Thursday, July 25, 2019

‘ಪತ್ರಕರ್ತ’ ಆತ್ಮ ವಿಮರ್ಶೆಗೆ ಸಕಾಲ!


‘ಪತ್ರಕರ್ತ’ ಎಂದರೆ ಯಾರು? ವರ್ತಮಾನದ ಸೂಕ್ಷ್ಮಗ್ರಾಹಿ?, ಸಂವೇದನಾಶೀಲ, ವಿಚಾರವಂತ?, ಉತ್ತಮ ಅಭಿವ್ಯಕ್ತಿಕಾರ?, ಪಕ್ಷಾತೀತ ಧೋರಣೆಯವನು?, ಸಾಮಾಜಿಕ ಕಳಕಳಿಯುಳ್ಳವನು?, ಜಾತೀಯ ಧೋರಣೆ ಇಲ್ಲದವನು?, ಅಸಹಾಯಕರ ಖಡಕ್ ಪ್ರತಿನಿಧಿ?, ಸಮಾಜದ ಮಾದರಿ ವ್ಯಕ್ತಿ? ಊಹುಂ ಸುತಾರಾಂ ಇದ್ಯಾವುದು ಅಲ್ಲವೇ ಅಲ್ಲ ಎಂಬ ಧುರಿತ ಕಾಲಘಟ್ಟದಲ್ಲಿದ್ದೇವೆ.

ಒಟ್ಟು ವ್ಯವಸ್ಥೆಯಲ್ಲಿ ಪತ್ರಕರ್ತ ಅಭಿವ್ಯಕ್ತಿಗೆ ಸ್ವಯಂ ಕಡಿವಾಣ ಹಾಕಿಕೊಳ್ಳದೇ ಕೊಂಚ ಎಡವಿದರೂ ‘ಸಿಟಿಜನ್ ಜರ್ನಲಿಸಂ’ನ ಈ ಹೊತ್ತಿನಲ್ಲಿ ಪ್ರಶ್ನಾತೀತರಾಗಿ ಉಳಿಯುವುದು ಸಾಧ್ಯವೇ ಇಲ್ಲ. ಪ್ರತಿ ಸುದ್ದಿಯ ಆಚೀಚೆಗಳನ್ನು ಭೂತಗನ್ನಡಿ ಹಿಡಿದು ಹರಾಜು ಹಾಕಲು ಸಾಮಾಜಿಕ ಜಾಲತಾಣದ ಸೇನಾನಿಗಳು ಸಜ್ಜಾಗಿರುತ್ತಾರೆ. ಹಾಗಾಗಿ ಪತ್ರಕರ್ತನ ಪ್ರತೀ ಹೆಜ್ಜೆಯಲ್ಲೂ ಮುಳ್ಳಿನ ಹಾದಿಯದ್ದೇ ಸವಾಲು!.


ಆಧುನೀಕತೆಗೆ ಮುಂಚೆ ಸಾರ್ವತ್ರಿಕ ಸಂವಹನಕ್ಕಿದ್ದ ಮುಕ್ತ ಆಯ್ಕೆ ಮುದ್ರಣ ಮಾಧ್ಯಮ ಒಂದೇ. ಅವತ್ತಿಗೆ ಸಾಮಾಜಿಕ ಸಂಘಟನೆಗೆ, ಜಾಗೃತಿಗೆ ಸ್ವಾತಂತ್ರ್ಯದ ಕಿಚ್ಚಿಗೆ ಗಾಂಧಿ, ಅಂಬೇಡ್ಕರ್, ಬಾಲ ಗಂಗಾಧರ ತಿಲಕ್  ಆಯ್ಕೆ ಮಾಡಿಕೊಂಡಿದ್ದು ಮಾಧ್ಯಮಗಳನ್ನೆ. ಅತ್ಯಂತ ಯಶಸ್ವಿಯಾಗಿ ಪತ್ರಕರ್ತರಾಗಿದ್ದ ಅವರು ಸಾರ್ವಜನಿಕ ವ್ಯವಸ್ಥೆಯಲ್ಲಿ ದೊಡ್ಡ ಆಂಧೋಲನಗಳನ್ನೆ ಮಾಡಿದರು. ಜನರಿಗೆ ಹೇಳ ಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳಿದರು, ಜನರನ್ನು ಚಿಂತಿಸುವಂತೆ ಮಾಡಿದರು. ಪತ್ರಕರ್ತರೆಂದರೆ ‘ಬುದ್ದಿಜೀವಿ’ ಗಳು, ದಮನಿತರ ಧ್ವನಿ ಎಂಬ ಭರವಸೆ ತುಂಬಿದರು. ಈ ಹೊತ್ತಿಗೂ ಭಾರತ ದೇಶ ಕಂಡ ಗ್ರೇಟ್ ಜರ್ನಲಿಸ್ಟ್ಸ್ ಎಂದರೆ ಅದು ಮಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ಮಾತ್ರ.

ಈಗ ಕಾಲ ಬದಲಾಗಿದೆ, ಆಧುನಿಕತೆ ಬಂದಿದೆ. ಮುದ್ರಣ ಮಾಧ್ಯಮವನ್ನು ಮೀರಿಸುವಂತೆ ಟಿವಿ ವಾಹಿನಿಗಳಿವೆ, ಅಂತರ್ಜಾಲ ತಾಣಗಳಿವೆ, ಎಲ್ಲವನ್ನು ಮೀರಿಸುವಂತೆ ನವ ಮಾಧ್ಯಮ ‘ಡಿಜಿಟಲ್ ಮೀಡಿಯಾ’ ಇದೆ. ಮುದ್ರಣ, ದೃಶ್ಯ, ಧ್ವನಿ ಮಾಧ್ಯಮಗಳ ಉಳಿವಿಗೂ ಡಿಜಿಟಲ್ ಮೀಡಿಯಾ ಮೊರೆ ಹೋಗಲಾಗುತ್ತಿದೆ. ಸಧ್ಯದ ಟ್ರೆಂಡ್ ಅದೇ ಆಗಿದೆ ಡಿಜಿಟಲ್ ಮೀಡಿಯಾ.


ವರ್ತಮಾನದ ವೈರುಧ್ಯ ಸಂದರ್ಭದಲ್ಲಿ ಮಾಧ್ಯಮಗಳೆಲ್ಲ ಬಂಡವಾಳಶಾಹಿಗಳ ಪಾಲಾಗಿರುವುದರಿಂದ ಬಯಾಸ್ಡ್ ಆಗಿಯೇ ಇವೆ. ಇಂತಹ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಕೂಡ ಶುದ್ಧತೆಯನ್ನು ಕಾಣುವುದು ಸಾಧ್ಯವಿಲ್ಲ. ಆದರೂ ಲಭ್ಯವಾಗುವ ಅಷ್ಟಿಷ್ಟು ಸ್ಪೇಸ್ ನಲ್ಲಿಯೇ ನೈತಿಕತೆಯನ್ನು ಉಳಿಸಿಕೊಂಡಿರುವುದನ್ನು ತಳ್ಳಿಹಾಕುವಂತಿಲ್ಲ. ಪರ್ಯಾಯ ಸಾಧ್ಯಗಳನ್ನು ಕಂಡು ಕೊಳ್ಳಬೇಕಾದ ಪತ್ರಕರ್ತ ಪಾಚಿಗಟ್ಟಿದ ಹಳೆ ವ್ಯವಸ್ಥೆಯಲ್ಲಿ ಉಳಿದು ಬದುಕಿಗಾಗಿ ಬಂಡವಾಳಶಾಹಿಗಳ, ರಾಜಕಾರಣಿಗಳ ಗುಲಾಮನಾಗಿ ಉಳಿಯುತ್ತಿರುವುದು ವಿಷಾಧನೀಯ ಸಂಗತಿ.

ಮಾಧ್ಯಮ ಲೋಕಕ್ಕೆ ವಿಚಾರವಂತರು, ಸಾಮಾಜಿಕ ಕಳಕಳಿಯುಳ್ಳವರು ಬರುತ್ತಾರೆ ಎಂಬ ನಿರೀಕ್ಷೆಗಳೆಲ್ಲ ಈಗ ಹುಸಿಯಾಗಿದೆ. ತಲೆ ಹಿಡುಕರು, ದಗಾಕೋರು, ವಂಚಕರು, ಅತ್ಯಾಚಾರಿಗಳು, ಜಾತಿವಾದಿಗಳು, ಬಡ್ಡಿ ಕ್ರಿಮಿಗಳು, ರಾಜಕೀಯ ಪುಡಾರಿಗಳು ಹೀಗೆ ಅನೇಕರು ಮೀಡಿಯಾದ ಮಾಲೀಕರುಗಳಾಗಿ, ಪತ್ರಕರ್ತರೆಂಬ ಹಣೆಪಟ್ಟಿಯಲ್ಲಿ ಪ್ರತಿಷ್ಠಾಪನೆಯಾಗಿದ್ದಾರೆ. ಹೀಗಾಗಿ ಮೀಡಿಯಾ ಎಂದರೆ ‘ಭಯೋತ್ಪಾದನಾ ಕೇಂದ್ರ’, ಪತ್ರಕರ್ತರೆಂದರೆ ಭಯೋತ್ಪಾದಕರು ಎಂಬುದು ಜನಜನಿತವಾಗಿದೆ. ಇಂತಹ ಸಂದರ್ಭದಲ್ಲಿ ಮೀಡಿಯಾ ಹೌಸ್ ಗಳಲ್ಲಿ ಸ್ವಯಂ ನಿಯಂತ್ರಣ ನಿರೀಕ್ಷಿಸುವುದು ಸಾಧ್ಯವೇ? ‘ಪತ್ರಕರ್ತ’ ವೃತ್ತಿಯ ಅಧ:ಪತನ ಆಗಿದೆ. ಕೊಳ್ಳುವ ಸರಕಾಗಿ ಪತ್ರಕರ್ತ ಮತ್ತು ಆತನ ಸುದ್ದಿಗಳು ಬದಲಾಗಿವೆ. ಅಂದರೆ ಪತ್ರಕರ್ತ ಆಗಿ ಸೇರುವವನಿಗೆ ಶಿಕ್ಷಣದ ಅರ್ಹತೆಗಿಂತ ಸಾರ್ವತ್ರಿಕ ಮಾಧ್ಯಮ ನೀತಿ ಸಂಹಿತೆಯ ಮಾರ್ಗಸೂಚಿ ಬೇಕಿದೆ. ಅದನ್ನು ರೂಪಿಸುವವರಾರು? ರಾಜ್ಯಾಂಗ?, ಕಾರ್ಯಾಂಗ?, ನ್ಯಾಯಾಂಗ? . ದೇಶದ ಮುಖ್ಯ ನ್ಯಾಯಾಧೀಶರನ್ನು ಆಯ್ಕೆ ಮಾಡುವಲ್ಲಿ ಅನುಸರಿಸುವ ಕ್ರಮಗಳನ್ನೇ ಮಾಧ್ಯಮಗಳಿಗೆ, ಪತ್ರಕರ್ತರಿಗೆ ರೂಪಿಸ ಬೇಕಾದ ಅಗತ್ಯತೆ ಇದೆ. ಮಾಧ್ಯಮದ ಕೊಳೆ, ಕೂಳೆಗಳನ್ನು ಒರೆಸಿ ಹಾಕಬೇಕಾದ ತುರ್ತು ಇದೆ. ಪತ್ರಕರ್ತ ವೃತ್ತಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳ ಬೇಕಾಗಿದೆ. ಅಂತಹ ಸುದಿನವನ್ನು ಎದುರು ನೋಡುತ್ತಾ, ಎಲ್ಲಾ ಪತ್ರಕರ್ತರು ಆತ್ಮ ವಿಮರ್ಶೆ ಮಾಡಿಕೊಂಡು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಿ, ಮನುಷ್ಯರಾಗಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

Saturday, May 25, 2019

ನಮ್ಮ ಶಂಕರ ನ ನೆನಪೇ ಸ್ಮಾರಕ!



