Sunday, January 22, 2012

ಭಗವದ್ಗೀತೆಯ ನೆಪದಲ್ಲಿ ಶಿಕ್ಷಣದ ಕೇಸರಿಕರಣ!


ವಿದ್ಯೆ ಇದೆ ಎಂದ ಮಾತ್ರಕ್ಕೆ ವಿವೇಕ ಇರುತ್ತೆ ಅಂತ ಭಾವಿಸಬಾರದು, ಅಲ್ಲಿ ಅವಿವೇಕವೂ ಇರುತ್ತೆ ಎಂದದ್ದು ಆಕಾಶವಾಣಿಯ ವಿಜಯ ಅಂಗಡಿ.ಪ್ರಸಕ್ತ ದಿನಗಳಲ್ಲಿ ತುಂಬಾ ಜನರಿಗೆ ವಿಚಾರ ಶಕ್ತಿ ಇರೋಲ್ಲ ಮುಖ್ಯವಾಗಿ ಗ್ರಹಿಕೆ ಮತ್ತು ವ್ಯಕ್ತಪಡಿಸುವಿಕೆ ಸಮುದಾಯದಲ್ಲಿ ಎಲ್ಲಾ ಹಂತದಲ್ಲೂ ಕಾಣಲು ಸಾಧ್ಯವಿಲ್ಲ, ಕಾರ್ಪೋರೇಟ್ ಜಗತ್ತಿನಲ್ಲಿ ಚಿಂತನೆ ಮತ್ತು ಗ್ರಹಿಕೆಗಳಿಗೆ ಬರಗಾಲ ಬಂದಿದೆ ಅದೂ ಮಾರಾಟದ ಸರಕಾಗಿದೆ ಇಲ್ಲವೇ ಏಕದೃಷ್ಠಿಕೋನದಲ್ಲೇ ಅಭಿವ್ಯಕ್ತವಾಗುತ್ತದೆ ಹೀಗಾಗಿ ಸಮಾಜದಲ್ಲಿ ಹತ್ತು ಹಲವು ವಿಚಾರಗಳಲ್ಲಿ ಒಮ್ಮತ ಮೂಡುವುದೇ ಇಲ್ಲ. ಇದನ್ನು ಪುಷ್ಟಿಕರಿಸುವಂತೆ ಕಳೆದ ಒಂದೆರೆಡು ತಿಂಗಳಿನಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾರ್ವಜನಿಕವಾಗಿ ನಡೆಯುತ್ತಿರುವ ಘಟನೆಗಳು ಜರುಗುತ್ತಿವೆ. 
         ಮೊನ್ನೆ ಸ್ವಾಮಿವಿವೇಕಾನಂದರ ಕುರಿತು ಪ್ರಜಾವಾಣಿಯ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಂಕಣವೊಂದರಲ್ಲಿ ವಿಶದಪಡಿಸಿದ ಸಂಗತಿಗಳು ವಿಭಿನ್ನ ಧಾಟಿಯಲ್ಲಿ ಚರ್ಚೆಗೊಳಪಟ್ಟಿವೆ. ಪ್ರಜ್ಞಾವಂತರೆನಿಸಿಕೊಂಡವರೇ ಮೂರ್ಖರ ಧಾಟಿಯಲ್ಲಿ ಅಮೀನ್ ಮಟ್ಟು ಹೇಳಿದ ಸತ್ಯಗಳನ್ನು ಅರಗಿಸಿಕೊಳ್ಳಲಾಗದೇ ವಿತಂಡವಾದ, ಇಲ್ಲವೇ ಸಮಂಜಸವಲ್ಲದ ಧಾಟಿಯಲ್ಲಿ ಪ್ರತಿವಾದವನ್ನು ಮುಂದಿಟ್ಟಿದ್ದಾರೆ. ನನಗೆ ಜ್ಞಾನ ಬಂದಾಗಿನಿಂದ ವಿವೇಕಾನಂದರ ಬಗ್ಗೆ ಪಠ್ಯದಲ್ಲಿ ಓದಿದ್ದನ್ನು ಬಿಟ್ಟರೆ ಅವರ ಕುರಿತ ಸಾಹಿತ್ಯ ಓದಿದ್ದು ಮತ್ತು ತಿಳಿದದ್ದು ಕೇಸರಿ ಸಂಘಟನೆಗಳು ಪ್ರಕಟಿಸಿದ ಪುಸ್ತಕಗಳಲ್ಲಿ ಅದೂ ಸೀಮಿತ ಚೌಕಟ್ಟಿನಲ್ಲಿ. ಹೀಗಾಗಿ ವಿವೇಕಾನಂದರ ಕುರಿತು ಎಲ್ಲೋ ಒಂದು ಕಡೆ ಭ್ರಮನಿರಸನ ವಾಗಿಬಿಟ್ಟಿತ್ತು. ಯುವ ಜನತೆಗೆ ಮಾದರಿಯಾಗಿ ಸರ್ವಧರ್ಮದ ಪ್ರಾತಿನಿಧಿಕ ವ್ಯಕ್ತಿಯಾಗಿ ವಿಶ್ವಮಾನವ ಸಂದೇಶ ಸಾರಿದ ಶ್ರೇಷ್ಠ ದಾರ್ಶನಿಕರಲ್ಲೊಬ್ಬರಾದ  ವಿವೇಕಾನಂದ, ಕೇಸರಿ ಚೌಕಟ್ಟಿನಲ್ಲಿ ಸೀಮಿತ ನೆಲೆಗಟ್ಟಿನಲ್ಲಿ  ಆರಾಧ್ಯ ದೈವವಾಗಿ ಬಿಂಬಿತವಾಗಿದ್ದು ಈ ದೇಶದ ದುರಂತವೂ ಹೌದು. ವಿಪರ್ಯಾಸವೆಂದರೆ ಸಂನ್ಯಾಸಿ ವಿವೇಕಾನಂದರನ್ನು ಹಿಂದೂ ಧರ್ಮದ ಪ್ರವರ್ತಕನೆಂದು ಬಿಂಬಿಸಿದ್ದು. ಇವತ್ತು ದೇಶದಲ್ಲಿ ವಿವೇಕಾನಂದ ಮಾತ್ರವಲ್ಲ ಇನ್ನೂ ಅನೇಕ ಮಂದಿ ಶ್ರೇಷ್ಠ ನಾಯಕರನ್ನು,ಐತಿಹಾಸಿಕ ಮಹಾ ಪುರುಷರನ್ನು ಸೀಮಿತ ನೆಲೆಗಟ್ಟಿನಲ್ಲಿ ಹಾಗೂ ಶ್ರೇಣೀಕೃತ ವ್ಯವಸ್ಥೆಯಲ್ಲಿ ಗುರುತಿಸುವುದು ಮತ್ತೂ ದುರಂತದ ಸಂಗತಿ. ಇದು ಬಸವಣ್ಣ,ಅಂಬೇಡ್ಕರ್,ಬುದ್ದ,ಕನಕದಾಸ,ಕೆಂಪೇಗೌಡ,ಪುರಂದರದಾಸ,ವಾಲ್ಮೀಕಿ,ಭಗೀರಥ ಹೀಗೆ ಯಾರನ್ನೂ ಬಿಟ್ಟಿಲ್ಲ. ಇರಲಿ ಮುಖ್ಯವಾಗಿ ದಿನೇಶ್ ಅಮೀನ್ ಮಟ್ಟು ಲೇಖನದಲ್ಲಿ ಹೇಳಿದ್ದಾದರೂ ಏನು ? 
          ವಿಶ್ವಮಾನವ ಧರ್ಮದ ಪ್ರತೀಕವಾಗಿದ್ದ ಸ್ವಾಮಿ ವಿವೇಕಾನಂದರನ್ನು ಹೈಜಾಕ್ ಮಾಡಿದ ಕೇಸರಿ ಬಳಗ ವಿವೇಕಾನಂದರನ್ನು ಹಿಂದೂ ಧರ್ಮದ ಅಧಿನಾಯಕನಂತೆ ಬಿಂಬಿಸುತ್ತಾ ಜಾತ್ಯಾತೀತ ರಾಷ್ಟ್ರದಲ್ಲಿ  ವಿವೇಕಾನಂದರ ಬಗೆಗಿನ ವಿಶ್ವ ಭಾವನೆಗಳನ್ನ ಸಂಕುಚಿತಗೊಳಿಸಿದ್ದು ಎಷ್ಟು ಸರಿ? ವಿವೇಕಾನಂದರು ಶೂದ್ರರೂ, ಚಿಕ್ಕ ವಯಸ್ಸಿಗೆ ಸಂನ್ಯಾಸ ಸ್ವೀಕಾರ ಮಾಡಿದರು, ದಡ್ಡ ವಿದ್ಯಾರ್ಥಿಯಾಗಿದ್ದರು, ಪಾಠ ಮಾಡಲು ಅಸಮರ್ಥರಾಗಿದ್ದರು, ಮಾಂಸಹಾರಿಗಳಾಗಿದ್ದರು, ಮೈತುಂಬಾ 31ಬಗೆಯ ರೋಗಗಳಿಂದ ಪೀಡಿತರಾಗಿದ್ದರು ಆದಾಗ್ಯೂ ಬದುಕಿದ ಅಲ್ಪಾವಧಿಯಲ್ಲಿ ವಿಶ್ವ ಮೆಚ್ಚುವ ಸಾಧನೆಗೈದರು ಇಂತಹ ವಿಚಾರಗಳು ತಿಳಿದರೆ ಅವರನ್ನು ಕೇಸರಿ ಬಳಗ ಹಿಂದೂ ಧರ್ಮದ ಪ್ರತಿನಿಧಿಯೆಂದು ಒಪ್ಪಿಕೊಳ್ಳಬಲ್ಲುದೇ ? ಎಂದು ಪ್ರಶ್ನಿಸಿದ ಅಮೀನ್ ಮಟ್ಟು ಬಹಳ ಸೂಕ್ಷ್ಮವಾಗಿ ಕೇಸರಿ ಬಳಗಕ್ಕೆ ಚುರುಕು ಮುಟ್ಟಿಸಿದ್ದಾರಲ್ಲದೇ ,ವಿವೇಕಾನಂದರನ್ನು ಸೀಮಿತ ಚೌಕಟ್ಟಿನಲ್ಲಿಡದೇ ವಿಶ್ವಮಾನವರಾಗಿಯೇ ಇರಲು ಬಿಡಿ ಎಂಬ ಪ್ರಜ್ಞಾವಂತಿಕೆಯ ಸಂದೇಶವನ್ನು ಮನಮುಟ್ಟುವಂತೆ ಹೇಳಿದ್ದಾರಷ್ಟೆ. ಇದರಲ್ಲಿ ವಿವಾದಾತ್ಮಕವಾಗಿ ಚರ್ಚೆ ಮಾಡುವಂತಹದ್ದು ಏನು ಇಲ್ಲ ಮತ್ತು ವಿವೇಕಾನಂದರ ಬಗೆಗಿನ ವಿಚಾರಗಳು ಅವರ ತೇಜೋವಧೆಗಾಗಿ ಹೇಳಿದುದ್ದಲ್ಲ ಎಂಬುದನ್ನು ಅರಿಯಬೇಕಲ್ಲವೇ?

