Friday, December 17, 2010

ನೀರಾವರಿ ತಜ್ಞ ಎಚ್ ಎನ್ ನಂಜೇಗೌಡ:ಒಂದು ನೆನಪು


ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂಧರ್ಭ, ಸಲ್ಲದ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ತಾಂತ್ರಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ರೈತರ  ಹಿತಾಸಕ್ತಿಗೆ ಕುಂದು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿತ್ತು. ನಮ್ಮ ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿಯ ನೀರಿನ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾರದೇ ಅಸಹಾಯಕತೆ ಪ್ರದರ್ಶಿಸಿದ ಸರ್ಕಾರಕ್ಕೆ ನೆರವಿಗೆ ಬಂದದ್ದು ಕರ್ನಾಟಕ ರಾಜ್ಯದ ನೀರಾವರಿ ಭಗೀರಥ ಎಚ್ ಎನ್ ನಂಜೇಗೌಡ. ನದಿ ನೀರು ವಿವಾದ ಕುರಿತಂತೆ ಹೋರಾಟ ನಡೆಸುತ್ತಿದ್ದ ಕನ್ನಡ ಸಂಘಟನೆಗಳ ಹೋರಾಟಕ್ಕೆ ನೈತಿಕ ಬಲ ತುಂಬಿದ್ದು ಎಚ್ ಎನ್ ನಂಜೇಗೌಡ, ನದಿ ನೀರಿನ ವಿವಾದ ಕುರಿತ ಪ್ರತ್ಯೇಕ ಪ್ರಾಧಿಕಾರದ ಮುಂದೆ ವಾದ ಮಂಡಿಸಲು ಹೆಗಲಿಗೆ ಹೆಗಲು ಕೊಟ್ಟು ಮಾಹಿತಿ ನೀಡಿದ್ದು ಅದೇ ಎಚ್ ಎನ್ ನಂಜೇಗೌಡ.! ಹೌದು ತನಗಾಗಿ ಏನನ್ನೂ ಮಾಡಿಕೊಳ್ಳದೇ ಜನರ ಸೇವೆಗಾಗಿ ತನ್ನ ವಿದ್ವತ್ತನ್ನು ಮುಡಿಪಾಗಿಟ್ಟ ಅಪರೂಪದ ರಾಜಕಾರಣಿ ಎಚ್ ಎನ್ ನಂಜೇಗೌಡ. ನೀರಾವರಿ ವಿಚಾರದಲ್ಲಿ ರಾಜ್ಯದ ಜನತೆ ಸದಾ ನೆನಪಿಟ್ಟುಕೊಳ್ಳ ಬೇಕಾದ ಎಚ್ ಎನ್ ನಂಜೇಗೌಡರು ಗತಿಸಿ ಇಂದಿಗೆ 3ವರ್ಷಸಂದಿದೆ. ಈ ಸಂಧರ್ಭ ದಲ್ಲಿ ಅವರ ಬಗೆಗೆ ಮೆಲುಕು ಹಾಕುವುದು ಅವರಿಗೆ ಸಲ್ಲಿಸುವ ಗೌರವವಾಗಬಹುದೇನೋ.
ಮಹಾರಾಜಾ ಕಾಲೇಜು ವಿದ್ಯಾರ್ಥಿ ಇವತ್ತು ರಾಜ್ಯದಲ್ಲಿ ಹಲವು ಮಂದಿ ರಾಜಕಾರಣಿಗಳನ್ನು ನೋಡಿದ್ದೀರಿ, ಹಿಂದಿನ ದಶಕಗಳಲ್ಲಿ ಇದ್ದ ರಾಜಕಾರಣಿಗಳಿಗೂ ಇಂದಿನ ರಾಜಕಾರಣಿಗಳಿಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂತಹ ವ್ಯವಸ್ಥೆಯ ನಡುವೆ ಹಳೆ-ಹೊಸ ತಲೆಮಾರಿನ ರಾಜಕಾರಣಿಗಳ ನಡುವೆ ತಾನು ನಂಬಿದ ಸಿದ್ದಾಂತಗಳಿಗೆ, ನೈತಿಕ ಮೌಲ್ಯಗಳಿಗೆ ನಿಷ್ಟುರ ಬದ್ದತೆಯನ್ನು ಪ್ರದರ್ಶಿಸಿ ಬದುಕಿದ ಛಲಗಾರ ಎಚ್ ಎನ್ ನಂಜೇಗೌಡ. ಅವರ ಕುರಿತು ಮಾತನಾಡುವ ಮುನ್ನ ಚೂರು  ಮಾಹಿತಿ ನಿಮಗಾಗಿ. ಲಭ್ಯ ಮಾಹಿತಿಗಳನ್ನಾಧರಿಸಿ ಹೇಳುವುದಾದರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಂಜೇಗೌಡರ ಎರಡನೇ ಪತ್ನಿ ಕಮಲಮ್ಮನವರ  ಪುತ್ರ ಎಚ್ ಎನ್ ನಂಜೇಗೌಡ. ತಾಯಿಯ ಊರು ಅರಕಲಗೂಡು ತಾಲೂಕಿನ ಗಂಗೂರು ಗ್ರಾಮ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸಗಳನ್ನು ಪೂರೈಸಿದ ನಂಜೇಗೌಡರು ಬಿಎ ಪದವಿಗಾಗಿ ಮೈಸೂರಿಗೆ ತೆರಳಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗೌಡರು ಕಾಲೇಜು ದಿನಗಳಲ್ಲೆ ಉತ್ತಮ ವಾಗ್ಮಿಯೂ ಆಗಿದ್ದರು, ವಿದ್ಯಾರ್ಥಿ ಸಂಘದ ಮುಖಂಡರೂ ಆಗಿ ಹೆಸರು ಗಳಿಸಿದ್ದ ಗೌಡರು ಸದಾ ಚಟುವಟಿಕೆಯ ಚಿಲುಮೆ. 
                ಅಂದಿನ ದಿನಗಳಲ್ಲಿಯೇ ವಿದ್ಯಾರ್ಥಿ ಚಳುವಳಿಗಳಲ್ಲೂ ಮುಂದಾಳಾಗಿರುತ್ತಿದ್ದರು. ಪದವಿಯ ನಂತರ ಕಾನೂನು ಪದವಿ ಕಲಿತ ಗೌಡರು 60ರ ದಶಕದ ಆರಂಭದಲ್ಲಿ ಅರಕಲಗೂಡಿಗೆ ವಾಪಾಸಾದರು. ಆ ವೇಳೆಗಾಗಲೇ ರಾಜಕಾರಣದ ಕಿಚ್ಚು ಹೊತ್ತಿಸಿಕೊಂಡಿದ್ದ ಗೌಡರು ತಾಲೂಕಿನಲ್ಲಿಯೂ ಚಳುವಳಿಗಳ ಮುಂದಾಳತ್ವ ವಹಿಸುತ್ತಿದ್ದರು. ರೈತರ ಬಗೆಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಅವರು ರೈತರಿಗಾಗಿ ಏನನ್ನಾದರೂ ಮಾಡಬೇಕೆಂಬ ತುಡಿತ ಹತ್ತಿಸಿಕೊಂಡಿದ್ದರು. 1960-61ರಲ್ಲಿ ಅರಕಗಲೂಡು ವಿದಾನಸಭಾ ಸದಸ್ಯ ಸ್ಥಾನಕ್ಕೆ  ಪಕ್ಷೇತರರಾಗಿ ಸ್ಪರ್ಧಿಸಿದ್ದ ಪುಟ್ಟೇಗೌಡರಿಗೆ ಸಾಥ್ ನೀಡಿದರು. ಮುಂದೆ 1962ರಲ್ಲಿ ಪ್ರಜಾಸೋಷಲಿಸ್ಟ್ ಪಕ್ಷದಿಂದ ಅಭ್ಯರ್ಥಿಯಾದ ಎಚ್ ಎನ್ ನಂಜೇಗೌಡ ಪ್ರತಿಸ್ಫರ್ಧಿಯಾಗಿದ್ದ ಕಾಂಗ್ರೆಸ್ ನ ಜಿ ಎ ತಿಮ್ಮಪ್ಪಗೌಡರ ವಿರುದ್ದ ಸ್ಪರ್ದಿಸಿ ಸೋಲುಂಡರು. ಮತ್ತೆ ರಾಜ್ಯದಲ್ಲಿ ನಿಜಲಿಂಗಪ್ಪನವರ ಸರ್ಕಾರವಿದ್ದಾಗ 1967ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ದಿಸಿ ಕೆ ಬಿ ಮಲ್ಲಪ್ಪನವರ ವಿರುದ್ದ ಗೆಲುವು ಸಾಧಿಸಿದರು. ಮತ್ತೆ 1972ರಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ ನಂಜೇಗೌಡರು ಎದುರಾಳಿ ಕೆ ಬಿ ಮಲ್ಲಪ್ಪನವರನ್ನು ಎರಡನೇ ಭಾರಿಗೆ ಸೋಲಿಸಿದರು. ಆಗ ಆಡಳಿತಕ್ಕೆ ಬಂದ ಅರಸು ಸರ್ಕಾರದಲ್ಲಿ ಭಾರೀ ನೀರಾವರಿ ಖಾತೆಯ ಸಚಿವರಾದ ಗೌಡರಿಗೆ ತಾವು ಅಂದುಕೊಂಡಿದ್ದನ್ನು ಮಾಡುವ ಅವಕಾಶ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ಹೇಮಾವತಿ ಜಲಾಶಯ ಯೋಜನೆ ಜಾರಿಯಲ್ಲಿತ್ತು, ಸದರಿ ಜಲಾಶಯದ ಹಿನ್ನೀರಿನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಚಾಲನೆ ನೀಡಿದ ಗೌಡರು ಹಾರಂಗಿ ಜಲಾಶಯ ಯೋಜನೆಯ ನೀರನ್ನು ತಾಲೂಕಿನ ರೈತರಿಗೆ ದೊರಕಿಸುವ ಸಾಹಸ ಮಾಡಿದರು. ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆಗಳಾದವು ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಜನರ ಆರ್ಥಿಕಾಭಿವೃದ್ದಿಗೆ ಹೆಗಲು ನೀಡುವ ಬ್ಯಾಂಕಿಂಗ್ ಯೋಜನೆಯನ್ನು ಅನುಷ್ಠಾನಕ್ಕೆ ತಂದರು, ಪರಿಣಾಮ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮೀಣ ಬ್ಯಾಂಕ್ ಸೇವೆಯನ್ನು ಪಡೆಯುವಂತಾಯಿತು.

ದಿಟ್ಟೆದೆಯ ರಾಜಕಾರಣಿ :ಅಧಿಕಾರದಲ್ಲಿದ್ದಾಗ ಯಾವುದಕ್ಕೂ ರಾಜೀ ಮಾಡಿಕೊಳ್ಳದ ಗೌಡರು ತಮ್ಮ ನಿರ್ದಾಕ್ಷ್ಯೀಣ್ಯ ನಡೆಗಳಿಂದಾಗಿ ರಾಜೀ ನೀಡಬೇಕಾಯಿತು. ಅಧಿಕಾರಕ್ಕೆ ಅಂಟಿ ಕೂರದೇ ಅಂದುಕೊಂಡದ್ದನ್ನು ಮಾಡಿ ಮುಗಿಸುವ, ಇದ್ದ್ದದ್ದನ್ನು ಇದ್ದಂತೆ ನೇರವಾಗಿ ಕಠಿಣವಾಗಿ ಹೇಳುವ ಛಾತಿಯಿಂದಾಗಿ ಮತ್ತು ಅಧಿಕಾರಕ್ಕೆ ಅಂಟಿಕೂರದ ನಡವಳಿಕೆ ಎಚ್ ಎನ್ ನಂಜೇಗೌಡರನ್ನು ಎತ್ತರದಲ್ಲಿ ಕೂರುವಂತೆ ಮಾಡಿದೆ. ಮುಂದೆ ಸರ್ಕಾರ ಪತನಗೊಂಡಾಗ 1978ರಲ್ಲಿ ಮತ್ತೆ ಸ್ಪರ್ದಿಸಿದ ನಂಜೇಗೌಡರು ಸೋಲನುಭವಿಸಿದರು. ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಎತ್ತರಕ್ಕೇರಿದ ಅವರು 1980ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಸಂಸತ್ ನಲ್ಲಿ ತಮ್ಮ ಪಕ್ಷದವರೇ ಆದ ಪ್ರಧಾನಿ ರಾಜೀವ್ ಗಾಂಧಿ ವಿರುದ್ದ ಬೋಫೋರ್ಸ್ ಹಗರಣ ಬಹಿರಂಗವಾದಾಗ ಅತ್ಯಂತ ಕಟುವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪಕ್ಷದಿಂದಲೇ ಹೊರಬಿದ್ದರು. ರಾಜ್ಯದಲ್ಲಿ ಜೆಡಿಯು ತೆಕ್ಕೆಗೆ ಹೋಗಿ ಸೋಲನುಭವಿಸಿದರು ನಂತರ ಬಿಜೆಪಿಗೆ ಸೇರಿ ಬಸವನಗುಡಿಯಲ್ಲಿ ಸೋಲು ಕಂಡು 'ಗರ್ಭಗುಡಿಯ ಪಕ್ಷವೆಂದು ಜರಿದು ಪಕ್ಷ ತೊರೆದರು. ಗೌಡರು ಯಾವುದೇ ಪಕ್ಷದಲ್ಲಿದ್ದರು ನೀರಾವರಿ ಕುರಿತು ವಹಿಸಿದ್ದ ಆಸ್ಥೆ ಮತ್ತು ರೈತರ ಪರವಾಗಿದ್ದ ಕಾಳಜಿಯಿಂದಾಗಿ ಕಾಲಕಾಲಕ್ಕೆ ಸರ್ಕಾರಕ್ಕೆ ಮತ್ತು ಹೋರಾಟಗಾರರಿಗೆ ಮಾಹಿತಿ ನೀಡಿದರು. ಯಾವುದೇ ದಾಖಲೆಗಳನ್ನು ಎದುರಿಗಿಟ್ಟುಕೊಳ್ಳದೇ ಬ್ರಹ್ಮಾಂಡದಂತಹ ನೀರಾವರಿ ಅಂಕಿಅಂಶಗಳನ್ನು ಸುಲಲಿತವಾಗಿ ಹೇಳುತ್ತಿದ್ದ ಗೌಡರು ನೀರಾವರಿ ಕುರಿತು ಉಂಟಾದ ಸಂಕಟ ಸಮಯದ ಆಪದ್ಬಾಂದವನಾಗಿರುತ್ತಿದ್ದರು.

