Tuesday, August 13, 2019

ದುರ್ಯೋಧನ ಕಣ್ಣೋಟದ ಮುನಿರತ್ನ ಕುರುಕ್ಷೇತ್ರ!



ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆದುಕೊಳ್ಳಿ, ಆ ಪಾತ್ರದ ಮೂಲಕ ಮಹಾಭಾರತವನ್ನು ನೋಡಿದರೆ ಅದೇ ಸರಿ ಎನಿಸಿ ಬಿಡುತ್ತದೆ. ಬಹುಶ: ಇಂತಹ ಅಪರೂಪದ ಗುಣ ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯದ ಪಾತ್ರಗಳಿಗೆ ಲಭಿಸಿರಲಾರದೇನೊ.

ಮಹಾಭಾರತದ ಉಪಕಥೆಗಳನ್ನು ಆಧಾರವಾಗಿಟ್ಟು ಕೊಂಡು ಕೆಲವು ಸಿನಿಮಾಗಳು ಬಂದಿವೆ. ತೆಲುಗಿನಲ್ಲಿ ಎನ್ ಟಿ ರಾಮರಾವ್ ಸೀರಿಸ್ ಸಿನಿಮಾಗಳನ್ನು ಮಾಡಿದರೆ, ಹಿಂದಿಯಲ್ಲಿ ಕಿರು ತೆರೆಯ ಧಾರವಾಹಿಗಳಾಗಿ ಮಹಾಭಾರತದ ಪಾತ್ರಗಳು ಜನರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಕನ್ನಡದಲ್ಲಿ ಡಾ ರಾಜ್ ಕುಮಾರ್ ಅಭಿನಯದ ‘ಬಬ್ರುವಾಹನ’ ಸಾರ್ವಕಾಲಿಕ ಮುದ್ರೆಯೊತ್ತಿದೆ. ಎನ್ ಟಿ ಆರ್ ಮತ್ತು ಡಾ ರಾಜ್ ಮರೆಯಾದ ನಂತರ ಪೌರಾಣಿಕ ಪಾತ್ರಗಳನ್ನು ಕಣ್ಣೆದುರು ತಂದು ನಿಲ್ಲಿಸುವ ತಾಕತ್ತಿನ ಸಿನಿಮಾಗಳು ಬಾರಲೇ ಇಲ್ಲ.


ಈಗ ಕುರುಕ್ಷೇತ್ರ ಕನ್ನಡ ಸಿನಿಮಾ ತೆರೆಗೆ ಬಂದಿದೆ. ಅದು ಅಪ್ಪಟ ಮುನಿರತ್ನ ಕುರುಕ್ಷೇತ್ರ! ಅದಕ್ಕೆ ತಕ್ಕಂತೆ  ‘ಏ ದಾಸಿ’, ‘ದಾಸ’, ‘ಪಂಚ ಪಲ್ಲಂಗಿನಿ’, ‘ಏ ಗೋಪಾಲ’, ‘ಏ ರಾಯಭಾರಿ’, ‘ಮಾಮಾ’ ಎಂಬ ಚಿತ್ರದ ಸಂಭಾಷಣೆಗಳು ಪಾತ್ರಧಾರಿಗಳ ಬಾಯಲ್ಲಿ ಯಥೇಚ್ಚವಾಗಿ ಥೇಟ್ ಸ್ಲಂ ಭಾಷೆಯಂತೆಯೇ ಕೇಳಿಸುತ್ತವೆ. ಇದು ಸಂಭಾಷಣೆಯ ಸಾಹಿತ್ಯದ ಪ್ರಭಾವವೋ ಅಥವ ಪಾತ್ರಧಾರಿಗಳು ಸಂಭಾಷಣೆ ಹೇಳುವ ರೀತಿಯೋ ಗೊತ್ತಿಲ್ಲ.   ಈ ಸಂಭಾಷಣೆಗಳಲ್ಲಿ ಡಾ ರಾಜ್ ಕುಮಾರ್ ಅಭಿನಯದ ಬಬ್ರುವಾಹನ ಚಿತ್ರದ ಸಂಭಾಷಣೆ ‘ಎಲವೋ ಪಾರ್ಥ’, ‘ಎಲವೋ ಶಿಖಂಡಿ’ ಎಂದು ಕೇಳಿಸಿಕೊಂಡಾಗ ಸಿಗುವ ಆನಂದ , ಮತ್ತೆ ಮತ್ತೆ ಕೇಳಿಸಿಕೊಳ್ಳ ಬೇಕೆನ್ನುವ ಆಪ್ತಅನುಭವ ಆಗುವುದೇ ಇಲ್ಲ.