        ಇನ್ನು ರಾಜ್ಯದ ಪಠ್ಯದಲ್ಲಿ ಭಗವದ್ಗೀತೆಯನ್ನು ಅನುಷ್ಠಾನಗೊಳಿಸುವ ವಿಚಾರ, ರಾಜ್ಯದಲ್ಲಿ 10ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಪ್ರಕಟಿಸಿದ ರಾಜ್ಯ ಸರ್ಕಾರ ಅದನ್ನು ಜಾರಿಗೆ ತರಲು ಮುಂದಾದಾಗ ಎದ್ದ ಪ್ರತಿಭಟನೆಗಳ ಬಿಸಿ ಆರುವ ಮುನ್ನವೇ ಭಗವದ್ಗಿತೆಯನ್ನು ಪಠ್ಯದ ಭಾಗವಾಗಿ ಮಾಡುವ ಹುನ್ನಾರವನ್ನು ಕೇಸರಿ ಸರ್ಕಾರ ಪ್ರಕಟಿಸಿದೆ. ದೇಶದ ಸಂವಿಧಾನದ ಆಶಯಗಳನ್ನು ಜಾತ್ಯಾತೀತತೆಯ ನೆಲೆಗಟ್ಟಿನಲ್ಲಿ ಹೇಳಬೇಕಾದ ಪ್ರಜಾತಂತ್ರದ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಸ್ಥರೇ ತದ್ವಿರುದ್ದವಾಗಿ ಈ ವಿಚಾರದಲ್ಲಿ ಸಮರ್ಥನೆಗೆ ಮುಂದಾಗುತ್ತಿದ್ದಾರೆ. ಈಗಾಗಲೇ ಬಿಜೆಪಿ ಆಡಳಿತದಲ್ಲಿದ್ದ ಮದ್ಯಪ್ರದೇಶದಲ್ಲಿ ಭಗವದ್ಗಿತೆಯನ್ನು ಪಠಯವನ್ನಾಗಿ ಮಾಡಲಾಗಿದೆ. ಅದರಂತೆ ರಾಜ್ಯದಲ್ಲಿ ಭಗವದ್ಗೀತೆಯನ್ನು ಪಠ್ಯವನ್ನಾಗಿ ಮಾಡಬೇಕೆಂದು ಹೇಳಲಾಗುತ್ತಿದೆ. ಅಸಲಿಗೆ ಭಗವದ್ಗಿತೆ ಎಂದರೆ ಅದರಲ್ಲಿ ಏನಿದೆ ? ಅದು ಯಾಕೆ ಪಠ್ಯವಾಗ ಬೇಕು/ಬೇಡ? ಎಂಬ ವಿಚಾರಗಳ ಮಂಥನ ಅತ್ಯಗತ್ಯವಾಗಿದೆ. 
       ಭಗವದ್ಗೀತೆ ಹಿಂದೂಗಳ ಪವಿತ್ರಗ್ರಂಥ, ಮಹಾಭಾರತದ ಯುದ್ಧದ ಸಂಧರ್ಭದಲ್ಲಿ ಕೌರವ ಸೇನೆ ಮಂಚೂಣಿಯಲ್ಲಿದ್ದ ಕರ್ಣನೊಡನೆ ಯುದ್ಧ ಮಾಡಲು ಅರ್ಜುನ ಹಿಂಜರಿದಾಗ ಸಾರಥಿಯಾಗಿದ್ದ ಕೃಷ್ಣ, ಅರ್ಜುನನಿಗೆ ಮಾಡಲ್ಪಟ್ಟ ಧರ್ಮೊಪದೇಶವೇ ಭಗವದ್ಗಿತೆಯ ರೂಪದಲ್ಲಿದೆ, ಇದು ಸಂಸ್ಕೃತ ಭಾಷೆಯಲ್ಲಿರುವ 700ಶ್ಲೋಕಗಳ ಗ್ರಂಥ. ಇದರಲ್ಲಿ ನಾಲ್ಕು ಯೋಗಮಾರ್ಗಗಳಾದ ಭಕ್ತಿ-ಕರ್ಮ-ಧ್ಯಾನ-ಜ್ಞಾನದ ಕುರಿತ ಭೋಧನೆಯನ್ನ ಕಾಣಬಹುದು. ಹಾಗೆಯೇ ರಾಜಕೀಯ ಧರ್ಮದ ಎಲ್ಲಾ ಪಟ್ಟುಗಳನ್ನು ಇದು ಒಳಗೊಂಡಿದೆ. ಹಿಂದೂ ಚಿಂತನೆ, ವೈದಿಕ, ಆಧ್ಯಾತ್ಮಿಕ,ಯೋಗಿಕ ಮತ್ತು ತಾಂತ್ರಿಕ ತತ್ವಶಾಸ್ತ್ರಗಳ ಬಗೆಗೂ ವಿಸ್ತ್ರುತವಾಗಿ ಹೇಳಲಾಗಿದೆ. ಇದು ವಿದ್ಯಾರ್ಥಿಗಳು ತಿಳಿಯಲೇ ಬೇಕಾದ ಮತ್ತು ಓದಿಕೊಳ್ಳಬೇಕಾದ  ಅತ್ಯುತ್ತಮ ಗ್ರಂಥವೆನ್ನುವುದರಲ್ಲಿ ಯಾವುದೇ ಭಿನ್ನಾಬಿಪ್ರಾಯಗಳು ಬೇಕಿಲ್ಲ. ಆದರೆ ಜಾತ್ಯಾತೀತ ನಿಲುವನ್ನು ಹೊತ್ತ ಪ್ರಜಾಪ್ರಭುತ್ವ ರಾಷ್ಟದ ಶೈಕ್ಷಣಿಕ ವ್ಯವಸ್ಥೆಯಲ್ಲಿ NCF(National Curriculum Framework) ಮಾರ್ಗಸೂಚಿಗನುಗುಣವಾಗಿ ಪಠ್ಯವನ್ನು ಅನುಷ್ಠಾನಕ್ಕೆ ತರಬೇಕಾಗಿರುತ್ತದೆ ಹೀಗಿರುವಲ್ಲಿ ಅದಕ್ಕೆ ವಿರುದ್ದವಾದ ರೀತಿಯಲ್ಲಿ ಪಠ್ಯಗಳನ್ನು ಅಳವಡಿಸಲು ಬರುವುದಿಲ್ಲ. ಭಗವದ್ಗಿತೆಯಲ್ಲಿ ಹಿಂದೂ ಧರ್ಮದ ಪ್ರತಿಪಾದನೆ ಇರುವುದರಿಂದ ಸಹಜವಾಗಿಯೇ ಅದನ್ನು ಪಠ್ಯವಾಗಿಸಲು ವಿರೋಧ ವ್ಯಕ್ತವಾಗುತ್ತದೆ. ಆದ್ದರಿಂದ ಪ್ರಗತಿಪರ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸುವಂತೆ ಭಗವದ್ಗೀತೆಯ ಆಯ್ದ ಭಾಗಗಳು ಪಠ್ಯದಲ್ಲಿ ಪಾಠವಾಗಿ ಅಳವಡಿಕೆಯಾಗಬೇಕೆ ವಿನಹ ಪಠ್ಯವಾಗಿ ಅಲ್ಲ ಎಂಬುದನ್ನು ಒಪ್ಪಬೇಕಲ್ಲವೇ? ಒಂದು ವೇಳೆ ಹಠ ಹಿಡಿದು ಇದನ್ನು ಪಠ್ಯವಾಗಿ ಅಳವಡಿಕೆ ಮಾಡಿದರೆ ಇತರೆ ಧರ್ಮೀಯರಿಗೆ "ಹೇರಿಕೆ" ಎನಿಸುವುದಿಲ್ಲವೇ? ಆಗ ಆ ಧರ್ಮೀಯರ ಧರ್ಮಗ್ರಂಥಗಳನ್ನು ಪಠ್ಯ ಮಾಡಲು ಬೇಡಿಕೆ ಮಂಡನೆ ಆಗುತ್ತದಲ್ಲವೇ? ಇಂತಹ ಬೆಳವಣಿಗೆ ಸಂವಿಧಾನದ ಜಾತ್ಯಾತೀತ ಆಶಯಕ್ಕೆ ಧಕ್ಕೆ ತಂದಂತಾಗುವುದಿಲ್ಲವೇ? ಹಿಂದೆ ವಿಶ್ವ ಹಿಂದೂ ಪರಿಷತ್ ಶಾಲಾ-ಕಾಲೇಜು ಮಕ್ಕಳಿಗೆ ರಾಮಾಯಣ/ಮಹಾಭಾರತ ಪುಸ್ತಕಗಳನ್ನು ನೀಡಿ ಪರೀಕ್ಷೆ ಕೊಡುತ್ತಿತ್ತು ಆ ಮೂಲಕ ಆ ಗ್ರಂಥಗಳ ಮಹತ್ವವನ್ನು ಅಪೇಕ್ಷೆ ಪಟ್ಟವರು ಮಾತ್ರವೇ ತಿಳಿಯಲು ಸಾಧ್ಯವಾಗುತ್ತಿತ್ತು ಅದು ಹೇರಿಕೆ ಎನಿಸುತ್ತಿರಲಿಲ್ಲ, ಅದೇ ರೀತಿ 'ಭಗವದ್ಗಿತೆಯನ್ನು ಪಠ್ಯ ಮಾಡುವ ಬದಲು ಅಪೇಕ್ಷೆ ಅನುಸಾರ ತಿಳಿಯಲು ಅವಕಾಶ ಮಾಡಿಕೊಟ್ಟರೆ ಯಾವುದೇ ವಿವಾದ ಇರಲಾರದು ಅನಿಸುತ್ತದೆ.  

Saturday, December 24, 2011

ರೈತ ದಿನಾಚರಣೆಯ ನೆನಪಲ್ಲಿ......


ಅದು 2009ರ ವರ್ಷ, ಆ ಸುದ್ದಿ ನನಗೆ ಕುತೂಹಲ ಮತ್ತು ದಿಗಿಲು ಹುಟ್ಟಿಸಿತ್ತು, ಆ ಹಳ್ಳಿಯ ಜನ ತಮ್ಮ ಜಮೀನು ಮತ್ತು ಹಳ್ಳಿಯನ್ನೇ ಹರಾಜಿಗಿಟ್ಟಿದ್ದರು. ಅದು ಪಂಜಾಬ್ ನ ಮುಂದುವರಿದ ಹಳ್ಳಿ ಅಂದರೆ ಆಧುನಿಕ ಜಗತ್ತಿನ ಎಲ್ಲಾ ಸೌಕರ್ಯಗಳನ್ನು ಪಡೆದ ಶ್ರೀಮಂತ ಹಳ್ಳಯೆಂದರೂ ತಪ್ಪಾಗಲಾರದೇನೋ. ಆ ಗ್ರಾಮದ ರೈತರು ತಮ್ಮ ಜಮೀನು ಸೇರಿದಂತೆ ಹಳ್ಳಿಯನ್ನೂ ಮಾರಾಟಕ್ಕಿಟ್ಟಿದ್ದರು.  ಬಹುತೇಕ ರೈತಾಪಿ ಕುಟುಂಬಗಳೇ ವಾಸಿಸುವ ಆ ಗ್ರಾಮದಲ್ಲಿ 1994ರ ಜಾಗತೀಕರಣ ನೀತಿಯ ನಂತರ ದಿಕ್ಕು ದೆಸೆಯೇ ಬದಲಾಗಿತ್ತು.  ದೇಸೀ ಪದ್ದತಿಯಲ್ಲಿ ಕೃಷಿ ನಡೆಸುತ್ತಿದ್ದ ಅಲ್ಲಿಯ ರೈತರು ನಂತರ ಹೊಸ ವೈಜ್ಞಾನಿಕ ಪದ್ದತಿಗೆ ಮಾರು ಹೋದರು, ದೀರ್ಘಾವದಿಯ ಬೆಳೆ ಬೆಳೆಯುವ ಬದಲಿಗೆ ಅಲ್ಪಾವಧಿಯ ಬೆಳೆ ಬೆಳೆಯಲು ಮುಂದಾಗಿದ್ದರು, ಹೊಸ ತಳಿಗಳ ಬಳಕೆ ಹೆಚ್ಚಿತು, ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಆಸ್ಪದ ಸಿಗತೊಡಗಿತು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆ ಅಧಿಕವಾಯಿತು, ನೀರಾವರಿಗೆ ಥರಹೇವಾರಿ ಆದುನಿಕ ಉಪಕರಣಗಳು ಬಂದವು, ಕೃಷಿಕಾರ್ಮಿಕರಿಗೆ ಬದಲಾಗಿ ಆಧುನಿಕ ಉಪಕರಣಗಳು ಬಂದವು, ಪ್ರತೀ ಮನೆಗೂ ಟ್ರಾಕ್ಟರ್ ಗಳ ಆಗಮನವಾಯಿತು. ಆಹಾರ ಬೆಳೆಗಳಿಗೆ ಬದಲಾಗಿ ವಾಣಿಜ್ಯ ಬೆಳೆಗಳು, ಹೈಬ್ರಿಡ್ ಬೆಳೆಗಳು ಆವರಿಸಿದವು. ಬ್ಯಾಂಕುಗಳು ಸಾಲದ ಹೊಳೆಯನ್ನೇ ಹರಿಸಿದವು. ಸಾಮಾನ್ಯ ರೈತ ಸಿರಿವಂತನಾದ, ಶ್ರಮದ ಜೀವನ ಮರೆಯಾಯಿತು ಆಧುನಿಕ ಬದುಕಿನ ಶೈಲಿ ತಳವೂರಿತು. ಜೊತೆಯಲ್ಲಿ ನೆಮ್ಮದಿ ಕೆಡಿಸುವ ಪರ್ವಕಾಲವೂ ಆರಂಭವಾಯಿತು. ಹವಾಗುಣ ಮೊದಲಿನಂತಿರಲಿಲ್ಲ, ನಿರೀಕ್ಷಿತ ಮಳೆಗಳು ಕೈಕೊಟ್ಟವು, ಕ್ರಿಮಿನಾಶಕ ಹಾಕಿದರೂ ಅದನ್ನೇ ತಿಂದು ಬದುಕುವ ಕೀಟಗಳು ಮತ್ತು ಕಾಯಿಲೆಗಳು ಬೆಳೆಗಳನ್ನು ಹಾಳು ಮಾಡಿದವು, ವಿರಾಮವಿಲ್ಲದೇ ಬೆಳೆ ಬೆಳೆಯುತ್ತಿದ್ದುದರಿಂದ ಹಾಗೂ ಹೆಚ್ಚಿನ ರಾಸಾಯನಿಕ ಪದಾರ್ಥಗಳ ಬಳಕೆ ಹೆಚ್ಚಿದ್ದರಿಂದ ಮಣ್ಣಿನ ಪಿಎಚ್ ಮೌಲ್ಯ ಹಾಳಾಯ್ತು ಭೂಮಿ ಬರಡಾಯಿತು. ಅಲ್ಲಿ ಏನೂ ಬೆಳೆಯದಂತಾಯಿತು. ಆಹಾರ ಬೆಳೆಗಳಿಗೆ ನಿರ್ಲಕ್ಷಿಸಿದ್ದರಿಂದ ರೈತರು ಪೇಟೆಗೆ ಹೋಗಿ ಭತ್ತ,ಗೋದಿಯಂತಹ ಆಹಾರ ಬೆಳೆ  ಖರಿದೀಸುವ ದುಸ್ತಿತಿ ಎದುರಾಯಿತು. ಕೈತುಂಬಾ ದುಡ್ಡು, ಐಷಾರಾಮಿ ಸೌಕರ್ಯ, ವಾಹನಗಳನ್ನು ಹೊಂದಿದ್ದರೂ ಬೂಮಿ ಬರಡಾಗಿದ್ದರಿಂದ ರೈತರ ಬದುಕು ಅಸಹನೀಯವಾಯಿತು. ಸಾಲಕೊಟ್ಟ ಬ್ಯಾಂಕುಗಳು  ಎದೆಮೇಲೆ ನಿಂತು ವಸೂಲಿಗೆ ಮುಂದಾದವು, ಬೇರೆ ದಾರಿಯಿಲ್ಲದ ರೈತಾಪಿ ಮಂದಿ ಜಮೀನುನೊಂದಿಗೆ ಗ್ರಾಮವನ್ನೇ ಹರಾಜಿಗೆ ಇಟ್ಟುಬಿಟ್ಟರು! ಇದು ಪಂಜಾಬ್ ನ ಹಳ್ಳಿಯೊಂದರ ನೈಜ ಕಥೆ.
ಪ್ರಸಕ್ತ ಸಂಧರ್ಭದಲ್ಲಿ   ಸ್ವತಂತ್ರ ಭಾರತದ ಪ್ರತೀ ಹಳ್ಳಿಗಳ ರೈತರ ಕಥೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇವತ್ತು ಡಿ.23, "ರೈತ ದಿನಾಚರಣೆ" ಈ ಸರ್ಕಾರಕ್ಕೆ ನಮ್ಮ ಜನರಿಗೆ ಈ ಕುರಿತು ಎಷ್ಟು ಅರಿವಿದೆಯೋ ತಿಳಿಯದು. ಭಾರತದ ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತದೆ, ಕೃಷಿಯೇ ದೇಶದ ಆರ್ಥಿಕತೆಯೂ ಮೂಲವಾಗಿತ್ತು ಎಂಬುದು ಯಾರಿಗೂ ತಿಳಿಯದ ಸಂಗತಿಯೇನಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ, ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ, ಕೃಷಿ ಜೀವನದ ಉಸಿರು ಯಾಕೆ ಎಂಬ ಪ್ರಶ್ನೆ ಕಾಡಬೇಕು ಮತ್ತು ಮಂಥನವಾಗಬೇಕು, ಈ ದಿನ ಇಂತಹದ್ದೊಂದು ಚರ್ಚೆಗೆ ವೇದಿಕೆಯಾಗಬಹುದು.