ಸ್ಮರಣೆ ಲೇಸು :  ವಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಂದಿಗೂ ಸಮುದಾಯದ ಚಟುವಟಿಕೆಗಳಿಂದ ದೂರವಿದ್ದ ಗೌಡರು ಎಲ್ಲ ಜನಾಂಗದ ಜನರ ಅನುರಾಗಿಯಾಗಿದ್ದರು. ಎಲ್ಲಾ ಪಕ್ಷಗಳ ರಾಜಕಾರಣಿಗಳು ಗೌಡರೊಂದಿಗೆ ಸೌಹಾರ್ಧಯುತ ಸಂಭಂಧವಿರಿಸಿಕೊಂಡಿದ್ದರು. ಗೌಡರ ನೀರಾವರಿ ಬಗೆಗಿನ ಕಾಳಜಿಗೆ ಹೆಚ್ ಕೆ ಪಾಟೀಲ್ ಮತ್ತು ನಿಜಲಿಂಗಪ್ಪನವರ ಸರ್ಕಾರದಲ್ಲಿ ಸಚಿವರಾಗಿದ್ದ ಬಸಪ್ಪನವರ ಮಾರ್ಗದರ್ಶನವೂ ಕಾರಣವಾಗಿತ್ತು. ಒಬ್ಬ ನಿಷ್ಟುರ, ಜನಪರ ಕಾಳಜಿಯ ನಂಬಿದ ಸಿದ್ದಾಂತಗಳನ್ನು ಪ್ರತಿಪಾದಿಸುವ ಸಾಧಕನ ನೆನಪು ನಮಗೆ ಸದಾ ಸ್ಮರಣೀಯ, ನಂಜೇಗೌಡರು ಸಿದ್ದಾಂತ ಮತ್ತು ಚಳುವಳಿಯ ವಿಚಾರದಲ್ಲಿ ಗೋಪಾಲಗೌಡರ ಮಟ್ಟಿಗೆ ಬೆಳೆಯುವ ಸಾಧ್ಯತೆಗಳಿತ್ತಾದರೂ ಒಂದು ಪಕ್ಷದಲ್ಲಿ ನೆಲೆ ನಿಲ್ಲದ ಗೌಡರಿಗೆ ಅದು ಸಾಧ್ಯವಾಗಲಿಲ್ಲ ಆದರೆ ಒಂದು ಶಕ್ತಿಯಾಗಿ, ಸಮೂಹದ ಪ್ರೇರಕ ಶಕ್ತಿಯಾಗಿ ಬದುಕಿದರೆಂಬುದು ಮಾತ್ರ ದಿಟವೇ ಹೌದು. ಇಂದು ಗೌಡರು ಬದುಕಿದ್ದಿದ್ದರೆ 77ವರ್ಷ ತುಂಬುತ್ತಿತ್ತು ಆದರೆ ಇವತ್ತು ಅವರಿಲ್ಲ ಆದರೆ ಅವರ ವಿಚಾರ ನಮ್ಮೊಂದಿಗಿದೆ, ರಾಜಧಾನಿ ಬೆಂಗಳೂರಿನಲ್ಲಿ ಹೆಚ್ ಎನ್ ಸಂಸ್ಮರಣೆ ಕರ್ನಾಟಕ ಸರ್ಕಾರದ ಸಚಿವಾಲಯದ ಟಿ ಚನ್ನಬಸಪ್ಪ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಏರ್ಪಾಟಾಗಿದೆ. ಅರಕಲಗೂಡು ನಾಗರಿಕ ವೇದಿಕೆಯ ಯೋಗಾರಮೇಶ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರ ಸಹವರ್ತಿಗಳು ಎಚ್ ಎನ್ ನಂಜೆಗೌಡರನ್ನು ಸ್ಮರಿಸಿಕೊಳ್ಳಲಿದ್ದಾರೆ.ನೀವೂ ಜೊತೆಯಾಗಿ ನುಡಿನಮನ ಸಲ್ಲಿಸಿ.
ಈ ಲೇಖನವನ್ನು ಸಾಂಧರ್ಭಿಕವಾಗಿ ದಟ್ಸ್ ಕನ್ನಡದಲ್ಲಿ ಸಾದ್ಯಂತವಾಗಿ ಪ್ರಕಟಿಸಿ ಉಪಯುಕ್ತ ಸಲಹೆ ನೀಡಿದ ಸಂಪಾದಕರಾದ ಶ್ಯಾಂಸುಂದರ್ ಅವರಿಗೆ ಧನ್ಯವಾದಗಳು. ದಟ್ಸ್ ಕನ್ನಡದಲ್ಲಿ ಈ ಲೇಖನವನ್ನು ಓದಲು ಈ ಲಿಂಕ್ ಕ್ಲಿಕ್ಕಿಸಿ http://thatskannada.oneindia.in/news/2010/12/18/tribute-to-hn-nange-gowda-irrigation-expert.html 
Thanks to "SAMPADA"  to publish this article with Special Category, Read more click on http://sampada.net/????????-?????-???-???-????????????-???????????? 

ಸ್ವಯಂಕೃಷಿ ನೂತನ ಕನ್ನಡ ಛಾನಲ್

ಸ್ವಯಂಕೃಷಿ ನೂತನ ಕನ್ನಡ ಛಾನಲ್

Sunday, December 5, 2010

ಇಂಥಾ ಅಯ್ಯಪ್ಪ ಭಕ್ತರುಗಳು ಬೇಕಾ ಸ್ವಾಮಿ?

ಮೊನ್ನೆ ಮೊನ್ನೆ ಸಿಎಂ ಯಡ್ಯೂರಪ್ಪನವರ ಸಿಎಂ ಕುರ್ಚಿ ಹೋಗಿಯೇ ಬಿಡ್ತು ಅಂತ ಅಂದುಕೊಂಡಿರುವಾಗಲೇ, ಈವಯ್ಯ  ಪೂಜೆ ಪುನಸ್ಕಾರ, ಯಜ್ಞ-ಯಾಗ ಅಂತೆಲ್ಲ ಮಾಡ್ಕಂಡು ಇದುವರೆಗೂ ರಾಜ್ಯದಲ್ಲಿ ಸಿಎಂ ಕುರ್ಚಿ ಏರಿದ ಮುಖ್ಯಮಂತ್ರಿಗಳ್ಯಾರು ನೋಡದಷ್ಟು ದೇವಾಲಯಗಳನ್ನು ದೇಶದ ಉದ್ದಗಲಕ್ಕೂ ಸಂದರ್ಶಿಸಿ, ಬಿಜೆಪಿ ಹೈ ಕಮಾಂಡ್ ಗೆ ಕ್ಯಾರೆ  ಅನ್ನದೇ ತನ್ನ ಸ್ಥಾನದಲ್ಲೇ ಉಳಿದು ಕೊಂಡದ್ದು ಈಗ ಇತಿಹಾಸ.ಕಾಕತಾಳಿಯವೋ, ಯಡಿಯೂರಪ್ಪನ ಪೂಜಾಫಲವೋ ಗೊತ್ತಿಲ್ಲ  ಅಧಿಕಾರ ಸಧ್ಯಕ್ಕೆ ಉಳಿದುಕೊಂಡಿದೆ, ಮುಂದಕ್ಕೆ ಅವರು ನಂಬಿದ ದೇವರೇ ಕಾಪಾಡಬೇಕು.ಸ್ವಾಮಿಯೇ ಶರಣಂ ಅಯ್ಯಪ್ಪ!
ಇದು ಅಯ್ಯಪ್ಪ ಸ್ವಾಮಿಯ ಭಕ್ತರ ಮಾಸ, ಇನ್ನು ಎರಡು ತಿಂಗಳು ಇವರ ಹಾವಳಿ ತಪ್ಪಿದ್ದಲ್ಲ. ಅಯ್ಯಪ್ಪ ಭಕ್ತರ ಹಾವಳಿ ನಿನ್ನೆ ಮೊನ್ನೆಯದಲ್ಲ  ಇದು ನಿರಂತರವಾಗಿ ದಶಕಗಳಿಂದ ಬಂದತದ್ದು. ಮನುಷ್ಯ ಹೆದರೋದು ಒಂದು ದೆವ್ವ, ಇನ್ನೊಂದು ದೇವರು. ಈ ಎರಡು ಹೆಸರನ್ನು ಬಳಸಿಕೊಂಡು ಜನರನ್ನು ಏನು ಬೇಕಾದರೂ ಮಾಡಿಬಿಡಬಹುದು. ಇದು ಭಾರತದಂತಹ ಸನಾತನ ಸಾಂಸ್ಕೃತಿಕ ಪರಂಪರೆಯ ದೇಶದಲ್ಲಿ ಮಾತ್ರ ಸಾಧ್ಯ. ಇಲ್ಲಿ ನಂಬಿಕೆಗೆ, ಬಾವನೆಗಳಿಗೆ, ಸಂಬಂಧಗಳಿಗೆ ಇನ್ನಿಲ್ಲದಷ್ಟು ಬೆಲೆ ಇದೆ. ಹಾಗಾಗಿಯೆ ಒಂದಷ್ಟು ನೆಮ್ಮದಿಯೂ ಇದೆ ಆದರೆ ಇದರ ನೆರಳಲ್ಲೆ ವಂಚನೆಯೂ ಜಾಗೃತಾವಸ್ಥೆಯಲ್ಲಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಹೌದು ನಂಬಿಕೆಗಳಿಗೆ, ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಾಗ ಎಂತಹ ಪರಿಸ್ಥಿತಿ ಏರ್ಪಡುತ್ತದೆ ? ಇದರಿಂದ ಆಗುವ ಲಾಭ-ನಷ್ಟ ಏನು? ಸಾಮಾಜಿಕವಾಗಿ ಬೀರುವ ಪರಿಣಾಮವೇನು ? ಆಧುನಿಕತೆಗೆ ದಾಪುಗಾಲು ಹಾಕುತ್ತಿರುವ ದಿನಗಳಲ್ಲೂ ಇವೆಲ್ಲಾ ಬೇಕಾ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನಾವರಿಸುವುದು ಸಹಜವೇ. 
          