ಮಹಾಭಾರತವನ್ನು ಸಂಪೂರ್ಣವಾಗಿ ಸೆಲ್ಯೂಲಾಯ್ಡ್ ತೆರೆಯ ಮೇಲೆ ತರುವುದು ತ್ರಾಸದಾಯಕ ಕೆಲಸ. ಹಾಗಾಗಿಯೇ ವಿವಿಧ ಸಂದರ್ಭದ ಕಥಾನಕಗಳನ್ನು ಆಗಾಗ ತೆರೆಯ ಮೇಲೆ ತರಲಾಗುತ್ತಿದೆ. ಮುನಿರತ್ನ ಕುರುಕ್ಷೇತ್ರ ಕೂಡ ಅಂತಹುದ್ದೇ ಪ್ರಯತ್ನಗಳಲ್ಲೊಂದು. ನಿರ್ದೇಶಕ ನಾಗಣ್ಣ ಇಂತಹ ಪ್ರಯತ್ನದಲ್ಲಿ ಭಾಗಶ: ಯಶ ಕಂಡಿದ್ದಾರೆ.  ಈ ವರ್ಷದ ಬಿಗ್ ಬಜೆಟ್ ಪೌರಾಣಿಕ ಚಿತ್ರ, ಬಹು ನಿರೀಕ್ಷೆಯ ಚಿತ್ರ, 3ಡಿ ಎಫೆಕ್ಟ್ ಚಿತ್ರ ಎನ್ನುವುದೇ ಹೆಗ್ಗಳಿಕೆ. ಸಧ್ಯ ಸ್ಯಾಂಡಲ್ ವುಡ್ ನಲ್ಲಿ ಮಂಚೂಣಿ ತಾರೆಯಾಗಿರುವ ದರ್ಶನ್ ರ ಇಮೇಜ್ ಗಾಗಿ ಈ ಸಿನಿಮಾ ತೆಗೆದಂತಿದೆ. ಹಾಗಾಗಿಯೇ ಇಡೀ ಚಿತ್ರದ ಪ್ರಮುಖ ಪಾತ್ರ ದುರ್ಯೋಧನ. ದುರ್ಯೋಧನನ ಕಣ್ಣೋಟದಲ್ಲಿ ಕುರುಕ್ಷೇತ್ರದ ಕಥಾನಕವನ್ನು ಹೊಸೆಯಲಾಗಿದೆ. ದುರ್ಯೋಧನನ ದೃಷ್ಟಿಯಿಂದ ಕುರುಕ್ಷೇತ್ರ ನೋಡುವಾಗ ಪಾಂಡವರು ನೀತಿ ಬಿಟ್ಟವರೆಂದು, ಕೃಷ್ಣ ವಂಚಕನೆಂದು, ಕರ್ಣನನ್ನು ಬಹುದೊಡ್ಡ ತ್ಯಾಗಿಯೆಂದು, ಭೀಮನಿಗಿಂತ ದುರ್ಯೋಧನ ಪ್ರಬಲನೆಂದು ತೋರಿಸಲಾಗಿದೆ. ಜನಪದರ ಮನದಲ್ಲಿ ದಾಖಲಾಗಿರುವ ಮಹಾಭಾರತ ಕಥಾನಕಕ್ಕೆ ಭಿನ್ನವಾದ ಆಯಾಮವನ್ನು ಸೂಕ್ತ ಆಧಾರಗಳಿಲ್ಲದೇ ಕಟ್ಟಿಕೊಟ್ಟಂತೆ ಭಾಸವಾಗುತ್ತದೆ. ಆದರೆ ದುರ್ಯೋಧನ ಜನ ಸಾಮಾನ್ಯರ ಮನದಲ್ಲಿ ಉಳಿಯುವಂತೆ ದರ್ಶನ್,  ಪಾತ್ರ ನಿರ್ವಹಿಸಿದ್ದಾರೆ ಎಂಬುದು ಪ್ರಶಂಸನೀಯ.