ವಿಚಾರದ ಮಂಥನಕ್ಕೆ ಮುನ್ನಾ ರೈತ ದಿನಾಚರಣೆಯ ಕುರಿತು ಒಂದು ಸಂಗತಿಯನ್ನು ಹೇಳಲೇಬೇಕು, ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಅತೀ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧುರಿ ಚರಣ್ ಸಿಂಗ್ ರ ಜನ್ಮ ದಿನವನ್ನು ಭಾರತ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಧಿಕೃತವಾಗಿ ಈ ಕುರಿತು ಸರ್ಕಾರಿ ಘೋಷಣೆಯಿಲ್ಲದಿದ್ದರೂ 80ರ ದಶಕದಲ್ಲಿ ಬಂದ ರೈತ ಚಳುವಳಿಯ ಸಂಧರ್ಭದಲ್ಲಿ ರೈತರು ಡಿ.23ರಂದು ರೈತದಿನಾಚರಣೆ ಆಚರಿಸುತ್ತಾರೆ.ಸಮಾಜವಾದಿ  ರಾಮಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ರ ಒಡನಾಡಿಯಾಗಿ ಗುರುತಿಸಿಕೊಂಡ ಚೌಧುರಿ ಚರಣ್ ಸಿಂಗ್ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ನೂರ್ ಪುರ್ ಎಂಬ ಸಣ್ಣ ಹಳ್ಳಿಯವರು. ಡಿ.23, 1902ರಂದು ಜನಿಸಿದ ಚರಣ್ ಸಿಂಗ್ ಪ್ರತಿಭಾವಂತ ಯುವಕ. ಎಕಾನಮಿಕ್ಸ್ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್ ಸಿಂಗ್ ತನ್ನ 34ನೇ ವಯಸ್ಸಿಗೆ ಮೊದಲ ಭಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾಗಿ ಆಯ್ಕೆಯಾದರು.ಕೃಷಿ ಬದುಕನ್ನು ಪ್ರೀತಿಸುತ್ತಿದ್ದ ಚರಣ್ ಸಿಂಗ್ ರೈತರ ಬದುಕು ಸುಧಾರಣೆಗೆ ತುಡಿತವನ್ನಿಟ್ಟುಕೊಂಡಿದ್ದರು.ಆದ್ದರಿಂದಲೇ  1938ರಲ್ಲಿ  ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು, ಆ ಮೂಲಕ ರೈತ ಪರವಾದ ಧೋರಣೆ ಪ್ರದರ್ಶಿಸಿದರು. ಮದ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆಯನ್ನು ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲಾ  ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು, ಪಂಜಾಬ್ ರಾಜ್ಯ ಇದನ್ನು ಅನುಷ್ಟಾನಕ್ಕೆ ತಂದ ಮೊದಲ ರಾಜ್ಯವಾಯಿತು. 1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿಯನ್ನು ನಿಷೇದಿಸುವ ಮತ್ತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮಹತ್ವದ ನಿರ್ಧಾರ ಕೈಗೊಂಡರು. ಮುಂದೆ ಇದು ಇಡೀ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು. ಅದೇ ರೀತಿ ದೇಶದ ಹಿತದೃಷ್ಟಿಯಿಂದ ಅನೇಕ ಮಹತ್ವದ ದೂರದೃಷ್ಟಿ ನಿಲುವುಗಳನ್ನು ಹೊಂದಿದ್ದ ಚರಣ್ ಸಿಂಗ್ ಭಾರತೀಯ ಕಾರ್ಮಿಕ ಕಾಯ್ದೆಗೆ ಹೊಸ ರೂಪುರೇಷೆ ನೀಡಿದರು. ರೈತ ಪರವಾದ ಚಿಂತನೆಗಳು ದೇಶದ ರೈತ ಸಮುದಾಯದಲ್ಲಿ ಚರಣ್ ಸಿಂಗ್ ರ ಹೆಸರನ್ನು ಹಸಿರಾಗಿಸಿದವು. ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚಿರಸ್ಥಾಯಿಯಾದ ಚರಣ್ ಸಿಂಗ್ ರೈತ ಸಮುದಾಯದಲ್ಲಿ ಸ್ಥಿರವಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತದಿನಾಚರಣೆ ಆಚರಣೆಗೆ ಬಂದಿದೆ.

ಭಾರತದ ದೇಶದ ಕೃಷಿಗೆ  9000ಕ್ರಿ ಪೂ. ದ ಇತಿಹಾಸ ಇರುವುದು  ಕಾಣಬರುತ್ತದೆ. ಅಲ್ಲಿಂದ ಅನೇಕ ಕಾಲಘಟ್ಟಗಳು ಸವೆದು ಹೋಗಿದ್ದರೂ ಆಧುನಿಕ ಪರಿಸರದ ನಿಲುವುಗಳು ಕೃಷಿ ಬದುಕನ್ನು ವರ್ತಮಾನದಲ್ಲಿ ತಲ್ಲಣಗೊಳಿಸುವಂತೆ ಮಾಡಿವೆ. ಉಸಿರಾಗಬೇಕಿದ್ದ ರೈತರ ಹಸಿರು ಭೂಮಿ ಕಾರ್ಪೋರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕುತ್ತಿರುವುದರಿಂದ ರೈತನ ಬದುಕು ಅಸಹನೀಯವಾಗಿದೆ, ಕೃಷಿ ಜಗತ್ತಿನ ಹೊಸ ಅವಿಷ್ಕಾರ ಮತ್ತು ಪದ್ದತಿಗಳು ರೈತನನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡಿವೆ, ಕೃಷಿ ಕುರಿತ ಸರ್ಕಾರಿ ಪಾಲಸಿಗಳೂ ಜಾಗತಿಕ ವ್ಯಾಪಾರದ ಅನುಸಾರವಾಗಿ ನಡೆಯುತ್ತಿರುವುದರಿಂದ ಭವಿಷ್ಯದ ದಿನಗಳು ಮತ್ತಷ್ಟು ಅಯೋಮಯವಾಗುವ ಸ್ಪಷ್ಟ ಸೂಚನೆಯಿದೆ. ರೈತ ಜಾಗೃತನಾಗಬೇಕು ಜನಸಾಮಾನ್ಯ ಎಚ್ಚೆತ್ತುಕೊಳ್ಳಬೇಕು ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

Sunday, December 11, 2011

ಮಡೇಸ್ನಾನ ನಿಷೇದಕ್ಕೆ ಅಷ್ಟಮಂಗಳ ಪ್ರಶ್ನೆ ಬೇಕಾ?



ರಾಮನಾಥಪುರದ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯ ದಿನದಂದು ಎಂಜಲು ಎಲೆ ಮೇಲೆ ಉರುಳುವ ಸೇವೆ ಇದೆ ! ತಕ್ಷಣವೇ ಅದಕ್ಕೊಂದು ಕರೆಕ್ಷನ್ ಹಾಕಿದ ಗೆಳೆಯ "ಆದ್ರೆ ಅಲ್ಲಿ ಬ್ರಾಹ್ಮಣರು ಉಂಡ ಎಲೆಗಳ ಮೇಲೆ, ಬ್ರಾಹ್ಮಣರೇ ಉರುಳುತ್ತಾರೆ" ಎಂದು ನಸುನಕ್ಕ. ಶಾಕ್ ಆಗುವ ಸರದಿ ನನ್ನದು. ಅದೇ ದಿನ ಹಾಸನದ ಮಿತ್ರರೊಬ್ಬರು ಫೋನಾಯಿಸಿ ನಗರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲೂ ಅಪೇಕ್ಷೆ ಈಡೇರಿಕೆಗಾಗಿ ಬರಿಯ ನೆಲದ ಮೇಲೆ ಊಟ ಮಾಡುವ ಪದ್ದತಿ ಇದೆ ಎಂದರು. ಆಮೇಲೆ ಹುಡುಕುತ್ತಾ ಹೋದರೆ ಇಂತಹ ವಿವಿಧ ಅನಾಗರಿಕ ಪದ್ದತಿಗಳು ನಮ್ಮ ಸುತ್ತಲೂ ಸಂಪ್ರದಾಯದ ಹೆಸರಿನಲ್ಲಿ ಚಾಲ್ತಿಯಲ್ಲಿರುವುದು ಅರಿವಿಗೆ ಬಂದು ದಿಗಿಲಾಯ್ತು. ಇದೆಲ್ಲದಕ್ಕಿಂತ ಹೆಚ್ಚು ವಿಷಾಧಭಾವ ಮೂಡಿಸಿದ ಸಂಗತಿ ಹಿರಿಯ ಸಚಿವ ವಿ ಎಸ್ ಆಚಾರ್ಯ ಹೇಳಿಕೆ. ಮಡೇಸ್ನಾನ ನಿಷೇದಿಸುವ ಕುರಿತು ಅಷ್ಟಮಂಗಳ ಪ್ರಶ್ನೆಯ ನಂತರ ನಿರ್ಧರಿಸಲಾಗುವುದಂತೆ, ಹಾಗೆಯೇ ಸಾಂಪ್ರಾದಾಯಿಕ ಪದ್ದತಿಗಳ ಆಚರಣೆ ಜನರ ಹಕ್ಕು ಅದಕ್ಕೆ ಅಡ್ಡಿ ಉಂಟು ಮಾಡಬಾರದಂತೆ ! ಇದು ಜವಾಬ್ದಾರಿಯುತ ಸಚಿವರುಗಳು  ಹಾಗೂ ಸಿಎಂ ಡೀವಿ ಮಾತನಾಡುವ ಪರಿ. ಕಳೆದ 15ದಿನಗಳಿಂದ ಮಡೇ ಸ್ನಾನ ಪರ/ವಿರೋಧ ಚರ್ಚೆಗಳು ನಡೆಯುತ್ತಿವೆ. ಅವರವರ ಮೂಗಿನ ನೇರಕ್ಕೆ ವಿಚಾರವನ್ನ ಚರ್ಚೆಗೆ ತಂದಿದ್ದಾರೆ. ಇರಲಿ ಇಂತಹದ್ದೊಂದು ಅನಿಷ್ಠ ಸಂಪ್ರದಾಯ ಕುರಿತ ಚರ್ಚೆ ನಾಗರಿಕ ಸಮಾಜದ ನಾಗರೀಕರಿಗೆ ಅಗತ್ಯವೇ ಆಗಿದೆ. 
         ಭಾರತ ದೇಶ ಹೇಳಿ ಕೇಳಿ ಸಾಂಪ್ರದಾಯಿಕ ಆಚರಣೆಗಳನ್ನು ಹೊಂದಿದ, ವಿವಿಧ ಧರ್ಮಗಳನ್ನು ಹೊಂದಿದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಈ ನಡುವೆಯೇ ನಾಗರಿಕ ಸಮಾಜಕ್ಕೆ ವಿರುದ್ದವಾದ ಆಚರಣೆಗಳನ್ನು ಕಾಲಘಟ್ಟಕ್ಕೆ ತೊರೆಯದೇ ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಭಾರತೀಯ ಪರಂಪರೆಯನ್ನು ಅತ್ಯಂತ  ಪುರಾತನವಾದ ನಾಗರಿಕೆತೆಯನ್ನು ಹೊಂದಿದ ರಾಷ್ಟ್ರವೆಂದು ಗುರುತಿಸಲಾಗುತ್ತದೆ. ಭಾರತೀಯ ಪರಂಪರೆಗೆ 8000ವರ್ಷಗಳಷ್ಟು ಹಳೆಯ ಇತಿಹಾಸವಿರುವುದನ್ನು ಕಾಣಬಹುದು. ವರ್ಗಬೇಧ, ಜಾತೀಯತೆ ಮತ್ತಿತರ ಅನಿಷ್ಟ ಸಂಪ್ರದಾಯಗಳ ವಿರುದ್ದ ಅನೇಕ ಸಮಾಜ ಸುಧಾರಕರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಿರುವಲ್ಲಿ ಕಾಲ ಕಳೆದಂತೆ ಒಂದೊಂದೆ ಅನಿಷ್ಠ ಸಂಕೋಲೆಗಳು ಕಳಚುತ್ತಾ ಬಂದಿವೆ. ಹಿಂದಿನ ಕಾಲ ಘಟ್ಟದಲ್ಲಿ ಅರಿವಿನ ಕೊರತೆಯಿಂದಾಗಿ ಅನಾಗರಿಕ ಆಚರಣೆಗಳನ್ನು ಪೋಷಿಸಿಕೊಂಡು ಬರಲಾಗಿತ್ತಾದರೂ ಕಾಲಘಟ್ಟದ ಬದಲಾವಣೆಯಿಂದ ಅಲ್ಲೆಲ್ಲ ಹೊಸತನದ ಅರಿವು ಮೂಡುತ್ತಿದೆ. 
          ಮೊನ್ನೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾ ಷಷ್ಠಿಯಂದು ನಡೆಯುತ್ತಿದ್ದ ಮಡೆಸ್ನಾನವನ್ನು ವಿರೋಧಿಸಿದ ಶಿವರಾಂ ಎಂಬುವವರಿಗೆ ಮನಸ್ಸೋ ಇಚ್ಚೆ ಸಾರ್ವಜನಿಕವಾಗಿಯೇ ಥಳಿಸಲಾಗಿದೆ, ಸಾಲದ್ದು ಎಂಬಂತೆ ದೇಗುಲದ ಮುಂದೆ ಭಕ್ತಾದಿಗಳ ಹೆಸರಿನ ಅನಾಗರಿಕರು ಮಡೇಸ್ನಾನದ ಪರವಾಗಿ ಭಾರಿ ಪ್ರತಿಭಟನೆಯನ್ನು ನಡೆಸಿದ್ದಾರೆ, ರಾಜ್ಯ ಸರ್ಕಾರ ತನ್ನದೇ ಆಡಳಿತದ ಸ್ಥಳೀಯ ಸಹಾಯಕ ಆಯುಕ್ತರು ನಿಷೇದಿಸಿದ ಮಡೇಸ್ನಾನವನ್ನು ಬೆಂಬಲಿಸಲು ಮೀನ ಮೇಷ ಎಣಿಸುತ್ತಾ, ಎಸಿ ಆದೇಶವನ್ನು ರದ್ದುಗೊಳಿಸಿ ಅಧಿಕೃತವಾಗಿ ಮಡೇಸ್ನಾನಕ್ಕೆ ಅವಕಾಶ ಮಾಡಿದೆ. ಮುಖ್ಯಮಂತ್ರಿ ಮತ್ತು ಸಚಿವರುಗಳು ಮಡೇಸ್ನಾನ ನಿಷೇಧಕ್ಕೆ ಅಷ್ಟಮಂಗಳ ಪ್ರಶ್ನೆಯನ್ನು ಕಾಯುವುದಾದರೆ ಅವರು ದೇಶದ ಕಾನೂನಿಗೆ, ಸಂವಿಧಾನಕ್ಕೆ ಕೊಡುವ ಗೌರವವೇನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಭಾವನಾತ್ಮಕ ವಿಚಾರಗಳು ನಾಗರೀಕತೆಯ ಚೌಕಟ್ಟಿನಲ್ಲಿರಬೇಕೆ ವಿನಹ ಎಲ್ಲೆಯನ್ನು ಮೀರುವಂತಾಗಬಾರದಲ್ಲವೇ?
             ಧೃಶ್ಯ ಮಾಧ್ಯಮವೊಂದರ ವರದಿಗಾರ ಅದೇ ಛಾನಲ್ ಗೆ ಸಂಬಂಧಿಸಿದ ಪತ್ರಿಕೆಯಲ್ಲಿ ಮಡೆ ಸ್ನಾನದ ಪರವಾಗಿ ವಿಚಾರ ಮಂಡಿಸುತ್ತಾ "ಈ ಸಂಪ್ರದಾಯ ಮುಂದುವರಿಯಬೇಕು ಇಲ್ಲವಾದರೆ ನಾವು ರಥ ಕಟ್ಟುವುದಿಲ್ಲ ಅಂತ ಪಟ್ಟು ಹಿಡಿದದ್ದು ಮಲೆಕುಡಿಯ ಜನಾಂಗದವರೇ ಹೊರತು ಮೇಲ್ಜಾತಿಯವರಲ್ಲ ಎನ್ನುತ್ತಾರೆ ಆದರೆ ಆದರೆ ಅನಿಷ್ಠ ಪದ್ದತಿಯನ್ನು ಜೀವಂತವಾಗಿಡುವ ಉದ್ದೇಶದಿಂದ ಮಲೆಕುಡಿಯರಂತಹ ಅಮಾಯಕ ಜನರನ್ನು ಕಾಲ ಕಾಲಕ್ಕೆ ಪಾಲಿಶ್ ಮಾಡಿ ಅನುಕೂಲಕ್ಕೆ ಬಳಸುವಂತಹ ಪಟ್ಟಭದ್ರ ಹಿತಾಸಕ್ತಿಗಳಿಗೆ ನಾಗರೀಕತೆಯ ಅರಿವಿಲ್ಲವೇ?  ಅದೇ ರೀತಿ ನೆಲದ ಮೇಲೆ ಊಟ ಮಾಡುವುದು ಮುಖ್ಯ ಪ್ರಾಣನಿಗೆ ಸಲ್ಲಿಸುವ ಸೇವೆಯಂತೆ ಇದಕ್ಕೆ ಉಡುಪಿ ಮಠದಲ್ಲಿ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲವಂತೆ ಹಾಗೆಂದ ಮಾತ್ರಕ್ಕೆ ಇಂತಹದ್ದನ್ನು ಪುರಸ್ಕರಿಸಬೇಕೆ? ಇದ್ಯಾವ ಸೀಮೆಯ ನಾಗರೀಕ ಪದ್ದತಿ? ಇದಕ್ಕೆ ಶುಲ್ಕ ಬೇರೆ ಬೇಕಿತ್ತಾ?  ಮಡೇಸ್ನಾನ ತೀರಾ ವೈಯುಕ್ತಿಕವಾದ ಸೇವೆ ದೇವರ ಮಾಮೂಲು ಸೇವಾ ಪಟ್ಟಿಯಲ್ಲಿ ಇದು ಸೇರಿಲ್ಲ ಎನ್ನಲಾಗುತ್ತದೆ ಹಾಗಾದರೆ ಚಂದ್ರಗುತ್ತಿಯ ಬೆತ್ತಲೆ ಸೇವೆ ತೀರಾ ವೈಯುಕ್ತಿಕ ಮತ್ತು ಭಾವನಾತ್ಮಕವಾದುದು, ಉತ್ತರ ಕರ್ನಾಟಕದಲ್ಲಿ ಬಸವಿ ಬಿಡುವ ಪದ್ದತಿ ವೈಯುಕ್ತಿಕವಾದುದು ಹೀಗೆ ಹೇಳುತ್ತಾ ಹೋದರೆ ಹಲವಾರು ಅನಿಷ್ಠ ಸಂಪ್ರದಾಯಗಳನ್ನು ಪಟ್ಟಿ ಮಾಡಬಹುದು. ಇವತ್ತು ನಾವೆಲ್ಲ ಯಾವ ಕಾಲ ಘಟ್ಟದಲ್ಲಿದ್ದೇವೆ? ವೈಜ್ಞಾನಿಕ ಅವಿಷ್ಕಾರಗಳು ಕಣ್ಣ ಮುಂದಿವೆ ಹೀಗಿದ್ದರೂ ಇಂತಹ ಮೂಡನಂಬಿಕೆಗಳ ಆಚರಣೆ ಬೇಕಾ ಎಂಬ ಪ್ರಶ್ನೆ ಮೂಡುತ್ತದೆ,. ಇದೇ ಲೇಖನದಲ್ಲಿ ಸದರಿ ವರದಿಗಾರ ಒಂದು ಪ್ರಶ್ನೆ ಮುಂದಿಡುತ್ತಾನೆ ಬಕ್ರಿದ್ ದಿನ ಕುರಿ ಕಡಿಯುವುದು ನಂಬಿಕೆಯ ಬಾಗ, ದೀಪಾವಳಿಗೆ ಕೋಳಿ ಬಲಿ ನೀಡುವುದು ಸಂಪ್ರದಾಯ ಅದೇ ರೀತಿ ಮಡೇಸ್ನಾನ ದಕ್ಷಿಣ ಕನ್ನಡದ ನಂಬಿಕೆ ಎಂದು ವಿತಂಡವಾದವನ್ನು ಮುಂದಿಡುತ್ತಾನೆ. ಕುರಿ-ಕೋಳಿ ಬಲಿ ಅನಾಗರಿಕ ಕೃತ್ಯವೆಂದೇ ಕಾಣಬಹುದು ಆದರೆ ಅದು ಆಹಾರ ಸೇವನೆಯ ಅನಿವಾರ್ಯ ಭಾಗ, ಮಾಂಸಹಾರ ಇಲ್ಲದಿದ್ದರೆ ಜಗತ್ತಿನ ಬಹುತೇಕ ರಾಷ್ಟ್ರಗಳ ಜನರು ಹಸಿವಿನಿಂದ ಸಾಯುವುದನ್ನು ಕಾಣಬೇಕಿತ್ತು, ಅಷ್ಟಕ್ಕೂ ಸಸ್ಯಾಹಾರಿಗಳ ಸೇವಿಸುವ ಗೋವಿನ ಹಾಲು ಮಾಂಸಜನ್ಯವಾದುದೇ ಅಲ್ಲವೇ ಆಗ ಅದು ಸಸ್ಯಾಹಾರ ಹೇಗಾದಿತು ?
       ಅನಾಗರಿಕ ಕೃತ್ಯಗಳನ್ನು ಬೆಂಬಲಿಸುವ ಭರದಲ್ಲಿ ವಿತಂಡ ವಾದಗಳು ಮತ್ತು ಸಮಂಜಸವಲ್ಲದ ತರ್ಕಗಳು ಹಾದಿ ತಪ್ಪಿಸುತ್ತವೆಯೇ ವಿನಹ ಸರಿಯಾದ ಪರಿಹಾರೋಪಾಯ ಕಂಡು ಕೊಳ್ಳಲಾಗುವುದಿಲ್ಲ. ಆರೋಗ್ಯವಂತ ಸಮಾಜದ ನಡೆಗೆ ಆರೋಗ್ಯವಂತ ಚಿಂತನೆಗಳು ಮಾತ್ರ ಬೇಕು ಅದು ನಾಗರೀಕತೆಯ ಲಕ್ಷಣವಾಗುತ್ತದೆ ಆದರೆ ತರ್ಕಕ್ಕೆ ಪ್ರತಿ ತರ್ಕ ಎಂದು ಮುಂದುವರೆದರೆ ಅದಕ್ಕೆ ಸರಿಯಾದ ಪರಿಹಾರ ದೊರಕಲಾರದು. ಸರ್ಕಾರವೂ ಕೂಡ ಮಡೇಸ್ನಾನ ಮತ್ತು ಮಡೇಸ್ನಾನದಂತಹ ಅನಿಷ್ಠ ಆಚರಣೆಗಳನ್ನು ನಿಷೇದಿಸುವಲ್ಲಿ ಸಂವಿದಾನದ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆ ವಿನಹ ಅಷ್ಟಮಂಗಳ ಪ್ರಶ್ನೆಯ ಮೂಲಕ ಅಲ್ಲ ಎಂಬುದನ್ನು ಅರಿಯಬೇಕಲ್ಲವೇ?