ಅಯ್ಯಪ್ಪ ಮಹಾತ್ಮೆ:ಇವತ್ತು  ದೇಶಾಧ್ಯಂತ ಅತೀ ಹೆಚ್ಚು ಭಕ್ತರನ್ನು ಹೊಂದಿದ ದೇವರು ತಿರುಪತಿಯ ಏಳು ಕುಂಡಲವಾಡ ಗೋವಿಂದ ಅಲಿಯಾಸ್ ತಿರುಪತಿ ವೆಂಕಟೇಶ್ವರ,ಎರಡನೇ ಸ್ಥಾನದಲ್ಲಿ ಬರುವುದೇ ಅಯ್ಯಪ್ಪ ಭಕ್ತರು, ಉಳಿದಂತೆ ದುರ್ಗಾದೇವಿ,ಸಂತೋಷಿಮಾತಾ,ಹೀಗೇಗೋ ನಾನಾ ಅವತಾರದ ಸಾವಿರಾರು ರೂಪಗಳಲ್ಲಿ ಬರುವ ದೇವರುಗಳು ಉಂಟು. ಅವರವರ ನಂಬಿಕೆ ಮತ್ತು ಶಕ್ತಾನುಸಾರ ಭಕ್ತಾದಿಗಳನ್ನು ಹೊಂದಿರುವ ಪ್ರತೀ ದೇವರುಗಳಿಗೂ ಒಂದೊಂದು ಹಿನ್ನೆಲೆಯಿದೆ. ಇರಲಿ ಅಯ್ಯಪ್ಪನ ಬಗ್ಗೆ ಹೇಳುವುದಾದರೆ ಈತನಿಗೆ ಸರಿಸುಮಾರು 50ಮಿಲಿಯನ್ ಭಕ್ತರು ಪ್ರತೀ ವರ್ಷವೂ ಶಬರಿಮಲೆಗೆ ತೆರಳಿ ಪೂಜೆ ಅರ್ಪಿಸುತ್ತಾರೆ! ತಿನ್ನಲು ಒಂದು ಹೊತ್ತಿನ ಅನ್ನ,ಸೂರು ಮತ್ತು ಒಂದು ನೆಮ್ಮದಿಯ ಬದುಕು ಇಲ್ಲದಿದ್ದರೂ ಭಕ್ತಿ ಭಾವದ ಹೆಸರಿನಲ್ಲಿ ಉಳಿಸಿದ ಹಣವೋ, ಸಾಲ-ಸೋಲವೋ ಮಾಡಿ  ಹಣ ಸಂಗ್ರಹಿಸಿ ಯಾತ್ರೆಗೆ ಹೊರಡುವ ಜನರಿಗೆ ಅಂತಿಮವಾಗಿಯಾದರೂ ನೆಮ್ಮದಿ ದಕ್ಕುತ್ತದಾ ಗೊತ್ತಿಲ್ಲ. ಅಯ್ಯಪ್ಪನ ವಿಷಯದಲ್ಲಿ ಮಾತ್ರ ಇಂತಹವೆಲ್ಲ ತಪ್ಪುವುದಿಲ್ಲ.
          ಸ್ವಾಮಿಯೇ ಶರಣಂ ಅಯ್ಯಪ್ಪ ಎಂದರೆ "ಆಶ್ರಯ ಕೊಡು ಭಗವಂತ"  ಎಂದು ಅರ್ಥೈಸಲಾಗುತ್ತದೆ. ಅಯ್ಯಪ್ಪನ ಕುರಿತು 2-3ರೀತಿಯ ಕತೆಗಳಿವೆ ಅದು ನಿಮಗೂ ತಿಳಿದದ್ದೇ. ಹರಿ-ಹರನ ಸಮಾಗಮದಿಂದ ಅಯ್ಯಪ್ಪ ಜನಿಸಿದ ಎನ್ನಲಾಗುತ್ತದೆ ಇದು ವೈಜ್ಞಾನಿಕವಾಗಿ ನಂಬಲು ಅಸಾಧ್ಯವಾದ ಮಾತು. ಕೇರಳದಲ್ಲಿ ಪ್ರಚಲಿತದಲ್ಲಿರುವಂತೆ ಪಂಡಾಲಂನ ರಾಜ ನಿಗೆ ಕಾಡಿನಲ್ಲಿ ಸಿಕ್ಕ ಮಗುವೇ ಅಯ್ಯಪ್ಪ,ಈತನಿಗೆ ಮಕ್ಕಳಿಲ್ಲದ ಕೊರತೆ. ಇವನೋ ಶಿವ ಭಕ್ತ ಈತನ ರಾಣಿ, ವಿಷ್ಣುವಿನ ಆರಾದಕಿ. ಹಾಗಾಗಿ ಹರಿ-ಹರ ಸಮಾಗಮದಿಂದ ಜನಿಸಿದ ಮಗು ರಾಜನಿಗೆ ವರದ ರೂಪದಲ್ಲಿ ದೊರಕಿತಂತೆ. ದೊರೆತ ಮಗುವಿನ ಕಂಠದಲ್ಲಿ ಹೊಳೆಯುವ ಮುತ್ತಿನ ಹಾರವಿದ್ದುದರಿಂದ ಮಣಿಕಂಠನೆಂಬ ಹೆಸರು ಬಂತೆಂಬ ಪ್ರತೀತಿಯೂ ಇದೆ. ಹೀಗಿರುವಾಗ ರಾಣಿಗೆ ಮಗು ಜನಿಸಿತು. ಆದರೆ ತನಗೆ ಕಾಡಿನಲ್ಲಿ ಸಿಕ್ಕ ಮಣಿಕಂಠನಿಗೆ ಯುವರಾಜನ ಪಟ್ಟವನ್ನು ಕಟ್ಟಲು ಪಂಡಾಲ ರಾಜ ಮುಂದಾಗಿದ್ದರಿಂದ  ಆತನ ಮಂತ್ರಿ ಕುತಂತ್ರ ನಡೆಸಿ ರಾಣಿಯ ತಲೆ ಕೆಡಿಸಿ ಮಣಿಕಂಠನಿಗೆ ಪಟ್ಟವನ್ನು ತಪ್ಪಿಸುವ ಸಲುವಾಗಿ ತಂತ್ರ ಹೂಡಿದ,ಅದರಂತೆ ಕಾಯಿಲೆ ಬಿದ್ದ ರಾಣಿಯ ಆರೋಗ್ಯ ಸುಧಾರಣೆಗೆ ಹುಲಿಯ ಹಾಲನ್ನು ತರುವಂತೆ ಮಣಿಕಂಠನಿಗೆ ಸೂಚಿಸಲಾಯಿತು.
             ಅಮ್ಮನ ಅಣತಿಯನ್ನು ಪಾಲಿಸಲು ಕಾಡಿಗೆ ಹೊರಟ ಮಣಿಕಂಠನಿಗೆ ಕಾಡಿನಲ್ಲಿ ಕಂಠಕ ಪ್ರಾಯಳಾಗಿದ್ದ ಮಹಿಷಿ ಎದುರಾದಳು ಆಕೆಯನ್ನು ಸಂಹಾರ ಮಾಡಿದಾಗ ಮಹಿಷಿಯ ಪೂರ್ವಜನ್ಮದ ಸುಂದರ ಯುವತಿ ರೂಪುತಳೆದಳು.ಋಷಿ ಮುನಿಯೊಬ್ಬರ ಶಾಪದಿಂದ ಆಕೆ ಮಹಿಷಿಯಾಗಿ ಜನ್ಮ ತಾಳಿದ್ದಳು. ಆ ಸುಂದರ ಯುವತಿ ಮಣಿಕಂಠನಿಗೆ ಮಾರುಹೋಗಿ ಮದುವೆಯಾಗುವಂತೆ ಪಟ್ಟುಹಿಡಿದಳು. ಆದರೆ ಅದನ್ನು ನಯವಾಗಿ ನಿರಾಕರಿಸಿದ ಅಯ್ಯಪ್ಪ ತಾನು ನೆಲೆಯಾಗುವ ಶಬರಿಮಲೈಗೆ ಭಕ್ತರು ಬರುವುದನ್ನು ನಿಲ್ಲಿಸಿದಾಗ ಆಕೆಯನ್ನು ವರಿಸುವ ಭಾಷೆಯನ್ನಿತ್ತನಂತೆ. ಹಾಗಾಗಿಯೇ ಆಕೆಯ ದೇಗುಲ ಇವತ್ತಿಗೂ ಅಯ್ಯಪ್ಪನ ದೇಗುಲದ ಪಕ್ಕದಲ್ಲೇ ಇದೆ.ಕಾಡಿಗೆ ಬಂದ ಮಣಿಕಂಠ ಹುಲಿಯನ್ನು ಪಳಗಿಸಿ ಹುಲಿಯ ಹಾಲನ್ನು ತಂದೂ ಬಿಟ್ಟ ಆ ಮೂಲಕ ತನ್ನ ಮಾತೃಭಕ್ತಿಯನ್ನು ಸಾಬೀತು ಪಡಿಸಿದ ಅಯ್ಯಪ್ಪ ಅಂತಾರ್ಧನನಾದ.
            ಅನ್ನಾಹಾರ ಬಿಟ್ಟ ರಾಜನಿಗೆ ಕನಸಿನಲ್ಲಿ ಕಾಣಿಸಿಕೊಂಡು ಶಬರಿಮಲೈನಲ್ಲಿ ನೆಲೆಸುವ ಮಾತು ಕೊಟ್ಟ ಅದರಂತೆ  ಮುಂದೆ  ಶಬರಿಮಲೈನಲ್ಲಿ ನೆಲೆ ನಿಂತ. ಇವತ್ತಿಗೂ ಮಣಕಂಠನನ್ನು ಇಷ್ಟಪಟ್ಟ ಆ ಸುಂದರ ಯುವತಿಯ ದೇಗುಲ, ಅಯ್ಯಪ್ಪನ ದೇಗುಲದ ಸನಿಹದಲ್ಲೇ ಇದೆ. ಆಕೆಯನ್ನು 'ಮಾಲಿಕಾಪುರತಮ್ಮ" ಎಂದೇ ಕರೆಯಲಾಗುತ್ತದೆ. ಶಬರಿಮಲೈ ಅಯ್ಯಪ್ಪನ ದರ್ಶನ ಪಡೆಯಲು 18ಮೆಟ್ಟಿಲುಗಳನ್ನು ಬೆಟ್ಟಕ್ಕೆ ನಿರ್ಮಿಸಲಾಗಿದೆ ಅವಕ್ಕೆ ಚಿನ್ನದ ಲೇಪನವಿದೆ. ಭಕ್ತಿ-ಶ್ರದ್ದೆಯಿಂದ ನಡೆದುಕೊಂಡವರು ಮಾತ್ರ ಅದನ್ನು ಹತ್ತಲು ಸಾಧ್ಯ ಎಂದೇ ನಂಬಿಕೆಯಿದೆ.

ಏನಿದು ಮಕರ ಜ್ಯೋತಿ  ಮಕರ ಸಂಕ್ರಾಂತಿಯ ದಿನದಂದು ಮಕರ ಜ್ಯೋತಿಯ ರೂಪದಲ್ಲಿ ಅಯ್ಯಪ್ಪನೇ ಇಂದಿಗೂ ದರ್ಶನ ಕೊಡುತ್ತಾನೆ ಎಂದು ನಂಬಲಾಗುತ್ತಿದೆ. ಈ ಬಗ್ಗೆ ಹಲವಾರು ವಾದ-ವಿವಾದಗಳು ಇವೆ. ಈ ವಿವಾದ ಕೋರ್ಟು ಮೆಟ್ಟಿಲು ಏರಿತ್ತು, ಅಲ್ಲಿ ಧಾರ್ಮಿಕ ವ್ಯವಸ್ಥೆಗಳನ್ನು ನೋಡುತ್ತಿರುವ 80ವಯಸ್ಸಿನ ಹಿರಿಯ ಮುಖಂಡರೊಬ್ಬರು ಹೇಳುವಂತೆ ದೇಗುಲದ ಆಡಳಿತ ಮಂಡಳಿಯೇ ಪ್ರತೀ ವರ್ಷ ಮಕರ ಸಂಕ್ರಮಣದ ದಿನದಂದು ಜ್ಯೋತಿಯ ರೂಪದಲ್ಲಿ ಕರ್ಪೂರ ಉರಿಸಲಾಗುತ್ತದೆ ಅದೇ ಸಮಯಕ್ಕೆ ಆಕಾಶದಲ್ಲಿ ಕಾಣುವ ಹೊಳೆಯುವ ನಕ್ಷತ್ರವೊಂದು ಬೆಟ್ಟದ ಸಾಲಿನಲ್ಲಿ ಉರಿಸುವ ಜ್ಯೋತಿಗೆ ಸಮನಾಗಿ ಕಾಣಿಸುವುದರಿಂದ ಅದು ಇನ್ನು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದಂತೆ ಅದನ್ನು ನೋಡುವ ಭಕ್ತರು ಅಯ್ಯಪ್ಪನೇ ದರ್ಶನ ಕೊಟ್ಟ ನೆಂದು ಪುನೀತರಾಗುತ್ತಾರೆ ಇರಲಿ ಭಕ್ತಿ-ನಂಬಿಕೆ ಅವರವರ ಭಾವಕ್ಕೆ ಸಂಬಂಧಿಸಿದ್ದು.
ಮಾಲೆ ಧರಿಸುವವರು ಯಾರು? ಮುಖ್ಯವಾಗಿ ನಾವಿಲ್ಲಿ ಮಾತನಾಡಬೇಕಾದ್ದು ಅಯ್ಯಪ್ಪನ ಭಕ್ತರ ಬಗೆಗೆ. ಬದುಕಿನಲ್ಲಿ ಒಂದು ಶಿಸ್ತು ಕಂಡುಕೊಳ್ಳದ, ಸಮಾಜ ಕಂಟಕನಾದ, ಸೋಲಿನ ಸುಳಿಗೆ ಸಿಕ್ಕವರಿಗೆ ಅಯ್ಯಪ್ಪ ಮಾಲೆಯನ್ನು ಹಾಕಿಸಲಾಗುತ್ತದೆ. ಈ ಪೈಕಿ ಅತ್ಮವಿಶ್ವಾಸದ ಹುಕಿಗೆ, ಶೋಕಿಗೆ ಬಿದ್ದು ಮಾಲೆ ಹಾಕುವವರು ಉಂಟು. ಅಯ್ಯಪ್ಪ ಮಾಲೆ ಹಾಕಿದ ಮೇಲಾದರೂ ತನ್ನ ಬದುಕಿನಲ್ಲಿ ಭರವಸೆ ಮೂಡಿಸುವ ರೀತಿ ಎಲ್ಲರಿಗೂ ಬೇಕಾದವರಾಗಿ ಬದುಕುತ್ತಾರೆಂಬ ನಿರೀಕ್ಷೆ ಒಂದು 10ಪರ್ಸೆಂಟಿನಷ್ಟು ನಿಜವಾದರೆ ಬಾಕಿ 90ಪರ್ಸೆಂಟಿನಷ್ಟು ಜನ ಹುಟ್ಟುಗುಣ ಸುಟ್ಟರೂ ಹೋಗದೆನ್ನುವಂತೆ ಮಾಮೂಲಿಯಾಗಿ ಬದುಕಿ ಬಿಡುತ್ತಾರೆ. ಮಾಲೆ ಹಾಕಿದಷ್ಟು ದಿನ ಮಾತ್ರ ಅಚ್ಚರಿ ಹುಟ್ಟುವಷ್ಟು ಬದಲಾವಣೆ ಕಾಣುವ ಈ ಮಂದಿ ಉಳಿದಂತೆ ಮಾಮೂಲಿ ವರಸೆಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ. ಹೀಗಿರುವಾಗ ಅಯ್ಯಪ್ಪ ಮಾಲೆ ಬೇಕಾ? ಎಂಬ ಪ್ರಶ್ನೆ ಹುಟ್ಟುತ್ತದೆ.
             ಅಯ್ಯಪ್ಪ ಮಾಲೆ ಧರಿಸಿದವನು 41ದಿನಗಳ ಕಾಲ ಕಠಿಣ ಶಿಸ್ತಿನಲ್ಲಿರಬೇಕಾಗುತ್ತದೆ. ಪ್ರತೀ ನಿತ್ಯ 108ಭಾರಿ ಅಯ್ಯಪ್ಪನ ನಾಮಸ್ಮರಣೆ ಮಾಡಬೇಕಾಗುತ್ತದೆಂಬ ನಿಯಮವಿದೆ, ಆದರೆ ಎಷ್ಟು ಮಂದಿ ಕೋಡಂಗಿಗಳಿಗೆ ಈ ಬಗ್ಗೆ ಅರಿವಿದೆ? ದೇವರ ಮಾಲೆಯ ಹೆಸರಿನಲ್ನಲಿ, ಭಕ್ತಿಯ ಹೆಸರಿನಲ್ಲಿ ನಯಾ ಪೈಸಾದ ಬದಲಾವಣೆಯೂ ಆಗದಿದ್ದರೆ ಅಯ್ಯಪ್ಪ ಮಾಲೆಯಾದರೂ ಏಕೆ ಬೇಕು? ಬಹುತೇಕ ಅಯ್ಯಪ್ಪ ಮಾಲೆ ಧರಿಸುವವರು ಗ್ರಾಮೀಣ ಪ್ರದೇಶದದವರು ಮತ್ತು ಶ್ರಮಿಕರು ಆಗಿರುತ್ತಾರೆ. ಮಾಲೆ ಧರಿಸಿ ಶಬರಿಮಲೈಗೆ ತೆರಳಲು ಸಾವಿರಾರು ರೂಪಾಯಿಗಳ ಚೀಟಿ ಹಾಕಿ ಅಯ್ಯಪ್ಪನ ದರ್ಶನವಾದ ಮೇಲೆ ಬರಗೆಟ್ಟವರಂತೆ ಕುಡಿತ-ಇಸ್ಪೀಟು-ಮಾಂಸಹಾರ-ಮೋಜಿನ ಪ್ರವಾಸ ಗಳಲ್ಲಿ ತೊಡಗುವ ಅನೇಕ ಮಂದಿ ಅಯ್ಯಪ್ಪ ಭಕ್ತಾದಿಗಳು ಸಾಧಿಸುವುದೇನನ್ನು? ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆ ಕೊಡಲೋ ಎಂಬಂತೆ  ಮಾಲೆ ಹಾಕುವ ಈ ಮಂದಿ ತಾವೇ ಹೇಳಿಕೊಂಡರೆ ಸಾಲದೆಂಬಂತೆ ಊರಿನ ನಾಲ್ಕು ದಿಕ್ಕಿಗೂ ಮೈಕು ಹಾಕಿ ರಾತ್ರಿಯಿಡೀ ಭಜನೆ ಮಾಡುವುದು ಪೂಜೆ ಸ್ನಾನದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರವನ್ನು ಹಾಳು ಮಾಡುವುದು ಸರಿಯೇ?
            ಮನೆಯಲ್ಲಿ ತಿನ್ನಲು ಅನ್ನ-ಸೂರಿಗೆ ದಿಕ್ಕಿಲ್ಲದಿದ್ದರೂ ಕೂಡಿಟ್ಟ ಹಣವನ್ನು ಯಾತ್ರೆಗೆಂದು ವೆಚ್ಚಮಾಡಿ ಸಾಧಿಸುವುದೇನು?  ಪ್ರಸಕ್ತ ದಿನಗಳಲ್ಲಿ ದೇವರ ಮೇಲಿನ ನಂಬಿಕೆಗಳು ತಪ್ಪಬೇಕು ಎಂದು ನಾನು ಹೇಳುವುದಿಲ್ಲ ಆದರೆ ಭಕ್ತಿ ಭಾವ ನಮ್ಮನ್ನು ಒಂದು ಅನೂಹ್ಯ ಲೋಕಕ್ಕೆ ಕರೆದೊಯ್ಯುತ್ತದೆ, ಸಮಾಜದಲ್ಲಿನ ಅಶಾಂತಿಗೆ ತಾತ್ಕಾಲಿಕವಾಗಿಯಾದರೂ ತಡೆ ಹಾಕುತ್ತದೆ. ಕ್ರೂರ ಮನಸ್ಸುಗಳನ್ನು ಮಣಿಸುತ್ತದೆ ಆದರೆ ಭಕ್ತಿಭಾವದ ಹೆಸರಿನಲ್ಲಾದರೂ ಜನ ಬದಲಾಗಬೇಕು, ಸಮಾಜದ ಒಳಿತಿಗೆ ಪೂರಕವಾಗುವ ರೀತಿ ನಡವಳಿಕೆಗಳನ್ನಿಟ್ಟುಕೊಂಡಾಗ ಮಾತ್ರ ನಂಬಿದ ಭಕ್ತಿಗೆ ಚ್ಯುತಿ ಬಾರದು ಅಲ್ಲವೇ?