ಚಿತ್ರ ಆರಂಭವಾಗುವುದೇ ಹುಟ್ಟಿನ ಕಾರಣಕ್ಕೆ ಯಾರು ಮೇಲು ಯಾರು ಕೀಳು, ಯಾಕೆ ಕೀಳು ಎಂಬುದನ್ನು ವಿವಿಧ ಪಾತ್ರಗಳ ಮೂಲಕ ಹೇಳಿಸುತ್ತಾ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬುದನ್ನು ಅಸ್ಪಷ್ಟವಾಗಿ ನಿರೂಪಿಸುತ್ತದೆ.  ಜಾತಿ ತಾರತಮ್ಯದ ಸೂಕ್ಷ್ಮಗಳನ್ನು ಧರ್ಮ ಸೂಕ್ಷ್ಮದೊಂದಿಗೆ ಬೆರೆಸುತ್ತಾ ಪ್ರೇಕ್ಷಕರನ್ನು ವಿಷಾದಕ್ಕೆ ತಳ್ಳುವುದು ಕೂಡ ಚಿತ್ರದ ಗಮನ ಸೆಳೆಯುವ ಅಂಶ. ಚಿತ್ರದ ಮೊದಲಾರ್ಧದಲ್ಲಿ ವಿಜೃಂಭಿಸುವ ದರ್ಶನ್ ಧುರ್ಯೋಧನ ಪಾತ್ರಧಾರಿಯಾಗಿ ಜನಮನದಲ್ಲಿ ರಿಜಿಸ್ಟರ್ ಆಗುವ ಹಾಗೆ ಪಾತ್ರವನ್ನು ನಿಭಾಯಿಸಿದ್ದಾರೆ. ಕೆಲವು ಕೊರತೆಗಳನ್ನು ಹೊರತು ಪಡಿಸಿದರೆ ಸಂಭಾಷಣೆ ಚೆನ್ನಾಗಿದೆ. ಹಳಗನ್ನಡವನ್ನು ಬಳಸಿದ್ದರೆ, ಸಂಭಾಷಣೆ ಮಾದರಿಯ ಹಾಡುಗಳನ್ನು ಬಳಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಅಭಿಮನ್ಯು-ಭೀಷ್ಮ, ಕರ್ಣ-ಕುಂತಿ, ಶ್ರೀಕೃಷ್ಣ-ಅರ್ಜುನರ ನಡುವಿನ ಸಂಭಾಷಣೆ ಪ್ರೇಕ್ಷಕರ ಮನಸ್ಸಿಗೆ ತಾಕುವಲ್ಲಿ ಯಶಸ್ಸು ಕಂಡಿದೆ. ವಿ ಆರ್ ನಾಗೇಂದ್ರ ಪ್ರಸಾದ್ ಈ ಕಾರಣಕ್ಕೆ ಅಬಿನಂದನಾರ್ಹರು.