Sunday, November 27, 2011

ಭ್ರಷ್ಟಾಚಾರದ ವಿರುದ್ದ, ನಿಮ್ಮೊಂದಿಗೆ ನಾವಿದ್ದೇವೆ!

ದೇಶದ ಒಬ್ಬ ಸಾಮಾನ್ಯ ನಾಗರೀಕ ವ್ಯವಸ್ಥೆಯ ವಿರುದ್ದ ತಿರುಗಿ ಬೀಳುತ್ತಿದ್ದಾನೆ ಪರಿಣಾಮ ಕೇಂದ್ರದ ಮಂತ್ರಿಯಾಗಿರುವ ಶರದ್ ಪವಾರ್ ನಂತಹವರಿಗೆ ಕಪಾಳ ಮೋಕ್ಷವಾಗಿದೆ. ಒಂದು ಕ್ಷಣ ಅವಾಕ್ಕಾಗಿ ನಂತರ ಏನೂ ನಡೆದೆ ಇಲ್ಲವೇನೋ ಎಂಬಂತೆ ಆತನೇನೋ ನಡೆದು ಹೋಗಿದ್ದಾನೆ, ಆದರೆ ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಆತನ ಕಪಾಳಕ್ಕೆ ಬಾರಿಸಿದ ಹರ್ವಿಂದರ್ ಸಿಂಗ್ ದೇಶದ ಜನರ ಸಧ್ಯದ ಮನಸ್ಥಿತಿಯ ಪ್ರತೀಕವಾಗಿ ಗೋಚರಿಸಲಾರಂಭಿಸಿದ್ದಾನೆ. ಪ್ರಕರಣ ಕುರಿತು ಅಣ್ಣಾ ಹಜಾರೆಯನ್ನು ಪ್ರಶ್ನಿಸಿದರೆ "ಹೌದಾ ! ಒಂದೇ ಕೆನ್ನೆಗೆ ಏಟು ಬಿತ್ತಾ ಎಂದು ಪ್ರಶ್ನಿಸಿದ್ದಾರೆ" ಅಂದರೆ ನಾವೆಲ್ಲಿಗೆ ತಲುಪಿದ್ದೇವೆ ಅಥವಾ ಎಂಥ ಪರಿಸ್ಥಿತಿ ನಮ್ಮೆದುರಿಗಿದೆ ಎಂಬುದರ ದರ್ಶನ ಮಾಡಿಸುತ್ತದೆ.  ಘಟನೆಯನ್ನು ಟೀವಿಯಲ್ಲಿ ನೋಡಿದ ಜನ ಅದನ್ನು ಒಂದು ಪ್ರಹಸನದಂತೆ ವೀಕ್ಷಿಸಿದ್ದರೆ , ದೇಶದ ರಾಷ್ಟ್ರೀಯ ಖಾಸಗಿ ವಾಹಿನಿಗಳು ಗಂಭೀರವಾಗಿ ಚರ್ಚೆಗೂ ತಂದಿವೆ. ಕೆಲವೇ ಮಂದಿ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸಿದ್ದಾರೆ, ರಾಜಕೀಯ ಪಕ್ಷಗಳು ತಮಗೆ ಸಂಬಂಧಿಸಿಲ್ಲವೆಂದು ಮುಗುಮ್ಮಾಗಿವೆ. ಇದು ತಳ್ಳಿಹಾಕುವ ವಿಚಾರವಲ್ಲ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಎಂಬುದನ್ನು ಅರಿಯಬೇಕು.

ಈ ದೇಶದ ಸಾಮಾನ್ಯ ಜನತೆ ಗಮನಿಸಬೇಕು, ಜಾಗತೀಕರಣದ ಬಿಸಿ ದೇಶದ ಎಲ್ಲ ವ್ಯಾವಹಾರಿಕ ವಲಯಗಳನ್ನು ಆಪೋಶನ ತೆಗೆದುಕೊಳ್ಳಲಾರಂಭಿಸುತ್ತಿದ್ದಂತೆ ಚಿಲ್ಲರೆ ವಹಿವಾಟು ವಲಯದಲ್ಲೂ ಜಾಗತಿಕ ವ್ಯವಹಾರದ ಅವಕಾಶಗಳನ್ನು ನೀಡಲಾಗುತ್ತಿದೆ. ಅಭಿವೃದ್ದಿಯ ನೆಪದಲ್ಲಿ ದೇಶದ ಬೆನ್ನೆಲುಬಾದ ರೈತರ ಕೃಷಿ ಭೂಮಿಯನ್ನು ಕಿತ್ತು ಉದ್ದಿಮೆ ದಾರರಿಗೆ ಹೂಡಿಕೆದಾರರಿಗೆ ಡಿ ನೋಟೀಫೈ ಮಾಡುತ್ತಿರುವುದಾರಿಂದ ದೇಶದ ಆರ್ಥಿಕ ಪರಿಸ್ಥಿತಿ ಅಯೋಮಯವಾಗುತ್ತಿದೆ.ಆಹಾರ ಪದಾರ್ಥಗಳ ಉತ್ಪಾದನೆ ಕುಂಠಿತವಾಗಿದೆ, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದಂತಾಗಿದೆ, ಶಿಕ್ಷಣ,ಆರೋಗ್ಯಸೇವೆಗಳು ಮಾರಾಟದ ಸರಕಾಗಿವೆ,  ರೂಪಾಯಿಯ ಬೆಲೆ ಡಾಲರ್ ಎದುರು ಕುಸಿದಿದೆ. ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಯದ್ವಾ ತದ್ವಾ ಏರಿದೆ, ಪೆಟ್ರೋಲು, ಡಿಸೆಲ್, ಅಡುಗೆ ಅನಿಲದ ಬೆಲೆ ತಿಂಗಳಿಗೆ, 15ದಿನಕ್ಕೆ ದಿಕ್ಕು ದೆಸೆಯಿಲ್ಲದಂತೆ ಏರುತ್ತಿದೆ.ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಅವಕಾಶಗಳು ಬಿಸಿಲ್ಗುದುರೆಯಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನತೆ ಬದುಕು ಸಾಗಿಸುವುದು ಹೇಗೆ?
         ಜನಸಾಮಾನ್ಯರ ಸಂಕಷ್ಠಗಳನ್ನು ಸರ್ಕಾರಗಳು ಕೇಳುತ್ತಿಲ್ಲ, ವಿರೋಧ ಪಕ್ಷಗಳು ಆಲಿಸುತ್ತಿಲ್ಲ, ಧ್ವನಿಯೆತ್ತುತ್ತಿಲ್ಲ, ಹೀಗಿರುವಾಗ ಜನಸಾಮಾನ್ಯ ತಾನೆ ಏನು ಮಾಡಿಯಾನು? ಹರ್ವಿಂದರ್ ಸಿಂಗ್ ಇಂತಹ ಸಮಸ್ಯೆಗಳ ಪ್ರತಿನಿಧಿಯಾಗಿ ಒಬ್ಬ ಟ್ರಕ್ ಚಾಲಕನಾಗಿ ತನ್ನ ಅಸಹನೆಯನ್ನು ಹೊರಹಾಕಿದ್ದಾನೆ. ಆತ ಹೊರ ಹಾಕಿದ ಆಕ್ರೋಶ ನಾಗರೀಕತೆಯ ಲಕ್ಷಣವಾಗಿಲ್ಲದಿರ ಬಹುದು ಆದರೆ  ಅದು ಅನಿವಾರ್ಯದ ಸಂಕೇತವೂ ಹೌದಲ್ಲವೇ? ಉಸಿರುಗಟ್ಟಿದ ವಾತಾವರಣದಲ್ಲಿ ಸಾಮಾನ್ಯ ನಾಗರಿಕ ಇನ್ನೇನು ತಾನೆ ಮಾಡಲು ಸಾಧ್ಯ?
           ಇಂತಹ ದುಸ್ಥಿತಿಗೆ ಭ್ರಷ್ಟಾಚಾರವೂ ಮೂಲ ಕಾರಣವೆಂಬುದರಲ್ಲಿ  ಎರಡು ಮಾತಿಲ್ಲ, ಸಧ್ಯ ಅಣ್ಣಾ ಹಜಾರೆ ಗೆ ಮಾತು ಕೊಟ್ಟಂತೆ ಕೇಂದ್ರ ಸರ್ಕಾರ ಪರಿಷ್ಕೃತ ಜನಲೋಕಪಾಲ ಮಸೂದೆಯನ್ನು ಈಗ ನಡೆಯುತ್ತಿರುವ  ಸಂಸತ್   ನಲ್ಲಿ ಮಂಡಿಸಲಿದೆ, ಈ ಸನ್ನಿವೇಶದಲ್ಲಿ ಭ್ರಷ್ಟಾಚಾರ ದವಿರುದ್ದ ರಾಜ್ಯದಲ್ಲಿ ಜನರನ್ನು ಸಂಘಟಿಸಿ ನೇತೃತ್ವ ವಹಿಸಿದ್ದ ಮಾಜ  ಿಲೋಕಾಯುಕ್ತಸಂತೋಷ್    ಹೆಗಡೆಯವರ ವಿರುದ್ದ ಬಿಜೆಪಿ ಸೇರಿದಂತೆ ಇತರೆ ರಾಜಕೀಯ ಪಕ್ಷಗ ಳು ಮನೋಸಾಮರ್ತ್ಯ  ಕುಂದಿಸುವರೀತಿಯಲ್ಲಿ ನಡೆದುಕೊಳ್ಳುತ್ತಿವೆ. ವಿನಾಕಾರಣದ ಆಪಾದನೆಗಳನ್ನು ಮಾಜಿ ಸಿ ಎಂ ಯಡಿಯೂರಪ್ಪ ಮಾಡುತ್ತಿದ್ದಾರೆ. ಗಣಿ ದುಡ್ಡು ತಿಂದ ಕೆಲ ಪತ್ರಕರ್ತರು ಸಂತೋಷ್ ಹೆಗಡೆಯವರನ್ನು ವಿನಾಕಾರಣ ಹಳಿಯುವ ವರದಿಗಳನ್ನು ಪ್ರಕಟಿಸುತ್ತಾ ಸಾರ್ವಿಜನಿಕವಾಗಿ ಅಸಹ್ಯ ಸೃಷ್ಟಿಸುತ್ತಿದೆ, ಇಂತಹ ಸನ್ನಿವೇಶದಲ್ಲಿ ಸಂತೋಷ್ ಹೆಗಡೆಗೆ ನೈತಿಕ ಸ್ತ್ಐರ್ಯ ತುಂಬುವ ಕೆಲಸ ಆಗಬೇಕಾಗಿದೆ. ಭ್ರಷ್ಟಾಚಾರದ ವಿರುದ್ದದ ಹೋರಾಟ ಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಹಾಸನ ಪ್ರಗತಿ ಪರ ಚಿಂತಕರು "ಸಂತೋಷ್ ಹೆಗಡೆ ಭಾವಚಿತ್ರಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಿ  ವಿಚಾರಬೆಂಬಲ ಪಡೆಯುವ ಆಂಧೋಲನ ಆರಂಭಿಸಿದ್ದಾರೆ. ಅದೇ ರೀತಿ ನೀವು ನಿಮ್ಮೂರಿನಲ್ಲಿ ಭ್ರಷ್ಟಾಚಾರದ ವಿರುದ್ದ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಘೋಷಣಾ ಫಲಕದ ಸಂತೋಷ್ ಹೆಗಡೆ ಚಿತ್ರವನ್ನು ಹಾಕ ಬಹುದಲ್ಲವೇ?

