Sunday, August 3, 2014

ಬೆಳಗಾವಿಯಲ್ಲೊಂದು ಶಿಖಂಡಿ ಕದನ!

ಹಾಜನ್ ವರದಿಯ ನಂತರ ಮುಗಿದ ಅಧ್ಯಾಯವೆಂದೆ ಬಣ್ಣಿಸಲಾಗುತ್ತಿರುವ ವಿವಾದವನ್ನ ಮಹಾರಾಷ್ಟ್ರ ಸರ್ಕಾರ ಕೆದಕುವ ಮೂಲಕ ಭಾಷಿಕ ಸಮುದಾಯಗಳಲ್ಲಿ ಗೋಂದಲ ಮೂಡಿಸುತ್ತಿದೆಯಲ್ಲದೇ ಕನ್ನಡಿಗರ ಭಾವನಾತ್ಮಕವಾದ ನೆಲೆಗಟ್ಟಿಗೆ ಕಿರಿ ಕಿರಿ ಉಂಟು ಮೂಡುತ್ತಿದೆ. ಇವತ್ತು ಕರ್ನಾಟಕ ರಾಜ್ಯದಲ್ಲಿ ಮಕುಟ ಪ್ರಾಯದಂತಿರುವ ಬೆಳಗಾವಿ ಮತ್ತು ಕೇರಳದಲ್ಲಿರುವ ಕಾಸರಗೋಡು ಮತ್ತು ಅಲ್ಲಿನ ಕನ್ನಡಿಗರು ಆತಂಕದಲ್ಲಿ ಬದುಕುವ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ಕಾನೂನಾತ್ಮಕವಾಗಿ ಪ್ರಾದೇಶಿಕ ಬಾಷಾ ರಾಜ್ಯಗಳ ವಿಂಗಡಣೆ ಆಯಾ ಪ್ರಾಂತ್ಯದ ಜನ ಸಾಮಾನ್ಯರ ಒಪ್ಪಿಗೆಯನುಸಾರವಾಗಿ ಆಗಿದ್ದರೂ ಸಹಾ ರಾಜಕೀಯ ಹಿತಾಸಕ್ತಿಗಳು ಮತ್ತು ಕೋಮು ಸಂಘಟನೆಗಳ ಅವಿವೇಕತನದಿಂದ ರಾದ್ದಾಂತವಾಗುತ್ತಿದೆ. ಕರ್ನಾಟಕದ ಬೆಳಗಾವಿ ಕುರಿತು  ಮಹರಾಷ್ಟ್ರ ದ  ನಿಲುವು ಭಾರತದ ಕಾಶ್ಮೀರ ಹಾಗೂ ಪಾಕೀಸ್ಥಾನದ ನಡುವಣ ಸ್ಥಿತಿ ಇರುವಂತೆಯೇ ಇದೆ. ಆದರೆ ವ್ಯತ್ಯಾಸ ಒಂದೇ ಮಹರಾಷ್ಟ್ರ ಮತ್ತು ಕರ್ನಾಟಕ ಬೇರೆ ದೇಶಗಳಲ್ಲ ಎರಡೂ ಭಾರತ ದೇಶದ ರಾಜ್ಯಗಳು! ಹೀಗಿರುವಾಗ ಪದೇ ಪದೇ ಗಡಿನಾಡ ವಿವಾದ ಯಾಕೆ ಭುಗಿಲೇಳುತ್ತಿದೆ? ಇದರ ಹಿನ್ನೆಲೆ ಏನು? ಎಂಬ ಕುರಿತು ಅರಿಯುವ ಸಂಧರ್ಭ ಇದು.

     1947ರಲ್ಲಿ ಭಾರತಕ್ಕೆ ಸ್ವತಂತ್ರ ಬಂದ ಮೇಲೆ ಬೆಳಗಾಂ ಜಿಲ್ಲೆ ಬಾಂಬೆ ರಾಜ್ಯದ ಭಾಗವಾಗಿತ್ತು.1948ರಲ್ಲಿ ಬೆಳಗಾಂ ಮುನಿಸಿಪಲ್ಟಿ ಮಾಡಿಕೊಂಡ ಮನವಿ ಮೇರೆಗೆ ಗಣರಾಜ್ಯಗಳ ಒಕ್ಕೂಟಗಳ ಸಂಯುಕ್ತ ಮಹರಾಷ್ಟ್ರಕ್ಕೆ ಸೇರ್ಪಡೆಯಾಯಿತು. ಆದರೆ 1956ರಲ್ಲಿ ಗಣರಾಜ್ಯಗಳ ವಿಂಗಡಣೆಯಾದಾಗ ರಾಜ್ಯಗಳ ಪುನರ್ ಸಂಯೋಜನೆ ಕಾಯ್ದೆಯಡಿ ಮೈಸೂರು ಸಂಸ್ಥಾನಕ್ಕೆ ಸೇರ್ಪಡೆಯಾಯಿತು. ಅಂದರೆ ಇಂದಿನ ಕರ್ನಾಟಕ ರಾಜ್ಯ.ಹಾಗೆಯೇ ನಮ್ಮ ರಾಜ್ಯದ ಪರಿಮಿತಿಯಲ್ಲಿದ್ದ ಹಲವು ಪ್ರದೇಶಗಳು ಮಹರಾಷ್ಟ್ರ ರಾಜ್ಯಕ್ಕೆ ಸೇರ್ಪಡೆಯಾಯಿತು. ಈ ಸಂಧರ್ಭದಲ್ಲಿ ಭಾಷಿಕರು ಹಾಗೂ ಆಡಳಿತಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾಂ ಜಿಲ್ಲೆಯ ಸೇರ್ಪಡೆಯಾಯಿತಾದರೂ ಬೆಳಗಾಂ ನಲ್ಲಿ ಮಾತ್ರ ಮರಾಠಿ ಭಾಷಿಕರ ಸಂಖ್ಯೆಯದ್ದೇ ಮೇಲುಗೈ ಮತ್ತು ಅವರದ್ದೇ ದರ್ಬಾರು ಎನ್ನುವಂತಾಯಿತು. 
       ಐತಿಹಾಸಿಕವಾಗಿ ಬೆಳಗಾಂ ಕನ್ನಡಿಗರ ಪಾಲಿನ ಆಸ್ತಿಯಾಗಿತ್ತು ಮತ್ತು ಅನೇಕ ಅರಸರ ಸಂಸ್ಥಾನಕ್ಕೆ ಒಳಪಟ್ಟಿತ್ತು ಆದರೆ 18ನೇ ಶತಮಾನದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಈ ಭಾಗ ಮರಾಠರ ದಾಳಿಗೆ ಸಿಲುಕಿ ಪೇಶ್ವೆಗಳ ಆಡಳಿತಕ್ಕೆ ಸೇರ್ಪಡೆಯಾಯಿತಲ್ಲದೇ "ದಕ್ಷಿಣ ಮರಾಠ ದೇಶ" ಎಂದು ಕರೆಯಲ್ಪಟ್ಟಿದ್ದು ನಮ್ಮ ಉತ್ತರ ಕರ್ನಾಟಕದ ಭಾಗದ ದುರಂತ ಕಥನಗಳಲ್ಲೊಂದು.ಬ್ರೀಟೀಷರು ಭಾರತವನ್ನ ಅತಿಕ್ರಮಣ ಮಾಡಿದ ಮೇಲೆ ಜಹಗೀರುಗಳಾಗಿ ಅದನ್ನು ಹರಿದು ಹಂಚಿದರು, ಅಲ್ಲೆಲ್ಲ ಬಹುತೇಕ ಕನ್ನಡಿಗ ಭಾಷಿಕರ ಸಂಖ್ಯೆಯೆ ಹೆಚ್ಚಿತ್ತು.ಮುಂದೆ ಭಾಷಾ ಒಕ್ಕೂಟ ರಾಜ್ಯಗಳು ರಚನೆಯಾದ ಮೇಲೆ ಬೆಳಗಾವಿ ಜಿಲ್ಲೆ ಕನ್ನಡಕ್ಕೆ ಸೇರ್ಪಡೆಗೊಂಡಿದ್ದು ಇತಿಹಾಸ. ಆದರೆ  ಮಹರಾಷ್ಟ್ರ ರಾಜ್ಯದ ತಂಟೆ ತಕರಾರನ್ನು ಸಲ್ಲಿಸಿದ ಮೇಲೆ ಭಾರತ ಸರ್ಕಾಗ ಗಡಿ ವಿವಾದ ಬಗೆಹರಿಸಲು 5ನೇ ಜೂನ್ 1960ರಂದು 4ಜನ ಸದಸ್ಯರುಗಳನ್ನೊಳಗೊಂಡ ಮಹಾಜನ್ ಆಯೊಗದ ರಚನೆ ಮಾಡಿ ವರದಿ ನೀಡುವಂತೆ ಹೇಳಿತು. ಈ ಸಮಿತಿಯಲ್ಲಿ ಮೈಸೂರು ರಾಜ್ಯದ ಇಬ್ಬರು ಸದಸ್ಯರು ಹಾಗೂ ಮಹರಾಷ್ಟ್ರದ ಇಬ್ಬರು ಪ್ರತಿನಿಧಿಗಳಿದ್ದರು. ಮಹರಾಷ್ಟ್ರದ ಕ್ಯಾತೆಯಿಂದಾಗಿ ಈ ಸಮಿತಿ ವರದಿ ನೀಡುವಲ್ಲಿ ವಿಫಲವಾಯಿತು. ಹಾಗಾಗಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿತ್ತು. 
       ಮುಂದೆ ಮತ್ತೆ ಮತ್ತೆ ಗಡಿ ವಿವಾದವನ್ನು ಕೆದಕುತ್ತಿದ್ದ ಮಹಾರಾಷ್ಟ್ರದಲ್ಲಿ ಸೇನಾಪತಿ ಬಾಪಟ್ ಎಂಬ ಜನನಾಯಕನೊಬ್ಬ ಗಡಿ ವಿವಾದ ಬಗೆ ಹರಿಸುವಂತೆ ಉಪವಾಸ ಸತ್ಯಾಗ್ರಹ ನಡೆಸಿ ಒತ್ತಡ ಹೇರಿದ್ದರಿಂದ ಭಾರತ ಸರ್ಕಾರ ಮತ್ತೊಮ್ಮೆ 1966ರಲ್ಲಿ ಮಹಾಜನ್ ಆಯೊಗವನ್ನು ಪುನರ್ ರಚಿಸಿತು. 1967ರಲ್ಲಿ ಈ ಆಯೋಗವನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಭಾರತ ದೇಶದ ಸುಪ್ರೀಂ ಕೊರ್ಟಿನ 3ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮೆಹರ್ ಚಂದ್ ಮಹಾಜನ್ ಆಯೋಗದ ಅಧ್ಯಕ್ಷರಾಗಿದ್ದರಿಂದ ಆಯೋಗದ ವರದಿಗೆ ಮಹಾಜನ್ ಆಯೊಗದ ವರದಿ ಎಂದೆ ಹೆಸರಾಗಿದೆ. ಆಯೋಗವೂ ಎರಡು ರಾಜ್ಯಗಳ ವಾದ ವಿವಾದವನ್ನು ಆಲಿಸಿ ಪರಿಶೀಲಿಸಿ ಪ್ರದೇಶಗಳ ಅದಲು ಬದಲು ಮಾಡಿಕೊಳ್ಳಲು ಸೂಚಿಸಿತಲ್ಲದೇ ಮಹರಾಷ್ಟ್ರ ಕೇಳಿದ್ದ ಬೆಳಗಾಂ ಕೇಂದ್ರ ಸ್ಥಾನ ನಗರವನ್ನು ಬದಲಿಸಲು ಸ್ಪಷ್ಠವಾಗಿ ನಿರಾಕರಿಸಿತು. ಇದಕ್ಕಾಗಿ ಆಯೋಗವು 2240ಕ್ಕೂ ಹೆಚ್ಚು ಮನವಿಗಳನ್ನು ಆಲಿಸಿತು, 7572ಕ್ಕೂ ಹೆಚ್ಚು ಜನರನ್ನು ಖುದ್ದಾಗಿ ಮಾತನಾಡಿಸಿತು ನಂತರವಷ್ಟೇ ತನ್ನ ವರದಿಯನ್ನು ಕೆಂದ್ರಕ್ಕೆ ಸಲ್ಲಿಸಿತು. ಈ ಸಂಧರ್ಭದಲ್ಲಿ ಮಹರಾಷ್ಟ್ರ ಬೆಳಗಾಂ ಸೇರಿದಂತೆ 814ಪ್ರದೇಶಗಳನ್ನು ಕೇಳಿದ್ದಕ್ಕೆ ದಕ್ಕಿದ್ದು ನಿಪ್ಪಾಣಿ, ಖಾನಾಪುರ ಮತ್ತು ನಂದಗಢ್ ಸೇರಿದಂತೆ 262ಗ್ರಾಮಗಳು, ಮೈಸೂರು ಸಂಸ್ಥಾನವೂ  ಬಯಸಿದ್ದ 516 ಹಳ್ಳಿಗಳ ಪೈಕಿ ಸಿಕ್ಕಿದ್ದು ಕೇವಲ 247. ಹೀಗೆ ಮಹಾಜನ್ ಆಯೋಗ ತನ್ನ ವರದಿ ನೀಡಿದ ಸಂಧರ್ಭದಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹೇಳಿತ್ತು. 1920ರಲ್ಲಿ ಕಾಸ್ಮೋಪಾಲಿಟನ್ ಸಿಟಿಯಾಗಿದ್ದ ಬೆಳಗಾಂ ನಗರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಾ ಸಭೆ ನಡೆದಾಗ ಯಾವೊಬ್ಬ ಮರಾಠಿ ನಾಯಕನೂ ಬೆಳಗಾಂ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳಿರಲಿಲ್ಲ, ಬೆಳಗಾಂ ನಗರ ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಪಟ್ಟಣಗಳು ಮತ್ತು ಹಳ್ಳಿಗಳು ಅಪ್ಪಟ ಕನ್ನಡಿಗರಿಂದಲೇ ಕೂಡಿರುವುದರಿಂದ ಬೆಳಗಾಂ ಮೈಸೂರು ಸಂಸ್ಥಾನದ ಭಾಗ ಎಂದು ಸಾರಿತ್ತು. ಮುಂದೆ ಆಯೋಗದ ಅಂತಿಮ ವರದಿ ಸಲ್ಲಿಕೆಯಾದಾಗ ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಮಹಾಜನ್ ಆಯೋಗದ ಶಿಫಾರಸ್ಸುಗಳಿಗೆ ಅನುಮೋದನೆ ನೀಡಿದ್ದರು. 
       ಆದರೆ ಮಹರಾಷ್ಟ್ರ ಸರ್ಕಾರ ಸುತರಾಂ ಒಪ್ಪದೇ ಮಹಾಜನ್ ಆಯೋಗದ ವರದಿಯನ್ನ ತಿರಸ್ಕರಿಸಿತ್ತು. ಆದಾಗ್ಯೂ ವಿವಾದ ನ್ಯಾಯಾಲಯದ ಮೆಟ್ಟಿಲೇರಿದಾಗ ನ್ಯಾಯಾಲಯವೂ ಸಹಾ ಮಹಾಜನ್ ಆಯೋಗದ ವರದಿ ಅಂತಿಮ ಎಂದೇ ಸಾರಿದೆ. ಆದರೆ ಬೆಂಬಿಡದೇ ತಕರಾರು ತೆಗೆಯುತ್ತಿರುವ ಮಹರಾಷ್ಟ್ರ ನ್ಯಾಯಾಲಯದ ಆದೇಶಗಳನ್ನ ಉಲ್ಲಂಘಿಸಿ ಪ್ರಾದೇಶಿಕ ಭಾಷಿಗರ ಭಾವನಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದೆ. ಅದರ ಪರಿಣಾಮವೇ ಬೆಳಗಾವಿ ಜಿಲ್ಲೆಯ ಯಳ್ಳೂರ ಘಟನೆ. ಇದ್ದಕ್ಕಿಂದತೆಯೇ ರಾತ್ರೋ ರಾತ್ರಿ ಕರ್ನಾಟಕಕ್ಕೆ ಸೇರಿದ ಹಳ್ಳಿಯೊಂದರಲ್ಲಿ ಮಹರಾಷ್ಟ್ರ ರಾಜ್ಯ ಯಳ್ಳುರು ಎಂದು ನಾಮಫಲಕ ಹಾಕಿದರೆ ಅದನ್ನ ಒಪ್ಪಿಕೊಳ್ಳಬೇಕೆ? ಈ ಘಟನೆಯನ್ನ ನ್ಯಾಯಾಲಯ ಪರಿಮಿತಿಗೆ ತಂದು ಜಿಲ್ಲಾಡಳಿತದ ಮೂಲಕ ತೆರವು ಮಾಡಿಸಿದರೆ ತಪ್ಪೇ? ಇದನ್ನೇ ದೊಡ್ಡ ಸಮಸ್ಯೆಯಂತೆ ಬಿಂಬಿಸಿದ ಶಿವಸೇನಾ ಎಂಬ ಕೋಮು ಕಪಿಗಳ ತಂಡ ರಾಜ್ಯದ ಬಸ್ ಗಳ ಮೇಲೆ ಕಲ್ಲು ತೂರಿ ಕನ್ನಡ ಭಾಷಿಕರ ಮೇಲೆ ದೌರ್ಜನ್ಯ ಎಸಗಿದರೆ ಸಹಿಸಬೇಕೆ? ನಾಮಫಲಕ ತೆರವು ಗೊಳಿಸುವ ಸಂಧರ್ಭದಲ್ಲಿ ಗಲಭೆ ಉಂಟಾಯಿತೆಂಬ ಕುಂಟು ನೆಪ ಹೇಳಿ ಮಹರಾಷ್ಟ್ರ ಸರ್ಕಾರ ತನ್ನ ಜಿಲ್ಲಾಧಿಕಾರಿಯನ್ನು ಬೆಳಗಾವಿಗೆ ಕಳುಹಿಸುವುದನ್ನು ಸಹಿಸಬೇಕೆ? ಎಂಇಎಸ್ ಎಂಬ ಪುಂಡರ ತಂಡ ಮರಾಠಿ ಮೇಳ, ಸಭೆ ಇತ್ಯಾದಿಗಳನ್ನು ಮಾಡಿ ನಮ್ಮ ಶಾಂತಿಗೆ ಭಂಗ ತರುವುದನ್ನು ಎಷ್ಟು ದಿನ ನೋಡಿಕೊಂಡಿರಲು ಸಾಧ್ಯ? ಎಂಇಎಸ್ ಎಂಬ ಪುಂಡರ ಪಡೆ ಚುನಾವಣೆಗಳಲ್ಲಿ ಮರಾಠಿಗರನ್ನೇ ಆಯ್ಕೆ ಮಾಡಿಕೊಂಡು ಕನ್ನಡಿಗರಿಗೆ ಆಡಳಿತ ದಕ್ಕದಂತೆ ಮಹಾನಗರಪಾಲಿಕೆಯಲ್ಲಿ ಪುಂಡಾಟಿಕೆ ನಡೆಸುತ್ತದೆ. ಕನ್ನಡದ ಮೇಯರ್ ಗಳಿಗೆ ಸದಸ್ಯರುಗಳಿಗೆ ಚಪ್ಪಲಿ ಸೇವೆ ಹಿಯಾಳಿಕೆ ಮಾಡುತ್ತದೆ ಎಂಬುದನ್ನು ಸಹಿಸಬೇಕೆ? ಕರ್ನಾಟಕ ರಕ್ಷಣ ವೇದಿಕೆಯ ನಾರಾಯಣಗೌಡರಿಗೆ ಈ ವಿಚಾರದಲ್ಲಿ ಹ್ಯಾಟ್ಸ್ ಆಫ್ ಹೇಳಲೇ ಬೇಕು, ರಾಜ್ಯ ಸರ್ಕಾರ ಮೈ ಮರೆತು ಕೂತಾಗ ಗಡಿನಾಡ ಜನರ ರಕ್ಷಣೆಗೆ ದಾವಿಸಿ ಹೋರಾಟದ ಮೂಲಕ ಬಿಸಿ ಮುಟ್ಟಿಸಿ ಕನ್ನಡಿಗರು ಆಡಳಿತ ಚುಕ್ಕಾಣಿ ಹಿಡಿಯುವಂತಹ ಕಾರ್ಯ ಮಾಡಿದ್ದು  ಒಬ್ಬ ಹೋರಾಟಗಾರ ಎಂಬುದು ಸಾಮಾನ್ಯ ಸಂಗತಿಯಲ್ಲ. 
      ಇವತ್ತು ಮತ್ತೆ ತಕರಾರು ಭುಗಿಲೆದ್ದಿದೆ, ಅಲ್ಲಿ ಶಾಸಕನಾಗಿರುವ ಎಂಇಎಸ್ ಪಡೆಯ ಶಾಸಕ ಸಂಭಾಜಿ ಪಾಟೀಲ ಪುಂಡಾಟಿಕೆಗೆ ಕುಮ್ಮಕ್ಕು ನೀಡುತ್ತ ಪರೋಕ್ಷವಾಗಿ ಯಳ್ಳೂರು ಸಮಸ್ಯೆಗೆ ಕಾರಣಕರ್ತನಾಗಿದ್ದಾನೆ. ಮಹರಾಷ್ಟ್ರ ಭಾಗದಲ್ಲಿ ಇನ್ನೆರೆಡು ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ತನ್ನ ಕಡೆಯ ಎಂಇಎಸ್ ಪುಂಡನೊಬ್ಬನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭಾವನೆಗಳನ್ನು ಕೆದಕುವ ಕೆಲಸ ಮಾಡಿದ್ದಾನೆ. ತಕ್ಷಣದಿಂದ ಈತನ ವಿಧಾನ ಸಭಾ  ಸದಸ್ಯತ್ವ ರದ್ದಾಗುವಂತೆ ಕ್ರಮ ಜರುಗಿಸ ಬೇಕಾದಂತ ಅಗತ್ಯವಿದೆ. ರಾಜ್ಯ ಸರ್ಕಾರ ಸಧ್ಯ ಪರಿಸ್ಥಿತಿಯನ್ನು ನಿಭಾಯಿಸಲು ಹೇಮಂತ್ ನಿಂಬಾಳ್ಕರ್ ಎಂಬ ಐಪಿಎಸ್ ಅಧಿಕಾರಿಯನ್ನು ಕಳುಹಿಸಿದೆ ಆತನೊ ಮಹರಾಷ್ಟ್ರೀಯ ಅಲ್ಲಿ ಎಂತಹ ನ್ಯಾಯ ನಿರೀಕ್ಷಿಸಲು ಸಾಧ್ಯ? ಸರ್ಕಾರ ಕೋಟ್ಯಾಂತ ವೆಚ್ಚ ಮಾಡಿ ವಿಧಾನ ಸೌಧ ನಿರ್ಮಿಸಿ ಅಲ್ಲಿ ವರ್ಷಕ್ಕೊಂದು ಸಲ ಪಿಕ್ ನಿಕ್ ಹೋಗಿ ಸದನ ನಡೆಸಿದರೆ ಸಾಲದು ಕಠಿಣ ನಿರ್ದಾರಗಳನ್ನು ಗಡಿ ರಕ್ಷಣೆ ಕುರಿತು ತೆಗೆದುಕೊಳ್ಳಬೇಕಿದೆ. ಗಡಿನಾಡ ಶಾಲೆಗಳ ಸ್ಥಾಪನೆ, ಮೂಲ ಸೌಕರ್ಯಗಳು, ಜನಸಾಮಾನ್ಯರ ಬದುಕುಗಳನ್ನು ಹಸನಾಗಿಸುವ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಎಂಇಎಸ್ ಪುಂಡಾಟಿಕೆಯನ್ನು ನಿರ್ನಾಮ ಮಾಡುವ ಜೊತೆಗೆ ರಾಜ್ಯದಲ್ಲಿ ಆ ಸಂಘಟನೆಯನ್ನೆ ನಿಷೇದಿಸ ಬೇಕಿದೆ. ಬೆಳಗಾಂ ನಲ್ಲಿ ಕನ್ನಡಿಗರ ಕಾರ್ಯಕ್ರಮಗಳು, ಹೋರಾಟಗಳು ನಡೆಯಲು ಅವಕಾಶವನ್ನು ಕಲ್ಪಿಸಬೇಕು, ವಿವಾದ ಭುಗಿಲೆದ್ದಾಗ ಮಾತ್ರ ಎಚ್ಚರವಿದ್ದು ಬಾಕಿಯ ಸಮಯದಲ್ಲಿ ನಿದ್ರಿಸುವುದನ್ನು ಬಿಡಬೇಕು. ಗಡಿನಾಡ ಕನ್ನಡಿಗರ ಪರವಾಗಿ ಹೋರಾಟ ನಡೆಸುವ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರುಗಳ ಗಣ್ಯರ ವಿರುದ್ದ ಯಾವ ದೂರುಗಳನ್ನು ಹಾಕಬಾರದು ಮತ್ತು ಗಡಿ ನಾಡ ಹೋರಾಟಗಳಿಗೆ ಹಾಕಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆದು ಮಹರಾಷ್ಟ್ರದ ಶಿಖಂಡಿ ಕದನಕ್ಕೆ ಬ್ರೇಕ್ ಹಾಕುವ ಇಚ್ಚಾಶಕ್ತಿಯನ್ನು ಕರ್ನಾಟಕ ರಾಜ್ಯ ಪ್ರದರ್ಶಿಸಲಿ.