ಕಥೆಯ ನಿರೂಪಣೆ, ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಪೋಷಣೆಗೆ ಕೆಲವು ದೃಶ್ಯಗಳಲ್ಲಿ ಸಹಕಾರಿಯಾಗಿಲ್ಲ. ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಕಥೆಯ ಪೂರಕ ಅಂಶಗಳೇ ನಾಪತ್ತೆಯಾಗಿವೆ. ಉದಾಹರಣೆಗೆ ಕರ್ಣನ ಸಾರಥಿಯಾಗುವ ಶಲ್ಯ, ಅರ್ಜುನನ ಮೇಲೆ ಕರ್ಣ ಬಾಣ ಹೂಡುವಾಗ ಉಪಯೋಗಿಸ ಬೇಕಾದ ತಂತ್ರ ಹೇಳಿಕೊಡುವ ಪ್ರಸ್ತಾಪವೇ ಇಲ್ಲ... ಹಾಗೆಯೇ ಅರ್ಜುನ ಕರ್ಣನನ್ನು ಬಲಿ ತೆಗೆದುಕೊಂಡಾಗ, ತನ್ನ ಮಗ ಅಭಿಮನ್ಯುವನ್ನು ಕರ್ಣ ಮೋಸದಿಂದ ಬಿಲ್ಲು ಮುರಿದು ಕೊಂದಿದ್ದಕ್ಕೆ  ಪ್ರತಿಯಾಗಿ  ಕರ್ಣನನ್ನು ಬಲಿ ತೆಗೆದುಕೊಂಡ ವಿಷಯ ಪ್ರಸ್ತಾಪಕ್ಕೆ ಬರುವುದಿಲ್ಲ. ಇದು ಕಥೆಯ ವೀಕ್ ನೆಸ್. ಇಡೀ ಸಿನಿಮಾದಲ್ಲಿ ಸಂಭಾಷಣೆಯೊಂದಿಗೆ, ಸನ್ನಿವೇಶದೊಂದಿಗೆ ಸಾಥ್ ನೀಡ ಬೇಕಿದ್ದ ಸಂಗೀತ ಯಾವ ಹಂತದಲ್ಲಿಯೂ ದಾಖಲಾಗುವುದೇ ಇಲ್ಲ. ಕುರುಕ್ಷೇತ್ರದ ಬಹುದೊಡ್ಡ ನೆಗೆಟೀವ್ ಅಂಶ ಚಿತ್ರದ ಛಾಯಾಗ್ರಹಣ ಎಂದರೂ ತಪ್ಪಾಗಲಾರದರು. ಚಿತ್ರವನ್ನು, ಪಾತ್ರಧಾರಿಯನ್ನು ಪ್ರೇಕ್ಷಕನ ಕಣ್ಣೆದುರು ಅಚ್ಚಳಿಯದಂತೆ ಪ್ರತಿಷ್ಠಾಪಿಸುವ ಕೆಲಸವನ್ನು ಛಾಯಾಗ್ರಹಣ ಮಾಡಬೇಕಿತ್ತು. ಚಿತ್ರದ ಪ್ರಥಮಾರ್ಧದಲ್ಲಿನ ಲಾಂಗ್ ಶಾಟ್ ಗಳು ಚಿತ್ರದ ಓಟಕ್ಕೆ ಧಕ್ಕೆಯಾಗಿವೆ.


ಏಜ್ ಫ್ಯಾಕ್ಟರ್ ಕಾರಣಕ್ಕಾಗಿಯೋ ಏನೋ ಅಂಬರೀಶ್ ಮತ್ತು ಶ್ರೀನಾಥ್ ಅವರ ಸಂಭಾಷಣೆಗಳು ಪಾತ್ರಕ್ಕೆ ತಕ್ಕಂತೆ ಧ್ವನಿಸುವುದಿಲ್ಲ. ದಕ್ಕಿದ ಅವಕಾಶದಲ್ಲಿ ಭಾರತಿ, ಅವಿನಾಶ್ , ರವಿಶಂಕರ್, ರವಿಚಂದ್ರನ್, ಸ್ನೇಹಾ, ಶಶಿಕುಮಾರ್, ಅರ್ಜುನ್ ಸರ್ಜಾ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಸರ್ಜಾ ಕರ್ಣನಾಗಿ ಗಮನ ಸೆಳೆಯುವ ನಟನೆ ನೀಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಮಾಡ್ಯುಲೇಶನ್ ಮಾಡುವಲ್ಲಿ ದರ್ಶನ್, ರವಿಶಂಕರ್ ಮತ್ತು ಅರ್ಜುನ್ ಸರ್ಜಾ ಗೆಲ್ಲುತ್ತಾರೆ. ಭೀಮಾರ್ಜುನರು ಧುರ್ಯೋಧನ ಪಾತ್ರದ ಮುಂದೆ ಪೇಲವವಾಗಿ ಬಿಡುವುದು ಚಿತ್ರದ ಬಹು ದೊಡ್ಡ ಮೈನಸ್. ಇದ್ದುದರಲ್ಲಿ ದ್ರೌಪದಿಯಾಗಿ ಸ್ನೇಹ ಸಿಕ್ಕಅವಕಾಶದಲ್ಲಿ ಮಿಂಚುವ ಪ್ರಯತ್ನ ಮಾಡಿದ್ದಾರೆ.


ಚಿತ್ರದ ಹೈಲೇಟ್ ಅಂಶಗಳಲ್ಲಿ ದುರ್ಯೋಧನ, ಅಭಿಮನ್ಯು , ಕರ್ಣ, ಶ್ರೀ ಕೃಷ್ಣ, ಶಕುನಿ ಪಾತ್ರಗಳ ನಿರ್ವಹಣೆ, ಸಂಭಾಷಣೆ ಮತ್ತು ನಿರೂಪಣೆ ಚೆನ್ನಾಗಿದೆ. ಪೌರಾಣಿಕ ಚಿತ್ರಗಳಲ್ಲಿ ಇದೇ ಪ್ರಥಮ ಭಾರಿಗೆ ನಟಿಸಿರುವ ನಿಖಿಲ್ ಕುಮಾರ್ ಪಾತ್ರ ನಿರ್ವಹಣೆಗೆ ಶ್ರಮ ವಹಿಸಿರುವುದು ಎದ್ದು ಕಾಣುತ್ತದೆ. ಯುದ್ದದ ಸನ್ನಿವೇಶ ಮತ್ತು ಡೈಲಾಗ್ ಹೇಳುವ ಸಂದರ್ಭದಲ್ಲಿ ನಿಖಿಲ್ ಮಿಂಚುತ್ತಾರೆ ಅಷ್ಟೆ ಅಲ್ಲಿ ಅವರ ರಾಜಕೀಯ ಜೀವನದ ಜೊತೆಗೆ ಕಥಾನಕ ಥಳುಕು ಹಾಕಿಕೊಳ್ಳುವುದು ಕಾಕತಾಳಿಯವೇ ಇರಬೇಕು. ಬಹುಶ  ರವಿಚಂದ್ರನ್ ಅವರಿಗೆ ಪೂರ್ಣ ಪ್ರಮಾಣದ ಪೌರಾಣಿಕ ಚಿತ್ರದ ನಟನೆ ಇದೇ ಮೊದಲು ಇರಬಹುದು. ಸಹಜವಾಗಿ ರವಿಚಂದ್ರನ್ ಚಿತ್ರಗಳಲ್ಲಿ ಕಾಣಬರುವ ಸರಸ-ಸಲ್ಲಾಪದ ಸಂಗತಿಗಳು ಇಲ್ಲಿ ಕಣ್ಮರೆಯಾಗಿವೆ, ಇದು ರವಿಚಂದ್ರನ್ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡಬಹುದು.


ಕನ್ನಡದಲ್ಲಿ ಪೌರಾಣಿಕ ಚಿತ್ರಗಳನ್ನು ನಿರ್ಮಿಸುವ ಸಾಹಸವನ್ನು ಇತ್ತೀಚಿನ ದಶಕಗಳಲ್ಲಿ ಮಾಡಿದ್ದು ಕಡಿಮೆ. ಅದು ಬೇಡುವ ಬಿಗ್ ಬಜೆಟ್, ದೀರ್ಘ ಕಾಲದ ನಿರ್ಮಾಣ ಹೊರೆಯಾಗುವ ಅಂಶಗಳು. ಇಂತಹ ಸಂದಿಗ್ಧತೆಯ ನಡುವೆಯೂ ಮುನಿರತ್ನ ಕುರುಕ್ಷೇತ್ರ ನಿರ್ಮಿಸುವ ಸಾಹಸಕ್ಕೆ ಕೈ ಹಚ್ಚಿದ್ದು, ತಾವಂದುಕೊಂಡ ಮಟ್ಟಿಗೆ ತೆರೆಯ ಮೇಲೆ ತಂದಿದ್ದು ಮೆಚ್ಚ ಬೇಕಾದ ಅಂಶ. ಮಹಾಭಾರತದ ದುರ್ಯೋಧನ, ಕರ್ಣ,ಅಭಿಮನ್ಯು, ಶಕುನಿ ಪಾತ್ರಗಳನ್ನು ಜನಮನದಲ್ಲಿ ಈ ಚಿತ್ರ ರಿಜಿಸ್ಟರ್ ಮಾಡಿದೆ. ಈ ಪ್ರಯತ್ನಕ್ಕೆ ಮುನಿರತ್ನರ ಜೊತೆ ಕೈ ಜೋಡಿಸಿದ ತಂತ್ರಜ್ಞರು, ಸಾಹಿತಿಗಳು ಅಭಿನಂದನಾರ್ಹರು. ದೊಡ್ಡ ಬಜೆಟ್ ಚಿತ್ರ ಮಾಡಿ ಉಳಿಯುವುದು ಕಷ್ಟ. ಈ ಕಾರಣಕ್ಕಾಗಿಯಾದರು ಚಿತ್ರವನ್ನು ಟೀಕೆ ಟಿಪ್ಪಣಿಗಳ ಹೊರತಾಗಿಯೂ ಗೆಲ್ಲಿಸುವುದು ಮುಖ್ಯ.

ರಾಜ್ಯದಲ್ಲೀಗ ಮಳೆ , ನೆರೆ, ಪ್ರವಾಹ, ಭೂ ಕುಸಿತದಿಂದ ಬಹುತೇಕ ಜಿಲ್ಲೆಗಳಲ್ಲಿ ಜನ ನಲುಗಿದ್ದಾರೆ. ಹೀಗಿರುವಲ್ಲಿ ಬಿಡುಗಡೆಯಾದ ಬಹು ನಿರೀಕ್ಷೆಯ ಚಿತ್ರ ಕುರುಕ್ಷೇತ್ರಕ್ಕೆ ಸಧ್ಯಕ್ಕೆ ಗಳಿಕೆಯಲ್ಲಿ ಯಶ ಕಾಣದಿರಬಹುದು. ಆದರೆ ಬಿಡುಗಡೆಯಾದ ಸ್ಥಳಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನೆರೆ ಪೀಡಿತ ಜಿಲ್ಲೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಲಿ,  ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ. ಚಿತ್ರದಿಂದ ಪಡೆದ ಸಂಭಾವನೆಯನ್ನು ಅಭಿಮನ್ಯು ಪಾತ್ರಧಾರಿ ನಿಖಿಲ್ ನೆರೆ ಸಂತ್ರಸ್ತರಿಗೆ ದಾನ ಮಾಡುವ ಘೋಷಣೆ ಮಾಡಿದ್ದಾರೆ. ಚಿತ್ರದ ಕೆಲವು ಪ್ರದರ್ಶನದ ಗಳಿಕೆಯಲ್ಲಿ ಸ್ವಲ್ಪ ಭಾಗವನ್ನು ಕೊಡಗು ಸಂತ್ರಸ್ತರಿಗೆ ನೀಡುವುದಾಗಿ ಮುನಿರತ್ನ ಮೊದಲೇ ಘೋಷಿಸಿದ್ದರು. ಇದು ಅಬಿನಂದನಾರ್ಹ. ಬಹಳ ದಿನಗಳ ನಂತರ ಬೆಳ್ಳಿ ತೆರೆಗೆ ಬಂದ ಪೌರಾಣಿಕ ಕನ್ನಡ ಚಿತ್ರವನ್ನು ಜನ ಸಾಮಾನ್ಯರು ನೋಡಿ ಪ್ರೋತ್ಸಾಹಿಸ ಬೇಕಾಗಿದೆ. ಸಾಮಾನ್ಯ ಥಿಯೇಟರ್ ಗಳಲ್ಲಿ ಚಿತ್ರದ ಪ್ರದರ್ಶನ ಟಿಕೆಟ್ ಬೆಲೆ ನಿಗದಿತ ದರಕ್ಕಿಂತ ದುಪ್ಪಟ್ಟಾಗಿದೆ.  ಬೆಂಗಳೂರಿನ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಈ ಚಿತ್ರದ ಪ್ರದರ್ಶನಕ್ಕೆ ಟಿಕೆಟ್ ಒಂದಕ್ಕೆ ತಲಾ 900 ವಸೂಲು ಮಾಡಲಾಗುತ್ತಿದೆ, ಇದು ಹಗಲು ದರೋಡೆಯಲ್ಲದೇ ಮತ್ತೇನು? ನಿಯಂತ್ರಣ ಮಾಡ ಬೇಕಾದ ವಾರ್ತಾ ಇಲಾಖೆ ಏನು ಮಾಡುತ್ತಿದೆ?  

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...