Sunday, November 14, 2010

ಎಡಬಿಡಂಗಿ ಸರ್ಕಾರಕ್ಕೆ ಮಗ್ಗುಲ ಮುಳ್ಳುಗಳು!

ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನು ಮಾಡುತ್ತೆ? ಅಲ್ವಾ ಹಾಗೆ ಇವತ್ತಿನ ರಾಜ್ಯ ಸರ್ಕಾರದ ಸ್ಥಿತಿ ಇದೆ. ದಕ್ಷಿಣ ಭಾರತದಲ್ಲಿ ಪ್ರಥಮ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಅದಕ್ಕೆ ತಕ್ಕುದಾದ ರೀತಿಯಲ್ಲಿ ನಡೆಯುತ್ತಿಲ್ಲ. ವಿರೋಧ ಪಕ್ಷದಲ್ಲಿ  ಹಲವು ದಶಕಗಳ ಕಾಲ ನಾಯಕನಾಗಿ ನುರಿತ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಪೂರಕವಾಗಿ ಸಮಯ ಸಾಧಕತನ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳು ಅಧಿಕಾರದ ವ್ಯಾಮೋಹಕ್ಕೆ ಬಿದ್ದು ಕಾಟ ಕೊಡುತ್ತಿದ್ದಾರೆ. ಎಲ್ಲಾ ಪಕ್ಷಗಳ ಶಾಸಕರುಗಳು ದುಡ್ಡಿಗೆ ತಮ್ಮನ್ನು ಮಾರಿಕೊಳ್ಳುತ್ತಾ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ದೊಡ್ಡಣ್ಣನಂತಿರ ಬೇಕಾಗಿದ್ದ ರಾಜ್ಯಪಾಲ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ನಡೆದು ಕೊಳ್ಳುತ್ತಿದ್ದಾರೆ.  ಈ ನಡುವೆ ಮತದಾರ ದಿಗ್ಮೂಡನಾಗಿ ಇವನ್ನೆಲ್ಲಾ ನೋಡುವಂತಾಗಿದೆ. ಹಗರಣ ತಮಗೆ ಹೊಸದಲ್ಲ ಎನ್ನುವಂತೆ ಕೆಐಎಡಿಬಿ ಹಗರಣದ ಮೂಲಕ ಸ್ವಜನ ಪಕ್ಷಪಾತ ಆರೋಪಕ್ಕೆ ಸಿಎಂ ಯಡಿಯೂರಪ್ಪ ಸಿಲುಕಿದ್ದಾರೆ. ಇಂತಹ ಸಂಧಿಗ್ದ ಸನ್ನಿವೇಶದಲ್ಲಿ ರಾಜ್ಯದ ವಿಧಾನ ಸಭಾ ಚುನಾವಣೆಗಳು ಏಪ್ರಿಲ್-ಮೇ ವೇಳೆಗೆ ನಡೆದರೂ ಅಚ್ಚರಿ ಪಡಬೇಕಿಲ್ಲ.ಆಂತರಿಕ ಶಿಸ್ತಿಗೆ ಹೆಸರಾದ ಪಕ್ಷವಿದ್ದರೂ ಯಾಕೆ ಇಂತಹ ಅಭದ್ರತೆ ಕಾಡುತ್ತಿದೆ? ಬದಲಾದ ಸನ್ನಿವೇಶಗಳೇನು?ರಾಜ್ಯದ ರಾಜಕೀಯ ಎಲ್ಲಿಗೆ ಬಂದು ತಲುಪಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 
       ಮೊನ್ನೆ ನನ್ನ ಯುವ ಮಿತ್ರನೊಬ್ಬ 'ಇನ್ಮುಂದೆ ವೋಟ್ ಮಾಡಬಾರ್ದು ಅಂತ ನಿರ್ಧರಿಸಿ ಬಿಟ್ಟಿದೀನಿ, ಈ ರಾಜಕೀಯದೋರ ಆಟಗಳನ್ನು ನೋಡಿ ಸಾಕಾಗಿದೆ' ಎಂದ. ಇತ್ತೀಚೆಗೆ ಶಾಸಕರ ತಮಿಳುನಾಡು-ಹೈದರಾಬಾದ್-ಗೋವಾ ರೆಸಾರ್ಟ್ ಪ್ಯಾಕೇಜ್ ಪ್ರವಾಸ ಆತನನ್ನ ಕಂಗೆಡಿಸಿತ್ತು. ಪತ್ರಿಕೆ ತೆಗೆದರೂ ಅದೇ ಸುದ್ದಿ, ಟೀವಿ ಚಾನೆಲ್ ತಿರುಗಿಸಿದರೂ ಅದೇ ಸುದ್ದಿ ಬದುಕಿನ ಜಂಜಡದಲ್ಲಿ ತೀರಾ ರೇಜಿಗೆ ಹುಟ್ಟಿಸಿದ ಸದರಿ ಸುದ್ದಿ ಆತನ ಮನಸ್ಥಿತಿಗೆ ಕಾರಣವಾಗಿತ್ತು. ಯಾಕೆ ಹೀಗಾಗುತ್ತೆ? ರಾಜಕೀಯದಲ್ಲಿ ಸ್ಥಿತ್ಯಂತರಗಳು ಹೊಸದೇನಲ್ಲ,ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಉಂಟಾದ ರಗಳೆಗಳಿವೆಯಲ್ಲ ಅಂತಹವು ಈ ಹಿಂದೆ ಘಟಿಸಿರಲಿಲ್ಲ. ಅಲ್ಪ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಪಕ್ಷೇತರರನ್ನು ಒಲಿಸಿಕೊಂಡು ಸರ್ಕಾರ ರಚಿಸಿತು. ಆಮೇಲೆ ಸರ್ಕಾರವನ್ನು ಸುಭದ್ರ ಗೊಳಿಸಲು ಶಾಸಕರ ಬೇಟೆ ಆರಂಭಿಸಿತು. ಒಬ್ಬೊಬ್ಬ ಶಾಸಕನಿಗೂ ನಿಗಮ-ಮಂಡಳಿ ಅಧ್ಯಕ್ಷಗಿರಿ, ಸಚಿವ ಸಂಪುಟದಲ್ಲಿ ಸ್ಥಾನ ಪ್ಲಸ್ ಕೋಟಿ ಕೋಟಿ ದುಡ್ಡು ಕೊಟ್ಟು ಅನಿಷ್ಠ ಸಂಪ್ರದಾಯ ಹುಟ್ಟುಹಾಕಿದ ರೆಡ್ಡಿಗಳು ಮೊದಲಿಗೆ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದರು. ನಂತರ ಬ್ಲಾಕ್ ಮೇಲ್ ಶುರುವಿಟ್ಟುಕೊಂಡು ಸರ್ಕಾರವನ್ನು ಹೈರಾಣ ಮಾಡಿದರು. ಸಚಿವ ಸಂಪುಟದ ಸಚಿವರುಗಳೂ ದಿಕ್ಕು ದೆಸೆಯಿಲ್ಲದಂತೆ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲು ಶುರುವಿಟ್ಟರು. ಅನ್ನದಾತನಿಗೆ ವಂಚಿಸಿ ಆರ್ಥಿಕ ವಲಯದ ನೆಪದಲ್ಲಿ ದುಡ್ಡು ಮಾಡಿಕೊಂಡರು. ನೈತಿಕತೆಗೆ ಧಕ್ಕೆ ಬರುವ ರೀತಿಯಲ್ಲಿ  ಚಾರಿತ್ರ್ಯವನ್ನು ಬಹಿರಂಗವಾಗಿ ಹರಾಜಿಗಿಟ್ಟರು.ಮುಖೇಡಿ ಮುಖ್ಯಮಂತ್ರಿ ಕುರ್ಚಿಯ ಆಸೆಗೆ ಬಿದ್ದು ಭ್ರಷ್ಟಾಚಾರಕ್ಕೆ ಇಂಬು ಕೊಟ್ಟರು, ಹಗೆತನಕ್ಕೆ ಸಾಥ್ ನೀಡಿದರು. ಕನಿಷ್ಠ ತನ್ನ ಸಚಿವ ಸಂಪುಟದ ಸದಸ್ಯರನ್ನು ಹದ್ದುಬಸ್ತಿನಲ್ಲಿಟ್ಟು ಕೊಳ್ಳಲು ಆಗದ  ಮುಖ್ಯಮಂತ್ರಿಯಿಂದ ರಾಜ್ಯದ ಆಡಳಿತವನ್ನು ನಿಯಂತ್ರಿಸಲು ಸಾಧ್ಯವೇ? 
          ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿಯ ವಿರುದ್ಧ ಬಂಡೆದ್ದು ರೆಸಾರ್ಟು ಪ್ರವಾಸಕ್ಕೆ ಹೋದ ಬಿಜೆಪಿಯ ಸಚಿವರುಗಳನ್ನು ಉರಿಯುವ ಮನೆಯ ಗಳ ಹಿರಿದಂತೆ ಸಮಯ ಸಾಧಕತನ ಪ್ರದರ್ಶಿಸಿ ಆಮಿಷವೊಡ್ಡಿ ಸೆಳೆದ ಜಾತ್ಯಾತೀತ ಜನತಾದಳದ ಕುಮಾರಸ್ವಾಮಿ ಸಾಧಿಸಿದ್ದೇನು? ಕಾಂಗ್ರೆಸ್ ನಲ್ಲಿ ಕಾಲೆಳೆಯುವವರ ಮಧ್ಯೆಯೂ ವರ್ಚಸ್ಸು ಪ್ರದರ್ಶಿಸಿ ಬಿಜೆಪಿಯ  ಆಂತರಿಕ ಬಿಕ್ಕಟ್ಟನ್ನು ಲಾಭಕ್ಕೆ ತಿರುಗಿಸಿ ಮುಖ್ಯಮಂತ್ರಿಯಾಗುವ ಕನಸು ಕಂಡ ಸಿದ್ಧರಾಮಯ್ಯಗೆ ಇಂತಹದ್ದೆಲ್ಲ ಬೇಕಿತ್ತಾ? ಹಿಂದೆ ಅಪ್ಪನ ಮಾತು ತಿರಸ್ಕರಿಸಿ  ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ನೀಡಿದ್ದರೆ ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತೇ? ಒಂದಂತೂ ಸತ್ಯ ರಾಜಕೀಯದಲ್ಲಿ ಅಂತರ್ಗತವಾಗಿದ್ದ ಜಾತಿ ರಾಜಕೀಯ ಕುಮಾರಸ್ವಾಮಿಯ ತಪ್ಪು ಹೆಜ್ಜೆಯಿಂದಾಗಿ ಎದ್ದು ನಿಂತಿತು. ಪರಿಣಾಮ ಇವತ್ತು ಪಕ್ಷ ರಾಜಕೀಯಕ್ಕಿಂತ ಜಾತಿ ರಾಜಕೀಯ ಪ್ರಧಾನವಾಗಿದೆ. ಜಾತಿ ರಾಜಕೀಯದ ಪರಿಣಾಮ ಸರ್ಕಾರದ ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಇವತ್ತು ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಜಾತೀಯತೆಗೆ ಮನ್ನಣೆ ನೀಡಲಾಗಿದೆ, ಅನ್ಯ ಪಕ್ಷಗಳ ಶಾಸಕರುಗಳ ಕ್ಷೇತ್ರಕ್ಕೆ ಅಭಿವೃದ್ದಿಯ ಸೋಂಕು ಇಲ್ಲ. ದಿಕ್ಕು ದೆಸೆಯಿಲ್ಲದಂತೆ ಪದೇ ಪದೇ ನಡೆಯುತ್ತಿರುವ ಐಎಎಸ್-ಐಪಿಎಸ್-ಕೆಎಎಸ್ ಅಧಿಕಾರಿಗಳ ವರ್ಗಾವರ್ಗಿ, ಉಸ್ತುವಾರಿ ಸಚಿವರುಗಳ ಬದಲಾವಣೆ ಅನಿಶ್ಚಿತ ರಾಜಕೀಯ ನಡೆಗಳು ರಾಜ್ಯದ ಆಡಳಿತಕ್ಕೆ ಅಡ್ಡಗಾಲಾಗಿವೆ. ಈ ನಡುವೆ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿರುವ ರಾಜ್ಯಪಾಲ ಬಿಜೆಪಿ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿ ಕಾಂಗ್ರೆಸ್ ಧೋರಣೆಯ ನಿಲುವುಗಳನ್ನು ಪ್ರದರ್ಶಿಸುತ್ತಾ ಆ ಸ್ಥಾನದ ಘನತೆಯನ್ನು ಕಳೆದಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಅನುಕೂಲ ಸಿಂಧುವಿನಂತೆ ವರ್ತಿಸುತ್ತಿರುವ ರಾಜ್ಯಪಾಲರು ಪಕ್ಷಾತೀತವಾಗಿ ನಡೆಯದೇ ಇರುವುದು ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುತ್ತಿದೆ.
ಈಗ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕಿದೆ, ಈ ಸಂಧರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ಮುಕ್ತವಾಗಿ  ಮೀಸಲಾತಿ ನಿಯಮಗಳನ್ನು ಪ್ರಕಟಿಸಿ ಚುನಾವಣೆಗೆ ಮುಂದಾಗಬೇಕಾಗಿದೆ. ಆದರೆ ಅನಧಿಕೃತವಾಗಿ ಲಭ್ಯ ಮಾಹಿತಿಯ ಪ್ರಕಾರ  ಚುನಾವಣಾ ಆಯೋಗ ಮೀಸಲಾತಿ ನಿಗದಿ ಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಅದನ್ನು ತನಗೆ ಬೇಕಾದಂತೆ ಬದಲಾವಣೆ ಮಾಡಿ ಪಂಚಾಯತ್ ರಾಜ್ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಸಹಿದೆ. ಸುಗ್ರಿವಾಜ್ಞೆಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆಯೆಂದು ಪ್ರತಿಪಕ್ಷಗಳ ಬೆದರಿಕೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮೀಸಲು ಬದಲಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ.ರಾಜ್ಯಪಾಲರು ಕಾನೂನು ಸೂಕ್ಷ್ಮ ತಿಳಿಸಿ ತಿರಸ್ಕರಿಸಿದ್ದಾರೆ. ವಾಸ್ತವವಾಗಿ ಆಯಕಟ್ಟಿನ ಕೆಲವು ಸ್ಥಳಗಳಲ್ಲಿ ಈಗಲೂ ಸಹಾ ಕಾಂಗ್ರೆಸ್ ಮತ್ತು ಜೆಡಿಎಸ್ ಒಲವಿನ ಕೆಲವು ಅಧಿಕಾರಿಗಳಿದ್ದು ಅವರುಗಳು ಬೇಕೆಂತಲೇ ಸೃಷ್ಟಿಸುತ್ತಿರುವ ಎಡವಟ್ಟುಗಳಿಂದ ಸಿಎಂ ಮುಖಭಂಗಕ್ಕೆ ಒಳಗಾಗುತ್ತಿದ್ದಾರೆ ಎಂಬ ಸುದ್ದಿಯಿದೆ. ಇನ್ನು ಸಚಿವ ಸಂಪುಟದ ಕಥೆ, ತನ್ನ ಒಟ್ಟು ಸದಸ್ಯ ಸ್ಥಾನಕ್ಕೆ ಅನುಗುಣವಾಗಿ ಅತೀ ಹೆಚ್ಚಿನ ಸಂಖ್ಯೆಯ ಸಚಿವರುಗಳನ್ನು ನೇಮಿಸಿಕೊಂಡಿರುವ ಯಡಿಯೂರಪ್ಪ ಮತ್ತಿಬ್ಬರು ಸಚಿವ ಸ್ಥಾನಗಳನ್ನು ತುಂಬಲು ರೆಡಿಯಾಗಿದ್ದಾರೆ, ಅಲ್ಲಿಗೆ ಸಚಿವ ಸ್ಥಾನಗಳ ಕೋಟಾ ತುಂಬುತ್ತದೆ ಆದರೂ ಇನ್ನೂ ಹತ್ತು ಹದಿನೈದು ಶಾಸಕರುಗಳು ಸಚಿವ ಪದವಿಯ ಕ್ಯೂ ನಲ್ಲಿ ಇರುವುದರಿಂದ ಯಡಿಯೂರಪ್ಪ ನವರಿಗೆ ಕಷ್ಟ ಕೈ ಹಿಡಿಯುವುದು ಖಚಿತ, ಇರುವವರನ್ನು ಕಿತ್ತು ಸಚಿವ ಸಂಪುಟಕ್ಕೆ ಹೊಸಬರನ್ನು ತೆಗೆದುಕೊಂಡರೆ ಅದು ಉರಿಯುವ ಭಿನ್ನಮತೀಯರ ಗುಂಪಿಗೆ ತುಪ್ಪ ಸುರಿದಂತಾಗುತ್ತದೆ.ಒಂದು ವೇಳೆ ನಾಯಕತ್ವ ಬದಲಾವಣೆ ಆಗಬೇಕು ಎಂಬುದಾದರೆ ಯಡಿಯೂರಪ್ಪ ಅದಕ್ಕೆ ಸಿದ್ದರಿಲ್ಲ, ಪರಿಸ್ಥಿತಿ ಕೈ ಮೀರಿದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲು ಸಿದ್ದರಿದ್ದಾರೆಂದು  ಮೂಲಗಳು ಹೇಳುತ್ತವೆ.ರಾಜ್ಯದ ರಾಜಕೀಯದಲ್ಲಿ ಇನ್ನು ಏನೇನು ನೋಡಬೇಕು.