Sunday, July 20, 2014

ಹುಚ್ಚುಮನಸ್ಸಿನ ವಿಕೃತಿಗಳು ಮತ್ತು ಒಂದು ಅನ್ಯಾಯ!


ಇವತ್ತಿಗೆ ಸರಿಯಾಗಿ ಹದಿನೈದು ದಿನಗಳಷ್ಠೆ! ಬೆಳಿಗ್ಗೆ 10.30ರ ವೇಳೆಗೆ ಬಂದ ದೂರವಾಣಿ ಕರೆಯೊಂದು ನನ್ನ ಮನಸ್ಸಿಗೆ ಆಘಾತ ಉಂಟುಮಾಡಿತ್ತು.ಹಾಸನ ಜಿಲ್ಲೆಯ ಕೊಣನೂರು ಗ್ರಾಮದ ಪರಿಧಿಯಲ್ಲಿ ಬರುವ ಗ್ರಾಮವೊಂದರಲ್ಲಿ ಪಕ್ಕದ ಮನೆಯ ವಿಕೃತ ಯುವಕನೊಬ್ಬ ಮನೆ ಮುಂದೆ ಆಡುತ್ತಿದ್ದ 4-5ವಯಸ್ಸಿನ ಪುಟ್ಟ ಮಗುವನ್ನ ಮನಯೊಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದನಲ್ಲದೇ ನಂತರವೂ ಅತ್ಯಂತ ಹೀನಾಯವಾಗಿ ಮಗುವಿನೊಂದಿಗೆ ನಡೆದುಕೊಂಡಿದ್ದ. 2ದಿನಗಳ ನಂತರ ಮಗು ತೀವ್ರ ಜ್ವರ ಮತ್ತು ಉದರ ಬಾಧೆಯಿಂದ ನರಳಿ ಮಲಗಿತು, ಗಾಬರಿಗೊಂಡ ಪೋಷಕರು ಕೊಣನೂರು ಠಾಣೆಯ ಪಕ್ಕದಲ್ಲೇ ಇರುವ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗಲೇ ಘೋರ ಸತ್ಯದ ಅನಾವರಣಗೊಂಡಿದ್ದು. ಬಹುಶ: ಅಲ್ಲಿ ಪರೀಕ್ಷಿಸಿದ ವೈದ್ಯರು ಮಗುವಿನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳದಿದ್ದರೆ ಹೊರ ಜಗತ್ತಿಗೆ ಅದು ತಿಳಿಯುತ್ತಿರಲಿಲ್ಲವೇನೋ. ಇದು ಒತ್ತಟ್ಟಿಗಿರಲಿ ಇದಕ್ಕಿಂತಲೂ ಅತ್ಯಂತ ಕೆಟ್ಟ ಸಂಗತಿಯೆಂದರೆ ಜಾತೀಯ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನ ಮುಚ್ಚಿ ಹಾಕಿ ರಾಜೀ ಮಾಡಿಸಲು ಸಮುದಾಯದ ಮಂದಿ ಪ್ರಯತ್ನಿಸಿದ್ದು. ಅದೃಷ್ಠವಶಾತ್ ಹೀನ ಮನಸ್ಥಿತಿಯ ಜನರ ಪ್ರಯತ್ನ ಕೈಗೂಡಲಿಲ್ಲ ಕೇಸು ದಾಖಲಾಯ್ತು, ವಿಕೃತನನ್ನು ಜೈಲಿಗಟ್ಟಲಾಯ್ತು. ಸುದ್ದಿ ಮಾಧ್ಯಮಗಳಲ್ಲೂ ಪ್ರಕಟವಾಯಿತು, ಭಾವನಾತ್ಮಕವಾಗಿ ಮಿಡಿಯಬೇಕಾದ ಹೃದಯಗಳು ಈ ಸಂಧರ್ಭದಲ್ಲಿ ನಿದ್ರಾವಸ್ಥೆಯಲ್ಲಿದ್ದವು ಈ ಸುದ್ದಿಗಿಂತ ಅವತ್ತು ಕೇಂದ್ರ ಬಜೆಟ್ ಎಲ್ಲರಿಗೂ ಮುಖ್ಯವಾಗಿತ್ತು. ಮಾನವೀಯತೆಯ ತುಡಿತ ಸತ್ತು ಮಲಗಿತ್ತು.  ಮೀಡಿಯಾಗಳಲ್ಲೂ ಈ ಸುದ್ದಿಗೆ ಆಧ್ಯತೆ ಇರಲಿಲ್ಲ ಎಂಬುದು ಅಷ್ಟೇ ವಿಷಾಧನೀಯ ಸಂಗತಿ. 
         ಇವತ್ತು ಬೆಂಗಳೂರಿನಲ್ಲೇನಾಗಿದೆ? 1ನೇ ತರಗತಿಯಲ್ಲಿ ಓದುತ್ತಿದ್ದ ವಿಬ್ ಗಯಾರ್ ಶಾಲೆಯ ಮಗುವಿನ ಮೇಲೆ ಶಾಲೆಯಲ್ಲೇ ವಿಕೃತಿಯನ್ನ ಪ್ರದರ್ಶಿಸಲಾಗಿದೆ ಎರಡು ದಿನಗಳ ನಂತರ ಘಟನೆ ಬೆಳಕಿಗೆ ಬಂದಿದೆ. ಹಾಗೆಯೇ ಕಳೆದ ವಾರ ಯುವತಿಯೋರ್ವಳ ಮೇಲೆ ವಿಕೃತರ ಗ್ಯಾಂಗ್ ದೌರ್ಜನ್ಯ ನಡೆಸಿದ್ದಲ್ಲದೇ ಅನೈಸರ್ಗಿಕ ವಿಕೃತಿಯನ್ನೆಸಗಿದೆ. ಮೀಡಿಯಾಗಳಲ್ಲಿ , ವಿಧಾನ ಸಭೆಗಳಲ್ಲಿ, ಜನಸಾಮಾನ್ಯರ ನಡುವೆ ಇದೇ ಚರ್ಚೆ ತಮಗೆ ತೋಚಿದ ರೀತಿಯಲ್ಲಿ ನಡೆಯುತ್ತಿದೆ. ನಗರ ಪ್ರದೇಶದಲ್ಲಿ ನಡೆದರೆ ಮಾತ್ರ ಅಂತಹ ವಿಕೃತಿಗಳಿಗೆ ಮಾನ್ಯತೆಯೇ ? ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅನಾಚಾರ ನಡೆದಾಗ ಕಠಿಣ ಕ್ರಮಕ್ಕೆ ಮತ್ತು ಕಾನೂನು ಜಾರಿಗೆ ಯಾಕೆ ಚರ್ಚೆಗಳು ನಡೆಯುವುದಿಲ್ಲ? ಮಿಡಿಯಾಗಳಲ್ಲಿ ಆಧ್ಯತೆ ಸಿಗಬೇಕಾದ ವಿಚಾರಗಳಿಗಿಂತ ವಿಕೃತಿಯ ಪರಮಾವಧಿಯನ್ನೆ ಎಳೆ ಎಳೆಯಾಗಿ ವಿವರಿಸಿ ಮತ್ತಷ್ಟು ವಿಕೃತಿಗೆ ಅವಕಾಶ ಮಾಡಿಕೊಡುವುದು ಸರಿಯೇ? ಸಾಮಾಜಿಕ ಸ್ವಾಸ್ತ್ಯ ಕಾಪಾಡ ಬೇಕಾದವರು ಯಾರು ? ಅರಿವಿನ ಪ್ರಜ್ಞೆ ಮೂಡಿಸುವ ಹೊಣೆಗಾರಿಕೆ ಯಾರದ್ದು ? ವಿಕೃತಿಯ ಬಲಿಪಶುವಾದವರು ಇಂತಹ ಕ್ರಿಯೆಗಳಿಂದ ಅನುಭವಿಸುವ ನೋವಿಗೆ ಪರಿಹಾರ ಏನು?

