Saturday, May 25, 2019

ಪ್ರೊ ಕೆ ಎಸ್ ಭಗವಾನ್ ರನ್ನು ನಿಂದಿಸುವ ಮುನ್ನಾ........

Image result for prof k s bhagawanಚಿಂತಕ-ಪ್ರಾಧ್ಯಾಪಕರಾದ  ಪ್ರೊ ಕೆ ಎಸ್ ಭಗವಾನ್ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಸ್ತವ ಸಂಗತಿಗಳನ್ನು ನೇರ ದಾಟಿಯಲ್ಲಿ ಹೇಳುತ್ತಾ ಸತ್ಯವನ್ನು ಒಪ್ಪದವರ ಕೆಂಗಣ್ಣಿಗೆ ಗುರಿಯಾದವರು ಕೆ ಎಸ್ ಭಗವಾನ್. ಅವರು ಬೇಗನೆ ಗುಣಮುಖರಾಗಲಿ.

ಮೈಸೂರು ಮಹರಾಜ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಕೆ ಎಸ್ ಭಗವಾನ್ ವೈಚಾರಿಕ ಸಂಗತಿಗಳನ್ನು ಬರೆಯುತ್ತಾ ಬಲಪಂಥೀಯರು ಹಾಗೂ ಹೇಳುವ ಧಾಟಿಯಿಂದ ಎಡಪಂಥೀಯರ ಅಸಹನೆಗೆ ತುತ್ತಾದವರು. ಅವರು ಬರೆದ ಶಂಕರಾಚಾರ್ಯರ ಕುರಿತಾದ ಪುಸ್ತಕ ಮತ್ತು ಅವರ ವೈಚಾರಿಕ ಬರವಣಿಗೆ, ಚಿಂತನೆಗಳ ಕಾರಣಕ್ಕೆ ಬಾಂಬೆ ಹೈಕೋರ್ಟ್ ನಿಂದ ಅರೆಸ್ಟ್ ವಾರಂಟ್ ಪಡೆದಿದ್ದರು. ಹೀಗೆ ಭಗವಾನ್ ಕುರಿತು ಕುತೂಹಲ ಇದ್ದ ಕಾಲಘಟ್ಟದಲ್ಲಿಯೇ ನಾನು ಅವರ ವಿದ್ಯಾರ್ಥಿಯಾದೆ.

ಕೆ ಎಸ್ ಭಗವಾನ್ ಕಾಲೇಜಿನಲ್ಲಿ ಇಂಗ್ಲೀಷ್ ಪಾಠ ಮಾಡುವ ಜೊತೆಗೆ ಮೈಸೂರು ನಗರದ ಯುನಿವರ್ಸಿಟಿ ಹಾಸ್ಟೆಲ್ ಗಳಲ್ಲಿದ್ದ ಗ್ರಾಮೀಣ ಭಾಗದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲೀಷ್ ಪಾಠಗಳನ್ನು ಸರಳವಾಗಿ ಹೇಳಿಕೊಡುತ್ತಿದ್ದರು. ಕಲಾ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷ್ ಕೆ ಎಸ್ ಭಗವಾನ್ ಪ್ರಯತ್ನದಿಂದ ಸುಲಭವಾಗುತ್ತಿತ್ತು. ಇದೇ ವೇಳೆ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ಈ ಅಂಶಗಳು ನಾನು ಭಗವಾನ್ ರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅವಕಾಶ ಮಾಡಿದೆ.