Saturday, October 16, 2010

ಸರ್ವಧರ್ಮೀಯರ ಅರಕಲಗೂಡು ನವರಾತ್ರಿ




ಅರೆಮಲೆನಾಡು ಅರಕಲಗೂಡು ಸುಮಾರು 800 ವರ್ಷಗಳಷ್ಟು ಹಳೆಯ ಐತಿಹ್ಯವನ್ನು ಹೊಂದಿದ ಸ್ಥಳ. ತ್ರೇತಾಯುಗದಲ್ಲಿ ಗೌತಮ ಮಹಾಋಷಿಗಳು ಇಲ್ಲಿ ತಪಸ್ಸು ಮಾಡಿದರೆಂದು ಪ್ರತೀತಿ. ಅದೇ ಸಂದರ್ಭದಲ್ಲಿ ಗೌತಮ ಋಷಿ ಅರ್ಕೇಶ್ವರನನ್ನು ಇಲ್ಲಿ ಪ್ರತಿಷ್ಠಾಪಿಸಿದ್ದರಿಂದ ಅರ್ಕಪುರಿ ಎಂದು ಕರೆಸಿಕೊಳ್ಳುತ್ತಿದ್ದ ಊರು ಕಾಲಾಂತರದಲ್ಲಿ ಅರಕಲಗೂಡು ಎಂದಾಗಿದೆ.

ಶತಮಾನಗಳ ಹಿಂದೆ ಕೆರೋಡಿಯನ್ನು ಕೇಂದ್ರಸ್ಥಾನವಾಗಿ ಹೊಂದಿದ ಪಾಳೇಗಾರ ಶಿವಪ್ಪನಾಯಕನ ಆಳ್ವಿಕೆಗೆ ಒಳಪಟ್ಟಿದ್ದ ಅರಕಲಗೂಡು ಅಭಿವೃದ್ದಿಯೇ ಕಾಣದ ಒಂದು ಸಣ್ಣ ಪುರ. ಆಗೆಲ್ಲ ಅರಕಲಗೂಡು ತಾಲೂಕು ಮೈಸೂರು [^] ಅರಸರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಸಾಂಕೇತಿಕವಾಗಿ ಬನ್ನಿ ವೃಕ್ಷ ಕಡಿಯುವ ಮೂಲಕ ದಸರೆಯನ್ನು ಆಚರಿಸಲಾಗುತ್ತಿತ್ತು. ಅದರ ಕುರುಹಾಗಿ ಈಗಲೂ ಪಟ್ಟಣದ ಪೂರ್ವಕ್ಕೆ ಇರುವ ವಿಜಯದಶಮಿ [^]ಮಂಟಪ ಸಾಕ್ಷಿಭೂತವಾಗಿದೆ.

ಆದರೆ ಉತ್ಸವದ ರೀತಿ ಆಚರಿಸಿದ ಮಾಹಿತಿ ಸಧ್ಯ ಲಭ್ಯವಿಲ್ಲ. ನಂತರದ ದಿನಗಳಲ್ಲೂ ಸಣ್ಣ ಪ್ರಮಾಣದಲ್ಲಿ ದಸರೆ ನಡೆಯುತ್ತಿತ್ತಾದರೂ ಬರಬರುತ್ತಾ ದಸರೆ ಸಂಚಾಲನ ಸಮಿತಿಯೊಳಗಿನ ವೈಮನಸ್ಯ ಕಿತ್ತಾಟಗಳು ದಸರೆ ಉತ್ಸವಕ್ಕೆ ಅಡ್ಡಿಯಾಗಿದ್ದವು. 90 ರ ದಶಕದ ಮದ್ಯದಲ್ಲಿ ಪಟ್ಟಣದ ಪ್ರತಿಷ್ಠಿತರೆನಿಸಿದ ನಾಗೇಂದ್ರ ಶ್ರೇಷ್ಠಿ ಹಾಗೂ ಶಶಿಕುಮಾರ್, ವರದಸೇವಾ ಪ್ರತಿಷ್ಠಾನದ ಶ್ರೀನಿವಾಸ್ ಮತ್ತಿತರ ಮುಖಂಡರುಗಳು ಸೇರಿ ದಸರೆ ಉತ್ಸವಕ್ಕೆ ಮರುಚಾಲನೆ ನೀಡಲು ನಿರ್ಧರಿಸಿದರು.

ಈ ಬಗ್ಗೆ ಚರ್ಚಿಸಿ ಪಟ್ಟಣದಲ್ಲಿರುವ ಪಂಚ ಮಠಾಧಿಪತಿಗಳು ಮತ್ತು ವಿವಿಧ ಧರ್ಮದ ಮುಖಂಡರು ಒಂದಾಗಿ ದಸರ ಉತ್ಸವ ರೂಪುಗೊಳ್ಳಲು ಶ್ರಮಿಸಿದ್ದರ ಫಲವೇ ಇಂದಿನ ದಸರೆ. ಒಂದು ಸಾಂಸ್ಕೃತಿಕ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಗೊಂಡ ಅರಕಲಗೂಡು ದಸರ ವಿಶೇಷವೆಂದರೆ ಸರ್ವಧರ್ಮದವರು ಅಂದರೆ 18 ಕೋಮಿನ ಜನರನ್ನು ಸಂಘಟಿಸುವುದೇ ಆಗಿದೆ.

ದಸರಾ ಸಂಸ್ಕೃತಿಗೆ ಹೊಸ ಅರ್ಥ : ಈ ಕೈಕಂರ್ಯದಲ್ಲಿ ಎಲ್ಲರನ್ನೂ ಒಂದೇ ವೇದಿಕೆಗೆ ತರುವ ಪ್ರಯತ್ನದಲ್ಲಿ ಮಠಾಧೀಶರುಗಳು ಮತ್ತು ಧರ್ಮ ಗುರುಗಳು ತಾಲೂಕಿನಾಧ್ಯಂತ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸಿದ್ದರು. ಅದೇ ಸಂಪ್ರದಾಯ ಇವತ್ತಿಗೂ ಮುಂದುವರೆದಿದೆ. ಆದರೆ ಈಗ ಪಾದಯಾತ್ರೆಗೆ ಬದಲಾಗಿ ನವರಾತ್ರಿ [^]ಗೆ ಮುನ್ನ ಪ್ರತೀ ಹೋಬಳಿ ಕೇಂದ್ರಗಳಿಗೂ ತೆರಳಿ ಧಾರ್ಮಿಕ ಪ್ರವಚನ ನೀಡಿ ವಿಜಯದಶಮಿಯಂದು ಕೇಂದ್ರ ಸ್ಥಾನದಲ್ಲಿ ಸೇರುವಂತೆ ಮನವಿ ಮಾಡುತ್ತಾರೆ. ಆ ಮೂಲಕ ದಸರಾ ಉತ್ಸವಕ್ಕೆ ಸಾಮಾಜಿಕ ರೂಪವೂ ಸಿಗುತ್ತದೆ. ಹೀಗೆ ಅರಕಲಗೂಡು ದಸರಾ ಸಂಸ್ಕೃತಿಗೆ ಹೊಸ ಅರ್ಥವೇ ಸಿಕ್ಕಿದೆ. 