             ಹೌದು ಇಂತಹದ್ದೊಂದು ಚರ್ಚೆ ಇವತ್ತು ಅನಿವಾರ್ಯ,ಅತ್ಯಾಚಾರದಂತಹ ಹೀನ ಕ್ರಿಯೆಗೆ ಪೋಸ್ಕೋ ದಂತಹ ಕಠಿಣ ಕಾನೂನು ಜಾರಿಗೆ ಬರಲು ನಿರ್ಭಯಾ ಪ್ರಕರಣ ನಾಂದಿ ಹಾಡ ಬೇಕಾಯ್ತು, ಅದೇ ರೀತಿ ಬೆಂಗಳೂರಿನಲ್ಲಿ ನಡೆದಿರುವ  ಎರಡು ಹೀನ ಪ್ರಕರಣಗಳು ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕಾನೂನು ಜಾರಿಯಾಗುವಂತೆ ಕ್ರಿಯೆಗೆ ಸಾಕ್ಷಿಯಾಗಿದೆ. ಇವತ್ತು ಇಡೀ ಪ್ರಕರಣಗಳು ದೃಶ್ಯ ಮಾಧ್ಯಮಗಳ ಅತಿರೇಕದ ವರದಿಗಳಿಂದ ಆಗುತ್ತಿವೆಯೆಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ, ಸುಪ್ರಿಂ ಕೋರ್ಟು ನಿರ್ದೇಶನದಂತೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ಪೋಷಕರು, ಗೆಳೆಯರು, ಶಾಲೆ, ಕಾಲೇಜು ಮತ್ತು ಸಂತ್ರಸ್ಥರ ಯಾವುದೇ ಗುರುತಿಸಲ್ಪಡುವ ಸಂಗತಿಗಳನ್ನು ಪ್ರಕಟಿಸುವಂತಿಲ್ಲ, ಇಂತಹ ಕ್ರಿಯೆಗಳು ಸಂತ್ರಸ್ಥರನ್ನು ಭೂಮಿಯ ಮೇಲೆ ಬದುಕಿದ್ದು ಸತ್ತಂತೆ ಮಾಡಿ ಬಿಡುತ್ತವೆ ಮತ್ತು ನಿಖರವಾಗಿ ಹೇಳುವುದಾದರೆ ಯಾರಿಗಾದರೂ ತಿಳಿಯದಂತೆ ಅತ್ಯಾಚಾರ ಎಸಗುವ ಕಾಮುಕರಿಗಿಂತ ಸಾರ್ವತ್ರಿಕವಾಗಿ ಇದನ್ನು ಪ್ರಸಾರ ಮಾಡುವವರು ಹೆಚ್ಚು ಕ್ರೂರಿಗಳಾಗಿ ಬಿಡುತ್ತಾರೆ. ಅತ್ಯಾಚಾರ ನಡೆದಾಗ ಮಾನವೀಯ ತುಡಿತದ ವಿಚಾರಗಳಿಗೆ ಆಸ್ಪದವಾಗಬೇಕು ಕಾಮುಕರ ಶಿಕ್ಷೆಯ ಕುರಿತು ಚರ್ಚೆಗಳಾಗ ಬೇಕು ಆದರೆ ಮತೀಯ ಲಾಭದ ಕುರಿತ ಚರ್ಚೆ, ಅತ್ಯಾಚಾರ ಹೇಗೆ ಆಯಿತು ಎಂಬುದನ್ನು ಚಿತ್ರಗಳ ಮೂಲಕ ಸವಿವರವಾಗಿ ತಿಳಿಸುವ ಸಂಗತಿ ಇದೆಯಲ್ಲ ಅರಗಿಸಿಕೊಳ್ಳಲಾಗದ್ದು. 


           ಈ ಸಂಧರ್ಬದಲ್ಲಿ ಚರ್ಚೆಯಾಗಬೇಕಾದ ಮತ್ತೊಂದು ಅಂಶವೆಂದರೆ ಅತ್ಯಾಚಾರ ಪ್ರಕರಣದ ತನಿಖಾಧಿಕಾರಿಯ ಮೇಲೆ ದೇಶದಲ್ಲೇ ಮೊದಲ ಬಾರಿಗೆ 166(ಎ) ಪ್ರಕರಣ ದಾಖಲಾಗಿರುವುದು!ಬೆಂಗಳೂರು ಮಹಾನಗರದ ಪುಲಿಕೇಶಿ ನಗರ ಠಾಣ ವ್ಯಾಪ್ತಿಯಲ್ಲಿ ಯುವತಿಯೋರ್ವಳ ಮೇಲೆ  ಜರುಗಿದ ಅನೈಸರ್ಗಿಕ ಅತ್ಯಾಚಾರ ಪ್ರಕರಣದಲ್ಲಿ ಮೀಡಿಯಾಗಳ ವಿಕೃತಿಯಿಂದ ದಕ್ಷ ಮತ್ತು ಪ್ರಾಮಾಣಿಕರೆಂದೇ ಹೆಸರು ಮಾಡಿದ್ದ ರಾಜಧಾನಿಯ ಇನ್ಸ್ ಪೆಕ್ಟರ್  ಮೊಹಮ್ಮದ್ ರಫಿ ಅಮಾನತುಗೊಂಡಿದ್ದಲ್ಲದೇ ಬಂಧನಕ್ಕೊಳಗಾಗಿದ್ದು.  ಬಹುಶ: ಹಾಸನ ಜಿಲ್ಲೆಯ ಜನತೆಗೆ ತಿಳಿದಿರಲಾರದು ಈ ಮೊಹಮ್ಮದ್ ರಫಿ ಜಿಲ್ಲೆಯ ಅರಕಲಗೂಡು ಪಟ್ಟಣದವರು. ಇಡೀ ಪ್ರಕರಣದಲ್ಲಿ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತ ದಿನಕ್ಕೊಂದು ಗಾಸಿಪ್ ಸುದ್ದಿಗೆ ಆಹಾರವಾಗಿದ್ದಾರೆ. ಮೊಹಮ್ಮದ್ ರಫಿ ಬಿಎ, ಬಿಡಿ ಪಧವೀಧರ 1997 ರಿಂದ 1998ರ ವರೆಗೆ ಪ್ರೌಢಶಾಲಾ ಶಿಕ್ಷಕ ವೃತ್ತಿಯಲ್ಲಿದ್ದವರು. ಬೀಡಿ ಕಟ್ಟುವ ವೃತ್ತಿಯಲ್ಲಿ ತೊಡಗಿಸಿಕೊಂಡ ಬಡಕುಟುಂಬದಿಂದ ರಫಿ 1998ರಲ್ಲಿ ರಾಜ್ಯ ಪೋಲೀಸ್ ಸೇವೆಗೆ ಸೇರಿ ಎಸ್ಸೈ ಆದರು. ಕೋಲಾರ ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ ರಫಿ ಕೋಲಾರ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ರೌಡಿಗಳನ್ನು ಮಟ್ಟ ಹಾಕಿದರು, ಅನೇಕ ಪಾತಕಿಗಳನ್ನು ಎನ್ ಕೌಂಟರ್ ಮಾಡಿದರು, ಕೊಲೆಗೈದು 14ಕೆಜಿ ಚಿನ್ನ ಹೊತ್ತೊಯ್ದಿದ್ದ ಪಾತಕಿಯೇ ಠಾಣೆಯ ಮುಂದೆ ಜನರನ್ನ ಕಲೆಹಾಕಿ ಅಪರಾಧಿಗಳನ್ನು ಹಿಡಿಯುವಂತೆ ಪ್ರತಿಭಟನೆ ನಡೆಸುತ್ತಿದ್ದಾಗ ಕುಶಲತೆಯಿಂದ ಆತನನ್ನ ಹೆಡೆಮುರಿದು ಕಟ್ಟಿ ಜೈಲಿಗೆ ದಬ್ಬಿದ್ದು ರಫಿ ಹೆಸರನ್ನು ಇವತ್ತಿಗೂ ಅಜರಾಮರವಾಗಿಸಿದೆ. ಬೆಂಗಳೂರಿಗೆ ಇನ್ಸ್ ಪೆಕ್ಟರ್ ಆಗಿ ಬಂದ ಮೇಲೆ 1999 ರಿಂದ 2011ರ ವರೆಗೆ ಬೆಂಗಳೂರು ರೌಡಿ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ರಫಿ , ಜಾನ್ ಸನ್ ಎಂಬ ಪುರಾತನ ಪಾತಕಿಯನ್ನು ಮತ್ತು 14ವಿವಿಧ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ನಮ್ರಾಜ್ ಬಹಾದ್ದೂರ್ ಥಾಪ ಎಂಬಾತನನ್ನು ಶೂಟೌಟ್ ಮಾಡಿ ಕೆಡವಿ ಹಾಕಿದ್ದರು. ಅಷ್ಟೇ ಅಲ್ಲ 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ದೊಡ್ಡ ಗ್ಯಾಂಗ್ ಅನ್ನು ಸೆರೆಹಿಡಿದು ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರು, ಮಹಾನಗರದಲ್ಲಿರುವ ಯುಟಿವಿ ಮೋಷನ್ ಬೆದರಿಕೆ ಪ್ರಕರಣದಲ್ಲಿ ರವಿ ಪೂಜಾರಿ ಗ್ಯಾಂಗ್ ಅನ್ನು ಸದೆ ಬಡಿದಿದ್ದರಲ್ಲದೇ 37ಕೆಜಿ ಚಿನ್ನ ಮತ್ತು ನಗದು ವಶಪಡಿಸಿಕೊಂಡು 8ಕ್ಕೂ ಹೆಚ್ಚು ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರು. ಇದೇ ಕಾರಣಕ್ಕಾಗಿ ರಫಿಗೆ ಬಿಜೆಪಿ ಸರ್ಕಾರವಿದ್ದಾಗ  ಎರಡು ಬಾರಿ ಪುರಸ್ಕಾರವೂ ದೊರಕಿದೆ. ವೈಜ್ಞಾನಿಕ ತನಿಖೆಗಾಗಿ ಅತ್ಯುತ್ತಮ ವೈಜ್ಞಾನಿಕ ತನಿಖೆ ಪ್ರಶಸ್ತಿ ದಕ್ಕಿದ್ದರೆ, ಸೇವಾ ಶ್ರೇಷ್ಠತೆಗಾಗಿ ಮುಖ್ಯಮಂತ್ರಿಗಳ ಪದಕವನ್ನು ಪಡೆದಿದ್ದಾರೆ. ಇಂತಹ ರಫಿ ಅತ್ಯಾಚಾರದಂತಹ ಪ್ರಕರಣದಲ್ಲಿ ಅಮಾನತು ಮತ್ತು ಬಂದನಕ್ಕೊಳಗಾಗುವುದೆಂದರೆ ಚಕಿತಗೊಳ್ಳುವ ಸಂಗತಿ ಇದು. 
    ಪ್ರಕರಣದ ಹಿನ್ನೆಲೆಯನ್ನು ಕೆದಕಿದಾಗ ತಿಳಿದದ್ದು ಇಷ್ಟು ಕಳೆದ ಜುಲೈ 10ರಂದು ಬೆಂಗಳೂರಿನ ಯುವತಿಯ ಮೇಲೆ ನಡೆದ ದೌರ್ಜನ್ಯದ ಪ್ರಕರಣ ಠಾಣೆಯಲ್ಲಿ ದಾಖಲಾಗಿದ್ದುಜುಲೈ 13ರಂದು ಮದ್ಯ ರಾತ್ರಿ, ಅವತ್ತು ಪುಲಿಕೇಶಿ ನಗರ ಠಾಣೆಗೆ ಗೆಳೆಯನೊಂದಿಗೆ ಬಂದ ಯುವತಿ ಆರೋಪಿಯನ್ನು ಪೋಲೀಸ್ ವಶಕ್ಕೆ ನೀಡಿದಳೆ ಹೊರತು ಅತ್ಯಾಚಾರ ಪ್ರಕರಣ ದಾಖಲಿಸಲು ಸಿದ್ದಳಿರಲಿಲ್ಲ, ಕರ್ತವ್ಯದಲ್ಲಿದ್ದ ಎಎಸ್ಸೈ , ಠಾಣೆಯ ಇನ್ಸ್ ಪೆಕ್ಟರ್ ರಫಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಯುವತಿಯೊಂದಿಗೆ ಮಾತನಾಡಿದ ಅವರು ಪ್ರಕರಣದ ತೀವ್ರತೆ ಅರಿತು ದೂರು ನೀಡುವಂತೆ ಸಲಹೆ ಮಾಡಿದ್ದಾರೆ ಮತ್ತು ಅದೇ ಪ್ರಕಾರವಾಗಿ ಎಎಸ್ಸೈ ಸೆ.354 ಮತ್ತು 377ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಬಂದ ಇನ್ಸ್ ಪೆಕ್ಟರ್ ರಫಿ ಅಪರಾಧಿಯನ್ನ ವಿಚಾರಣೆಗೊಳಪಡಿಸಿದ್ದಾರೆ, ಆ ವೇಳೆಗೆ ದೂರುದಾರರು ಸ್ಥಳದಲ್ಲಿಲ್ಲ, ಸೋಮವಾರ ಅಪರಾಧಿಯನ್ನ ಜೈಲಿಗೆ ಅಟ್ಟಲಾಗಿದೆ, ಮಂಗಳವಾರ ಗೆಳೆಯನ ಜೊತೆ ಠಾಣೆಗೆ ಬಂದ ಯುವತಿ ದೂರಿನ ದೃಢೀಕರಣ ಪಡೆಯುವ ಸಂಧರ್ಬ ಬೆಂಗಳೂರಿನ ಸಂಜೆ ಆಂಗ್ಲ ಪತ್ರಿಕೆಯೊಂದರ ವರದಿಗಾರ ಗಮನಿಸಿದ್ದಾನೆ. ಪ್ರಕರಣದ ಪೂರ್ವಾಪರ ತಿಳಿಯುವ ಮುನ್ನವೇ ತನಗೆ ತೋಚಿದಂತೆ ಸುದ್ದಿ ಪ್ರಕಟಿಸಿದ್ದಾನೆ. ಕ್ಷಣ ಮಾತ್ರದಲ್ಲಿ ಸುದ್ದಿ ಮಿಂಚಿನಂತೆ ಹರಡಿ ದೃಶ್ಯ ಮಾಧ್ಯಮದ ಮಂದಿ ತಮಗೆ ತಿಳಿದಂತೆ ಸುದ್ದಿಯನ್ನು ವರದಿ ಮಾಡಿದ್ದಾರೆ. ರಫಿ ಪ್ರಕರಣವನ್ನ ರಾಜಿ ಮಾಡಲು ಯತ್ನಿಸಿದರು, ಸರಿಯಾದ ಪ್ರಕರಣ ದಾಖಲಿಸುವಲ್ಲಿ ನಿರ್ಲಕ್ಷ್ಯ ತೋರಿದರು ಆ ಮೂಲಕ ಅಪರಾಧಿಯನ್ನು ರಕ್ಷಿಸಲು ಯತ್ನಿಸಿದರು ಇತ್ಯಾದಿ ಅಷ್ಟೇ ಅಲ್ಲ ಮರುದಿನ ಬಂಧನಕ್ಕೊಳಗಾಗಿ ಅತ್ಯಾಚಾರ ಪ್ರಕರಣದ ಕೇಸು ದಾಖಲಿಸಲು ಸೆಕ್ಷನ್ ತಿಳಿದಿರಲಿಲ್ಲ ಎಂದೆಲ್ಲ ವರದಿಯಾಗಿದೆ. ಆದರೆ ಪೋಲೀಸ್ ದಾಖಲೆಗಳು ಹೇಳುವುದೇ ಬೇರೆ. ಅಸಲಿಗೆ ಪ್ರಕರಣ ದಾಖಲಿಸಿದ್ದು ಎಎಸ್ಸೈ ಮತ್ತು ಎಸ್ಸೈ, ಅಪರಾಧಿ ಬಂದನವಾಗಿ ಜೈಲಿಗಟ್ಟಿದ ಮೇಲೆ ಸುದ್ದಿ ಮಾಧ್ಯಮಗಳಲ್ಲಿ ಕಲ್ಪಿತ ಸುದ್ದಿಗಳ ಪ್ರಕಟವಾಗಿದೆ, ಬಂಧನಕ್ಕೊಳಗಾದ ರಫಿ ತನಿಖಾ ವೇಳೆ ಸೆಕ್ಷನ್ ಅರಿವಿರಲಿಲ್ಲ ಎಂದು ಹೇಳಿಕೆಯನ್ನೇ ನೀಡಿಲ್ಲ ಎಂದು ಪೋಲೀಸ್ ಮೂಲಗಳು ಖಚಿತವಾಗಿ ಹೇಳುತ್ತವೆ. ಸುದ್ದಿ ಮೀಡಿಯಾಗಳಲ್ಲಿ ಬಂದ ನಂತರ ಸ್ವತ: ಯುವತಿಯೇ ಪೋಲೀಸ್ ಕಮಿಷನರ್ ಬಳಿ ತೆರಳಿ ಇನ್ಸ್ ಪೆಕ್ಟರ್ ರಫಿಯದ್ದು ತಪ್ಪಿಲ್ಲ ಎಂದು ಹೇಳಿದ್ದಾಳೆ ಮತ್ತು ಪ್ರಕರಣದ ಕುರಿತು ಕಲ್ಪಿತ ಸುದ್ದಿ ಪ್ರಕಟಿಸಿದ ಮತ್ತು ತನ್ನ ಗುರುತನ್ನು ಪತ್ತೆ ಹಚ್ಚುವ ರೀತಿ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ದ ಅದೇ ಪುಲಿಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆದರೆ ಇದ್ಯಾವುದು ಇವತ್ತಿಗೂ ಸುದ್ದಿಯಾಗಿಲ್ಲ ಆದರೆ ಅಮಾಯಕ ಇನ್ಸ್ ಪೆಕ್ಟರ್ ಮೇಲೆ ವಿನಾಕಾರಣ ಕ್ರಮ ಜರುಗಿಸಲಾಗಿದೆ. ಅತ್ಯಾಚಾರದ ಪ್ರಕರಣ ತೀವ್ರತೆ ಒಬ್ಬ ಇನ್ಸ್ಪೆಕ್ಟರನನ್ನು ಆತನ ಪ್ರಾಮಾಣಿಕತೆ ಮತ್ತು ವಾಸ್ತವತೆಗಿಂತ ಜಾತೀಯ ನೆಲೆಗಟ್ಟಿನಲ್ಲಿ ನೋಡುವಂತಾಗಿದದು ಅತ್ಯಂತ ದುರದೃಷ್ಠಕರ. ಇನ್ಸ್ ಪೆಕ್ಟರ್ ಮೊಹಮ್ಮದ್ ರಫಿ  ಪ್ರಕರಣದಿಂದ ನೊಂದಿದ್ದಾರೆ  ಸಾರ್ವತ್ರಿಕವಾಗಿ ವಾಸ್ತವ ಸಂಗತಿಗಳನ್ನು ಅರುಹುವ ದೃಷ್ಟಿಯಿಂದ ಪ್ರಕರಣ ಸಮಾಪ್ತಿಯಾದ ಮೇಲೆ ಹೈಕೋರ್ಟುನಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತಿದ್ದಾರೆ. ಸತ್ಯ ಬೇಗ ಹೊರ ಬರಲಿ, ಅಪರಾಧಿಗಳಿಗೆ ಶಿಕ್ಷೆಯಾಗಲಿ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿ

Sunday, May 4, 2014

ಶತಮಾನೋತ್ಸವದ ಹೊಸ್ತಿಲಲ್ಲಿ ಕಸಾಪ

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರೋಬ್ಬರಿ 100ವರ್ಷ! ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಉಳಿವಿಗೆ, ಅಭಿವೃದ್ದಿಗೆ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿಕೊಂಡು ಬಂದಿದೆ, ಆದಾಗ್ಯೂ ಅನೇಕ ಟೀಕೆ ಟಿಪ್ಪಣಿಗಳು ಪರಿಷತ್ ಕುರಿತು ಇದ್ದೇ ಇದೆ. ಕೆಲ ವರ್ಷಗಳ ಹಿಂದೆ ಪರಿಷತ್ ಅಧ್ಯಕ್ಷ ಗಿರಿಗೆ ಕಿತ್ತಾಡಿಕೊಂಡು ಗಾದಿಯಿಂದ ವಂಚಿತಗೊಂಡ ಅತೃಪ್ತ ಆತ್ಮಗಳು ಕನ್ನಡ ಸಾಹಿತ್ಯ ಪರಿಷತ್ ಗೆ ಪರ್ಯಾಯ ಸಂಸ್ಥೆ ಕಟ್ಟುವ ವ್ಯರ್ಥ ಪ್ರಯತ್ನವನ್ನು ಮಾಡಿದ್ದುಂಟು. ಇಂಥವೆಲ್ಲ ಕ್ರಿಯೆಗಳ ಮದ್ಯೆ ಕನ್ನಡ ಸಾಹಿತ್ಯ ಪರಿಷತ್ ಯಾವ ಹಿತಾಸಕ್ತಿಗಳಿಗೂ ಮನ್ನಣೆ ಕೊಡದೇ ತನ್ನ ಕೆಲಸವನ್ನ ಸದ್ದಿಲ್ಲದೇ ಮಾಡಿಕೊಂಡು ಹೋಗುತ್ತಿದೆ. ಬಹುಶ: ಆ ಕಾರಣಕ್ಕಾಗಿಯೇ ಪರಿಷತ್ ಸ್ವತಂತ್ರ ಸಂಸ್ಥೆಯಾಗಿ ತನ್ನ ತನವನ್ನು ಉಳಿಸಿಕೊಂಡಿದೆ, ಹಾಗೂ ಹಿಂದೆಂದಿಗಿಂತಲೂ ಈ ಕಾಲಘಟ್ಟಕ್ಕೆ ಬದಲಾದ ಪರಿಸರದಲ್ಲಿ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಹಿತ್ಯ ಸೇವೆಯನ್ನ, ಭಾಷೆಯನ್ನು, ಸಂಸ್ಕೃತಿಯನ್ನ ಉಳಿಸುವ ಪ್ರಯತ್ನ ಮಾಡುತ್ತಿದೆ. 
     ಮೈಸೂರು ಸಂಸ್ಥಾನದ ನಾಲ್ಕನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ದಿವಾನರಾಗಿದ್ದ ಮೋಕ್ಷಗುಂಡುಂ ವಿಶ್ವೇಶ್ವರಯ್ಯ, ಒಡೆಯರ್ ಮಾರ್ಗದರ್ಶನದಲ್ಲಿ ಮೇ 3, 1915ರಂದು ಕನ್ನಡ ಭಾಷೆಯ ಉಳಿವು ಮತ್ತು ಅಭಿವೃದ್ದಿಗಾಗಿ ಹೆಚ್ ವಿ ನಂಜುಂಡಯ್ಯ ನೇತೃತ್ವದಲ್ಲಿ ಉಪಸಮಿತಿಯನ್ನು ರಚನೆ ಮಾಡಿದರು. ಹೆಚ್ ವಿ ನಂಜುಂಡಯ್ಯ ಮೈಸೂರು ವಿವಿಯ ಪ್ರಥಮ ಕುಲಪತಿಯಾಗಿದ್ದರು, ಕೆಲ ಕಾಲ ಒಡೆಯರ್ ಸಂಸ್ಥಾನದಲ್ಲಿ ಕಾರ್ಯನಿರ್ವಾಹಕ ದಿವಾನರಾಗಿಯೂ ಕೆಲಸ ಮಾಡಿದ್ದರೂ ಅಷ್ಠೇ ಅಲ್ಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಂದಿ ಹಾಡಿದ ಪ್ರಮುಖರೂ ಆಗಿದ್ದಾರೆ. ಅವತ್ತಿಗೆ ಕನ್ನಡದ ಸಲುವಾಗಿ ರಚನೆಯಾಗಿದ್ದ ಉಪಸಮಿತಿಯ ಉದ್ದೇಶ ರಾಜ್ಯ ಮತ್ತು ರಾಜ್ಯದ ಹೊರಗೆ ಹಂಚಿಹೋಗಿರುವ ಕನ್ನಡಿಗರಲ್ಲಿ ಏಕತೆ ತರುವುದು, ಪ್ರಾದೇಶಿಕ ಕನ್ನಡದ ಅಭಿವೃದ್ದಿಗೆ ಸಲಹೆಗಳನ್ನು ಸ್ವೀಕರಿಸುವುದು, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕನ್ನಡ ಭಾಷೆ ಪಠ್ಯವನ್ನು ಓದುವಂತೆ ಮಾಡುವುದು, ಕನ್ನಡ ಭಾಷಾ ಜ್ಞಾನಾಭಿವೃದ್ದಿಗೆ ಕನ್ನಡ ಪುಸ್ತಕಗಳ ಪ್ರಕಟಣೆ, ಬೇರೆ ಭಾಷೆಗಳಲ್ಲಿ ಬಳಕೆಯಾಗುವ ಪದಗಳ ಕನ್ನಡೀಕರಣ ಮುಖ್ಯವಾಗಿ ವಿಜ್ಞಾನದಲ್ಲಿ ಕನ್ನಡ ಬಳಕೆ ಅವತ್ತಿನ ಪ್ರಮುಖ ಆದ್ಯತೆಯಾಗಿತ್ತು. 
         ಉಪಸಮಿತಿ ಸಾರ್ವಜನಿಕ ಸಂವಹನ ನಡೆಸಿ ನೀಡಿದ ವರದಿಯ ಮೇರೆಗೆ ಬೆಂಗಳೂರಿನ ಸರ್ಕಾರಿ ಹೈಸ್ಕೂಲು ಆವರಣದಲ್ಲಿ ಸೇರಿದ್ದ ಸಾಹಿತಿಗಳು, ಕವಿಗಳು, ಪ್ರಗತಿ ಪರರು, ಕನ್ನಡಾಭಿಮಾನಿಗಳು, ಪತ್ರಕರ್ತರು, ಬುದ್ದಿಜೀವಿಗಳು ಕನ್ನಡ ಸಾಹಿತ್ಯ ಪರಿಷತ್ತು ರಚನೆಗೆ ಸಾಮೂಹಿಕ ಅನುಮೋದನೆ ನೀಡಿದರು ಹಾಗೆಯೇ ಹೆಚ್ ವಿ ನಂಜುಂಡಯ್ಯ ಸರ್ವಾನುಮತದಿಂದ ಮತ್ತು ಅವಿರೋಧವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಅಧ್ಯಕ್ಷರಾಗಿ ಚುನಾಯಿತರಾದರು. ಹೀಗೆ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಏಕಕಾಲದಲ್ಲಿ ಮದ್ರಾಸ್, ಮುಂಬೈ, ಹೈದ್ರಾಬಾದ್ ಮತ್ತು ಕೊಡಗು ನಲ್ಲಿ ಕಾರ್ಯ ಆರಂಬಿಸಿತು. ಹೀಗೆ ಪ್ರಥಮವಾಗಿ 5ವರ್ಷಗಳ ಅವಧಿಗೆ ಅಧಿಕಾರ ನಡೆಸಿದ ಹೆಚ್ ವಿ ನಂಜುಂಡಯ್ಯ ಮೊದಲ ಅಕ್ಷರ ಜಾತ್ರೆಗೆ ನಾಂದಿ ಹಾಡಿದರು. ನಂತರ ಕರ್ಪೂರ ಶ್ರೀನಿವಾಸ್ ರಾವ್ ಅಧ್ಯಕ್ಷರಾಗಿದ್ದ ಅವಧಿಗೆ ಈಗಿನ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡಕ್ಕೆ ಶಂಕು ಸ್ಥಾಪನೆಯಾಗಿ ಕೆಲಸವೂ ಆರಂಭಗೊಂಡಿತು, ಕಟ್ಟಡ ಒಂದೇ ವರ್ಷದಲ್ಲಿ ಪೂರ್ಣಗೊಂಡು ಶ್ರೀ ಕೃಷ್ಣರಾಜ ಪರಿಷನ್ಮಂದಿರವೆಂದು ನಾಮಕರಣಗೊಂಡಿತು. ಮುಂದೆ ಬಿ ಎಂ ಶ್ರೀಕಂಠಯ್ಯ ಅಧ್ಯಕ್ಷರಾಗಿದ್ದಾಗ ಅದುವರೆಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಆಗಿದ್ದುದು ಶ್ರೀಕಂಠಯ್ಯನವರ ಸಲಹೆ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತು ಎಂದು 1938ರಲ್ಲಿ ಹೆಸರು ಬದಲಿಸಿಕೊಂಡಿತು. 
           ಸಾಹಿತ್ಯ ಪರಿಷತ್ತಿನ ಕಾರ್ಯ ವಿಸ್ತರಣೆಗೊಂಡು ಪ್ರತೀ ತಾಲೂಕು ಕೇಂದ್ರಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವ ಕಂಡು ಕೊಂಡಿತು. ಪ್ರತೀ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕಗಳ ಪ್ರಕಟಣೆ, ದತ್ತಿ ಸ್ಥಾಪನೆ, ಸಾಹಿತಿಗಳ, ಕನ್ನಡ ಹೋರಾಟಗಾರರ ಪುರಸ್ಕಾರ, ಕಟ್ಟಡಗಳ ನಿರ್ಮಾಣ ಹೀಗೆ ಪರಿಷತ್ತು ತನ್ನದೇ ಆದ ರೀತಿಯಲ್ಲಿ ಅಂದಿನಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದೆ. ಅನೇಕ ಮಂದಿ ಘಟಾನುಘಟಿಗಳು ಸಾಹಿತಿಗಳು, ಸಾಹಿತ್ಯಾಸಕ್ತರು, ಸರ್ಕಾರಿ ಅಧಿಕಾರಿಗಳಾಗಿದ್ದವರು, ನೌಕರರಾಗಿದ್ದವರು, ಕನ್ನಡಾಭಿಮಾನಿಗಳು ಕೇಂದ್ರ ಪರಿಷತ್ತಿನ ಗದ್ದುಗೆಗೆ ಬಂದಿದ್ದಾರೆ. ಪರಿಷತ್ತಿನ ಚಟುವಟಿಕೆಗಳಿಗೆ ಸರ್ಕಾರವೂ ಸಹಾ ಪ್ರತೀ ವರ್ಷ ಆರ್ಥಿಕ ಸಹಾಯವನ್ನು ಮಾಡುತ್ತಾ ಬಂದಿದೆ. ಈ ನಡುವೆ 1987ರಲ್ಲಿ ಲೆಕ್ಕ ಪತ್ರಗಳ ವ್ಯತ್ಯಾಸವಾದಾಗ ಸರ್ಕಾರ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು 1989ರಲ್ಲಿ ಆಡಳಿತಾಧಿಕಾರಿಯನ್ನು ವಾಪಾಸ್ ಪಡೆಯಿತು. 
          ಪರಿಷತ್ತಿಗೆ ಅಧ್ಯಕ್ಷರಾಗಿ ಬಂದವರೆಲ್ಲ ಒಂದಲ್ಲ ಒಂದು ರೀತಿ ಹೊಸ ಕಾರ್ಯಕ್ರಮಗಳ ಮೂಲಕ ಒಳ್ಳೆ ಕೆಲಸಗಳನ್ನೇ ಮಾಡಿ ಹೋಗಿದ್ದಾರೆ, ಈ ನಡುವೆ ರಾಜಕಾರಣಿಗಳು ಇಲ್ಲವೇ ಸರ್ಕಾರ ಪರಿಷತ್ತನ್ನು ಅಂಕೆಯಲ್ಲಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನವನ್ನು ಹಲವು ಸಲ ಮಾಡಿದ್ದರೂ ಅದನ್ನು ಮೀರಿ ಪರಿಷತ್ತು ಬೆಳೆಯುತ್ತಿದೆಯೆಂಬುದು ಹೆಮ್ಮೆಯ ಸಂಗತಿ. ಪರಿಷತ್ತಿಗೆ ಆರ್ಥಿಕ ಶಕ್ತಿ ಮತ್ತು ರಚನಾತ್ಮಕವಾದ ಕೆಲಸಗಳಾಗಿದ್ದು ಡಾ ನಲ್ಲೂರು ಪ್ರಸಾದ್ ಅವರ ಅವಧಿಯಲ್ಲಿ. ಅತ್ಯಂತ ಕಡಿಮೆ ಅನುದಾನದಲ್ಲಿ ಕುಂಟುತ್ತಾ ಸಾಗಿದ್ದ ಕೆಲಸಗಳು ಇವರ ಅವಧಿಯಲ್ಲಿ ಚೈತನ್ಯ ಪಡೆದು ಪರಿಷತ್ತು ಸೆಟೆದು ನಿಲ್ಲುವಂತಾಗಿದ್ದು ಹೆಮ್ಮೆಯ ಸಂಗತಿ. ನಲ್ಲೂರು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಅನುದಾನವನ್ನು ರಾಜ್ಯದ ಬಜೆಟ್ ನಲ್ಲಿ ಮೀಸಲಿಡುವಂತ ಮಾಡಿದ್ದು ಮತ್ತು ಪ್ರತೀ ತಾಲೂಕುಗಳಿಗೆ ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ, ಪರಿಷತ್ತು ಘಟಕಗಳ ನಿರ್ವಹಣೆಗೆ ಅನುದಾನ ಒದಗಿಸಿದೆ ಕೀರ್ತಿಗೆ ಭಾಜನರಾಗುತ್ತಾರೆ. ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷರಾಗಿರುವ ಪುಂಡಲೀಕ ಹಾಲಂಬಿ ಕೂಡ ಒಳ್ಳೆಯ ಸಂಘಟನಾ ಚಾತುರ್ಯ ಉಳ್ಳವರು ಜೊತೆಗೆ ಪರಿಷತ್ತಿಗೆ ಶಾಶ್ವತವಾದ ಕೆಲಸಗಳನ್ನು ಮಾಡುವ ಉತ್ಸಾಹದಲ್ಲಿದ್ದಾರೆ. ಆದ್ದರಿಂದಲೆ ಶತಮಾನೋತ್ಸವಕ್ಕೆ ಮಹತ್ವದ ಕಾರ್ಯಕ್ರಮಗಳು ರೂಪಿಗೊಂಡಿವೆ. 
       ಇದೆಲ್ಲಾ ಸರಿ ಆದರೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಕಣ್ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಟ್ಟಿಯಾದ ಪ್ರಯತ್ನ ಮಾಡುತ್ತಿಲ್ಲ, ಗಡಿನಾಡ ಕನ್ನಡಿಗರ ಹಿತಾಸಕ್ತಿ ಮತ್ತು ಅಲ್ಲಿನ ಕನ್ನಡ ಶಾಲೆಗಳ ಕುರಿತು ಗಮನ ಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎನ್ನುವ ಗಂಭೀರ ಆರೋಪಗಳಿವೆ. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಮಾಜದ ಎಲ್ಲ ಸ್ಥರದ ಜನರನ್ನು ಒಂದೇ ಮುಖ್ಯ ವಾಹಿನಿಯಲ್ಲಿ ಕರೆದೊಯ್ಯುವ ಗುರುತರ ಜವಾಬ್ದಾರಿಯೂ ಇದೆ ಇದನ್ನು ನಿರ್ವಹಿಸುವಲ್ಲಿ ಎಡವಿದೆ, ಕನ್ನಡ ಸಂಸ್ಕೃತಿಯ ಅಭಿವೃದ್ದಿಗೆ, ಭಾಷೆಯ ಬೆಳವಣಿಗೆಗೆ ಸಮುದಾಯದ ಎಲ್ಲ ಜನರನ್ನು ಒಳಗೊಳ್ಳಬೇಕು ಎಂಬುದು ಅಳಲು. ರಾಜಕೀಯ ರಹಿತವಾದ ಮತ್ತು ಸರ್ಕಾರಗಳ ಹಸ್ತಕ್ಷೇಪವಿಲ್ಲದೇ ಪರಿಷತ್ತು ನಡೆಯುತ್ತಿದೆ ಮುಂದೆಯೂ ಇದು ಇನ್ನಷ್ಟು ಸಬಲೀಕರಣಗೊಂಡು ಕನ್ನಡಿಗರ ಹಿತಕಾಯುವ ಪ್ರಾತಿನಿಧಿಕ ಸಂಸ್ಥೆಯಾಗಿ ಮುಂದುವರೆಯಲಿ ಎಂಬುದು ಆಶಯ 

Sunday, April 27, 2014

ಮರ್ಯಾದಾ ಹತ್ಯೆ, ಜಾತೀಯ ವ್ಯವಸ್ಥೆ!