Sunday, November 6, 2011

ಕನ್ನಡದ ಹಿರಿಮೆ ಗೊತ್ತೇ?ನ್ರಿ

ಕನ್ನ ಡ ಪ್ರೀತಿ ಎಂದರೇನು? ಕನ್ನಡ ಹಾಡು ಕೇಳೋದು, ಸಿನಿಮಾ ನೋಡೋದು, ಪುಸ್ತಕ ಓದೋದು, ಕನ್ನಡ ಮಾತನಾಡೋದು, ಕನ್ನಡದಲ್ಲಿ ಬರೆಯುವುದು ಎಲ್ಲಾ ಸರಿ ಆದರೆ ಕನ್ನಡದಲ್ಲಿ ಕಲಿಯುವುದು ಎಂಬ ಮಾತಿಗೆ ಮಾತ್ರ ಹೆಚ್ಚಿನ ಪುಷ್ಠಿ ಸಿಗುತ್ತಿಲ್ಲ. ಕನ್ನಡ ಭಾಷೆ ಅಳಿವು ಉಳಿವು ಕುರಿತು ಬೆರಳೇಣಿಕೆಯ ಮಂದಿ ಮಾತ್ರ ಪ್ರತಿಭಟನೆಗೆ ಮುಂದಾಗುವುದು, ಆಸಕ್ತಿ ವಹಿಸುವುದು ಕೆಲವರಿಗೆ ಮಾತ್ರ ಸೀಮಿತವಾದಂತಿದೆ. ಕನ್ನಡಿಗರಲ್ಲಿ ನೈಜವಾದ ಸ್ವಾಭಿಮಾನ ಭಾಷೆ-ಸಂಸ್ಕೃತಿಯ ಬಗೆಗೆ ಪ್ರೀತಿ ಇದ್ದಿದ್ದರೆ ಇವತ್ತಿನವರೆಗೂ ಭಾಷೆಯ ಉಳಿವಿಗೆ ಹೋರಾಡಬೇಕಾದಂತಹ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ 2011ರ ಜುಲೈ ತಿಂಗಳಲ್ಲಿಯೇ ಲಬಿಸಿದ್ದರೂ ಕೊಂಗರ ಕಿತಾಪತಿಯಿಂದ ಪೂರಕ ಚಟುವಟಿಕೆಗ ಳಿಗೆ ಹಿನ್ನೆಡೆ ಉಂಟಾಗಿದೆ.  ಈ ಸಂಧರ್ಭದಲ್ಲಾದರೂ ಈ ಕುರಿತು ಅವಲೋಕನವಾಗ ಬೇಕಾಗಿದೆ.
            ನಮ್ಮ ಅನ್ನದ ಭಾಷೆ ಕಸ್ತೂರಿ ಕನ್ನಡದ ಬಗೆಗೆ ಒಂದಿಷ್ಟು ಅರಿಯೋಣ.ಕನ್ನಡ ಭಾಷೆ ಭಾರತದ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆ, ಸುಮಾರು 50ಮಿಲಿಯನ್ ಜನ ಜಾಗತಿಕವಾಗಿ ಕನ್ನಡ ಭಾಷೆ ಮಾತನಾಡುತ್ತಾರೆ, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಬಳಸಲ್ಪಡುವ ಭಾಷೆಯಾಗಿ ಕನ್ನಡಕ್ಕೆ 27ನೇ ಸ್ಥಾನವಿದೆ. ಕನ್ನಡ ತನ್ನ ಒಡಲಲ್ಲಿ ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳಿಗೆ ಮಾತೃ ಸ್ಥಾನದಲ್ಲಿದೆ. 1600ವರ್ಷಗಳಷ್ಟು ಹಳೆಯದಾದ ಇತಿಹಾಸ ಹೊಂದಿರುವ ಕನ್ನಡ ಬಾಷೆಯ ಬರವಣಿಗೆ ಪ್ರಾಕಾರ ಆರಂಭವಾಗಿದ್ದು 5ಮತ್ತು 6ನೇ ಶತಮಾನದಲ್ಲಿ. ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ ಸಿಕ್ಕ ಮೇಲೆ ಸುಮಾರು 30000ಸಾವಿರಕ್ಕೂ ಹೆಚ್ಚು ಕನ್ನಡದ ಶಾಸನಗಳು ಸಿಕ್ಕಿದ್ದು ಕನ್ನಡದ ಅಸ್ತಿತ್ವ ಎಷ್ಟು ಹಳೆಯದು ಎಂಬುದನ್ನು ಸಾರಿ ಸಾರಿ ಹೇಳುತ್ತವೆ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದ್ದು 9ಮತ್ತು 10ನೇ ಶತಮಾನದಲ್ಲಿದ್ದ ರಾಷ್ಟ್ರಕೂಟರ ಆಡಳಿತದಲ್ಲಿ. ಕನ್ನಡದಲ್ಲಿ ಬಂದಷ್ಟು ಸಾಹಿತ್ಯ ಪ್ರಾಕಾರಗಳು ಜಗತ್ತಿನ ಯಾವ ಭಾಷೆಯಲ್ಲೂ ಬಂದಿರಲಾರದು. ಕನ್ನಡದಲ್ಲಿ ದ್ವಿಪದಿಗಳು, ತ್ರಿಪದಿಗಳು,ವಚನ ಸಾಹಿತ್ಯ, ರಗಳೆ, ವ್ಯಾಕರಣ, ಜೈನಸಾಹಿತ್ಯ,ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, 15ನೇ ಶತಮಾನ ದಲ್ಲಿ ಬಂದ ಕರ್ನಾಟಕ ಸಂಗೀತ ಪರಂಪರೆ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. 20ನೇ ಶತಮಾನದ ಆಧುನಿಕ ಕನ್ನಡ ಪರಂಪರೆಯಲ್ಲಿ ನವೋದಯ ಸಾಹಿತ್ಯ,ನವ್ಯೋತ್ತರ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಪರಂಪರೆಯನ್ನು ಶ್ರೀಮಂತ ಗೊಳಿಸಿರುವುದಷ್ಟೇ ಅಲ್ಲ ಸೂಕ್ಷ್ಮ ಸಂವೇದನೆಯ ಮೂಲಕ ಜಾಗತಿಕ ಭೂಪಟದಲ್ಲಿ "ಕನ್ನಡ" ಹೊಸ ಸಂಚಲನವನ್ನೇ ಉಂಟುಮಾಡಿದೆ. ಕನ್ನಡದ ಸಾಹಿತಿಗಳಿಗೆ ಇತರೆಲ್ಲ ಭಾಷೆಯ ಸಾಹಿತಿಗಳಿಗಿಂತ ಅತೀ ಹೆಚ್ಚಿನ ಎಂದರೆ 8 ಜ್ಞಾನಪೀಠಿಗಳನ್ನು ಪಡೆದಿದೆ. 52ಕ್ಕೂ ಹೆಚ್ಚು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳನ್ನ ಪಡೆದಿದೆ.
              ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಭಾಷೆಯನ್ನು ೨೦ ಶೈಲಿಗಳಲ್ಲಿ ಮಾತನಾಡುವುದನ್ನು ಕಾಣಬಹುದು. ಅವುಗಳಲ್ಲಿ ವಿಶಿಷ್ಠವಾದುದು ಕುಂದಾಪುರದ ಕುಂದಕನ್ನಡ, ನಾಡವ ಕನ್ನಡ, ಹವ್ಯಕರ ಹವಿಗನ್ನಡ, ಅರೆಭಾಷೆ, ಸೋಲಿಗ ಭಾಷೆ, ಬಡಗ, ಗುಲ್ಬರ್ಗ ಕನ್ನಡ, ದಾರವಾಡ ಕನ್ನಡ, ರಾಯಚೂರು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನಡ, ಮಂಗಳೂರು ಕನ್ನಡ, ಚಿತ್ರದುರ್ಗ ಕನ್ನಡ, ಕೊಳ್ಳೆಗಾಲದ ಭಾಷೆ ಹೀಗೆ ವೈವಿಧ್ಯವಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ ಜಗತ್ತಿಗೆ ಕರ್ನಾಟಕದ ಹೆಮ್ಮೆಯ ಕೊಡುಗೆ. ಬೇಲೂರು-ಹಳೆಬೀಡು,ಹಂಪೆ, ಶ್ರವಣಬೆಳಗೊಳ,ಪಟ್ಟದಕಲ್ಲು-ಐಹೊಳೆ,ಗೋಲಗುಮ್ಮಟ ದಂತಹ ಅಂತರ ರಾಷ್ಟ್ರೀಯ ಸ್ಮಾರಕಗಳು, ಶ್ರೇಷ್ಠ ಕವಿಗಳು,ಅರಸ ಪರಂಪರೆ, ಮುತ್ಸದ್ದಿ ರಾಜಕಾರಣಿಗಳು, ಕ್ರೀಡಾಪಟುಗಳು, ನಟರು,ನಿರ್ದೇಶಕರು, ಕಲಾವಿದರು ನಮ್ಮಲ್ಲಿದ್ದಾರೆ.