ಇನ್ನು ವಿಜಯದಶಮಿಯಂದು ಮದ್ಯಾಹ್ನ ೪ಗಂಟೆ ಸುಮಾರಿಗೆ ಗ್ರಾಮದೇವತೆ ದೊಡ್ಡಮ್ಮ ದೇವತೆಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಮುಗಿಯುವ ವೇಳೆಗೆ ವಿವಿಧ ಕೋಮಿನ ಜನರು ಆರಾಧಿಸುವ ದೇವಾನು ದೇವತೆಗಳನ್ನು ಸಿಂಗರಿಸಿ ಪ್ರತ್ಯೇಕ ವಾಹನಗಳಲ್ಲಿ ತಂದು ಸಾಲಾಗಿ ನಿಲ್ಲಿಸಲಾಗುತ್ತದೆ. ಕೋಟೆ ನರಸಿಂಹ ಸ್ವಾಮಿ ದೇಗುಲದಿಂದ ಆರಂಭವಾಗುವ ಮೆರವಣಿಗೆಗೆ ಸಂಘ ಸಂಸ್ಥೆಗಳು ತಾವು ಉತ್ಸವಕ್ಕಾಗಿಯೇ ಸಿದ್ದಪಡಿಸಿದ ಸ್ಥಬ್ದಚಿತ್ರಗಳನ್ನು ತರುತ್ತಾರೆ. ಉತ್ಸವದ ಅಂಗವಾಗಿ ನಾಡಿನ ವಿವಿಧ ಬಾಗಗಳಿಂದ ಆಗಮಿಸುವ ಕಲಾತಂಡಗಳಾ ಸೋಮನ ಕುಣಿತ, ಚಿಟ್ಟಿಮೇಳ, ಜಾನಪದ ಮೇಳ, ಕೀಲು ಕುದುರೆ, ಗೊಂಬೆ ಮೇಳ ಹಾಗೂ ಸಂಚಾರಿ ರಸಮಂಜರಿ ತಂಡ ಹೀಗೆ ಇನ್ನೂ ಹಲವು ಆಕರ್ಷಣೆಗಳು ದಸರಾ ಮೆರವಣಿಗೆಗೆ ಕಳೆ ನೀಡುತ್ತವೆ. 

ಕತ್ತಲಾಗುವ ವೇಳೆಗೆ ರಂಗಾಗುವ ಉತ್ಸವದ ಮೆರವಣಿಗೆಯ ಮುಂಭಾಗ ವಾದ್ಯ ಗೋಷ್ಠಿ ಇರುತ್ತದೆ. ಇವೆಲ್ಲಾ ಬಂದು ಸೇರುವ ಹೊತ್ತಿಗೆ ಸಾವಿರಾರು ಸಂಖ್ಯೆಯ ಜನರು ಸೇರಿರುತ್ತಾರೆ. ಹೂವು ಹಾಗೂ ವಿದ್ಯುದ್ದೀಪಗಳಿಂದ, ತಳಿರು-ತೋರಣಗಳಿಂದ ಊರಿನ ಪ್ರಮುಖ ಬೀದಿಗಳು ಕಂಗೊಳಿಸುತ್ತವೆ. ಈ ಸಂಧರ್ಭದಲ್ಲಿ ಮಡಿಕೇರಿ [^] ದಸರಾಗೆ ತೆರಳುವ ಪ್ರಯಾಣಿಕರು ಸಹಾ ಮಾರ್ಗ ಮದ್ಯೆ ನಿಂತು ಅರಕಲಗೂಡು ದಸರಾ ಉತ್ಸವದ ಆಕರ್ಷಣೆಯನ್ನು ಸವಿಯುತ್ತಾರೆ. ರಾತ್ರಿ 9 ಗಂಟೆ ಸುಮಾರಿಗೆ ಉತ್ಸವ ಪಟ್ಟಣದ ಪೂರ್ವದಿಕ್ಕಿನಲ್ಲಿರುವ ವಿಜಯದಶಮಿ ಮಂಟಪದ ಬಳಿ ಬಂದು ಸೇರುತ್ತದೆ. ಅಲ್ಲಿ ಬನ್ನಿ ವೃಕ್ಷಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಪೂಜಿಸಲ್ಪಟ್ಟ ಬಾಳೆ ಗಿಡವನ್ನು ತಾಲೂಕಿನ ದಂಡಾಧಿಕಾರಿಗಳು ಸಾಂಕೇತಿಕವಾಗಿ ಕತ್ತರಿಸುತ್ತಾರೆ.

ಕದಳಿ ವೃಕ್ಷ ಛೇಧನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯೊಂದಿಗೆ ಉತ್ಸವಕ್ಕೆ ತೆರೆ ಬೀಳುತ್ತದೆ. ಸರ್ಕಾರದ ಕೃಪಾಶೀರ್ವಾದವಿಲ್ಲದೇ ನಡೆಯುವ ಅರಕಲಗೂಡು ನವರಾತ್ರಿ ಸ್ವಾವಲಂಬನೆ ಮತ್ತು ಸಹಬಾಳ್ವೆಗೆ ಮಾದರಿಯಾಗಿದೆ.

ಲೇಖನವನ್ನು ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟಿಸಿದ ಸಂಪಾದಕರಾದ ಶ್ಯಾಮ್ ಸುಂದರ್ ಸರ್ ಗೆ ಕೃತಜ್ಞತೆಗಳು. http://thatskannada.oneindia.in/news/2010/10/15/arakalagudu-hasana-navaratri-all-religion-fest.html

Thursday, September 30, 2010

ಅಯೋಧ್ಯಾ ವಿವಾದ: ಮುಗಿಯದ ಕಗ್ಗಂಟು....!



ಅಯೋಧ್ಯಾ ಪ್ರಕರಣ ಕುರಿತು ಅಲಹಾಬಾದ್ ಮಹತ್ವದ ತೀರ್ಪನ್ನು ತನ್ನ ಪರಿಧಿಯಲ್ಲಿ ಪ್ರಕಟಿಸಿದೆ, ಆದರೆ ಸದರಿ ತೀರ್ಪಿನಿಂದ ಸಮಸ್ಯೆ ಇನ್ನೂ ಜಟಿಲವಾಗುವ ಅಪಾಯ ಎದುರಾಗಿದೆ. ಸದರಿ ವಿವಾದಿತ ಜಾಗವನ್ನು ರಾಮನ ದೇಗುಲಕ್ಕೆ, ನಿರ್ಮೋಹಿ ಅಖಾಡಕ್ಕೆ ಹಾಗೂ ಬಾಬರಿ ಮಸೀದಿ ಕ್ರಿಯಾ ಸಮಿತಿಗೆ ಹಂಚಿ ಸಾಮಾಜಿಕ ನ್ಯಾಯ ದೊರಕಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಆ ಮೂಲಕ ಸರಳವಾಗಿದ್ದ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಬಹುಶ: ವಾದಿ-ಪ್ರತಿವಾದಿಗಳ ವಾದ, ಸಾಕ್ಷ್ಯಗಳನ್ನು ಮಾತ್ರವೇ ಪರಿಗಣಿಸಿ ತನ್ನ ಚೌಕಟ್ಟಿನೊಳಗೆ ಲಖನೌ ಪೀಠ ತೀರ್ಪು ನೀಡಿದಂತಾಗಿದೆ. ಇಲ್ಲಿ ವಿವಾದಿತ ಸ್ಥಳ ಯಾರಿಗೆ ಸೇರಬೇಕು ಎನ್ನುವುದಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಪ್ರಸಕ್ತ ಸಂಧರ್ಭಕ್ಕೆ ಪೂರಕವಾಗಿ ದೇಶದ ಸಾಂಸ್ಕೃತಿಕ ಒಗ್ಗಟ್ಟನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಕುವ ಪ್ರಯತ್ನ ಬಹು ಮುಖ್ಯವಾದುದು ಎಂದು ಅನಿಸುತ್ತದೆ.
ನಮ್ಮ ದೇಶ ಸಾವಿರಾರು ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ದೌರ್ಜನ್ಯಕ್ಕೆ ಸಿಲುಕಿ ನಲುಗಿದೆ. ಆದರೆ ಭರತ ಖಂಡವನ್ನು ಸುಮಾರು 300ವರ್ಷಗಳ ಕಾಲ ಆಳಿದ ಮುಸಲ್ಮಾನರು ಹಿಂದೂಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಮತ್ತು ಭಾವನೆಗಳ ಮೇಲೆ ಎಸಗಿದ ಆಕ್ರಮಣ, ದೌರ್ಜನ್ಯ ಎಂದಿಗೂ ಮರೆಯಲಾಗದಂತಹುದು. ಇವತ್ತು ಭರತ ಖಂಡವೇನಾದರೂ ಛಿದ್ರವಾಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಇತಿಹಾಸದ ಪುಟಗಳಲ್ಲಿ ಸೇರಿ ಹೋದ ಮುಸಲ್ಮಾನರು!ಹರಿದು ಹಂಚಿ ಹೋದ ರಾಷ್ಟ್ರಗಳಾದ ಭಾಂಗ್ಲಾ, ಪಾಕೀಸ್ತಾನ, ಕಾಬೂಲ್, ಬರ್ಮಾ, ಜಾವಾ, ಸುಮಾತ್ರ, ಕಾಂಬೋಡಿಯಾ ಇತ್ಯಾದಿಗಳಲ್ಲಿ ಇವತ್ತಿಗೂ ಹಿಂದೂಗಳ ಮೇಲೆ ನಿರಂತರವಾದ ಹಲ್ಲೆ ಜಾಗೃತ ಸ್ಥಿತಿಯಲ್ಲಿದೆ,ಧರ್ಮ ಬದಲಿಸುವ ಕ್ರಿಯೆಗೆ ಒಪ್ಪದ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ, ಇದಕ್ಕೆ ಸಾಕ್ಷ್ಯಧಾರಗಳು ಸಹಾ ಜಾಗತಿಕ ಮಟ್ಟದಲ್ಲಿ ಲಭ್ಯವಿದೆ . ಹಿಂದೂಗಳ ಭಾವನೆಯ ಸಂಕೇತವಾದ ಸಾಂಸ್ಕೃತಿಕ ಸ್ಮಾರಕಗಳು, ದೇಗುಲಗಳನ್ನು ನಾಶಪಡಿಸುವ ಕ್ರಿಯೆ ಜಾರಿಯಲ್ಲಿದೆ. ಹೀಗಿದ್ದಾಗ್ಯೂ ಭಾರತದಲ್ಲಿ ಮತೀಯವಾದವನ್ನು ತೊಡೆದು ಹಾಕುವ ರೀತಿಯಲ್ಲಿ ಸಾಂಸ್ಕೃತಿಕ-ಸಾಮಾಜಿಕ ಒಗ್ಗಟ್ಟು ಇರುವುದನ್ನು ಕಾಣಬಹುದು. ಭಾವೈಕ್ಯತೆಯ ಮಂದಿರಗಳು, ಗುಮ್ಮಟಗಳು ಧಾರ್ಮಿಕ ಕೇಂದ್ರಗಳನ್ನು ಸಹಜೀವನದ ಬದುಕುಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ವಿಶಾಲವಾಗಿ ಆಲೋಚಿಸುವವರನ್ನ, ಹೃದಯ ವೈಶಾಲ್ಯವನ್ನ ಹೊಂದಿದ, ಪರಸ್ಪರರ ಭಾವನೆಗಳನ್ನು ಗೌರವಿಸುವ ಜನರಿರುವುದು ಬಾರತದಲ್ಲೇ ಅಂದರೆ ತಪ್ಪಾಗಲಾರದೇನೋ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಆಗುತ್ತಿರುವುದೇನು? ಸದ್ದಿಲ್ಲದೇ ಗರಿಗೆದರುತ್ತಿರುವ ಕೋಮು ಶಕ್ತಿಗಳು ಮತ್ತು ಆ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುವ ರಾಜಕೀಯ ಪಕ್ಷಗಳು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆತಂಕದಲ್ಲಿ ಸಿಲುಕುವಂತೆ ಮಾಡಿವೆ. ಪರಿಣಾಮ ಚದುರಿಹೋದ ದುಷ್ಟರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ನಿರಂತರವಾಗಿ ಅಪಾಯವನ್ನು ತಂದೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯಾ ವಿವಾದವನ್ನು ಪರಿಗಣಿಸುವುದಾದರೆ ಕೆಲವು ವಿಚಾರಗಳ ಮಂಥನ ಅಗತ್ಯವಾದೀತೇನೋ. ಹಿಂದೂ ಪರಂಪರೆಯನ್ನು ಸಾರುವ ರಾಮಾಯಣ-ಮಹಾಭಾರತ ಐತಿಹಾಸಿಕವಾದ ಸಂಗತಿ. ಇದರ ವಾಸ್ತವತೆಗೆ ಅಖಂಡ ಭಾರತದ ವಿವಿದೆಡೆ ಇಂದಿಗೂ ಕಂಡು ಬರುವ ಐತಿಹಾಸಿಕ ಕುರುಹುಗಳು ಸಾಕ್ಷಿಯಾಗಿ ನಿಂತಿವೆ. ಅವು ಒಂದು ದೇಶದ ಜನರ ಭಾವನೆಗಳಿಗೆ, ಬದುಕಿಗೆ ಸಂಬಂಧಿಸಿದ ಅತಿ ಮುಖ್ಯ ವಿಚಾರಗಳು ಹೌದು. ಆದರೆ ಅಖಂಡ ಭಾರತದ ಮೇಲೆ ಧಾಳಿ ಮಾಡಿದ ಮತ್ತು ಆಳ್ವಿಕೆ ನಡೆಸಿದ ಘಜನಿ ಮಹಮ್ಮದ್, ಮಹ್ಮದ್ ಘೋರಿ,ಬಾಬರ್, ಅಲೆಕ್ಸಾಂಡರ್, ಔರಂಗಜೇಬ ಮತ್ತು ತೊಘಲಕ್ ಅರಸರು ಗಳು ಶತಮಾನಗಳ ಹಿಂದೆ ನಮ್ಮ ಸಾಂಸ್ಕೃತಿಕ ಐತಿಹ್ಯಗಳ ಮೇಲೆ ನಡೆಸಿದ ಧಾಳಿಯ ಪರಿಣಾಮ ಇವತ್ತಿಗೂ ಹಿಂದೂಗಳು ಚೇತರಿಸಿಕೊಳ್ಳಲಾಗದಂತಹ ಸ್ಥಿತಿಯನ್ನು ನಿರ್ಮಿಸಿದೆ. ಹಿಂದೂಗಳ ಅನೇಕ ಭಾವನಾತ್ಮಕ ಐತಿಹ್ಯಗಳ ಮೇಲೆ ಅಳಿದು ಹೋದ ಮುಸ್ಲಿಂ ಅರಸರು ದಬ್ಬಾಳಿಕೆಯ ಸಂಕೇತವಾಗಿ ಮಸೀದಿ-ದರ್ಗಾ ಮತ್ತಿತರ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಇದು ಅಂದಿನವರ ಪೈಶಾಚಿಕ ಕೃತ್ಯವೇ ಸರಿ, ಆದರೆ ಈಗೇನಾಗಿದೆ ? ಇದು ನಾಗರೀಕ ಜಗತ್ತು, ಮತೀಯವಾದ, ಸಂಘರ್ಷಕ್ಕೆ ಎಡೆಮಾಡುವಂತ ವಿಚಾರಗಳು ಅನಪೇಕ್ಷಿತವಾದವುಗಳಾಗಿವೆ. ಬಾಬರಿ ಮಸೀದಿ ಜಾಗ ಶ್ರೀ ರಾಮನ ಜನ್ಮಭೂಮಿಯೇ ಇದ್ದಿರಬಹುದು ಹಾಗೆಯೇ ಅಲ್ಲಿ ರಾಮದೇಗುಲವನ್ನು ಧ್ವಂಸಗೊಳಿಸಿ ಬಾಬರನು ಮಸೀದಿಯನ್ನು ನಿರ್ಮಿಸಿರಬಹುದು ಈ ಕುರಿತು ವಿಚಾರ ಇತ್ಯರ್ಥ ಕಾಣುವ ಮುಂಚೆಯೇ ಬಿಜೆಪಿ ಮತ್ತು ಸಂಘ ಪರಿವಾರದವರು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ತಪ್ಪು ಆ ಮೂಲಕ ಮಹ್ಮದೀಯ ದೊರೆಗಳಿಗಿಂತ ತಾವೇನೂ ಭಿನ್ನವಲ್ಲ ಎಂದು ತೋರಿದಂತಾಗಿದೆ. ಇಲ್ಲಿ ಮಸೀದಿ ಉರುಳಿಸಿದ್ದು ಹಿಂದೂಗಳಿಗೆ ದೊರೆತ ಜಯವೆಂದೇ ಅವರು ಭಾವಿಸಬಹುದೇನೋ ಆದರೆ ಅದರ ನಂತರದ ಪರಿಣಾಮ ಬಾಂಗ್ಲಾ,ಪಾಕೀಸ್ತಾನ್, ಕಾಬೂಲ್ ಮತ್ತಿತರೆಡೆಗಳಲ್ಲಿರುವ ಹಿಂದೂಗಳ ಮೇಲೆ ತೀವ್ರತರವಾದ ಪರಿಣಾಮವನ್ನೆ ಬೀರಿದೆ ಮತ್ತು ಈಗಲೂ ಬೀರುತ್ತಿದೆ. 1528ರಲ್ಲಿ ನಿರ್ಮಾಣವಾಗಿದೆಯೆನ್ನಲಾದ ಮಸೀದಿಯಲ್ಲಿ 1949ರ ಸುಮಾರಿಗೆ ಪ್ರಾರ್ಥನೆ ನಿಂತಿದೆ, ನಂತರ ಹಿಂದೂಗಳು ಅಲ್ಲಿ ರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ ಅಲ್ಲಿಂದ ಶುರುವಾದ ವಿವಾದ ಅಲಹಾಬಾದ್ ಕೋರ್ಟಿನಲ್ಲಿ ತಾರ್ಕಿಕ ಅಂತ್ಯವನ್ನು ಸಾಕ್ಷ್ಯಗಳ ಆಧಾರದಲ್ಲಿ ಕೋರ್ಟಿನ ಇತಿಮಿತಿಯಲ್ಲಿ ಪ್ರಕಟವಾಗಿದೆ. ನಾನು ಈ ಮೊದಲೇ ಹೇಳಿದಂತೆ ಇದು ಸಾಕ್ಷ್ಯ ಮತ್ತು ಆಧಾರಗಳ ಮೇಲೆ ಮಾತ್ರ ತೀರ್ಮಾನಿಸ ಬಹುದಾದ ವಿಚಾರವಲ್ಲ. ಪ್ರಸಕ್ತ ಸಂಧರ್ಭದ ಸ್ಥಿತಿ, ದೇಶದ ಭಾವೈಕ್ಯತೆ ಹಿನ್ನೆಲೆಯಲ್ಲಿ ತೀರ್ಪು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಈಗ ದೊರೆತ ತೀರ್ಪಿನಿಂದ ಬಾಬರಿ ಕ್ರಿಯಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರಿಗಳಿಗೆ ಅತೃಪ್ತಿ ಉಂಟಾಗಿದೆ. ಹಂಚುವ ಪ್ರಕ್ರಿಯೆ ಮತ್ತುಷ್ಟು ಕಗ್ಗಂಟನ್ನು ಹೆಚ್ಚಿಸಿದೆ , ಸದರಿ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ಮಾತನ್ನು ಎರಡೂ ಕಡೆಯವರು ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ವಿವಾದ ಮುಂದುವರೆಯುವ ಬಗ್ಗೆ ಸರ್ವರಲ್ಲೂ ಆತಂಕವನ್ನುಂಟು ಮಾಡಿದೆ. ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ಭಾರತದಂತಹ ದೇಶದಲ್ಲಿ ಇತಿಹಾಸದಲ್ಲಿ ಗತಿಸಿ ಹೋದ ವಿಚಾರಗಳನ್ನು ಕೆದಕುವ ಬದಲಿಗೆ ವಾಸ್ತವ ಜಗತ್ತಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಿಲುವುಗಳು ವ್ಯಕ್ತವಾದರೆ ದೇಶದ ಜನ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಬಹುದೇನೋ. ಆದರೆ ಇದು ಸಾಧ್ಯವೇ?