ಶಂಕರ್‌ನಾಗ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ನಟರಾಗಿ, ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹಾಗೂ ತಂತ್ರಜ್ಞರಾಗಿ ಭಾರತೀಯ ಚಿತ್ರರಂಗ ಮತ್ತು ಕನ್ನಡ ಚಿತ್ರರಂಗದ ಲ್ಲಿ ಹೆಸರು ಮಾಡಿದವರು.

ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಈ ಹೊತ್ತಿಗೂ ಮಾಲ್ಗುಡಿ ಡೇಸ್ ಟಿವಿ ಸರಣಿಯ ನಿರೂಪಣಾ ಶೈಲಿ , ಕಥಾ ಹಂದರವನ್ನು ತೆರೆಗೆ ತಂದ ರೀತಿ ಹೊಸತಾಗಿಯೇ ಉಳಿಯುತ್ತದೆ.

ಭಾರತೀಯ ಚಿತ್ರರಂಗದಲ್ಲಿ ಅಪರೂಪ ಎನಿಸಿದ Under Water Shooting ಗಾಗಿ ಲಂಡನ್ ನಿಂದ ದುಬಾರಿ ವೆಚ್ಚದ ಕೆಮರಾಗಳನ್ನು ತರಿಸಿ ಒಂದು ಮುತ್ತಿನ ‌ಕಥೆ ಸಿನೆಮಾದ ಚಿತ್ರೀಕರಣದಲ್ಲಿ ಬಳಸಿದ್ದರು. 80ರ ದಶಕದಲ್ಲಿ ಜಾನಪದ ಕಥಾ ಹಂದರದ ರಂಗ ನಾಟಕಗಳನ್ನು ದಿಗ್ದರ್ಶಿಸಿ, ನಟಿಸಿ 7ರಾಷ್ಟ್ರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಶಂಕರ್ ನಾಗ್ , ಅವರದ್ದೇ ಅಭಿನಯದ  ಪರಮೇಶಿ ಪ್ರೇಮ‌ ಪ್ರಸಂಗ, *ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಜನಪ್ರಿಯ ನಾಟಕಗಳನ್ನು ಸಿನೆಮಾ ಮಾಡಿ ಗೆದ್ದಿದ್ದು ಇತಿಹಾಸ. ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯೋಗ ಮಾಡಿ  ಯಶಸ್ಸು ಕಂಡ ಮೊದಲ ನಟ ಶಂಕರ್‌ನಾಗ್.  ಮತ್ತೊಂದು ಜನಪ್ರಿಯ ನಾಟಕ ಜೋಕುಮಾರಸ್ವಾಮಿ   ಸಿನೆಮಾ ಮಾಡಲು ನಿರ್ದರಿಸಲಾಗಿತ್ತು, ಈ ಸಿನೆಮಾದ ಮುಹೂರ್ತದಲ್ಲಿ ಪಾಲ್ಗೊಳ್ಳಲು ಮದ್ಯರಾತ್ರಿ ಪ್ರಯಾಣಿಸಿದ್ದ ಶಂಕರ್ ನಾಗ್ ಕಾರು ಅಪಘಾತದಲ್ಲಿ ಅಕಾಲ ಮೃತ್ಯುವಿಗೆ ತುತ್ತಾದರು.


ರಾಜ್ಯದ ಮೊದಲ ಧ್ವನಿಗ್ರಹಣ ಕೇಂದ್ರ ಸಂಕೇತ್ ಆರಂಭಿಸಿದ ಶಂಕರ್‌ ನಾಗ್, ಬೆಂಗಳೂರಿಗೆ ಹೊಸತಾದ ಕಂಟ್ರಿಕ್ಲಬ್ ಪರಿಚಯಿಸಿದರು. ತಮ್ಮ ಜೀವಮಾನದ ದುಡಿಮೆಯನ್ನೆಲ್ಲ ಅಲ್ಲಿ ವ್ಯಯಿಸಿದ್ದ ಶಂಕರ್‌ ನಾಗ್ ಆರ್ಥಿಕ ಕಾರಣಗಳಿಗಾಗಿ ವೃತ್ತಿ ಜೀವನದಲ್ಲಿ ರಾಜಿಯಾಗಲಿಲ್ಲ.

ನಟಿಸಿದ ಮೊದಲ ಸಿನೆಮಾಗೆ ರಾಷ್ಟ್ರಪತಿಗಳ ಗೋಲ್ಡನ್ ಪೀಕಾಕ್ ಅವಾರ್ಡ್ ಪಡೆದ ಶಂಕರ್ ನಾಗ್ , ಯಾವತ್ತಿಗೂ ಹೀರೋ ಇಮೇಜ್ ಬೆಂಬಲಿಸುವ ಕಥಾನಕಗಳನ್ನು‌ ಹೊಂದಿದ ಸಿನೆಮಾಗಳಲ್ಲಿ ನಟಿಸಿದ್ದು ಕಡಿಮೆ. ರಾಜ್, ವಿಷ್ಣು, ಅಂಬರೀಶ್, ರವಿಚಂದ್ರನ್ ರ ಜೊತೆ ನಟಿಸಿದ್ದ ಶಂಕರ್ ನಾಗ್ ಆ ಹೊತ್ತಿನಲ್ಲೂ ಪೂರಕ ಪಾತ್ರಗಳಲ್ಲಿ ನಟಿಸಿದ್ದರೆ ಹೊರತು ಹೀರೋಯಿಸಂ ಪಾತ್ರಗಳ ಹಿಂದೆ ಬಿದ್ದಿರಲಿಲ್ಲ.

ಶಂಕರ್‌ ನಾಗ್ ನಟಿಸಿದ ಸಿನೆಮಾಗಳನ್ನು ‌ಗಮನಿಸಿದರೆ‌ ಅಲ್ಲಿ ಹೀರೋಯಿಸಂ ಗಿಂತ ಶ್ರಮ ಜೀವಿ, ಶೋಷಿತ‌ ವರ್ಗದ   ಪ್ರತಿನಿಧಿ, ಸಮಾಜಕ್ಕೆ‌ ಮಾದರಿಯಾದ ವ್ಯಕ್ತಿತ್ವ ನೀಡುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂಬುದು‌ ಗಮನಾರ್ಹ. ತನ್ನ ವಾರಗೆಯ ನಟರು ಆ ಹೊತ್ತಿನಲ್ಲಿ ಹುಲಿ, ಸಿಂಹಗಳ ಖದರ್ ಇರುವ ಪಾತ್ರ ಪೋಷಣೆ ಪಡೆಯುತ್ತಿದ್ದ ಕಾಲ ಅದು. ಆದರೆ ಶಂಕರ್‌ ನಾಗ್ ಮಾನವೀಯತೆ, ಸಂಘರ್ಷ, ವರ್ತಮಾನದ ಸಂಕಟಗಳ ಪ್ರತಿನಿಧಿಸುವ ಪಾತ್ರ ಮತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ತಾವು ಬೆಳೆಯುವ ಜೊತೆಗೆ ಸಿನೆಮಾಗೆ ಆಕರ್ಷಿತರಾಗಿ ಬರುವ ನಟರು, ತಂತ್ರಜ್ಞರನ್ನು ಪ್ರೋತ್ಸಾಹಿಸಿ ಒಂದಿಲ್ಲೊಂದು ಕಾಯಕದಲ್ಲಿ ಬ್ಯುಸಿಯಾಗುವಂತೆ ಮಾಡಿ‌ ಬದುಕುವ ದಾರಿ ತೋರಿಸಿದ್ದ ಶಂಕರ್ ನಾಗ್ ಈ ಹೊತ್ತಿಗೂ ಜನ‌ಮಾನಸದಲ್ಲಿ ಅನುಕರಣೀಯ ಹಾಗೂ ಮಾದರಿ ನಟರಾಗಿ ವಿರಾಜಮಾನವಾಗಿದ್ದಾರೆ.


ಶಂಕರ್ ನಾಗ್ ತಮ್ಮ ಭಾಗದವರೇ ಆದ ಜನಪ್ರಿಯ ರಾಜಕಾರಣಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರ ಮೇಲಿನ ಅಭಿಮಾನದಿಂದ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿದ್ದರು ಆದರೆ ರಾಜಕೀಯದಲ್ಲಿ ಯಾವತ್ತಿಗೂ ಸ್ವತ: ಪಾಲ್ಗೊಳ್ಳಲಿಲ್ಲ.‌ ರಾಮಕೃಷ್ಟ ಹೆಗಡೆ ಸಿಎಂ ಆದ ಸಂದರ್ಭ, ಲಂಡನ್ ನಲ್ಲಿ ತಾವು ಕಂಡಿದ್ದ ಮೆಟ್ರೋ ರೈಲು ಯೋಜನೆಯನ್ನು ಬೆಂಗಳೂರಿನಲ್ಲಿ ಯೂ ಅನುಷ್ಟಾನಕ್ಕೆ ತರಬೇಕು ಎಂಬ ಕನಸು ಇಟ್ಟುಕೊಂಡಿದ್ದ ಶಂಕರ್‌ನಾಗ್ ಯೋಜನೆಯ ಮಾಹಿತಿಯನ್ನು ಸರ್ಕಾರದ ಮುಂದೆ ಇರಿಸಿದ್ದರು.

 ಬೆಂಗಳೂರಿನಲ್ಲಿ ಮೆಟ್ರೋ ಶುರುವಾದ ಸಂದರ್ಭ ಯೋಜನೆಗೆ ಶಂಕರ್ ನಾಗ್ ಹೆಸರು ಇಡುವಂತೆ ಸಾರ್ವತ್ರಿಕವಾಗಿ ಅಭಿಪ್ರಾಯಗಳಿದ್ದವು, ಅರುಂಧತಿ ನಾಗ್ ಕೂಡಾ ಈ ಕುರಿತು ಮಾತನಾಡಿದ್ದರು.‌ ಆದರೆ ಆಡಳಿತ ಚುಕ್ಕಾಣಿ ಹಿಡಿದವರ ಪೂರ್ವಗ್ರಹ ಪೀಡಿತ ನಿಲುವಿನಿಂದ ಮೆಟ್ರೋ ಯೋಜನೆಗೆ ಶಂಕರ್ ನಾಗ್ ಹೆಸರಿಡುವುದು ಇರಲಿ, ಒಂದು ಮೆಟ್ರೋ ಸ್ಟೇಷನ್ ಗೂ ಅವರ ಹೆಸರಿಡಲಿಲ್ಲ!


ನಂದಿಬೆಟ್ಟದ ರೋಪ್ ವೇ ಯೋಜನೆ, ಬಡವರಿಗೆ ವಿದೇಶಿ ತಂತ್ರಜ್ಞಾನ ಮನೆ ನಿರ್ಮಾಣ ಹೀಗೆ ಹಲವು ಯೋಜನೆಗಳ ಕನಸು ಕಂಡಿದ್ದ ಶಂಕರ್ ನಾಗ್ 35ನೇ ವಯಸ್ಸಿಗೆ ಕಾಲನ ಕರೆಗೆ ಓಗೊಟ್ಟರು. ಇವತ್ತು ಶಂಕರ್ ನಾಗ್ ನೆನಪಿಗೆ ಸ್ಮಾರಕಗಳಿಲ್ಲ, ಆದರೆ ಅವರ ಕೆಲಸ‌ ಮತ್ತು ನೆನಪುಗಳೆ ಸ್ಮಾರಕ ಗಳಾಗಿವೆ!