           ಇಂತಹದ್ದೊಂದು ಶ್ರೀಮಂತ ಪರಂಪರೆ ಇದ್ದಾಗ್ಯೂ ನಮಗೇಕೇ ಇಂತಹ ದುರ್ಗತಿ? ಕರ್ನಾಟಕ ರಾಜ್ಯ ಪ್ರಾಕೃತಿದತ್ತವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ ಹಾಗಾಗಿ ಬಹಳ ಹಿಂದಿನಿಂದಲೂ ಅಕ್ಕಪಕ್ಕದ ರಾಜ್ಯದವರು ಉತ್ತರ ಭಾರತದ ಮಂದಿ ಅಂದರೆ ಆಂಧ್ರ ವಾಳ್ಳುಗಳು,ತಮಿಳು ಕೊಂಗರು,ರಾಜಾಸ್ಥಾನದ ಸೇಟುಗಳು, ಮರಾಠಿಗಳು, ಬಿಹಾರಿಗಳು, ಬಂಗಾಲಿಗಳು, ಮಲೆಯಾಳಿಗಳು, ಉತ್ತರಪ್ರದೇಶದವರು ಹೀಗೆ ಸಮಸ್ತರು ಇಲ್ಲಿ ಬಂದು ನೆಲೆಗೊಂಡರು. ಈ ನಡುವೆ ಜಾಗತೀಕರಣದ ಭೂತದಿಂದಾಗಿ ರಾಜ್ಯದಲ್ಲಿ ಹಲವು ಉದ್ದಿಮೆಗಳು ಸ್ಥಾಪಿಸಲ್ಪಟ್ಟವು. ಬೆನ್ನಲ್ಲೇ ದೇಶ ವಿದೇಶಿಗರ ವಲಸೆಯು ಹೆಚ್ಚಿತು ಪರಿಣಾಮ ನಮ್ಮ ಆಲೋಚನೆಗಳು ಬದುಕಿನ ರೀತಿ ರಿವಾಜುಗಳು ಬದಲಾದವು. ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಆಯಿತು, ಬಾಷೆಯಿಂದ ವಿಮುಖತೆ ಆಯಿತು ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಗು ಹುಟ್ಟುತ್ತಲೇ ಅದು ಕನ್ನಡ ಕಲಿತರೆ ತಮಗೆ ಅಪಮಾನ ಎಂದು ತಂದೆತಾಯಿಯರು ಭಾವಿಸುವಂತಾಯಿತು. ಕನ್ನಡೇತರರ ಬಗೆಗಿನ ಅಭಿಮಾನ ಜಾಸ್ತಿಯಾಯಿತು, ಕನ್ನಡ ಶಾಲೆಗಳಿಗಿಂತ ಆಂಗ್ಲಭಾಷೆ ಮಾಧ್ಯಮ ಶಾಲೆಗಳಿಗೆ ಆದ್ಯತೆ ಹೆಚ್ಚಿತು. ರಾಜಕಾರಣಿಗಳು ಮತಬ್ಯಾಂಕಿಗೆ ಇತರೆ ಭಾಷಿಕರನ್ನು ಓಲೈಸಲು ನಿಂತರು. ನಮ್ಮ ನೆಲೆಯಲ್ಲಿ ನಾವೇ ಕನ್ನಡಕ್ಕೆ ಹೋರಾಡುವ ಪರಿಸ್ಥಿತಿಗೆ ಇದೇ ವೇದಿಕೆಯಾಯಿತು. ಕನ್ನಡ ಚಳುವಳಿಯನ್ನು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ ಪ್ರವರ್ದಮಾನಕ್ಕೆ ತಂದ ನಾರಾಯಣಗೌಡರು ಕನ್ನಡದ ರಕ್ಷಣೆಗೆ ರಕ್ಷಣಾ ವೇದಿಕೆ ಹುಟ್ಟುಹಾಕಿದರೆ, ಇತರರನೇಕರು ಹೊಟ್ಟೆ ಪಾಡಿಗೆ ಅದೇ ಮಾದರಿಯ ಸಂಘಟನೆಗಳನ್ನು ಹುಟ್ಟುಹಾಕಿದರು. ಕನ್ನಡ ರಕ್ಷಣೆಗೆ ಬದಲಾಗಿ ಸುಲಿಗೆಗೆ ನಿಂತು ಆ ಮೂಲಕ ಕನ್ನಡ ಚಳುವಳಿಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಶಾಸ್ತ್ರೀಯ ಭಾಷೆಯ ಸ್ತಾನಮಾನವನ್ನು ೩ ಭಾಷೆಗಳಿಗೆ ಮಾತ್ರ ನೀಡಲಾಗಿದೆ. ಈಗ ತಮಿಳುಭಾಷೆಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿದೆ. ಕನ್ನಡಕ್ಕೆ 2ವರ್ಷಗಳ ಹಿಂದೆಯೇ ಶಾಸ್ತ್ರೀಯ ಸ್ಥಾನಮಾನವಿದ್ದರೂ ತಮಿಳುನಾಡಿನ ಕೊಂಗರ ಕುಚೇಷ್ಟೇಯಿಂದ ಅದು ನಮಗಿನ್ನು ಬಿಸಿಲ್ಗುದುರೆಯಾಗಿಸಿತ್ತು.
                ರಾಜ್ಯದಲ್ಲಿ ಕಳೆದ 10ವರ್ಷಗಳಿಂದೀಚೆಗೆ 10500ಕ್ಕೂ ಹೆಚ್ಚು ಶಾಲೆಗಳನ್ನು ಮಕ್ಕಳ ಪ್ರವೇಶಾತಿ ಸಂಖ್ಯ ಗಣನೀಯವಾಗಿ ಇಳಿಕೆಯಾಗುತ್ತಿರುವುದರ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ, ಪ್ರಸಕ್ತ ವರ್ಷದಲ್ಲಿ 3500ಕ್ಕೂ ಅಧಿಕ ಶಾಲೆಗಳು ಮುಚ್ಚಲು ಸಿದ್ದತೆ ನಡೆದಿದೆ. ರಾಜ್ಯೋತ್ಸವ ಸಂಧರ್ಭದಲ್ಲಿ ಕನ್ನಡ ಸಂಘಟನೆಗಳ ಪ್ರತಿಭಟನೆಗೆ ಅಂಜಿದ ಸರ್ಕಾರ ಶಾಲೆಗಳನ್ನು ಮುಚ್ಚುತ್ತಿಲ್ಲ ಬದಲಾಗಿ ವಿಲೀನ ಗೊಳಿಸಲಾಗುತ್ತಿದೆ ಎಂದು ಹೇಳಿದೆ ಈ ಹಿನ್ನೆಲೆಯಲ್ಲಿ ವಾದ-ಪ್ರತಿವಾದಗಳು ಅವರವರ ತಿಳುವಳಿಕೆಯ ಮಟ್ಟದಲ್ಲಿ ಜಾರಿಯಲ್ಲಿವೆ.ಆದರೆ ಒಂದು ವಿಚಾರ ಗಮನಿಸಬೇಕು  ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೊಡುವಾಗ ಸರ್ಕಾರ  ಮನಸ್ಸೊಇಚ್ಚೆಅನುಮತಿ ನೀಡಿ ಕಾನೂನು ಉಲ್ಲಂಘಿಸಿದೆ. ಮೊದಲಿನಂತೆ ಶಿಕ್ಷಣ ಕ್ಷೇತ್ರವನ್ನು ಸೇವಾವಲಯದಲ್ಲಿದೆಯೆಂದು ಭಾವಿಸಬೇಕಿಲ್ಲ, ಬದಲಾಗಿ ಅದೊಂದು ವ್ಯವಹಾರದ ಭಾಗವಾಗಿದೆ ಹಾಗಾಗಿ ಬಂಡವಾಳ ಶಾಹಿಗಳು, ರಾಜಕಾರ ಣಿಗಳು ಶಿಕ್ಷಣದ ಅಂಗಡಿಗಳನ್ನು ತೆರೆದು ಕುಳಿತಿರುವುದು ಪ್ರಮಖ ಅಡ್ಡಿ ಎರಡನೇಯದಾಗಿ ಜಾಗತಿಕ ವ್ಯವಸ್ಥೆ ಯಲ್ಲಿ ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದ ಜನ ಕನ್ನಡ ಶಾಲೆ  ಗಳತ್ತ ಆಸಕ್ತಿ ತೋರದಿರುವುದು ಕನ್ನಡ ಶಾಲೆಗಳು ಮುಚ್ಚಲು ಕಾರಣವಾಗಿವೆ. ಪ್ರತೀ ಸರ್ಕಾರಿ ಉದ್ಯೋಗಿ ತಮ್ಮ ಮಕ್ಖಳನ್ನು  ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣವನ್ನು  ಕನ್ನಡ ಶಾಲೆಗಳಲ್ಲಿ  ಕೊಡಿಸಬೇಕು. ನಿಯಮ ಉಲ್ಲಂಘಿಸಿ ಅನು  ಮತಿನೀಡಿರುವ ಖಾಸಗಿ ಶಾಲೆಗಳನ್ನು ಕಡ್ಡಾಯವಾಗಿ  ಮುಚ್ಚಬೇಕು. ಉದ್ಯೋಗದಲ್ಲಿ ಮತ್ತಿತರ ಸವಲತ್ತುಗಳನ್ನು ನೀಡುವಾಗ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡಶಾಲೆಯಲ್ಲಿ ಮುಗಿಸಿದವರಿಗೆ  ಮಾತ್ರ  ಆದ್ಯತೆಸಿಗುವಂತೆ ಆದೇಶ ಹೊರಡಿಸಬೇಕು ಅಲ್ಲವೇ?(ಸಶೇಷ)

Sunday, October 30, 2011

'ನಮ್ಮ ಶಂಕರ'ನೆನಪಿಗೆ 'ನಮ್ಮ ಮೆಟ್ರೋ'!!