ಅವತ್ತು ನಿಗಿ ನಿಗಿ ಉರಿಯುವ ಬಿಸಿಲು, ಹೊರಗೆ ಕಾಲಿಡುವುದು ಹೇಗಪ್ಪಾ ಎಂದು ಯೋಚಿಸುವ ಹೊತ್ತಲ್ಲಿಯೇ ಒಂದು ಅನಾಮಿಕ ಕರೆ. ಇಂಥಹ ಊರಿನಲ್ಲಿ ಪ್ರೇಮಿಸಿದ ಅನ್ಯ ಜಾತಿಯ ಪ್ರೇಮಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದು ಮರಕ್ಕೆ ಕಟ್ಟಿ ಹಾಕಲಾಗಿದೆ ಬನ್ನಿ. ಸರಿ ತಕ್ಷಣ ಆ ಹಳ್ಳಿಗೆ ಧಾವಿಸಿದೆ, ಹುಡುಗಿ ಪರಿಶಿಷ್ಠ ಜಾತಿ, ಹುಡುಗ ಕುರುಬ ಸಮುದಾಯದವ ಇಬ್ಬರನ್ನು ಹಿಂದಿನ ದಿನದ ಸಂಜೆಯಿಂದ ಮರುದಿನದ ಮದ್ಯಾಹ್ನದ ವರೆಗೂ ಕಟ್ಟಿಹಾಕಲಾಗಿತ್ತು. ಅಷ್ಟಕ್ಕೂ ಕಟ್ಟಿ ಹಾಕಿದ್ದು ಯಾರು ಎಂದರೆ ತಂದೆ ತಾಯಿಗಳಲ್ಲ ಗ್ರಾಮದ ಜನ! ಹುಡುಗ ಹುಡುಗಿ ಬೇರೆ ಜಾತಿಯವರು ಹೇಗೆ ಮದುವೆ ಆಗುತ್ತಾರೆ ಅದೆಲ್ಲಾದರೂ ಸಾಧ್ಯವೇ ಎಂಬ ಪ್ರಶ್ನೆ ಎಸೆದರು, ಅಷ್ಟೊತ್ತಿಗೆ ಪೋಲೀಸ್ ಬಂದು ಹುಡುಗ ಹುಡುಗಿಯನ್ನು ಬಿಡುಗಡೆ ಮಾಡಿ ಪೋಷಕರ ಸಮೇತ ಸ್ಟೇಷನ್ ಗೆ ಕರೆದೊಯ್ದರು. ಅಲ್ಲಿ ಮಾಮೂಲಿ ರಾಜೀ ಪಂಚಾಯ್ತಿ ಕಡೆಗೆ ಹುಡುಗ-ಹುಡುಗಿ ಅವರವರ ಮನೆಗೆ ವಾಪಾಸಾಗಿ ಬಿಟ್ಟರು, ಪೆಚ್ಚಾಗುವ ಸರದಿ ನನ್ನದು. 
        ಮರುದಿನವೇ ಮಂಡ್ಯದ ಹಳ್ಳಿಯೊಂದರಲ್ಲಿ ದಲಿತ ಹುಡುಗ, ಗೌಡರ ಹುಡುಗಿಯನ್ನು ಮದುವೆ ಓಡಿ ಹೋದರು, ತಿಂಗಳಾದ ಮೇಲೆ ಎಲ್ಲ ಮರೆತಿರುತ್ತಾರೆ ಎಂದು ಊರಿಗೆ ಬಂದರೆ ಹುಡುಗಿಯ ಅಪ್ಪನೇ ಉಪಾಯವಾಗಿ ಹುಡುಗಿಯನ್ನು ಕರೆತಂದು ದನಕ್ಕೆ ಬಡಿದ ಹಾಗೆ ಬಡಿದು ಎಲ್ಲರೂ ನೋಡುತ್ತಿದ್ದ ಹಾಗೆಯೇ ನೇಣು ಬಿಗಿದು ಬಿಟ್ಟ. ಅದೇ ರೀತಿ ರಾಮನಗರದಲ್ಲಿ ಉಪ್ಪಾರರ ಹುಡುಗನೊಬ್ಬ ಲಿಂಗಾಯಿತರ ಹುಡುಗಿಯನ್ನು ಮದುವೆಯಾಗಿದ್ದ ನೆಂಬ ಕಾರಣಕ್ಕೆ ಅವನನ್ನು ಅಟ್ಟಾಡಿಸಿ ಬಡಿದು ಹುಡುಗಿಯನ್ನು ನಡು ರಸ್ತೆಯಲ್ಲೇ ಕಗ್ಗೊಲೆ ಮಾಡಲಾಯಿತು. ಕಳೆದ ವರ್ಷ ದಲಿತನೋರ್ವನನ್ನು ಮದುವೆಯಾದ ಲಿಂಗಾಯಿತ ಸಮುದಾಯದ ಉಪನ್ಯಾಸಕಿಯನ್ನು ಅವಳ ಅಣ್ಣನೇ ಕೊಲೆಗೈದು ಬಿಟ್ಟ! ಇದೀಗ ಮತ್ತೆ ಅಂತಹುದೇ ಸುದ್ದಿ ಬಂದಿದೆ. ಅದೇ ಮಂಡ್ಯ ಜಿಲ್ಲೆಯಿಂದ ನಾಯಕರ ಪೈಕಿ ಹುಡುಗಿಯನ್ನು ಎರಡೂ ಕಡೆಯ ಪೋಷಕರ ವಿರೋಧದ ನಡುವೆಯೇ ಮದುವೆಯಾದ ದಲಿತ ಹುಡುಗ ತಿಂಗಳು ಬಾಳಿಸಲಿಲ್ಲ, ಚಿಕ್ಕಪ್ಪ-ಚಿಕ್ಕಮ್ಮ ಎನಿಸಿಕೊಂಡವರೇ  ಬೆಂಕಿ ಹಾಕಿ ಬರ್ಭರವಾಗಿ ಕೊಲೆಗೈದಿದ್ದಾರೆ. 

    12ನೇ ಶತಮಾನದ ಕ್ರಾಂತಿ ಪುರುಷ ಬಸವೇಶ್ವರರ ಜಯಂತಿ ಮುನ್ನಾ ದಿನಗಳಲ್ಲೇ ಇಂತಹ ಕೃತ್ಯ ವರದಿಯಾಗಿರುವುದು ಆಧುನಿಕ ಸಮಾಜದಲ್ಲಿ ಕ್ರೌರ್ಯ ಮತ್ತು ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿರುವುದು ಅತ್ಯಂತ ನೋವಿನ ಸಂಗತಿ. ಮರ್ಯಾದಾ ಹತ್ಯೆ ಎನ್ನುವುದು ಆಧುನಿಕ ಸಮಾಜದ ಕೊಡುಗೆ ಮತ್ತು ಅರಗಿಸಿಕೊಳ್ಳಲಾಗದ ಅಮಾನವೀಯ ಕೃತ್ಯ. ಇದುವರೆವಿಗೂ ಮರ್ಯಾದಾ ಹತ್ಯೆಗಳು ಅನಕ್ಷರತೆ, ಮೌಡ್ಯ, ಜಾತೀಯತೆ ಹೆಚ್ಚಿರುವ ಉತ್ತರದ ಭಾರತದ ವಿವಿಧ ರಾಜ್ಯಗಳಿಂದ ಮಾತ್ರ ವರದಿಯಾಗುತ್ತಿತ್ತು. ಈಗ ನಮ್ಮ ಕಣ್ಣ ಮುಂದೆಯೇ ನಮ್ಮ ರಾಜ್ಯದಲ್ಲಿಯೇ ಅದು ಅಸ್ತಿತ್ವ ಕಂಡು ಕೊಂಡಿರುವುದು ಎಷ್ಟೊಂದು ಅಸಹನೀಯ ಅಲ್ಲವೇ?
        ಜಾತೀಯ ವ್ಯವಸ್ಥೆಯನ್ನು ತೊಡೆಯಲು ಮುಕ್ತ ವ್ಯವಸ್ಥೆಯಲ್ಲಿ ಅಂತರ್ಜಾತೀಯ ವಿವಾಹಗಳಾಗಬೇಕು ಎಂದು 70 ಮತ್ತು 80ರ ದಶಕದಲ್ಲಿ ಬುದ್ದಿ ಜೀವಿ ವಲಯ ಆಲೋಚಿಸಿದ್ದಲ್ಲದೇ ಅದನ್ನು ಕಾರ್ಯಗತ ಗೊಳಿಸಿ ಬಿಟ್ಟಿದ್ದರು. ಸಾಹಿತಿ ಯು ಆರ್ ಅನಂತಮೂರ್ತಿ, ಪ್ರೊ. ರಾಮದಾಸ್, ದೇವನೂರ ಮಹಾದೇವ, ಪೂರ್ಣಚಂದ್ರ ತೇಜಸ್ವಿ, ಅರವಿಂದ ಮಾಲಗತ್ತಿ ಹೀಗೆ ಅನೇಕ ಮಂದಿ ಅಂತರ್ಜಾತೀಯ ವಿವಾಹ ಬಂಧನಕ್ಕೊಳಗಾದವರು. ಅಲ್ಲಿ ಜಾತಿಗಿಂತ ಪ್ರೀತಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿತ್ತು. ಜಗತ್ತಿನಲ್ಲಿ ಮೊದಲು ಹುಟ್ಟಿದ್ದೇ ಪ್ರೀತಿ, ಅದು ಹುಟ್ಟುವಾಗ ಜಾತಿ ಯಾವುದು ಎಂದು ನೋಡಿ ಹುಟ್ಟುವಂತಹದ್ದಲ್ಲ, ಹೀಗಿರುವಾಗ ಅದು ಗಟ್ಟಿಗೊಳ್ಳಲು ಜಾತಿ ಅಗತ್ಯವಿರಲಿಲ್ಲ ಅವತ್ತು. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ, ಜಾತೀಯ ಕಂದಕಗಳು ಮೊದಲಿಗಿಂತ ಹೆಚ್ಚು ತೆರೆದುಕೊಂಡಿವೆ, ಪ್ರೀತಿ ಹುಟ್ಟುವ ಮೊದಲು ಜಾತಿ ನೋಡಿ ಪ್ರೀತಿಸುವ ಪರಿಪಾಠ ಬೆಳೆಯುತ್ತಿರುವುದು ಇಲ್ಲವೇ ಜಾತಿ ನೋಡದೇ ಪ್ರೀತಿಸಿದ ಯುವ ಮನಸ್ಸುಗಳನ್ನು ಕೊಲ್ಲುವ ಮನಸ್ಥಿತಿ ಸೃಷ್ಟಿಯಾಗುತ್ತಿದೆ.      
         ಪ್ರಬುದ್ದತೆಯ ಕೊರತೆಯ ಜೊತೆಗೆ ಸಂಕುಚಿತ ಜಾತಿ ಮನಸ್ಸು ಪ್ರತೀ ಹಂತದಲ್ಲೂ ಜಾಗೃತವಾಗುವಂತಹ ಕ್ರಿಯೆಗಳು ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವುದು ಮತ್ತು ಜಾತಿ ಮೀರುವ ಕ್ರಿಯೆಗೆ ಪೂರಕವಾದ ವಾತಾವರಣ ಇಲ್ಲದಿರುವುದು ಮರ್ಯಾದಾ ಹತ್ಯೆಯಂತಹ ಕೃತ್ಯಗಳಿಗೆ ಅವಕಾಶ ಮಾಡುತ್ತಿದೆ. ಮಹಾಪುರುಷರು ಶತಮಾನಗಳ ಆದಿಯಿಂದಲೇ ಜಾತಿ ಮೀರುವ ಕ್ರಿಯೆಗೆ ಚಾಲನೆ ನೀಡಿದ್ದಾರೆ, ಅನೇಕ ಪರಿವರ್ತನೆಗಳಿಗೆ ನಾಂದನೆ ಹಾಡಿದ್ದಾರೆ, ದೀಕ್ಷೆ ನೀಡಿದ್ದಾರೆ ಆದರೆ ವರ್ತಮಾನದಲ್ಲಿ ಅವೆಲ್ಲ ಜಾತೀಯ ವಿಷಬೀಜಗಳಾಗಿ ಬದಲಾಗಿವೆ. ಸಮಾಜದ ಎಲ್ಲ ಸ್ಥರದಲ್ಲೂ ಜಾತೀಯತೆ ಮೇರೆ ಮೀರಿದೆ. ಇದಕ್ಕೆ ಸಾಮಾಜಿಕ ಕಾರಣಗಳು ಮಾತ್ರವಲ್ಲ ರಾಜಕೀಯ ಪಕ್ಷಗಳ ಮನಸ್ಥಿತಿ, ಸರ್ಕಾರಗಳ ದುರ್ಬಲ ನೀತಿಗಳು ಕಾರಣವಾಗಿರ ಬಹುದು. ತಮ್ಮ ಮತ ಬ್ಯಾಂಕ್ ಗಾಗಿ ತರುವ ಯೋಜನೆಗಳು ಜಾತಿಯ ನಡುವೆ ಕಂದಕ ಸೃಷ್ಟಿಸಿದರೆ, ಸಾಮಾಜಿಕ ನ್ಯಾಯದ ನೆಪದಲ್ಲಿ ಎಲ್ಲ ಜಾತಿಗಳನ್ನು ಮೀಸಲು ಅಡಿಯಲ್ಲಿ ತರುವ ಕ್ರಿಯೆಯೂ ಸಹಾ ಕಂದಕಕ್ಕೆ ಅವಕಾಶ ಕಲ್ಪಿಸಿದೆ. ಸಂವಿಧಾನಾತ್ಮಕವಾಗಿ ಸಮಾಜದ ಅತ್ಯಂತ ಕೆಳಸ್ಥರದ ವರ್ಗಕ್ಕೆ ಮೀಸಲಾತಿಯನ್ನು ಆದ್ಯತೆ ಮೇಲೆ ಕೊಟ್ಟರೂ ಸಹಾ ಮತಬ್ಯಾಂಕ್ ನ ಉದ್ದೇಶದಿಂದ ಸ್ಪೃಶ್ಯ ಸಮುದಾಯಗಳನ್ನು ಸಹಾ ಮೀಸಲು ಅಡಿಗೆ ತರಲಾಗಿದೆ. 