ಶಂಕರ್ ನಾಗ್ ನಿಧನರಾಗುವ ಹೊತ್ತಿಗೆ ಅಗಾಧವಾದುದನ್ನು ಸಾಧಿಸಿದ್ದರು, ಈ ಸಾಧನೆಗಳು ಮತ್ತು ಅವರ ವರ್ಕಾಲಿಕ್ ಗುಣವೇ ಶಂಕರ್ ನಾಗ್ ರನ್ನು‌ ಸ್ಮರಣೀಯವಾಗಿಸಿದೆ.‌ ಶಂಕರ್ ನಾಗ್ ರಿಗೆ‌ ಫ್ಯಾನ್‌ ಕ್ಲಬ್ ಇಲ್ಲ ಆದರೆ ಕೋಟ್ಯಾಂತರ ಯುವ ಸಮೂಹದ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.


ಈ ಸಂದರ್ಭ ರಂಗ ಶಂಕರ ದಲ್ಲಿ ಅರುಂಧತಿ ನಾಗ್ ನೇತೃತ್ವದಲ್ಲಿ ಶಂಕರ್ ನೆನಪಿನಲ್ಲಿ ನಾಟಕ ಸಪ್ತಾಹ ನಡೆಯುತ್ತಿದೆ ಹಾಗೆಯೇ ಬೆಂಗಳೂರಿನ‌ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಶಂಕರ್ ನಾಗ್ ನಾಟಕ ಸಪ್ತಾಹ ನಡೆಯುತ್ತಿದೆ, ರಂಗ ಪಯಣ ಮತ್ತು ಸಾತ್ವಿಕ ರಂಗತಂಡದವರು ಸಪ್ತಾಹ ಆಯೋಜಿಸಿದ್ದಾರೆ. ಇದೇ ತಂಡದವರು ಉತ್ತರ ಕರ್ನಾಟಕದ ಪ್ರತಿಭಾವಂತ ಯುವ ಶಿಕ್ಷಕ, ಕವಿ-ಚಿಂತಕ ವೀರಣ್ಣ ಮಡಿವಾಳರಿಗೆ ಶಂಕರನಾಗ್ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಸಂತಸದ ಸಂಗತಿ. ಶಂಕರ್ ನಾಗ್ ಹೆಸರೇ ಸ್ಪೂರ್ತಿದಾಯಕ ಸದಾಕಲಾಕ್ಕೂ ಅವರ ಮಾತು ಹಾಗೂ ಕೃತಿಗಳೂ‌ ಕೂಡಾ.

Picture Courtesy:Veeranna Madiwalar

#Shankarnag  #NoMonumentToShankarnagButHeRemainsStillInTheHeartsOfFans! #ArkalgudJayakumar

ಪ್ರೊ ಕೆ ಎಸ್ ಭಗವಾನ್ ರನ್ನು ನಿಂದಿಸುವ ಮುನ್ನಾ........

Image result for prof k s bhagawanಚಿಂತಕ-ಪ್ರಾಧ್ಯಾಪಕರಾದ  ಪ್ರೊ ಕೆ ಎಸ್ ಭಗವಾನ್ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಸ್ತವ ಸಂಗತಿಗಳನ್ನು ನೇರ ದಾಟಿಯಲ್ಲಿ ಹೇಳುತ್ತಾ ಸತ್ಯವನ್ನು ಒಪ್ಪದವರ ಕೆಂಗಣ್ಣಿಗೆ ಗುರಿಯಾದವರು ಕೆ ಎಸ್ ಭಗವಾನ್. ಅವರು ಬೇಗನೆ ಗುಣಮುಖರಾಗಲಿ.

ಮೈಸೂರು ಮಹರಾಜ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಕೆ ಎಸ್ ಭಗವಾನ್ ವೈಚಾರಿಕ ಸಂಗತಿಗಳನ್ನು ಬರೆಯುತ್ತಾ ಬಲಪಂಥೀಯರು ಹಾಗೂ ಹೇಳುವ ಧಾಟಿಯಿಂದ ಎಡಪಂಥೀಯರ ಅಸಹನೆಗೆ ತುತ್ತಾದವರು. ಅವರು ಬರೆದ ಶಂಕರಾಚಾರ್ಯರ ಕುರಿತಾದ ಪುಸ್ತಕ ಮತ್ತು ಅವರ ವೈಚಾರಿಕ ಬರವಣಿಗೆ, ಚಿಂತನೆಗಳ ಕಾರಣಕ್ಕೆ ಬಾಂಬೆ ಹೈಕೋರ್ಟ್ ನಿಂದ ಅರೆಸ್ಟ್ ವಾರಂಟ್ ಪಡೆದಿದ್ದರು. ಹೀಗೆ ಭಗವಾನ್ ಕುರಿತು ಕುತೂಹಲ ಇದ್ದ ಕಾಲಘಟ್ಟದಲ್ಲಿಯೇ ನಾನು ಅವರ ವಿದ್ಯಾರ್ಥಿಯಾದೆ.

ಕೆ ಎಸ್ ಭಗವಾನ್ ಕಾಲೇಜಿನಲ್ಲಿ ಇಂಗ್ಲೀಷ್ ಪಾಠ ಮಾಡುವ ಜೊತೆಗೆ ಮೈಸೂರು ನಗರದ ಯುನಿವರ್ಸಿಟಿ ಹಾಸ್ಟೆಲ್ ಗಳಲ್ಲಿದ್ದ ಗ್ರಾಮೀಣ ಭಾಗದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲೀಷ್ ಪಾಠಗಳನ್ನು ಸರಳವಾಗಿ ಹೇಳಿಕೊಡುತ್ತಿದ್ದರು. ಕಲಾ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷ್ ಕೆ ಎಸ್ ಭಗವಾನ್ ಪ್ರಯತ್ನದಿಂದ ಸುಲಭವಾಗುತ್ತಿತ್ತು. ಇದೇ ವೇಳೆ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ಈ ಅಂಶಗಳು ನಾನು ಭಗವಾನ್ ರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅವಕಾಶ ಮಾಡಿದೆ.

ಇತ್ತೀಚೆಗೆ ಅವರು ಬರೆದ ರಾಮ‌ಮಂದಿರ ಏಕೆ ಬೇಡ? ಪುಸ್ತಕ ವಿವಾದಕ್ಕೀಡಾದಾಗ ತರಿಸಿ ಓದಿದೆ. ಇಡೀ ಪುಸ್ತಕದಲ್ಲಿ ಆಕ್ಷೇಪಾರ್ಹವಾದ ಸಂಗತಿಗಳು ಕಾಣಲಿಲ್ಲ. ಅವರ ಉಲ್ಲೇಖಗಳು ಸಕಾರಣ ಒದಗಿಸಿದ್ದವು. ಆದರೆ  ಪುರೋಹಿಶಾಹಿ ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮಗಳಲ್ಲಿ ವಕ್ಕರಿಸಿದ್ದು ದುರುದ್ದೇಶದಿಂದ ಭಗವಾನ್ ರನ್ನು‌ ಹಣಿಯುವ ಪ್ರಯತ್ನ ಮಾಡಿವೆ. ಕೋಮು ವಿಭಜಕ ಶಕ್ತಿಗಳನ್ನು, ಚಿಂತನೆಗಳೇ ಸತ್ತುಹೋದವರನ್ನ, ಜ್ಯೋತಿಷ್ಯ ಹೇಳುವವರನ್ನು ಚಾನಲ್ ಡಿಸ್ಕಷನ್ ಗೆ ಕೂರಿಸಿಕೊಂಡು ಭಗವಾನ್ ರನ್ನು ನಿಂದಿಸುವ ಅನೈತಿಕ ಕೆಲಸ ಮಾಡುತ್ತಿವೆ. ಈ ‌ಮೂಲಕ  ವ್ಯವಸ್ಥೆಯನ್ನು ಪ್ರಚೋದಿಸುತ್ತಾ ಚಿಂತಕರನ್ನು, ವಾಸ್ತವವಾದಿಗಳನ್ನು ಟಾರ್ಗೆಟ್ ಮಾಡುತ್ತಿವೆ. ಇದರ ಮುಂದುವರಿದ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಭಗವಾನ್ ವಿರುದ್ಧ ಆತಂಕಕಾರಿ ಅಭಿಪ್ರಾಯ, ಬೆದರಿಕೆಗಳನ್ನು ಹಾಕಲಾಗುತ್ತಿದೆ. ಭಗವಾನ್ ರಿಗೆ ಪೊಲೀಸ್ ಭದ್ರತೆ ಯಲ್ಲಿ ಮಾತನಾಡ ಬೇಕಾದ ದುಸ್ತಿತಿ ಉಂಟಾಗಿದೆ.

ಭಗವಾನ್ ಹೇಳುವ ಸಂಗತಿಗಳು ಧಾರ್ಮಿಕ ಭಾವನೆಗೆ ಧಕ್ಕೆ ಎನ್ನಲಾಗುತ್ತದೆ. ಹಿಂದೂ‌ಧರ್ಮದ ದೇವತೆಗಳ ಬಗ್ಗೆ ಮಾತನಾಡುತ್ತಾರೆ ಅನ್ಯಧರ್ಮೀಯರ ಬಗ್ಗೆ ಏಕೆ‌ ಮಾತನಾಡಲ್ಲ ಎಂದು ಪ್ರಶ್ನಿಸುತ್ತಾರೆ. ನಾವು ಆರಾದಿಸುವ ದೇವರುಗಳ ಚರಿತ್ರೆಯ ಮೇಲೆ ಬೆಳಕು ಚೆಲ್ಲುವುದು ತಪ್ಪು ಹೇಗಾದೀತು. ನಮ್ಮ ದೇವರುಗಳ ! ಕರಾಳ ಇತಿಹಾಸ 'ಆದರ್ಶ'ದ ಚೌಕಟ್ಟಿನಲ್ಲಿ ಬರಬಾರದು ಎಂಬುದಷ್ಟೆ ಆಶಯ ಅಲ್ಲವೇ?

ಭಗವಾನ್ ವಾಸ್ತವ ಸಂಗತಿ ಹೇಳಿದ ಮಾತ್ರಕ್ಕೆ ಆಸ್ತಿಕರು ದೇವರುಗಳನ್ನೆಲ್ಲ ನಿರಾಕರಿಸಿ ಬಿಡಲು ಸಾಧ್ಯವೇ? ದೇವರು, ನಂಬಿಕೆ, ಪೂಜೆ ಅವರವರ ಆತ್ಮ ತೃಪ್ತಿಯ ಸಂಗತಿ ಹಾಗೆಂದು ಅವುಗಳೆಲ್ಲಾ ಪ್ರಶ್ನಾತೀತವಾದುವಲ್ಲ. ಭಗವಾನ್ ಹಿಂದೂ ಧರ್ಮದಲ್ಲಿ ಹುಟ್ಟಿದವರು, ಹಿಂದು ಧರ್ಮದ ಹುಳುಕುಗಳು ಮತ್ತು ಅವರು ಕಂಡುಕೊಂಡ ವಿಚಾರಗಳನ್ನು ಹೇಳಲು ಸಮರ್ಥರೇ ವಿನಹ ತಿಳಿಯದ ಮುಸ್ಲಿಂ, ಕ್ರೈಸ್ತ ಅಥವ ಇತರೆ ಧರ್ಮದ ಬಗ್ಗೆ ಮಾತನಾಡಲು ಹೇಗೆ ಸಾಧ್ಯ? ಆಯಾ ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಲು ಅಲ್ಲಿಯೂ ಭಗವಾನ್ ಥರದ ಚಿಂತಕರು ಇದ್ದಾರಲ್ಲ.‌