ವತ್ತು ಬೆಂಗಳೂರಿನ 'ಮೆಟ್ರೋ ರೈಲು' ಸಂಚಾರ ಉದ್ಘಾಟನೆಯ ದಿನ... ಜನ ಸಂಭ್ರಮದಿಂದ ಟಿಕೆಟ್ ಖರೀದಿಸಿ ಮೆಟ್ರೋ ಪ್ರಯಾಣದ ಸವಿ ಅನುಭವಿಸುವ ಖುಷಿಯಲ್ಲಿದ್ದರು..ನ್ಯೂಸ್ ಛಾನಲ್ ಒಂದು ಅದನ್ನ ಲೈವ್ ಆಗಿ ತೋರಿಸುತ್ತಿತ್ತು..  ಅಂತಹದ್ದೊಂದು ಗುಂಪಿನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಧರಿಸಿ ಸಂಭ್ರಮಿಸುತ್ತಿದ್ದ ಒಂದು ಹೆಣ್ಣು ಜೀವ ಕಾಣಿಸಿತು.. ಅದು ಸಂತೋಷವೋ, ಸಂತಸದ ದಿಗಿಲೋ ತಿಳಿಯುತ್ತಿರಲಿಲ್ಲ.. 'ಮೆಟ್ರೋ ನಮ್ಮ ಶಂಕರನ ಕನಸು ಅದು ಇವತ್ತು ನನಸಾಗಿದೆ ಅದಕ್ಕೆ ಟಿಕೆಟ್ ತಗೊಂಡಿದೀನಿ ನೋಡಿ, ಅವನ ನೆನಪಲ್ಲಿ ಪ್ರಯಾಣಿಸ್ತೀನಿ ಅಂತ ಹೇಳಿದ್ದು ಬೇರಾರು ಅಲ್ಲ, ಅವರೇ ಅರುಂಧತಿ ನಾಗ್!!ಒಂದೆಡೆ ಶಂಕರನ ಕನಸು ನನಸಾದ ಸಂಭ್ರಮ ಇನ್ನೊಂದೆಡೆ ಅದೇ ಸಮಯಕ್ಕೆ ಆತನಿಲ್ಲದ ದುಖ: ಅವರ ಮುಖಭಾವದಲ್ಲಿ ಬೇಡವೆಂದರೂ ಎದ್ದು ಕಾಣಿಸುತ್ತಿತ್ತು.  ಒಂದು ಕ್ಷಣ ನನಗೆ ತಿಳಿಯದಂತೆ ಕಣ್ಣಂಚು ಒದ್ದೆಯಾಯಿತು. ಹೌದು 'ನಮ್ಮ ಶಂಕರ'ನ ತಾಕತ್ತೇ ಅಂತಹುದು. 25ವರ್ಷಗಳ ಹಿಂದೆಯೇ ಇಂತಹದ್ದೊಂದು ಕನಸಿನ ಪ್ರಾಜೆಕ್ಟ್ ಸಿದ್ದಪಡಿಸಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಪ್ರಸ್ತಾಪ ಮಾಡಿದ್ದು ನಮ್ಮ ವರ್ಕಾಲಿಕ್ ನಟ-ನಿರ್ದೇಶಕ-ನಾಟಕಕಾರ ಮಾನವೀಯ ಸೆಲೆಯ ಶಂಕರ್ ನಾಗ್.
         ಶಂಕರ್ ನಾಗ್ ನಮ್ಮನಗಲಿ ಸೆ.30ಕ್ಕೆ ಸರಿಯಾಗಿ 21ವರ್ಷಗಳು, ಆತ ಕೇವಲ ನಟನಾಗಿ, ನಿರ್ದೇಶಕನಾಗಿ ಉಳಿಯದೇ ಸಮಾಜ ಮುಖಿಯಾಗಿ ಚಿಂತಿಸುವ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಅಜರಾಮರ ಎನಿಸಿದ್ದಾರೆ. ಶಂಕರ್ ನಾಗರಕಟ್ಟೆ ಉತ್ತರ ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಹಳ್ಳಿಯಲ್ಲಿ ಜನಿಸಿದ್ದು 9ನೇ ನವೆಂಬರ್ 1954ರಂದು. ಸಹಜಾಭಿನಯಕ್ಕೆ ಖ್ಯಾತಿ ಪಡೆದಿರುವ ಮೇರು ನಟ ಅನಂತ್ ನಾಗ್ ರ ಸಹೋದರಾಗಿದ್ದ ಶಂಕರ್ ನಾಗ್ ವಿದ್ಯಾಭ್ಯಾಸ ಮುಗಿದ ನಂತರ ಪ್ರಯಾಣ ಬೆಳೆಸಿದ್ದು ಮುಂಬೈಗೆ. ಅಲ್ಲಿ ಮರಾಠಿ ಹಾಗೂ ಕೊಂಕಣಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಶಂಕರ ಜೀವನೋಪಾಯಕ್ಕೆ ಬ್ಯಾಂಕ್ ನೌಕರಿಗೂ ಸೇರಿದ್ದರೂ. ಆದರೆ ರಂಗಭೂಮಿಯ ಸೆಳೆತ ಅವರನ್ನು ಕಲಾ ಲೋಕಕ್ಕೆ ಸೆಳೆದು ಬಿಟ್ಟಿತು. ಹೀಗಿರುವಾಗ ಅದೊಂದು ದಿನ ಗಿರಿಶ್ ಕಾರ್ನಾಡರು ದೆಹಲಿಯಲ್ಲಿ ನಡೆದ ಅಂತರ ರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಶ್ರೆಷ್ಠ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿ ಪಡೆದ ಅಕಿರಾ ಕುರುಸೋವ ಅವರ ಜಪಾನಿ ಭಾಷೆಯ "ಸೆವೆನ್ ಸಮುರಾಯ್ಸ್" ಚಿತ್ರವನ್ನು ಕನ್ನಡದಲ್ಲಿ ತೆರೆಗೆ ತರಲು ಸಿದ್ದತೆ ನಡೆಸಿದ್ದರು. ಆ ಚಿತ್ರದ ಪ್ರಧಾನ ಪಾತ್ರಕ್ಕೆ ಸೂಕ್ತ ನಾಯಕನನ್ನು ಹುಡುಕುತ್ತಿದ್ದಾಗ ಮರಾಠಿ ರಂಗಭೂಮಿಯಲ್ಲಿ ಗಮನ ಸೆಳೆದಿದ್ದ ಶಂಕರ ಕಣ್ಣಿಗೆ ಬಿದ್ದಿದ್ದ. ಕಾರ್ನಾಡರು ಆಹ್ವಾನ ನೀಡಿದಾಗ ಮೊದಲಿಗೆ ನಿರಾಕರಿಸಿದ್ದ ಶಂಕರ್ ನಂತರ ಸಹೋದರನ ಒತ್ತಾಸೆಯ ಮೇರೆಗೆ 'ಒಂದಾನೊಂದು ಕಾಲದಲ್ಲಿ " ಚಿತ್ರವನ್ನು ಒಪ್ಪಿಕೊಂಡರು. ದೇಸೀ ನೆಲಕ್ಕೆ ಒಗ್ಗಿಸಿದ್ದ ಕಥೆಗೆ ಕೇವಲ ನಟನಾಗದೇ ತಾನೇ ಪಾತ್ರವಾಗಿ ಹೋದ ಶಂಕರ ಸಿನಿಮಾ ರಂಗದಲ್ಲಿ ತನ್ನ ಛಾಪನ್ನು ಮೂಡಿಸಿ ಬಿಟ್ಟಿದ್ದ, ಅಷ್ಟೇ ಅಲ್ಲ ಆ ಚಿತ್ರದ ನಟನೆಗಾಗಿ ಆತನಿಗೆ ರಾಷ್ಟ್ರಪತಿಗಳ ಗೋಲ್ಡನ್ ಪೀಕಾಕ್ ಅವಾರ್ಡ್ ನ ಗರಿಯನ್ನು ಮುಡಿಗೇರಿಸಿಕೊಂಡಿದ್ದ. ನೆನಪಿರಲಿ ಕನ್ನಡದಲ್ಲಿ ಅಂತಹ ಪುರಸ್ಕಾರ ಪಡೆದ ಏಕೈಕ ನಟ ಶಂಕರ್ ನಾಗ್. 1978ರಿಂದ ಆರಂಭವಾದ ಶಂಕರನ ಸಿನಿಮಾಯಾನ 1990ರ ವರೆಗೆ ಸತತವಾಗಿ 12ವರ್ಷ ಮುಂದುವರೆದಿತ್ತು. 90ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕರ ಒಂದು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ನಟನಾಗಿ ಜನರನ್ನ ಆಕರ್ಷಿಸಿದ್ದಕ್ಕಿಂತ ನಿರ್ದೇಶಕನಾಗಿ ಹೆಚ್ಚು ಗಮನ ಸೆಳೆದ ಶಂಕರ್ ನಾಗ್ 70 ರ ದಶಕದಲ್ಲೇ ಅಡ್ವಾನ್ಸ್ ಆದ ಆಫ್ ಬೀಟ್ ಸಿನಿಮಾಗಳನ್ನು ನಿರ್ದೆಶಿಸಿದ್ದನಲ್ಲದೇ ಅದಕ್ಕಾಗಿ ಅಂತರ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದರು. ಏಕ ಕಾಲದಲ್ಲಿ ರಂಗಭೂಮಿಗೂ ಗಮನ ನೀಡಿದ ಶಂಕರ್ ವಿದೇಶಿ ನೆಲದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಬಹುಶ: ರಂಗಭೂಮಿಯ ಮೂಲಕ ಶಂಕರ್ ವಿದೇಶಗಳಲ್ಲಿ ನೀಡಿದಷ್ಟು ಪ್ರದರ್ಶನಗಳನ್ನ ಮತ್ಯಾವ ಕಲಾವಿದನೂ ನೀಡಿರಲಾರ. ತನ್ನದೇ ನಿರ್ದೇಶನದ 'ಮಿಂಚಿನ ಓಟ' 'ಆಕ್ಸಿಡೆಂಟ್', 'ಗೀತಾ', 'ನೋಡೀಸ್ವಾಮಿ ನಾವಿರೋದೇ ಹೀಗೆ'  ಯಂತಹ ಹಲವು ವಿಭಿನ್ನ ಧಾಟಿಯ ಸಿನಿಮಾಗಳನ್ನು ನೀಡಿದ ಶಂಕರ್ ನಾಗ್ ತಾಂತ್ರಿಕವಾಗಿ ಅಂದಿನ ದಿನಗಳಲ್ಲಿ ಸವಾಲಾಗಿದ್ದ ಛಾಯಾಗ್ರಹಣದ ಸಾಧ್ಯತೆಗಳನ್ನು ಭಾರತೀಯ ಚಿತ್ರರಂಗದಲ್ಲಿ ಮೊದಲಭಾರಿಗೆ ಬಳಕೆಗೆ ತಂದದ್ದು ಇದೇ ಶಂಕರ್ ನಾಗ್.. 7ರಾಷ್ಟ್ರಗಳಿಗೆ ಭೇಟಿ ನೀಡಿ ತಂತ್ರಜ್ಣಾನದ ಸಾಧ್ಯತೆಗಳನ್ನು ಒಗ್ಗಿಸಿಕೊಂಡು ನಿರ್ದೇಶಿಸಿದ ಆ ಚಿತ್ರ ಡಾ|| ರಾಜ್ ನಟಿಸಿದ್ದ 'ಒಂದು ಮುತ್ತಿನ ಕಥೆ'. 
        ಶಂಕರ್ ಯೋಚಿಸುವ ಪರಿಯನ್ನ ಆತ ನಿರ್ದೇಶಿಸಿ ಚಿತ್ರಗಳನ್ನು ನೋಡಿದರೆ ತಿಳಿಯಬಹುದು, ಸಾಮಾಜಿಕ ಪರಿಣಾಮ ಬೀರುವ ಮತ್ತು ವಾಸ್ತವ ಜಗತ್ತಿನ ಅರಿವು ಮೂಡಿಸುವ ಮೂಲಕ ಚಿಂತನೆಗೆ ಹಚ್ಚುವ ಚಿತ್ರಗಳನ್ನು ನಿರ್ದೇಶಿಸಿದ ಶಂಕರ್, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಧೃಢವಾಗಿ ತಮ್ಮನ್ನು ಪರಿಚಯಿಸಿ ಕೊಂಡದ್ದು 'ಮಾಲ್ಗುಡಿ ಡೇಸ್' ಎಂಬ ಕಿರುತೆರೆ ಸೀರಿಯಲ್ ಮೂಲಕ. ತಾನು ಬೆಳೆಯುವ ಜೊತೆಗೆ ಸಾವಿರಾರು ಕಲಾವಿದರು, ತಂತ್ರಜ್ಞರನ್ನು ಬೆನ್ನು ತಟ್ಟಿ ಉತ್ಸಾಹ ತುಂಬಿ ಬೆಳೆಸಿದ ಶಂಕರ್... ಮಾನವೀಯ ಸೆಲೆಯಿಂದಾಗಿ ಸಾಮಾನ್ಯ ಜನರ ಬದುಕಿನಲ್ಲೂ ಅಮರವಾಗಿ ಉಳಿದಿದ್ದಾರೆ. 'ಆಟೋ ರಾಜ' ಚಿತ್ರದ ನಂತರ ಖಾಯಂ ಆಗಿ ಆಟೋದವರ ಆರಾಧ್ಯ ಧೈವವಾಗಿ ಬೆಳೆದು ನಿಂತ ಶಂಕರ್ ನ ಎತ್ತರವನ್ನು ಎಷ್ಟೋ ಮಂದಿ ನಟರು ಬಂದು ಹೋದರು ಏರಲಾಗಿಲ್ಲವೆಂದರೆ ಅವನ ತಾಕತ್ತನ್ನು ಊಹಿಸಬಹುದು. ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಶಂಕರ್ ನಿಂದ ಪ್ರೇರಿತರಾಗಿ ಯಶಸ್ಸು ಕಂಡಿರುವ ಹಲವಾರು ಮಂದಿ ಯನ್ನು ವಿವಿಧ ವಿಭಾಗಗಳಲ್ಲಿ ಕಾಣಬಹುದು. 
       ಸ್ವಾಭಿಮಾನದ ಸಂಕೇತದಂತಿದ್ದ ಶಂಕರ್ ನಾಗ್ ಕನ್ನಡ ಚಿತ್ರಗಳ ಧ್ವನಿ ಗ್ರಹಣ ಹಾಗೂ ಸಂಕಲನಕ್ಕಾಗಿ ತಮಿಳುನಾಡಿಗೆ ಹೋಗಬೇಕಾದಂತಹ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಕೇತ್ ಸ್ಟುಡಿಯೋ ಸ್ಥಾಪಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಸರೆಯಾದವರು ಶಂಕರ್ ನಾಗ್. ಅವತ್ತಿನ ದಿನಗಳಲ್ಲೇ ನಂದಿ ಬೆಟ್ಟಕ್ಕೆ ರೋಪ್ ವೇ, ನಗರದಲ್ಲಿ ಮೆಟ್ರೋ ರೈಲು ಯೋಜನೆ, ಬಡವರಿಗೆ ಕಡಿಮೆ ಬೆಲೆಯಲ್ಲಿ ನಿರ್ಮಿಸಿಬಹುದಾದಂತಹ ಮನೆಗಳನ್ನು ಹಾಲೆಂಡ್ ದೇಶದ ಮಾದರಿಯಲ್ಲಿ ನಿರ್ಮಿಸುವ ಪ್ರಸ್ತಾವ ಮುಂದಿರಿಸಿದ್ದು ಹಾಗು ದೇಶದಲ್ಲಿ ರೆಸಾರ್ಟ್ ಮಾದರಿ ಕಂಟ್ರಿ ಕ್ಲಬ್ ಸ್ತಾಪಿಸಿ ಅಲ್ಲಿ ನಿರಂತರ ರಂಗಭೂಮಿಗೆ ಉತ್ತೇಜನ ನೀಡುವ ಮಹತ್ವದ ಸಂಕಲ್ಪ ಮಾಡಿ ಶ್ರಮಿಸಿದ್ದು ಇದೇ ಶಂಕರ್ ನಾಗ್. 
        ಚಿತ್ರರಂಗದಲ್ಲಿರುವ ತೆರೆಯ ಹಿಂದಿನ ಮತ್ತು ಮೇಲಿನ ಸಾವಿರಾರು ಮಂದಿ ಇವತ್ತಿಗೂ ಶಂಕರ್ ನಾಗ್ ರನ್ನು ನೆನಪಿಸಿಕೊಂಡು ಕಣ್ಣೀರಾಗುತ್ತಾರೆಂದರೆ ಅದಕ್ಕೆ ಶಂಕರ್ ನಾಗ್ ರ ಆಲೋಚನ ಪರಿ ಹಾಗೂ ಆತನ ಕನಸುಗಳ ಮೂಟೆ, ಪ್ರೀತಿ ವಾತ್ಸಲ್ಯ, ಪ್ರೋತ್ಸಾಹ ಕಾರಣ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ತಾನು ಕಂಡ ಕನಸುಗಳ ಸಾಕಾರಕ್ಕೆ ಇನ್ನಿಲ್ಲದ ಶ್ರಮ ಹಾಕುತ್ತಿದ್ದ ಶಂಕರ್ ನಾಗ್ ನಿದ್ರಿಸುತ್ತಿದುದು ತುಂಬಾ ಕಡಿಮೆ. ಅಂದರೆ ಸತ್ತ ಮೇಲೆ ದೀರ್ಘ ನಿದ್ದೆಗೆ ಅವಕಾಶವಿದೆ ಹಾಗಿರುವಾಗ ಬದುಕಿರುವಾಗ ದೀರ್ಘ ನಿದ್ರೆ ಮಾಡಿ ಸಮಯ ಹಾಳು ಮಾಡಬಾರದು ಎಂಬ ನಿಟ್ಟಿನಲ್ಲಿ ಶ್ರಮವನ್ನು ಧಾರೆಯೆರೆಯುತ್ತಿದ್ದ  ಶಂಕರ್ ನಾಗ್ ಯಾವತ್ತಿಗೂ ಜನಮಾನಸದಲ್ಲಿ ಅಜರಾಮರರೇ ಆಗಿದ್ದಾರೆ. ಒಂದು ಉತ್ತಮ ಅಭಿರುಚಿಯನ್ನ, ಅನುಭಾವವನ್ನ ನಮಗೆ ಉಳಿಸಿಹೋಗಿರುವ ಶಂಕರ್ ನಾಗ್ ಸದಾಕಾಲ ನೆನಪಿಗೆ ಅರ್ಹರೇ ಆಗಿದ್ದಾರೆ, ದೈಹಿಕಾವಾಗಿ ಇಲ್ಲದಿದ್ದರೂ ತಮ್ಮ ಕೆಲಸದ ಮೂಲಕ ನಮ್ಮೊಂದಿಗೆ ಇರುವ ಶಂಕರ್ ಹೆಸರನ್ನು 'ನಮ್ಮ ಮೆಟ್ರೋ'ಗೆ ಇಟ್ಟರೆ ಅದು ಸಾರ್ಥಕವಾದೀತು. ಸರ್ಕಾರ ದಿಸೆಯಲ್ಲಿ ಕ್ರಮ ವಹಿಸಬೇಕು, ಸಮಸ್ತ ಅಭಿಮಾನಿಗಳು ಮತ್ತು ಚಿತ್ರರಂಗದ ಒತ್ತಾಸೆ ಈ ನಿಟ್ಟಿನಲ್ಲಿ ಹೊರಹೊಮ್ಮಿದರೆ ಇದು ಸಾಧ್ಯವಾದೀತೇನೋ?

Sunday, October 16, 2011

'ಜ್ಞಾನ'ಪೀಠಕ್ಕೆ ಅಸಹನೆ ಯಾಕೆ?