Sunday, September 19, 2010

ಇಂಥ ಗಣೇಶೋತ್ಸವಗಳು ಬೇಕಾ??


ದು ಗಣೇಶೋತ್ಸವ ಆಚರಣೆಯ ಸಂಧರ್ಭ, ನಗರಗಳಲ್ಲಿ,ಪಟ್ಟಣಗಳಲ್ಲಿ,ಗಲ್ಲಿಗಳಲ್ಲಿ, ಹಳ್ಳಿಗಳಲ್ಲಿ, ಕೇರಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಪ್ರತಿಷ್ಟಾಪನೆಯಾಗಿಬಿಡುವ ಗಣೇಶ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರೀಕರಣದ, ಕಂಡವರ ಸ್ವ-ಹಿತಾಸಕ್ತಿಯ ಉತ್ಸವ ಮೂರ್ತಿಯಾಗಿರುವದು ಅತ್ಯಂತ ವಿಷಾಧದ ಸಂಗತಿ. ಇವತ್ತು ಜಾಗತಿಕವಾಗಿ ವರಸಿದ್ದಿ ವಿನಾಯಕನ ಜನಪ್ರಿಯತೆ ಪಸರಿಸಿದೆ. ಭಾರತದಲ್ಲಿ ಪ್ರಧಾನ ಪೂಜೆ ಹಾಗೂ ವೈಭವದ ಉತ್ಸವ ನಡೆಯುವುದು ಮಾತ್ರ ಗಣೇಶನಿಗೆ ಆಗಿದೆ. ಎರಡನೇ ಸ್ಥಾನದಲ್ಲಿ ದುರ್ಗಿ, ಕಾಳೀ ಉತ್ಸವಗಳು ಜರುಗುತ್ತವೆ. ಐತಿಹಾಸಿಕ ಹಿನ್ನೆಲಯ ಗಣೇಶನ ಪ್ರಾಮುಖ್ಯತೆ ಮತ್ತು ಆತನ ಉತ್ಸವಗಳು ಇಂದಿನ ದಿನಗಳಲ್ಲಿ ಸಾಗಿರುವ ದಿಕ್ಕು ಹೇಗಿದೆ? ಗಣೇಶ ಎಂದರೆ ಯಾರು? ಇತರೆ ದೇವರುಗಳಿಗಿಂತ ಈತನ ಹೆಚ್ಚುಗಾರಿಕೆ ಏನು? ಗಣೇಶ ಪೂಜೆ ಆರಂಭವಾಗಿದ್ದು ಯಾವಾಗ? ವಿದೇಶಗಳಿಗೆ ಗಣೇಶ ಕಾಲಿಟ್ಟಿದ್ದು ಹೇಗೆ? ಸಾರ್ವಜನಿಕ ಗಣೇಶ ಉತ್ಸವಗಳು ಯಾಕೆ ಬೇಕು ? ಅದು ಶುರುವಾಗಿದ್ದು ಹೇಗೆ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು ಆವರಿಸುವುದು ಸಹಜವೇ.
ಗಣೇಶ ಎಂದರೆ ಯಾರು ಎಂಬ ಪ್ರಶ್ನೆಗೆ ಎಂತಹ ಚಿಕ್ಕಮಕ್ಕಳು ಸಹಾ ಥಟ್ಟಂತ ಉತ್ತರಿಸಿ ಬಿಡುತ್ತವೆ ಆದರೆ ಗಣೇಶನ ಕುರಿತು ಸಾಮಾನ್ಯವಾಗಿರುವ ಕಥೆಗಳನ್ನು ಹೊರತು ಪಡಿಸಿ ವಿಭಿನ್ನ ರೀತಿಯ ಕಥೆಗಳು ಸಹಾ ಇವೆ. ಇರಲಿ ಅದನ್ನು ತಿಳಿಯುವ ಮುನ್ನ ಒಂದಷ್ಟು ವಿಚಾರಗಳನ್ನು ತಿಳಿಯೋಣ. ಗಣೇಶ ಎಂಬ ಪದ ಸಂಸ್ಕೃತದ ಗಣೇಸ ಎಂಬ ಪದದಿಂದ ಎರವಲಾಗಿ ಪಡೆದುದಾಗಿದೆ. ಗಣ ಗಳ ಅಧಿಪತಿ ಗಣೇಶ ಹಾಗಾಗಿ ಗಣೇಶ ಎಂದಾಗಿದೆ, ಅಷ್ಟೇ ಅಲ್ಲ ಆತ ಗಜ ಮುಖವನ್ನು ಹೊಂದಿರುವುದರಿಂದ ಗಜಮುಖ ಹೀಗೆ ಸಾಗುವ ಗಣೇಶನ ಹೆಸರಿನ ಪುರಾಣಕ್ಕೆ ಅಂತ್ಯವಿಲ್ಲ. ನಿಮಗೆ ಗೊತ್ತೆ ಗಣೇಶ ನಿಗೆ ಸಾವಿರಕ್ಕೂ ಮಿಕ್ಕಿದ ಹೆಸರುಗಳು ಇವೆ. ಗಣೇಶನಿಗೆ ಪೂಜಿಸಲು ಗಣೇಶ ಸಹಸ್ರನಾಮವೇ ಇದೆ! ಗಣೇಶ, ಶಿವ-ಪಾರ್ವತಿಯ ಮಗ, ಆತ ಹುಟ್ಟಿದ್ದು, ಗಜಮುಖ ಬಂದಿದ್ದಕ್ಕೆ ಇರುವ ಸಾಧಾರಣ ಕಥೆಗಿಂತ ವಿಭಿನ್ನ ಕಥೆಯೊಂದಿದೆ. ಗಣೇಶ ಹುಟ್ಟಿದಾಗ ಅಶ್ವಿನಿ ದೇವತೆಗಳು ಬಾಲಗಣಪನ್ನ ನೊಡಲು ಬರುತ್ತಾರೆ, ಹೀಗೆ ಬಂದವರಲ್ಲಿ ಛಾಯಾದೇವಿಯ ಮಗ ಶನಿಯು ಸಹಾ ಇರುತ್ತಾನೆ. ಆತನ ಮರೆಯಲ್ಲಿ ನಿಂತು ಬಾಲಗಣಪನ್ನು ನೋಡುವಾಗ ಪಾರ್ವತಿಗಮನಿಸಿ ಗಣಪನ್ನನು ತೊಡೆಯ ಮೇಲೆ ಹಾಕಿಕೊಳ್ಳುತ್ತಾಳಂತೆ, ಆಗ ಮನಸ್ಸು ಬೇಡವೆಂದರೂ ಕುತೂಹಲ ತಡೆಯದ ಶನಿಯು ಗಣೇಶನನ್ನು ನೇರ ನೋಟದಿಂದ ನೋಡಿದ ಪರಿಣಾಮ ಗಣೇಶನ ಮುಖ ಸುಟ್ಟು ಬೂದಿಯಾಗುತ್ತದೆ.. ಆಗ ಪಾರ್ವತಿಯು ಶನಿಗೆ ಹೆಳವನಾಗುವಂತೆ ಶಾಪಕೊಟ್ಟು ತೆವಳಿಕೊಂಡು ಹೋಗುವಂತೆ ಮಾಡುತ್ತಾಳಂತೆ, ಇದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ಶನಿಯ ತಾಯಿ ಛಾಯಾದೇವಿ ಗಣೇಶನಿಗೆ ಡೊಳ್ಳುಹೊಟ್ಟೆ ಬಂದು ಆತನು ನಿಧಾನವಾಗಿ ಸಂಚರಿಸುವಂತೆ ಶಪಿಸುತ್ತಾಳೆ. ನಂತರ ಶಿವನು ಗಜಮುಖವನ್ನು ತರಿಸಿ ಬಾಲಗಣೇಶನಿಗೆ ಜೀವ ತರಿಸುತ್ತಾನಂತೆ ಗಜಮುಖವನ್ನೇ ಏಕೆ ಆಯ್ಕೆ ಮಾಡಿದೆ ಎಂದರೆ ರಾಕ್ಷಸ ಗಣಗಳನ್ನು ಹೆದರಿಸಲು ಆ ಮುಖ ಎನ್ನುತ್ತಾನೆ. ಈ ಕಥೆ ಕೇಳಲು ವಿನೋದವಾಗಿದೆ. ಅತ್ಯಂತ ಬುದ್ದಿವಂತನಾದ ಗಣಪ ತಂದೆ-ತಾಯಿಯರ ಮನವನ್ನು ಗೆಲ್ಲುತ್ತಾನೆ ಆ ಮೂಲಕ ಶಿವನಿಂದ ಸಮಸ್ತರ ವರಸಿದ್ದಿಸುವ ಶಕ್ತಿಯನ್ನು ಪಡೆದು ವರಸಿದ್ದಿ ವಿನಾಯಕನಾಗುತ್ತಾನೆ ಎಂಬ ಮಾತಿದೆ. ಇಂದಿಗೂ ವಿವಾದಾತ್ಮಕವಾಗಿ ಚರ್ಚಿಸುವ ವಿಚಾರವೆಂದರೆ ಗಣೇಶ ಬ್ರಹ್ಮಚಾರಿ ಇಲ್ಲವೇ ಇಬ್ಬರು ಹೆಂಡಿರ ಗಂಡ ಎಂಬ ಮಾತಿದೆ. ಅದಕ್ಕೆ ಪೂರಕವಾಗಿರುವ ಕಥೆಯೊಂದರ ಪ್ರಕಾರ ಗಣೇಶನಿಗೆ ಸಿದ್ದಿ ಮತ್ತು ಬುದ್ದಿ,ರಿದ್ದಿ ಎಂಬ ಪತ್ನಿಯರಿದ್ದು ಶುಭ-ಲಾಭ ಹಾಗೂ ಜೈ ಸಂತೋಷಿಮಾ ಎಂಬ ಮಕ್ಕಳು ಇದ್ದರು ಎನ್ನಲಾಗುತ್ತದೆ. ಕೆಲವು ಉಲ್ಲೇಖಗಳಲ್ಲಿ ಗಣೇಶ ಆನೆ ಮುಖದೊಂದಿಗೆ ಹುಟ್ಟಿದ ಆದ್ದರಿಂದಲೇ 'ಗಜಮುಖ'ನೆಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಗೆ ಗಣೇಶನ ಕುರಿತ ಲಭ್ಯವಿರುವ ಮುದ್ಗಲ್ ಪುರಾಣ ಮತ್ತು ಗಣೇಸ ಪುರಾಣ, ಶಿವಪುರಾಣ ಗಳಲ್ಲಿ ಮಾಹಿತಿ ಇದೆ.'ಬ್ರಹ್ಮಾನಂದ ಪುರಾಣದಲ್ಲಿ 'ಭೂತ-ವರ್ತಮಾನ-ಭವಿಷ್ಯತ್' ಮಾನದ ಸಂಕೇತವೇ ಗಣೇಶ ಹಾಗಾಗಿ ಆತನಿಗೆ 'ಲಂಬೋದರ'/ಮಹೊದರ ಎನ್ನಲಾಗುವುದಂತೆ. ಇನ್ನೊಂದು ವಿಶೇಷವೆಂದರೆ ಗಣೇಶನನ್ನು 32ಮಾದರಿಗಳಲ್ಲಿ ಕಾಣಬಹುದು!