ಹಿಂದೂ ಧರ್ಮ(ಜೀವನ‌ ಪದ್ಧತಿ) ಪ್ರಶ್ನೆಗಳನ್ನು ಮತ್ತು ಸಮರ್ಥ ಉತ್ತರಗಳನ್ನು ಅಡಕ ಮಾಡಿಕೊಂಡಿದೆಯೇ ವಿನಹ ಪ್ರಶ್ನೆಗಳನ್ನು, ಪ್ರಶ್ನಿಸುವವರನ್ನು ಆತಂಕಕ್ಕೀಡು ಮಾಡುವ ಸಮರ್ಥನೆಗಳನ್ನು ಹೊಂದಿಲ್ಲ. ಆದರೆ ಬೆದರಿಕೆ, ಸಮರ್ಥನೆಗಳನ್ನು ಮುಂದು ಮಾಡಿ ಹಿಂದೂ ಧರ್ಮದ ಆಶಯಕ್ಕೆ ಧಕ್ಕೆ ತರಲಾಗಿದೆ. ವರ್ತಮಾನದಲ್ಲಿ  ಯಾವ ಸಂಗತಿಗಳು ಕೂಡಾ ಮತ್ತೊಂದು ಬದಿಯ ಸತ್ಯವನ್ನ ಮರೆ ಮಾಚಬಾರದು. ವೈಚಾರಿಕತೆಗೆ ತೆರೆದುಕೊಳ್ಳುವ ಹಾದಿಯಲ್ಲಿಯೇ ಆಯ್ಕೆಗಳು ಇರುತ್ತವಲ್ಲ. ಹೀಗಿರುವಾಗ ಭಗವಾನ್ ರು ರಾಮ-ಕೃಷ್ಣ-ಶಿವ ಕುರಿತು ಹೇಳುವ ಸಂಗತಿಗಳನ್ನು ಅರಿವಿಗೆ ತಂದುಕೊಳ್ಳಿ, ವಿಚಾರ ಮಾಡಿ, ಬೇಡವೆಂದರೆ ಬಿಟ್ಟು ಬಿಡಿ. ಭಗವಾನ್ ರನ್ನು ಯಾಕೆ ಆತಂಕದ ಚೌಕಟ್ಟಿಗೆ ತರುತ್ತೀರಿ? ಕೆಡುಕು ಬಯಸುತ್ತೀರಿ?

#ProfKSBhagawan #WhyInsultingProfKSBhagawan #ArkalgudJayakumar

Thursday, October 19, 2017

ಲಂಡನ್ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಹೆಚ್ ಎನ್ ಗಿರೀಶ್ ಎಂಗೇಜ್ ಮೆಂಟ್ ಫಿಕ್ಸ್




  • ಅರಕಲಗೂಡು ಜಯಕುಮಾರ್/7899606841-7338474765


ಐತಿಹಾಸಿಕ ಲಂಡನ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಹೈ ಜಂಪ್ ಬೆಳ್ಳಿ ಪದಕ ವಿಜೇತ ಹೆಚ್ ಎನ್ ಗಿರೀಶ ಕಂಕಣ ಬಂಧನಕ್ಕೆ ಸಜ್ಜಾಗುತ್ತಿದ್ದಾರೆ.ಸಧ್ಯ ಗಿರೀಶ್ ನವೆಂಬರ್ ನಲ್ಲಿ 27 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್ ಏಷಿಯನ್ ಫೆಡರೇಶನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸುತ್ತಿದ್ದಾರೆ. ಈ ನಡುವೆ ಬೆಳ್ಳಿ ಹುಡುಗನ ಎಂಗೇಜ್ ಮೆಂಟ್ ಸುದ್ದಿ ಹೊರ ಬಿದ್ದಿದೆ. 


ಇದೇ ಅಕ್ಟೋಬರ್ 22 ರಂದು ತವರೂರು ಹಾಸನದ ತನ್ವಿ ತ್ರಿಷಾ ಕಲ್ಯಾಣ ಮಂಟಪದಲ್ಲಿ ಎಂಗೇಜ್ ಮೆಂಟ್ ನಡೆಯುತ್ತಿದೆ. ಎಂಗೇಜ್ ಮೆಂಟ್ ಮುಗಿಸಿದ 3 ದಿನಗಳಿಗೆ ಯುಕೆ ಪೋರ್ಚುಗಲ್ ನಲ್ಲಿ ನಡೆಯುವ ವಿಶ್ವ ಗೇಮ್ಸ್ ನಲ್ಲಿ ಪಾಲ್ಗೊಳ್ಳುವರು. ಸಧ್ಯ ಜಾಗತಿಕ ಹೈಜಂಪ್ ರ್ಯಾಂಕಿಗ್ ನಲ್ಲಿ ಅಗ್ರ ನಾಲ್ಕನೇ ಶ್ರೇಯಾಂಕದಲ್ಲಿದ್ದಾರೆ. ಹಾಸನ ಮೂಲದವರೇ ಆದ ಮತ್ತು ಸರ್ಕಾರಿ ಕರ್ತವ್ಯ ನಿಮಿತ್ತ ಮೈಸೂರಿನಲ್ಲಿ ನೆಲೆಸಿರುವ ನಾಗರತ್ನ ಎಂಬುವವರ ಪುತ್ರಿ ಸಹನಾ ಬೆಳ್ಳಿ ಹುಡುಗನನ್ನು ವರಿಸಲಿದ್ದಾರೆ. ಸಹನಾ ಮೈಕ್ರೋಬಯೋಲಜಿಯಲ್ಲಿ ಎಂ ಎಸ್ಸಿ ಸ್ನಾತಕ ಪದವಿ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ ಮಾಹೆಯಲ್ಲಿ ಗಿರೀಶ್ ಮದುವೆ ನಿಕ್ಕಿಯಾಗಿದೆ. 




2012ರಲ್ಲಿ ನಡೆದ ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಹೈಜಂಪ್ ಬೆಳ್ಳಿ ಪದಕ ಜಯಿಸಿದ್ದ ಗಿರೀಶ್ ಆ ವರ್ಷ ಭಾರತಕ್ಕೆ ಪದಕಗಳ ಕೊರತೆಯನ್ನು ನೀಗಿಸಿದ್ದರು ಹಾಗೂ ಪ್ಯಾರಾಲಿಂಪಿಕ್ಸ್ ನಲ್ಲಿ ಮೊದಲ ಬೆಳ್ಳಿ ಪದಕ ಜಯಿಸಿದ ಕನ್ನಡಿಗರು ಹೌದು. ಇವರ ಸಾಧನೆಗಾಗಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ಹಾಗೂ ಪ್ರತಿಷ್ಠಿತ ಅರ್ಜುನ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬೆಂಗಳೂರು ವಲಯದ ಕೇಂದ್ರದಲ್ಲಿ ಕೋಚ್ ಹುದ್ದೆಯನ್ನು ಸಹಾ ಗಿರೀಶ್ ಗೆ ನೀಡಲಾಗಿದೆ. ರಾಜ್ಯ ಸರ್ಕಾರ 6 ನೇ ತರಗತಿಯ ಪಠ್ಯದಲ್ಲಿ ಗಿರೀಶ್ ಸಾಧನೆ ಕುರಿತ ಅಧ್ಯಾಯವನ್ನು ಸೇರಿಸಿದೆ. 




ಹೆಚ್ ಎನ್ ಗಿರೀಶ್ ಹೇಮಾವತಿ ಜಲಾಶಯದ ಪುನರ್ವಸತಿ ಗ್ರಾಮ ಕೊಡಗಿನ ಗಡಿ ಪ್ರದೇಶದಲ್ಲಿರುವ ಹೊಸನಗರದವರು, ತಂದೆ ನಾಗರಾಜೇಗೌಡ, ತಾಯಿ ಜಯಮ್ಮ ಕೃಷಿ ಕಾರ್ಮಿಕರು. ಯಾವ ಗಾಡ್ ಫಾದರ್ ಗಳ ನೆರವಿಲ್ಲದೇ, ಮೂಲ ಸೌಕರ್ಯಗಳ ಕೊರತೆ, ಹಾಗೂ ಅಂಗವೈಕಲ್ಯದ ಕೊರತೆಯ ನಡುವೆಯೂ ಯಶಸ್ಸಿನ ಮೆಟ್ಟಿಲು ಏರಿ ಭಾರತದ ಕೀರ್ತಿ ಪತಾಕೆಯನ್ನು ಬ್ರಿಟೀಷ್ ಅಂಗಳದಲ್ಲಿ ಎತ್ತಿ ಹಿಡಿದ ಹೆಮ್ಮೆ ಹೆಚ್ ಎನ್ ಗಿರೀಶ್ ಅವರದ್ದು.



Padmashree H N Girish Achievements video clips here

ಹೆಚ್ ಎನ್ ಗಿರಿಶ್ ಕುರಿತ ಕೆಲವು ವಿಡಿಯೋ ಲಿಂಕ್ ಗಳು ಇಲ್ಲಿವೆ.









Tuesday, July 25, 2017

ಅಂಬೇಡ್ಕರರನ್ನು ಅರಿಯುವುದೆಂದರೆ….

ಭಾರತದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆಮೀಸಲಾತಿನಿಗದಿಯಾಗಿದ್ದು ಹಿಂದುಳಿದ ವರ್ಗದವರಿಗೆ, ಅದೂ ದಕ್ಷಿಣ ಭಾರತದಲ್ಲಿ ಶಾಹು ಮಹಾರಾಜ ಇಚ್ಛಾಶಕ್ತಿಯ ಫಲ. ನಂತರ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡುವ ನಿರ್ದಾರ ಪ್ರಕಟವಾದಾಗ ಪ್ರಖರವಾಗಿ ವಿರೋಧ ವ್ಯಕ್ತಪಡಿಸಿದ ದಿವಾನ್ ವಿಶ್ವೇಶ್ವರಯ್ಯ ದಿವಾನ ಗಿರಿಗೆ ರಾಜೀನಾಮೆ ಒಗೆದು ಹೊರ ಬಿದ್ದರು. ಆದರೆ ಇವತ್ತಿಗೂ ಅರಿವುಗೇಡಿ ಮಂದಿ ಅವರ ಚಿತ್ರಗಳನ್ನಿಟ್ಟುಕೊಂಡು ದೇವರಂತೆ ಪೂಜಿಸುತ್ತಾರೆ ಎಂಬುದು ವಿಷಾದನೀಯ.

ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಿಂದುಳಿದ ವರ್ಗದ ಹಿತಾಸಕ್ತಿ ರಕ್ಷಿಸಲು ಎಲ್ ಜಿ ಹಾವನೂರು ಸಮಿತಿಯನ್ನು ರಚಿಸಿದರು. ಹಾವನೂರು ವರದಿಯ ಫಲ ಇವತ್ತು ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗ ಮೀಸಲಾತಿಯನ್ನು ಅನುಭವಿಸುತ್ತಿದೆ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ದಲಿತರಿಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ ನೀಡಲಾಗಿದೆ (ಶೇ. 27). ಆದರೆ ಗುಂಪುಗಾರಿಕೆ, ಸ್ವಾರ್ಥ ಹಿತಾಸಕ್ತಿ, ಅರಿವಿನ ಪ್ರಜ್ಞೆ, ಸಂಘಟನೆಯ ಕೊರತೆ ಇರುವುದರಿಂದ  ಈ ಮೀಸಲಾತಿಯ ಪೈಕಿ ಸುಮಾರು ಶೇ. 4ರಷ್ಟು ಪ್ರಮಾಣವನ್ನು ಮಾತ್ರ ಅನುಭವಿಸುತ್ತಿದ್ದಾರೆ.