ಇತ್ತೀಚೆಗೆ ಅವರು ಬರೆದ ರಾಮ‌ಮಂದಿರ ಏಕೆ ಬೇಡ? ಪುಸ್ತಕ ವಿವಾದಕ್ಕೀಡಾದಾಗ ತರಿಸಿ ಓದಿದೆ. ಇಡೀ ಪುಸ್ತಕದಲ್ಲಿ ಆಕ್ಷೇಪಾರ್ಹವಾದ ಸಂಗತಿಗಳು ಕಾಣಲಿಲ್ಲ. ಅವರ ಉಲ್ಲೇಖಗಳು ಸಕಾರಣ ಒದಗಿಸಿದ್ದವು. ಆದರೆ  ಪುರೋಹಿಶಾಹಿ ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮಗಳಲ್ಲಿ ವಕ್ಕರಿಸಿದ್ದು ದುರುದ್ದೇಶದಿಂದ ಭಗವಾನ್ ರನ್ನು‌ ಹಣಿಯುವ ಪ್ರಯತ್ನ ಮಾಡಿವೆ. ಕೋಮು ವಿಭಜಕ ಶಕ್ತಿಗಳನ್ನು, ಚಿಂತನೆಗಳೇ ಸತ್ತುಹೋದವರನ್ನ, ಜ್ಯೋತಿಷ್ಯ ಹೇಳುವವರನ್ನು ಚಾನಲ್ ಡಿಸ್ಕಷನ್ ಗೆ ಕೂರಿಸಿಕೊಂಡು ಭಗವಾನ್ ರನ್ನು ನಿಂದಿಸುವ ಅನೈತಿಕ ಕೆಲಸ ಮಾಡುತ್ತಿವೆ. ಈ ‌ಮೂಲಕ  ವ್ಯವಸ್ಥೆಯನ್ನು ಪ್ರಚೋದಿಸುತ್ತಾ ಚಿಂತಕರನ್ನು, ವಾಸ್ತವವಾದಿಗಳನ್ನು ಟಾರ್ಗೆಟ್ ಮಾಡುತ್ತಿವೆ. ಇದರ ಮುಂದುವರಿದ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಭಗವಾನ್ ವಿರುದ್ಧ ಆತಂಕಕಾರಿ ಅಭಿಪ್ರಾಯ, ಬೆದರಿಕೆಗಳನ್ನು ಹಾಕಲಾಗುತ್ತಿದೆ. ಭಗವಾನ್ ರಿಗೆ ಪೊಲೀಸ್ ಭದ್ರತೆ ಯಲ್ಲಿ ಮಾತನಾಡ ಬೇಕಾದ ದುಸ್ತಿತಿ ಉಂಟಾಗಿದೆ.

ಭಗವಾನ್ ಹೇಳುವ ಸಂಗತಿಗಳು ಧಾರ್ಮಿಕ ಭಾವನೆಗೆ ಧಕ್ಕೆ ಎನ್ನಲಾಗುತ್ತದೆ. ಹಿಂದೂ‌ಧರ್ಮದ ದೇವತೆಗಳ ಬಗ್ಗೆ ಮಾತನಾಡುತ್ತಾರೆ ಅನ್ಯಧರ್ಮೀಯರ ಬಗ್ಗೆ ಏಕೆ‌ ಮಾತನಾಡಲ್ಲ ಎಂದು ಪ್ರಶ್ನಿಸುತ್ತಾರೆ. ನಾವು ಆರಾದಿಸುವ ದೇವರುಗಳ ಚರಿತ್ರೆಯ ಮೇಲೆ ಬೆಳಕು ಚೆಲ್ಲುವುದು ತಪ್ಪು ಹೇಗಾದೀತು. ನಮ್ಮ ದೇವರುಗಳ ! ಕರಾಳ ಇತಿಹಾಸ 'ಆದರ್ಶ'ದ ಚೌಕಟ್ಟಿನಲ್ಲಿ ಬರಬಾರದು ಎಂಬುದಷ್ಟೆ ಆಶಯ ಅಲ್ಲವೇ?