ಗಣೇಶನ ಪೂಜೆ ಮೊದಲಿಗೆ ಆರಂಭವಾದ ಬಗ್ಗೆ ಮಾಹಿತಿ ಲಭ್ಯವಾಗುವುದು ಗುಪ್ತರ ಕಾಲದಲ್ಲಿ, ಅದಕ್ಕು ಮುಂಚೆ 4 ಮತ್ತು 5ನೇ ಶತಮಾನದಲ್ಲಿ ಗಣೇಶನ ಆರಾಧನೆಯ ಬಗ್ಗೆ ಸುಳುಹು ಲಭ್ಯವಾಗುತ್ತದೆ. ಗುಪ್ತರ ಆಡಳಿತಾವದಿಯಲ್ಲಿ ಬರ್ಮಾ ದಲ್ಲಿ ಸ್ಥಾಪಿತವಾದ ಶಿವ ದೇಗುಲದ ಆವರಣದಲ್ಲಿ ಸಿಗುವ ಗಣೇಶ ನೇ ಮೊದಲ ಅಸ್ತಿತ್ವದ ಕುರುಹು. ಪುರಾತನ ಕಾಲದ ಪಳೆಯುಳಿಕೆಗಳಾದ ಎಲ್ಲೋರ ಗುಹೆಗಳಲ್ಲು ಗಣೇಶನ ಚಿತ್ರಗಳು ಕಾಣ ಸಿಗುತ್ತವೆ. ಇದಕ್ಕೂ ಮುನ್ನ ಬುಡಕಟ್ಟು ಜನಾಂಗದ ಮಂದಿ ಆನೆಮುಖದ ಗಣೇಶನನ್ನು ಪೂಜಿಸುತ್ತಿದ್ದ ಬಗ್ಗೆಯೂ ಸುಳುಹು ಲಭಿಸುತ್ತವೆಯಾದರೂ ನಿಖರವಾಗಿ ಯಾವಾಗ ಎಂಬುದು ಮಾತ್ರ ಇಂದಿಗೂ ನಿಗೂಢವೇ!ಪ್ರಸಕ್ತ ಸಂಧರ್ಬದಲ್ಲಿ ಗಣೇಶ ಜಾತಿ-ಮತ-ಪಂಥವನ್ನು ಮೀರಿ ಬೆಳೆದಿದ್ದಾನೆ. ದೇಶದಲ್ಲಷ್ಟೇ ಅಲ್ಲ ದಕ್ಷಿಣ ಆಪ್ರಿಕಾ, ಜಾವಾ, ಸುಮಾತ್ರ, ಕಾಂಬೋಡಿಯಾ, ಪ್ರಾನ್ಸ್, ಶ್ರೀಲಂಕಾ, ಜಪಾನ್, ಮಲೇಷಿಯಾ ಹೀಗೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಿಂದೂಗಳಲ್ಲದ ಭಕ್ತರನ್ನು ಸಂಪಾದಿಸಿದ್ದಾನೆ. ಗಣೇಶ ಮೊದಲಿಗೆ ದ್ರಾವಿಡರ ದೇವರೆಂದು ಪರಿಗಣಿತವಾದರೂ ನಂತರದ ದಿನಗಳಲ್ಲಿ ಆತ ಆರ್ಯರ ದೇವರೆಂದೇ ಬಿಂಬಿತನಾಗಿದ್ದಾನೆ. ಬ್ರಾಹ್ಮಣ ಸಮುದಾಯದವರು ಮಾತ್ರ ಮನೆಯಲ್ಲಿರಿಸಿ ಪೂಜಿಸುತ್ತಿದ್ದ ವಿಘ್ನೇಶ್ವರನನ್ನು 1893ರಲ್ಲಿ ದೇಶಭಕ್ತ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯದ ಜಾಗೃತಿಗಾಗಿ ಬ್ರಾಹ್ಮಣರು/ ಅಬ್ರಾಹ್ನಣರನ್ನು ಬ್ರಿಟೀಷರ ವಿರುದ್ದ ಒಂದುಗೂಡಿಸುವ ಸಲುವಾಗಿ ಗಣೇಶನನ್ನು ಸೀಮಿತವಲಯದಿಂದ ಮುಕ್ತಗೊಳಿಸಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದರು. ಪರಿಣಾಮವಾಗಿ ಇವತ್ತು ದೇಶದ ಉದ್ದಗಲಕ್ಕೂ ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅಂದು ತಿಲಕರು ಅಂದುಕೊಂಡ ಉದ್ದೇಶ ಗಣೇಶನ ಮೂಲಕ ಸಾಧ್ಯವಾಯಿತು. ಆದರೆ ಇವತ್ತೇನಾಗಿದೆ? ಗಣೇಶ ಸ್ವಾರ್ಥದ ಹಿತಾಸಕ್ತಿಗಳ ಕೈಗೊಂಬೆಯಾಗಿದ್ದಾನೆ ಎಂದು ಹೇಳಲು ವಿಷಾಧವಾಗುತ್ತದೆ. ಇವತ್ತು ಪ್ರತಿ ಊರುಗಳಲ್ಲಿ ಅಲ್ಲಿನ ಗಲ್ಲಿಗಳಲ್ಲಿ ಸ್ಥಾಪಿತವಾಗುವುದು ಜಾತಿ ಗಣೇಶ, ರಾಜಕೀಯದ ಗಣೇಶ, ಸಂಘದ ಪ್ರತಿಷ್ಠೆಯ ಗಣೇಶ, ಹಣ ಉಳ್ಳವರ ಪ್ರದರ್ಶನದ ಗಣೇಶ, ಹಪ್ತಾ ವಸೂಲಿಯ ಗಣೇಶ, ಪೋರ್ಕಿಗಳ ಗಣೇಶ ಹೀಗೆ ಒಂದೇ ಎರಡೇ. ನಾನು ಈಗಾಗಲೇ ಹೇಳಿದಂತೆ ಗಣೇಶನ ಮಹಿಮೆಗಳನ್ನು ಸಾರುವ ಹಿನ್ನೆಲೆಯಲ್ಲಿ 32ಮಾದರಿಯ ಗಣೇಶ ಇದ್ದರೆ ಇವತ್ತು ವೀರಪ್ಪನ್ ಗಣೇಶ, ಬಿನ್ ಲಾಡೆನ್ ಗಣೇಶ ನಕ್ಸಲೈಟ್ ಗಣೇಶ, ಭಯೋತ್ಪಾದಕ ಗಣೇಶ, ವಿದೇಶಗಳಲ್ಲಿ ಬಫೂನ್ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿದರೆ ವಿದೇಶೀಯರು ಚಪ್ಪಲಿಯ ಮೇಲೆ, ಬೆತ್ತಲೆ ಬೆನ್ನು, ಹೊಟ್ಟೆ, ತೊಡೆ ಇತ್ಯಾದಿಗಳ ಮೇಲೆಲ್ಲ ಗಣೇಶನ ಚಿತ್ತಾರವನ್ನು ಹಾಕಿಕೊಳ್ಳುವುದು ಅತ್ಯಂತ ಬೇಸರದ ಸಂಗತಿ. ಗಣಪತಿ ಭಾವೈಕ್ಯತೆಯ ಶಕ್ತಿಯ ಸಂಕೇತ ಅದು ನಂಬಿದ ಜನರ ಭಾವನಾ ಸಂಕೇತವೂ ಹೌದು ಹೀಗಿರುವಾಗ ಇದನ್ನೆಲ್ಲ ಸಹಿಸಲಾದೀತೆ? ಗಣಪತಿಯ ಹೆಸರು ಹೇಳಿ ಬೋಗಸ್ ಲಾಟರಿ ಮಾಡುವುದು, ಬಲವಂತದ ಚಂದಾ ವಸೂಲು ಮಾಡುವುದು, ಬೇಕಿಲ್ಲದ ಅದ್ದೂರಿತನ ಪ್ರದರ್ಶಿಸಿ ಹಣ ಪೋಲು ಮಾಡುವುದು ಬೇಕಾ ಹೇಳಿ? ಅತ್ತ ವೇದಿಕೆಯಲ್ಲಿ ಗಣೇಶನನ್ನು ಕೂರಿಸಿ ಆತನ ಎದುರು ಭಾಗದ ವೇದಿಕೆಯಲ್ಲಿ ಮೈಮಾಟ ಪ್ರದರ್ಶಿಸುವ ನಂಗಾನಾಚ್ ನೃತ್ಯ ವೈಭವ, ಪೋಲಿ ಹಾಡುಗಳ ಸುಗಮ ಸಂಗೀತ ಇವೆಲ್ಲಾ ಬೇಕೇನ್ರಿ? ಯಾವುದೋ ಜಾಗ ಕಬಳಿಸುವ ಸಲುವಾಗಿ ಗಣೇಶ ಸಮಿತಿ ಮಾಡಿ ಎಡವಟ್ಟು ಜಾಗದಲ್ಲಿ ಗಣೇಶನ್ನು ಪ್ರತಿಷ್ಠಾಪಿಸುವುದು, ಹಾದಿ-ಬಿದಿ ಬದಿ ಗಣೇಶನನ್ನು ಕೂರಿಸುವುದು, ಚರಂಡಿ ದುರ್ವಾಸನೆ ಬಳಿ ಗಣೇಶನನ್ನು ಪ್ರತಿಷ್ಠಾಪಿಸುವುದು ಎಷ್ಟು ಸರಿ ಸ್ವಾಮಿ? ಇನ್ನು ಕೆಲವೆಡೆಗಳಲ್ಲಿ ಗಣೇಶನನ್ನು ಕೂರಿಸಲು ಚೀಟಿ ಹಾಕಿ 'ಚೀಟಿ ಗಣೇಶ'ನನ್ನು ಸಹಾ ಕೂರಿಸುವ ಪ್ರವೃತ್ತಿ ಉಂಟು. ಒಟ್ಟಾರೆ ಹೇಳುವುದಾದರೆ ಗಣೇಶನ ಹೆಸರಿನಲ್ಲಿ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿಗಳು ವ್ಯಯ ಮತ್ತು ಪರಿಸರ ಮಾಲಿನ್ಯ ಆಗುತ್ತಿದೆ. ಭಕ್ತಿ-ಭಾವದ ವರಸಿದ್ದಿ ವಿನಾಯಕನಿಗೆ ಇಂತದ್ದೆಲ್ಲಾ ಅವಾಂತರ ಬೇಕೇನ್ರಿ? ನೀವೇನಂತೀರಿ???

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...