ಹಿಂದುಳಿದ ವರ್ಗದವರು ಸದಾ ಕಾಲಕ್ಕೂ ನೆನಪಿಟ್ಟುಕೊಳ್ಳ ಬೇಕಾದ ಮತ್ತು ಪೂಜಿಸ ಬೇಕಾದ ವ್ಯಕ್ತಿ ಭಾರತದ ಪ್ರಧಾನಿಯಾಗಿದ್ದ ವಿ ಪಿ ಸಿಂಗ್. ವಿ ಪಿ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮಂಡಲ್ ಆಯೋಗದ ವರದಿ ಜಾರಿಗೆ ತರಲು ಹೊರಟರೆ, ಮೇಲ್ವರ್ಗದ ಚಿತಾವಣೆಗೆ ಸಿಲುಕಿದ ಶೂದ್ರರೇ ಮಂಡಲ್ ಆಯೋಗದ ಅನುಷ್ಠಾನಕ್ಕೆ ಬಹು ದೊಡ್ಡ ತಡೆಗೋಡೆಯಾಗಿ ನಿಂತು ಬಿಟ್ಟರು. ರಾಷ್ಟ್ರಾಧ್ಯಂತ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿ ಹರತಾಳ ನಡೆದವು. ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ತರಲು ಹೊರಟರೆ ಅಲ್ಲಿಯೂ ಅರಿವುಗೇಡಿಗಳು ಪ್ರತಿಭಟನೆಗೆ ನಿಂತು ಅಪೂರ್ವ ಅವಕಾಶವನ್ನು ತಪ್ಪಿಸಿಕೊಂಡವು.

ಇಷ್ಟಕ್ಕೂ ಈ ಮೀಸಲಾತಿ ಎಂದರೆ ಏನು? ಯಾಕೆ ಅದನ್ನು ವಿರೋಧಿಸಲಾಗುತ್ತಿದೆ? ಮೀಸಲಾತಿ ಫಲಾನುಭವಿಗಳನ್ನು ತುಚ್ಚವಾಗಿ ನೋಡುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳನ್ನು ವರ್ತಮಾನದಲ್ಲಿ ಪ್ರತಿಯೊಬ್ಬರು ಹಾಕಿಕೊಳ್ಳ ಬೇಕಾದ ಅಗತ್ಯವಿದೆ. ಮೀಸಲಾತಿ ಹಿಂದಿನ ಸತ್ಯಗಳನ್ನು ಪುನರಾವಲೋಕನ ಮಾಡಿಕೊಳ್ಳುವಾಗ ಅರಗಿಸಿಕೊಳ್ಳಲಾಗದ ವಾಸ್ತವಗಳನ್ನ ಗ್ರಹಿಕೆಗೆ ತಂದುಕೊಳ್ಳುವ ಸೂಕ್ಷ್ಮತೆ ವರ್ತಮಾನದಲ್ಲಿ ಕಳೆದು ಹೋಗಿರುವುದರಿಂದಮೀಸಲಾತಿಪರಿಧಿಯನ್ನು ಆರ್ಥಿಕತೆಯ ಮಾನದಂಡದಲ್ಲಿ ಗ್ರಹಿಸುವ ಅಪಾಯ ಸನ್ನಿವೇಶದಲ್ಲಿದ್ದೇವೆ.

ಮೀಸಲಾತಿ ಎಂದರೆ ಸಾಮಾಜಿಕ ನ್ಯಾಯದ ಮಾನದಂಡ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಕ್ರಿಯೆಗಳು ಸತ್ತು ಹೋಗಿರುವ  ಈ ಹೊತ್ತಿನಲ್ಲಿ ಧ್ವನಿ ಅಡಗಿ ಹೋದ ಜೀವಗಳಿಗೆ ಕನಿಷ್ಠ ಉಸಿರಾಡುವಂತೆ ಮಾಡುವ ಕ್ರಿಯೆ. ಜೀವಪರ ಕಾಳಜಿಯ ಸೂಕ್ಷ್ಮ ಮನಸ್ಸುಗಳಿಗೆ ಮಾತ್ರ ಇದು ಅರ್ಥವಾದೀತು. ಸಾಮಾಜಿಕ ಅಸ್ಪೃಶ್ಯತೆಗೂ, ಆರ್ಥಿಕ ಅಸ್ಪೃಶ್ಯತೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೆಯೇ ದಲಿತರು ಅನುಭವಿಸುವ ಅಸ್ಪೃಶ್ಯತೆಗೂ, ಅಮೇರಿಕಾದ ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಗೂ ಸಾಕಷ್ಟು ವ್ಯತ್ಯಾಸವಿದೆ. ದಲಿತರು ಅನುಭವಿಸುವ ಸಾಮಾಜಿಕ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳನ್ನೇ ನಿರಾಕರಿಸಲಾಗುತ್ತದೆ, ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳಿಗೆ ಧಕ್ಕೆಯಿಲ್ಲ ಆದರೆ ಸಮಾನತೆಯ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ. ಹಾಗಾಗಿ ಭಾರತದಲ್ಲಿ ದಲಿತರು ಅನುಭವಿಸುವ ಸಾಮಾಜಿಕ ಅಸಹನೆ ಅತ್ಯಂತ ಕ್ರೂರವಾದುದು, ಮತ್ತು ಆ ವರ್ಗಕ್ಕೆ ಮಾನಸಿಕ ಸ್ಥೈರ್ಯ ನೀಡುವ ಕೆಲಸಮೀಸಲಾತಿಯಿಂದ ಮಾತ್ರ ಸಾಧ್ಯ ಎಂಬುದು ಇಂದಿನ ತುರ್ತು.

ಮೀಸಲಾತಿಯ ಫಲಾನುಭವಿಗಳ ಪಟ್ಟಿಯಲ್ಲಿ ಮಹಿಳೆಯರು ವರ್ತಮಾನದಲ್ಲಿ ಮಂಚೂಣಿ ಸ್ಥಾನ ಪಡೆದಿದ್ದಾರೆ. ಸಂಸತ್ ನಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂದು ಪಟ್ಟು ಹಿಡಿದ ಭಾರತ ರತ್ನ ಸಮತೆಯ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ತಮ್ಮ ಬೇಡಿಕೆ ಈಡೇರದಿದ್ದಾಗ ರಾಜೀನಾಮೆ ಒಗೆದು ಬಂದರು, ಅಧಿಕಾರವನ್ನೇ ತ್ಯಾಗ ಮಾಡಿದರು ಅಂತಹ ಅಂಬೇಡ್ಕರ್ ಗೆ ಇವತ್ತು ಮಹಿಳಾ ವಲಯದಲ್ಲಿ ಸ್ಥಾನವಿಲ್ಲ! ಸಾಮಾಜಿಕ ವಲಯದಲ್ಲಿ ಹಕ್ಕುಗಳನ್ನು ಪ್ರತಿಪಾದಿಸುವ, ಪ್ರಶ್ನೆಗಳನ್ನು ಕೇಳುವ ಚಳುವಳಿ ರೂಪಿತವಾಗಿದ್ದೆ ಡಾ ಬಿ ಆರ್ ಅಂಬೇಡ್ಕರ್ ಅವರಿಂದ. ಪ್ರತಿಫಲನವಾಗಿ ಸ್ವತಂತ್ರ ಭಾರತದಲ್ಲಿ ಸಾರ್ವತ್ರಿಕವಾಗಿ ಹುಟ್ಟಿದ ಎಲ್ಲ ಚಳುವಳಿ ಹಿಂದೆಯೂ ಅಂಬೇಡ್ಕರ್ ಹಾಕಿ ಕೊಟ್ಟ ಬುನಾದಿ ಇದೆ. ಆದರೆ ಅಂಬೇಡ್ಕರ್ ಅವರನ್ನು ಅರಿಯುವ ಪ್ರಯತ್ನಗಳಿಗೆ ಹಿನ್ನೆಡೆಯಾಗಿದೆ. ಅಂಬೇಡ್ಕರ್ ತೋರಿದ ಹಾದಿಯಲ್ಲಿ ನಡೆಯುವ ಬದಲಿಗೆ ಅವರನ್ನೆ ದೇವರಾಗಿ ಪೂಜಿಸುತ್ತಾ ಅದರಾಚೆಗೂ ಅಂಬೇಡ್ಕರ್ ತೋರಿಸದ ಬೆಳಕಿನ ಹಾದಿಯಿದೆ ಎಂಬ ಸತ್ಯ ದಲಿತರಿಗೂ ಅರ್ಥವಾದಂತಿಲ್ಲ. ಇದರ ಪರಿಣಾಮ ದಲಿತೇತರರು ಅಂಬೇಡ್ಕರರನ್ನು ಅರಿಯುವ ಪ್ರಯತ್ನಕ್ಕೆ ಭಾಗಶ: ತಡೆಗೋಡೆಯಾಗಿರ ಬಹುದೇನೋ.

ಇತಿಹಾಸದತ್ತ ಹೊರಳಿ ನೋಡಿದರೆ ಕಠಿಣ ಸ್ಥಿತಿಯಲ್ಲಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯಕ್ಕಾಗಿ ಸೆಣಸಿದರು, ಆದರೆ ಅವತ್ತಿನ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಸಾಂಸ್ಥಿಕ ರೂಪ ಕೊಡುವ ಮುನ್ನವೇ ಕಗ್ಗೊಲೆಯಾದರು. ಬಸವೇಶ್ವರರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ, ಚಳುವಳಿಗೆ ತಾರ್ಕಿಕವಾಗಿ ಸಾಂಸ್ಥಿಕ ರೂಪುಕೊಟ್ಟವರು ಅಂಬೇಡ್ಕರ್. ಅವರು ಸಾಮಾಜಿಕ ನ್ಯಾಯದ ಪರಿಧಿಯಾಚೆಗೂ ತಮ್ಮ ಜ್ಞಾನದ ಹರವನ್ನು ವಿಸ್ತರಿಸಿದ್ದರು. ಅಲ್ಲಿ ಬೆಳಕಿತ್ತು ಆದರೆ ಆ ಬೆಳಕನ್ನು ಗುರುತಿಸಲಾಗದೇ ಅಂಬೇಡ್ಕರರನ್ನು ಸಹಾಮೀಸಲಾತಿಯ ಪರಿಧಿಯಲ್ಲೇ ನೋಡುವ ಮೂಲಕ ಬಹು ಸಂಖ್ಯೆಯ ದಲಿತೇತರರು ರೋಗಗ್ರಸ್ಥ ಮನಸ್ಥಿತಿಯಲ್ಲೇ ಕೊಳೆಯುತ್ತಿದ್ದಾರೆ.


ಅಂಬೇಡ್ಕರರನ್ನು ದಕ್ಕಿಸಿಕೊಳ್ಳುವುದೆಂದರೆ ಪ್ರಶ್ನಾ ಮನೋಭಾವ, ಹಕ್ಕುಗಳ ಪ್ರತಿಪಾದನೆ, ಪ್ರಗತಿಪರವಾದ ಚಿಂತನೆ, ವಾಸ್ತವವನ್ನು ಪರಿಗ್ರಹಿಸಿ ನೋಡುವುದೇ ಆಗಿದೆ. ಆದರೆ ವರ್ತಮಾನದಲ್ಲಿ ಸೂಕ್ಷ್ಮ ಗ್ರಹಿಕೆಗಳೇ ಕಳೆದು ಹೋಗಿವೆ, ಅರಿವಿನ ಬೆಳಕಿಗೆ ವರ್ತಮಾನದಲ್ಲಿ ನಮ್ಮನ್ನು ಒಡ್ಡಿಕೊಳ್ಳ ಬೇಕಿದೆ. ಅಂಬೇಡ್ಕರ್ ಎಂಬ ಹಣತೆಯನ್ನು ಎದೆಯ ಗೂಡಿನಲ್ಲಿ ಇರಿಸಿಕೊಂಡು ಪುನರಾವಲೋಕಿಸಬೇಕಾದ ತುರ್ತು ಇದೆ

Sunday, November 15, 2015

ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ!

