ರಹಿಕೆಗಳೀಗೆ, ಸಂವೇದನಾತ್ಮಕ ಅಂಶಗಳಿಗೆ ಕಿಲುಬು ಕಾಸಿನ ಕಿಮ್ಮತ್ತು ಇರುವುದಿಲ್ಲ. ಒಂದು ಉದಾಹರಣೆ ಹೇಳುವುದಾದರೆ ಇವತ್ತು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ 15ದಿನಕ್ಕೊಮ್ಮೆ ಪತ್ರಕರ್ತರಿಗಾಗಿ ನಡೆಸುವ ಔತಣಕೂಟಗಳಿಗೆ ಹೋಗಿ ಬರುವ ಪತ್ರಕರ್ತರಿಂದ ಪ್ರಾಮಾಣಿಕತನವನ್ನ ನಿರೀಕ್ಷಿಸಲು ಸಾಧ್ಯವಿಲ್ಲ, ಕಾರ್ಪೊರೇಟ್ ವಲಯಗಳಿಂದ ಪಡೆಯುವ ಉಡುಗೊರೆಗಳು ಪತ್ರಕರ್ತನ ಅಂತಸತ್ವವನ್ನು ನಾಶಮಾಡುತ್ತಿವೆ. ಪ್ರಭಾವ ಬಳಸಿ ಲಾಭ ಪಡೆಯುವ ಅನುಕೂಲಸಿಂಧು ಪತ್ರಕರ್ತರಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಹಾಗೆಯೇ ಸಾರ್ವಜನಿಕ ವಲಯದಲ್ಲೂ ಅಂತಸತ್ವ ದಪ್ರಭಾವ ಕ್ಷೀಣಿಸಿದ್ದು ಜನರಲ್ಲಿ ಜಾಗೃತ ಪ್ರಜ್ಞೆಯಿಲ್ಲ. ಸಮಸ್ಯೆ ಬಂದಾಗ ಮಾತ್ರ ಪತ್ರಕರ್ತರತ್ತ ಬೊಟ್ಟು ಮಾಡುವ ಜನ ತಾವೇನೂ ಮಾಡಬೇಕು ತಮ್ಮ ಆದ್ಯತೆಗಳೇನು ಎಂಬುದನ್ನು ಮರೆತು ಬಿಡುತ್ತಾರೆ. ಅಧಿಕಾರಶಾಹಿ ಸದಾ ಪ್ರಚಾರದ ಸಲುವಾಗಿ ಮಾಧ್ಯಮವನ್ನು ಬಳಸಿಕೊಳ್ಳಲು ನೋಡುತ್ತದೆಯಾದರೂ ಅಲ್ಲೊಂದು ಇಲ್ಲೊಂದು ಪ್ರಾಮಾಣಿಕವಾದ ಮತ್ತು ಪಾರದರ್ಶಕ ನಡವಳಿಕೆಯ ಪತ್ರಕರ್ತರಿಂದ ಸಮಾಜದಲ್ಲಿ ಇನ್ನು ಮಾಧ್ಯಮಗಳ ಮೇಲಿನ ವಿಶ್ವಾಸ ಕಡಿಮೆಯಾಗಿಲ್ಲ ಎಂಬುದೇ ಸಮಾಧಾನಕರ ಅಂಶ ಅಲ್ಲವೇ? ಪತ್ರಿಕೆಗಳ ಸಮಾಜ ಮುಖಿ ಕಾರ್ಯ ಮತ್ತು ಅದನ್ನು ಸ್ವೀಕರಿಸುವ ಜನರ ಮನಸ್ಥಿತಿಗಳು ಮಾತ್ರ ಸಮಾಜದ ಆರೋಗ್ಯ ಕಾಯಬಲ್ಲದು ಈ ದಿಸೆಯಲ್ಲಿ ಮಾಧ್ಯಮಗಳು ಅಗತ್ಯ ಬಿದ್ದಾಗ ವಿಚಾರವಂತರ ಸಲಹೆಗಳನ್ನು ಸ್ವೀಕರಿಸಿ ಮುನ್ನೆಡೆಯುವುದು ಒಳ್ಳೆಯದಲ್ಲವೇ?