ಮೊನ್ನೆ ಜಾನಪದ ವಿದ್ವಾಂಸ,ನಾಟಕಕಾರ, ಸಾಹಿತಿ,ನಿರ್ದೇಶಕ ಚಂದ್ರಶೇಖರ ಕಂಬಾರರಿಗೆ 8ನೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ಸಂಧರ್ಭ..'ಯೋಗ್ಯತೆ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿ ಬರುತ್ತಿದೆ, ಯೋಗ್ಯರು ಭಾಳಾ ಮಂದಿ ಅದಾರೆ ' ಎಂದು ಪ್ರತಿಕ್ರಿಯಿಸಿದ್ದು  ಪಾಟೀಲ ಪುಟ್ಟಪ್ಪ. "ಪ್ರಶಸ್ತಿ ಬಂದಾಗ ಪರ ವಿರೋಧ ಹೇಳಿಕೆ ನೀಡೋದು ಇರ್ತಾವಾ, ಅದು ಅವರವರ ಅಭಿಪ್ರಾಯ. ನಾನು ಅವರ ಹೇಳಿಕೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ" ಎಂದು  ಡಾ. ಚಂದ್ರಶೇಖರ ಕಂಬಾರರು ಪ್ರತಿಕ್ರಿಯಿಸಿದ್ದರು. ನಂತರ ಪಾಟೀಲ ಪುಟ್ಟಪ್ಪನವರ ಧಾಟಿಯಲ್ಲೇ ಬೈರಪ್ಪನವರನ್ನು ಬೆಂಬಲಿಸುವ ಅದರಲ್ಲೂ ಜಾತಿಯ ಹಿನ್ನೆಲೆಯಲ್ಲಿ ಕಂಬಾರರ ಶ್ರೇಷ್ಠತೆಯನ್ನು ಪ್ರಶ್ನಿಸಲು ನಿಂತದ್ದು ಒಂದು ಸಮೂಹ! ಇದನ್ನು ವಿರೋಧಿಸುವ ಭರದಲ್ಲಿ ಎಸ್ ಎಲ್ ಬೈರಪ್ಪನವರನ್ನು ಸಾರ್ವತ್ರಿಕವಾಗಿ ತೆಗಳಿದ್ದಲ್ಲದೇ ಅವರಿಗೆ ಜ್ಞಾನಪೀಠ ಸಿಗುವುದೇ ಆದರೆ ಮರಣೋತ್ತರವಾಗಿ ಸಿಗಲಿ  ಎಂದು ನಿಡುಮಾಮಿಡಿ ಸ್ವಾಮೀಜಿ ಹಾಗೂ ಅಗ್ನಿ ಶ್ರೀಧರ್ ಇತರರು ಜರಿದದ್ದು ಕನ್ನಡ ಸಾರಸ್ವತ ಲೋಕದಲ್ಲಿ ಒಳ್ಳೆಯ ಬೆಳವಣಿಗೆಯೇನಲ್ಲ. 
        8ನೇ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾರತೀಯ ಭಾಷೆಗಳ ಸಾಹಿತ್ಯ ವಲಯದಲ್ಲಿ ಉನ್ನತ ಸ್ಥಾನಕ್ಕೇರಿರುವ ಕನ್ನಡ ಭಾಷೆಯ ಶ್ರೇಷ್ಠತೆಗೆ ಸಮಸ್ತ ಕನ್ನಡಿಗರೂ ಸಂಭ್ರಮ ಪಡುವ ಕಾಲವಿದು. ಆದರೆ ಇದೇನಿದು? ಅತ್ಯುನ್ನತ ಪುರಸ್ಕಾರ ಲಭಿಸಿದಾಗ ಅದನ್ನು ಜಾತಿಯ ಹಿನ್ನೆಲೆಯಲ್ಲಿ, "ಲಾಬಿ" ಮಾಡಿ ಪಡೆದಿದ್ದಾರೆಂಬ ಅರ್ಥವಿಲ್ಲದ ವ್ಯಾಖ್ಯಾನ ಮಾಡುತ್ತಾ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತಾ ಹಂಗಿಸುವ ಪರಂಪರೆ? ನಾಚಿಕೆಯಾಗ ಬೇಕು ಸದರಿ ಬುದ್ದಿಜೀವಿಗಳಿಗೆ ಮತ್ತು ತಲೆ ಬುಡ ತಿಳಿಯದೇ ಯಾವುದಾದರೊಂದು ಕಾರಣಕ್ಕೆ ಎರಡೂ ಪಕ್ಷಗಳನ್ನು ಬೆಂಬಲಿಸುವ ಮೂರ್ಖರಿಗೆ! ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಶ್ರೀಮಂತವಾದದ್ದು ಇಲ್ಲಿ ಇನ್ನೂ ಹಲವಾರು ಮಂದಿ ಜ್ಞಾನಪೀಠಿಗಳಿದ್ದಾರೆ, ಪ್ರಶಸ್ತಿ ಬಾರದ ಮಾತ್ರಕ್ಕೆ ಅವರೆಲ್ಲ ತೃಣಕ್ಕೆ ಸಮಾನರೆಂದು ಯಾಕಾದರೂ ಭಾವಿಸಬೇಕು. ಕೆಲವು ಪ್ರಶಸ್ತಿಗಳಿಂದ ಯಾರೂ ದೊಡ್ಡವರಾಗುವುದಿಲ್ಲ, ಆದರೆ ಕೆಲವೊಮ್ಮೆ ಪುರಸ್ಕೃತರಾಗುವವರಿಂದ ಪ್ರಶಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕುಬಿಡುತ್ತದೆ. ಈಗ ಜ್ಞಾನ ಪೀಠ ಪಡೆದ 8ಮಂದಿ ಜ್ಞಾನಪೀಠಿಗಳು ಅದ್ವಿತೀಯರೇ ಆಗಿದ್ದಾರೆ. ಆದರೆ ವ್ಯವಸ್ಥೆಯಲ್ಲಿ ದಿಕ್ಕುತಪ್ಪಿದ ಆಲೋಚನೆಗಳು ವಿನಾಕಾರಣ ಅಪಪ್ರಚಾರಕ್ಕೆ ಮುಂದಾಗಿ ಬಿಡುತ್ತವೆ ಇದು ಸಾರಸ್ವತ ಲೋಕಕ್ಕೆ ಅಪಾಯಕಾರಿ. 
       ಜ್ಞಾನಪೀಠ ಪ್ರಶಸ್ತಿ ಕುರಿತು ಚೂರು ಮಾಹಿತಿ ಹೇಳಿ ನಂತರ ಚರ್ಚೆಗೆ ಬರೋಣ, ಜ್ಞಾನಪೀಠ ಪ್ರಶಸ್ತಿ ಯಾವುದೇ ಸರ್ಕಾರ ಕೊಡುವ ಪ್ರಶಸ್ತಿಯಲ್ಲ! ಜ್ಞಾನಪೀಠ ಟ್ರಸ್ಟ್ ಇದನ್ನು ಕೊಡಮಾಡುತ್ತದೆ. ಜ್ಞಾನಪೀಠ ಟ್ರಸ್ಟ್ ನ ನಿರ್ವಹಣೆ ಜೈನ ಕುಟುಂಬ ಮಾಡುತ್ತದೆ, ಜ್ಞಾಪೀಠ ಟ್ರಸ್ಟ್ ನ ಒಡೆತನ ಟೈಂಸ್ ಆಫ್ ಇಂಡಿಯಾ ಗ್ರೂಪ್ ಗೆ ಸೇರಿದೆ. ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ದೇಶದ ಅತ್ಯುತ್ತನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರುಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
         ಅಂದ ಹಾಗೆ ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿಯನ್ನು ತಂದು ಕೊಟ್ಟದ್ದು ಕುವೆಂಪು 1967ರಲ್ಲಿ. ಆ ದಿನಗಳಲ್ಲಿ ಇನ್ನೂ ಭಾರತೀಯ ಸಮಗ್ರ ಸಾಹಿತ್ಯಕ್ಕೆ ಕೊಡುಗೆ ನೀಡಿದವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲು ಆರಂಭಿಸಿರಲಿಲ್ಲ. ಆ ದಿನಗಳಲ್ಲಿ ತಮ್ಮ ಸಾಹಿತ್ಯ ಕೃತಿ ಶ್ರೀ ರಾಮಾಯಣ ದರ್ಶನಂ ಗೆ ಜ್ಞಾನಪೀಠ ಪ್ರಶಸ್ತಿಯನ್ನು ಕುವೆಂಪು ಪಡೆದಾಗ ಬೆಚ್ಚಿ ಬಿದ್ದದ್ದು ಪುರೋಹಿತ ಶಾಹಿ ವರ್ಗ.. ಒಬ್ಬ ಶೂದ್ರ ಜ್ಞಾನಪೀಠಕ್ಕೆ ಅರ್ಹವಾಗುವ ರಾಮಾಯಣ ದರ್ಶನಂ ಬರೆದನೋ ಎನ್ನುವ ಕಿಡಿಗೇಡಿ ಮಾತನ್ನು ಆಡಿ ಬಿಟ್ಟಿತ್ತು. ಅಂದು ಕುವೆಂಪು ತುಂಬ ನೊಂದು ಬಿಟ್ಟಿದ್ದರು. ಜ್ಞಾನಪೀಠ ಪ್ರಶಸ್ತಿ ಆರಂಭವಾದ ಕೆಲವೇ ವರ್ಷಗಳಲ್ಲಿ ಮೊಟ್ಟ ಮೊದಲ ಭಾರಿಗೆ  4ನೇ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟ ಹೆಮ್ಮೆ ಕುವೆಂಪು ರವರದ್ದಾಗಿತ್ತು. ಆದರೆ ಜಾತೀಯ ಅಸಹನೇ ಮತ್ತು ಕೀಳು ಮನೋಭಾವ,  ಸಂಕುಚಿತ ಮನೋಭಾವ ಜ್ಞಾನಪೀಠದ ಸಂಭ್ರಮವನ್ನು ಅಂದು ಹೊಸಕಿ ಹಾಕಿತ್ತು. ಇವತ್ತು ಅದೇ ಮನಸ್ಸುಗಳು ಕಂಬಾರರನ್ನು ಜಾತಿಯ ಹಿನ್ನೆಲೆಯಲ್ಲಿ ಅಣಕಿಸಲು ಪ್ರಯತ್ನಿಸುತ್ತಿರುವುದು ವ್ಯವಸ್ಥೆಯ ದುರಂತವೇ ಸರಿ! 
       ಚಂದ್ರ ಶೇಖರ ಕಂಬಾರರಿಗೂ ಇದು ಹೊಸತೇನಲ್ಲ.  ಕಂಬಾರರು ಯುವಕರಾಗಿದ್ದಾಗ ದಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ,ಖ್ಯಾತ ಕವಿಗಳೊಬ್ಬರು ಅಧ್ಯಕ್ಷತೆ ವಹಿಸಿದ್ದರು,ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ,ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು,"ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು,ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ.ಅವರ ಅಚಲ ನಿರ್ಧಾರ ಹಾಗೂ ಪ್ರಯತ್ನಗಳು ಇವತ್ತು ಅವರ ಸಾಧನೆಯನ್ನು ಜ್ಞಾನಪೀಠದ ಅಂಚಿಗೆ ತಂದು ನಿಲ್ಲಿಸಿದೆ. ಚಂದ್ರ ಶೇಖರ ಕಂಬಾರ ಕನ್ನಡದ ವರಕವಿ ದ.ರಾ ಬೇಂದ್ರೆಯವರ ನಂತರ ಕನ್ನಡ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡು ಸಾಹಿತ್ಯ ರಚಿಸಿದ ಕೀರ್ತಿ ಕಂಬಾರರಿಗೆ ಸಲ್ಲುತ್ತದೆ. ಮೊಟ್ಟ ಮೊದಲ ಭಾರಿಗೆ ಕನ್ನಡದಲ್ಲಿ ಜಾನಪದ ವಿಶ್ವಕೋಶವನ್ನು ರಚಿಸಿದ ಕಂಬಾರ ಆ ಮೂಲಕ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನವನ್ನು ಕಲ್ಪಿಸಿದ್ದಾರೆ. ಜಾನಪದದ ಜೊತೆಗೆ ವೈಚಾರಿಕತೆಯನ್ನು ಬೆಸೆಯುವ ಕಂಬಾರರ ಧಾಟಿ ಅವರಿಗೆ ಸರಿಸಾಟಿಯಾಗುವಂತಿದೆ. ಕಂಬಾರರು ಒಟ್ಟು ೨೨ ನಾಟಕಗಳು, ೮ ಕವನ ಸಂಕಲನಗಳು ಮತ್ತು ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ ಚಕೋರಿ ಎಂಬ ಮಹಾಕಾವ್ಯ, ಜಾನಪದ, ರಂಗಭೂಮಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ೧೪ ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ.ಏಲ್ಲಾ ಸೇರಿ ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.ಇವರ ಅನೇಕ ಕೃತಿಗಳು ಹಿಂದಿ, ಇಂಗ್ಲೀಷ್ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.‘ಬೆಂಬತ್ತಿದ ಕಣ್ಣು’(೧೯೬೧) ಮತ್ತು ‘ನಾರ್ಸಿಸಸ್‌’(೧೯೬೯) ಹೆಸರು ಮಾಡಿದ ಇವರ ನಾಟಕಗಳು.ಪದ್ಮಶ್ರೀ, ನಾಡೋಜ, ಕಬೀರ್ ಸಮ್ಮಾನ್ ಹೀಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಕಂಬಾರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು. ಅದೇ ರೀತಿ ಸಂತೆ ಶಿವರ ಲಿಂಗಣ್ಣಯ್ಯ ಬೈರಪ್ಪ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ರೀತಿಯಲ್ಲಿ ತಮ್ಮ ಅಸ್ತ್ವಿತ್ವ ದಾಖಲಿಸಿದವರು. ಆಧುನಿಕ ದಿನಗಳಲ್ಲಿ ಇವತ್ತಿಗೂ ಹೆಚ್ಚು ಓದಿಸಿಕೊಳ್ಳುವ ನಂ.1 ಸ್ಥಾನ ಅತಿಕ್ರಮಿಸಿದ ಹೆಗ್ಗಳಿಕೆ ಬೈರಪ್ಪನವರಿಗಿದೆ. 2010ರ ಸರಸ್ವತಿ ಸಮ್ಮಾನ್,ಪಂಪ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರ ಸಾಹಿತ್ಯ ಉರ್ದು,ಸಂಸ್ಕೃತ,ಇಂಗ್ಲೀಷ್, ಮರಾಠಿ,ಗುಜರಾತಿ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಿಗೆ ತರ್ಜುಮೆ ಗೊಂಡಿದೆ. ಹಿಂದಿ ಭಾಷೆಗೆ ಅನುವಾದಗೊಂಡ ಇವರ ಸಾಹಿತ್ಯ ಅಲ್ಲೂ ಇವರನ್ನು ಅತ್ಯುತ್ತಮ ಬರಹಗಾರರ ಸಾಲಿನಲ್ಲಿ ನಿಲ್ಲಿಸಿದೆ. 24ಕಾದಂಬರಿಗಳು, ಒಂದು ಆತ್ಮ ಕಥನ, 4ತತ್ವಶಾಸ್ತ್ರ ಸಾಹಿತ್ಯವನ್ನು ಬರೆದಿರುವ ಬೈರಪ್ಪ ನವರ "ಆವರಣ"ಮತ್ತು "ಕವಲು" ಕಾದಂಬರಿಗಳು ಬಿಡುಗಡೆಗೆ ಮುನ್ನವೇ ಸಂಚಲನ ಸೃಷ್ಟಿಸಿದವು. ಬಹುಶ: ಕನ್ನಡದ ಬೇರಾವ ಕೃತಿಗಳಿಗೆ ಮತ್ತು ಲೇಖಕರಿಗೆ ಈ ಮಟ್ಟದ ಪ್ರೋತ್ಸಾಹ ದೊರೆತಿರಲಾರದು.   ಸಾಹಿತ್ಯ ಕೃಷಿಗೂ ಮುನ್ನ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೂ ದುಮುಕಿ ದೇಶ ಪ್ರೇಮ ಮೆರೆದ ಅಸೀಮ ವ್ಯಕ್ತಿತ್ವ ಬೈರಪ್ಪನವರದ್ದು.   ಇದು ಅಸಲು ಸಂಗತಿ ಹೀಗಿರುವಾಗ ಕವಿಗಳನ್ನು ಸಾಹಿತಿಗಳನ್ನು ಏಕ ದೃಷ್ಠಿಕೋನದಿಂದ ಅಳೆಯುವುದು ಸರಿಯೇ? 
           ಬೈರಪ್ಪ ಮತ್ತು ಕಂಬಾರ ಅವರವರ ನೆಲೆಗಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಆದರೆ ಅವರ ವೈಯುಕ್ತಿಕ ವಿಚಾರಗಳು, ಜಾತೀಯ ಹಿನ್ನೆಲೆ ಒಂದು ಸಂಭ್ರಮವನ್ನು ಹಾಳು ಮಾಡಬಾರದಲ್ಲವೇ? ಪ್ರಶಸ್ತಿ ದಕ್ಕಿದ ಸಂಧರ್ಭದಲ್ಲಿ ಇವೆಲ್ಲಾ ಬೇಕಾ ಹೇಳಿ? ಇದುವರೆಗೆ ಪ್ರಶಸ್ತಿ ದಕ್ಕಿಸಿಕೊಂಡವರಲ್ಲಿ ಇಂತಹ ಅಸಹಜವಾದ ಮುಜುಗುರಕ್ಕೆ ಒಳಗಾಗಿದ್ದು ಕುವೆಂಪು ಮತ್ತು ಕಂಬಾರ ಮಾತ್ರವಲ್ಲ ಯು ಆರ್ ಅನಂತ ಮೂರ್ತಿ ಹಾಗೂ ಗಿರೀಶ್ ಕಾರ್ನಾಡರಿಗೆ ಪ್ರಶಸ್ತಿ ಬಂದಾಗಲೂ ಹೊಟ್ಟೆಕಿಚ್ಚಿನ ಒಂದು ವರ್ಗ "ಲಾಬಿ" ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡವರೆಂಬ ಹಣೆ ಪಟ್ಟಿ ಕಟ್ಟಿತ್ತು. ಕನ್ನಡಕ್ಕೆ ಇನ್ನೂ ಹೆಚ್ಚಿನ ಜ್ಞಾನಪೀಠಗಳು ಬರಬೇಕಿದೆ ಸಧ್ಯ ಜ್ಞಾನಪೀಠ ಪಡೆದಿರುವವರಲ್ಲಿ 2ನೇ ಸ್ಥಾನದಲ್ಲಿರುವ ಹಿಂದಿಗಿಂತಲೂ  ಕನ್ನಡ 2ಪ್ರಶಸ್ತಿಗಳಿಂದ ಮೇಲಿದೆ, ನಾವಿನ್ನೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ದಕ್ಕಿಸಿಕೊಳ್ಳಲಾಗಿಲ್ಲ, ಇಂತಹ ಸಂಧರ್ಭದಲ್ಲಾದರೂ ಒಗ್ಗೂಡಿ ಶಾಸ್ತ್ರೀಯ ಸ್ಥಾನಮಾನಕ್ಕೆ ಹಕ್ಕೊತ್ತಾಯ ಮಂಡಿಸುವುದನ್ನು ಬಿಟ್ಟು ಇದೆಂಥದು ಕೆಸರೆರಚಾಟ? ಇನ್ನಾದರೂ ಮೂರ್ಖರು ಬುದ್ದಿ ಕಲಿಯಬಾರದೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...