       ಸರ್ಕಾರದ ಯೋಜನೆಗಳನ್ನು ಒಂದು ವರ್ಗ ಪಡೆಯುತ್ತಿದೆ ಅಥವಾ ಮೀಸಲು ಅನುಕೂಲವನ್ನು ಪಡೆಯುತ್ತಿದೆ ಎಂದರೆ ಅದರಲ್ಲಿ ಶೇ.10ರಷ್ಟು ಮಂದಿ ವಾಸ್ತವ ನೆಲೆಗಟ್ಟಿನಲ್ಲಿ ಅರ್ಹತೆ ಗಿಟ್ಟಿಸಿದ್ದರೆ ಅದರೊಳಗೆ ಸೇರಿರುವ ಸ್ಪೃಶ್ಯ ಸಮುದಾಯ ಕೊಡ ಫಲಾನುಭವಿಯಾಗಿ ಇತರರ ಕಣ್ಣು ಕೆಂಪಗಾಗಲು ಕಾರಣವಾಗಿಬಿಡ ಬಹುದು. ಎದೆಗೆ ಬಿದ್ದ ಅಕ್ಷರದಲ್ಲಿ ದೇವನೂರ ಮಹಾದೇವ ಹೀಗೆ ಬರೆಯುತ್ತಾರೆ, ನಂಜನಗೂಡಿನ ಹಾಸ್ಟೆಲ್ ಒಂದರಲ್ಲಿ ಒಬ್ಬ ಗಿರಿಜನ ಯುವಕನಿಗೆ ಮೇಲಿನಿಂದ ಎತ್ತಿ ನೀರನ್ನು ಕೊಡಲಾಗುತ್ತಿತ್ತು ಕುಡಿಯಲೋಸುಗ, ಅದೇ ರೀತಿ ಒಕ್ಕಲಿಗನ ಮನೆಯ ಆಹಾರವನ್ನು ಮೇಲ್ಜಾತಿಯ ಮಗುವೊಂದು ಪಡೆದುದನ್ನು ಅವರಮ್ಮ ಆಕ್ಷೇಪಿಸುತ್ತಿದ್ದಳು ಎಂಬುದು. ಕಳೆದ ವರ್ಷ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿಯನ್ನು ಓದಿದ್ದೆ ಗುಂಡ್ಲುಪೇಟೆ, ಚಾಮರಾಜನಗರ ಭಾಗದಲ್ಲಿ ನಾಗರೀಕತೆಯನ್ನೇ ಕಾಣದ ಗಿರಿಜನರು ತಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಪರಿಶಿಷ್ಠ ಜಾತಿಯ ಮಹಿಳೆ ಅಡುಗೆ ಮಾಡುವುದನ್ನು ಮತ್ತು ತಮ್ಮ ಮಕ್ಕಳು ಅದನ್ನು ತಿನ್ನುವುದನ್ನು ಸಹಿಸಲಾಗದೇ ಶಾಲೆಗೆ ಮಕ್ಕಳನ್ನೇ ಕಳುಹಿಸಲಿಲ್ಲ. ಈ ಘಟನೆಗಳು ಏನನ್ನು ಸಾಕ್ಷೀಕರಿಸುತ್ತವೆ ಮತ್ತು ಜಾತೀಯ ತೀವ್ರತೆಯನ್ನು ಹೇಗೆ ಪ್ರತಿನಿಧಿಸುತ್ತವೆ ಎಂದರೆ ಸರಪಳಿ ಮಾದರಿಯ ಜಾತೀಯ ವ್ಯವಸ್ಥೆಯಿಂದ  ವರ್ತಮಾನದಲ್ಲೂ ಬಿಡುಗಡೆಯಿಲ್ಲ ಎನ್ನುವುದು. ಜನರ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಕೂಡ ಜಾತೀಯ ವ್ಯವಸ್ಥೆಯನ್ನು ಹಿಂದೆಂದಿಗಿಂತ ಹೆಚ್ಚು ಪೋಷಿಸಲು ಅವಕಾಶ ಮಾಡಿದೆ. ಪರಿಣಾಮ ತಮ್ಮ ಮಗ ಅಥವಾ ಮಗಳು ಬೇರೆ ಜಾತಿಯವರನ್ನು ಇಷ್ಟ ಪಡಬಹುದು ಎಂಬ ಕಾರಣಕ್ಕೆ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ ಈ ಆಧುನಿಕ ದಿನಮಾನದಲ್ಲಿಯೂ. ಬಾಲ್ಯದಿಂದಲೇ ಜಾತೀಯ ಪಾಠಗಳನ್ನು ಪೋಷಕರು ಹೇಳಿಕೊಡುತ್ತಿದ್ದಾರೆ ಕಂದಕಗಳು ಹೆಚ್ಚಾಗಲು ಕಾರಣರಾಗುತ್ತಿದ್ದಾರೆ, ನಮ್ಮ ರಾಜಕೀಯ ನಾಯಕರು ಕೂಡಾ ಜಾತಿಗೊಬ್ಬ ಸ್ವಾಮೀಜಿಗಳನ್ನು ಹುಟ್ಟು ಹಾಕುತ್ತಾ ಮಠ ಮಾನ್ಯಗಳನ್ನು ಬೆಳೆಸುತ್ತಾ ಜಾತಿಯ ಭಾವನೆ ಇನ್ನಷ್ಟು ಕೆರಳುವಂತೆ ಮಾಡಿದ್ದಾರೆ, ನಾವೆಲ್ಲ ಪ್ರೀತಿಸುವ ಕವಿರತ್ನ ಕಾಳಿದಾಸ, ಕನಕದಾಸ, ಸಂಗೊಳ್ಳಿ ರಾಯಣ್ಣ, ಭಗೀರಥ, ವಿಶ್ವಕರ್ಮ, ಬಸವಣ್ಣ, ವಾಲ್ಮೀಕ , ಟಿಪ್ಪುಸುಲ್ತಾನ್ ಇವರಿಗೆಲ್ಲ ಒಂದೊಂದು ಜನ್ಮ ಜಯಂತಿಯನ್ನು ಘೋಷಣೆ ಮಾಡಿ ಜಾತಿಗಳನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ, ಇವು ಸಮಾಜವನ್ನು ಕಟ್ಟುವ ಕ್ರಿಯೆಗಳಲ್ಲ ಬದಲಿಗೆ ಸಮಾಜದ ಕಂದಕವನ್ನು ಹೆಚ್ಚಿಸುವ ಕ್ರಿಯೆಗಳು. ಮತ್ತು ಮರ್ಯಾದ ಹತ್ಯೆಯಂತ ಕ್ರಿಯೆಗಳಿಗೆ ಇಂತಹ ಕ್ರಿಯೆಗಳ ಕೊಡುಗೆಯೇ ಹೆಚ್ಚು ಅಲ್ಲವೇ?

Sunday, April 20, 2014

ವಿದ್ಯಾರ್ಥಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು!


ಎಷ್ಟೋ ಸಲ ಬದುಕು ಎಲ್ಲಿಂದೆಲ್ಲಿಗೋ ನಮ್ಮನ್ನು ತಂದು ನಿಲ್ಲಿಸಿ ಬಿಡುತ್ತವೆ. ಹಾಗೆ ಎಲ್ಲಿಂದೆಲ್ಲಿಗೋ ತಂದು ನಿಲ್ಲಿಸುವ ಮುನ್ನ ನಾವೇನಾಗಿದ್ದೇವು ? ಏನಾಯಿತು?ಎಂಬ ಸಿಂಹಾವಲೋಕನ ಭವಿಷ್ಯದ ದಿನಗಳಲ್ಲಿ ಒಂದು ಫ್ರೇಮಿನೊಳಗೆ ನಮ್ಮನ್ನು ತಂದು ಬಿಡಬಹುದು ಇಲ್ಲವೇ ಮುಂದಿನ ಪೀಳಿಗೆಗೆ ಹೀಗೆಯೇ ನಡೆಯ ಬೇಕು ಎಂಬ ಕಟ್ಟಲೆಯನ್ನು ಹೇರ ಬಹುದು. ಇವೆಲ್ಲವೂ ವಾಸ್ತವ ಜಗತ್ತಿನ ವೈರುದ್ಯಗಳು.

        ವಿದ್ಯಾರ್ಥಿ ಜೀವನದಲ್ಲಿ ಇದು ಬಹು ಮುಖ್ಯವಾದ ಅಂಶ, ಬದುಕಿನ ಟರ್ನಿಂಗ್ ಪಾಯಿಂಟ್ ಶುರುವಾಗುವುದೇ ಪ್ರೌಢಶಾಲ ಹಂತ ದಾಟಿದ ಮೇಲೆ ಮತ್ತು ಪಿಯು ಹಂತವನ್ನು ಮುಗಿಸಿದ ಮೇಲೆ. ಮೊದಲೆಲ್ಲ ಹಾಗಿರಲಿಲ್ಲ ಬಿಡಿ ನಾವಂದುಕೊಂಡದ್ದೇ ಹಾದಿ, ಸಾಗಿದ್ದೇ ದಿಕ್ಕು. ಆದರೆ ಬದಲಾದ ಪರಿಸ್ಥಿತಿಯಲ್ಲಿ  ಎಲ್ಲವೂ ನಿರೀಕ್ಷಿತ, ಕುತೂಹಲಕ್ಕೆ ಇಲ್ಲಿ ಜಾಗವಿಲ್ಲ. ಆಗೆಲ್ಲಾ ಎಷ್ಟು ಕಷ್ಟ ವಿತ್ತು, ಸರ್ಕಾರಿ ಶಾಲೆಯಾದರೂ ಉಸಿರು ಗಟ್ಟಿಸುವ ವಾತಾವರಣ ತರಗತಿಯಲ್ಲಿ, ಆಟೋಟಗಳಲ್ಲಿ ಅಷ್ಟೆ ಉತ್ಸಾಹ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಡಿದ್ದೇ ಆಟ-ನೋಟ, ಓದಲಿಕ್ಕೆ ಕಪಾಟಿನಿಂದ ಪುಸ್ತಕಗಳು ದಂಡಿಯಾಗಿ ಬರುತ್ತಿದ್ದವು, ಪಠ್ಯೇತರ ಚಟುವಟಿಕೆಗಳಲ್ಲೂ ಉತ್ಸಾಹ, ಪೋಷಕರಿಂದ ಕಾಳಜಿ ವಹಿಸುವ ಸಂಗತಿಗಳು ಅಷ್ಟಕ್ಕಷ್ಟೆ. ನಮ್ಮ ನೋಟ್ಸ್ ನಾವೇ ಮಾಡ್ಕೋತಿದ್ವಿ, ಹೋಂ ವರ್ಕ್ ಬರೆಯೋದು, ಪಾಠ ಓದೋದು, ನಿರ್ವಂಚನೆಯಿಂದ ಮತ್ತು ವ್ಯಾಪಾರದ ಸೋಂಕಿಲ್ಲದೇ ಉಚಿತ ಮನೆ ಪಾಠ ಹೇಳುತ್ತಿದ್ದ ಶಿಕ್ಷಕರು! ಇಂತಹ ಪರಿಸರ ಸೃಜನಶೀಲತೆಗೂ ಒತ್ತು ಕೊಡುತ್ತಿತ್ತು, ಆದರೆ ಈಗೆಲ್ಲಿದೆ ಅಂತಹ ಪರಿಸರ? ಸರ್ಕಾರಿ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರು ಎಷ್ಟರ ಮಟ್ಟಿಗೆ (ಕ್ಷಮಿಸಿ ಎಲ್ಲ ಶಿಕ್ಷಕರನ್ನು ಉದ್ದೇಶಿಸಿಲ್ಲ) ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸುತ್ತಿದ್ದಾರೆ? ತಮ್ಮ ಮಕ್ಕಳನ್ನೇ ಸರ್ಕಾರಿ ಶಾಲೆಗಳಲ್ಲಿ ಕಳುಹಿಸದ ಶಿಕ್ಷಕರು, ಸರ್ಕಾರಿ ನೌಕರರು, ಸರ್ಕಾರ ಸಂಬಳ ಸವಲತ್ತು ಮಾತ್ರ ಅಪೇಕ್ಷಿಸುತ್ತಾರೆ. ಇಂತಹ ನಿಲುವುಗಳೇ ಶಿಕ್ಷಣ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆಯಲ್ಲವೇ? ಸರ್ಕಾರ ನಿಯಮಗಳನ್ನ ಉಲ್ಳಂಘಿಸಿ ಶಿಕ್ಷಣದ ಹೈಟೆಕ್ ಅಂಗಡಿಗಳಿಗೆ ಅವಕಾಶ ಕಲ್ಪಿಸುತ್ತಿದೆ ಮತ್ತು ಸುಂದರ ಪರಿಸರದ ಕನ್ನಡ ಶಾಲೆಗಳನ್ನು ತಾನೇ ಮುಂದಾಗಿ ನಿಂತು ಕಗ್ಗೊಲೆ ಮಾಡುತ್ತಿದೆ. 
             
            ಜಾಗತೀಕರಣದ ಗಾಳಿಯೇ ಹಾಗೆ ನಮ್ಮ ಮನಸ್ಸನ್ನು ಅದು ಬದಲಿಸುತ್ತದೆ, ಕ್ಷಣಿಕ ಆಮಿಷಗಳಿಗೆ ಬಲಿಬೀಳುವ ಮನಸ್ಸು ವಾಸ್ತವವನ್ನ ಅರಿಯದೇ ಮೂಲಕ್ಕೆ ಧಕ್ಕೆ ಯಾಗುವ ಸಂಗತಿಗಳೆಡೆಗೆ ನಮ್ಮನ್ನು ಸೆಳೆದು ಬಿಡುತ್ತದೆ. ಕನ್ನಡ ಶಾಲೆಗಳ ವಿಷಯವೂ ಹಾಗೆಯೇ, ತಮ್ಮ ಮಗುವಿಗೆ ಇಷ್ಟವಿರಲಿ ಬಿಡಲಿ ಹೈಟೆಕ್ ಕಲ್ಚರ್ ನ ಶಾಲೆಗಳಲ್ಲಿ ಅವು ಕಲಿಯಬೇಕು ಎಂಬ ಇರಾದೆಗೆ ಬಿದ್ದು ಒತ್ತಡದಿಂದ ಕಲಿಕೆಗೆ ಹಚ್ಚಲಾಗುತ್ತದೆ. ಇದನ್ನೆ ಅನುಸರಿಸುವ ಆಜುಬಾಜಿನ ಮಂದಿ ತಮಗೆ ಸಾಮರ್ಥ್ಯವಿರಲಿ ಬಿಡಲಿ ತಾವು ಪಕ್ಕದವರನ್ನು ಅನುಸರಿಸುವ ಉಮೇದಿಗೆ ಬಿದ್ದು ಬಿಡುತ್ತಾರೆ. ಹಾಗಾಗಿ ಶಿಕ್ಷಣ ವ್ಯಾಪಾರದ ಅಡ್ಡೆಗಳಿಗೆ ಮಕ್ಕಳು ಸೇರುವ ಮತ್ತು ಕಲಿಯುವ ಅನಿವಾರ್ಯತೆ ಸೃಷ್ಟಿಸುತ್ತಾರೆ. ಆಗ ಮಗುವಿನ ಪ್ರತೀ ಹಂತದಲ್ಲೂ ಪೋಷಕರ ಹಸ್ತಕ್ಷೇಪವೇ ಜಾಸ್ತಿ, ಮಕ್ಕಳ ನೋಟ್ಸ್ ತಾವೇ ಬರೆಯಬೇಕು, ಸ್ನಾನ ಮಾಡಿಸಬೇಕು, ಬಟ್ಟೆ ಹಾಕಬೇಕು, ಶಾಲೆಗೆ ಕರೆದೊಯ್ಯಬೇಕು, ಹೊತ್ತು ಹೊತ್ತಿಗೆ ಬಾಕ್ಸ್ ತೆಗೆದುಕೊಂಡು ಹೋಗಿ ಊಟ ಮಾಡಿಸಬೇಕು, ಪರೀಕ್ಷೆ ಬಂದಾಗ ಇಂಥದ್ದೇ Rank ಬರಬೇಕು, ಕಾರ್ಯಕ್ರಮಗಳಲ್ಲಿ ಇಂಥದ್ದೇ ಸಿನಿಮಾ ಸಾಂಗಿಗೆ ಕುಣಿಯಬೇಕು ಹೀಗೆ ಇತ್ಯಾದಿ ಒತ್ತಡಕ್ಕೆ ಮಕ್ಕಳ ಮೇಲೆ ಒತ್ತಡ ಸೃಷ್ಠಿಯಾಗುತ್ತದೆ. 10ನೇ ತರಗತಿ ಮತ್ತು ಪಿಯು ಮುಗಿಸುವಾಗ ಇನ್ನಿಲ್ಲದ ಒತ್ತಡ ಹೇರಿ ಪರೀಕ್ಷೆ ಬರೆಸುತ್ತಾರೆ ನಂತರ ಅವನು/ಳು ಇಂಜಿನಿಯರ್ರೇ ಆಗಬೇಕು, ಡಾಕ್ಟರ್ ಆಗಬೇಕು ಎಂಬ ಹಪಾಹಪಿಗೆ ಬಿದ್ದು ವೃತ್ತಿ ಶಿಕ್ಷಣಕ್ಕೆ ಸೇರಿಸುತ್ತಾರೆ. ಹೀಗೆ ಒತ್ತಡದಲ್ಲೇ ಸೃಷ್ಟಿಯಾಗುವ ಆತ/ಅವಳು ಬದುಕಿನಲ್ಲಿ ದುಡ್ಡು ಮಾಡುವುದನ್ನು ಕಲಿಯಬಹುದಷ್ಟೇ ಆದರೆ ಸಾಮಾಜಿಕ ಜೀವನದಲ್ಲಿ ಸಂಪೂರ್ಣವಾಗಿ ವಿಫಲವಾಗುವ ಸಂಧರ್ಭಗಳೇ ಅಧಿಕ. 

           ಹೀಗೆ ದುಡ್ಡು ಮಾಡುವುದನ್ನು ಕಲಿಸುವ ಪೋಷಕರು ಅದೇ ಮಕ್ಕಳಿಗೆ ನೈತಿಕ ಪಾಠವನ್ನ, ಸಾಮಾಜಿಕ ಬಾಂಧವ್ಯದ ಪಾಠವನ್ನ ಹೇಳಿ ಕೊಡುವುದಿಲ್ಲ, ಅವರಿಗೆ ಅದೆಲ್ಲ ಗಮನಿಸುವ ಪುರುಸೊತ್ತು ಕಡಿಮೆಯೇ. ಹೀಗಿರುವಲ್ಲಿ ಆತ/ಅವಳು ವೃದ್ದಾಪ್ಯದಲ್ಲಿ ಒಂಟಿ ಮಾಡಿ ದೂರ ಸರಿದಾಗ ಅನುಭವಿಸುವ ಯಾತನೆಯೇ ಅದಕ್ಕೆ ಉತ್ತರವಾಗ ಬಹುದು. ಕಲಿಯುವ ಮಗುವಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು, ಒಳ್ಳೆಯದ್ದು ಮತ್ತು ಕೆಟ್ಟದ್ದನ್ನು ನಿರ್ಧರಿಸುವ ಗುಣ ಬೆಳೆಸುವ ಜೊತೆಗೆ ಪರಿಸರದಲ್ಲಿ ಅನೇಕ ಸಂಗತಿಗಳನ್ನ ಗ್ರಹಿಕೆ ತಂದು ಕೊಳ್ಳುವ ಅವಕಾಶಗಳನ್ನ ಮುಕ್ತವಾಗಿ ನೀಡಬೇಕು. ಮಕ್ಕಳ ಪ್ರೌಢಾವಸ್ಥೆ ಮಕ್ಕಳಿಗೆ ಮಾತ್ರ ಟರ್ನಿಂಗ್ ಪಾಯಿಂಟ್ ಅಲ್ಲ ಪೋಷಕರಿಗೂ ಇದು ಟರ್ನಿಂಗ್ ಪಾಯಿಂಟ್ ಎಂಬುದನ್ನು ತಿಳಿದುಕೊಂಡಾಗ ಮಾತ್ರ ವ್ಯವಸ್ಥೆಯ ಸುಧಾರಣೆ ನಿರೀಕ್ಷಿಸ ಬಹುದು ಅಲ್ಲವೇ? 