Sunday, June 12, 2011

ಬಾಬಾ ರಾಮದೇವರ ಉಪವಾಸವೆಂಬ ಪ್ರಹಸನವೂ

ಬಾಬಾ ರಾಮದೇವರ ಉಪವಾಸ ಅಂತ್ಯಗೊಂಡಿದೆ, ಕಳೆದ ಒಂದು ವಾರದಿಂದಲೂ ನಡೆಯುತ್ತಿದ್ದ ಹೈಡ್ರಾಮಾ ಸಧ್ಯಕ್ಕೆ ಮುಗಿದಂತೆ ಕಂಡರೂ ಈ ಹೋರಾಟದ ಆಜೂಬಾಜೂ ಹಲವಾರು ಅನುಮಾನಗಳನ್ನ ಮತ್ತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಂದು ಹೋರಾಟಕ್ಕೆ ನಾಯಕನಿಗೆ ಇರಬೇಕಾದ ತಾತ್ವಿಕ ನೆಲೆಗಟ್ಟು, ನಿಖರತೆ, ಛಲ,ಗಟ್ಟಿತನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಬಾಬಾ ನೇತೃತ್ವದ ಹೋರಾಟ ಜ್ವಲಂತ ಸಾಕ್ಷಿಯಾಗಿ ನಮ್ಮ ಮುಂದೆ ಅಣಕಿಸಿದಂತೆ ಭಾಸವಾಗುತ್ತಿದೆ. ಇವತ್ತು  ನೈಜ ನೆಲೆಗಟ್ಟಿನಲ್ಲಿ ಜರುಗುವ ಹೋರಾಟಗಳು ಸಹಾ ಇಂತಹ ನಾಯಕರುಗಳ  ಜೊಳ್ಳುತನದಿಂದಾಗಿ ಅರ್ಥ ಕಳೆದುಕೊಳ್ಳುತ್ತಿವೆ ಎಂದು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ. ಬಾಬಾ ರಾಮದೇವ ದೇಶದ ಶ್ರೇಷ್ಠ ಯೋಗಪಟು, ಆಧ್ಯಾತ್ಮಿಕ ಚಿಂತಕ ಆಗಾಗ ಭ್ರಷ್ಟಾಚಾರದ ವಿರುದ್ದ ಹೋರಾಟಕ್ಕೆ ಧುಮುಕುವ ಚಳುವಳಿಯ ನೇತಾರ, ರಾಜಕೀಯ ಪಕ್ಷ ಕಟ್ಟಿ ಚುನಾವಣೆಗೆ ಇಳಿಯುವ ಉತ್ಸಾಹ ಪ್ರದರ್ಶಿಸುವ ರಾಜಕೀಯ ಉತ್ಸಾಹಿ, ಯೋಗದ ಜೊತೆಗೆ ವಿವಿಧ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸುತ್ತೇನೆ ಎಂದು ಔಷಧಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಒಬ್ಬ ವ್ಯಾಪಾರಿ ಅಷ್ಟೇ ಅಲ್ಲ ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಒಮ್ಮತದ ನಾಯಕತ್ವದಲ್ಲಿ ಸಾಗುತ್ತಿದ್ದ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಒಮ್ಮೆಲೆ ಹೈಜಾಕ್ ಮಾಡಿದ ಖಳ'ನೇತಾರ' ನೂ ಹೌದು. ಇಂತಹ ಬಾಬಾ ರಾಮದೇವರ ವಿಚಾರಗಳೇನು? ಅಸಲಿಯತ್ತೇನು? ಇಂತಹವರನ್ನು ಬೆಂಬಲಿಸುವುದರಿಂದ ಆಗುವ ಪರಿಣಾಮಗಳೇನು ಎಂಬ ವಿಚಾರ ಅಗತ್ಯವಾಗಿ ಚರ್ಚೆಗೆ ಬರಬೇಕಾಗಿದೆ.