ದೇಶದಲ್ಲಿ ಅಸಹಿಷ್ಣುತೆಯ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ಕಲ್ಬುರ್ಗಿ ಹತ್ಯೆಯ ಪ್ರಕರಣ ನಿಗೂಡವಾಗಿರುವಾಗಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಧ್ವನಿ ಎತ್ತಲಿಲ್ಲ ಎಂಬ ಕಾರಣಕ್ಕೆ ಆರಂಭಗೊಂಡ ಪ್ರಶಸ್ತಿ ವಾಪ್ಸಿ ಚಳುವಳಿ ಇವತ್ತು ವಿರಾಟ್ ಸ್ವರೂಪ ಪಡೆಯುತ್ತಿದೆ. ಪ್ರಶಸ್ತಿ ವಾಪಸಾತಿ ವಿರುದ್ದವೂ ಅನೇಕರು ವಿವಿಧ ನೆಲೆಗಟ್ಟಿನ ಸಮರ್ಥನೆಯ ಮೂಲಕ ಸಾರ್ವತ್ರಿಕ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಈ ಪರ-ವಿರೋಧದ ಹೊತ್ತಿನಲ್ಲಿಯೇ ಅನೇಕ ಅನೈತಿಕ ಘಟನೆಗಳ, ನೈತಿಕ ಅಧ:ಪತನದ ಸಂಗತಿಗಳ ವಿಶ್ಲೇಷಣೆಯೂ ನಡೆಯುತ್ತಿದೆ. ಇವೆಲ್ಲ ಒಂದು ಕಾಲಘಟ್ಟದಲ್ಲಿ ಆಗಬೇಕಿತ್ತು ತಡವಾಗಿ ಆಗುತ್ತಿದೆಯಷ್ಟೇ! ಈ ಸಂಧರ್ಭದಲ್ಲಿ ಅನೇಕ ಮುಖವಾಡಗಳು ಸಹಾ ಬಯಲಿಗೆ ಬರುತ್ತಿರುವುದು ಸುಳ್ಳೇನಲ್ಲ.
         ದೇಶದಲ್ಲಿ ಅಸಹಿಷ್ಣುತೆ ಇವತ್ತು ಮತ್ತು ನಿನ್ನೆಯದಲ್ಲ. ಭಾರತಕ್ಕೆ ಸ್ವಾತಂತ್ರ ಬಂದಾಗಿನಿಂದಲೂ, ಅದಕ್ಕೂ ಮುಂಚಿನಿಂದಲೂ ಹಾಗೂ ಇವತ್ತಿಗೂ ಶಾಂತಿ ಕದಡುವ, ಸಾಮಾಜಿಕ ಅಸಹನೆಗೆ ಕಾರಣವಾಗುವ ಘಟನೆಗಳು ಜರುಗುತ್ತಲೇ ಇವೆ. ಆದರೆ ವರ್ತಮಾನದಲ್ಲಿ ಅಸಹಿಷ್ಣುತೆಯ ತೀವ್ರತೆ ಹೆಚ್ಚಿದೆ. ನೈತಿಕತೆಗೆ ಧಕ್ಕೆ ತರುವ,ವಿಚಾರವಾದಕ್ಕೆ ಅಡ್ಡಗಾಲಾಗುವ, ಸಾಮಾಜಿಕ ಸಾಮರಸ್ಯವನ್ನು ಕದಡುವ,ಧಾರ್ಮಿಕ ಕಂದಕ ಹೆಚ್ಚಿಸುವ ಸಂಗತಿಗಳು ಪ್ರತೀ ಕ್ಷಣಕ್ಕೂ ವಿವಿಧ ಆಯಾಮಗಳಲ್ಲಿ ಎದುರಾಗುತ್ತಿವೆ. ಇಂತಹ ಸಂದಿಗ್ದ ಸಂಧರ್ಭದಲ್ಲಿ ಅದರದ್ದೇ ಆದ ತಾತ್ವಿಕ ನೆಲೆಗಟ್ಟಿನಲ್ಲಿ ನಿಂತು ತೋರುವ ಸಾತ್ವಿಕ ಪ್ರತಿಭಟನೆಗೆ ಹೆಚ್ಚಿನ ಮಹತ್ವ ಇದೆ. ಮತ್ತು ಅದು ಹೆಚ್ಚು ಪರಿಣಾಮಕಾರಿಯಾದುದು ಆಗಿದೆ. ವಾಸ್ತವವನ್ನು ಗ್ರಹಿಸುವ ಸೂಕ್ಷ್ಮ ಮನಸ್ಥಿತಿ ಮಾತ್ರವೇ ಅಸಹಿಷ್ಣುತೆಯನ್ನು ಖಂಡಿಸಿ ಪ್ರಶಸ್ತಿ ವಾಪಸ್ ಮಾಡುವ ಕ್ರಿಯೆಯನ್ನು ಒಪ್ಪಿಕೊಳ್ಳುತ್ತದೆ. ಆದರೆ ಗ್ರಹಿಕೆಯ ಸೂಕ್ಷ್ಮವನ್ನು ಕಳೆದುಕೊಂಡ ಮನಸ್ಸುಗಳಿಗೆ ಪ್ರಶಸ್ತಿ ವಾಪಸಾತಿ ಹಿಂದಿನ ಶಕ್ತಿಯ ಅರಿವಿಗೆ ಬರುವುದೇ ಇಲ್ಲ, ಬದಲಿಗೆ ಮೇಲ್ನೋಟಕ್ಕೆ ಸಿಗುವ ಸಂಗತಿಗಳನ್ನೆ ಮುಂದುಮಾಡಿಕೊಂಡು ವಿತಂಡ ವಾದಕ್ಕೆ ಇಳಿದು ಬಿಡುತ್ತಾರೆ. 
        ಒಂದು ಮಾನವೀಯ ಸಂಗತಿಗೆ ನೈತಿಕ ನೆಲಗಟ್ಟಿನಲ್ಲಿ ನಿಂತು ಪ್ರತಿಕ್ರಿಯಿಸ ಬಹುದಾದ ವ್ಯಕ್ತಿ ಮಾತ್ರವೆ ಮುನುಷ್ಯ ಎನಿಸಿಕೊಳ್ಳುತ್ತಾನೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆಯುವ, ಪ್ರತಿಕ್ರಿಯಿಸುವ ಕ್ರಿಯೆಗಳು ಅಸಹಿಷ್ಣುತೆಯನ್ನು ಬೆಂಬಲಿಸುವ ಕ್ರಿಯೆಗಳಾಗುತ್ತವೆ. ಯಾವುದಕ್ಕೆ ಯಾವುದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು ಎಂಬ ಅರಿವಿಲ್ಲದೇ ಬೇರೆ ಬೇರೆ ಆಯಾಮದಲ್ಲಿ ಘಟಿಸುವ ಸಂಗತಿಗಳನ್ನು ತುಲನೆಗೆ ತೆಗೆದುಕೊಳ್ಳುವುದು ಪಲಾಯನ ವಾದವಲ್ಲದೇ ಮತ್ತೇನೂ ಆಗಿರದು.

ಕನ್ನಡ ಸಾಹಿತ್ಯ ಲೋಕದ ನೈತಿಕತೆಯ ಅಂತ:ಶಕ್ತಿಯಾಗಿರುವ ಸಾಹಿತಿ ದೇವನೂರ ಮಹದೇವ ಭಾರತ ಸರ್ಕಾರ ನೀಡಿದ ಪದ್ಮಶ್ರೀ ಗೌರವ ಪುರಸ್ಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿಯನ್ನು ಸಾಂಕೇತಿಕವಾಗಿ ಹಿಂತಿರುಗಿಸಿ ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಪಡೆದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚ ಇರುವ ಕುರಿತು ಪ್ರಸ್ತಾಪಿಸಿದ್ದಾರೆ. ಬಹುಶ: ಪ್ರಜ್ಞಾವಂತರಾದ ಯಾರೆ ಆದರೂ ಈ ಮಾತುಗಳ ಹಿಂದಿನ ವಾಸ್ತವಗಳನ್ನು ಗ್ರಹಿಸಿದರೆ ಪ್ರಶಸ್ತಿ ವಾಪ್ಸಿ ಚಳುವಳಿಯ ವಿರುದ್ದ ನಿಲ್ಲಲಾರರೇನೋ.
        ಒಟ್ಟಾರೆಯಾಗಿ ಹೇಳುವುದಾದರೆ ಯಾರ ವಿರುದ್ದವಾಗಿ ಮತ್ತು ಯಾರ ಪರವಾಗಿ ಪ್ರಶಸ್ತಿ ಕೊಟ್ಟರು ಎನ್ನುವ ವಾಗ್ವಾದವನ್ನು ಬದಿಗಿಟ್ಟು ನೋಡಿದರೆ ಪ್ರಶಸ್ತಿ ವಾಪಸಿ ಎನ್ನುವ ನಿರ್ದಾರದಡಿ ಸೈದ್ದಾಂತಿಕ ತತ್ವವಿದೆ ಮತ್ತು ಸಾಮಾಜಿಕ ಜಾಗೃತಿಯ ಸಂದೇಶವಿದೆ. ಸಾಹಿತ್ಯ ಮತ್ತು ಬೌದ್ದಿಕತೆ ಎನ್ನುವುದು ಘಟನೆಗಳ ಹಿಂದಿನ ರಾಜಕಾರಣ ಮತ್ತು ಪರಿಣಾಮಗಳೆರಡನ್ನೂ ಭೂತ-ಭವಿಷ್ಯತ್ ನೆಲೆಯಲ್ಲಿ ತರ್ಕಿಸುತ್ತದೆ. ವಿಷಯವೊಂದು ಇಡೀ ದೇಶದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಾ, ಅಸಹನೆಯನ್ನು ಸೃಷ್ಟಿಸಿ ಮುಂದೆ ಬದುಕಲಸಾಧ್ಯವಾದ ಪರಿಸ್ಥಿತಿಗೆ ಕಾರಣವಾಗಬಲ್ಲ ಮನೋಸ್ಥಿತಿಯನ್ನು ನಿರ್ಮಿಸುತ್ತದೆ ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಮತ್ತು ಜರೂರತ್ತು ಖಂಡಿತಾ ಇದೆ. ಅದರ ಒಂದು ಭಾಗವೇ ಪ್ರಶಸ್ತಿ ವಾಪಸ್. ಅಚ್ಚರಿ ಎಂದರೆ ಅವತ್ಯಾಕೆ ಕೊಟ್ಟಿಲ್ಲ, ಇವತ್ಯಾಕೆ ಕೊಡ್ತೀರಿ, ದುಡ್ಡು ವಾಪಸ್ ಕೊಡ್ತೀರಾ ಎನ್ನುವ ಚರ್ಚೆಗಷ್ಟೆ ನಾವು ಸೀಮಿತರಾಗಿದ್ದೇವೆ. ಎತ್ತಿದ ಪ್ರಶ್ನೆ ಮತ್ತು ಅದು ಜಾಗತಿಕವಾಗಿ ಉಂಟು ಮಾಡಿದ ಪರಿಣಾಮಗಳ ಬಗ್ಗೆ ಆದ ಚರ್ಚೆ ಮೂಲ ನೆಲೆಗಳಲ್ಲಿ ಆಗಿಲ್ಲ.ಜಾಗತಿಕ ನೆಲೆಯಲ್ಲಿ ಅದೊಂದು ಗಂಭೀರ ಸಂಗತಿ ಎಂದು ಒಪ್ಪಿಕೊಂಡರೆ ಮೂಲವನ್ನು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಕು. ಪ್ರಶಸ್ತಿ ವಾಪಸ್ ಮಾಡುವವರು ಮತ್ತು ಅದನ್ನು ವಿರೋಧಿಸುವವರು ಇಬ್ಬರಿಗೂ ಅವರವರದ್ದೇ ಆದ ಅಜೆಂಡಾಗಳಿವೆ ಆದರೆ ಅವಕ್ಕೆ ಅರ್ಥ ಸಿಗಬೇಕೆಂದರೆ ಪ್ರತಿಭಟನೆ, ಸತ್ಯಾಗ್ರಹ, ಉಪವಾಸ, ಪ್ರಶಸ್ತಿ ವಾಪಸಿಗಳು ನಿಜಾರ್ಥದಲ್ಲಿ ಎಲ್ಲ ನೆಲೆಗಳನ್ನು ಮೀರಿ ಜೀವಪರ ಕಾಳಜಿಯಿಂದ ನಡೆದಾಗ ಮಾತ್ರವೇ ಗಾಢ ಪರಿಣಾಮವನ್ನು ಬೀರುತ್ತವೆ ಎನ್ನುವುದರಲ್ಲಿ ಎಷ್ಟೊಂದು ಸತ್ಯವಿದೆ ಅಲ್ಲವೇ? ಬೌದ್ದಿಕ ದಾರಿದ್ರ್ಯ ಯಾವತ್ತಿಗೂ ಕಂಟಕ ಎನ್ನುವ ಸತ್ಯ ಬೇಗ ಅರಿವಿಗೆ ಬರಲಿ. ಅಂದ ಹಾಗೆ ಜಿಲ್ಲೆಯಲ್ಲಿ ಇಂತಹ ಕ್ರಿಯೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದೆ ಮುಗುಮ್ಮಾಗಿರುವುದು "ದುರ್ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಹೆಚ್ಚು ಅಪಾಯಕಾರಿ" ಎಂಬ ಮಾತನ್ನು ನೆನಪಿಸುತ್ತಿದೆ ;)