Sunday, April 13, 2014

ಸಂವಿಧಾನದ ಸದಾಶಯ ಮತ್ತು ಅಂಬೇಡ್ಕರ್

ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಯಾಕೆ ಬೇಕು? ಸಮಾಜವಾದ, ಕಮ್ಯುನಿಸಂ ವ್ಯವಸ್ಥೆ ಆಗುವುದಿಲ್ಲವೇ ಅಲ್ಲಿಯೂ ಸಮಾನತೆಯನ್ನು ಪ್ರತಿಪಾದಿಸಲಾಗುತ್ತದಲ್ಲವೇ? ಭಾತರ ದೇಶದ ಪ್ರಜಾಪ್ರಬುತ್ವಕ್ಕೆ ಮಾದರಿ ಯಾವುದು? ಪ್ರೆಂಚ್ ಕ್ರಾಂತಿಯಿಂದ ಪ್ರೇರೇಪಿತರಾಗಿದ್ದೀರ? ಎಂಬ ಪ್ರಶ್ನೆಗಳನ್ನು ಅವತ್ತು ಭಾರತ ದೇಶದ ಮೊದಲ ಕಾನೂನು ಮಂತ್ರಿಯ ಮುಂದೆ ಪತ್ರಕರ್ತರು ಕೇಳಿದ್ದರು. ಅವೆಲ್ಲಾ ಪ್ರಶ್ನೆಗಳಿಗೂ ಸಾವಧಾನದಿಂದ ಮತ್ತು ದೃಢವಾಗಿ ಉತ್ತರಿಸಿದ ಮಂತ್ರಿಗಳು ಭಾರತ ಬಹುದೊಡ್ಡ ಸಾಂಸ್ಕೃತಿಕ ರಾಷ್ಟ್ರ. ಇಲ್ಲಿ ಜಗತ್ತಿನ ಬೇರೆ ಯಾವ ಭಾಗದಲ್ಲೂ ಇಲ್ಲದ ವಿವಿಧ ಮತ-ಧರ್ಮಗಳ ಜನರು ಇದ್ದಾರೆ ಅವರೆಲ್ಲರಿಗೂ ಸಮಾನ ಅವಕಾಶಗಳನ್ನ ಸಮಾಜವಾದ ಇಲ್ಲವೇ ಕಮ್ಯುನಿಸಂ ನಿಂದ ಪರಿಪೂರ್ಣವಾಗಿ ಕಟ್ಟಿಕೊಡಲು ಸಾಧ್ಯವಿಲ್ಲ, ಏಕೆಂದರೆ ದೇಶದಲ್ಲಿ ಈಗಾಗಲೇ ಅಸಮಾನತೆ ಇದೆ ಸಂಪನ್ಮೂಲ ಒಂದೆಡೆ ಕೇಂದ್ರೀಕೃತವಾಗಿದೆ ಇತರೆ ರಾಷ್ಟ್ರಗಳಂತೆ ಇಲ್ಲಿ ಕೆಲವು ಜನಾಂಗಗಳು, ಧರ್ಮಿಯರು ಇಲ್ಲ ಹಾಗಾಗಿ ಪ್ರಜಾಪ್ರಭುತ್ವ ಬಂದರೆ ಸಮಾಜದ ಅತ್ಯಂತ ಕೆಳಸ್ಥರದ ಪ್ರಜೆಗೂ ಎಲ್ಲ ಅವಕಾಶಗಳು ಆಧ್ಯತೆಯ ಮೇಲೆ ದಕ್ಕುತ್ತವೆ, ವ್ಯವಸ್ಥೆಯಲ್ಲಿ ಪಾಲ್ಗೊಳುವಿಕೆಗೆ ಅವಕಾಶ ದೊರೆಯುತ್ತದೆ ಆದ್ದರಿಂದ ಪ್ರಜಾಪ್ರಭುತ್ವ ದಿಂದ ಮಾತ್ರ ಭಾರತ ದೇಶ ಸದೃಢತೆಯನ್ನು ಹೊಂದಲು ಸಾದ್ಯ, ಪ್ರಜಾತಾಂತ್ರಿಕ ವ್ಯವಸ್ಥೆ ಉಸಿರು ಕಟ್ಟಿದ ವಾತಾವರಣದಿಂದ ಮುಕ್ತತೆಯೆಡೆಗೆ ಎಲ್ಲ ಜನರನ್ನು ಕರೆದೊಯ್ಯುತ್ತದೆ ಎಂದು ನುಡಿದ ಅವರು ದೇಶದ ಪ್ರಜಾಪ್ರಬುತ್ವ ವ್ಯವಸ್ಥೆಯನ್ನು ಪ್ರೆಂಚ್ ನಿಂದಲೋ ಮತ್ತೆಲ್ಲಿಂದಲೋ ಎರವಲು ಪಡೆದಿಲ್ಲ ನಮ್ಮ ಜನತಂತ್ರ ವ್ಯವಸ್ಥೆಯನ್ನು ಸ್ಥಳೀಯ ನಾಡಿಮಿಡಿತವನ್ನು ಅರಿತು ರೂಪಿಸಲಾಗಿದೆ. ಪ್ರೆಂಚ್ ಕ್ರಾಂತಿಯ ನಂತರ ಅಲ್ಲಿ ಪ್ರಜಾಪ್ರಭುತ್ವ ಹುಟ್ಟಿರ ಬಹುದು ಆದರೆ ಭಾರತದಲ್ಲಿ ಬುದ್ದನ ಕಾಲದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಂಡಿದೆ. ಭಗವಾನ್ ಬುದ್ದ ಸಮ ಪಾಲು: ಸಮ ಬಾಳು ಎಂಬುದನ್ನು ಪ್ರತಿಪಾದಿಸಿದ್ದರು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲೂ ಅದನ್ನೇ ಆಶಯವಾಗಿ ಇಟ್ಟುಕೊಳ್ಳಲಾಗಿದೆ ಎಂದು ಸಮರ್ಥವಾಗಿ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ್ದ ಆ ಕಾನೂನು ಮಂತ್ರಿಯೇ  ಡಾ. ಬಿ ಆರ್ ಅಂಬೇಡ್ಕರ್ !

            ಹೌದು ಅಂಬೇಡ್ಕರ್ ವಿಚಾರಗಳೇ ಹಾಗೆ ಭಾರತ ದೇಶದ ಬಹುದೊಡ್ಡ ವಿದ್ವಾಂಸರಾಗಿದ್ದ ಅವರು ರಾಜಕೀಯ, ಆರ್ಥಿಕ, ಸಾಮಾಜಿಕ ಹೀಗೆ ಅನೇಕ ಸಂಗತಿಗಳಿಗೆ ಸಂಬಂಧಿಸಿದಂತೆ ದೂರ ದೃಷ್ಟಿ ಹೊಂದಿದ್ದರು. ಆದರೆ ದೇಶದ ಜಾತೀಯ ಶಕ್ತಿಗಳು ಅವರನ್ನು ದಲಿತ ಲೀಡರ್ ಎಂದು ಬಿಂಬಿಸಿದ್ದು ಮತ್ತು ಅವರ ವಿರುದ್ದ ಸದಾ ಮಸಲತ್ತು ಮಾಡುತ್ತ ಅವರ ವಿಚಾರಧಾರೆಗಳ ಕುರಿತು ಅರಿಯುವ ಕ್ರಿಯೆಗೆ ಅಡ್ಡಗಾಲು ಹಾಕುತ್ತಲೇ ಬಂದವು . ಸಮಾನತೆಗಾಗಿ ಅಂಬೇಡ್ಕರ್ ಕೇಳಿದ್ದು ಪ್ರತ್ಯೇಕ ಮತದಾನ ಪದ್ದತಿ ಆದರೆ ಗಾಂಧೀಜಿ ಅಣತಿಯಂತೆ ದೊರೆತ್ತದ್ದು ಮೀಸಲು ರಾಜಕೀಯ ವ್ಯವಸ್ಥೆ. ಇದು ಅಂಬೇಡ್ಕರ್ ರನ್ನು ಹತಾಶಗೊಳಿಸಿತ್ತು. ದಲಿತ ಮೀಸಲು ಕ್ಷೇತ್ರಗಳಿಂದ ಗೆಲ್ಲುವ ದಲಿತರ ದಲಿತ ಹಿತಾಸಕ್ತಿಗಳನ್ನು ಪಾಲಿಸದೇ ಮೇಲ್ವರ್ಗದ ಗುಲಾಮರಂತೆ ನಡೆದುಕೊಂಡು ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಮಾತ್ರ ಸಾಧಿಸಿಕೊಳ್ಳುತ್ತಾರೆ ಆದ್ದರಿಂದ ಈ ವ್ಯವಸ್ಥೆಯನ್ನು ರದ್ದು ಮಾಡಿ ಎಂದು 1952ರ ಸುಮಾರಿಗೆ ಅಂಬೇಡ್ಕರ್ ಪಟ್ಟು ಹಿಡಿದಿದ್ದರು. ಆದರೆ ಅದಾಗಲೇ 121ಕ್ಷೇತ್ರಗಳಲ್ಲಿ ಗೆದ್ದು ಬಂದಿದ್ದ ಮೀಸಲು ದಲಿತ ಕ್ಷೇತ್ರಗಳ ಪ್ರತಿನಿಧಿಗಳು ಅಂಬೇಡ್ಕರ್ ನಿಲುವನ್ನು ಖಂಡಿಸಿದ್ದರು, ಅವತ್ತು ಅಂಬೇಡ್ಕರ್ ವಿಚಾರಕ್ಕೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಇವತ್ತಿಗೂ ಅವೇ ಸ್ಥಾನಗಳು ಹಾಗೆಯೇ ಮುಂದುವರೆದುಕೊಂಡು ಬಂದಿವೆ ದಲಿತ ಮೀಸಲು ಕ್ಷೇತ್ರಗಳು ದಲಿತರಿಗೆ ನೀಡಿದ ರಾಜಕೀಯ ಬಿಕ್ಷೆಯಂತೆ ಭಾಸವಾಗುತ್ತ ಪ್ರಜಾಪ್ರಭುತ್ವವನ್ನು ಇಂದಿಗೂ  ಅಣಕಿಸುತ್ತಲೇ ಇದೆ. 

       ಮೀಸಲಾತಿ ವ್ಯವಸ್ಥೆಯ ಆಶಯಗಳು ಸಮಾಜದ ಅತ್ಯಂತ ಕೆಳಸ್ಥರದಲ್ಲಿರುವ ದಲಿತರಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಕಲ್ಪಿಸುವುದೇ ಆಗಿದೆ. ಒಬ್ಬ ದಲಿತ ವಿದ್ಯಾವಂತನಾಗುವುದು,ಆರ್ಥಿಕವಾಗಿ ಮುಂದೆ ಬರುವುದು ಅಬಿವೃದ್ದಿಯೆಡೆಗೆ ಹೆಜ್ಜೆ ಇಡುವುದನ್ನು ಸರಳವಾಗಿ ಕಲ್ಪಿಸಿಕೊಳ್ಳುವುದು ಭಾರತೀಯ ಸಮಾಜ ವ್ವವಸ್ಥೆಯಲ್ಲಿ ಬಹು ದೊಡ್ಡ ತೊಡಕು. ಏಕೆಂದರೆ ಇಲ್ಲಿ ಜಾತೀಯ ಸ್ವಾರ್ಥ ಹಿತಾಸಕ್ತಿಗಳು ಸದಾ ಜಾಗೃತವಾಗಿದ್ದು ತಮ್ಮವರ ಹಿತ ಕಾಯಲು ಬದ್ದವಾಗಿರುತ್ತವೆ ಮತ್ತು ಅದಕ್ಕಾಗಿ ಏನೂ ಮಾಡಲು ಸಿದ್ದವಾಗಿರುತ್ತವೆ. ಇವೆಲ್ಲ ಸುಲಭ ಸಾಧ್ಯವಾಗಿ ನಿವಾರಣೆಯಾಗುವಂತಹದ್ದಲ್ಲ. ಜಾತೀಯ ವ್ಯವಸ್ಥೆಯಿಂದ ಹೊರತಾಗಿ ನಿಂತು ಕೆಳಸ್ಥರದವರ ಬಗೆಗೆ ಮಾತನಾಡುವಷ್ಟು ಸುಲಭವಾಗಿ, ಕೆಳ ಸ್ಥರದಲ್ಲಿ ನಿಂತು ಜಾತೀಯ ವ್ಯವಸ್ಥೆಯನ್ನು ಮೀರುವ ಮಾತನಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅನುಭವವೇ ಬೇರೆ ಗ್ರಹಿಕೆಯೇ ಬೇರೆ. ಮೇಲ್ನೋಟದ ಗ್ರಹಿಕೆಯಷ್ಟು ತೆಳು ವಾಗಿ ಸಮಾನತೆಯ ಅಂಶಗಳು ದಕ್ಕಲಾರವು ಹಾಗಾಗಿ ಸಂವಿಧಾನ ಬದ್ದವಾಗಿ ಮೀಸಲು ನೀತಿಯನ್ನು ನೀಡಲಾಗಿದೆ. ಆದರೆ ಸಾರ್ವತ್ರಿಕವಾಗಿ ಮೀಸಲು ನೀತಿಯ ಕುರಿತು ಕುಹಕದ ಚರ್ಚೆಗಳು ನಡೆಯುತ್ತಿರುವುದು ಆ ಬಗೆಗಿನ ತಿಳುವಳಿಕೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಇದು ಸಂವಿಧಾನ ಆಶಯದ ವಿರುದ್ದದ ಸಂಗತಿಯೂ ಆಗಿದೆ. ಮೀಸಲಾತಿ ನೀತಿಯ ಕುರಿತ ವಿಸ್ತೃತ ಚರ್ಚೆಗಳು ಮಾತ್ರ ಆ ಕುರಿತ ಅನುಕಂಪದ, ಕೀಳು ನೋಟವನ್ನು ತಡೆಯಲು ಸಾಧ್ಯವಾಗ ಬಹುದು. 

         ಇನ್ನು ಚುನಾವಣೆಗಳ ಸಂಗತಿ, ಭಾರತ ದೇಶದಲ್ಲಿ ಚುನಾವಣೆ ಎಂದಾಕ್ಷಣ ಅಲ್ಲಿ ಕೋಮುವಾದ ಹಾಗೂ ಜಾತೀಯತೆಯೇ ಪ್ರದಾನ ಅಂಶಗಳಾಗುವುದನ್ನು ಕಾಣಬಹುದು. ಸ್ವಾತಂತ್ರ್ಯ  ಪೂರ್ವದಿಂದಲೂ ಇಂತಹದ್ದೊಂದು ಸಮಸ್ಯೆ ನಮ್ಮನ್ನು ಬಾಧಿಸುತ್ತಲೇ ಬಂದಿದೆ. ಜಗತ್ತಿನ ಬಹುದೊಡ್ಡ ಸಂವಿಧಾನವನ್ನು ನಾವು ಹೊಂದಿದ ಮೇಲೂ ಈ ವೈರುದ್ಯ ನಮ್ಮನ್ನು ಬಿಡದೇ ಕಾಡಲಾರಂಬಿಸಿದೆ.  ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಪ್ರಜಾಪ್ರಬುತ್ವವನ್ನು ದುರ್ಬಲಗೊಳಿಸುವ ಕ್ರಿಯೆಗಳು ಜಾರಿಯಲ್ಲಿವೆ. ಬೇರೆ ರಾಷ್ಟ್ರಗಳಲ್ಲಿ ನಮ್ಮ ದೇಶದಂತೆ ಬಹು ಸಂಸ್ಕೃತಿಯ ಧರ್ಮೀಯರು ಕಡಿಮೆಯೇ ಹಾಗಾಗಿ ಅಲ್ಲಿ ಕಡಿಮೆ ರಾಜಕೀಯ ಪಕ್ಷಗಳಿವೆ, ಆದರೆ ನಮ್ಮಲ್ಲಿ ಮುಕ್ತ ವಾಗಿ ರಾಜಕೀಯ ಪಕ್ಷಗಳ ಸ್ಥಾಪನೆಗೆ ಪ್ರಜಾಪ್ರಭುತ್ವ ಅವಕಾಶ ಮಾಡಿಕೊಟ್ಟಿದೆ. ಅಂದರೆ ಸಮಾಜದ ಎಲ್ಲ ಸ್ಥರದ ಜನರು ತಮಗೆ ಒಪ್ಪಿತವಾದ ಯಾವುದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿಕೊಳ್ಳಬಹುದು ಮತ್ತು ಆ ಮೂಲಕ ಭಾರತೀಯ ಚುನಾವಣಾ ವ್ವವಸ್ಥೆಯಲ್ಲಿ ತೊಡಗಿಕೊಳ್ಳಬಹುದು. ಹೀಗಿದ್ದಾಗ್ಯೂ ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ರಾಜಕೀಯ ಪಕ್ಷದ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಬೆರಳೇಣಿಕಯ ಪಕ್ಷಗಳು ದೊಡ್ಡ ಮಟ್ಟದ ಅಡಿಪಾಯ ಹಾಕಿಕೊಂಡಿವೆ. ಇವುಗಳ ಪೈಕಿ ಒಂದು ಜಾತೀಯ ರಾಜಕೀಯವನ್ನು ಪೋಷಿಸುವ ರಾಷ್ಟ್ರೀಯ ನೀತಿಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದರೆ ಮತ್ತೊಂದು ಪಕ್ಷ ಕೋಮುವಾದಿ ನಿಲುವನ್ನು ಪ್ರತಿಪಾತಿಸುತ್ತಾ ಪ್ರಜಾತಾಂತ್ರಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತಿವೆ. ಇತರೆ ಪಕ್ಷಗಳು ಸಹಾ ಇಂಥಹವುಗಳಿಂದ ಹೊರತಾಗಿಲ್ಲ ಅವು ನೇರವಾಗಿಯೇ ಜಾತೀಯತೆಯ ಬಿರುಕನ್ನು ಚುನಾವಣೆಗಳಲ್ಲಿ ಬಿತ್ತುತ್ತಿವೆ ಇವು ಪ್ರಜಾತಾಂತ್ರಿಕ  ವ್ಯವಸ್ಥೆಗೆ ಮಾರಕವಾಗಿದೆ. 