          ಬಾಬಾ ರಾಮದೇವ್ ಅಲಿಯಾಸ್ ರಾಮಕೃಷ್ಣ ಯಾದವ್ ಜನಿಸಿದ್ದು ಹರ್ಯಾಣ ರಾಜ್ಯದ ಮಹೇಂದ್ರಘರ್ ಜಿಲ್ಲೆಯಲ್ಲಿ.ಬಾಲ್ಯದಲ್ಲಿಯೇ  ಸ್ವಾತಂತ್ರ್ಯ ಚಳುವಳಿಯ ನೇತಾರ ರಾಮಪ್ರಸಾದ್ ಬಿಸ್ಮಿಲ್ಲಾ ರ ಜೀವನ ಚರಿತ್ರೆ ಓದಿ ಸ್ಪೂರ್ತಿಗೊಂಡ ರಾಮಕೃಷ್ಣಯಾದವ್ ಪ್ರೌಢಶಾಲೆಯ ಮೊದಲ ವರ್ಷಕ್ಕೆ ವಿದ್ಯೆಗೆ ಶರಣು ಹೊಡೆದು ಶಹಜಾದ್ ಪುರದ ಆರ್ಸ್ ಗುರುಕುಲಕ್ಕೆ ಸೇರಿ ಯೋಗ ಮತ್ತು ಸಂಸ್ಕೃತವನ್ನು ಕಲಿತರು. ನಂತರ ಆಚಾರ್ಯ ಬಲ್ ದೇವ್ ಜೀ ಯಿಂದ ಸನ್ಯಾಸ ದೀಕ್ಷೆ ಪಡೆದ ಬಾಬಾ , ಜಿಂದ್ ಜಿಲ್ಲೆಯ ಕಲ್ವಾ ಗುರುಕುಲದಲ್ಲಿ ಉಚಿತ ಯೋಗಾ ತರಗತಿಗಳನ್ನು ಹೇಳಿಕೊಡುವ ಮೂಲಕ ಹೊಸ ಬದುಕು ಆರಂಬಿಸಿದರು. ಆಗಲೇ ಆತನ ಹೆಸರು ಸ್ವಾಮಿ ರಾಮದೇವ ಅಥವಾ ಬಾಬಾ ರಾಮದೇವ ಎಂದು ಬದಲಾಯಿತು.೨೦೦೬ರಲ್ಲಿ ಪತಂಜಲಿ ಯೋಗ ಪೀಠ ಸ್ತಾಪಿಸಿದ ಬಾಬಾ ಯೋಗ, ಆಯುರ್ವೇದ ಕಾಲೇಜು, ಯೋಗ ಚಿಕಿತ್ಸೆ, ಗೋಶಾಲೆ, ಹರ್ಬಲ್ ಉದ್ಯಾನವನ ಹೀಗೆ ಸುಮಾರು ೩೦ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಂಪನಿಗಳನ್ನ ಸ್ಥಾಪಿದ್ದಾರೆ.ಯೋಗ ಪೀಠದ ಚಟುವಟಿಕೆಗಳು ವಿದೇಶದಲ್ಲೂ ಹಬ್ಬಿವೆ ಕೇಂದ್ರಗಳು ಸ್ಥಾಪನೆಗೊಂಡಿವೆ.ಹಾಗಾಗಿ ಕೋಟ್ಯಾಂತ ರೂಪಾಯಿ ಆದಾಯವೂ ಇದೆ, ಬಾಬಾ ಹೇಳುವಂತೆ ಅಧಿಕೃತವಾಗಿ ೧೨೦೦ಕೋಟಿ ಮೌಲ್ಯದ ಆಸ್ತಿಪಾಸ್ತಿ ಇವೆ.  ಈ ನಡುವೆ ಬಾಬಾರಾಮದೇವರನ್ನು ಅವರು ನೀಡುವ ಔಷಧಗಳು ನಕಲಿ ಮತ್ತು ದನದ ಮೂಳೆಯನ್ನು ಬೆರೆಸಿ ಮಾರಲಾಗುತ್ತಿದೆ ಎಂಬ ಆಪಾದನೆಯೂ ಇದೆ. ಯೋಗ ಚಿಕಿತ್ಸೆಯಿಂದ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳನ್ನು