ಭಗವಾನ್ ವಾಸ್ತವ ಸಂಗತಿ ಹೇಳಿದ ಮಾತ್ರಕ್ಕೆ ಆಸ್ತಿಕರು ದೇವರುಗಳನ್ನೆಲ್ಲ ನಿರಾಕರಿಸಿ ಬಿಡಲು ಸಾಧ್ಯವೇ? ದೇವರು, ನಂಬಿಕೆ, ಪೂಜೆ ಅವರವರ ಆತ್ಮ ತೃಪ್ತಿಯ ಸಂಗತಿ ಹಾಗೆಂದು ಅವುಗಳೆಲ್ಲಾ ಪ್ರಶ್ನಾತೀತವಾದುವಲ್ಲ. ಭಗವಾನ್ ಹಿಂದೂ ಧರ್ಮದಲ್ಲಿ ಹುಟ್ಟಿದವರು, ಹಿಂದು ಧರ್ಮದ ಹುಳುಕುಗಳು ಮತ್ತು ಅವರು ಕಂಡುಕೊಂಡ ವಿಚಾರಗಳನ್ನು ಹೇಳಲು ಸಮರ್ಥರೇ ವಿನಹ ತಿಳಿಯದ ಮುಸ್ಲಿಂ, ಕ್ರೈಸ್ತ ಅಥವ ಇತರೆ ಧರ್ಮದ ಬಗ್ಗೆ ಮಾತನಾಡಲು ಹೇಗೆ ಸಾಧ್ಯ? ಆಯಾ ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಲು ಅಲ್ಲಿಯೂ ಭಗವಾನ್ ಥರದ ಚಿಂತಕರು ಇದ್ದಾರಲ್ಲ.‌

ಹಿಂದೂ ಧರ್ಮ(ಜೀವನ‌ ಪದ್ಧತಿ) ಪ್ರಶ್ನೆಗಳನ್ನು ಮತ್ತು ಸಮರ್ಥ ಉತ್ತರಗಳನ್ನು ಅಡಕ ಮಾಡಿಕೊಂಡಿದೆಯೇ ವಿನಹ ಪ್ರಶ್ನೆಗಳನ್ನು, ಪ್ರಶ್ನಿಸುವವರನ್ನು ಆತಂಕಕ್ಕೀಡು ಮಾಡುವ ಸಮರ್ಥನೆಗಳನ್ನು ಹೊಂದಿಲ್ಲ. ಆದರೆ ಬೆದರಿಕೆ, ಸಮರ್ಥನೆಗಳನ್ನು ಮುಂದು ಮಾಡಿ ಹಿಂದೂ ಧರ್ಮದ ಆಶಯಕ್ಕೆ ಧಕ್ಕೆ ತರಲಾಗಿದೆ. ವರ್ತಮಾನದಲ್ಲಿ  ಯಾವ ಸಂಗತಿಗಳು ಕೂಡಾ ಮತ್ತೊಂದು ಬದಿಯ ಸತ್ಯವನ್ನ ಮರೆ ಮಾಚಬಾರದು. ವೈಚಾರಿಕತೆಗೆ ತೆರೆದುಕೊಳ್ಳುವ ಹಾದಿಯಲ್ಲಿಯೇ ಆಯ್ಕೆಗಳು ಇರುತ್ತವಲ್ಲ. ಹೀಗಿರುವಾಗ ಭಗವಾನ್ ರು ರಾಮ-ಕೃಷ್ಣ-ಶಿವ ಕುರಿತು ಹೇಳುವ ಸಂಗತಿಗಳನ್ನು ಅರಿವಿಗೆ ತಂದುಕೊಳ್ಳಿ, ವಿಚಾರ ಮಾಡಿ, ಬೇಡವೆಂದರೆ ಬಿಟ್ಟು ಬಿಡಿ. ಭಗವಾನ್ ರನ್ನು ಯಾಕೆ ಆತಂಕದ ಚೌಕಟ್ಟಿಗೆ ತರುತ್ತೀರಿ? ಕೆಡುಕು ಬಯಸುತ್ತೀರಿ?

#ProfKSBhagawan #WhyInsultingProfKSBhagawan #ArkalgudJayakumar

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...