      ಚುನಾವಣೆಗಳು ಎದುರಾಗುತ್ತಿದ್ದಂತೆ ಓಲೈಕೆಯ ರಾಜಕಾರಣ ಶುರುವಾಗುತ್ತದೆ, ಜನರದ್ದೇ ದುಡ್ಡು ಬಳಸಿಕೊಂಡು ಲಾಭದಾಯಕ ಮತಬ್ಯಾಂಕ್ ಯೋಜನೆಗಳನ್ನು ರೂಪಿಸುವು ರಾಜಕೀಯ ಪಕ್ಷಗಳು ಒಡೆದು ಆಳುವ ನೀತಿಯನ್ನು ನಡೆಸಿಕೊಂಡು ಬಂದಿವೆ. ಚುನಾವಣೆಗಳಲ್ಲಿ ಗ್ರಾಮೀಣ ಭಾಗದ ಮತದಾರರನ್ನು ವಿವೇಚನೆ ಮಾಡಲು ಬಿಡದೇ ಅಗ್ಗದ ಆಮಿಷಗಳನ್ನು ಒಡ್ಡುವ ಪಕ್ಷಗಳು ಭಾವನಾತ್ಮಕವಾಗಿ ಮತ್ತು ಧಾರ್ಮಿಕವಾಗಿಯೂ ಪ್ರತ್ಯೇಕಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತವೆ. ನಗರ ಪ್ರದೇಶದ ಮತದಾರ ರಾಜಕೀಯ ಶಾಸ್ತ್ರದ ಅರಿವಿನ ಕೊರತೆಯಿಂದ ಚುನಾವಣೆಗಳನ್ನು ಗಂಬೀರವಾಗಿ ಪರಿಗಣಿಸಿದೇ ಹಿಂದುಳಿಯುತ್ತಿದ್ದಾರೆ ಮತ್ತು ಗ್ರಾಮೀಣ ಪ್ರದೇಶದ ಮತದಾರರಿಗಿಂತ ಹೆಚ್ಚು ಚುನಾವಣಾ ಅನೈತಿಕ ಅಂಶಗಳಿಗೆ ಬಲಿಯಾಗುತ್ತಿದ್ದಾರೆ. ಪರಿಣಾಮ ಮತದಾನದ ಪ್ರಾಮುಖ್ಯತೆ ಕಡಿಮೆಯಾಗಿ ಪ್ರಜಾತಾಂತ್ರಿಕ ವ್ಯವಸ್ಥೆಗೆ ದೂರ್ತರೇ ಆಯ್ಕೆಯಾಗುತ್ತಿದ್ದಾರೆ. 

       ಜನಸಾಮಾನ್ಯರು, ಯುವ ಜನರು ರಾಜಕೀಯ ಪಕ್ಷಗಳ ರಾಷ್ಟ್ರೀಯ ನೀತಿಯನ್ನು ಅರಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ಭರವಸೆಗಳನ್ನು ನೀತಿಗಳನ್ನ ಅರಿಯುವುದು ಅಗತ್ಯ ಹಾಗೆಯೇ ಚುನಾವಣೆಗಳಲ್ಲಿ ಸ್ಪರ್ದಿಸುವ ಅಭ್ಯರ್ಥಿಗಳ ಹಿನ್ನೆಲೆ ನಿಲುವುಗಳನ್ನು ಅರಿತು ಮತ ಚಲಾಯಿಸುವ ಅಗತ್ಯವಿದೆ. ಈ ಮೂಲಕ ಭಾರತ ದೇಶದ ಪ್ರಜಾತಾಂತ್ರವನ್ನು ಬಲಪಡಿಸುವ ಪ್ರಯತ್ನ ಆಗಬೇಕಿದೆ. ಮತದಾನದ ದಿನ ಹಿಂದುಳಿಯದೇ ಏ.17 ರಂದು ಮತ ಚಲಾಯಿಸಿ ನಿಮ್ಮ ಹಕ್ಕನ್ನು ಧೃಢಪಡಿಸಿಕೊಳ್ಳಿ .

Sunday, April 6, 2014

ಕೀಳು ಅಭಿರುಚಿ ಮತ್ತು ಚುನಾವಣಾ ರಾಜಕೀಯ!

ಲೋಕಸಭಾ ಚುನಾವಣೆ ರಂಗೇರುತ್ತಿರುವ ದಿನಗಳಲ್ಲೇ ಕೆಲವು ಅನುಚಿತ ಸಂಗತಿಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಅದು ನೈತಿಕತೆಗೆ ಧಕ್ಕೆ ತರುವಂತಹ ಸಂಗತಿಗಳು. ಸಾರ್ವತ್ರಿಕವಾಗಿ ಜರುಗುತ್ತಿರುವ ಈ ಘಟನೆಗಳಿಗೆ ಮೂಲ ಪ್ರೇರಣೆ ಏನಿರುತ್ತದೆಯೋ ಗೊತ್ತಿಲ್ಲ ಆದರೆ ಪರಿಣಾಮ ಮಾತ್ರ ವ್ಯತಿರಿಕ್ತವೇ ಸರಿ.

     ಕೇವಲ ಹತ್ತು ತಿಂಗಳ ಅವಧಿಯಲ್ಲಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಐತಿಹಾಸಿಕ ರಾಜಕೀಯ ಪುಟಗಳನ್ನು ತೆರೆದದ್ದು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಎಂಬುದು ನಿಸ್ಸಂಶಯವಾದುದ್ದು. ಭಾರತದ ಕೈಗಾರಿಕಾ ವಸಾಹತು ರಾಜ್ಯವಾದ ಗುಜರಾತ್ ನಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯನಾಗಿದ್ದ ನರೆಂದ್ರ ಮೋದಿ ನಂತರ ರಾಷ್ಟ್ರೀಯ ಪಕ್ಷವೊಂದರ ಮಂಚೂಣಿ ಪ್ರಧಾನಿ ಅಭ್ಯರ್ಥಿಯಾಗಿದ್ದು ಸಾಮಾನ್ಯ ಸಂಗತಿಯೇನಲ್ಲ. ಸಿವಿಲ್ ಕಂಟ್ರಾಕ್ಟರ್ ಮತ್ತು ರೈತಾಪಿಯೂ ಆಗಿದ್ದ  ಹಳ್ಳಿಗಾಡಿನ ರೈತನ ಮಗ ಹೆಚ್ ಡಿ ದೇವೇಗೌಡ ಪ್ರಾದೇಶಿಕ ಪಕ್ಷವೊಂದರ ಸಂಸದನಾಗಿ ಭಾರತ ದೇಶದ ಪ್ರಧಾನಿ ಪಟ್ಟ ಅಲಂಕರಿಸಿದ್ದು ಹೆಮ್ಮೆಯ ಸಂಗತಿ. ಹಾಗೆಯೇ ಚಿತ್ರರಂಗದಲ್ಲಿ ಬಿಂದಾಸ್ ತಾರೆಯಾಗಿ ಹೆಸರು ಮಾಡಿದ್ದ ನಗ್ಮಾ ಸಂಸದೆಯಾಗಿದ್ದು, ರಾಜಕೀಯವನ್ನು ನಿರಾಕರಿಸುತ್ತಲೇ ಮುಂಗೋಪ, ಹುಡುಗಾಟ ಪ್ರದರ್ಶಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಾಯಕಿ ನಟಿ ರಮ್ಯಾ ಅಭಿಮಾನದ ಬಲದಿಂದಲೇ ಸಂಸತ್ ಭವನಕ್ಕೆ ಅತೀ ಚಿಕ್ಕ ವಯೋಮಾನದಲ್ಲೇ ಪ್ರವೇಶ ಪಡೆದಿದ್ದು ದಾಖಲೆಯೇ ಸರಿ. 
       ಇದು ಒಂದೆಡೆ ಇರಲಿ ಈ ಸಂಗತಿಗಳನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆ ಎಂದರೆ ಸಾರ್ವತ್ರಿಕವಾಗಿ ಹೀಗೆ ಐಕಾನ್ ಗಳಾಗಿರುವವರ ವಿರುದ್ದ ಕೀಳು ಅಭಿರುಚಿಯನ್ನು ಪ್ರದರ್ಶಿಸುವುದಿದೆಯಲ್ಲ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷದ ಹೀರೋ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಚುನಾವಣಾ ಪ್ರಚಾರದ ಸಂಧರ್ಭ ನಡೆಯುತ್ತಿರುವ ಹಲ್ಲೆಗಳು, ಮಸಿ ಎರಚುವಿಕೆ, ತಡೆಯೊಡ್ಡುವುದು ಸರಿಯೇ? ಹೋಗಲಿ ಲೋಕಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಬಿಂಬಿತವಾಗುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅರವಿಂದ ಕೇಜ್ರಿವಾಲ್ ಅಷ್ಟೊಂದು ತೊಡಕಾಗಿ ಪರಿಣಮಿಸಿದ್ದಾರೆಯೇ ? ಗೂಂಡಾ ಪ್ರವೃತ್ತಿ ಹಲ್ಲೆ ಖಂಡನೀಯ. ನರೇಂದ್ರ ಮೋದಿ ಹವಾ ಇಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತವಾದರೂ ಭಾರತದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಹವಾ ಇದೆಯೋ ಇಲ್ಲವೋ ನಮೋ ಹವಾ ಅಂತು ಇದ್ದೇ ಇದೆ ಎಂಬುದು ನಿರ್ವಿವಾದ, ಆದರೆ ಇದನ್ನು ಸಹಿಸದ ಕಾಂಗೈ ಸಂಸತ ಅಭ್ಯರ್ಥಿಯೊಬ್ಬ ನರೇಂದ್ರ ಮೋದಿಯನ್ನು ಕತ್ತರಿಸುತ್ತೇನೆ ಎಂದು ಮಾತನಾಡುತ್ತಾನೆ, ಇದೆಲ್ಲ ಎಂತಹ ನಡವಳಿಕೆಯನ್ನು ಪ್ರದರ್ಶಿಸಿದಂತಾಗುತ್ತದೆ ಅಲ್ಲವೇ? ಇಂಥಹವರು ಗೆದ್ದ ಮೇಲೆ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾರೆಯೇ ? ವ್ಯಕ್ತಿಗತವಾಗಿ ಆತ ಮಾತನಾಡಿದ್ದು ಒಂದು ಪಕ್ಷಕ್ಕೆ, ಒಂದು ಸಮುದಾಯಕ್ಕೆ ಕೆಟ್ಟ ಹೆಸರು ತಂದಂತಲ್ಲವೇ ಇವುಗಳ ಒಟ್ಟು ಪರಿಣಾಮ ವ್ಯತಿರಿಕ್ತವಾಗ ಬಹುದಲ್ಲವೇ?
         ದೃಶ್ಯ ಮಾಧ್ಯಮಗಳಿಗೆ ಕಡಿವಾಣ ಇಲ್ಲದಿರುವುದರಿಂದ ಅನೇಕ ಪ್ರಚೋದನಾತ್ಮಕ ಚಟುವಟಿಕೆಗಳು ಕಾರ್ಯಕ್ರಮವಾಗಿ ಪ್ರಸಾರ ಕಾಣುತ್ತಿವೆ. ಇಂತಹದ್ದೊಂದು ಚುನಾವಣ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷ ಪರಮೇಶ್ವರ್, ಮಾಜಿ ಪ್ರಧಾನಿ ದೇವೇಗೌಡ ವಿರುದ್ದ ಆಡಬಾರದ ಮಾತನ್ನು ಉತ್ಸಾಹದಲ್ಲಿ ಆಡಿದ್ದಾರೆ. ಉತ್ತಮ ಶೈಕ್ಷಣಿಕ ಹಿನ್ನೆಲೆಯಿರುವ ಪರಮೇಶ್ವರ್ ಮುತ್ಸದ್ದಿ ತನವನ್ನು ಪ್ರದರ್ಶಿಸಿ ಸಮತೂಕದ ಮಾತನ್ನು ಆಡಬಹುದಿತ್ತು, ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉತ್ಸಾಹದಲ್ಲಿ ನಾಲಗೆಯನ್ನು ಹರಿಯಬಿಟ್ಟಿದ್ದಾರೆ, ಬಿಜೆಪಿಯ ಈಶ್ವರಪ್ಪ, ಪ್ರತಾಪ್ ಸಿಂಹ, ಕಾಂಗೈನ ಜನಾರ್ಧನ ಪೂಜಾರಿ ಕೂಡಾ ಎಗ್ಗು ತಗ್ಗಿಲ್ಲದೇ ಮಾತನಾಡಿ ತಮ್ಮ ಘನತೆ ಗೌರವಕ್ಕೆ ಕುಂದು ತಂದುಕೊಂಡಿದ್ದಾರೆ. ಹಿಂದೊಮ್ಮೆ ಇದೇ ದೇವೇಗೌಡ ಕೂಡ ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ವಿರುದ್ದ ಕೀಳು ಅಭಿರುಚಿಯ ಮಾತನ್ನು ಆಡಿದ್ದರು. ಅದು ಒಂದು ರೀತಿಯಲ್ಲಿ ಯಡಿಯೂರಪ್ಪ ಗೆ ಒಳ್ಳೆಯದೇ ಆಗಿತ್ತೆನ್ನಿ. ಈಗ ಅದೇ ಲಾಭ ದೇವೇಗೌಡರಿಗೂ ಪರೋಕ್ಷವಾಗಿ ಆಗುವ ಸಾಧ್ಯತೆಗಳೇ ಹೆಚ್ಚು!
         ನಗ್ಮಾ ಸಂಸತ್ ಅಭ್ಯರ್ತಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಹಿರಿಯ ರಾಜಕಾರಣಿಯೊಬ್ಬ ಕಿವಿಯಲ್ಲಿ ಏನೋ ಹೇಳುವವನಂತೆ ನಟಿಸುತ್ತಾ ಆಕೆಯನ್ನು ಸಾರ್ವತ್ರಿಕವಾಗಿ ಅಪ್ಪಿ ಮುತ್ತಿಟ್ಟಿದ್ದು ಅವನ ನೈತಿಕತೆಯ ಪರಮಾವಧಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ರಮ್ಯಾ ಲೋಕಸಭಾ ಚುನಾವಣೆಗೆ ನಿಂತಾಗ ಆಕೆಯ ಹುಟ್ಟಿನ ಕುರಿತು ಅನೈತಿಕ ಹೇಳಿಕೆ ನೀಡಿದ್ದು ರಮ್ಯಾಗೆ ಮತಗಳಾಗಿ ಪರಿವರ್ತನೆಯಾಗಿದ್ದು ಸುಳ್ಳೇನಲ್ಲ. ಈ ಸಲ ರಮ್ಯಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಅಭಿಮಾನಿಗಳು ಮುಜುಗುರವಾಗುವಂತೆ ಸಾರ್ವತ್ರಿಕವಾಗಿ ಆಕೆಯನ್ನು ಅಪ್ಪಿ ಮುದ್ದಾಡಿದ ಘಟನೆಯೂ ವರದಿಯಾಗಿದೆ. 
      ಇದೆಲ್ಲಾ ಎಂಥದ್ದು ಮಾರಾಯ್ತೇ? ಪ್ರಜಾತಾಂತ್ರಿಕ ವ್ಯವಸ್ಥೆಗೆ ಗಂಭೀರ ನೆಲೆಗಟ್ಟಿನಲ್ಲಿ ಸಾಗಬೇಕಾದ ಚುನಾವಣೆಗಳಲ್ಲಿ ಇಂಥಹ ಕೀಳು ಅಭಿರುಚಿಗಳು ಕೊನೆಯಾಗಬೇಕು. ಸಾರ್ವತ್ರಿಕವಾದ ದುರ್ವರ್ತನೆಗಳು,ಕೀಳು ಅಭಿರುಚಿಯ ಭಾಷಣಗಳು, ಪ್ರಚೋದನಾಕಾರಿಯಾದ ಮಾತುಗಳು ವ್ಯಕ್ತಿತ್ವವನ್ನು ಹಾಳು ಮಾಡುವ ಜೊತೆಗೆ ಪರಿಸರಕ್ಕೂ ಕೆಟ್ಟ ಪಾಠವನ್ನೇ ಕಲಿಸುತ್ತವೆ. ಆರೋಗ್ಯಕರವಾದ ವಾತಾವರಣಕ್ಕೆ ಅಡ್ಡಿಯಾಗುವಂತಹ ಇಂತಹ ಸಂಗತಿಗಳನ್ನೇ ರಾಜಕೀಯ ಪಕ್ಷಗಳ ಓಟಿನ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣೆ ಎದುರಿಸುವುದು ಇನ್ನೂ ಅಸಹ್ಯಕರ ಸಂಗತಿಯಲ್ಲವೇ. ಭಾರತ ದೇಶದ ಒಟ್ಟು ಚುನಾವಣಾ ಪ್ರಕ್ರಿಯೆಗಳನ್ನು ಬಹಳ ವೇಗವಾಗಿ ಮತದಾರ ಗ್ರಹಿಸುತ್ತಿರುತ್ತಾನೆ ಮತ್ತು ಸರಿಯಾದ ಸಂಧರ್ಭದಲ್ಲಿ ತಕ್ಕ ಪಾಠವನ್ನು ಕಲಿಸುತ್ತಾನೆ ಎಂಬುದನ್ನು ಅರಿಯಬೇಕಾದ ತುರ್ತು ಇದೆ. 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...