ನಿವಾರಿಸುತ್ತೇನೆ ಎಂಬ ಮಾತುಗಳು ಪೊಳ್ಳಾಗಿವೆ, ಕಳೆದ ಚುನಾವಣೆಗಳಲ್ಲಿ  ದೇಶದ ರಾಜಕೀಯವನ್ನು ಸುಧಾರಿಸುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷವನ್ನು ಕಟ್ಟಿ ಚುನಾವಣೆಗೆ ಇಳಿಯುವ ಮಾತನ್ನೂ ಇದೇ ಬಾಬಾ ಆಡಿದ್ದಾರೆ. ಅಷ್ಟೇ ಅಲ್ಲ ದೇಶದ ಸಂವಿಧಾನಕ್ಕೆ ವಿರುದ್ದವಾದ ನಿಲುವುಗಳು ಅಂದರೆ ದೇಶದ ಪ್ರಧಾನಿ ನೇರವಾಗಿ ಜನರಿಂದ ಆಯ್ಕೆಯಾಗಬೇಕು, ಭಾರತ ಆಧ್ಯಾತ್ಮಕ ರಾಷ್ಟ್ರ, ದೇಶದ ಜನ ಚೀನಾ ಮತ್ತು ಜಪಾನ್ ದೇಶದ ಪ್ರಜೆಗಳು ಕಡ್ಡಾಯವಾಗಿ ಅಲ್ಲಿನ ಸ್ಥಳೀಯ ಭಾಷೆಯನ್ನು ಮಾತನಾಡುವಂತೆ ಭಾರತ ದೇಶದ ಜನರೆಲ್ಲ ಹಿಂದಿಯನ್ನು ಕಡ್ಡಾಯವಾಗಿ ಮಾತನಾಡಬೇಕು ಎಂಬ ಅವಿವೇಕದ ನಿಲುವುಗಳನ್ನು ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲ ನಿಜವಾದ ಒಬ್ಬ ದೇಶಭಕ್ತ, ಸ್ವಾತಂತ್ರ್ಯ ಯೋಧ, ಸಾರ್ವಜನಿಕ ಸೇವಕ ಅಣ್ನಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನೇ ಹೈಜಾಕ್ ಮಾಡಿ ಉಪವಾಸ ನಡೆಸಲು ಹೋಗುವ ಬಾಬಾ, ಪ್ರಚಂಡ ಯೋಗದ ಬೆಂಬಲವಿದ್ದರೂ ಕೇವಲ ೫-೬ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗದೇ ಕುಸಿದು ಬಿದ್ದು ಆಸ್ಪತ್ರೆ ಸೇರುತ್ತಾರೆ. ಒಂದು ಹೋರಾಟವನ್ನು ಹತ್ತಿಕ್ಕುವ ದುಷ್ಟ ಕಾಂಗ್ರೆಸ್ ಸರ್ಕಾರದ ಪ್ರಯತ್ನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮದ್ಯ ರಾತ್ರಿ ಮಹಿಳೆಯರ ಉಡುಪು ಧರಿಸಿ ಪರಾರಿಯಾಗಲು ಯತ್ನಿಸುತ್ತಾರೆ ಬಾಬಾ ಮತ್ತು ಆಮೂಲಕ ತನ್ನನ್ನೇ ನಂಬಿ ಹೋರಾಟ ಬೆಂಬಲಿಸಲು ಬಂದ ಲಕ್ಷಾಂತರ ಮಂದಿ ಬೆಂಬಲಿಗರ ಹಿತವನ್ನೇ ಕಡೆಗಣಿಸುವ ಪ್ರಯತ್ನ ಮಾಡುತ್ತಾರೆ ಈ ಬಾಬಾ, ಅಣ್ಣಾ ಹಜಾರೆ ದೂರವಿಟ್ಟ ರಾಜಕೀಯ ಮಂದಿಯನ್ನ ಸ್ವಾಗತಿಸಿ ಪಕ್ಕಕ್ಕಿಟ್ಟುಕೊಳ್ಳುವ ಬಾಬಾ ೧೧೦೦೦ಮಂದಿಯ ಸ್ತ್ರೀ-ಪುರುಷರ ಪಡೆ ರಚಿಸುವ ದೀಕ್ಷೆ ತೊಡುತ್ತಾರೆ. ಕೇಂದ್ರ ಸರ್ಕಾರದಿಂದ ಯೋಗ ಶಿಬಿರದ ಹೆಸರಲ್ಲಿ ಅನುಮತಿ ಪಡೆದು ಕಪ್ಪು ಹಣ ತರಬೇಕೆಂದು ಹೋರಾಟಕ್ಕಿಳಿಯುವ ಬಾಬಾ ಮೊದಲೇ ತನ್ನ ಬೆಂಬಲಿಗರಿಗೆ ತಿಳಿಯದಂತೆ ಕೇಂದ್ರಕ್ಕೆ ಹೋರಾಟ ಅಂತ್ಯಗೊಳಿಸುವ ಮುಚ್ಚಳಿಕೆ ಬರೆದುಕೊಡುತ್ತಾರೆ. ತನ್ನನ್ನು ಹೀನಾಯವಾಗಿ ಹತ್ತಿಕ್ಕುವ ಕೇಂದ್ರದ ಕೃತ್ಯದ ನಂತರವೂ ಪ್ರಧಾನಿ ಮನಮೋಹನ್ ಸಿಂಗರನ್ನು ಕ್ಷಮಿಸಿದ್ದೇನೆ ಎಂಬ ಮಾತು ಹೇಳುವ ಬಾಬಾ ತಾನು ಹೋರಾಟ ಕುಳಿತ ದಿನದಿಂದಲೂ ಪ್ರತೀ ದಿನ ಎಡಬಿಡದೇ ಮಾದ್ಯಮಗಳಿಗೆ ಸಂದರ್ಶನ ನೀಡುತ್ತಾರೆ ಅಂದರೆ ಇಷ್ಟು ಸಾಕಲ್ಲವೇ ಬಾಬಾನ ಅಸಲಿಯತ್ತು ತಿಳಿಯಲು. 
        ಬಾಬಾ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಾಸ್ಸು ತರಬೇಕೆಂದು ಹೇಳುವುದನ್ನು ಒಪ್ಪೋಣ ಆದರೆ ಆ ನಿಲುವಿಗೆ ಬದ್ದತೆಯನ್ನೇ ಪ್ರದರ್ಶಿಸದೇ ಎಳಸುತನವನ್ನೆ ಪ್ರದರ್ಶಿಸಿದರೆ, ನಾಟಕೀಯವಾಗಿ ನಡೆದುಕೊಂಡರೆ ಇದನ್ನು ಬೆಂಬಲಿಸಬೇಕಾ? ಹೋರಾಟದಲ್ಲಿ ನಿರತರಾಗಿದ್ದ ಬಾಬಾ ರಾಮದೇವನನ್ನು ಮದ್ಯರಾತ್ರಿ ಎತ್ತಿಹಾಕಿದ ಕೇಂದ್ರದ ಕ್ರಮ ಅತ್ಯಂತ ಅಮಾನುಷ ಆದರೆ ಈ ಕ್ರಮದಿಂದ ಗಟ್ಟಿತನ ಪ್ರದರ್ಶಿಸಬೇಕಿದ್ದ ಬಾಬಾ ಪ್ರದರ್ಶಿಸಿದ್ದು ಬಾಲಿಶತನವನ್ನ. ಈ ಘಟನೆಯ ನಂತರ ಬಾಬಾ ವಿಚಾರವನ್ನು ಕೆದಕುವ ಪ್ರಯತ್ನ ಮಾಡಲಾಗುತ್ತದೆ ಇದು ವೈಯುಕ್ತಿಕ ಮಟ್ಟದ ಹುನ್ನಾರವೇ ಸರಿ ಆದರೆ ಒಬ್ಬ ವ್ಯಕ್ತಿ ರಾಷ್ಟ್ರೀಯ ಮಟ್ಟದಲ್ಲಿ ಒಮ್ಮೆಗೆ ಚಲಾವಣೆಗೆ ಬಂದನೆಂದರೆ ಆತನ ಪೂರ್ವಾಪರ ತಿಳಿಯುವುದು ಅತ್ಯಂತ ಅಗತ್ಯವೇ ಆಗಿದೆ. ರಾಜಕೀಯದಲ್ಲಿ ಕಾರ್ಪೊರೇಟ್ ಮಂದಿ, ಭ್ರಷ್ಟರು, ಕಳ್ಳರು, ಸುಳ್ಳರು, ಮೋಸಗಾರರು ಪ್ರವೇಶಿಸಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತಂದಿರುವಾಗ ಒಂದು ಪ್ರಮುಖವಾದ ಜನಪರ ಹೋರಾಟದಲ್ಲಿ ನೇತೃತ್ವ ವಹಿಸಲು ಬರುವ ವ್ಯಕ್ತಿಯ ಪೂರ್ವಾಪರ ಮತ್ತು ಆತನ ನೈತಿಕತೆಗಳು ಕೂಡಾ ಪ್ರಶ್ನಾರ್ಹವಾಗಿರಬೇಕಾಗುತ್ತದೆ ಹೀಗಿರುವಾಗ ಆತನ ಬಗ್ಗೆ ತಿಳಿಯುವುದು ಅವಶ್ಯಕ ಮತ್ತು ಶುದ್ದತೆಯನ್ನು ಬಯಸುವುದು ಸಹಾ ಅಗತ್ಯವೇ ಆಗಿದೆಯಲ್ಲವೇ? ಬಾಬಾ ನಿಗೆ ಲಕ್ಷಾಂತರ ಮಂದಿಯನ್ನು ಸೇರಿಸುವ ತಾಕತ್ತಿದೆ ಎಂಬ ವಾದವೂ ಇದೆ. ನೋಡಿ ನಮ್ಮ ದೇಶದಲ್ಲಿ ಮೌಡ್ಯಗಳನ್ನು ಬೆಂಬಲಿಸುವಂತೆ ಇಂತಹ ಬಾಬಾಗಳ ಹಿಂದೆಯೂ ಜನಸಾಗರವಿರುತ್ತದೆ. ವ್ಯವಸ್ಥೆಯ ಚಲನಶೀಲತೆಯಲ್ಲಿ ಭ್ರಷ್ಟಾಚಾರದಂತಹ ವಿಚಾರಕ್ಕೆ ಈಗ ಪ್ರಾಮುಖ್ಯತೆ ಸಿಕ್ಕಿದೆ ಹೀಗಾಗಿ ಜನ ತಂಡೋಪತಂಡವಾಗಿ ಅವರನ್ನ ಹಿಂಬಾಲಿಸದ್ದಾರೆ ಆದರೆ ವಿಚಾರ ಸ್ಪಷ್ಟತೆ ಇಟ್ಟುಕೊಳ್ಳದೇ  ಗಟ್ಟಿತನ ಪ್ರದರ್ಶಿಸದೇ ನಡು ನೀರಿನಲ್ಲಿ ಬೆಂಬಲಿಗರನ್ನು ಕೈ ಬಿಡುವ ಮೂಲಕ ಒಂದು ಚಳುವಳಿಯನ್ನು ದಿಕ್ಕು ತಪ್ಪಿಸುವುದನ್ನು ಒಪ್ಪಲಾದೀತೆ ನೀವೇ ಹೇಳಿ?
           

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...