Sunday, November 8, 2015

ಮಕ್ಕಳ ದಿನಾಚರಣೆಯೂ, ಟಿಪ್ಪು ಜಯಂತಿಯೂ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಬಳಸಿ ಬಳಸಿ ಸವಕಲಾದ ಹಳೆ ಮಾತು, ಭಾರತದ ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ ರವರ ಕಾರಣಕ್ಕೆ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿ ಕೊಂಡು ಬಂದಿರುವುದು ಗೊತ್ತಿರುವ ಸಂಗತಿ. ಇದೇ ನವೆಂಬರ್ 14ಕ್ಕೆ ಮಕ್ಕಳ ದಿನಾಚರಣೆ ಹಾಗೆಯೇ ನವೆಂಬರ್ 10ಕ್ಕೆ ಟಿಪ್ಪು ಜಯಂತಿ. ಈ ಸಂಧರ್ಭದಲ್ಲಿ ಮಕ್ಕಳ ಸ್ಥಿತಿ ಗತಿ ಮತ್ತು ವರ್ತಮಾನವನ್ನು ಅವಲೋಕಿಸುವ ಜೊತೆಗೆ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಆಚರಿಸುತ್ತಿರುವ ಕುರಿತು ಎದ್ದಿರುವ ವಾದ ವಿವಾದಗಳ ಕಡೆಗೆ ಗಮನ ಹರಿಸಿ ಸತ್ಯ-ಅಸತ್ಯಗಳ ಮಂಥನ ಅಗತ್ಯ.
          ವರ್ತಮಾನದ ಈ ಹೊತ್ತಿನಲ್ಲಿ ನಾವೆಲ್ಲಿದ್ದೇವೆ ? ಸಂಬಂಧಗಳ ಪರಿಧಿ ಎಲ್ಲಿದೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಮಕ್ಕಳ ಕುರಿತ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳ ಬಹುದು. ಎರಡು ವರ್ಷದ ಹಿಂದೆ ಪತ್ರಿಕೆ ‘ನನ್ನ ಕನಸಿನ ಭಾರತ’ ಎಂಬ ಶೀರ್ಷಿಕೆಯಡಿ ಮಕ್ಕಳಿಂದ ಬರಹಗಳನ್ನು ಆಹ್ವಾನಿಸಿ ವಿಶೇಷ ಸಂಚಿಕೆಯನ್ನು ಮಾಡಿತ್ತು, ಸದರಿ ಸಂಚಿಕೆಯ ಖುಷಿಯನ್ನು ಹಂಚಿಕೊಳ್ಳುವ ವೇದಿಕೆಯಲ್ಲಿ ಮಕ್ಕಳು ಮಾತಿಗೆ ನಿಂತರು.ಪೋಷಕರಿಂದ ಪ್ರೇರಿತವಾದ ಬಹುತೇಕ ಮಕ್ಕಳು ತಮ್ಮ ಕನಸಿನ ಭಾರತದ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೆ ಮೀಸಲು ನೀತಿಯ ಕುರಿತು ಮಾತನಾಡಲು ತೊಡಗಿದರು. ನಾವು ಕಷ್ಟಪಟ್ಟು ಓದಿ ಮೆರಿಟ್ ಪಡೀತೀವಿ ಆದ್ರೆ ಮೀಸಲಾತಿ ಪಡೆದ ದಲಿತ ಮಕ್ಕಳು ಕಡಿಮೆ ಅಂಕ ಪಡೆದು ಉನ್ನತ ವಿದ್ಯಾಭ್ಯಾಸದ ಸೀಟು ಪಡೀತಾರೆ, ಉದ್ಯೋಗ ಪಡೀತಾರೆ, ಉದ್ಯೋಗದಲ್ಲಿ ಬಡ್ತಿ ಪಡೀತಾರೆ ನಮಗೆ ಮಾತ್ರ ಆ ಯೋಗ ಇಲ್ಲ. ಈ ದೇಶದಲ್ಲಿ ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತೆ ಆದ್ರೆ ಸಮಾನತೆಗೆ ಮೀಸಲಾತಿ ಬೇಕಿಲ್ಲ ತೆಗೆದು ಹಾಕಿ ಎಂದು ಒಬ್ಬರ ಮೇಲಾದ ಮೇಲೆ ಒಬ್ಬ ಮಕ್ಕಳು ವೇದಿಕೆಯಲ್ಲಿ ಮಾತನಾಡ ತೊಡಗಿದರು. ಅದನ್ನು ಕೇಳಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ ವರ್ತಮಾನದ ಪೂರ್ಣ ಅರಿವಿರದ ಮಕ್ಕಳು ಮೇಲುನೋಟಕ್ಕೆ ಸಿಗುವ ಸಂಗತಿಗಳನ್ನಷ್ಟೇ ಗ್ರಹಿಸಿ ಅಭಿಪ್ರಾಯಗಳನ್ನು ಹೊರ ಹಾಕಿದ್ದರು. ಈ ಅಭಿಪ್ರಾಯಗಳ ಹಿಂದೆ ಶೂದ್ರ ಮತ್ತು ಪುರೋಹಿತ ಶಾಹಿಗಳ ಗ್ರಹಣ ಬಡಿದ ಮನಸ್ಥಿತಿಯ ಒತ್ತಾಸೆ ಎದ್ದು ಕಾಣುತ್ತಿತ್ತು. ಇಂತಹ ಸಂಗತಿಗಳನ್ನು ವಿವೇಚನೆ ಇಟ್ಟು ನೋಡುವುದಾದರೆ, ಸಾಮಾಜಿಕ ಸಮಾನತೆಯ ಅರ್ಥವನ್ನು ನೈಜ ನೆಲಗಟ್ಟಿನಲ್ಲಿ ಗ್ರಹಿಸುವ ಸೂಕ್ಷ್ಮತೆ ಮರೆಯಾಗಿರುವುದು ಈ ದುರಂತಕ್ಕೆ ಕಾರಣ. ಸಮಾನತೆ ಎಂಬ ಪದದ ಹಿಂದಿನ ಕಹಿ ಸಂಗತಿಗಳು ಎಷ್ಟೋ ಸಲ ವಾಸ್ತವ ಸಂಗತಿಗಳ ಅರಿವಿನ ಕೊರತೆಯಿಂದ ಉಂಟಾದುದಾಗಿರುತ್ತವೆ. ಹಾಗಾಗಿ ಇಲ್ಲಿ ಒಂದಿಷ್ಟುಮಾಹಿತಿ ನಿಮ್ಮ ಗಮನಕ್ಕೆ ತರುತ್ತೇನೆ. ಸಂವಿಧಾನದಲ್ಲಿ ಸಮಾನತೆಯ ಸಮಾಜ ಸೃಷ್ಟಿಗಾಗಿ ಶೇ.49.5ರ ಮೀಸಲಾತಿಯನ್ನು ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ನೀಡಲಾಗಿದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 22.5 ಮೀಸಲಿದ್ದರೆ ಈ ವರೆಗೂ ಸದರಿ ಸಮುದಾಯ ಬಳಸಿದ್ದು ಸುಮಾರು 8.5% ಅಷ್ಟೇ, ಪರಿಶಿಷ್ಟ ಪಂಗಡದವರು ಶೇ.3.5% ಬಳಸಿದ್ದರೆ, ಹಿಂದುಳಿದ ವರ್ಗಕ್ಕೆ ಮೀಸಲಿರುವ ಶೇ.27ರ ಮೀಸಲಾತಿಯಲ್ಲಿ ಬಳಕೆಯಾಗಿರುವುದು ಶೇ.4.5% ರಿಂದ ಶೇ.5% ಮಾತ್ರ. ಅಂದರೆ ಇನ್ನೂ ಪೂರ್ತಿಯಾಗಿ ಮೀಸಲಾತಿ ಒಂದು ತಲೆಮಾರಿನ ಮೂರನೇ ಒಂದು ಭಾಗಕ್ಕೂ ತಲುಪಿಲ್ಲ ಆಗಲೆ ಮೀಸಲಾತಿ ಕುರಿತು ಅಸಹನೆ ಎದ್ದಿದೆ. ಹೋಗಲಿ ವರ್ತಮಾನದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂದರೆ ಅದೂ ಇಲ್ಲ ಜಾತಿ ಹಿಂದೆಂದಿಗಿಂತ ಇಂದು ಹೆಚ್ಚು ಜ್ವಲಿಸುತ್ತಿದ್ದು ಸುಪ್ತವಾಗಿ ಎಲ್ಲರ ಮನದಲ್ಲಿ ಅಡಕವಾಗಿದೆ ಮತ್ತು ಅದರ ವಿರಾಟ್ ಸ್ವರೂಪವನ್ನು ನಿತ್ಯವೂ ಕಾಣುತ್ತಲೇ ಇದ್ದೇವೆ. ಹೀಗಿರುವಾಗ ಮಕ್ಕಳಿಗೆ ಇಂತಹ ಸಂಗತಿಗಳನ್ನು ಪೋಷಕರು ಹೇಳ ಬೇಕಿತ್ತಲ್ಲವೇ?

          ಮಕ್ಕಳಿಗೆ ಇವತ್ತು ಆಯ್ಕೆಯ ಅವಕಾಶಗಳು ಸಿಗುತ್ತಿಲ್ಲ, ಪೋಷಕರು ಇದಕ್ಕೆ ಅವಕಾಶ ಮಾಡುತ್ತಿಲ್ಲ ಇದು ವ್ಯತಿರಿಕ್ತ ಪರಿಣಾಮಕ್ಕೆ ದಾರಿಯಾಗುತ್ತಿದೆ. ಶಿಕ್ಷಣದ ವ್ಯಾಪಾರೀಕರಣದ ಈ ಹೊತ್ತಿನಲ್ಲಿ ಜಾಗತಿಕ ವ್ಯವಸ್ಥೆಯಲ್ಲಿ ಆಕರ್ಷಣೆಗೆ ಬಲಿಬಿದ್ದು ಮಕ್ಕಳನ್ನು ಬಾಲ್ಯದಲ್ಲಿಯೇ ಶಿಕ್ಷಣದ ನೆಪದಲ್ಲಿ ದೂರ ಮಾಡುವ ಪೋಷಕರು ಸಾಮಾಜಿಕ ಬಂಧದ ಎಳೆಯನ್ನೇ ಕಡಿಯುತ್ತಿದ್ದಾರೆ. ಆಸಕ್ತಿಯಿಲ್ಲದ ಸಂಗತಿಗಳ ಕಲಿಕೆ, ಒತ್ತಾಯ ಪೂರ್ವಕ ಕಲಿಕೆ ಮಕ್ಕಳ ಬದುಕನ್ನು ರೂಪಿಸಲಾರದು. ಹಾಗೆಯೇ ಸಂಬಂಧಗಳ ಅರಿವಿನ ಕೊರತೆ ತಂದೆ-ಮಗಳು, ಅಣ್ಣ-ತಂಗಿಯ ಸಂಬಂಧವನ್ನೇ ಮರೆಯುವಂತೆ ಮಾಡಿದೆ, ಮಕ್ಕಳು ಲೈಂಗಿಕ ಪೀಡನೆಗೆ ತುತ್ತಾಗುತ್ತಿದ್ದಾರೆ. ಶಾಲೆ, ಕಾಲೇಜು, ವಿವಿಗಳಲ್ಲಿ ಶಿಕ್ಷಕ/ಅದ್ಯಾಪಕ/ಪ್ರಾಧ್ಯಾಪಕರ ಕಾಮ ತೃಷೆಗೆ ಮಕ್ಕಳು ನಲುಗುವಂತಾಗಿದೆ. ಬಿಡುವಿರದ ದಿನಚರಿಯ ನಡುವೆ ಮಕ್ಕಳ ಆಗು-ಹೋಗುಗಳನ್ನು ಗಮನಿಸುವ ತಾಳ್ಮೆ ಪೋಷಕರಿಗೆ ಅಗತ್ಯವಾಗಿ ಬೇಕಿದೆ, ಮಕ್ಕಳಿಗೆ ಒಳ್ಳೆಯ ಸಂಗತಿಗಳ ಮಾರ್ಗದರ್ಶನ, ಮುಕ್ತ ಕಲಿಕೆಯ ಅವಕಾಶಗಳನ್ನು ಪೋಷಕರು ಒದಗಿಸಬೇಕಾಗಿದೆ.
 ಇನ್ನು ಟಿಪ್ಪು ಜಯಂತಿ, ಜಾತಿ-ಜನಾಂಗಗಳ ಓಲೈಕೆಯ ಹಪಾಹಪಿಗೆ ಬಿದ್ದ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಆದೇಶಿಸಿದೆ, ಟಿಪ್ಪು ಜಯಂತಿ ಮಾತ್ರವಲ್ಲ ಭೂತಕಾಲದ ಅನೇಕ ಮಹನೀಯರನ್ನು ಜಾತಿಯಿಂದ ಗುರುತಿಸಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಜಾತಿ ಜಯಂತಿಗಳ ಸಾಂಕ್ರಾಮಿಕ ಪಿಡುಗೆ ಹೇಗಿದೆಯೆಂದರೆ ಆಯಾ ಮಹನೀಯರ ಜಾತಿಗೆ ಸೇರಿದ ಜನಾಂಗಗಳನ್ನು ಪ್ರಮುಖವಾಗಿ ಸೇರಿಸಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಇದು ಕೆಟ್ಟ ಸಂಪ್ರದಾಯ. ಟಿಪ್ಪು ಸುಲ್ತಾನ್ ಭಾರತ ದೇಶದ ಇತಿಹಾಸದಲ್ಲಿ ದಾಖಲಾದ ಅರಸರಲ್ಲಿ ಪ್ರಮುಖ ಮತ್ತು ಬ್ರಿಟೀಷರ ವಿರುದ್ದ ಸೆಣಸಿದ ಅಪ್ರತಿಮ ಹೋರಾಟಗಾರ. ಆದರೆ ಟಿಪ್ಪು ಕುರಿತು ಇಲ್ಲದ ಫ್ಯಾಂಟಸಿ ಕಥೆಗಳನ್ನು ಹೆಣೆದು ಮತ್ತೆಲ್ಲೋ ಕೂರಿಸುವ ಬದಲು ವಾಸ್ತವ ಸಂಗತಿಗಳನ್ನು ಇತಿಹಾಸದಿಂದ ಹೆಕ್ಕಿ ನೋಡುವುದಾದರೆ ದೇಶಭಕ್ತಿಯಿಂದ ಹೋರಾಡುತ್ತಾ ರಣರಂಗದಲ್ಲೇ ಹುತಾತ್ಮನಾದ ಟಿಪ್ಪು, ರಣರಂಗದಲ್ಲಿ ಮಡಿದ ಕೆಲವೇ ಕೆಲವು ರಾಜರಲ್ಲಿ ಒಬ್ಬ ಟಿಪ್ಪು ಸುಲ್ತಾನ್.
ಟಿಪ್ಪು, ದಲಿತರನ್ನು ನೀರಗಂಟಿಯಾಗಿ ನೇಮಿಸಿದ, ದಲಿತ-ಹಿಂದುಳಿದವರಿಗೆ ಭೂ ಹಂಚಿಕೆಯನ್ನು ಮಾಡಿದ, ಅಂದು ಜನರು ಹೊಂದಿರುವ ಭೂಮಿಯಾದಾರದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದಾಗ ಅದನ್ನು ಕೈಬಿಟ್ಟು ನಿಮ್ಮ ಕೈಗೆ ಬಂದ ಬೆಳೆಯಲ್ಲಿ 1/6 ಭಾಗ ಮಾತ್ರ ತೆರಿಗೆ ನೀಡಿ ಎಂದು ರೈತ ಪರ ರಾಜ ಟಿಪ್ಪು. ಅಂದಿನ ದಿನಗಳಲ್ಲೇ 29ಸಾವಿರಕ್ಕೂ ಹೆಚ್ಚು ಕೆರೆಗಳ ನಿರ್ಮಾಣಕ್ಕೆ ಮತ್ತು ಕೆರೆಗಳ ಹೂಳೆತ್ತಲು ಸಹಾಯ ಮಾಡಿದ ರಾಜ ಟಿಪ್ಪು ಸುಲ್ತಾನ್. ಕ್ಷಿಪಣಿಯನ್ನು ಬಳಸಿದ ಮೊದಲ ಅರಸ ಟಿಪ್ಪು. ಅಂದಾಜು 17ವರ್ಷಗಳ ಕಾಲ ಅರಸನಾಗಿದ್ದ ಟಿಪ್ಪು ಮತಾಂಧನಾಗಿದ್ದರೆ ಮೈಸೂರು ಸುತ್ತಮುತ್ತಲಿನ ಪರಿಸ್ಥಿತಿ ಇವತ್ತು ಹೇಗಿರುತ್ತಿತ್ತು? ಆತನ ಆಡಳಿತದಲ್ಲಿ ಬ್ರಾಹ್ಮಣರು ಆಡಳಿತಗಾರರಾಗಿದ್ದರು,ಅತೀ ಹೆಚ್ಚು  ಹಿಂದೂಗಳು ಸೈನಿಕರಾಗಿದ್ದರು. ಈತನ ಪ್ರದಾನಿ ಪೂರ್ಣಯ್ಯ, ಕಂದಾಯ ಮಂತ್ರಿ ಕೃಷ್ಣರಾವ್, ಸೇನಾ ದಂಡನಾಯಕ ಶ್ರೀನಿವಾಸ ರಾವ್ ಮುಸ್ಲಿಮರಲ್ಲ ಅಥವಾ ಮತಾಂತರಕ್ಕೆ ಒಳಪಟ್ಟಿರಲಿಲ್ಲ ಎಂಬುದು ದಿಟವಲ್ಲವೇ? ಟಿಪ್ಪು ಹಿಂದೂ ವಿರೋಧಿಯಾಗಿದ್ದರೆ ಹಿಂದೂ ದೇಗುಳಗಳು ಉಳಿಯುತ್ತಿದ್ದವೆ? 150ಕ್ಕೂ ಅಧಿಕ ದೇಗುಲಗಳಿಗೆ ನಗ-ನಾಣ್ಯವನ್ನು ಟಿಪ್ಪು ನೀಡಿದ್ದ, ಶೃಂಗೇರಿಯಲ್ಲಿ ಮರಾಠರು ಅರ್ಚಕನನ್ನು ಕೊಲ್ಲುವ ಮೂಲಕ ಬೀದಿಗೆ ಎಸೆದಿದ್ದ ವಿಗ್ರಹವನ್ನು ಮರಳಿ ಸ್ಥಾಪಿಸಿದ್ದು ಟಿಪ್ಪು ಅಲ್ಲವೇ?
ಕೊಡಗು ಪ್ರಾಂತ್ಯದಲ್ಲಿ 77ಸಾವಿರ ಹಿಂದೂಗಳನ್ನು ಟಿಪ್ಪು ಮತಾಂತರಗೊಳಿಸಿದ್ದಾದರೆ ಆ ಕಾಲದಲ್ಲಿ ಕೊಡಗಿನಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಜನರು ಎಲ್ಲಿದ್ದರು? ಮತಾಂತರವಾದವರು ಎಲ್ಲಿದ್ದಾರೆ? ಟಿಪ್ಪು ಸುಲ್ತಾನ್ ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ದಾರವಾಡ, ತುಮಕೂರು ಮತ್ತು ಕೋಲಾರ ಭಾಗದಲ್ಲಿದ್ದ ಸುಮಾರು 200 ಪಾಳೇಗಾರರನ್ನು ಧ್ವಂಸ ಮಾಡಿ ಇಡೀಭಾಗವನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿ ಪಾಳೇಗಾರರ ಒಡೆತನದಲ್ಲಿದ್ದ ಭೂಮಿಯನ್ನು ಉಳುವ ರೈತರಿಗೆ ಹಂಚಿದ ಖ್ಯಾತಿ ಟಿಪ್ಪುವಿಗೆ ಸಲ್ಲುತ್ತದೆ. ರೈತಾಪಿ ಸಮುದಾಯಕ್ಕೆ ಬಡ್ಡಿರಹಿತ ಸಾಲವನ್ನು ಕೊಡುವ ವ್ಯವಸ್ಥೆಯನ್ನು ಮಾಡಿದ್ದ ಇಂತಹ ಟಿಪ್ಪು ಸುಲ್ತಾನನ್ನು ಮರಾಠರು ಮತ್ತು ನಿಜಾಮರ ನೆರವಿನಿಂದ ಮತ್ತು ತನ್ನ ಸೇನೆಯಲ್ಲಿದ್ದ ಪ್ರಮುಖರ ಕುತಂತ್ರದ ಲಾಭ ಪಡೆದ ಬ್ರಿಟೀಷರು ಮೋಸದಿಂದ ಯುದ್ದದಲ್ಲಿ ಟಿಪ್ಪುವನ್ನು ಹತಗೈದರು. ಇಂತಹ ವೀರನ ಸ್ಮರಣೆ ಮಾಡುವುದರಲ್ಲಿತಪ್ಪೇನಿದೆ?
ವಾಸ್ತವ ಸಂಗತಿಗಳನ್ನು ಪರಿಗ್ರಹಿಸುವ ಸೂಕ್ಷ್ಮತೆ ಸಮಾಜದಲ್ಲಿ ಬರಬೇಕಿದೆ, ಸಮಾಜದ ಸಮಾನತೆಯ ಹೊಣೆಯ ಅರಿವನ್ನು ಇಟ್ಟುಕೊಂಡು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಪೋಷಕರು, ಶಿಕ್ಷಕರು ಜಾಗೃತಾವಸ್ಥೆಯಲ್ಲಿರ ಬೇಕಾಗುತ್ತದೆ. ಅಸಹಿಷ್ಣುತೆಯ ಕಾವಿನ ಈ ದಿನಗಳಲ್ಲಿ ಯಾವುದನ್ನಾದರೂ ವಿರೋಧಿಸುವ ಮೊದಲು ಅಲ್ಲಿನ ಸಂಗತಿಗಳನ್ನು ಸೂಕ್ಷ್ಮವಾಗಿ ಗ್ರಹಿಸುವ, ಬದ್ದತೆ ಪ್ರದರ್ಶಿಸುವ ಜೀವಪರ ನಿಲುವುಗಳನ್ನು ಹೊಂದುವ ಪರಿಸ್ಥಿತಿ ಮೂಡಲಿ ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...